ಪ್ರಧಾನಮಂತ್ರಿ ಅವರಿಂದ ₹1 ಲಕ್ಷ ಕೋಟಿ ಮೊತ್ತದ 'ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆ'ಗೆ ಚಾಲನೆ
ಭಾರತದಲ್ಲಿ ಆಧುನಿಕ ನಾವೀನ್ಯತೆಯ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ನಾವು 'ಸಂಶೋಧನೆಯ ಸುಲಭತೆ'ಯ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ: ಪ್ರಧಾನಮಂತ್ರಿ
ವಿಜ್ಞಾನವನ್ನು ವಿಸ್ತರಿಸಿದಾಗ, ನಾವೀನ್ಯತೆಯು ಎಲ್ಲರನ್ನೂ ಒಳಗೊಂಡಾಗ, ತಂತ್ರಜ್ಞಾನವು ಪರಿವರ್ತನೆಗೆ ಚಾಲನೆ ನೀಡಿದಾಗ, ಮಹಾನ್ ಸಾಧನೆಗಳಿಗೆ ಅಡಿಪಾಯ ಹಾಕಿದಂತಾಗುತ್ತದೆ": ಪ್ರಧಾನಮಂತ್ರಿ
ಭಾರತವು ಈಗ ಕೇವಲ ತಂತ್ರಜ್ಞಾನದ 'ಗ್ರಾಹಕ'ನಾಗಿ ಉಳಿದಿಲ್ಲ, ಬದಲಾಗಿ ತಂತ್ರಜ್ಞಾನದ ಮೂಲಕ ಪರಿವರ್ತನೆಯ 'ಹರಿಕಾರ'ನಾಗಿ ಹೊರಹೊಮ್ಮಿದೆ: ಪ್ರಧಾನಮಂತ್ರಿ
ಇಂದು, ಭಾರತವು ವಿಶ್ವದ ಅತ್ಯಂತ ಯಶಸ್ವಿಯಾದ 'ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ'ವನ್ನು ಹೊಂದಿದೆ: ಪ್ರಧಾನಮಂತ್ರಿ
ಇಂದು, ಭಾರತವು ನೈತಿಕ ಮತ್ತು ಮಾನವ-ಕೇಂದ್ರಿತ ಕೃತಕ ಬುದ್ಧಿಮತ್ತೆಗಾಗಿ ಜಾಗತಿಕ ಚೌಕಟ್ಟನ್ನು ರೂಪಿಸುತ್ತಿದೆ: ಪ್ರಧಾನಮಂತ್ರಿ

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಜಿ, ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ನೊಬೆಲ್ ಪ್ರಶಸ್ತಿ ವಿಜೇತ ಸರ್ ಆಂಡ್ರೆ ಗೀಮ್ ಅವರು ನಮ್ಮೊಂದಿಗೆ ಉಪಸ್ಥಿತರಿದ್ದಾರೆ, ಇಲ್ಲಿರುವ ಎಲ್ಲಾ ವಿಜ್ಞಾನಿಗಳೆ, ಅನುಶೋಧಕರೆ, ಶೈಕ್ಷಣಿಕ ಕ್ಷೇತ್ರದ ಗಣ್ಯರೆ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ!

ಇಂದಿನ ಕಾರ್ಯಕ್ರಮವು ವಿಜ್ಞಾನಕ್ಕೆ ಸಂಬಂಧಿಸಿದೆ, ಆದರೆ ಮೊದಲನೆಯದಾಗಿ ನಾನು ಕ್ರಿಕೆಟ್‌ನಲ್ಲಿ ಭಾರತದ ಅದ್ಭುತ ಗೆಲುವಿನ ಬಗ್ಗೆ ಮಾತನಾಡುತ್ತೇನೆ. ಇಡೀ ಭಾರತವು ತನ್ನ ಕ್ರಿಕೆಟ್ ತಂಡದ ಯಶಸ್ಸಿನಿಂದ ತುಂಬಾ ಸಂತೋಷ ಪಡುತ್ತಿದೆ. ಇದು ಭಾರತದ ಮೊದಲ ಮಹಿಳಾ ವಿಶ್ವಕಪ್. ನಮ್ಮ ಮಹಿಳಾ ಕ್ರಿಕೆಟ್ ತಂಡವನ್ನು ನಾನು ಅಭಿನಂದಿಸುತ್ತೇನೆ. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ನಿಮ್ಮ ಯಶಸ್ಸು ದೇಶಾದ್ಯಂತ ಕೋಟ್ಯಂತರ ಯುವಕರಿಗೆ ಸ್ಫೂರ್ತಿ ನೀಡುತ್ತಿದೆ.

ಸ್ನೇಹಿತರೆ,

ನಿನ್ನೆ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತಿನಲ್ಲಿ ತನ್ನ ಧ್ವಜವನ್ನು ಹಾರಿಸಿದೆ. ನಿನ್ನೆ, ಭಾರತೀಯ ವಿಜ್ಞಾನಿಗಳು ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದರು. ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವಿಜ್ಞಾನಿಗಳನ್ನು ಮತ್ತು ಇಸ್ರೋವನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತಿನಲ್ಲಿ ಮಹತ್ವದ ದಿನ. 21ನೇ ಶತಮಾನದ ಈ ಕಾಲಘಟ್ಟದಲ್ಲಿ, ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತು ಚಿಂತನೆ ನಡೆಸಲು ವಿಶ್ವಾದ್ಯಂತದ ತಜ್ಞರು ಒಟ್ಟಾಗಿ ಸೇರುವ ಅಗತ್ಯವಿತ್ತು, ಅವರು ಒಟ್ಟಾಗಿ ಸೇರಿ ಹೊಸ ದಿಕ್ಕು ತೋರಿಸಬೇಕು. ಈ ಅಗತ್ಯವು ಒಂದು ಕಲ್ಪನೆಯನ್ನು ಹುಟ್ಟುಹಾಕಿತು, ಈ ಕಲ್ಪನೆಯಿಂದ ಈ ಸಮಾವೇಶದ ದೃಷ್ಟಿಕೋನ ಬಂದಿತು. ಇಂದು ಆ ದೃಷ್ಟಿಕೋನವು ಈ ಸಮಾವೇಶದ ರೂಪದಲ್ಲಿ ರೂಪುಗೊಳ್ಳುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಅನೇಕ ಸಚಿವಾಲಯಗಳು, ಖಾಸಗಿ ವಲಯ, ನವೋದ್ಯಮಗಳು ಮತ್ತು ವಿದ್ಯಾರ್ಥಿಗಳು ಈ ಪ್ರಯತ್ನದಲ್ಲಿ ಒಂದಾಗಿದ್ದಾರೆ. ಇಂದು ನಮ್ಮ ನಡುವೆ ನೊಬೆಲ್ ಪ್ರಶಸ್ತಿ ವಿಜೇತರು ಇರುವುದು ನಮಗೆ ಗೌರವದ ವಿಷಯವಾಗಿದೆ. ನಾನು ನಿಮ್ಮೆಲ್ಲರನ್ನೂ ತುಂಬಾ ಅಭಿನಂದಿಸುತ್ತೇನೆ. ಈ ಸಮಾವೇಶಕ್ಕೆ ನಾನು ನಿಮಗೆ ಶುಭ ಹಾರೈಸುತ್ತೇನೆ.

 

ಸ್ನೇಹಿತರೆ,

21ನೇ ಶತಮಾನದ ಈ ಯುಗವು ಹಿಂದೆಂದೂ ಕಾಣದ ಬದಲಾವಣೆಗಳ ಅವಧಿಯಾಗಿದೆ. ಇಂದು ನಾವು ಜಾಗತಿಕ ಕ್ರಮದಲ್ಲಿ ಹೊಸ ಬದಲಾವಣೆ ಕಾಣುತ್ತಿದ್ದೇವೆ. ಈ ಬದಲಾವಣೆಯ ವೇಗ ರೇಖೀಯವಲ್ಲ, ಆದರೆ ಘಾತೀಯವಾಗಿದೆ. ಈ ಚಿಂತನೆಯೊಂದಿಗೆ, ಇಂದು ಭಾರತವು ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಸಂಬಂಧಿಸಿದ ಈ ಎಲ್ಲಾ ಅಂಶಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ, ಅದರ ಮೇಲೆ ನಿರಂತರವಾಗಿ ಗಮನ ಹರಿಸುತ್ತಿದೆ. ಈಗ ಒಂದು ಉದಾಹರಣೆ ಸಂಶೋಧನಾ ನಿಧಿ. ನೀವೆಲ್ಲರೂ 'ಜೈ ಜವಾನ್, ಜೈ ಕಿಸಾನ್' ಎಂಬ ದೃಷ್ಟಿಕೋನವನ್ನು ಬಹಳ ಸಮಯದಿಂದ ತಿಳಿದಿದ್ದೀರಿ. ಸಂಶೋಧನೆಯ ಮೇಲೆ ಗಮನ ಕೇಂದ್ರೀಕರಿಸುವಾಗ, ನಾವು ಅದಕ್ಕೆ ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನವನ್ನು ಕೂಡ ಸೇರಿಸಿದ್ದೇವೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಹೆಚ್ಚಿಸಲು ನಾವು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿದ್ದೇವೆ. ಇದರೊಂದಿಗೆ ನಾವು ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆಯನ್ನು ಸಹ ಪ್ರಾರಂಭಿಸಿದ್ದೇವೆ. ಇದಕ್ಕಾಗಿ 1 ಲಕ್ಷ ಕೋಟಿ ರೂ. ನಿಧಿ ನಿಗದಿಪಡಿಸಲಾಗಿದೆ. ಈ 1 ಲಕ್ಷ ಕೋಟಿ ರೂ. ಹಣ ಮೋದಿ ಜಿ ಅವರೊಂದಿಗೆ ಉಳಿಯಲಿದೆ ಎಂದು ನೀವು ಭಾವಿಸುತ್ತಿರಬಹುದು, ಅದಕ್ಕಾಗಿಯೇ ನೀವು ಚಪ್ಪಾಳೆ ತಟ್ಟುತ್ತಿಲ್ಲ. ಈ 1 ಲಕ್ಷ ಕೋಟಿ ರೂ. ನಿಮಗಾಗಿ, ನಿಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಲು, ನಿಮಗೆ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯಲು. ಖಾಸಗಿ ವಲಯದಲ್ಲಿಯೂ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ನಮ್ಮ ಪ್ರಯತ್ನವಾಗಿದೆ. ಮೊದಲ ಬಾರಿಗೆ, ಹೆಚ್ಚಿನ ಅಪಾಯದ ಮತ್ತು ಹೆಚ್ಚಿನ ಪರಿಣಾಮ ಬೀರುವ ಯೋಜನೆಗಳಿಗೆ ಬಂಡವಾಳ ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಸ್ನೇಹಿತರೆ,

ಭಾರತದಲ್ಲಿ ನಾವೀನ್ಯತೆಗಳ ಆಧುನಿಕ ಪರಿಸರ ವ್ಯವಸ್ಥೆ ರೂಪಿಸಲು ನಾವು ಸಂಶೋಧನೆಯನ್ನು ಸುಲಭಗೊಳಿಸುವತ್ತ ಗಮನ ಹರಿಸುತ್ತಿದ್ದೇವೆ. ಈ ದಿಕ್ಕಿನಲ್ಲಿ, ನಮ್ಮ ಸರ್ಕಾರವು ಹಣಕಾಸು ನಿಯಮಗಳು ಮತ್ತು ಖರೀದಿ ನೀತಿಗಳಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದೆ. ಮೂಲಮಾದರಿಗಳು ಪ್ರಯೋಗಾಲಯದಿಂದ ಮಾರುಕಟ್ಟೆಗೆ ತ್ವರಿತವಾಗಿ ಚಲಿಸುವಂತೆ ನಾವು ನಿಯಮಗಳು, ಪ್ರೋತ್ಸಾಹಕ ಕ್ರಮಗಳು ಮತ್ತು ಪೂರೈಕೆ ಸರಪಳಿಗಳಲ್ಲಿಯೂ ಸುಧಾರಣೆಗಳನ್ನು ತಂದಿದ್ದೇವೆ.

 

ಸ್ನೇಹಿತರೆ,

ಭಾರತವನ್ನು ನಾವೀನ್ಯತಾ ಕೇಂದ್ರವನ್ನಾಗಿ ಮಾಡಲು ಕಳೆದ ಕೆಲವು ವರ್ಷಗಳಲ್ಲಿ ತೆಗೆದುಕೊಂಡ ನೀತಿಗಳು ಮತ್ತು ನಿರ್ಧಾರಗಳ ಪರಿಣಾಮ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾನು ಕೆಲವು ಅಂಕಿಅಂಶಗಳನ್ನು ಬಹಳ ತೃಪ್ತಿಯಿಂದ ನಿಮ್ಮ ಮುಂದೆ ಇಡಲು ಬಯಸುತ್ತೇನೆ. ನಾನು ಸ್ವಭಾವತಃ ಸುಲಭವಾಗಿ ತೃಪ್ತನಾಗುವ ವ್ಯಕ್ತಿಯಲ್ಲದಿದ್ದರೂ. ಆದರೆ ನನ್ನ ಈ ತೃಪ್ತಿ ಹಿಂದಿನ ಸಂದರ್ಭದಲ್ಲಿದೆ. ಭವಿಷ್ಯದ ಸಂದರ್ಭದಲ್ಲಿ ನನಗೆ ಇನ್ನೂ ಸಾಕಷ್ಟು ತೃಪ್ತಿ ಉಳಿದಿದೆ. ನಾನು ಬಹಳ ದೂರ ಸಾಗಬೇಕಾಗಿದೆ. ಕಳೆದ ದಶಕದಲ್ಲಿ, ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವು ದ್ವಿಗುಣಗೊಂಡಿದೆ, ಭಾರತದಲ್ಲಿ ನೋಂದಾಯಿತ ಪೇಟೆಂಟ್‌ಗಳ ಸಂಖ್ಯೆ 17 ಪಟ್ಟು, 17 ಪಟ್ಟು... 17 ಪಟ್ಟು ಹೆಚ್ಚಾಗಿದೆ. ಸ್ಟಾರ್ಟಪ್‌ಗಳಲ್ಲಿಯೂ ಸಹ, ಭಾರತವು ಈಗ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಪ್ ಪರಿಸರ ವ್ಯವಸ್ಥೆಯಾಗಿದೆ. ಇಂದು  ನಮ್ಮ 6,000ಕ್ಕೂ ಹೆಚ್ಚು ಡೀಪ್-ಟೆಕ್ ಸ್ಟಾರ್ಟಪ್‌ಗಳು ಸ್ವಚ್ಚ ಇಂಧನ, ಅಡ್ವಾನ್ಸ್ಡ್ ಮೆಟೀರಿಯಲ್ಸ್‌ನಂತಹ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಭಾರತದ ಸೆಮಿಕಂಡಕ್ಟರ್ ವಲಯವೂ ಈಗ ಉತ್ತುಂಗಕ್ಕೇರಿದೆ. ಜೈವಿಕ-ಆರ್ಥಿಕತೆಯ ಬಗ್ಗೆ ಹೇಳುವುದಾದರೆ, ಇದು 2014ರಲ್ಲಿ 10 ಶತಕೋಟಿ ಡಾಲರ್ ಮೌಲ್ಯದ್ದಾಗಿತ್ತು, ಇಂದು ಅದು ಸುಮಾರು 140 ಶತಕೋಟಿ ಡಾಲರ್‌ಗಳಿಗೆ ತಲುಪಿದೆ.

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಿಂದ ನಾವು ಹಲವಾರು ಉದಯೋನ್ಮುಕ ವಲಯಗಳಿಗೆ ಸ್ಥಳಾಂತರಗೊಂಡಿದ್ದೇವೆ. ಭಾರತವು ಈ ಎಲ್ಲಾ ಕ್ಷೇತ್ರಗಳಲ್ಲಿ ತನ್ನ 'ಭರವಸೆಯ ಉಪಸ್ಥಿತಿ'ಯನ್ನು ದಾಖಲಿಸಿದೆ - ಹಸಿರು ಹೈಡ್ರೋಜನ್, ಕ್ವಾಂಟಮ್ ಕಂಪ್ಯೂಟಿಂಗ್, ಆಳ ಸಮುದ್ರ ಸಂಶೋಧನೆ, ನಿರ್ಣಾಯಕ ಖನಿಜಗಳು.

ವಿಜ್ಞಾನವು ಪ್ರಮಾಣ ಪಡೆದಾಗ, ನಾವೀನ್ಯತೆ ಎಲ್ಲರನ್ನೂ ಒಳಗೊಳ್ಳುವಾಗ ಮತ್ತು ತಂತ್ರಜ್ಞಾನವು ಪರಿವರ್ತನೆ ತಂದಾಗ, ದೊಡ್ಡ ಸಾಧನೆಗಳಿಗೆ ಅಡಿಪಾಯ ಬಲಗೊಳ್ಳುತ್ತದೆ ಮತ್ತು ಸಿದ್ಧವಾಗುತ್ತದೆ. ಕಳೆದ 10–11 ವರ್ಷಗಳಲ್ಲಿ ಭಾರತದ ಪ್ರಯಾಣವು ಈ ದೃಷ್ಟಿಕೋನಕ್ಕೆ ಒಂದು ಉದಾಹರಣೆಯಾಗಿದೆ. ಭಾರತವು ಇನ್ನು ಮುಂದೆ ತಂತ್ರಜ್ಞಾನದ ಗ್ರಾಹಕರಲ್ಲ, ಆದರೆ ತಂತ್ರಜ್ಞಾನದ ಮೂಲಕ ರೂಪಾಂತರದ ಪ್ರವರ್ತಕವಾಗಿದೆ. ಕೋವಿಡ್ ಸಮಯದಲ್ಲಿ ನಾವು ದಾಖಲೆಯ ಸಮಯದಲ್ಲಿ ಸ್ಥಳೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಾವು ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ.

ಸ್ನೇಹಿತರೆ,

ಇಂತಹ ಬೃಹತ್ ಪ್ರಮಾಣದಲ್ಲಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವುದು ಹೇಗೆ ಸಾಧ್ಯ? ಇಂದು ಯಾರಾದರೂ ವಿಶ್ವದ ಮೊದಲ ಮತ್ತು ಅತ್ಯಂತ ಯಶಸ್ವಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹೊಂದಿದ್ದರೆ, ಆ ದೇಶ ಭಾರತವಾಗಿರುವುದರಿಂದ ಇದು ಸಾಧ್ಯವಾಯಿತು. ನಾವು 2 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕಿಸಿದ್ದೇವೆ. ನಾವು ಮೊಬೈಲ್ ಡೇಟಾವನ್ನು ಸಾರ್ವತ್ರೀಕರಣಗೊಳಿಸಿದ್ದೇವೆ.

 

ಸ್ನೇಹಿತರೆ,

ಅನೇಕ ವರ್ಷಗಳಲ್ಲಿ, ನಮ್ಮ ಬಾಹ್ಯಾಕಾಶ ಕಾರ್ಯಕ್ರಮವು ಚಂದ್ರ ಮತ್ತು ಮಂಗಳ ಗ್ರಹವನ್ನು ತಲುಪಿದ್ದರೂ, ನಾವು ನಮ್ಮ ರೈತರು ಮತ್ತು ಮೀನುಗಾರರನ್ನು ಬಾಹ್ಯಾಕಾಶ ವಿಜ್ಞಾನದ ಪ್ರಯೋಜನಗಳಿಗೆ ಸಂಪರ್ಕಿಸಿದ್ದೇವೆ. ಖಂಡಿತವಾಗಿಯೂ, ನೀವೆಲ್ಲರೂ ಈ ಎಲ್ಲಾ ಸಾಧನೆಗಳಿಗೆ ಕೊಡುಗೆ ನೀಡಿದ್ದೀರಿ.

ಸ್ನೇಹಿತರೆ,

ನಾವೀನ್ಯತೆ ಎಲ್ಲರನ್ನೂ ಒಳಗೊಂಡಾಗ, ಅದರ ಮುಖ್ಯ ಫಲಾನುಭವಿಗಳು ಸಹ ಅದರ ನಾಯಕರಾಗುತ್ತಾರೆ. ಭಾರತದ ಮಹಿಳೆಯರು ಇದಕ್ಕೆ ದೊಡ್ಡ ಉದಾಹರಣೆ ಆಗಿದ್ದಾರೆ. ನೀವು ನೋಡಿ, ಜಗತ್ತಿನಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳ ಬಗ್ಗೆ ಮಾತನಾಡುವಾಗಲೆಲ್ಲಾ, ಭಾರತೀಯ ಮಹಿಳಾ ವಿಜ್ಞಾನಿಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತದೆ. ಪೇಟೆಂಟ್ ಸಲ್ಲಿಕೆಯಲ್ಲೂ ಸಹ, ಒಂದು ದಶಕದ ಹಿಂದೆ ಭಾರತದಲ್ಲಿ ಮಹಿಳೆಯರು ವಾರ್ಷಿಕವಾಗಿ ಸಲ್ಲಿಸುವ ಪೇಟೆಂಟ್‌ಗಳ ಸಂಖ್ಯೆ 100ಕ್ಕಿಂತ ಕಡಿಮೆಯಿತ್ತು. ಈಗ ಅದು ವಾರ್ಷಿಕವಾಗಿ 5 ಸಾವಿರಕ್ಕೂ ಹೆಚ್ಚು ತಲುಪಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(STEM) ಶಿಕ್ಷಣದಲ್ಲಿಯೂ ಸಹ, ಮಹಿಳೆಯರ ಪಾಲು ಸುಮಾರು 43 ಪ್ರತಿಶತದಷ್ಟಿದೆ, ಇದು ಜಾಗತಿಕ ಸರಾಸರಿಗಿಂತ ಹೆಚ್ಚು. ನಾನು ವಿಶ್ವದ ಅಭಿವೃದ್ಧಿ ಹೊಂದಿದ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೊಂದಿಗೆ ಲಿಫ್ಟ್‌ನಲ್ಲಿ ಹೋಗುತ್ತಿದ್ದೆ. ಆದ್ದರಿಂದ, ನಾವಿಬ್ಬರೂ ಲಿಫ್ಟ್‌ನಲ್ಲಿ ಮಾತನಾಡುತ್ತಿರುವಾಗ, ಅವರು ನನ್ನನ್ನು ಕೇಳಿದರು, "ಭಾರತದ ಹುಡುಗಿಯರು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅನುಸರಿಸುತ್ತಾರೆಯೇ?" ಅಂದರೆ, ಅವರ ಮನಸ್ಸಿನಲ್ಲಿ ಅದು ದೊಡ್ಡ ಅದ್ಭುತವಾಗಿತ್ತು. ನನ್ನ ದೇಶದಲ್ಲಿ ಇಷ್ಟೊಂದು ಸಂಖ್ಯೆಗಳಿವೆ ಎಂದು ನಾನು ಅವರಿಗೆ ಹೇಳಿದಾಗ, ಅವರು ಆಘಾತಕ್ಕೊಳಗಾದರು. "ಭಾರತದ ಹೆಣ್ಣು ಮಕ್ಕಳು ಇದನ್ನು ಸಾಬೀತುಪಡಿಸಿದ್ದಾರೆ. ಇಂದಿಗೂ, ನಮ್ಮ ಹೆಣ್ಣು ಮಕ್ಕಳು ಮತ್ತು ಸಹೋದರಿಯರು ಇಲ್ಲಿ ಎಷ್ಟು ಜನ ಕುಳಿತಿದ್ದಾರೆಂದು ನಾನು ನೋಡುತ್ತೇನೆ. ಈ ಅಂಕಿಅಂಶಗಳು ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರು ಎಷ್ಟು ವೇಗವಾಗಿ ಮುನ್ನಡೆಯುತ್ತಿದ್ದಾರೆಂದು ನಮಗೆ ಹೇಳುತ್ತವೆ.

ಸ್ನೇಹಿತರೆ,

ಇತಿಹಾಸದಲ್ಲಿ ಕೆಲವು ಕ್ಷಣಗಳು ಹಲವು ತಲೆಮಾರುಗಳಿಗೆ ಪ್ರೇರಣೆ ನೀಡುತ್ತವೆ. ಕೆಲವು ವರ್ಷಗಳ ಹಿಂದೆ, ನಮ್ಮ ಮಕ್ಕಳು ಚಂದ್ರಯಾನದ ಪ್ರಯಾಣ ವೀಕ್ಷಿಸಿದರು, ಅದರ ಯಶಸ್ಸನ್ನು ಸಹ ಕಂಡರು, ಈ ಯಶಸ್ಸು ಅವರನ್ನು ವಿಜ್ಞಾನದ ಕಡೆಗೆ ದೊಡ್ಡ ರೀತಿಯಲ್ಲಿ ಆಕರ್ಷಿಸಲು ಒಂದು ಕಾರಣ ಮತ್ತು ಅವಕಾಶವಾಯಿತು. ಅವರು ವೈಫಲ್ಯ ಮತ್ತು ಯಶಸ್ಸು ಎರಡನ್ನೂ ಕಂಡಿದ್ದರು. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ನಿಲ್ದಾಣದ ಇತ್ತೀಚಿನ ಭೇಟಿಯು ಮಕ್ಕಳಲ್ಲಿ ಹೊಸ ಕುತೂಹಲ ಹುಟ್ಟುಹಾಕಿದೆ. ಹೊಸ ಪೀಳಿಗೆಯಲ್ಲಿ ಹುಟ್ಟಿಕೊಂಡಿರುವ ಈ ಕುತೂಹಲವನ್ನು ನಾವು ಬಳಸಿಕೊಳ್ಳಬೇಕು.

 

ಸ್ನೇಹಿತರೆ,

ನಾವು ಹೆಚ್ಚು ಪ್ರತಿಭಾವಂತ ಯುವಕರನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕಡೆಗೆ ನಿರ್ದೇಶಿಸಿದರೆ, ಅದು ಉತ್ತಮವಾಗಿರುತ್ತದೆ. ಈ ದೃಷ್ಟಿಕೋನದೊಂದಿಗೆ, ದೇಶಾದ್ಯಂತ ಸುಮಾರು 10,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯಗಳಲ್ಲಿ, 1 ಕೋಟಿಗೂ ಹೆಚ್ಚು ಮಕ್ಕಳು ಕುತೂಹಲ ಮತ್ತು ಸೃಜನಶೀಲತೆಯೊಂದಿಗೆ ಪ್ರಯೋಗ ನಡೆಸುತ್ತಿದ್ದಾರೆ. ಈ ಪ್ರಯೋಗಾಲಯಗಳ ಯಶಸ್ಸನ್ನು ನೋಡಿ, ನಾವು 25 ಸಾವಿರ ಹೊಸ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸಹ ರೂಪಿಸಲಿದ್ದೇವೆ ಎಂಬುದನ್ನು ತಿಳಿದು ನೀವು ಸಂತೋಷಪಡುತ್ತೀರಿ. ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ನೂರಾರು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ, 7 ಹೊಸ ಐಐಟಿಗಳು ಮತ್ತು 16 ಐಐಐಟಿಗಳನ್ನು ಸಹ ಸ್ಥಾಪಿಸಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ, ಯುವಜನರು ಈಗ ತಮ್ಮ ಸ್ಥಳೀಯ ಭಾಷೆಗಳಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಂತಹ STEM ಕೋರ್ಸ್‌ಗಳನ್ನು ಕಲಿಯಬಹುದು ಎಂಬುದನ್ನು ನಾವು ಖಚಿತಪಡಿಸಿದ್ದೇವೆ.

ಸ್ನೇಹಿತರೆ,

ನಮ್ಮ ಸರ್ಕಾರದ ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ ಯುವ ಸಂಶೋಧಕರಲ್ಲಿ ಬಹಳ ಯಶಸ್ವಿಯಾಗಿದೆ. ಈ ಯೋಜನೆಯಡಿ ಒದಗಿಸಲಾದ ಅನುದಾನಗಳು ಯುವ ಜನರಿಗೆ ಬಹಳ ಸಹಾಯ ಮಾಡಿವೆ. ಈಗ, ಮುಂದಿನ 5 ವರ್ಷಗಳಲ್ಲಿ 10,000 ಫೆಲೋಶಿಪ್‌ಗಳನ್ನು ನೀಡುವ ಮೂಲಕ ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸಲು ನಾವು ನಿರ್ಧರಿಸಿದ್ದೇವೆ.

ಸ್ನೇಹಿತರೆ,

ವಿಜ್ಞಾನ ಮತ್ತು ತಂತ್ರಜ್ಞಾನದ ಪರಿವರ್ತನಾ ಶಕ್ತಿಯನ್ನು ನಾವು ಅರ್ಥ ಮಾಡಿಕೊಳ್ಳುವುದು ಮತ್ತು ಅವುಗಳನ್ನು ನೈತಿಕವಾಗಿಸುವುದು ಮತ್ತು ಎಲ್ಲರನ್ನೂ ಸೇರಿಸುವುದು ಬಹಳ ಮುಖ್ಯ. ಉದಾಹರಣೆಗೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ನೋಡಿ, ಇಂದು ಚಿಲ್ಲರೆ ವ್ಯಾಪಾರದಿಂದ ಸರಕು ಸಾಗಣೆವರೆಗೆ, ಗ್ರಾಹಕ ಸೇವೆಯಿಂದ ಮಕ್ಕಳ ಮನೆ ಕೆಲಸದವರೆಗೆ ಎಲ್ಲೆಡೆ ಎಐ ಬಳಸಲಾಗುತ್ತಿದೆ. ಆದ್ದರಿಂದ, ಭಾರತದಲ್ಲಿ, ನಾವು ಎಐನ ಶಕ್ತಿಯನ್ನು ಸಮಾಜದ ಪ್ರತಿಯೊಂದು ವಿಭಾಗಕ್ಕೂ ಉಪಯುಕ್ತವಾಗಿಸುತ್ತಿದ್ದೇವೆ. ಭಾರತ ಎಐ ಮಿಷನ್‌ನಲ್ಲಿ 10,000 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆ ಮಾಡುತ್ತಿದೆ.

 

ಸ್ನೇಹಿತರೆ,

ಇಂದು ಭಾರತವು ನೈತಿಕ ಮತ್ತು ಮಾನವ ಕೇಂದ್ರಿತ ಎಐಗಾಗಿ ಜಾಗತಿಕ ಮಾರ್ಗಸೂಚಿ ರೂಪಿಸುತ್ತಿದೆ. ನಮ್ಮ ಮುಂಬರುವ ಎಐ ಆಡಳಿತ ಮಾರ್ಗಸೂಚಿ ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ. ಇದರ ಉದ್ದೇಶ ನಾವೀನ್ಯತೆ ಮತ್ತು ಸುರಕ್ಷತೆಯನ್ನು ಒಟ್ಟಿಗೆ ಅಭಿವೃದ್ಧಿಪಡಿಸುವುದು. ಮುಂದಿನ ವರ್ಷ ಫೆಬ್ರವರಿಯಲ್ಲಿ ಭಾರತವು ಜಾಗತಿಕ ಎಐ ಶೃಂಗಸಭೆಯನ್ನು ಆಯೋಜಿಸಿದಾಗ, ಎಲ್ಲರನ್ನೂ ಒಳಗೊಂಡ, ನೈತಿಕತೆಯ ಮತ್ತು ಮಾನವ ಕೇಂದ್ರಿತ ಎಐ ಕಡೆಗೆ ಪ್ರಯತ್ನಗಳು ಹೊಸ ವೇಗವನ್ನು ಪಡೆಯುತ್ತವೆ.

 

ಸ್ನೇಹಿತರೆ,

ಉದಯೋನ್ಮುಖ ಪ್ರದೇಶಗಳಲ್ಲಿ ನಾವು 2 ಪಟ್ಟು ಶಕ್ತಿಯೊಂದಿಗೆ ಕೆಲಸ ಮಾಡುವ ಸಮಯ ಈಗ ಬಂದಿದೆ. ಅಭಿವೃದ್ಧಿ ಹೊಂದಿದ ಭಾರತದ ನಮ್ಮ ಗುರಿ ಸಾಧಿಸಲು ಇದು ನಿರ್ಣಾಯಕವಾಗಿದೆ. ನಾನು ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ; ನಾವು ಆಹಾರ ಭದ್ರತೆಯನ್ನು ಮೀರಿ ಪೌಷ್ಟಿಕಾಂಶ ಭದ್ರತೆಯತ್ತ ಸಾಗಬೇಕು. ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ಜಗತ್ತಿಗೆ ಸಹಾಯ ಮಾಡುವ ಮುಂದಿನ ಪೀಳಿಗೆಯ ಜೈವಿಕ-ಬಲವರ್ಧಿತ ಬೆಳೆಗಳನ್ನು ನಾವು ಅಭಿವೃದ್ಧಿಪಡಿಸಬಹುದೇ? ರಾಸಾಯನಿಕ ಒಳಹರಿವುಗಳಿಗೆ ಪರ್ಯಾಯವಾಗಿ ಪರಿಣಮಿಸಬಹುದಾದ ಮತ್ತು ಮಣ್ಣಿನ ಆರೋಗ್ಯ ಸುಧಾರಿಸಬಹುದಾದ ಕಡಿಮೆ-ವೆಚ್ಚದ ಮಣ್ಣಿನ ಆರೋಗ್ಯ ವರ್ಧಕಗಳು ಮತ್ತು ಜೈವಿಕ-ಗೊಬ್ಬರಗಳಲ್ಲಿ ನಾವು ಅಂತಹ ನಾವೀನ್ಯತೆಗಳನ್ನು ತರಬಹುದೇ? ವೈಯಕ್ತಿಕಗೊಳಿಸಿದ ಔಷಧ ಮತ್ತು ರೋಗ ಮುನ್ಸೂಚನೆಗೆ ಹೊಸ ನಿರ್ದೇಶನಗಳನ್ನು ಒದಗಿಸಲು ಭಾರತದ ಜೀನೋಮಿಕ್ ವೈವಿಧ್ಯತೆಯನ್ನು ನಾವು ಉತ್ತಮವಾಗಿ ನಕ್ಷೆ ಮಾಡಬಹುದೇ? ಬ್ಯಾಟರಿಗಳಂತಹ ಸ್ವಚ್ಛ ಇಂಧನ ಸಂಗ್ರಹಣೆಯಲ್ಲಿ ನಾವು ಹೊಸ ಮತ್ತು ಕೈಗೆಟುಕುವ ನಾವೀನ್ಯತೆಗಳನ್ನು ಮಾಡಬಹುದೇ? ಪ್ರತಿಯೊಂದು ಕ್ಷೇತ್ರದಲ್ಲೂ, ನಾವು ಜಾಗತಿಕವಾಗಿ ಯಾವ ನಿರ್ಣಾಯಕ ಒಳಹರಿವುಗಳಿಗಾಗಿ ಅವಲಂಬಿತರಾಗಿದ್ದೇವೆ ಮತ್ತು ಅವುಗಳಲ್ಲಿ ಸ್ವಾವಲಂಬನೆಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ನಾವು ನೋಡಬೇಕು.

ಸ್ನೇಹಿತರೆ,

ವಿಜ್ಞಾನ ಮತ್ತು ತಂತ್ರಜ್ಞಾನ ರಂಗಕ್ಕೆ ಸಂಬಂಧಿಸಿದ ನೀವೆಲ್ಲರೂ ಈ ಪ್ರಶ್ನೆಗಳನ್ನು ಮೀರಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವಿರಿ ಎಂಬ ವಿಶ್ವಾಸ ನನಗಿದೆ. ನಿಮಗೆ ಆಲೋಚನೆಗಳಿದ್ದರೆ, ನಾನು ನಿಮ್ಮೊಂದಿಗಿದ್ದೇನೆ. ನಮ್ಮ ಸರ್ಕಾರವು ಸಂಶೋಧನೆಗೆ ಹಣಕಾಸು ಒದಗಿಸಲು ಮತ್ತು ವಿಜ್ಞಾನಿಗಳಿಗೆ ಅವಕಾಶಗಳನ್ನು ಒದಗಿಸಲು ಸಂಪೂರ್ಣ ಬದ್ಧವಾಗಿದೆ. ಈ ಸಮಾವೇಶದಲ್ಲಿ ಸಾಮೂಹಿಕ ಮಾರ್ಗಸೂಚಿ ಸಿದ್ಧಪಡಿಸಬೇಕೆಂದು ನಾನು ಬಯಸುತ್ತೇನೆ. ಈ ಸಮಾವೇಶವು ಭಾರತದ ನಾವೀನ್ಯತೆಯ ಪ್ರಯಾಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಮತ್ತೊಮ್ಮೆ, ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.

ಜೈ ವಿಜ್ಞಾನ್, ಜೈ ಅನುಸಂಧಾನ್.

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IGNOU, MSDE tie up to set up skill centres across 70 regional hubs

Media Coverage

IGNOU, MSDE tie up to set up skill centres across 70 regional hubs
NM on the go

Nm on the go

Always be the first to hear from the PM. Get the App Now!
...
Prime Minister Shares Timeless Wisdom from Yoga Shlokas in Sanskrit
December 10, 2025

The Prime Minister, Shri Narendra Modi, today shared a Sanskrit shloka highlighting the transformative power of yoga. The verses describe the progressive path of yoga—from physical health to ultimate liberation—through the practices of āsana, prāṇāyāma, pratyāhāra, dhāraṇā, and samādhi.

In a post on X, Shri Modi wrote:

“आसनेन रुजो हन्ति प्राणायामेन पातकम्।
विकारं मानसं योगी प्रत्याहारेण सर्वदा॥

धारणाभिर्मनोधैर्यं याति चैतन्यमद्भुतम्।
समाधौ मोक्षमाप्नोति त्यक्त्त्वा कर्म शुभाशुभम्॥”