ಕಳೆದ ದಶಕದಲ್ಲಿ, ಪಂಚಾಯತ್ ಗಳನ್ನು ಸಬಲೀಕರಣಗೊಳಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ತಂತ್ರಜ್ಞಾನದ ಮೂಲಕ ಪಂಚಾಯತ್ ಗಳನ್ನು ಬಲಪಡಿಸಲಾಗಿದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ ಗ್ರಾಮೀಣ ಆರ್ಥಿಕತೆಯು ಹೊಸ ಆವೇಗವನ್ನು ಪಡೆದುಕೊಂಡಿದೆ: ಪ್ರಧಾನಮಂತ್ರಿ
ಕಳೆದ ದಶಕವು ಭಾರತದ ಮೂಲಸೌಕರ್ಯದ ದಶಕವಾಗಿದೆ: ಪ್ರಧಾನಮಂತ್ರಿ
ಮಖಾನಾ ಇಂದು ದೇಶ ಮತ್ತು ಜಗತ್ತಿಗೆ ಸೂಪರ್ ಫುಡ್ ಆಗಿದೆ, ಆದರೆ ಮಿಥಿಲಾದಲ್ಲಿ ಇದು ಸಂಸ್ಕೃತಿಯ ಭಾಗವಾಗಿದೆ, ಇಲ್ಲಿ ಸಮೃದ್ಧಿಯ ಮೂಲವಾಗಿದೆ: ಪ್ರಧಾನಮಂತ್ರಿ
140 ಕೋಟಿ ಭಾರತೀಯರ ಇಚ್ಛಾಶಕ್ತಿಯು ಈಗ ಭಯೋತ್ಪಾದಕರ ಬೆನ್ನುಮೂಳೆ ಮುರಿಯಲಿದೆ: ಪ್ರಧಾನಮಂತ್ರಿ
ಭಯೋತ್ಪಾದನೆಗೆ ಶಿಕ್ಷೆಯಾಗುವವರಗೆ ಬಿಡುವುದಿಲ್ಲ, ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು, ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ದೃಢವಾಗಿದೆ: ಪ್ರಧಾನಮಂತ್ರಿ

ನನ್ನ ಭಾಷಣ ಆರಂಭಿಸುವ ಮುನ್ನ ನಾನು ನಿಮ್ಮೆಲ್ಲರಿಗೂ ಒಂದು ಮನವಿ ಮಾಡಲು ಬಯಸುತ್ತೇನೆ, ನೀವು ಎಲ್ಲಿದ್ದರೂ, ನಿಮ್ಮ ಸ್ಥಳದಲ್ಲೇ ಕುಳಿತುಕೊಳ್ಳಿ, ನಿಲ್ಲುವ ಅಗತ್ಯವಿಲ್ಲ. ಏ.22ರಂದು ನಾವು ಕಳೆದುಕೊಂಡ ಕುಟುಂಬ ಸದಸ್ಯರಿಗೆ ನಾವು ಕುಳಿತು ಗೌರವ ನಮನ ಸಲ್ಲಿಸೋಣ. ನಮ್ಮ ಸ್ಥಳದಲ್ಲಿ ಕೆಲವು ಕ್ಷಣ ಕುಳಿತು, ಮೌನ ಆಚರಿಸುವ ಮೂಲಕ ಮತ್ತು ನಮ್ಮ ದೇವತೆಗಳನ್ನು ಸ್ಮರಿಸುವ ಮೂಲಕ, ನಾವು ಅವರೆಲ್ಲರಿಗೂ ಗೌರವ ಸಲ್ಲಿಸೋಣ. ಅದಾದ ನಂತರ ನಾನು ಇಂದು ನನ್ನ ಭಾಷಣ ಆರಂಭಿಸುತ್ತೇನೆ.

ಓಂ ಶಾಂತಿ-ಶಾಂತಿ-ಶಾಂತಿ.

ಬಿಹಾರದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಜಿ, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ಶ್ರೀ ನಿತೀಶ್ ಕುಮಾರ್ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲಾ ಹಿರಿಯ ಗಣ್ಯರೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ.

ಇಂದು ಪಂಚಾಯತ್ ರಾಜ್ ದಿನದಂದು ಇಡೀ ದೇಶವು ಮಿಥಿಲಾದೊಂದಿಗೆ ಸಂಪರ್ಕ ಹೊಂದಿದೆ, ಬಿಹಾರದೊಂದಿಗೆ ಸಂಪರ್ಕ ಹೊಂದಿದೆ. ಇಂದು ದೇಶ ಮತ್ತು ಬಿಹಾರದ ಅಭಿವೃದ್ಧಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ವಿದ್ಯುತ್, ರೈಲ್ವೆ, ಮೂಲಸೌಕರ್ಯ ವಲಯದ ವಿವಿಧ ಕಾರ್ಯಗಳು ಬಿಹಾರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಇಂದು ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಜಿ ಅವರ ಪುಣ್ಯತಿಥಿಯೂ ಆಗಿದೆ. ನಾನು ಅವರಿಗೆ ನನ್ನ ವಿನಮ್ರ ಗೌರವ ಸಲ್ಲಿಸುತ್ತೇನೆ.

ಸ್ನೇಹಿತರೆ,

ಬಿಹಾರವು ಪೂಜ್ಯ ಬಾಪೂಜಿ ಸತ್ಯಾಗ್ರಹದ ಮಂತ್ರ ಹರಡಿದ ಪುಣ್ಯ ಭೂಮಿ. ಭಾರತದ ಹಳ್ಳಿಗಳು ಬಲಿಷ್ಠವಾಗದ ಹೊರತು ಭಾರತ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಪೂಜ್ಯ ಬಾಪು ದೃಢವಾಗಿ ನಂಬಿದ್ದರು. ದೇಶದಲ್ಲಿ ಪಂಚಾಯತ್ ರಾಜ್ ಪರಿಕಲ್ಪನೆಯ ಹಿಂದಿನ ಸ್ಫೂರ್ತಿ ಇದೇ ಆಗಿದೆ. ಕಳೆದ ದಶಕದಲ್ಲಿ, ಪಂಚಾಯತ್‌ಗಳನ್ನು ಸಬಲೀಕರಣಗೊಳಿಸಲು ಒಂದರ ನಂತರ ಒಂದರಂತೆ ಹೆಜ್ಜೆ ಇಡಲಾಗಿದೆ. ಪಂಚಾಯತ್‌ಗಳನ್ನು ತಂತ್ರಜ್ಞಾನದ ಮೂಲಕವೂ ಸಬಲೀಕರಣಗೊಳಿಸಲಾಗಿದೆ. ಕಳೆದ ದಶಕದಲ್ಲಿ, 2 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಇಂಟರ್ನೆಟ್‌ಗೆ ಸಂಪರ್ಕಿಸಲಾಗಿದೆ. ಹಳ್ಳಿಗಳಲ್ಲಿ 5.5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಂಚಾಯಿತಿಗಳು ಡಿಜಿಟಲ್ ಆಗುವುದರಿಂದ ಮತ್ತೊಂದು ಪ್ರಯೋಜನವಿದೆ. ಜೀವ-ಮರಣ ಪ್ರಮಾಣಪತ್ರಗಳು, ಭೂ ಮಾಲೀಕತ್ವ ಪ್ರಮಾಣಪತ್ರಗಳು ಮತ್ತು ಅಂತಹ ಅನೇಕ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು. ಸ್ವಾತಂತ್ರ್ಯದ ಹಲವಾರು ದಶಕಗಳ ನಂತರ, ದೇಶವು ಹೊಸ ಸಂಸತ್ತು ಕಟ್ಟಡ ನಿರ್ಮಿಸಿದಾಗಲೇ ದೇಶದಲ್ಲಿ 30 ಸಾವಿರ ಹೊಸ ಪಂಚಾಯಿತಿ ಕಟ್ಟಡಗಳನ್ನು ಸಹ ನಿರ್ಮಿಸಲಾಯಿತು. ಪಂಚಾಯಿತಿಗಳು ಸಾಕಷ್ಟು ಹಣ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಕಳೆದ 10 ವರ್ಷಗಳಲ್ಲಿ ಪಂಚಾಯಿತಿಗಳು 2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣ ಪಡೆದಿವೆ. ಈ ಎಲ್ಲಾ ಹಣವನ್ನು ಗ್ರಾಮಗಳ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲಾಗಿದೆ.

 

ಸ್ನೇಹಿತರೆ,

ಗ್ರಾಮ ಪಂಚಾಯಿತಿಗಳ ಮತ್ತೊಂದು ಪ್ರಮುಖ ಸಮಸ್ಯೆ ಭೂ ವಿವಾದಗಳಿಗೆ ಸಂಬಂಧಿಸಿದೆ. ವಾಸಿಸುವ ಭೂಮಿ, ಅದು ಕೃಷಿ ಭೂಮಿ, ಅದು ಪಂಚಾಯಿತಿ ಭೂಮಿ, ಅದು ಸರ್ಕಾರಿ ಭೂಮಿಯ ಬಗ್ಗೆ ಆಗಾಗ್ಗೆ ವಿವಾದಗಳು ನಡೆಯುತ್ತಿದ್ದವು. ಇದನ್ನು ಪರಿಹರಿಸಲು, ಭೂಮಿಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಭೂ ದಾಖಲೆಗಳ ಡಿಜಿಟಲೀಕರಣವು ಅನಗತ್ಯ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡಿದೆ.

ಸ್ನೇಹಿತರೆ,

ಪಂಚಾಯಿತಿಗಳು ಸಾಮಾಜಿಕ ಭಾಗವಹಿಸುವಿಕೆಯನ್ನು ಹೇಗೆ ಸಬಲೀಕರಣಗೊಳಿಸಿವೆ ಎಂಬುದನ್ನು ನಾವು ನೋಡಿದ್ದೇವೆ. ಇವುಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಿದ ದೇಶದ ಮೊದಲ ರಾಜ್ಯ ಬಿಹಾರ, ಆದ್ದರಿಂದ ನಾನು ನಿತೀಶ್ ಜಿ ಅವರನ್ನು ಅಭಿನಂದಿಸುತ್ತೇನೆ. ಇಂದು ಬಡವರು, ದಲಿತರು, ಮಹಾದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳ ಹೆಚ್ಚಿನ ಸಂಖ್ಯೆಯ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಬಿಹಾರದಲ್ಲಿ ಸಾರ್ವಜನಿಕ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ನಿಜವಾದ ಸಾಮಾಜಿಕ ನ್ಯಾಯ, ಇದು ನಿಜವಾದ ಸಾಮಾಜಿಕ ಭಾಗವಹಿಸುವಿಕೆ. ಗರಿಷ್ಠ ಭಾಗವಹಿಸುವಿಕೆಯಿಂದ ಮಾತ್ರ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತದೆ, ಬಲಗೊಳ್ಳುತ್ತದೆ. ಈ ಚಿಂತನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯ ಕಾನೂನು ಸಹ ಮಾಡಲಾಗಿದೆ. ದೇಶದ ಪ್ರತಿಯೊಂದು ರಾಜ್ಯದ ಮಹಿಳೆಯರು ಇದರಿಂದ ಪ್ರಯೋಜನ ಪಡೆಯುತ್ತಾರೆ, ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಹೆಚ್ಚಿನ ಪ್ರಾತಿನಿಧ್ಯ ಪಡೆಯುತ್ತಾರೆ.

ಸ್ನೇಹಿತರೆ,

ದೇಶದಲ್ಲಿ ಮಹಿಳೆಯರ ಆದಾಯ ಹೆಚ್ಚಿಸಲು ಮತ್ತು ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರವು ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಬಿಹಾರದಲ್ಲಿ ನಡೆಯುತ್ತಿರುವ ಜೀವಿಕಾ ದೀದಿ ಕಾರ್ಯಕ್ರಮವು ಅನೇಕ ಸಹೋದರಿಯರ ಜೀವನ ಬದಲಾಯಿಸಿದೆ. ಇಂದು ಬಿಹಾರದ ಸಹೋದರಿಯರ ಸ್ವ-ಸಹಾಯ ಗುಂಪುಗಳಿಗೆ ಸುಮಾರು 1 ಸಾವಿರ ಕೋಟಿ ರೂಪಾಯಿ ಸಹಾಯ ನೀಡಲಾಗಿದೆ. ಇದು ಸಹೋದರಿಯರ ಆರ್ಥಿಕ ಸಬಲೀಕರಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ದೇಶದಲ್ಲಿ 3 ಕೋಟಿ ಲಕ್ಷಪತಿ ದೀದಿಗಳನ್ನು ರಚಿಸುವ ಗುರಿ ಸಾಧಿಸಲು ಮತ್ತಷ್ಟು ಸಹಾಯ ಮಾಡುತ್ತದೆ.

 

ಸ್ನೇಹಿತರೆ,

ಕಳೆದ ದಶಕದಿಂದ ಗ್ರಾಮೀಣ ಆರ್ಥಿಕತೆಯು ಹೊಸ ವೇಗ ಪಡೆದುಕೊಂಡಿದೆ. ಹಳ್ಳಿಗಳಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಲಾಗಿದೆ, ರಸ್ತೆಗಳನ್ನು ನಿರ್ಮಿಸಲಾಗಿದೆ, ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಲಾಗಿದೆ. ಹಳ್ಳಿಗಳಲ್ಲಿ ಅನಿಲ ಸಂಪರ್ಕ ಒದಗಿಸಲಾಗಿದೆ, ನೀರಿನ ಸಂಪರ್ಕ ಒದಗಿಸಲಾಗಿದೆ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಂತಹ ಪ್ರತಿಯೊಂದು ಕೆಲಸದ ಮೂಲಕ ಲಕ್ಷಾಂತರ ಮತ್ತು ಕೋಟ್ಯಂತರ ರೂಪಾಯಿ ಹಳ್ಳಿಗಳನ್ನು ತಲುಪಿವೆ. ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಲಾಗಿದೆ. ಕಾರ್ಮಿಕರಿಂದ ರೈತರವರೆಗೆ ಮತ್ತು ಬಂಡಿ ಚಾಲಕರಿಂದ ಅಂಗಡಿ ವ್ಯಾಪಾರದವರೆಗೆ, ಪ್ರತಿಯೊಬ್ಬರೂ ಸಂಪಾದಿಸಲು ಹೊಸ ಅವಕಾಶಗಳನ್ನು ಪಡೆದಿದ್ದಾರೆ. ಇದು ತಲೆಮಾರುಗಳಿಂದ ವಂಚಿತರಾಗಿದ್ದ ಸಮಾಜಕ್ಕೆ ಹೆಚ್ಚು ಪ್ರಯೋಜನ ನೀಡುತ್ತಿದೆ. ನಾನು ನಿಮಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಉದಾಹರಣೆ ನೀಡುತ್ತೇನೆ. ಈ ಯೋಜನೆಯ ಉದ್ದೇಶವೆಂದರೆ, ದೇಶದಲ್ಲಿ ಯಾವುದೇ ಬಡ ಕುಟುಂಬವು ನಿರಾಶ್ರಿತರಾಗಿರಬಾರದು, ಪ್ರತಿಯೊಬ್ಬರೂ ತಮ್ಮ ತಲೆಯ ಮೇಲೆ ಕಾಂಕ್ರೀಟ್ ಸೂರು ಹೊಂದಿರಬೇಕು. ಇದೀಗ, ನಾನು ಈ ತಾಯಂದಿರು ಮತ್ತು ಸಹೋದರಿಯರಿಗೆ ಮನೆಯ ಕೀಲಿಗಳನ್ನು ನೀಡುವಾಗ, ಅವರ ಮುಖಗಳಲ್ಲಿ ಕಾಣುತ್ತಿದ್ದ ತೃಪ್ತಿ, ಅವರಲ್ಲಿ ಕಾಣುತ್ತಿದ್ದ ಹೊಸ ವಿಶ್ವಾಸ, ನಿಜವಾಗಿಯೂ ಈ ಬಡ ಜನರಿಗೆ ಕೆಲಸ ಮಾಡಲು ಸ್ಫೂರ್ತಿ ನೀಡಿತು. ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಕಳೆದ ದಶಕದಲ್ಲಿ 4 ಕೋಟಿಗೂ ಹೆಚ್ಚು ಕಾಂಕ್ರೀಟ್ ಮನೆಗಳನ್ನು ನಿರ್ಮಿಸಲಾಗಿದೆ. ಬಿಹಾರದಲ್ಲಿಯೂ ಸಹ, ಇಲ್ಲಿಯವರೆಗೆ 57 ಲಕ್ಷ ಬಡ ಕುಟುಂಬಗಳಿಗೆ ಕಾಂಕ್ರೀಟ್ ಮನೆಗಳನ್ನು ನೀಡಲಾಗಿದೆ. ಈ ಮನೆಗಳನ್ನು ಬಡವರು, ದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದವರು, ಪಾಸ್ಮಾಂಡ ಕುಟುಂಬಗಳು ಮತ್ತು ಸಮಾಜದ ಸೌಲಭ್ಯವಂಚಿತ ಕುಟುಂಬಗಳಿಗೆ ನೀಡಲಾಗಿದೆ. ಮುಂಬರುವ ವರ್ಷಗಳಲ್ಲಿ 3 ಕೋಟಿ ಹೆಚ್ಚು ಕಾಂಕ್ರೀಟ್ ಮನೆಗಳನ್ನು ಬಡವರಿಗೆ ನೀಡಲಾಗುವುದು. ಇಂದು ಬಿಹಾರದ ಸುಮಾರು 1.5 ಲಕ್ಷ ಕುಟುಂಬಗಳು ತಮ್ಮ ಹೊಸ ಪಕ್ಕಾ ಮನೆಗಳನ್ನು ಪ್ರವೇಶಿಸುತ್ತಿವೆ. ದೇಶಾದ್ಯಂತ 15 ಲಕ್ಷ ಬಡ ಕುಟುಂಬಗಳಿಗೆ ಹೊಸ ಮನೆಗಳ ನಿರ್ಮಾಣಕ್ಕಾಗಿ ಮಂಜೂರಾತಿ ಪತ್ರಗಳನ್ನು ನೀಡಲಾಗಿದೆ. ಇವುಗಳಲ್ಲಿ, ಮೂರುವರೆ ಲಕ್ಷ ಫಲಾನುಭವಿಗಳು ನಮ್ಮ ಬಿಹಾರದವರಾಗಿದ್ದಾರೆ. ಇಂದು ಸುಮಾರು 10 ಲಕ್ಷ ಬಡ ಕುಟುಂಬಗಳಿಗೆ ಅವರ ಕಾಂಕ್ರೀಟ್ ಮನೆಗಳಿಗಾಗಿ ಆರ್ಥಿಕ ನೆರವು ಒದಗಿಸಲಾಗಿದೆ. ಇದರಲ್ಲಿ 80 ಸಾವಿರ ಗ್ರಾಮೀಣ ಕುಟುಂಬಗಳು ಮತ್ತು ಬಿಹಾರದ 1 ಲಕ್ಷ ನಗರ ಕುಟುಂಬಗಳು ಸೇರಿವೆ.

ಸ್ನೇಹಿತರೆ,

ಕಳೆದ ದಶಕವು ಭಾರತದ ಮೂಲಸೌಕರ್ಯದ ದಶಕವಾಗಿದೆ. ಈ ಆಧುನಿಕ ಮೂಲಸೌಕರ್ಯವು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಬಲಪಡಿಸುತ್ತಿದೆ. ಮೊದಲ ಬಾರಿಗೆ, ದೇಶದಲ್ಲಿ 12 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳ ಮನೆಗಳಿಗೆ ನಲ್ಲಿ ನೀರು ತಲುಪಿದೆ. ವಿದ್ಯುತ್ ಸಂಪರ್ಕ 2.5 ಕೋಟಿಗೂ ಹೆಚ್ಚು ಮನೆಗಳನ್ನು ತಲುಪಿದೆ. ಗ್ಯಾಸ್ ಸ್ಟೌವ್ ಮೇಲೆ ಅಡುಗೆ ಮಾಡುವ ಬಗ್ಗೆ ಎಂದಿಗೂ ಯೋಚಿಸದವರಿಗೆ ಗ್ಯಾಸ್ ಸಿಲಿಂಡರ್‌ಗಳು ಸಿಕ್ಕಿವೆ. ನೀವು ಇತ್ತೀಚೆಗೆ ಸುದ್ದಿಗಳನ್ನು ಓದಿರಬೇಕು. ಲಡಾಖ್ ಮತ್ತು ಸಿಯಾಚಿನ್‌ನಲ್ಲಿ, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸಹ ಕಷ್ಟಕರವಾಗಿರುವ ಸ್ಥಳಗಳಲ್ಲಿ, 4ಜಿ ಮತ್ತು 5ಜಿ ಮೊಬೈಲ್ ಸಂಪರ್ಕಗಳು ಈಗ ಅಲ್ಲಿಗೆ ತಲುಪಿವೆ. ಇದು ಇಂದಿನ ದೇಶದ ಆದ್ಯತೆಗಳು ಏನೆಂದು ತೋರಿಸುತ್ತಿದೆ. ಆರೋಗ್ಯದಂತಹ ಕ್ಷೇತ್ರದ ಉದಾಹರಣೆಯೂ ನಮಗಿದೆ. ಹಿಂದೆ, ಏಮ್ಸ್ ನಂತಹ ಆಸ್ಪತ್ರೆಗಳು ದೆಹಲಿಯಂತಹ ದೊಡ್ಡ ನಗರಗಳಲ್ಲಿ ಮಾತ್ರ ಇದ್ದವು. ಇಂದು ಏಮ್ಸ್ ಅನ್ನು ದರ್ಭಂಗಾದಲ್ಲೇ ನಿರ್ಮಿಸಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ. ಝಂಝಾರ್‌ಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ.

ಸ್ನೇಹಿತರೆ,

ಹಳ್ಳಿಗಳಿಗೆ ಉತ್ತಮ ಆಸ್ಪತ್ರೆಗಳನ್ನು ಒದಗಿಸುವ ಉದ್ದೇಶದಿಂದ ದೇಶಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ನಿರ್ಮಿಸಲಾಗಿದೆ. ಬಿಹಾರದಲ್ಲಿ 10 ಸಾವಿರಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಜನೌಷಧಿ ಕೇಂದ್ರಗಳು ದೊಡ್ಡ ಪರಿಹಾರವಾಗಿದೆ. ಇಲ್ಲಿ ಕಡಿಮೆ ಬೆಲೆಯ ಔಷಧಿಗಳು ಶೇಕಡ 80ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಬಿಹಾರದಲ್ಲಿ 800ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದು ಬಿಹಾರದ ಜನರಿಗೆ ಔಷಧಿಗಳ ಮೇಲೆ 2,000 ಕೋಟಿ ರೂಪಾಯಿಗಳನ್ನು ಉಳಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ, ಬಿಹಾರದ ಲಕ್ಷಾಂತರ ಕುಟುಂಬಗಳು ಉಚಿತ ಚಿಕಿತ್ಸೆ ಪಡೆದಿವೆ. ಇದು ಈ ಕುಟುಂಬಗಳಿಗೆ ಸಾವಿರಾರು ಕೋಟಿ ರೂಪಾಯಿ ಉಳಿಸಿದೆ.

 

ಸ್ನೇಹಿತರೆ,

ಇಂದು ಭಾರತವು ರೈಲ್ವೆ, ರಸ್ತೆಗಳು, ವಿಮಾನ ನಿಲ್ದಾಣಗಳಂತಹ ಮೂಲಸೌಕರ್ಯಗಳೊಂದಿಗೆ ಅತ್ಯಂತ ವೇಗವಾಗಿ ಸಂಪರ್ಕ ಸಾಧಿಸುತ್ತಿದೆ. ಪಾಟ್ನಾದಲ್ಲಿ ಮೆಟ್ರೋ ಕೆಲಸ ನಡೆಯುತ್ತಿದೆ, ದೇಶದ 2 ಡಜನ್‌ಗಿಂತಲೂ ಹೆಚ್ಚು ನಗರಗಳು ಮೆಟ್ರೋ ಸೌಲಭ್ಯದೊಂದಿಗೆ ಸಂಪರ್ಕ ಹೊಂದಿವೆ. ಇಂದು, ಪಾಟ್ನಾ ಮತ್ತು ಜೈನಗರ ನಡುವೆ ನಮೋ ಭಾರತ್ ರ‍್ಯಾಪಿಡ್ ರೈಲು ಸಹ ಪ್ರಾರಂಭವಾಗಿದೆ. ಇದರೊಂದಿಗೆ, ಪಾಟ್ನಾ ಮತ್ತು ಜೈನಗರ ನಡುವಿನ ಪ್ರಯಾಣ ಬಹಳ ಕಡಿಮೆ ಸಮಯದಲ್ಲಿ ಪೂರ್ಣಗೊಳ್ಳುತ್ತದೆ. ನಮೋ ಭಾರತ್ ರ‍್ಯಾಪಿಡ್ ರೈಲು ಸಮಷ್ಟಿಪುರ, ದರ್ಭಂಗಾ, ಮಧುಬನಿ ಮತ್ತು ಬೇಗುಸರಾಯ್‌ನ ಲಕ್ಷಾಂತರ ಜನರಿಗೆ ಸಹಾಯ ಮಾಡುತ್ತದೆ.

ಸ್ನೇಹಿತರೆ,

ಇಂದು ಇಲ್ಲಿ ಅನೇಕ ಹೊಸ ರೈಲು ಮಾರ್ಗಗಳನ್ನು ಉದ್ಘಾಟಿಸಲಾಗಿದೆ ಮತ್ತು ಲೋಕಾರ್ಪಣೆ ಮಾಡಲಾಗಿದೆ. ಸಹರ್ಸಾದಿಂದ ಮುಂಬೈಗೆ ಆಧುನಿಕ ಅಮೃತ್ ಭಾರತ್ ರೈಲು ಆರಂಭಿಸುವುದರಿಂದ ನಮ್ಮ ಕಾರ್ಮಿಕ ಕುಟುಂಬಗಳಿಗೆ ಹೆಚ್ಚಿನ ಅನುಕೂಲ ಸಿಗುತ್ತದೆ. ನಮ್ಮ ಸರ್ಕಾರವು ಬಿಹಾರದ ಮಧುಬನಿ ಮತ್ತು ಝಂಝಾರ್ಪುರ್ ಸೇರಿದಂತೆ ಡಜನ್ ಗಟ್ಟಲೆ ರೈಲು ನಿಲ್ದಾಣಗಳನ್ನು ಆಧುನೀಕರಿಸುತ್ತಿದೆ. ದರ್ಭಂಗಾ ವಿಮಾನ ನಿಲ್ದಾಣದೊಂದಿಗೆ ಮಿಥಿಲಾ ಮತ್ತು ಬಿಹಾರದ ವೈಮಾನಿಕ ಸಂಪರ್ಕ ಸುಧಾರಿಸಿದೆ. ಪಾಟ್ನಾ ವಿಮಾನ ನಿಲ್ದಾಣವನ್ನು ಸಹ ವಿಸ್ತರಿಸಲಾಗುತ್ತಿದೆ. ಈ ಅಭಿವೃದ್ಧಿ ಕಾರ್ಯಗಳಿಂದಾಗಿ ಬಿಹಾರದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಸ್ನೇಹಿತರೆ,

ನಮ್ಮ ರೈತರು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಈ ಬೆನ್ನೆಲುಬು ಬಲಿಷ್ಠವಾಗಿದ್ದಷ್ಟೂ, ಹಳ್ಳಿಗಳು ಬಲಿಷ್ಠವಾಗಿರುತ್ತವೆ, ದೇಶವೂ ಹೆಚ್ಚು ಬಲಿಷ್ಠವಾಗಿರುತ್ತದೆ. ಮಿಥಿಲಾ, ಕೋಸಿಯ ಈ ಪ್ರದೇಶವು ಪ್ರವಾಹದಿಂದ ತುಂಬಾ ತೊಂದರೆಗೊಳಗಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಬಿಹಾರದಲ್ಲಿ ಪ್ರವಾಹದ ಪರಿಣಾಮ ಕಡಿಮೆ ಮಾಡಲು ಸರ್ಕಾರ 11 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಿದೆ. ಇದರೊಂದಿಗೆ, ಬಾಗ್ಮತಿ, ಧಾರ್, ಬುರ್ಹಿ ಗಂಡಕ್ ಮತ್ತು ಕೋಸಿಯಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು. ಇದರ ಮೂಲಕ, ಕಾಲುವೆಗಳನ್ನು ನಿರ್ಮಿಸಲಾಗುವುದು, ನದಿ ನೀರಿನಿಂದ ನೀರಾವರಿ ಒದಗಿಸಲಾಗುವುದು. ಪ್ರತಿಯೊಬ್ಬ ರೈತರ ಹೊಲಕ್ಕೂ ನೀರು ತಲುಪಿಸುವ ವ್ಯವಸ್ಥೆಯೂ ಇರುತ್ತದೆ. ಇದರರ್ಥ ಈಗ ಪ್ರವಾಹದ ಸಮಸ್ಯೆ ಕಡಿಮೆಯಾಗಿ, ಸಾಕಷ್ಟು ನೀರು ಹೊಲಗಳಿಗೆ ಹರಿಯುತ್ತದೆ.

 

ಸ್ನೇಹಿತರೆ,

ಮಖಾನಾ(ತಾವರೆ ಬೀಜ) ಇಂದು ದೇಶ ಮತ್ತು ಜಗತ್ತಿಗೆ ಉತ್ಕೃಷ್ಟ ಆಹಾವಾಗಿದೆ. ಆದರೆ ಅದು ಮಿಥಿಲಾ ಸಂಸ್ಕೃತಿಯ ಭಾಗವಾಗಿದೆ. ನಾವು ಈ ಸಂಸ್ಕೃತಿಯನ್ನು ಇಲ್ಲಿ ಸಮೃದ್ಧಿಯ ಮೂಲವನ್ನಾಗಿ ಮಾಡುತ್ತಿದ್ದೇವೆ. ನಾವು ಮಖಾನಾಗೆ ಜಿಐ ಟ್ಯಾಗ್ ನೀಡಿದ್ದೇವೆ. ಅಂದರೆ ಮಖಾನಾ ಈ ಮಣ್ಣಿನ ಉತ್ಪನ್ನವಾಗಿದೆ, ಅದನ್ನು ಈಗ ಅಧಿಕೃತವಾಗಿ ಪ್ರಮಾಣೀಕರಿಸಲಾಗಿದೆ. ಮಖಾನಾ ಸಂಶೋಧನಾ ಕೇಂದ್ರಕ್ಕೂ ರಾಷ್ಟ್ರೀಯ ಸ್ಥಾನಮಾನ ನೀಡಲಾಗಿದೆ. ಬಜೆಟ್‌ನಲ್ಲಿ ಘೋಷಿಸಲಾದ ಮಖಾನಾ ಮಂಡಳಿಯ ರಚನೆಯು ಮಖಾನಾ ರೈತರ ಭವಿಷ್ಯವನ್ನು ಬದಲಾಯಿಸಲಿದೆ. ಬಿಹಾರದ ಮಖಾನಾ ಉತ್ಕೃಷ್ಟ ಆಹಾರವಾಗಿ  ವಿಶ್ವದ ಮಾರುಕಟ್ಟೆಗಳನ್ನು ತಲುಪಲಿದೆ. ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯನ್ನು ಸಹ ನಿರ್ಮಿಸಲಾಗುವುದು. ಇದು ಇಲ್ಲಿನ ಯುವಕರಿಗೆ ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಸಣ್ಣ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಮತ್ತಷ್ಟು ಸಹಾಯ ಮಾಡುತ್ತದೆ.

ಸ್ನೇಹಿತರೆ,

ಕೃಷಿಯ ಜತೆಗೆ, ಬಿಹಾರವು ಮೀನು ಉತ್ಪಾದನೆಯಲ್ಲಿ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ. ನಮ್ಮ ಮೀನುಗಾರರು ಈಗ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆಯಲು ಸಮರ್ಥರಾಗಿದ್ದಾರೆ. ಇದು ಮೀನುಗಾರಿಕೆಯಲ್ಲಿ ತೊಡಗಿರುವ ಅನೇಕ ಕುಟುಂಬಗಳಿಗೆ ಪ್ರಯೋಜನ ನೀಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ, ಬಿಹಾರದಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಕೆಲಸಗಳನ್ನು ಮಾಡಲಾಗಿದೆ.

ಸ್ನೇಹಿತರೆ,

ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮುಗ್ಧ ನಾಗರಿಕರನ್ನು ಕೊಂದ ಕ್ರೌರ್ಯದಿಂದ ಇಡೀ ದೇಶವು ದುಃಖಿತವಾಗಿದೆ. ಲಕ್ಷಾಂತರ ದೇಶವಾಸಿಗಳು ದುಃಖಿತರಾಗಿದ್ದಾರೆ. ಎಲ್ಲಾ ಸಂತ್ರಸ್ತ ಕುಟುಂಬಗಳೊಂದಿಗೆ ಇಡೀ ದೇಶ ನಿಂತಿದೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಕುಟುಂಬ ಸದಸ್ಯರು ಶೀಘ್ರದಲ್ಲೇ ಚೇತರಿಸಿಕೊಳ್ಳುವುದನ್ನು ಖಚಿತಪಡಿಸಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಸ್ನೇಹಿತರೆ,

ಈ ಭಯೋತ್ಪಾದಕ ದಾಳಿಯಲ್ಲಿ ಯಾರೋ ತಮ್ಮ ಮಗನನ್ನು ಕಳೆದುಕೊಂಡರು, ಯಾರೋ ತಮ್ಮ ಸಹೋದರನನ್ನು ಕಳೆದುಕೊಂಡರು, ಯಾರೋ ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡರು. ಅವರಲ್ಲಿ ಕೆಲವರು ಬಂಗಾಳಿ ಮಾತನಾಡುತ್ತಿದ್ದರು, ಕೆಲವರು ಕನ್ನಡ ಮಾತನಾಡುತ್ತಿದ್ದರು, ಕೆಲವರು ಮರಾಠಿ ಮಾತನಾಡುತ್ತಿದ್ದರು, ಕೆಲವರು ಒಡಿಯಾದವರು, ಕೆಲವರು ಗುಜರಾತಿಯವರು, ಕೆಲವರು ಬಿಹಾರದವರು. ಇಂದು ಕಾರ್ಗಿಲ್‌ನಿಂದ ಕನ್ಯಾಕುಮಾರಿಯವರೆಗೆ, ಅವರೆಲ್ಲರ ಸಾವಿನಿಂದ ನಮ್ಮ ದುಃಖ ಒಂದೇ, ನಮ್ಮ ಕೋಪ ಒಂದೇ. ಈ ದಾಳಿ ಕೇವಲ ನಿರಾಯುಧ ಪ್ರವಾಸಿಗರ ಮೇಲೆ ನಡೆದಿಲ್ಲ; ದೇಶದ ಶತ್ರುಗಳು ಭಾರತದ ಆತ್ಮದ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದ್ದಾರೆ. ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ, ಈ ದಾಳಿ ನಡೆಸಿದ ಭಯೋತ್ಪಾದಕರು ಮತ್ತು ಈ ದಾಳಿಗೆ ಸಂಚು ರೂಪಿಸಿದವರಿಗೆ ಅವರು ಊಹಿಸಿರುವುದಕ್ಕಿಂತ ದೊಡ್ಡ ಶಿಕ್ಷೆ ಸಿಗಲಿದೆ. ಈಗ ಭಯೋತ್ಪಾದಕರ ಉಳಿದ ನೆಲವನ್ನು ನಾಶ ಮಾಡುವ ಸಮಯ ಬಂದಿದೆ. 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದವರ ಬೆನ್ನು ಮುರಿಯಲಿದೆ.

 

ಸ್ನೇಹಿತರೆ,

ಇಂದು ಬಿಹಾರದ ಮಣ್ಣಿನಿಂದ ನಾನು ಇಡೀ ಜಗತ್ತಿಗೆ ಹೇಳುತ್ತೇನೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕನನ್ನು ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಪತ್ತೆ ಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ. ನಾವು ಅವರನ್ನು ಭೂಮಿಯ ತಳದಲ್ಲಿದ್ದರೂ ಹುಡುಕುತ್ತೇವೆ. ಭಾರತದ ಚೈತನ್ಯವನ್ನು ಭಯೋತ್ಪಾದನೆ ಎಂದಿಗೂ ಮುರಿಯಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ನ್ಯಾಯ ಸಿಗುವಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ಸದೃಢವಾಗಿದೆ. ಮಾನವತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ಈ ಕಾಲದಲ್ಲಿ ನಮ್ಮೊಂದಿಗೆ ನಿಂತಿರುವ ವಿವಿಧ ದೇಶಗಳ ಜನರು ಮತ್ತು ಅವರ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ.

 

ಸ್ನೇಹಿತರೆ,

ಶಾಂತಿ ಮತ್ತು ಭದ್ರತೆಯು ತ್ವರಿತ ಅಭಿವೃದ್ಧಿಯ ಪ್ರಮುಖ ಪರಿಸ್ಥಿತಿಗಳಾಗಿವೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಹೊಂದಿದ ಬಿಹಾರ ಅಗತ್ಯ. ಬಿಹಾರದಲ್ಲಿ ಅಭಿವೃದ್ಧಿಯಾಗಬೇಕು ಮತ್ತು ಅಭಿವೃದ್ಧಿಯ ಪ್ರಯೋಜನಗಳು ಇಲ್ಲಿನ ಪ್ರತಿಯೊಂದು ವಿಭಾಗ ಮತ್ತು ಪ್ರತಿಯೊಂದು ಪ್ರದೇಶವನ್ನು ತಲುಪಬೇಕು ಎಂಬುದು ನಮ್ಮೆಲ್ಲರ ಪ್ರಯತ್ನವಾಗಿದೆ. ಪಂಚಾಯತ್ ರಾಜ್ ದಿನದಂದು ಈ ಕಾರ್ಯಕ್ರಮಕ್ಕೆ ಸೇರಿದ್ದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದ ಹೇಳುತ್ತೇನೆ.

ತುಂಬು ಧನ್ಯವಾದಗಳು.

ನನ್ನೊಂದಿಗೆ ಹೇಳಿ -

ಭಾರತ್ ಮಾತಾ ಕಿ ಜೈ(ಭಾರತ ಮಾತೆಗೆ ನಮಸ್ಕಾರ).

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
'Operation Sindoor on, if they fire, we fire': India's big message to Pakistan

Media Coverage

'Operation Sindoor on, if they fire, we fire': India's big message to Pakistan
NM on the go

Nm on the go

Always be the first to hear from the PM. Get the App Now!
...
PM Modi's address to the nation
May 12, 2025
Today, every terrorist knows the consequences of wiping Sindoor from the foreheads of our sisters and daughters: PM
Operation Sindoor is an unwavering pledge for justice: PM
Terrorists dared to wipe the Sindoor from the foreheads of our sisters; that's why India destroyed the very headquarters of terror: PM
Pakistan had prepared to strike at our borders,but India hit them right at their core: PM
Operation Sindoor has redefined the fight against terror, setting a new benchmark, a new normal: PM
This is not an era of war, but it is not an era of terrorism either: PM
Zero tolerance against terrorism is the guarantee of a better world: PM
Any talks with Pakistan will focus on terrorism and PoK: PM

ಪ್ರಿಯ ದೇಶವಾಸಿಗಳೇ,

ನಮಸ್ಕಾರ !...

ಕಳೆದ ಕೆಲ ದಿನಗಳಲ್ಲಿ ದೇಶದ ಶಕ್ತಿ ಮತ್ತು ಸಂಯಮ ಎರಡನ್ನೂ ನಾವೆಲ್ಲರೂ ನೋಡಿದ್ದೇವೆ. ಮೊದಲನೆಯದಾಗಿ, ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಭಾರತದ ಬಲಿಷ್ಠ ಪಡೆಗಳಿಗೆ, ನಮ್ಮ ಸಶಸ್ತ್ರ ಪಡೆಗಳಿಗೆ, ನಮ್ಮ ಗುಪ್ತಚರ ಸಂಸ್ಥೆಗಳಿಗೆ ಮತ್ತು ನಮ್ಮ ವಿಜ್ಞಾನಿಗಳಿಗೆ ನಮಸ್ಕರಿಸುತ್ತೇನೆ.

ಆಪರೇಷನ್ ಸಿಂಧೂರದ ಉದ್ದೇಶಗಳನ್ನು ಸಾಧಿಸಲು ನಮ್ಮ ವೀರ ಸೈನಿಕರು ಅಪಾರ ಧೈರ್ಯವನ್ನು ಪ್ರದರ್ಶಿಸಿದರು.

ಇಂದು ನಾನು ಅವರ ಧೈರ್ಯಕ್ಕೆ, ಅವರ ಪರಾಕ್ರಮಕ್ಕೆ, ಅವರ ಶೌರ್ಯಕ್ಕೆ... ನಮ್ಮ ದೇಶದ ಪ್ರತಿಯೊಬ್ಬ ತಾಯಿಗೆ, ದೇಶದ ಪ್ರತಿಯೊಬ್ಬ ಸಹೋದರಿಗೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಮತ್ತು ನಾನು ಈ ಶೌರ್ಯವನ್ನು ದೇಶದ ಪ್ರತಿಯೊಬ್ಬ ಮಗಳಿಗೂ ಅರ್ಪಿಸುತ್ತೇನೆ.

ಸ್ನೇಹಿತರೇ,

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ತೋರಿಸಿದ ಬರ್ಬರತೆ ದೇಶ ಮತ್ತು ಜಗತ್ತನ್ನು ಬೆಚ್ಚಿಬೀಳಿಸಿತ್ತು. ಮುಗ್ಧ ನಾಗರಿಕರು ರಜಾದಿನಗಳನ್ನು ಆಚರಿಸುತ್ತಾ ಅವರ ಕುಟುಂಬಗಳ ಮುಂದಿದ್ದರು. ಆದರೆ, ಮಕ್ಕಳ ಮುಂದೆ ಕ್ರೂರವಾಗಿ ಕೊಲ್ಲುವುದರೊಂದಿಗೆ ಧರ್ಮದ ಬಗ್ಗೆ ಕೇಳುವುದು ಭಯೋತ್ಪಾದನೆಯ ಅತ್ಯಂತ ಭೀಕರ ಮುಖವಾಗಿತ್ತು. ಅದು ಕ್ರೌರ್ಯ. ಇದು ದೇಶದ ಸಾಮರಸ್ಯವನ್ನು ಮುರಿಯುವ ಪ್ರಯತ್ನವೂ ಆಗಿತ್ತು.

ನನಗೆ ವೈಯಕ್ತಿಕವಾಗಿ, ಈ ನೋವು ಅಪಾರವಾಗಿತ್ತು. ಈ ಭಯೋತ್ಪಾದಕ ದಾಳಿಯ ನಂತರ, ಇಡೀ ರಾಷ್ಟ್ರ, ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಸಮಾಜ, ಪ್ರತಿಯೊಂದು ವರ್ಗ, ಪ್ರತಿಯೊಂದು ರಾಜಕೀಯ ಪಕ್ಷ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮಕ್ಕಾಗಿ ಒಂದೇ ಧ್ವನಿಯಲ್ಲಿ ನಿಂತವು. ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ.

ಇಂದು ಪ್ರತಿಯೊಬ್ಬ ಭಯೋತ್ಪಾದಕನಿಗೂ, ಪ್ರತಿಯೊಂದು ಭಯೋತ್ಪಾದಕ ಸಂಘಟನೆಗೂ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹಣೆಯಿಂದ ಸಿಂಧೂರವನ್ನು ತೆಗೆದುಹಾಕುವುದರಿಂದ ಉಂಟಾಗುವ ಪರಿಣಾಮವೇನೆಂದು ತಿಳಿದಿದೆ.

ಸ್ನೇಹಿತರೇ,

ಆಪರೇಷನ್ ಸಿಂಧೂರ... ಇದು ಕೇವಲ ಹೆಸರಲ್ಲ, ಇದು ದೇಶದ ಕೋಟ್ಯಂತರ ಜನರ ಭಾವನೆಗಳ ಪ್ರತಿಬಿಂಬವಾಗಿದೆ.

'ಸಿಂಧೂರ' ಕಾರ್ಯಾಚರಣೆ... ನ್ಯಾಯದ ಅವಿಚ್ಛಿನ್ನ ಪ್ರತಿಜ್ಞೆಯಾಗಿದೆ. ಮೇ 6ರ ತಡರಾತ್ರಿ ಮತ್ತು ಮೇ 7ರ ಬೆಳಿಗ್ಗೆ ಈ ಪ್ರತಿಜ್ಞೆಯು ಫಲಿತಾಂಶವಾಗಿ ಬದಲಾಗುವುದನ್ನು ಇಡೀ ಜಗತ್ತು ನೋಡಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಅಡಗುತಾಣಗಳು ಮತ್ತು ಅವರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಪಡೆಗಳು ನಿಖರವಾದ ದಾಳಿ ನಡೆಸಿವೆ.

ಭಾರತ ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದೆಂದು ಭಯೋತ್ಪಾದಕರು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ, ದೇಶವು ಒಗ್ಗಟ್ಟಾದಾಗ ದೇಶ ಮೊದಲು ಎಂಬ ಮನೋಭಾವದಿಂದ ತುಂಬಿದಾಗ ರಾಷ್ಟ್ರವು ಸರ್ವೋಚ್ಚವಾಗಿರುತ್ತದೆ, ನಂತರ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ, ಫಲಿತಾಂಶಗಳನ್ನು ಸಾಧಿಸಲಾಗುತ್ತದೆ.

ಭಾರತದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದಾಗ, ಭಯೋತ್ಪಾದಕ ಸಂಘಟನೆಗಳ ಕಟ್ಟಡಗಳು ನಾಶವಾದವು. ಅಷ್ಟೇ ಅಲ್ಲದೆ, ಅವುಗಳ ನೈತಿಕ ಸ್ಥೈರ್ಯವೂ ಕಂಪನವಾಯಿತು.

ಬಹಾವಲ್ಪುರ್ ಮತ್ತು ಮುರಿಡ್ಕೆಯಂತಹ ಭಯೋತ್ಪಾದಕ ಅಡಗುತಾಣಗಳು ಒಂದು ರೀತಿಯಲ್ಲಿ ಜಾಗತಿಕ ಭಯೋತ್ಪಾದನೆಯ ವಿಶ್ವವಿದ್ಯಾಲಯಗಳಾಗಿವೆ. ಜಗತ್ತಿನ ಎಲ್ಲೆಡೆ ನಡೆದ ಯಾವುದೇ ಪ್ರಮುಖ ಭಯೋತ್ಪಾದಕ ದಾಳಿ... ಅದು ಸೆಪ್ಟೆಂಬರ್ 11 ಆಗಿರಲಿ ಅಥವಾ ಲಂಡನ್ ಟ್ಯೂಬ್ ಬಾಂಬ್ ದಾಳಿಯಾಗಿರಲಿ ಅಥವಾ ದಶಕಗಳಲ್ಲಿ ಭಾರತದಲ್ಲಿ ನಡೆದಿರುವ ಪ್ರಮುಖ ಭಯೋತ್ಪಾದಕ ದಾಳಿಗಳಾಗಿರಲಿ ಅಥವಾ ಎಲ್ಲೋ, ಮತ್ತೊಂದರಲ್ಲೋ , ಈ ಭಯೋತ್ಪಾದಕ ಅಡಗುತಾಣಗಳೊಂದಿಗೆ ಸಂಬಂಧ ಹೊಂದಿವೆ. ಭಯೋತ್ಪಾದಕರು ನಮ್ಮ ಸಹೋದರಿಯರ ಸಿಂಧೂರವನ್ನು ನಾಶಪಡಿಸಿದ್ದರು. ಅದಕ್ಕಾಗಿಯೇ ಭಾರತವು ಈ ಭಯೋತ್ಪಾದನೆಯ ಪ್ರಧಾನ ಕಚೇರಿಗಳನ್ನು ನಾಶಪಡಿಸಿತು.

ಭಾರತ ನಡೆಸಿದ ಈ ದಾಳಿಗಳಲ್ಲಿ 100 ಕ್ಕೂ ಹೆಚ್ಚು ಭೀಕರ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಕಳೆದ ಎರಡೂವರೆ ಮೂರು ದಶಕಗಳಿಂದ ಪಾಕಿಸ್ತಾನದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದ ಮತ್ತು ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದ ಅನೇಕ ಭಯೋತ್ಪಾದಕ ನಾಯಕರನ್ನು ಭಾರತ ಒಂದೇ ಏಟಿನಲ್ಲಿ ನಿರ್ಮೂಲನೆ ಮಾಡಿತು.

ಸ್ನೇಹಿತರೇ,

ಭಾರತದ ಈ ಕ್ರಮದಿಂದ ಪಾಕಿಸ್ತಾನ ತೀವ್ರ ನಿರಾಶೆಗೊಂಡಿದೆ.

ಅವರು ಹತಾಶೆಯಿಂದ ಸುತ್ತುವರೆದಿದ್ದಾರೆ ಮತ್ತು ಕೋಪಗೊಂಡಿದ್ದಾರೆ ಮತ್ತು ಈ ಹತಾಶೆಯಲ್ಲಿ ಅವರು ಮತ್ತೊಂದು ಧೈರ್ಯಶಾಲಿ ಕೃತ್ಯವನ್ನು ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತದ ಕ್ರಮವನ್ನು ಬೆಂಬಲಿಸುವ ಬದಲು, ಪಾಕಿಸ್ತಾನ ಭಾರತದ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸಿತು.

ಪಾಕಿಸ್ತಾನ ನಮ್ಮ ಶಾಲೆಗಳು ಮತ್ತು ಕಾಲೇಜುಗಳನ್ನು ಗುರಿಯಾಗಿಸಿಕೊಂಡಿತು. ಗುರುದ್ವಾರಗಳು, ದೇವಾಲಯಗಳು, ಸಾಮಾನ್ಯ ನಾಗರಿಕರ ಮನೆಗಳು. ಪಾಕಿಸ್ತಾನ ನಮ್ಮ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿತು. ಆದರೆ ಇದರಲ್ಲಿ ಪಾಕಿಸ್ತಾನದ ಮನಸ್ಥಿತಿ ಬಹಿರಂಗವಾಯಿತು. ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಭಾರತದ ಮುಂದೆ ಹೇಗೆ ಒಣಹುಲ್ಲಿನಂತೆ ಬಿದ್ದವು ಎಂಬುದನ್ನು ಜಗತ್ತು ನೋಡಿತು.

ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ಆಕಾಶದಲ್ಲಿಯೇ ನಾಶಪಡಿಸಿತು. ಪಾಕಿಸ್ತಾನ ಗಡಿಯಲ್ಲಿ ದಾಳಿ ಮಾಡಲು ಸಿದ್ಧತೆ ನಡೆಸುತ್ತಿತ್ತು. ಆದರೆ ಭಾರತ ಪಾಕಿಸ್ತಾನದ ಎದೆಗೆ ಹೊಡೆದಿದೆ. ಭಾರತೀಯ ಡ್ರೋನ್‌ಗಳು... ಭಾರತೀಯ ಕ್ಷಿಪಣಿಗಳು ನಿಖರವಾಗಿ ದಾಳಿ ಮಾಡಿದವು. ಪಾಕಿಸ್ತಾನಿ ವಾಯುಪಡೆಯ ಆ ವಾಯುನೆಲೆಗಳು ಹಾನಿಗೊಳಗಾದವು.

ಅದರ ಬಗ್ಗೆ ಪಾಕಿಸ್ತಾನ ತುಂಬಾ ಹೆಮ್ಮೆಪಡುತ್ತಿತ್ತು. ಮೊದಲ ಮೂರು ದಿನಗಳಲ್ಲಿ ಭಾರತ ಪಾಕಿಸ್ತಾನವನ್ನು ಊಹಿಸಿಯೂ ಇಲ್ಲದಷ್ಟು ನಾಶಮಾಡಿತು.

ಭಾರತದ ಆಕ್ರಮಣಕಾರಿ ಕ್ರಮದ ನಂತರ ಪಾಕಿಸ್ತಾನ ತಪ್ಪಿಸಿಕೊಳ್ಳಲು ದಾರಿಗಳನ್ನು ಹುಡುಕಲು ಪ್ರಾರಂಭಿಸಿತು. ಪಾಕಿಸ್ತಾನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಜಗತ್ತನ್ನು ಬೇಡಿಕೊಳ್ಳುತ್ತಿತ್ತು ಮತ್ತು ಈ ಬಲವಂತದ ಮೇರೆಗೆ, ತೀವ್ರವಾಗಿ ಥಳಿಸಿದ ನಂತರ, ಮೇ 10 ರ ಮಧ್ಯಾಹ್ನ, ಪಾಕಿಸ್ತಾನಿ ಸೇನೆಯು ನಮ್ಮ ಡಿಜಿಎಂಒಗಳು ಅವರನ್ನು ಸಂಪರ್ಕಿಸಿತು.

ಆ ಹೊತ್ತಿಗೆ ನಾವು ಭಯೋತ್ಪಾದನೆಯ ಮೂಲಸೌಕರ್ಯವನ್ನು ದೊಡ್ಡ ಪ್ರಮಾಣದಲ್ಲಿ ನಾಶಪಡಿಸಿದ್ದೆವು. ಭಯೋತ್ಪಾದಕರು ಕೊಲ್ಲಲ್ಪಟ್ಟರು. ನಾವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳನ್ನು ನಾಶಮಾಡಿದ್ದೆವು. ಹಾಗಾಗಿ, ಪಾಕಿಸ್ತಾನದಿಂದ ಮನವಿ ಬಂದಾಗ, ಇದನ್ನು ಪಾಕಿಸ್ತಾನದಿಂದ ಹೇಳಿದಾಗ, ಅವರ ಕಡೆಯಿಂದ ಇನ್ನು ಮುಂದೆ ಯಾವುದೇ ಭಯೋತ್ಪಾದಕ ಚಟುವಟಿಕೆ ಮತ್ತು ಮಿಲಿಟರಿ ಸಾಹಸ ಇರುವುದಿಲ್ಲ ಎಂದು ಹೇಳಿದ್ದರಿಂದ ಭಾರತವೂ ಅದನ್ನು ಪರಿಗಣಿಸಿತು.

ಮತ್ತು ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು ಮತ್ತು ಸೇನಾ ನೆಲೆಗಳ ವಿರುದ್ಧದ ನಮ್ಮ ಪ್ರತೀಕಾರದ ಕ್ರಮವನ್ನು ನಾವು ಮುಂದೂಡಿದ್ದೇವೆ.

ಮುಂದಿನ ದಿನಗಳಲ್ಲಿ ಈ ಮಾನದಂಡದ ಆಧಾರದ ಮೇಲೆ ನಾವು ಪಾಕಿಸ್ತಾನದ ಪ್ರತಿಯೊಂದು ಹೆಜ್ಜೆಯನ್ನೂ ಅಳೆಯುತ್ತೇವೆ.

ದೇಶವಾಸಿಗಳೇ,

ಭಾರತದ ಮೂರೂ ಸೇನೆಗಳು, ನಮ್ಮ ವಾಯುಪಡೆ, ನಮ್ಮ ಸೇನೆ ಮತ್ತು ನಮ್ಮ ನೌಕಾಪಡೆ, ನಮ್ಮ ಗಡಿ ಭದ್ರತಾ ಪಡೆ-ಬಿಎಸ್‌ ಎಫ್‌, ಭಾರತದ ಅರೆ ಸೇನಾ ಪಡೆ ಸತತವಾಗಿ ನಿಗಾ ವಹಿಸಿವೆ. ಸರ್ಜಿಕಲ್‌ ಸ್ಟ್ರೈಕ್‌ ಮತ್ತು ವಾಯು ದಾಳಿಯ ಬಳಿಕ ಈಗ ಆಪರೇಷನ್‌ ಸಿಂಧೂರ್ ಭಯೋತ್ಪಾದನೆಯ ವಿರುದ್ಧ ಭಾರತದ ನೀತಿಯಾಗಿದೆ. ಆಪರೇಷನ್ ಸಿಂಧೂರವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೊಸ ಆರಂಭವನ್ನು ಮಾಡಿದೆ. ಹೊಸ ಮಾನದಂಡವನ್ನು ಹೊಸ ಅಧ್ಯಾಯವನ್ನು ಸ್ಥಾಪಿಸಿದೆ. ಮೊದಲನೆಯದು , ಭಾರತದ ಮೇಲೆ ಭಯೋತ್ಪಾದಕ ದಾಳಿಯಾದರೆ ದಿಟ್ಟ ಉತ್ತರವನ್ನು ನೀಡಲಾಗುವುದು. ನಾವು ನಮ್ಮ ರೀತಿಯಲ್ಲಿ ನಮ್ಮ ಷರತ್ತುಗಳ ಮೇಲೆ ಉತ್ತರಗಳನ್ನು ನೀಡುತ್ತೇವೆ. ಭಯೋತ್ಪಾದನೆಯ ಮೂಲವನ್ನು ಬುಡ ಸಮೇತವಾಗಿ ನಿಗ್ರಹಗೊಳಿಸಲು ಕಠಿಣ ಕಾರ್ಯಾಚರಣೆಯನ್ನು ಕೈಗೊಳ್ಳುತ್ತೇವೆ. ಎರಡನೇಯದು ಯಾವುದೇ ಪರಮಾಣು ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಪರಮಾಣು ಬೆದರಿಕೆಯ ಅಡಿಯಲ್ಲಿ ಬೆಳೆಯುತ್ತಿರುವ ಭಯೋತ್ಪಾದಕ ತಾಣಗಳ ಮೇಲೆ ಭಾರತವು, ನಿಖರವಾದ ಮತ್ತು ನಿರ್ಣಾಯಕವಾದ ದಾಳಿಗಳನ್ನು ಕೈಗೊಳ್ಳಲಿದೆ. ಮೂರನೇಯದು , ಭಯೋತ್ಪಾದನೆ ಹಾಗೂ ಭಯೋತ್ಪಾದನೆಗೆ ಸಹಕರಿಸುವ ಎಲ್ಲ ಶಕ್ತಿಗಳನ್ನು ಸಹ ಒಂದೇ ದೃಷ್ಟಿಯಲ್ಲಿ ನೋಡಲಾಗುವುದು. ಅವರು ಸಹ ದೇಶದ ಆತಂಕವಾದಿಗಳಾಗಿದ್ದಾರೆ .

ಇಡೀ ವಿಶ್ವ, ಪಾಕಿಸ್ತಾನದ ಹೇಯ ಕೃತ್ಯವನ್ನು ಮತ್ತೊಮ್ಮೆ ನೋಡಿದೆ. ಆಪರೇಷನ್‌ ಸಿಂಧೂರ್‌ ದಾಳಿಯಲ್ಲಿ ಸಾವಿಗೀಡಾದ ಭಯೋತ್ಪಾದಕರಿಗೆ ವಿದಾಯ ನೀಡುವಲ್ಲಿ ಪಾಕಿಸ್ತಾನ ಸೇನೆಯ ಉನ್ನತ ಅಧಿಕಾರಿಗಳು ನಿರತರಾಗಿದ್ದರು. ಪಾಕ್‌ ನ ಪ್ರಾಯೋಜಿತ ಭಯೋತ್ಪಾದನೆಗೆ ಇದೊಂದು ಬಹುದೊಡ್ಡ ಸಾಕ್ಷಿಯಾಗಿದೆ.

ನಾವು ಭಾರತ ಮತ್ತು ನಮ್ಮ ನಾಗರಿಕರನ್ನು ಯಾವುದೇ ರೀತಿಯ ಅಪಾಯದಿಂದ ರಕ್ಷಿಸುವುದಕ್ಕೋಸ್ಕರ ನಿರಂತರವಾಗಿ ನಿರ್ಣಾಯಕ ಹೆಜ್ಜೆಗಳನ್ನು ಇಡುತ್ತೇವೆ.

ಸ್ನೇಹಿತರೆ,

ಯುದ್ಧದ ಮೈದಾನದಲ್ಲಿ ನಾವು ಪ್ರತಿ ಬಾರಿ ಪಾಕಿಸ್ತಾನವನ್ನು ದೂಳೀಪಟ ಮಾಡಿದ್ದೇವೆ ಮತ್ತು ಈ ಬಾರಿ ಆಪರೇಷನ್‌ ಸಿಂಧೂರ್‌, ಹೊಸ ಆಯಾಮಕ್ಕೆ ಸೇರ್ಪಡೆಯಾಗಿದೆ.

ನಾವು ಮರುಭೂಮಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ನಮ್ಮ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ಜತೆಗೇ, ಹೊಸ ತಲೆಮಾರಿನ ಯುದ್ಧಕ್ರಮದಲ್ಲೂ ನಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದೇವೆ.

ಈ ಆಪರೇಷನ್‌ ಮೂಲಕ, ನಮ್ಮ ಮೇಡ್‌ ಇನ್‌ ಇಂಡಿಯಾ ಶಸ್ತ್ರಾಸ್ತ್ರಗಳ ದಕ್ಷತೆಯೂ ಸಾಬೀತಾಗಿದೆ.

21ನೇ ಶತಮಾನದ ಯುದ್ಧದಲ್ಲಿ ಮೇಡ್‌ ಇನ್‌ ಇಂಡಿಯಾ ರಕ್ಷಣಾ ಸಲಕರಣೆಗಳ ಸಮಯ ಈಗ ಬಂದಿದೆ ಎನ್ನುವುದನ್ನು ಇಂದು ವಿಶ್ವ ನೋಡುತ್ತಿದೆ.

ಸ್ನೇಹಿತರೇ,

ಎಲ್ಲ ರೀತಿಯ ಭಯೋತ್ಪಾದನೆಯ ವಿರುದ್ಧ ನಾವೆಲ್ಲರೂ ಒಗ್ಗೂಡಿರುವುದು ನಮ್ಮ ಅತ್ಯಂತ ದೊಡ್ಡ ಶಕ್ತಿಯಾಗಿದೆ.

ನಿಶ್ಚಿತವಾಗಿ ಈ ಸಮಯ ಯುದ್ಧದ ಕಾಲವಲ್ಲ,

ಆದರೆ ಈ ಕಾಲ ಭಯೋತ್ಪಾದನೆಯ ಸಮಯವೂ ಅಲ್ಲ.

ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವುದು ಉತ್ತಮ ಜಗತ್ತನ್ನು ಸುನಿಶ್ಚಿತಗೊಳಿಸುತ್ತದೆ.

ದೇಶವಾಸಿಗಳೇ,

ಪಾಕಿಸ್ತಾನಿ ಯೋಧರು, ಪಾಕಿಸ್ತಾನದ ಸರ್ಕಾರ ಯಾವ ರೀತಿಯಲ್ಲಿ ಭಯೋತ್ಪಾದನೆಗೆ ಪುಷ್ಟಿ ನೀಡುತ್ತಿವೆ ಎಂದರೆ, ಒಂದು ದಿನ ಅದು ಪಾಕಿಸ್ತಾನವನ್ನೇ ಅಂತ್ಯಗೊಳಿಸುತ್ತದೆ.

ಪಾಕಿಸ್ತಾನಕ್ಕೆ ಇದರಿಂದ ರಕ್ಷಿಸಿಕೊಳ್ಳಬೇಕು ಎಂದಾದರೆ ಅದು ತನ್ನ ಭಯೋತ್ಪಾದನೆಗೆ ಮೂಲಸೌಕರ್ಯ ಒದಗಿಸುವ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಬೇಕು. ಇದನ್ನು ಬಿಟ್ಟು ಶಾಂತಿಯ ಬೇರೆ ಯಾವುದೇ ಮಾರ್ಗವಿಲ್ಲ.

ಭಯೋತ್ಪಾದನೆ ಮತ್ತು ಮಾತುಕತೆ ಜತೆಯಾಗಿ ನಡೆಯಲು ಸಾಧ್ಯವಿಲ್ಲ ಎನ್ನುವುದು ಭಾರತದ ಅತ್ಯಂತ ಸ್ಪಷ್ಟ ನಿಲುವಾಗಿದೆ.

ಭಯೋತ್ಪಾದನೆ ಮತ್ತು ವ್ಯಾಪಾರ ಜತೆಯಾಗಿ ನಡೆಯಲು ಸಾಧ್ಯವಿಲ್ಲ ಮತ್ತು,

ನೀರು ಮತ್ತು ರಕ್ತ ಒಟ್ಟಿಗೇ ಹರಿಯಲು ಸಾಧ್ಯವಿಲ್ಲ.

ನಮ್ಮ ಪ್ರಕಟಿತ ನೀತಿಯೆಂದರೆ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುತ್ತದೆ ಎಂದಾದರೆ, ಅದು ಭಯೋತ್ಪಾದನೆಯ ಕುರಿತಾಗಿಯೇ ಆಗಿರುತ್ತದೆ. ಪಾಕಿಸ್ತಾನದೊಂದಿಗೆ ಮಾತುಕತೆಯಾಗುವುದಾದರೆ ಪಾಕ್‌ ಆಕ್ರಮಿತ ಕಾಶ್ಮೀರ-ಪಿಓಕೆಯ ಕುರಿತಾಗಿಯೇ ಇರುತ್ತದೆ ಎನ್ನುವುದನ್ನು ನಾನು ಇಂದು ಜಾಗತಿಕ ಸಮುದಾಯಕ್ಕೂ ತಿಳಿಸುತ್ತೇನೆ.

ಪ್ರೀತಿಯ ದೇಶವಾಸಿಗಳೇ,

ಇಂದು ಬುದ್ಧ ಪೂರ್ಣಿಮೆಯಾಗಿದೆ. ಭಗವಾನ್‌ ಬುದ್ಧ ನಮಗೆ ಶಾಂತಿಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಶಾಂತಿಯ ಮಾರ್ಗ ಸಹ ಶಕ್ತಿಯಿಂದ ಕೂಡಿದ್ದು ಸಾಗುತ್ತದೆ. ಮಾನವೀಯತೆ, ಶಾಂತಿ ಮತ್ತು ಸಮೃದ್ಧಿಯೆಡೆಗೆ ಮುನ್ನಡೆಯುತ್ತದೆ.

ಪ್ರತಿ ಭಾರತೀಯನು ಶಾಂತಿಯಿಂದ ಬದುಕಬೇಕು, ವಿಕಸಿತ ಭಾರತದ ಕನಸುಗಳನ್ನು ಪೂರ್ಣಗೊಳಿಸಬೇಕು.

ಇದರಿಂದಾಗಿ, ಭಾರತ ಶಕ್ತಿಶಾಲಿಯಾಗುವುದು ಅಗತ್ಯವಾಗಿದೆ.

ಮತ್ತು ಅವಶ್ಯಕತೆಯಿರುವಾಗ ಈ ಶಕ್ತಿಯ ಬಳಕೆ ಮಾಡುವುದು ಕೂಡ ಅಗತ್ಯ.

ಕೆಲವು ದಿನಗಳಿಂದ ಭಾರತವು ಇದನ್ನೇ ಮಾಡಿದೆ.

ನಾನು ಮತ್ತೊಮ್ಮೆ ಭಾರತದ ಸೇನೆ ಮತ್ತು ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸುತ್ತೇನೆ. ನಮ್ಮ ದೇಶವಾಸಿಗಳ ಧೈರ್ಯ ಮತ್ತು ಏಕತೆಗೆ ವಂದಿಸುತ್ತೇನೆ.

ಧನ್ಯವಾದ,

ಭಾರತ ಮಾತಾ ಕೀ ಜೈ!!!

ಭಾರತ ಮಾತಾ ಕೀ ಜೈ!!!

ಭಾರತ ಮಾತಾ ಕೀ ಜೈ!!!