ತೆಲಂಗಾಣ ರಾಜ್ಯಪಾಲ ಶ್ರೀ ಶಿವಪ್ರತಾಪ್ ಶುಕ್ಲಾ ಜೀ, ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಜಿ. ಕಿಶನ್ ರೆಡ್ಡಿ, ಬಂಡಿ ಸಂಜಯ್ ಕುಮಾರ್, ನನ್ನ ಸಹೋದ್ಯೋಗಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಜೀ, ತೆಲಂಗಾಣ ಸರ್ಕಾರದ ಸಚಿವರು, ಇತರ ಸಾರ್ವಜನಿಕ ಪ್ರತಿನಿಧಿಗಳು, ಮಹಿಳೆಯರೇ ಮತ್ತು ಮಹನೀಯರೇ!
ಸೈಬರಾಬಾದ್ನ ಶಕ್ತಿ ರಾಷ್ಟ್ರೀಯ ಮತ್ತು ಜಾಗತಿಕವಾಗಿದೆ. ಇದು ತೆಲಂಗಾಣದ ಮತ್ತು ದೇಶದ ತ್ವರಿತ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿದೆ. ಆದ್ದರಿಂದ, ಇಂದು ಸೈಬರಾಬಾದ್ನಿಂದ, ತೆಲಂಗಾಣವನ್ನು ರಾಷ್ಟ್ರದ ದೊಡ್ಡ ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ ಮಾಡಲು ಅನೇಕ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಇಂದು ಅಡಿಪಾಯ ಮತ್ತು ಉದ್ಘಾಟನೆಗಳು ನಡೆದ ಯೋಜನೆಗಳು ಇಲ್ಲಿ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ತೆಲಂಗಾಣದ ಸಂಪರ್ಕವು ಸಹ ಬಲಗೊಳ್ಳುತ್ತದೆ. ಈ ಯೋಜನೆಗಳಿಗಾಗಿ ತೆಲಂಗಾಣದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಇಂದು ಭಾರತವು ಸುಧಾರಣಾ ಎಕ್ಸ್ಪ್ರೆಸ್ನಲ್ಲಿ ಓಡುತ್ತಿದೆ. ಅದೇ ಸಮಯದಲ್ಲಿ, ಇಂದಿನ ಭಾರತವು ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ. ಜಹೀರಾಬಾದ್ ಕೈಗಾರಿಕಾ ಪ್ರದೇಶದ ನಿರ್ಮಾಣವು ಈ ಗುರಿಯ ಭಾಗವಾಗಿದೆ. ಈ ಕೈಗಾರಿಕಾ ಪ್ರದೇಶವು ಕೈಗಾರಿಕಾ ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸುವ ಭಾರತ ಸರ್ಕಾರದ ರಾಷ್ಟ್ರೀಯ ಅಭಿಯಾನದ ಭಾಗವಾಗಿದೆ. ಇದು ಒಂದು ರೀತಿಯ ಕೈಗಾರಿಕಾ ಸ್ಮಾರ್ಟ್ ಸಿಟಿಯಾಗಲಿದೆ. ಇಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ, ಅತ್ಯುತ್ತಮ ವಿದ್ಯುತ್ ಸರಬರಾಜು, ಸುಧಾರಿತ ಐಸಿಟಿ ನೆಟ್ವರ್ಕ್ ಇರುತ್ತದೆ - ಅಂದರೆ ಉದ್ಯಮಕ್ಕೆ ಅಗತ್ಯವಿರುವ ಪ್ರತಿಯೊಂದು ಸೌಲಭ್ಯವು ಪ್ರಪಂಚದಾದ್ಯಂತದ ಹೂಡಿಕೆದಾರರಿಗೆ ಇಲ್ಲಿ ಲಭ್ಯವಿರುತ್ತದೆ. ಈ ಸೌಲಭ್ಯಗಳನ್ನು ನಿರ್ಮಿಸಲು ಭಾರತ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದು ಮತ್ತು ತೆಲಂಗಾಣ ಹಾಗು ಹೈದರಾಬಾದ್ನ ಸಾವಿರಾರು ಯುವಜನರಿಗೆ ಉದ್ಯೋಗ ಸಿಗುತ್ತದೆ. ಇಲ್ಲಿ ಸ್ಥಾಪನೆಯಾಗುವ ವಾಹನಗಳು, ಯಂತ್ರೋಪಕರಣಗಳು, ಆಹಾರ ಸಂಸ್ಕರಣಾ ಕೈಗಾರಿಕೆಗಳು ತೆಲಂಗಾಣದ ಕಾರ್ಮಿಕರು ಮತ್ತು ರೈತರನ್ನು ಸಹ ಸಬಲೀಕರಣಗೊಳಿಸುತ್ತವೆ.

ಸ್ನೇಹಿತರೇ,
ಹಿಂದೆ, ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದ್ದಾಗ, ನಮ್ಮ ಜವಳಿ ಉದ್ಯಮವು ಅದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗ ನಾವು ಆ ಪರಂಪರೆಯನ್ನು ಮತ್ತೊಮ್ಮೆ ಬಲಪಡಿಸುತ್ತಿದ್ದೇವೆ. ವಾರಂಗಲ್ನಲ್ಲಿರುವ ಪಿ.ಎಂ. ಮಿತ್ರ ಪಾರ್ಕ್ ದೇಶದಲ್ಲಿ ಜವಳಿ ಕ್ರಾಂತಿಯನ್ನು ವೇಗಗೊಳಿಸುತ್ತದೆ. ಪಿ.ಎಂ. ಮಿತ್ರ (PM MITRA) ಪಾರ್ಕ್ನಲ್ಲಿ ಸ್ಥಾಪಿಸಲಾದ ಘಟಕಗಳು ಕೇಂದ್ರ ಸರ್ಕಾರದ ಯೋಜನೆಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತವೆ. ಅವುಗಳಿಗೆ ಕೇಂದ್ರ ಸರ್ಕಾರದ ಪಿ.ಎಲ್.ಐ.(PLI) ಯೋಜನೆಯಿಂದಲೂ ಬೆಂಬಲ ಸಿಗುತ್ತದೆ. ಈ ಜವಳಿ ಪಾರ್ಕ್ ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ.
ಸ್ನೇಹಿತರೇ,
ಕಳೆದ 12 ವರ್ಷಗಳಲ್ಲಿ, ಭಾರತ ಸರ್ಕಾರದ ಒಂದು ದೊಡ್ಡ ಆದ್ಯತೆಯೆಂದರೆ ಆಧುನಿಕ ಸಂಪರ್ಕ. ಅದು ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು -ಹೀಗೆ ಪ್ರತಿಯೊಂದು ರೀತಿಯ ಸಂಪರ್ಕದಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ಸುಮಾರು 1.75 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ. ತೆಲಂಗಾಣ ಕೂಡ ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆದಿದೆ. ಕಳೆದ 12 ವರ್ಷಗಳಲ್ಲಿ, ತೆಲಂಗಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವು ದ್ವಿಗುಣಗೊಂಡಿದೆ. ತೆಲಂಗಾಣ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣವು ಹೆಚ್ಚಿನ ಅನುಕೂಲತೆಯನ್ನು ತರುತ್ತದೆ. ಪ್ರಯಾಣದ ಸಮಯ ಕಡಿಮೆಯಾಗುತ್ತದೆ ಮತ್ತು ದರಗಳಲ್ಲಿಯೂ ಸಹ ಉಳಿತಾಯವಾಗುತ್ತದೆ. .
ಸ್ನೇಹಿತರೇ,
2014 ಕ್ಕಿಂತ ಮೊದಲು, ಅವಿಭಜಿತ ಆಂಧ್ರಪ್ರದೇಶದ ರೈಲ್ವೆ ಬಜೆಟ್ ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಕಡಿಮೆಯಿತ್ತು. ರೇವಂತ್ ಜೀ, ನೀವು ಕೇಳುತ್ತಿದ್ದೀರಾ? ಸಂಯುಕ್ತ ಆಂಧ್ರದ ಸಮಯದಲ್ಲಿ, ರೈಲ್ವೆ ಬಜೆಟ್ ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಕಡಿಮೆಯಿತ್ತು. ಇಂದು ನಾನು ಸಂಯುಕ್ತ ಆಂಧ್ರದ ಬಗ್ಗೆ ಮಾತನಾಡುತ್ತಿಲ್ಲ, ಇಂದು ತೆಲಂಗಾಣದ ರೈಲ್ವೆ ಬಜೆಟ್ ಮಾತ್ರವೇ ಸುಮಾರು ಐದೂವರೆ ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಪ್ರಸ್ತುತ, ಸುಮಾರು 50 ಸಾವಿರ ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳು ಇಲ್ಲಿ ಕಾರ್ಯಗತಗೊಳ್ಳುತ್ತಿವೆ. ಐದು ವಂದೇ ಭಾರತ್ ಮತ್ತು ಆರು ಅಮೃತ ಭಾರತ್ ರೈಲುಗಳು ತೆಲಂಗಾಣದಲ್ಲಿ ಓಡುತ್ತಿವೆ.

ಸ್ನೇಹಿತರೇ,
ಸ್ವಲ್ಪ ಸಮಯದ ಹಿಂದೆ, ಕಾಜಿಪೇಟೆ-ವಿಜಯವಾಡ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯ ಕೆಲವು ವಿಭಾಗಗಳನ್ನು ಉದ್ಘಾಟಿಸಲಾಯಿತು. ಇದಲ್ಲದೆ, ಬೈಪಾಸ್ ಮಾರ್ಗದ ಅಡಿಯಲ್ಲಿರುವ ಕಾಜಿಪೇಟೆ ರೈಲು ಮಾರ್ಗವನ್ನು ಸಹ ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಈ ಸೌಲಭ್ಯಗಳು ಪ್ರಯಾಣವನ್ನು ಸುಲಭಗೊಳಿಸುತ್ತವೆ ಮತ್ತು ಸಾರಿಗೆಯನ್ನು ವೇಗಗೊಳಿಸುತ್ತವೆ.
ಸ್ನೇಹಿತರೇ,
21 ನೇ ಶತಮಾನದ ಜಗತ್ತಿನಲ್ಲಿ, ಇಂಧನವಿಲ್ಲದಿದ್ದರೆ, ಎಲ್ಲವೂ ಸ್ಥಗಿತಗೊಳ್ಳುತ್ತದೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ಇಂಧನ ಭದ್ರತೆಯ ಮಹತ್ವವನ್ನು ಅನುಭವಿಸುತ್ತಾನೆ. ಆದ್ದರಿಂದ, ನಮ್ಮ ಕೇಂದ್ರ ಸರ್ಕಾರವು ಭಾರತದ ಇಂಧನ ಭದ್ರತೆಯಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ. ಮಲ್ಕಾಪುರದಲ್ಲಿ ಇಂಡಿಯನ್ ಆಯಿಲ್ನ ಹೊಸ ಟರ್ಮಿನಲ್ ಉದ್ಘಾಟನೆಯು ಈ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಟರ್ಮಿನಲ್ ತೆಲಂಗಾಣದ ಬೆಳೆಯುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ.
ಸ್ನೇಹಿತರೇ,
ಇತ್ತೀಚಿನ ವರ್ಷಗಳಲ್ಲಿ, ಭಾರತವು ಸೌರಶಕ್ತಿಯ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪಿದೆ. ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವಲ್ಲಿ ಅಭೂತಪೂರ್ವ ಕೆಲಸ ನಡೆದಿದೆ. ಮೊದಲು ನಾವು 100% LPG ವ್ಯಾಪ್ತಿಯ ಮೇಲೆ ಗಮನ ಕೇಂದ್ರೀಕರಿಸಿದ್ದೆವು, ಈಗ ನಾವು ಅಗ್ಗದ ಪೈಪ್ಡ್ ಗ್ಯಾಸ್ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ, ಸಿ.ಎನ್.ಜಿ. ಆಧಾರಿತ ವ್ಯವಸ್ಥೆಗಳನ್ನು ಉತ್ತೇಜಿಸುತ್ತಿದ್ದೇವೆ. ಅಂತಹ ಪ್ರಯತ್ನಗಳಿಂದಾಗಿ, ಭಾರತವು ಈ ಬೃಹತ್ ಜಾಗತಿಕ ಇಂಧನ ಬಿಕ್ಕಟ್ಟನ್ನು ದೃಢವಾಗಿ ಎದುರಿಸುತ್ತಿದೆ. ಆದರೆ ಈ ಸಂದರ್ಭದ ಅವಶ್ಯಕತೆಯೆಂದರೆ ಪೆಟ್ರೋಲ್, ಡೀಸೆಲ್, ಅನಿಲ – ಮತ್ತು ಅಂತಹ ವಸ್ತುಗಳನ್ನು ಹೆಚ್ಚಿನ ಸಂಯಮದಿಂದ ಬಳಸಬೇಕು. ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ಈ ಇಂಧನ ಉತ್ಪನ್ನಗಳನ್ನು - ನಾವು ಅಗತ್ಯವಿರುವಷ್ಟು ಮಾತ್ರ ಬಳಸಲು ಪ್ರಯತ್ನಿಸಬೇಕು. ಇದು ವಿದೇಶಿ ವಿನಿಮಯವನ್ನು ಉಳಿಸುತ್ತದೆ ಮತ್ತು ಯುದ್ಧದ ಬಿಕ್ಕಟ್ಟಿನ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಸ್ನೇಹಿತರೇ,
ಇಂದು ತೆಲಂಗಾಣದ ಯುವಜನರು ಹೊಸ ಕನಸುಗಳನ್ನು ಕಾಣುತ್ತಿದ್ದಾರೆ. ಇಲ್ಲಿನ ರೈತರು ಹೊಸ ಭರವಸೆಗಳೊಂದಿಗೆ ಮುಂದುವರಿಯಲು ಬಯಸುತ್ತಾರೆ. ಇಲ್ಲಿನ ಕೈಗಾರಿಕೆಗಳು, ಇಲ್ಲಿನ ಎಂಎಸ್ಎಂಇಗಳು, ಇಲ್ಲಿನ ನವೋದ್ಯಮಗಳು - ಎಲ್ಲರೂ ಅಭಿವೃದ್ಧಿ ಹೊಂದಿದ ತೆಲಂಗಾಣವನ್ನು ನಿರ್ಮಿಸುವಲ್ಲಿ ತಮ್ಮ ಪಾತ್ರವನ್ನು ವಹಿಸಲು ಬಯಸುತ್ತಾರೆ. ಏಕೆಂದರೆ ತೆಲಂಗಾಣ ಅಭಿವೃದ್ಧಿ ಹೊಂದಿದಾಗ, ಭಾರತ ಅಭಿವೃದ್ಧಿ ಹೊಂದುತ್ತದೆ. ನಿಮ್ಮ ಕನಸುಗಳನ್ನು ನನಸಾಗಿಸಲು ಕೇಂದ್ರ ಸರ್ಕಾರವು ಇನ್ನೂ ಹೆಚ್ಚಿನ ವೇಗದಲ್ಲಿ ಕೆಲಸ ಮಾಡುವುದನ್ನು ಮುಂದುವರೆಸುತ್ತದೆ ಎಂದು ನಾನು ತೆಲಂಗಾಣದ ಪ್ರತಿಯೊಂದು ಕುಟುಂಬಕ್ಕೂ ಭರವಸೆ ನೀಡುತ್ತೇನೆ. ಈಗ ನಮ್ಮ ರೇವಂತ್ ಜೀ ಅವರು ನಾವು ರಾಜಕೀಯ ಮಾತನಾಡುವುದಿಲ್ಲ ಎಂದು ಹೇಳಿದರು, ಆದ್ದರಿಂದ ನಾನು ಕೂಡ ಮಾತನಾಡುವುದಿಲ್ಲ. ಆದ್ದರಿಂದ, ರಾಜಕೀಯೇತರ ರೀತಿಯಲ್ಲಿ ನಾನು ರೇವಂತ್ ಜೀ ಅವರಿಗೆ ಹೇಳುತ್ತೇನೆ, 10 ವರ್ಷಗಳ ಆಡಳಿತದಲ್ಲಿ, ಭಾರತ ಸರ್ಕಾರ ಗುಜರಾತ್ಗೆ ಏನು ನೀಡಿತೋ ಅದನ್ನು ನಾನು ನಿಮಗೆ ನೀಡಲು ಸಿದ್ಧನಿದ್ದೇನೆ. ಆದರೆ ನನ್ನ ಜ್ಞಾನದಿಂದ ನಾನು ನಿಮಗೆ ಹೇಳುತ್ತೇನೆ, ನಾನು ಹಾಗೆ ಮಾಡಿದ ತಕ್ಷಣ, ನೀವು ಈಗ ಪಡೆಯುತ್ತಿರುವುದು ಅರ್ಧದಷ್ಟು ಕಡಿಮೆಯಾಗುತ್ತದೆ. ನೀವು ಎಲ್ಲಿಗೆ ಹೋಗಬೇಕೆಂದು ಇದ್ದೀರೋ ಅಲ್ಲಿಗೆ ನೀವು ತಲುಪುವುದಿಲ್ಲ. ಆದ್ದರಿಂದ, ನನ್ನೊಂದಿಗೆ ಸಂಪರ್ಕದಲ್ಲಿರುವುದು ಉತ್ತಮ.

ಸ್ನೇಹಿತರೇ,
ಪ್ರಜಾಪ್ರಭುತ್ವದಲ್ಲಿ, ರಾಜ್ಯಗಳಲ್ಲಿ ವಿವಿಧ ರೀತಿಯ ಸರ್ಕಾರಗಳು ಇರುವುದು ಕೆಟ್ಟದ್ದಲ್ಲ ಎಂದು ನಾವು ದೃಢವಾಗಿ ನಂಬುತ್ತೇವೆ. ಆದರೆ ದೇಶದ ಅಭಿವೃದ್ಧಿಗೆ, ರಾಜ್ಯಗಳ ಅಭಿವೃದ್ಧಿಯೂ ಅಷ್ಟೇ ಮುಖ್ಯ. ರಾಜ್ಯಗಳ ಅಭಿವೃದ್ಧಿಯಿಲ್ಲದೆ, ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ, ನಮ್ಮ ಎಲ್ಲಾ ಯೋಜನೆಗಳ ಕೇಂದ್ರಬಿಂದು ರಾಜ್ಯಗಳ ಅಭಿವೃದ್ಧಿ, ತ್ವರಿತ ಅಭಿವೃದ್ಧಿ, ಮತ್ತು ಈ ಮನೋಭಾವದಿಂದ ನಾವೆಲ್ಲರೂ ಒಟ್ಟಾಗಿ ಮುಂದುವರಿಯುತ್ತೇವೆ ಮತ್ತು 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಕನಸು ನಮ್ಮ ಕಣ್ಣ ಮುಂದೆಯೇ ಈಡೇರುವುದನ್ನು ನೋಡುತ್ತೇವೆ. ಇದು ಎಲ್ಲರಿಗೂ ನನ್ನ ಆಶಯ. ತುಂಬಾ ಧನ್ಯವಾದಗಳು!


