ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಮುಖ ಉಪಕ್ರಮಗಳಿಗೆ ಪ್ರಧಾನಿಗಳಿಂದ ಚಾಲನೆ
ʻಆಜಾ಼ದಿ ಕಾ ಅಮೃತ್ ಮಹೋತ್ಸವʼದ ಅಡಿಯಲ್ಲಿ ಪ್ರಾರಂಭಿಸಲಾದ ಹೊಸ ಉಪಕ್ರಮಗಳು ಶೈಕ್ಷಣಿಕ ಕ್ರಾಂತಿಯನ್ನು ತರುತ್ತವೆ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಗೆ ಜಾಗತಿಕ ನಕ್ಷೆಯಲ್ಲಿ ಸ್ಥಾನ ಕಲ್ಪಿಸುತ್ತವೆ: ಪ್ರಧಾನಿ
ನಾವು ಪರಿವರ್ತನೆಯ ಅವಧಿಯ ಮಧ್ಯದಲ್ಲಿದ್ದೇವೆ; ಅದೃಷ್ಟವಶಾತ್, ನಾವು ಆಧುನಿಕ ಮತ್ತು ಭವಿಷ್ಯದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೊಂದಿದ್ದೇವೆ: ಪ್ರಧಾನಿ
ಸಾರ್ವಜನಿಕ ಪಾಲ್ಗೊಳ್ಳುವಿಕೆಯು ಮತ್ತೆ ಭಾರತದ ರಾಷ್ಟ್ರೀಯ ಗುಣವಾಗುತ್ತಿದೆ: ಪ್ರಧಾನಿ
ಪ್ರಧಾನಮಂತ್ರಿಯವರ ಮನವಿಯ ಮೇರೆಗೆ ಪ್ರತಿಯೊಬ್ಬ ಒಲಿಂಪಿಯನ್ ಮತ್ತು ಪ್ಯಾರಾಲಿಂಪಿಯನ್ 75 ಶಾಲೆಗಳಿಗೆ ಭೇಟಿ ನೀಡಲಿದ್ದಾರೆ
ಶಿಕ್ಷಣ ಕ್ಷೇತ್ರದಲ್ಲಿನ ಹೊಸ ಪರಿವರ್ತನೆಗಳು ಕೇವಲ ನೀತಿ ಆಧಾರಿತಮಾತ್ರವಲ್ಲ, ಅವು ಪಾಲ್ಗೊಳ್ಳುವಿಕೆ ಆಧಾರಿತವಾಗಿವೆ: ಪ್ರಧಾನಿ
'ವಿದ್ಯಾಂಜಲಿ 2.0' ಎಂಬುದು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಜೊತೆಗೆ ದೇಶದ 'ಸಬ್ ಕಾ ಪ್ರಯಾಸ್‌' ಸಂಕಲ್ಪಕ್ಕೆ ವೇದಿಕೆ ಇದ್ದಂತೆ: ಪ್ರಧಾನಿ
ಎನ್-ಡಿಯರ್‌ (N-DEAR) ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ನಡುವೆ ಮಹಾ ಸಂಪರ್ಕ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ: ಪ್ರಧಾನಿ
ʻನಿಷ್ಠಾ 3.0ʼ ಸಾಮರ್ಥ್ಯ ಆಧಾರಿತ ಬೋಧನೆ, ಕಲಾ ಸಂಯೋಜನೆ ಮತ್ತು ಸೃಜನಶೀಲ ಹಾ

ನಮಸ್ಕಾರ!

ಶಿಕ್ಷಕ ಪರ್ವದ ಈ ಪ್ರಮುಖ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಸೇರಿರುವ, ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಧರ್ಮೇಂದ್ರ ಪ್ರಧಾನ್ ಜೀ, ಶ್ರೀಮತಿ ಅನ್ನಪೂರ್ಣ ದೇವಿ ಜೀ, ಡಾ. ಸುಭಾಷ್ ಸರ್ಕಾರ್ ಜೀ, ಡಾ. ರಾಜಕುಮಾರ್ ರಂಜನ್ ಸಿಂಗ್ ಜೀ, ದೇಶದ ವಿವಿಧ ರಾಜ್ಯಗಳ ಗೌರವಾನ್ವಿತ ಶಿಕ್ಷಣ ಸಚಿವರೇ, ಕರಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಯಾರಿಸಿದ ಸಮಿತಿಯ ಅಧ್ಯಕ್ಷರಾಗಿರುವ ಡಾ. ಕಸ್ತೂರಿ ರಂಗನ್ ಜೀ ಅವರೇ, ಅವರ ತಂಡದ ಎಲ್ಲಾ ಗೌರವಾನ್ವಿತ ಸದಸ್ಯರೇ, ಎಲ್ಲಾ ಪ್ರಾಂಶುಪಾಲರೇ, ಶಿಕ್ಷಕರೇ ಮತ್ತು ದೇಶದ ವಿವಿಧೆಡೆಯ ವಿದ್ಯಾರ್ಥಿಗಳೇ!.

ಎಲ್ಲಕ್ಕಿಂತ ಮೊದಲು ನಾನು ರಾಷ್ಟ್ರ ಪ್ರಶಸ್ತಿಯೊಂದಿಗೆ ಗೌರವಿಸಲ್ಪಟ್ಟ ನಮ್ಮ ಶಿಕ್ಷಕರನ್ನು ಅಭಿನಂದಿಸಲು ಬಯಸುತ್ತೇನೆ. ನೀವೆಲ್ಲರೂ ದೇಶದಲ್ಲಿ ಶಿಕ್ಷಣದ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೀರಿ. ಈ ಕಠಿಣ ಸಮಯದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನೀವು ಮಾಡಿರುವ ಕಾರ್ಯ ಹೋಲಿಕೆಗೆ ನಿಲುಕದ್ದು ಮತ್ತು ಶ್ಲಾಘನೀಯವಾದುದು. ಈ ಕಾರ್ಯಕ್ರಮದಲ್ಲಿ ಹಾಜರಿರುವ ನಮ್ಮ ವಿದ್ಯಾರ್ಥಿಗಳನ್ನು ನಾನು ನೋಡುತ್ತಿದ್ದೇನೆ. ಕಳೆದ ಒಂದೂವರೆ ಅಥವಾ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಿಮ್ಮ ಮುಖದಲ್ಲಿ ಬೇರೆಯದೇ ಆದ ಪ್ರಭೆಯನ್ನು ಕಾಣುತ್ತಿದ್ದೇನೆ. ಇದು ಶಾಲೆ ಆರಂಭ ಮಾಡಿದ ಕಾರಣಕ್ಕಾಗಿರಬಹುದು. ಬಹಳ ದೀರ್ಘಾವಧಿಯ ಬಳಿಕ ಶಾಲೆಗೆ ಹೋಗುವ ಸಂತಸ , ಸ್ನೇಹಿತರನ್ನು ಕಾಣುವ ಮತ್ತು ತರಗತಿಗಳಲ್ಲಿ ಕಲಿಯುವುವಿಕೆ ಒಟ್ಟು ಒಂದು ಬೇರೆಯದೇ ಆದ ಅನುಭವ. ಈ ಉತ್ಸಾಹದ ಜೊತೆ ನಾವೆಲ್ಲರೂ, ನೀವು ಸಹಿತ ಕೊರೊನಾ ಶಿಷ್ಟಾಚಾರಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು.

ಸ್ನೇಹಿತರೇ,

ಇಂದು, ಶಿಕ್ಷಕ ಪರ್ವ ಸಂದರ್ಭದಲ್ಲಿ ಹಲವು ಹೊಸ ಯೋಜನೆಗಳನ್ನು ಆರಂಭ ಮಾಡಲಾಗಿದೆ. ಈಗಷ್ಟೇ ಸಾಕ್ಷ್ಯ ಚಿತ್ರದ ಮೂಲಕ ಇದನ್ನು ವಿವರಿಸಲಾಗಿದೆ. ದೇಶವು ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಈ ಉಪಕ್ರಮಗಳು ಬಹಳ ಮುಖ್ಯವಾದವು. ದೇಶವು ಇಂದು ಸ್ವಾತಂತ್ರ್ಯದ 100 ವರ್ಷಗಳ ಬಳಿಕದ ಭಾರತಕ್ಕಾಗಿ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇಂದು ಆರಂಭಿಸಿದ ಯೋಜನೆಗಳು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಲಿವೆ. ವಿದ್ಯಾಂಜಲಿ-2.0, ನಿಷ್ಟಾ-3.0, ಮಾತನಾಡುವ ಪುಸ್ತಕಗಳು ಮತ್ತು ಯು.ಡಿ.ಎಲ್ ಆಧಾರಿತ ಐ.ಎಸ್.ಎಲ್.-ನಿಘಂಟುಗಳಂತಹ ಹೊಸ ಕಾರ್ಯಕ್ರಮಗಳನ್ನು ಮತ್ತು ವ್ಯವಸ್ಥೆಗಳನ್ನು ಆರಂಭಿಸಲಾಗಿದೆ. ಶಾಲಾ ಗುಣಮಟ್ಟ ಮೌಲ್ಯಮಾಪನ ಮತ್ತು ಭರವಸೆ ಜಾಲ ಅಂದರೆ ಎಸ್.ಕ್ಯೂ.ಎ.ಎ.ಎಫ್. ಆರಂಭದಿಂದ ನಮ್ಮ ಶಿಕ್ಷಣ ವ್ಯವಸ್ಥೆ ಜಾಗತಿಕವಾಗಿ ಸ್ಪರ್ಧಾತ್ಮಕವಾಗುವುದಲ್ಲದೆ ನಮ್ಮ ಯುವಕರು ಭವಿಷತ್ತಿಗೆ ತಯಾರಾಗಿರುವಂತೆ ಮಾಡಲು ನೆರವಾಗಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಕೊರೊನಾ ಕಾಲದಲ್ಲಿಯೂ ನೀವೆಲ್ಲರೂ ನಮ್ಮ ಶಿಕ್ಷಣ ವ್ಯವಸ್ಥೆಯ ಸಾಮರ್ಥ್ಯವನ್ನು ತೋರ್ಪಡಿಸಿದ್ದೀರಿ. ಅಲ್ಲಿ ಹಲವಾರು ಸವಾಲುಗಳಿದ್ದವು, ಆದರೆ ನೀವೆಲ್ಲರೂ ಆ ಸವಾಲುಗಳಿಗೆ ಅಷ್ಟೇ ಕ್ಷಿಪ್ರವಾಗಿ ಪರಿಹಾರಗಳನ್ನು ಹುಡುಕಿದಿರಿ. ಆನ್ ಲೈನ್ ತರಗತಿಗಳು, ವೀಡಿಯೋ ಗುಂಪು ಕರೆಗಳು, ಇತ್ಯಾದಿಗಳನ್ನು ಈ ಮೊದಲೆಂದೂ ಕೇಳಿಯೂ ಇರಲಿಲ್ಲ. ಆದರೆ ನಮ್ಮ ಶಿಕ್ಷಕರು, ಪೋಷಕರು ಮತ್ತು ನಮ್ಮ ಯುವಜನತೆ ಅವುಗಳನ್ನು ಬಹಳ ಸುಲಭದಲ್ಲಿ ದೈನಂದಿನ ಜೀವನದ ಭಾಗವನ್ನಾಗಿಸಿದರು!.

ಸ್ನೇಹಿತರೇ,

ಈ ಸಾಮರ್ಥ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಇದು ಸಕಾಲ ಮತ್ತು ಈ ಕಠಿಣ ಸಮಯದಲ್ಲಿ ನಾವು ಏನನ್ನು ಕಲಿತಿದ್ದೇವೆಯೋ ಅದಕ್ಕೆ ಹೊಸ ದಿಕ್ಕು ಕೊಡುವುದಕ್ಕೂ ಇದು ಸೂಕ್ತ ಸಮಯ. ಅದೃಷ್ಟವಶಾತ್ ಒಂದೆಡೆ ದೇಶವು ಬದಲಾವಣೆಯ ಪರಿಸರವನ್ನು ಹೊಂದಿದೆ ಮತ್ತು ಅದೇ ಸಮಯಕ್ಕೆ ಅಲ್ಲಿ ಆಧುನಿಕ ಮತ್ತು ಭವಿಷ್ಯವಾದಿ ನೀತಿಯಂತಹ ಹೊಸ ಶಿಕ್ಷಣ ನೀತಿ ಇಂದು ಇದೆ. ಈಗ ಕೆಲವು ಸಮಯದಿಂದ ದೇಶವು ನಿರಂತರವಾಗಿ ಶಿಕ್ಷಣ ಕ್ಷೇತ್ರದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಮತ್ತು ಪರಿವರ್ತನೆಯನ್ನು ಸಾಕ್ಷೀಕರಿಸುತ್ತಿದೆ. ಮತು ನಾನು ಇದರ ಹಿಂದಿರುವ ಅತಿ ದೊಡ್ಡ ಶಕ್ತಿಯ ಬಗ್ಗೆ ಎಲ್ಲಾ ವಿದ್ವಾಂಸರ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ. ಈ ಆಂದೋಲನ ಬರೇ ನೀತಿಯಾಧಾರಿತವಾದುದಲ್ಲ, ಅದು ಭಾಗವಹಿಸುವಿಕೆ ಆಧಾರಿತ. ಪ್ರತೀ ಮಟ್ಟದಲ್ಲಿಯೂ ಅಕಾಡೆಮಿಶಿಯನ್ನರು, ತಜ್ಞರು ಮತ್ತು ಶಿಕ್ಷಕರು ಎನ್.ಇ.ಪಿ. ರಚನೆಯಿಂದ ಹಿಡಿದು ಅನುಷ್ಟಾನದವರೆಗೆ ಕೊಡುಗೆ ನೀಡಿದ್ದಾರೆ. ನಿಮಗೆಲ್ಲರಿಗೂ ಇದಕ್ಕಾಗಿ ಶ್ಲಾಘನೆಗಳು ಸಲ್ಲಬೇಕಿವೆ. ನಾವೀಗ ಈ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ, ಮತ್ತು ಇದರಲ್ಲಿ ಸಮಾಜವನ್ನು ಒಳಗೊಳಿಸಿಕೊಳ್ಳಬೇಕಾಗಿದೆ.

ಸ್ನೇಹಿತರೇ,

ನಮಗೆ ಹೇಳಲಾಗುತ್ತಿತ್ತು:

व्यये कृते वर्धते एव नित्यम् विद्याधनम् सर्वधन प्रधानम् ॥

ಅಂದರೆ, ನಾವು ಹೊಂದಿರುವ ಎಲ್ಲಾ ವಸ್ತುಗಳಿಗಿಂತ ಮತ್ತು ಸಂಪತ್ತಿಗಿಂತ ಜ್ಞಾನ ಬಹಳ ದೊಡ್ಡದು. ಯಾಕೆಂದರೆ ಜ್ಞಾನವು ಇತರರೊಂದಿಗೆ ಹಂಚಿಕೊಳ್ಳುವುದರಿಂದಾಗಿ ಹೆಚ್ಚುತ್ತದೆ. ಜ್ಞಾನದ ಕೊಡುಗೆಯಿಂದಾಗಿ ಅದನ್ನು ಬೋಧಿಸುವವರ ಜೀವನದಲ್ಲಿಯೂ ಬಹಳ ದೊಡ್ಡ ಬದಲಾವಣೆಗಳಾಗುತ್ತವೆ.  ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಶಿಕ್ಷಕರೂ ಈ ಭಾವನೆಯನ್ನು ಅನುಭವಿಸಿರಬಹುದು. ಬೋಧಿಸುವುದರಿಂದ ಬರುವ ಸಂತೋಷ ಮತ್ತು ತೃಪ್ತಿ ಹೊಸದು ಮತ್ತು ಅದೊಂದು ವಿಶಿಷ್ಟ ರೀತಿಯದ್ದು. ವಿದ್ಯಾಂಜಲಿ 2.0 ಈಗ ಈ ಪ್ರಾಚೀನ ಪರಂಪರೆಯನ್ನು ಹೊಸ ಸ್ವಾದದೊಂದಿಗೆ ಬಲಪಡಿಸಲಿದೆ. ’ವಿದ್ಯಾಂಜಲಿ 2.0 ವೇದಿಕೆಯು ದೇಶದ “ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಗಳನ್ನು ಸಬ್ ಕಾ ಪ್ರಯಾಸ್ ನೊಂದಿಗೆ ಜೋಡಿಸುವ ಜೀವಂತ ವೇದಿಕೆಯಾಗಿದೆ. ಇದೊಂದು ರೋಮಾಂಚಕ ವೇದಿಕೆ ಇದ್ದಂತೆ. ನಮ್ಮ ಸಮಾಜ ಮತ್ತು ನಮ್ಮ ಖಾಸಗಿ ವಲಯ ಚುರುಕಾಗಬೇಕು ಮತ್ತು ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೊಡುಗೆ ನೀಡಬೇಕು. 

ಸ್ನೇಹಿತರೇ,

ಅನಾದಿ ಕಾಲದಿಂದಲೂ ಭಾರತದಲ್ಲಿ ಸಮಾಜದ ಸಾಮೂಹಿಕ ಶಕ್ತಿಯ ಅವಲಂಬನೆ ಇದೆ.  ಬಹಳ ಧೀರ್ಘ ಕಾಲದಿಂದ ಇದು ನಮ್ಮ ಸಾಮಾಜಿಕ ಪರಂಪರೆಯ ಭಾಗವಾಗಿದೆ. ಸಮಾಜ ಒಗ್ಗೂಡಿ ಏನಾದರೊಂದನ್ನು ಮಾಡಿದಾಗ ನಿರೀಕ್ಷಿತ ಫಲಿತಗಳು ಲಭಿಸುತ್ತವೆ. ಮತ್ತು ನೀವಿದನ್ನು ಕಳೆದ ಕೆಲವು ವರ್ಷಗಳಿಂದ ನೋಡಿರಬಹುದು. ಜನರ ಸಹಭಾಗಿತ್ವ ಭಾರತದ ರಾಷ್ಟ್ರೀಯ ಗುಣನಡತೆಯಾಗುತ್ತಿದೆ. ಕಳೆದ 6-7 ವರ್ಷಗಳಲ್ಲಿ ಜನತಾ ಪಾಲುದಾರಿಕೆಯಿಂದಾಗಿ,  ಯಾರೊಬ್ಬರೂ ಊಹಿಸಲಾಗದಂತಹ ಹಲವಾರು ಪ್ರಮುಖ ಸಂಗತಿಗಳು ಜರಗಿವೆ. ಸ್ವಚ್ಛತಾ ಆಂದೋಲನ ಇರಲಿ, ಗಿವ್ ಇಟ್ ಅಪ್ ಸ್ಫೂರ್ತಿಯ ಮೂಲಕ ಪ್ರತೀ ಬಡವರ ಮನೆಗೂ ಅಡುಗೆ ಅನಿಲ ಸಂಪರ್ಕ ಖಾತ್ರಿಪಡಿಸುವುದಿರಲಿ, ಇರಲಿ, ಅಥವಾ ಬಡವರಿಗೆ ಡಿಜಿಟಲ್ ವ್ಯವಹಾರ ಅವಕಾಶ ಇದೆಲ್ಲ ಸಾಧ್ಯವಾಗಿರುವುದು ಜನರ ಪಾಲುದಾರಿಕೆಯಿಂದಾಗಿ. ಪ್ರತೀ ಕ್ಷೇತ್ರದಲ್ಲಿಯೂ ಜನರ ಸಹಭಾಗಿತ್ವ, ಪಾಲುದಾರಿಕೆಯಿಂದಾಗಿ ಭಾರತದ ಪ್ರಗತಿಗೆ ಶಕ್ತಿ ದೊರೆತಿದೆ. ಈಗ ’ವಿದ್ಯಾಂಜಲಿ” ಕೂಡಾ ಸುವರ್ಣ ಅಧ್ಯಾಯವನ್ನು ತೆರೆಯಲಿದೆ. ವಿದ್ಯಾಂಜಲಿಯು ದೇಶದ ಪ್ರತಿಯೊಬ್ಬ ನಾಗರಿಕರೂ ಪಾಲುದಾರರಾಗಿ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಸಕ್ರಿಯವಾದ ಪಾತ್ರವಹಿಸಲು ಮತ್ತು ಎರಡು ಹೆಜ್ಜೆ ಮುನ್ನಡೆ ಸಾಧಿಸಲು ಒಂದು ಕರೆಯಾಗಿದೆ. ನೀವು ಇಂಜಿನಿಯರ್ ಆಗಿರಬಹುದು, ವೈದ್ಯರಾಗಿರಬಹುದು, ಸಂಶೋಧನಾ ವಿಜ್ಞಾನಿಯಾಗಿರಬಹುದು, ಐ.ಎ.ಎಸ್. ಅಧಿಕಾರಿಯಾಗಿರಬಹುದು, ಅಥವಾ ಎಲ್ಲೋ ಕಲೆಕ್ಟರ್ ಆಗಿರಬಹುದು. ಆದರೂ ನೀವು ಶಾಲೆಗಳಿಗೆ ಹೋಗಬಹುದು ಮತ್ತು ಮಕ್ಕಳಿಗೆ ಬಹಳಷ್ಟನ್ನು ತಿಳಿಸಿಕೊಡಬಹುದು. ನೀವು ಅವರಿಗೆ ಕಲಿಸುವ ಮೂಲಕ ಮಕ್ಕಳ  ಕನಸುಗಳಿಗೆ ಹೊಸ ದಿಕ್ಕು ತೋರಿಸಬಹುದು. ಮತ್ತು ಇದನ್ನು ಬಹಳಷ್ಟು ಮಂದಿ ಮಾಡುತ್ತಿರುವುದು ನಮಗೆ ತಿಳಿದಿದೆ. ಉತ್ತರಾಖಂಡದಲ್ಲಿ ಅತ್ಯಂತ ದುರ್ಗಮ ಪ್ರದೇಶದಲ್ಲಿ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಒಬ್ಬರು ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟವರು ಬಡ ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ  ಮತ್ತು ಅವರಿಗೆ ಸಂಪನ್ಮೂಲಗಳನ್ನು ಒದಗಿಸಿ ಕೊಡುತ್ತಿದ್ದಾರೆ. ಸಮಾಜದಲ್ಲಿ ನಿಮ್ಮ ಪಾತ್ರ ಯಾವುದೇ ಇರಲಿ ಅಡ್ಡಿ ಇಲ್ಲ ಮತ್ತು ನಿಮ್ಮ  ಯಶಸ್ಸು ಏನೇ ಇರಲಿ, ಯುವಜನತೆಯ ಭವಿಷ್ಯವನ್ನು ನಿರ್ಮಾಣ ಮಾಡುವಲ್ಲಿ ನಿಮಗೆ ಸಹಭಾಗಿತ್ವ ಇದೆ ಮತ್ತು ಅದರಲ್ಲಿ ನಿಮ್ಮ ಪಾತ್ರವೂ ಇದೆ. ಇತ್ತೀಚೆಗೆ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ನಮ್ಮ ಆಟಗಾರರು ಉತ್ತಮ ಸಾಧನೆ ಮಾಡಿದ್ದಾರೆ. ನಮ್ಮ ಯುವಕರು ಬಹಳ ಪ್ರೇರಣೆ ಪಡೆದಿದ್ದಾರೆ. ನಾನು ಪ್ರತಿಯೊಬ್ಬ ಆಟಗಾರರಿಗೂ ಅಮೃತ ಮಹೋತ್ಸವ ಅವಧಿಯಲ್ಲಿ ಕನಿಷ್ಟ 75 ಶಾಲೆಗಳಿಗಾದರೂ ಭೇಟಿ ನೀಡುವಂತೆ ಮನವಿ ಮಾಡಿದ್ದೇನೆ. ಈ ಆಟಗಾರರು ನನ್ನ ಕೋರಿಕೆಯನ್ನು ಅಂಗೀಕರಿಸಿರುವುದು ನನಗೆ ಸಂತೋಷ ತಂದಿದೆ. ನಿಮ್ಮ ಕ್ಷೇತ್ರದಲ್ಲಿರುವ ಈ ಆಟಗಾರರನ್ನು ಸಂಪರ್ಕಿಸಿ, ಅವರನ್ನು ನಿಮ್ಮ ಶಾಲೆಗಳಿಗೆ ಆಹ್ವಾನಿಸಿ ಮಕ್ಕಳ ಜೊತೆ ಸಂವಾದ ಏರ್ಪಡಿಸುವಂತೆ ಎಲ್ಲಾ ಗೌರವಾನ್ವಿತ ಶಿಕ್ಷಕರಲ್ಲಿ ನಾನು ಮನವಿ ಮಾಡುತ್ತೇನೆ. ಇದು ನಮ್ಮ ವಿದ್ಯಾರ್ಥಿಗಳನ್ನು ಬಹಳಷ್ಟು ಪ್ರೇರೇಪಿಸುತ್ತದೆ ಮತ್ತು ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಕ್ಕೆ ಬರಲು ಪ್ರೋತ್ಸಾಹ ದೊರೆತಂತಾಗುತ್ತದೆ.

ಸ್ನೇಹಿತರೇ,

ಇಂದು ಶಾಲಾ ಗುಣಮಟ್ಟ ಮೌಲ್ಯಮಾಪನ ಮತ್ತು ಭರವಸೆ ಚೌಕಟ್ಟು ಅಂದರೆ ಎಸ್.ಕ್ಯು.ಎ.ಎ.ಎಫ್. ಮೂಲಕ ಇನ್ನೊಂದು ಪ್ರಮುಖ ಆರಂಭವನ್ನು ಮಾಡಲಾಗಿದೆ. ಇದುವರೆಗೆ ದೇಶದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿ ನಮ್ಮ ಶಾಲೆಗಳಲ್ಲಿ ಸಾಮಾನ್ಯ ವೈಜ್ಞಾನಿಕ ಚೌಕಟ್ಟು ಇರಲಿಲ್ಲ. ಸಾಮಾನ್ಯ ಚೌಕಟ್ಟು ಇರದಿರುವ ಕಾರಣಕ್ಕೆ ಶಿಕ್ಷಣದ ಎಲ್ಲಾ ವಿಷಯಗಳಿಗೆ ಸಂಬಂಧಿಸಿ ಅಂದರೆ ಪಠ್ಯಕ್ರಮ, ಶಿಕ್ಷಣ ಶಾಸ್ತ್ರ, ಮೌಲ್ಯಮಾಪನ, ಮೂಲಸೌಕರ್ಯ, ಒಳಗೊಳ್ಳುವ ಪದ್ಧತಿಗಳು ಮತ್ತು ಆಡಳಿತ ಪ್ರಕ್ರಿಯೆಗಳು ಇತ್ಯಾದಿಗಳಿಗೆ ಗುಣಮಾನಕಗಳನ್ನು ಅಂಗೀಕರಿಸುವುದು ಕಷ್ಟಕರವಾಗಿತ್ತು. ಇದರಿಂದಾಗಿ, ದೇಶದ ವಿವಿಧ ಭಾಗಗಳಲ್ಲಿ ಇರುವ ಶಾಲಾ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಸಮಾನತೆಯನ್ನು ಎದುರಿಸುತ್ತಿದ್ದರು. ಆದರೆ ಎಸ್.ಕ್ಯು.ಎ.ಎ.ಎಫ್. ಈಗ ಈ ಅಂತರವನ್ನು ನಿವಾರಣೆ ಮಾಡಬಲ್ಲದು. ಈ ಚೌಕಟ್ಟಿನಲ್ಲಿ ರಾಜ್ಯಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶವನ್ನು ಒದಗಿಸಿರುವುದು ಇದರಲ್ಲಿರುವ ಬಹಳ ಮುಖ್ಯ ಅಂಶಗಳಲ್ಲಿ ಒಂದು. ಇದರ ಆಧಾರದ ಮೇಲೆ ಶಾಲೆಗಳು ತಮ್ಮದೇ ಆದ ಮೌಲ್ಯಮಾಪನವನ್ನು ಮಾಡಲು ಸಮರ್ಥವಾಗಿರುತ್ತವೆ. ಶಾಲೆಗಳನ್ನು ಪರಿವರ್ತನಾತ್ಮಕ ಬದಲಾವಣೆಗೂ ಉತ್ತೇಜಿಸುವ ಅವಕಾಶಗಳಿವೆ.

ಸ್ನೇಹಿತರೇ,

ರಾಷ್ಟ್ರೀಯ ಡಿಜಿಟಲ್ ಶೈಕ್ಷಣಿಕ ವಾಸ್ತುಶಿಲ್ಪ , ಅಂದರೆ ಎನ್-ಡಿ.ಇ.ಎ.ಆರ್. ಶಿಕ್ಷಣದಲ್ಲಿಯ ಅಸಮಾನತೆಗಳನ್ನು ತೆಗೆದು ಹಾಕಿ ಅದನ್ನು ಆಧುನಿಕಗೊಳಿಸುವಲ್ಲಿ ಪ್ರಮುಖವಾದಂತಹ ಪಾತ್ರವನ್ನು ವಹಿಸಲಿದೆ. ಯು.ಪಿ.ಐ.ಇಂಟರ್ ಫೇಸ್ ಬ್ಯಾಂಕಿಂಗ್ ವಲಯದಲ್ಲಿ ಕ್ರಾಂತಿಯುಂಟು ಮಾಡಿದಂತೆ, ಎನ್-ಡಿ.ಇ.ಎ.ಆರ್ ಕೂಡಾ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ನಡುವಣ ಸೂಪರ್ ಸಂಪರ್ಕಕೊಂಡಿಯಾಗಿರುತ್ತದೆ. ಎನ್-ಡಿ.ಇ.ಎ.ಆರ್. ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಅಥವಾ ಉನ್ನತ ಶಿಕ್ಷಣಕ್ಕೆ ಸೇರ್ಪಡೆ, ಬಹು ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ, ಶೈಕ್ಷಣಿಕ ಕ್ರೆಡಿಟ್ ಬ್ಯಾಂಕ್, ಅಥವಾ ವಿದ್ಯಾರ್ಥಿಗಳ ಕೌಶಲ್ಯದ ದಾಖಲೆಗಳ ನಿರ್ವಹಣೆಗೆ ಅನುಕೂಲಗಳನ್ನು ಒದಗಿಸುತ್ತದೆ. ಈ ಎಲ್ಲಾ ಪರಿವರ್ತನೆಗಳು ನಮ್ಮ “ಹೊಸ ಯುಗದ ಶಿಕ್ಷಣ”ದ ಮುಖವಾಗಲಿವೆ ಮತ್ತು ಅದರಿಂದ ಗುಣಮಟ್ಟದ ಶಿಕ್ಷಣದಲ್ಲಿ ತಾರತಮ್ಯ ಕೊನೆಗೊಳ್ಳಲಿದೆ.

ಸ್ನೇಹಿತರೇ,

ನಿಮಗೆಲ್ಲಾ ತಿಳಿದಿದೆ, ಶಿಕ್ಷಣವು ಒಳಗೊಳ್ಳುವಂತಹದು ಆಗಿದ್ದರೆ ಮಾತ್ರ ಸಾಲದು, ಅದು ಯಾವುದೇ ರಾಷ್ಟ್ರದ ಪ್ರಗತಿಗೆ ಪೂರಕವಾಗಿರಬೇಕು. ಆದುದರಿಂದ ದೇಶವು ಮಾತನಾಡುವ ಪುಸ್ತಕಗಳು ಮತ್ತು ಶ್ರಾವ್ಯ ಪುಸ್ತಕಗಳಂತಹ ತಂತ್ರಜ್ಞಾನವನ್ನು ಶಿಕ್ಷಣದ ಭಾಗವಾಗಿಸುತ್ತಿದೆ. 10,000 ಶಬ್ದಗಳ ಭಾರತೀಯ ಸಂಕೇತ ಭಾಷಾ ನಿಘಂಟನ್ನು ಕಲಿಕೆಯ ಜಾಗತಿಕ ವಿನ್ಯಾಸ  (ಯು.ಡಿ.ಎಲ್.) ಆಧರಿಸಿ ಅಭಿವೃದ್ಧಿ ಮಾಡಲಾಗಿದೆ.  ಅಸ್ಸಾಂನ ಬಿಹುವಿನಿಂದ ಹಿಡಿದು ಭರತ ನಾಟ್ಯದವರೆಗೆ ಶತಮಾನಗಳಿಂದ ಸಂಕೇತ ಭಾಷೆಯು ನಮ್ಮ ಕಲೆ ಮತ್ತು ಸಂಸ್ಕೃತಿಯ ಭಾಗವಾಗಿದೆ. ಈಗ ಇದೇ ಮೊದಲ ಬಾರಿಗೆ ದೇಶವು ಸಂಕೇತ ಭಾಷೆಯನ್ನು ಪಠ್ಯಕ್ರಮದ ಒಂದು ಪಠ್ಯದ ಭಾಗವಾಗಿಸುತ್ತಿದೆ. ಇದರಿಂದ  ಅವಶ್ಯಕತೆ ಇರುವ ಮುಗ್ಧ ಮಕ್ಕಳು ಹಿಂದೆ ಬೀಳುವ ಪರಿಸ್ಥಿತಿ ನಿವಾರಣೆಯಾಗಲಿದೆ !.ಈ ತಂತ್ರಜ್ಞಾನವು ದಿವ್ಯಾಂಗ ಯುವಜನತೆಗೆ ಹೊಸ ಜಗತ್ತನ್ನು ನಿರ್ಮಾಣ ಮಾಡಲಿದೆ. ಅದೇ ರೀತಿ ನಿಪುಣ್ ಭಾರತ್ ಅಭಿಯಾನದಲ್ಲಿ ಮೂರರಿಂದ ಎಂಟು ವರ್ಷದೊಳಗಿನ ವಯೋಗುಂಪಿನ ಮಕ್ಕಳಿಗಾಗಿ  ಅಡಿಪಾಯ ಸಾಕ್ಷರತೆ  ಮತ್ತು ಸಾಂಖ್ಯಿಕ ಮಿಶನ್ ಆರಂಭಿಸಲಾಗಿದೆ. 3 ನೇ ವರ್ಷದಿಂದ ಎಲ್ಲಾ ಮಕ್ಕಳಿಗೂ  ಕಡ್ಡಾಯವಾಗಿ ಶಾಲಾ –ಪೂರ್ವ (ಪ್ರಿ ಸ್ಕೂಲ್) ಶಿಕ್ಷಣ ಲಭಿಸುವಂತೆ ಮಾಡಲು ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಈ ಕ್ರಮಗಳನ್ನು, ಪ್ರಯತ್ನಗಳನ್ನು ಬಹಳ ದೂರದವರೆಗೆ ಕೊಂಡೊಯ್ಯಬೇಕಾಗಿದೆ. ಮತ್ತು ಇದರಲ್ಲಿ ನಿಮ್ಮೆಲ್ಲರ ಪಾತ್ರ, ವಿಶೇಷವಾಗಿ ನಮ್ಮ ಶಿಕ್ಷಕ ಸ್ನೇಹಿತರ ಪಾತ್ರ ಬಹಳ ಮುಖ್ಯವಾದುದಾಗಿದೆ.

ಸ್ನೇಹಿತರೇ,

 

ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ-

"दृष्टान्तो नैव दृष्ट: त्रि-भुवन जठरे, सद्गुरोः ज्ञान दातुः"

ಅಂದರೆ, ಗುರುವಿಗೆ ಸಾದೃಶ ಇಲ್ಲ. ಇಡೀ ವಿಶ್ವದಲ್ಲಿ ಗುರುವಿಗೆ ಹೋಲಿಕೆ ಇಲ್ಲ. ಗುರು ಏನು ಮಾಡಬಲ್ಲರೋ ಅದನ್ನು ಬೇರಾರೂ ಮಾಡಲು ಸಾಧ್ಯವಿಲ್ಲ. ದೇಶವು ತನ್ನ ಯುವಜನತೆಗೆ ಶಿಕ್ಷಣ ಒದಗಿಸಲು ಏನೆಲ್ಲ ಪ್ರಯತ್ನಗಳನ್ನು ಮಾಡುತ್ತಿದೆಯೋ , ಅದರ ಹಿಡಿತ ಶಿಕ್ಷಕರ ಕೈಯಲ್ಲಿದೆ. ತ್ವರಿತವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಶಿಕ್ಷಕರು ಹೊಸ ವ್ಯವಸ್ಥೆಗಳನ್ನು ಮತ್ತು ತಂತ್ರಗಳನ್ನು ಕಲಿಯಬೇಕಿದೆ. ಇದರ ಒಂದು ಅಂಗವಾಗಿರುವ “ನಿಷ್ಟಾ” ತರಬೇತಿ ಕಾರ್ಯಕ್ರಮದ ಕೆಲವಂಶಗಳನ್ನು ನಿಮ್ಮೆದುರು ಈಗ ಸಾದರಪಡಿಸಲಾಗಿದೆ. ಈ ತರಬೇತಿ ಕಾರ್ಯಕ್ರಮದ ಮೂಲಕ ದೇಶವು ತನ್ನ ಶಿಕ್ಷಕರನ್ನು ಈ ಬದಲಾವಣೆಗಳಿಗೆ ಸಜ್ಜುಗೊಳಿಸುತ್ತಿದೆ. “ನಿಷ್ಟಾ 3.0” ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮತ್ತು ಇದು ಬಹಳ ಪ್ರಮುಖವಾದ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ನಮ್ಮ ಶಿಕ್ಷಕರು ಸಾಮರ್ಥ್ಯ ಆಧಾರಿತ ಕಲಿಸುವಿಕೆ, ಕಲಾ-ಸಮಗ್ರತೆ, ಉನ್ನತ ಮಟ್ಟದ ಚಿಂತನೆ ಮತ್ತು ರಚನಾತ್ಮಕ ಹಾಗು ವಿಮರ್ಶಾತ್ಮಕ ಚಿಂತನೆಗಳಂತಹ ಹೊಸ ವಿಧಾನಗಳನ್ನು ಅರಿತುಕೊಂಡರೆ ಆಗ ಭವಿಷ್ಯತ್ತಿಗೆ ಯುವಜನತೆಯನ್ನು  ತಯಾರು ಮಾಡಲು ಅವರಿಗೆ ಸಾಧ್ಯವಾಗುತ್ತದೆ.

ಸ್ನೇಹಿತರೇ,

ಭಾರತದ ಶಿಕ್ಷಕರು ಜಾಗತಿಕ ಗುಣಮಟ್ಟದ ಸಾಮರ್ಥ್ಯವನ್ನು ಹೊಂದಿರುವುದು ಮಾತ್ರವಲ್ಲದೆ, ಅವರು ತಮ್ಮದೇ ಆದ ವಿಶೇಷ ಸಂಪತ್ತನ್ನು ಹೊಂದಿದ್ದಾರೆ. ಅವರಲ್ಲಿರುವ ಭಾರತೀಯ ಸಂಸ್ಕೃತಿಯೇ ಈ ವಿಶೇಷ ಆಸ್ತಿ. ನಾನು ನನ್ನ ಎರಡು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನಾನು ಪ್ರಧಾನ ಮಂತ್ರಿಯಾಗಿ ಮೊದಲ ಬಾರಿಗೆ ಭೂತಾನಿಗೆ ಹೋಗಿದ್ದಾಗ, ಆ ಸರಕಾರಿ ವ್ಯವಸ್ಥೆಯಲ್ಲಿ ಇದ್ದ ರಾಜಕುಟುಂಬದ ಪ್ರತಿಯೊಬ್ಬರೂ ಭಾರತದಿಂದ ಶಿಕ್ಷಕರು ಇಲ್ಲಿಗೆ ಬರುತ್ತಿದ್ದರು ಮತ್ತು ಬಹಳ ದೂರ ಕಾಲ್ನಡೆಯಲ್ಲಿ ತೆರಳಿ ಜನರಿಗೆ ಬೋಧಿಸುತ್ತಿದ್ದರು ಎಂಬುದನ್ನು ಬಹಳ ಹೆಮ್ಮೆಯಿಂದ ಹೇಳುತ್ತಿದ್ದರು. ಭಾರತದ ಶಿಕ್ಷಕರ ಬಗ್ಗೆ ಹೇಳುವಾಗ ಭೂತಾನದ ರಾಜಕುಟುಂಬದ ಅಥವಾ ಆಡಳಿತಗಾರರ ಕಣ್ಣುಗಳಲ್ಲಿ  ಮಿಂಚು ಇತ್ತು. ಅವರು ಬಹಳ ಹೆಮ್ಮೆಪಡುತ್ತಿದ್ದರು. ಅದೇ ರೀತಿ ನಾನು ಸೌದಿ ಆರೇಬಿಯಾಕ್ಕೆ ಹೋದಾಗ ಮತ್ತು ಬಹುಷಃ ಸೌದಿ ಅರೇಬಿಯಾದ ದೊರೆಗಳ ಜೊತೆ ಮಾತನಾಡುತ್ತಿರುವಾಗ, ಅವರು ಕೂಡಾ ತನಗೆ ಭಾರತೀಯ ಶಿಕ್ಷಕರು ಕಲಿಸಿದ್ದನ್ನು ಹೆಮ್ಮೆಯಿಂದ ನೆನಪಿಸಿಕೊಂಡರು. ಯಾವುದೇ ವ್ಯಕ್ತಿ ಯಾವುದೇ ಹುದ್ದೆಯಲ್ಲಿದ್ದರೂ ಅದನ್ನು ಬದಿಗಿಟ್ಟು ಅವರು ವ್ಯಕ್ತಪಡಿಸಿದ ಮತ್ತು ಶಿಕ್ಷಕರ ಕುರಿತಾಗಿ ಹೊಂದಿರುವ   ಭಾವನೆಯನ್ನು ನೀವು ಗಮನಿಸಿ.

ಸ್ನೇಹಿತರೇ,

ನಮ್ಮ ಶಿಕ್ಷಕರು ಅವರ ಕೆಲಸವನ್ನು ಬರೇ ವೃತ್ತಿ ಎಂಬುದಾಗಿ ಪರಿಗಣಿಸುವುದಿಲ್ಲ. ಅವರಿಗೆ, ಬೋಧನೆ ಒಂದು ಅನುಭೂತಿ. ಅದು ಪವಿತ್ರ ಮತ್ತು ನೈತಿಕ ಕರ್ತವ್ಯ. ಆದುದರಿಂದ, ಅಲ್ಲಿ ಶಿಕ್ಷಕರು ಮತ್ತು ಮಕ್ಕಳ ನಡುವೆ ವೃತ್ತಿಪರ ಸಂಬಂಧ ಇಲ್ಲ. ಆದರೆ ಕೌಟುಂಬಿಕ ಬಾಂಧವ್ಯ ಇದೆ. ಮತ್ತು ಈ ಬಾಂಧವ್ಯ ಇಡೀ ಬದುಕಿನುದ್ದಕ್ಕೂ ಮುಂದುವರೆಯುತ್ತದೆ. ಇದರ ಪರಿಣಾಮವಾಗಿ ಭಾರತದ ಶಿಕ್ಷಕರು ವಿಶ್ವದಲ್ಲಿ ಎಲ್ಲಿಯೇ ಹೋಗಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿ ಬರುತ್ತಾರೆ. ಇದರಿಂದಾಗಿ ಭಾರತದ ಯುವ ಜನತೆಗೆ ವಿಶ್ವದಲ್ಲಿ ಭಾರೀ ಸಾಧ್ಯತೆಗಳು, ಅವಕಾಶಗಳು ಇವೆ. ನಾವು ನಮ್ಮನ್ನು ಆಧುನಿಕ ಶಿಕ್ಷಣ ಪರಿಸರ ವ್ಯವಸ್ಥೆಗೆ ತಕ್ಕಂತೆ ಸಜ್ಜುಗೊಳಿಸಿಕೊಳ್ಳಬೇಕು ಮತ್ತು ಈ ಸಾಧ್ಯತೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ಇದಕ್ಕಾಗಿ, ನಾವು ಸತತ ಅನ್ವೇಷಣೆಗಳನ್ನು ಮಾಡುತ್ತಲೇ ಇರಬೇಕು. ನಾವು ಕಲಿಸುವ –ಕಲಿಕೆಯ ಪ್ರಕ್ರಿಯೆಯನ್ನು ನಿರಂತರವಾಗಿ ಮರು ವ್ಯಾಖ್ಯಾನಿಸುತ್ತ ಮತ್ತು ಮರು ವಿನ್ಯಾಸ ಮಾಡುತ್ತ ಇರಬೇಕು. ಇದುವರೆಗೆ ನೀವು ತೋರಿಸಿದ ಸ್ಪೂರ್ತಿ, ಉತ್ಸಾಹ ಹೊಸ ಎತ್ತರಕ್ಕೆ ಕೊಂಡೊಯ್ಯುವಂತಾಗಬೇಕು ಮತ್ತು ಹೊಸ ಬಲವನ್ನು ಒದಗಿಸಬೇಕು. ಈ ಶಿಕ್ಷಕ ಪರ್ವದ ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಇಂದಿನಿಂದ ಸೆಪ್ಟೆಂಬರ್ 17 ರವರೆಗೆ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ನನಗೆ ತಿಳಿಸಲಾಯಿತು. ಈ ವಿಶ್ವಕರ್ಮರು ನಿರ್ಮಾಣಕಾರರು, ಅವರು ವಿವಿಧ ವಿಷಯಗಳ ಕುರಿತು  ಸೆಪ್ಟೆಂಬರ್ 7 ರಿಂದ 17 ರವರೆಗೆ ಕಾರ್ಯಾಗಾರಗಳನ್ನು, ವಿಚಾರ ಸಂಕಿರಣಗಳನ್ನು ನಡೆಸುತ್ತಾರೆ. ಇದು ಅತ್ಯಂತ ಶ್ಲಾಘನಾರ್ಹ ಪ್ರಯತ್ನ. ಇಷ್ಟೊಂದು ಶಿಕ್ಷಕರು, ತಜ್ಞರು ಮತ್ತು ನೀತಿ ರೂಪಕರು ದೇಶಾದ್ಯಂತ ಗಂಭೀರವಾಗಿ ಚರ್ಚಿಸುತ್ತಿರುವಾಗ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಈ ಅಮೃತದ ಮಹತ್ವ ಬಹಳ ದೊಡ್ಡದಾಗುತ್ತದೆ. ನಿಮ್ಮ ಸಾಮೂಹಿಕ ಗಂಭೀರ ಚರ್ಚೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಬಹಳ ದೂರ ಕೊಂಡೊಯ್ಯಲಿದೆ. ಇಂತಹ ಪ್ರಯತ್ನಗಳು ಸ್ಥಳೀಯ ಮಟ್ಟದಲ್ಲಿ ನಿಮ್ಮ ನಗರಗಳಲ್ಲಿ ಮತ್ತು ಗ್ರಾಮಗಳಲ್ಲಿ ನಡೆಯಬೇಕು ಎಂಬುದನ್ನು ನಾನು ಹೇಳಲು ಇಚ್ಛಿಸುತ್ತೇನೆ. ’ಸಬ್ ಕಾ ಪ್ರಯಾಸ್” ಈ ನಿಟ್ಟಿನಲ್ಲಿ ದೇಶದ ನಿರ್ಧಾರಕ್ಕೆ ಹೊಸ ವೇಗ ಕೊಡಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ದೇಶವು ಅಮೃತ ಮಹೋತ್ಸವ ಸಂದರ್ಭದಲ್ಲಿ ನಿಗದಿ ಮಾಡಿರುವ ಗುರಿಗಳನ್ನು ನಾವೆಲ್ಲ ಒಗ್ಗೂಡಿ ಸಾಧಿಸೋಣ. ಈ ಶುಭಾಶಯಗಳೊಂದಿಗೆ, ನಿಮ್ಮೆಲ್ಲರಿಗೆ ಬಹಳ ಧನ್ಯವಾದಗಳು ಮತ್ತು ಶುಭ ಹಾರೈಕೆಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Pyaaz Khaate Hai, Dimaag Nahi': PM Modi's Jhalmuri Video Breaks The Internet With 100M+ Views

Media Coverage

Pyaaz Khaate Hai, Dimaag Nahi': PM Modi's Jhalmuri Video Breaks The Internet With 100M+ Views
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in a mishap at a cracker factory in Thrissur, Keralam
April 21, 2026
PM announces ex-gratia from PMNRF

The Prime Minister, Shri Narendra Modi has condoled the loss of lives due to a mishap at a cracker factory in Thrissur, Keralam. Shri Modi also wished speedy recovery for those injured in the mishap.

The Prime Minister announced an ex-gratia from PMNRF of Rs. 2 lakh to the next of kin of each deceased and Rs. 50,000 for those injured.

The Prime Minister posted on X:

“Saddened to hear about the loss of lives due to the mishap at a cracker factory in Thrissur, Keralam. My deepest condolences to those who have lost their loved ones. May the injured recover at the earliest: PM @narendramodi"

"The Prime Minister has announced that an ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000." 

"തൃശൂരിലെ പടക്ക നിർമാണശാലയിലുണ്ടായ അപകടത്തിൽ നിരവധി ജീവനുകൾ പൊലിഞ്ഞ വാർത്തയറിഞ്ഞതിൽ ദുഃഖമുണ്ട്. പ്രിയപ്പെട്ടവരെ നഷ്ടപ്പെട്ടവരുടെ വേദനയിൽ പങ്കുചേരുന്നു. പരിക്കേറ്റവർ എത്രയും വേഗം സുഖം പ്രാപിക്കട്ടെ: പ്രധാനമന്ത്രി

@narendramodi."

"മരിച്ച ഓരോ വ്യക്തിയുടെയും കുടുംബത്തിന് പ്രധാനമന്ത്രിയുടെ ദേശീയ ദുരിതാശ്വാസ നിധിയിൽ (PMNRF) നിന്ന് 2 ലക്ഷം രൂപ ധനസഹായം നൽകുമെന്ന് പ്രധാനമന്ത്രി അറിയിച്ചു. പരിക്കേറ്റവർക്ക് 50,000 രൂപ വീതം നൽകും."