"ತಂತ್ರಜ್ಞಾನವು ನಮ್ಮ ಪಾಲಿಗೆ ದೇಶದ ಜನರನ್ನು ಸಬಲೀಕರಿಸುವ ಮಾಧ್ಯಮವಾಗಿದೆ. ನಮ್ಮ ಪಾಲಿಗೆ ತಂತ್ರಜ್ಞಾನವು ದೇಶವನ್ನು ಆತ್ಮನಿರ್ಭರ್ ಮಾಡಲು ಪ್ರಮುಖವಾಗಿದೆ. ಇದೇ ದೃಷ್ಟಿಕೋನವನ್ನು ಈ ವರ್ಷದ ಬಜೆಟ್‌ ಸಹ ಪ್ರತಿಫಲಿಸಿದೆ"
" 5ಜಿ ತರಂಗಗುಚ್ಛ ಹರಾಜಿಗೆ ಸ್ಪಷ್ಟ ಮಾರ್ಗಸೂಚಿಯನ್ನು ಬಜೆಟ್ ರೂಪಿಸಿದೆ ಮತ್ತು ಸಶಕ್ತ 5ಜಿ ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ವಿನ್ಯಾಸ ಚಾಲಿತ ಉತ್ಪಾದನೆಗಾಗಿ ʻಪಿಎಲ್ಐʼ (ಉತ್ಪಾದನೆ ಆಧರಿತ ಸಹಾಯಧನ) ಯೋಜನೆಗಳನ್ನು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ"
"ಜೀವನ ನಿರ್ವಹಣೆ ಸುಲಲಿತಗೊಳಿಸಲು ತಂತ್ರಜ್ಞಾನವನ್ನು ಗರಿಷ್ಠವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ವಿಷಯಕ್ಕೆ ನಾವು ಒತ್ತು ನೀಡಬೇಕು."
"ಕೋವಿಡ್ ಸಮಯದ ವೇಳೆ ಲಸಿಕೆ ಉತ್ಪಾದನೆಯಲ್ಲಿ ನಮ್ಮ ಸ್ವಾವಲಂಬನೆ, ಸುಸ್ಥಿರತೆಯಿಂದಾಗಿ ಜಗತ್ತಿಗೆ ನಮ್ಮ ವಿಶ್ವಾಸಾರ್ಹತೆಯ ಅರಿವಾಗಿದೆ. ನಾವು ಈ ಯಶಸ್ಸನ್ನು ಪ್ರತಿಯೊಂದು ವಲಯದಲ್ಲೂ ಪುನರಾವರ್ತಿಸಬೇಕು"

ನಮಸ್ಕಾರ!

ನಿಮೆಗೆಲ್ಲರಿಗೂ ಗೊತ್ತಿದೆ, ನಾವು ಕಳೆದ ಎರಡು ವರ್ಷಗಳಿಂದ ಹೊಸ ಸಂಪ್ರದಾಯವನ್ನು ಆರಂಭ ಮಾಡಿದ್ದೇವೆ. ಮೊದಲನೆಯದ್ದು ನಾವು ಬಜೆಟ್ ಮಂಡನೆಯನ್ನು ಒಂದು ತಿಂಗಳು ಮುಂಚಿತವಾಗಿ ಮಾಡುತ್ತಿದ್ದೇವೆ ಮತ್ತು ಬಜೆಟ್ ಏಪ್ರಿಲ್ 1 ರಿಂದಲೇ ಜಾರಿಗೆ ಬರುತ್ತಿದೆ. ಇದರಿಂದಾಗಿ ನಮಗೆ ಸಿದ್ಧತೆಗಳಿಗಾಗಿ ಎರಡು ತಿಂಗಳ ಕಾಲಾವಕಾಶ ಲಭಿಸುತ್ತಿದೆ. ಮತ್ತು ನಾವು ಬಜೆಟ್ ಹಿನ್ನೆಲೆಯಲ್ಲಿ ಖಾಸಗಿ, ಸಾರ್ವಜನಿಕ, ರಾಜ್ಯ ಸರಕಾರ, ಕೇಂದ್ರ ಸರಕಾರ, ಸರಕಾರದ ವಿವಿಧ ಇಲಾಖೆಗಳು ಸಹಿತ ವಿವಿಧ ಭಾಗೀದಾರರ ಜೊತೆ ಪ್ರಸ್ತಾವನೆಗಳನ್ನು ಹೇಗೆ ಅತ್ಯಂತ ತ್ವರಿತವಾಗಿ  ಜಾರಿಗೆ ತರಬಹುದು? ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ. ನಾವು ಹೇಗೆ ಆ ವಿಷಯಗಳ ಅಡೆತಡೆ ಇಲ್ಲದೆ ಕಾರ್ಯಾನುಷ್ಠಾನಗೊಳಿಸಿ ಉತ್ತಮ ಫಲಿತಾಂಶವನ್ನು ಪಡೆಯಬಹುದು?. ನಾವು ಆ ನಿಟ್ಟಿನಲ್ಲಿ ಹೇಗೆ ಗಮನ ಕೇಂದ್ರೀಕರಿಸಬಹುದು? ಎಂಬ ಬಗ್ಗೆ ನಿಮ್ಮ ಎಲ್ಲಾ ಸಲಹೆಗಳೂ ಸರಕಾರಕ್ಕೆ ಅದರ ನಿರ್ಧಾರ ಪ್ರಕ್ರಿಯೆಯನ್ನು ಸರಳಗೊಳಿಸಲು ಅನುಕೂಲ ಮಾಡಿಕೊಡಲಿವೆ. ಅನುಷ್ಠಾನಕ್ಕೆ ಸಂಬಂಧಿಸಿದ ಹಾದಿ ಕೂಡಾ ಉತ್ತಮವಾಗಲಿದೆ. ಕೆಲವೊಮ್ಮೆ ಪೂರ್ಣ ವಿರಾಮ ಅಥವಾ ಅಲ್ಪ ವಿರಾಮದಂತಹ ಸಣ್ಣ ಸಂಗತಿಗಳಿಂದ ಕಡತಗಳು ತಿಂಗಳುಗಟ್ಟಲೆ ಚಲಿಸದೆ ನಿಂತು ಬಿಡುತ್ತವೆ. ಈ ಎಲ್ಲಾ ಸಂಗತಿಗಳನ್ನು ನಿವಾರಣೆ ಮಾಡಲು ನಾವು ನಿಮ್ಮೊಂದಿಗೆ ಕೆಲಸ ಮಾಡಲು ಇಚ್ಚಿಸುತ್ತೇವೆ. ನಾವು ನಿಮ್ಮ ಸಲಹೆಗಳನ್ನು ಪಡೆಯಲು ಇಚ್ಛಿಸುತ್ತೇವೆ. “ ಈ ಚರ್ಚೆ ಬಜೆಟಿನಲಿ ಆಗಬೇಕಾಗಿತ್ತು ಅಥವಾ ಬಜೆಟಿನಲ್ಲಿ ಇದಾಗಬೇಕಿತ್ತು” ಎಂದು ಚರ್ಚಿಸಬೇಕಾದ ಸಮಯ ಇದಲ್ಲ. ಅದೀಗ ಸಾಧ್ಯವಿಲ್ಲ, ಯಾಕೆಂದರೆ ಸಂಸತ್‌ ಆ ಕೆಲಸ ಮಾಡಿದೆ. ಬಜೆಟಿನಲ್ಲಿ ಏನೇನು ನಿರ್ಧರಿಸಲಾಗಿದೆಯೋ ಅದನ್ನು ಮಾಡಲಾಗಿದೆ, ಅದರ ಬಗ್ಗೆ ಮಾತನಾಡಲಾಗದು. ಆದರೆ ಈಗ ಪ್ರಯೋಜನಗಳನ್ನು ಎಷ್ಟು ಸಾಧ್ಯವೋ ಅಷ್ಟು  ಉತ್ತಮ ರೀತಿಯಲ್ಲಿ ಹೇಗೆ ಸಾರ್ವಜನಿಕರಿಗೆ ಮತ್ತು ದೇಶಕ್ಕೆ ತಲುಪಿಸಬಹುದು? ಮತ್ತು ಹೇಗೆ ನಾವೆಲ್ಲ ಒಗ್ಗೂಡಿ ಕೆಲಸ ಮಾಡಬೇಕು? ಎಂಬ ಬಗ್ಗೆ ಈ ಚರ್ಚೆ ಸಾಗಬೇಕು. ಈ ಬಜೆಟಿನಲ್ಲಿ ವಿಜ್ಞಾನ ಮತು ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಕೈಗೊಂಡ ನಿರ್ಧಾರಗಳನ್ನು ನೀವು ಈಗಾಗಲೇ ಗಮನಿಸಿರಬಹುದು. ಈ ಎಲ್ಲಾ ನಿರ್ಧಾರಗಳು ನಿಜವಾಗಿಯೂ  ಬಹಳ ಪ್ರಮುಖವಾದಂತಹವು. ಬಜೆಟ್ ಘೋಷಣೆಗಳ ಅನುಷ್ಠಾನ ಅಷ್ಟೇ ತ್ವರಿತವಾಗಿ ಆಗಬೇಕಾಗಿದೆ. ಈ ವೆಬಿನಾರ್ ಈ ನಿಟ್ಟಿನಲಿ ಒಂದು ಸಹಯೋಗದ ಪ್ರಯತ್ನವಾಗಿದೆ.

ಸ್ನೇಹಿತರೇ,

ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ನಮ್ಮ ಸರಕಾರಕ್ಕೆ ಪ್ರತ್ಯೇಕವಾದ  ವಲಯವಾಗಿ ಉಳಿದಿಲ್ಲ. ಇಂದು ಆರ್ಥಿಕ ವಲಯದಲ್ಲಿ ನಮ್ಮ ಚಿಂತನೆ ಡಿಜಿಟಲ್ ಆರ್ಥಿಕತೆ ಮತ್ತು ಫಿನ್ ಟೆಕ್ ನಂತಹ ಮೂಲ ತಳಹದಿಯ ಸಂಗತಿಗಳಿಗೆ ಸಂಬಂಧಿಸಿದುದಾಗಿದೆ. ಮೂಲ ಸೌಕರ್ಯಗಳಲ್ಲಿ ನಮ್ಮ ಅಭಿವೃದ್ಧಿ ಚಿಂತನೆ ಆಧುನಿಕ ತಂತ್ರಜ್ಞಾನವನ್ನು ಆಧರಿಸಿದೆ. ಸಾರ್ವಜನಿಕ ಸೇವೆಗಳು ಮತ್ತು ಕಟ್ಟ ಕಡೆಯ ಹಂತದವರೆಗೂ ಸೇವಾ ಒದಗಣೆ ಈಗ ದತ್ತಾಂಶಗಳ ಮೂಲಕ ಡಿಜಿಟಲ್ ವೇದಿಕೆಗಳಿಗೆ ಜೋಡಿಸಲ್ಪಟ್ಟಿದೆ. ತಂತ್ರಜ್ಞಾನ ನಮಗೆ ದೇಶದ ಜನ ಸಾಮಾನ್ಯರನ್ನು ಸಶಕ್ತೀಕರಣಗೊಳಿಸಲು ಇರುವ ಪ್ರಮುಖ ಶಕ್ತಿಶಾಲೀ ಮಾಧ್ಯಮ. ನಮಗೆ ತಂತ್ರಜ್ಞಾನ ಎನ್ನುವುದು ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವ ತಳಹದಿ ಮತ್ತು ನಾನು ಭಾರತದ ಸ್ವಾವಲಂಬನೆ ಬಗ್ಗೆ ಮಾತನಾಡುವಾಗ, ನೀವು ಇಂದು ಬೆಳಗ್ಗೆ ಅಮೆರಿಕಾ ಅಧ್ಯಕ್ಷ ಬೈಡನ್ ಅವರ ಮಾತುಗಳನ್ನು ಕೇಳಿರಬಹುದು.  ಅವರು ಕೂಡಾ ಅಮೆರಿಕಾವನ್ನು ಸ್ವಾವಲಂಬಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಅವರು ಕೂಡಾ ಇಂದು ’ಅಮೆರಿಕಾ ನಿರ್ಮಿತ” ಕ್ಕೆ ಬಹಳ ಒತ್ತು ಕೊಟ್ಟಿದ್ದಾರೆ. ಮತ್ತು ಹಾಗಾಗಿ ವಿಶ್ವದಲ್ಲಿ ಹೊಸ ವ್ಯವಸ್ಥೆಯೊಂದು ಜಾರಿಗೆ ಬರುವ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದುದರಿಂದ ಸ್ವಾವಲಂಬನೆಯೊಂದಿಗೆ ಮುಂದುವರಿಯುವುದು ನಮಗೆ ಬಹಳ ಮುಖ್ಯ ಮತ್ತು ಅದು ಉತ್ತಮ ಕೂಡಾ. ಮತ್ತು ನೀವು ಕೂಡಾ ಇಂತಹ ಸಂಗತಿಗಳಿಗೆ ಬಜೆಟಿನಲ್ಲಿ ಹೆಚ್ಚು ಒತ್ತು ನೀಡಿರುವುದನ್ನು ಗಮನಿಸಿರಬಹುದು.

ಸ್ನೇಹಿತರೇ,

ನಮ್ಮ ಈ ಬಜೆಟಿನಲ್ಲಿ ಉದಯೋನ್ಮುಖ ವಲಯಗಳಿಗೆ ಈ ಬಾರಿ ವಿಶೇಷ ಒತ್ತನ್ನು ನೀಡಲಾಗಿದೆ. ಆರ್ಟಿಫಿಷಿಯಲ್‌ ಇಂಟಲಿಜೆನ್ಸ್, ಜಿಯೋಸ್ಪೇಷಿಯಲ್ ವ್ಯವಸ್ಥೆಗಳು, ಡ್ರೋನ್ ಗಳು, ಸೆಮಿ ಕಂಡಕ್ಟರ್ ಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಜೀನೊಮಿಕ್ಸ್, ಔಷಧಗಳು, ಸ್ವಚ್ಛ ತಂತ್ರಜ್ಞಾನಗಳು ಮತ್ತು 5 ಜಿ, ಈ ಎಲ್ಲಾ ಕ್ಷೇತ್ರಗಳೂ ಇಂದು ದೇಶದ ಆದ್ಯತಾ ಕ್ಷೇತ್ರಗಳಾಗಿವೆ. ಈ ಉದಯೋನ್ಮುಖ ಕ್ಷೇತ್ರಗಳಿಗೆ ಸಂಬಂಧಿಸಿ ಬಜೆಟ್  ಶೀರ್ಷಿಕೆಯಾಧಾರಿತ ಹಣಕಾಸನ್ನು ಉತ್ತೇಜಿಸುವುದಕ್ಕೂ ಗಮನ ಹರಿಸಿದೆ. ನಿಮಗೆ ತಿಳಿದಿರಬಹುದು ಈ ಬಾರಿಯ ಬಜೆಟ್ 5ಜಿ ಸ್ಪೆಕ್ಟ್ರಂ ಹರಾಜಿಗೆ ಸಂಬಂಧಿಸಿ ಬಹಳ ಸ್ಪಷ್ಟವಾದ ಹಾದಿಯನ್ನು ತೋರಿಸಿದೆ. ದೇಶದಲ್ಲಿ ವಿನ್ಯಾಸ ಆಧಾರಿತ ಬಲಿಷ್ಟ  5ಜಿ ಪರಿಸರ ವ್ಯವಸ್ಥೆಗಾಗಿ ಪಿ.ಎಲ್.ಐ. ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ನಿರ್ಧಾರಗಳಿಂದ ಸೃಷ್ಟಿಯಾಗಲಿರುವ ಹೊಸ ಸಾಧ್ಯತೆಗಳ ಬಗ್ಗೆ ವಿವರವಾದ ಚರ್ಚೆ ನಡೆಸಬೇಕು ಎಂದು ನಾನು ಖಾಸಗಿ ವಲಯಕ್ಕೆ ವಿಶೇಷವಾಗಿ ಒತ್ತಾಯ ಮಾಡುತ್ತೇನೆ. ಮತ್ತು ನಿಮ್ಮ ದೃಢವಾದ ಸಲಹೆಗಳೊಂದಿಗೆ ನಾವು ನಮ್ಮ ಸಂಘಟಿತ ಪ್ರಯತ್ನಗಳೊಂದಿಗೆ ಮುನ್ನಡೆಯಬೇಕಿದೆ.

ಸ್ನೇಹಿತರೇ,

ವಿಜ್ಞಾನ ವಿಶ್ವವ್ಯಾಪಿ ಆದರೆ ತಂತ್ರಜ್ಞಾನ ಸ್ಥಳೀಯವಾಗಿರಬೇಕು ಎಂದು ಹೇಳಲಾಗುತ್ತದೆ. ನಾವು ವಿಜ್ಞಾನದ ತತ್ವಗಳ ಬಗ್ಗೆ ಚಿರಪರಿಚಿತರಾಗಿದ್ದೇವೆ. ಆದರೆ ಜೀವನಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲು ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಹೇಗೆ ಬಳಕೆ ಮಾಡಬೇಕು?. ನಾವು ಈ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ. ಇಂದು ನಾವು ಬಹಳ ತ್ವರಿತಗತಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡುತಿದ್ದೇವೆ.  ರೈಲು, ರಸ್ತೆ, ವಾಯುಮಾರ್ಗ, ಜಲ ಮಾರ್ಗ ಮತ್ತು ಆಪ್ಟಿಕಲ್ ಫೈಬರ್ ಗಳಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ಇದಕ್ಕೆ ಇನ್ನಷ್ಟು ಚಲನೆಯನ್ನು, ವೇಗವನ್ನು  ನೀಡಲು ನಾವು ಪ್ರಧಾನ ಮಂತ್ರಿ ಗತಿ ಶಕ್ತಿ ಚಿಂತನೆಯೊಂದಿಗೆ ಮುನ್ನಡೆಯುತ್ತಿದ್ದೇವೆ. ನಾವು ಈ ಚಿಂತನೆ ಹೇಗೆ ..ಸಹಾಯ ಮಾಡಬಹುದು ಎಂಬ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ವಸತಿ ಕ್ಷೇತ್ರಕ್ಕೆ ಸಂಬಂಧಿಸಿ ದೇಶದಲ್ಲಿ ಹಗುರ ಮನೆಗಳಿಗೆ ಸಂಬಂಧಿಸಿದ ಆರು ಪ್ರಮುಖ ಯೋಜನೆಗಳು ಕಾರ್ಯಗತವಾಗುತ್ತಿವೆ ಎಂಬ ಸಂಗತಿ ನಿಮಗೆ ತಿಳಿದಿದೆ. ಮನೆಗಳ ನಿರ್ಮಾಣದಲ್ಲಿ ನಾವು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ನಮಗೆ ನಿಮ್ಮ ಸಹಕಾರ ಬೇಕು. ಇದನ್ನು ತಂತ್ರಜ್ಞಾನದ ಮೂಲಕ ಇನ್ನಷ್ಟು ವೇಗವಾಗಿ ಹೇಗೆ ಮಾಡಬಹುದು ಎಂಬ ನಿಟ್ಟಿನಲ್ಲಿ ನಿಮ್ಮ ಕೊಡುಗೆ ಮತ್ತು ನವೀನ ಚಿಂತನೆಗಳು ನಮಗೆ ಅಗತ್ಯ. ಇಂದು ನಾವು ವೈದ್ಯ ವಿಜ್ಞಾನದ ಕಡೆ ನೋಡುತ್ತಿದ್ದೇವೆ. ವೈದ್ಯಕೀಯ ವಿಜ್ಞಾನ ಕೂಡಾ ಬಹುತೇಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದೆ. ಈಗ ಹೆಚ್ಚು ಹೆಚ್ಚು ವೈದ್ಯಕೀಯ ಉಪಕರಣಗಳನ್ನು ಭಾರತದಲ್ಲಿ ನಿರ್ಮಾಣ ಮಾಡಬೇಕಾಗಿದೆ. ಮತ್ತು ಭಾರತದ ಆವಶ್ಯಕತೆಗಳನ್ನು ಮನದಲ್ಲಿಟ್ಟುಕೊಂಡು ತಂತ್ರಜ್ಞಾನವನ್ನು ಅದರಲ್ಲಿ ಹೇಗೆ ಬಳಸಬಹುದು ಎಂಬ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕಾಗಿದೆ. ಮತ್ತು ಬಹುಷಃ ಇದಕ್ಕೆ ನೀವು ಹೆಚ್ಚು ಕಾಣಿಕೆ ಕೊಡಲು ಸಾಧ್ಯವಿದೆ. ಇಂದು ಬಹಳ ತ್ವರಿತವಾಗಿ ಬೆಳೆಯುತ್ತಿರುವ ಕ್ಷೇತ್ರ ಎಂದರೆ ಆಟದ್ದು ಎಂಬುದನ್ನು ನೀವು ನೋಡುತ್ತಿರುವಿರಿ. ಈಗ ಇದಕ್ಕೆ ಜಗತ್ತಿನಲ್ಲಿ ಬಹಳ ದೊಡ್ಡ ಮಾರುಕಟ್ಟೆ ಇದೆ. ಯುವ ತಲೆಮಾರು ಬಹಳ ವೇಗವಾಗಿ ಇದಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಬಜೆಟ್ಟಿನಲ್ಲಿ ನಾವು ಎ.ವಿ.ಇ.ಜಿ.ಸಿ. –ಆನಿಮೇಷನ್ ವಿಶುವಲ್ ಇಫೆಕ್ಟ್ಸ್ ಗೇಮಿಂಗ್ ಕಾಮಿಕ್  ಗೆ ಹೆಚ್ಚಿನ ಒತ್ತನ್ನು ನೀಡಿದ್ದೇವೆ. ಈ ನಿಟ್ಟಿನಲ್ಲಿ ಕೂಡಾ ಭಾರತದ ಐ.ಟಿ. ಸಮನ್ವಯ ಜಗತ್ತಿನಾದ್ಯಂತ ಗೌರವವನ್ನು ಗಳಿಸಿಕೊಂಡಿದೆ. ಈಗ ನಾವು ಇಂತಹ ನಿರ್ದಿಷ್ಟ ಕ್ಷೇತ್ರಗಳಲ್ಲಿ ನಮ್ಮ ಬಲವನ್ನು, ಶಕ್ತಿಯನ್ನು ನಿರ್ಮಾಣ ಮಾಡಬಹುದು. ಈ ನಿಟ್ಟಿನಲ್ಲಿ ನೀವು ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸಬಹುದೇ?. ಅದೇ ರೀತಿ ಭಾರತೀಯ ಆಟಿಕೆಗಳಿಗೆ, ಗೊಂಬೆಗಳಿಗೆ ಬಹಳ ದೊಡ್ಡ ಮಾರುಕಟ್ಟೆ ಇದೆ. ಮತ್ತು ಇಂದಿನ ಮಕ್ಕಳು ಈ ಗೊಂಬೆಗಳಲ್ಲಿ, ಆಟಿಕೆಗಳಲ್ಲಿ ತಂತ್ರಜ್ಞಾನವನ್ನು ಅಪೇಕ್ಷಿಸುತ್ತಾರೆ. ನಾವು ನಮ್ಮ ದೇಶದ ಮಕ್ಕಳಿಗಾಗಿ ತಂತ್ರಜ್ಞಾನ ಸಂಬಂಧಿ ಆಟಿಕೆಗಳನ್ನು ತಯಾರಿಸುವ ಬಗ್ಗೆ ಮತ್ತು ಜಗತ್ತಿನಾದ್ಯಂತ ಇರುವ ಮಾರುಕಟ್ಟೆಗೆ ಅದರ ಸರಬರಾಜಿನ ಬಗ್ಗೆ ಚಿಂತಿಸಬಹುದೇ?. ಅದೇ ರೀತಿ ಸಂಪರ್ಕ ಕ್ಷೇತ್ರದಲ್ಲಿಯೂ ಹೊಸ ತಂತ್ರಜ್ಞಾನ ತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿಗೆ ಹೆಚ್ಚಿನ ವೇಗವನ್ನು ನಾವು ನೀಡಬೇಕಾದ ಅಗತ್ಯವಿದೆ. ಸರ್ವರ್ ಗಳು ಭಾರತದಲ್ಲಿಯೇ ಇರಬೇಕು. ವಿದೇಶಗಳ ಮೇಲಣ ಅವಲಂಬನೆ ಕನಿಷ್ಠ ಪ್ರಮಾಣದಲ್ಲಿರಬೇಕು. ಮತ್ತು ಸಂಪರ್ಕಕ್ಕೆ ಸಂಬಂಧಿಸಿದ ಭದ್ರತಾ ಕ್ರಮಗಳನ್ನು ಹೆಚ್ಚು ಹೆಚ್ಚು ಸೇರಿಸುತ್ತ ಹೋಗಬೇಕು. ಬಹಳ ಎಚ್ಚರ ಮತ್ತು ಜಾಗ್ರತೆಯಿಂದ ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸುತ್ತ ಹೋಗಬೇಕು. ಫಿನ್ ಟೆಕ್ ಗೆ ಸಂಬಂಧಿಸಿದಂತೆ ಈ ಹಿಂದೆ ಭಾರತ ಅದ್ಭುತಗಳನ್ನು ಮಾಡಿದೆ. ನಮ್ಮ ದೇಶದಲ್ಲಿ ಜನರು ಈ ವಲಯಗಳನ್ನು ಹಿಂದೆಂದೂ ಊಹಿಸಿಕೊಂಡಿರಲಿಲ್ಲ. ಆದರೆ ಇಂದು ನಮ್ಮ ಹಳ್ಳಿಗಳು, ಗ್ರಾಮಗಳು ಮೊಬೈಲ್ ಫೋನುಗಳ ಮೂಲಕ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಇದರರ್ಥ ಹಣಕಾಸು ತಂತ್ರಜ್ಞಾನದಲ್ಲಿ (ಫಿನ್ ಟೆಕ್) ಹೆಚ್ಚು ಹೆಚ್ಚು ಆಧುನಿಕ ತಂತ್ರಜ್ಞಾನ ಸೇರ್ಪಡೆ ಮತ್ತು ಅಳವಡಿಕೆ ನಮಗೆ ಈ ಹೊತ್ತಿನ ಆವಶ್ಯಕತೆಯಾಗಿದೆ. ಇದು ಭದ್ರತೆಯನ್ನು ಖಾತ್ರಿಪಡಿಸುತ್ತದೆ. 2020ರ ಫೆಬ್ರವರಿಯಲ್ಲಿ ದೇಶವು ಜಿಯೋ ಸ್ಪೇಷಿಯಲ್ ದತ್ತಾಂಶ ನಿರ್ವಹಣೆಯಲ್ಲಿ ಹಳೆಯ ಮಾದರಿಗಳನ್ನು ಬದಲಾಯಿಸಿದೆ. ಇದರಿಂದ ಜಿಯೋ ಸ್ಪೇಷಿಯಲ್ ಕ್ಷೇತ್ರದಲ್ಲಿ ಅನಂತ ಹೊಸ ಸಾಧ್ಯತೆಗಳು ಮತ್ತು ಹೊಸ ಅವಕಾಶಗಳು ತೆರೆಯಲ್ಪಟ್ಟಿವೆ. ನಮ್ಮ ಖಾಸಗಿ ವಲಯ ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು.

ಸ್ನೇಹಿತರೇ,

ಕೋವಿಡ್ ಸಮಯದಲ್ಲಿ ಜಗತ್ತು ನಮ್ಮ ಸ್ವಾವಲಂಬನೆಯನ್ನು ನೋಡಿದೆ ಮತ್ತು ಲಸಿಕೆ ತಯಾರಿಕೆಯಲ್ಲಿ ನಮ್ಮ ವಿಶ್ವಾಸಾರ್ಹತೆಯನ್ನೂ ನೋಡಿದೆ. ಈ ಯಶಸನ್ನು ನಾವು ಇತರ ರಂಗಗಳಲ್ಲಿಯೂ ಪುನರಾವರ್ತಿಸಬೇಕು. ನಮ್ಮ ಕೈಗಾರಿಕೋದ್ಯಮಗಳು ಮತ್ತು ನೀವು ಈ ಕ್ಷೇತ್ರದಲ್ಲಿ ಬಹಳ ದೊಡ್ಡ ಜವಾಬ್ದಾರಿಯನ್ನು ಹೊರಬೇಕಿದೆ. ಒಂದು ದೃಢವಾದ ದತ್ತಾಂಶ ಭದ್ರತಾ ಚೌಕಟ್ಟು ದೇಶಕ್ಕೆ ಬಹಳ ಮುಖ್ಯವಾಗಿದೆ. ದತ್ತಾಂಶಗಳ ಗರಿಷ್ಟ ಪ್ರಯೋಜನಗಳನ್ನು ಪಡೆಯಲು ದತ್ತಾಂಶ ಆಡಳಿತ ನಡೆಸುವುದು ಅವಶ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಅದರ ಗುಣಮಾನಗಳನ್ನು ಮತ್ತು ಮಾನದಂಡಗಳನ್ನು ರೂಪಿಸಬೇಕಾದ ಅಗತ್ಯವಿದೆ. ನೀವು ಒಗ್ಗೂಡಿ ಈ ನಿಟ್ಟಿನಲ್ಲಿ ಹೇಗೆ ಮುಂದುವರಿಯಬಹುದು ಎಂಬ ಬಗ್ಗೆ ಹಾದಿಯನ್ನು ರೂಪಿಸಲು ಸಾಧ್ಯವಿದೆ. 

ಸ್ನೇಹಿತರೇ,

ಇಂದು ಜಗತ್ತಿನಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ ಮತ್ತು ಈ ವಲಯದಲ್ಲಿ ಅದು ಮೂರನೇ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ನವೋದ್ಯಮಗಳ ಜೊತೆಗೆ ಸರಕಾರ ನಿಲ್ಲುತ್ತದೆ ಎಂಬ ಭರವಸೆಯನ್ನು ನಾನು ಅವರಿಗೆ ನೀಡ ಬಯಸುತ್ತೇನೆ. ಕುಶಲೀಕರಣ, ಮತ್ತು ಯುವಜನತೆಯ ಮರು ಕುಶಲೀಕರಣಕ್ಕಾಗಿ ಹಾಗು ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸುವುದಕ್ಕಾಗಿ ಬಜೆಟಿನಲ್ಲಿ ಪೋರ್ಟಲೊಂದನ್ನು ರೂಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದರೊಂದಿಗೆ ಯುವ ಜನತೆಗೆ ವಿಶ್ವಾಸಾರ್ಹ ಎ.ಪಿ.ಐ. ಆಧಾರಿತ ಕೌಶಲ್ಯ ರುಜುವಾತು ಪರಿಚಯ ಪತ್ರಗಳೊಂದಿಗೆ ವೇತನ ಮತ್ತು ಇತರ ಅವಿಷ್ಕಾರ ಪದರಗಳ ಮೂಲಕ ಸರಿಯಾದ ಉದ್ಯೋಗಗಳು ಮತ್ತು ಅವಕಾಶಗಳು ಲಭಿಸಲಿವೆ. 

ಸ್ನೇಹಿತರೇ,

ದೇಶದಲ್ಲಿ ತಯಾರಿಕೆಯನ್ನು, ಉತ್ಪಾದನೆಯನ್ನು ಹೆಚ್ಚಿಸಲು, ನಾವು ಪಿ.ಎಲ್.ಐ. ಯೋಜನೆಯನ್ನು 14 ಪ್ರಮುಖ ವಲಯಗಳಲ್ಲಿ 2 ಲಕ್ಷ ಕೋ.ರೂ.ಗಳ ಮೊತ್ತದೊಂದಿಗೆ ಆರಂಭ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಮುದುವರಿಯಲು ಪ್ರಾಯೋಗಿಕವಾದ ಚಿಂತನೆಗಳನ್ನು ನಾನು ಈ ವೆಬಿನಾರಿನಲ್ಲಿ ನಿರೀಕ್ಷಿಸುತ್ತಿದ್ದೇನೆ. ಅದರ ಅಡೆ-ತಡೆರಹಿತ  ಅನುಷ್ಠಾನಕ್ಕಾಗಿ ನೀವು ನಮಗೆ ಸಲಹೆಗಳನ್ನು ಕೊಡಿ. ನಾವು ಅಪ್ಟಿಕ್  ಫೈಬರ್ ನ್ನು ಹೇಗೆ ನಾಗರಿಕರ ಸೇವೆಗಾಗಿ ಇನ್ನೂ ಉತ್ತಮ ರೀತಿಯಲ್ಲಿ ಬಳಸಬಹುದು?. ನಮ್ಮ ದೂರದ ಹಳ್ಳಿಯ, ಗ್ರಾಮದ ವಿದ್ಯಾರ್ಥಿ ಈ ತಂತ್ರಜ್ಞಾನದ ಮೂಲಕ ಭಾರತದ ಅತ್ಯುನ್ನತ ಶಿಕ್ಷಣ ವ್ಯವಸ್ಥೆಯ ಪ್ರಯೋಜನವನ್ನು ಮನೆಯಲ್ಲಿಯೇ ಕುಳಿತು ಹೇಗೆ ಪಡೆಯಬಹುದು?. ಅವರು ಹೇಗೆ ವೈದ್ಯಕೀಯ ಸೇವೆಯನ್ನು ಪಡೆಯಬಹುದು? ರೈತರು, ನನ್ನ ಸಣ್ಣ ರೈತರು ಕೃಷಿ ಕ್ಷೇತ್ರದಲ್ಲಿನ ನವೀನ ಅನ್ವೇಷಣೆಗಳ ಪ್ರಯೋಜನವನ್ನು ತಮ್ಮ ಕೈಯಲ್ಲಿರುವ ಮೊಬೈಲ್ ಮೂಲಕ ಹೇಗೆ ಪಡೆದುಕೊಳ್ಳಬಹುದು?. ಪ್ರತಿಯೊಂದೂ ಜಗತ್ತಿನಲ್ಲಿ ಲಭಿಸುತ್ತಿದೆ. ನಾವು ಅದಕ್ಕೆ ಅಡೆತಡೆರಹಿತವಾಗಿ ಸಂಪರ್ಕಿಸಲ್ಪಟ್ಟಿರಬೇಕು. ಇದಕ್ಕಾಗಿ, ನನಗೆ ನಿಮ್ಮೆಲ್ಲರಿಂದಲೂ ನವೀನ ಸಲಹೆಗಳು ಬೇಕಾಗಿವೆ.

ಸ್ನೇಹಿತರೇ,

ಜಗತ್ತು ಇಂದು ಎದುರಿಸುತ್ತಿರುವ ಇ-ತ್ಯಾಜ್ಯಕ್ಕೆ ಸಂಬಂಧಿಸಿದಂತಹ ಸವಾಲುಗಳಿಗೂ  ತಂತ್ರಜ್ಞಾನದ ಮೂಲಕ ಪರಿಹಾರ ಲಭಿಸಬೇಕಾಗಿದೆ. ಈ ವೆಬಿನಾರಿನಲ್ಲಿ  ವೃತ್ತಾಕಾರದ ಆರ್ಥಿಕತೆ, ಇ-ತ್ಯಾಜ್ಯ ನಿರ್ವಹಣೆ ಮತ್ತು ವಿದ್ಯುತ್ ಸಾಗಾಟಗಳಂತಹ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ ದೇಶಕ್ಕೊಂದು ದೃಢವಾದ, ನಿರ್ಣಾಯಕವಾದ ಪರಿಹಾರವನ್ನು ಒದಗಿಸಬೇಕು ಎಂಬುದು ನಿಮ್ಮಲ್ಲಿ ನನ್ನ ವಿಶೇಷವಾದೊಂದು ಮನವಿಯಾಗಿದೆ. ನಿಮ್ಮ ಪ್ರಯತ್ನಗಳೊಂದಿಗೆ ದೇಶವು ಖಂಡಿತವಾಗಿಯೂ ಅದರ ಗುರಿಗಳನ್ನು ಸಾಧಿಸುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಮತ್ತು ಈ ವೆಬಿನಾರಿನ ಉದ್ದೇಶ ಸರಕಾರದ ಜ್ಞಾನದೊಂದಿಗೆ ಸೇವೆ ಸಲ್ಲಿಸುವುದಲ್ಲ ಎಂಬುದನ್ನು ಪುನರುಚ್ಚರಿಸಬಯಸುತ್ತೇನೆ. ಅದಕ್ಕೆ ಬದಲು ಈ ವೆಬಿನಾರಿನಲ್ಲಿ ಸರಕಾರ ನಿಮ್ಮಿಂದ ಚಿಂತನೆಗಳನ್ನು ನಿರೀಕ್ಷೆ ಮಾಡುತ್ತದೆ. ವೇಗವನ್ನು ಹೆಚ್ಚಿಸಲು ಸರಕಾರಕ್ಕೆ ನಿಮ್ಮಿಂದ ಹೊಸ ವಿಧಾನಗಳು ಬೇಕಾಗಿವೆ. ಮತ್ತು ಬಜೆಟಿನಲ್ಲಿ ಹೂಡಿಕೆ ಮಾಡಲಾದ ಹಣಕ್ಕೆ ಸಂಬಂಧಿಸಿ ನಿಗದಿತ ಬಜೆಟಿನೊಂದಿಗೆ  ಮೊದಲ ತ್ರೈಮಾಸಿಕದಲ್ಲಿ ನಾವು ಏನನ್ನಾದರೂ ಮಾಡಲು ಸಾಧ್ಯವಾಗಬಹುದೇ?. ನೀವು ಕಾಲಮಿತಿಯಾಧಾರಿತ ಕಾರ್ಯಕ್ರಮವನ್ನು ತಯಾರಿಸಬಹುದೇ?. ನೀವು ಈ ಕ್ಷೇತ್ರದಲ್ಲಿದ್ದೀರಿ ಮತ್ತು ನಿಮಗೆ ಪ್ರತಿಯೊಂದು ವಿವರವೂ ತಿಳಿದಿದೆ-ಅದರಲ್ಲಿರುವ ಕಷ್ಟಗಳು ಇತ್ಯಾದಿ ಕೂಡಾ. ಇದರಲ್ಲಿ ಸಾಧ್ಯವಿರುವ ಉತ್ತಮ ರೀತಿಯಲ್ಲಿ ಏನನ್ನು ಮಾಡಬಹುದು? ವೇಗವನ್ನು ಹೆಚ್ಚಿಸಲು ಏನು ಮಾಡಬಹುದು? ಇದರ ಬಗ್ಗೆಯೂ ನಿಮಗೆ ಬಹಳ ಚೆನ್ನಾಗಿ ಗೊತ್ತಿದೆ. ನಾವೆಲ್ಲರೂ ಒಟ್ಟಿಗೆ ಕುಳಿತು ಇದನ್ನು ಮುಂದುವರಿಸಿಕೊಂಡು ಹೋಗಬೇಕು. ನಾನು ಈ ವೆಬಿನಾರಿನಲ್ಲಿ ನಿಮಗೆಲ್ಲ  ಶುಭವನ್ನು ಹಾರೈಸುತ್ತೇನೆ.

ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Govt says exports moving smoothly; 2,600 containers shipped to West Asia

Media Coverage

Govt says exports moving smoothly; 2,600 containers shipped to West Asia
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlights the power of courage and willpower to overcome challenges
March 17, 2026

Prime Minister Shri Narendra Modi shared a Sanskrit Subhashitam today, highlighting the significance of self-confidence and inner strength in conquering life's most difficult obstacles.

The Prime Minister remarked that for an individual filled with courage and resolve, nothing in life is impossible. Shri Modi affirmed that we can overcome the most difficult challenges on the strength of willpower and self-confidence.

The Prime Minister wrote on X;

"जो व्यक्ति साहस और संकल्प से भरा हो, उसके लिए जीवन में कुछ भी असंभव नहीं। आत्मविश्वास और इच्छाशक्ति के बल पर हम कठिन से कठिन चुनौतियों को पार कर सकते हैं।

एकोऽपि सिंहः साहस्रं यूथं मथ्नाति दन्तिनाम् ।
तस्मात् सिंहमिवोदारमात्मानं वीक्ष्य सम्पतेत्॥"

Just as one lion has the power to defeat a thousand elephants, in the same way a person should engage in noble actions fearlessly, with courage, confidence, and inner strength like a lion.