Baba Saheb Ambedkar had a universal vision: PM Modi
Baba Saheb Ambedkar gave a strong foundation to independent India so the nation could move forward while strengthening its democratic heritage: PM
We have to give opportunities to the youth according to their potential. Our efforts towards this is the only tribute to Baba Saheb Ambedkar: PM

ನಮಸ್ಕಾರ!

ಈ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಇರುವ  ಗುಜರಾತಿನ  ರಾಜ್ಯಪಾಲ ಆಚಾರ್ಯ ಶ್ರೀ ದೇವ್ ವ್ರತ್ ಜಿ, ದೇಶದ ಶಿಕ್ಷಣ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜಿ, ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಜಿ, ಗುಜರಾತಿನ ಶಿಕ್ಷಣ ಸಚಿವರಾದ ಶ್ರೀ ಭೂಪೇಂದ್ರ ಸಿಂಗ್ ಜಿ, ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ.ಸಿಂಗ್ ಜಿ, ಬಾಬಾಸಾಹೇಬ್ ಅಂಬೇಡ್ಕರ್ ಓಪನ್ ಯೂನಿವರ್ಸಿಟಿ ಉಪಕುಲಪತಿಯವರಾದ ಪ್ರೊ.ಅಮಿ ಉಪಾಧ್ಯಾ ಜಿ, ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷರಾದ ಪ್ರೊ. ತಾಜ್ ಪ್ರತಾಪ್ ಜಿ, ಎಲ್ಲಾ ಗಣ್ಯರೇ ಮತ್ತು ಸ್ನೇಹಿತರೇ.

ಇಂದು ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಬಾಬಾಸಾಹೇಬ್ ಅಂಬೇಡ್ಕರ್ ಜಿ ಅವರ ಜನ್ಮದಿನಾಚರಣೆಯ ಸಂದರ್ಭವೂ ಸಹ ಆ ಮಹಾನ್ ಯಜ್ಞದೊಂದಿಗೆ ಮತ್ತು ಭವಿಷ್ಯದ ಸ್ಫೂರ್ತಿಯೊಂದಿಗೆ ನಮ್ಮನ್ನು ಜೋಡಿಸುತ್ತದೆ. ಕೃತಜ್ಞರಾಗಿರುವ ರಾಷ್ಟ್ರದ ಪರವಾಗಿ ಮತ್ತು ಎಲ್ಲಾ ದೇಶವಾಸಿಗಳ ಪರವಾಗಿ ನಾನು ಬಾಬಾಸಾಹೇಬರಿಗೆ ಗೌರವ ಸಲ್ಲಿಸುತ್ತೇನೆ.

ಸ್ನೇಹಿತರೇ,

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ನಮ್ಮ ಲಕ್ಷಾನುಗಟ್ಟಲೆ ಸ್ವಾತಂತ್ರ್ಯ ಹೋರಾಟಗಾರರು ಸಾಮರಸ್ಯ ಮತ್ತು ಅಂತರ್ಗತ ಭಾರತದ ಕನಸು ಕಂಡಿದ್ದರು.  ಆ ಕನಸುಗಳನ್ನು ಸಂವಿಧಾನದ ರೂಪದಲ್ಲಿ ದೇಶಕ್ಕೆ ಸಾಕಾರಗೊಳಿಸಲು ಬಾಬಾಸಾಹೇಬ್ ಪ್ರಾರಂಭವನ್ನು ಮಾಡಿದರು. ಇಂದು ಭಾರತವು ಅದೇ ಸಂವಿಧಾನವನ್ನು ಅನುಸರಿಸುವ ಮೂಲಕ ಹೊಸ ಭವಿಷ್ಯವನ್ನು ಸೃಷ್ಟಿಸುತ್ತಿದೆ ಮತ್ತು ಯಶಸ್ಸಿನ ಹೊಸ ಆಯಾಮಗಳನ್ನು ಸಾಧಿಸುತ್ತಿದೆ.

ಸ್ನೇಹಿತರೇ,

ಇಂದು, ಈ ಶುಭ ದಿನದಂದು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಉಪಕುಲಪತಿಗಳ 95 ನೇ ಸಭೆ ನಡೆಯುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಓಪನ್ ಯೂನಿವರ್ಸಿಟಿ 'ಬಾಬಾಸಾಹೇಬ್ ಸಮರಸ್ತಾ ಚೇರ್' ಸ್ಥಾಪನೆಯನ್ನು ಪ್ರಕಟಿಸಿದೆ. ಶ್ರೀ ಕಿಶೋರ್ ಮಕ್ವಾನಾ ಜಿ ಬರೆದ ನಾಲ್ಕು ಪುಸ್ತಕಗಳು ಬಾಬಾಸಾಹೇಬರ ಜೀವನ, ಅವರ ಆಲೋಚನೆಗಳು ಮತ್ತು ಆದರ್ಶಗಳ ಬಗ್ಗೆ ಬಿಡುಗಡೆಯಾಗಿವೆ. ಈ ಕಾರ್ಯಗಳಲ್ಲಿ ಭಾಗಿಯಾಗಿರುವ ಎಲ್ಲ ಗಣ್ಯರನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಭಾರತವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ತಾಯಿಯಾಗಿದೆ. ಪ್ರಜಾಪ್ರಭುತ್ವವು ನಮ್ಮ ನಾಗರಿಕತೆಯ ಅವಿಭಾಜ್ಯ ಅಂಗವಾಗಿದೆ ಮತ್ತು ನಮ್ಮ ಜೀವನ ವಿಧಾನವಾಗಿದೆ.  ಬಾಬಾಸಾಹೇಬ್ ಸ್ವತಂತ್ರ ಭಾರತಕ್ಕೆ ಬಲವಾದ ಅಡಿಪಾಯ ಹಾಕಿದರು, ಆದ್ದರಿಂದ ರಾಷ್ಟ್ರವು ತನ್ನ ಪ್ರಜಾಪ್ರಭುತ್ವ ಪರಂಪರೆಯನ್ನು ಬಲಪಡಿಸುವಾಗ ಮುಂದುವರಿಯಲು ಸಾಧ್ಯವಾಯಿತು. ನಾವು ಬಾಬಾಸಾಹೇಬರನ್ನು ಓದಿದಾಗ ಮತ್ತು ಅರ್ಥಮಾಡಿಕೊಂಡಾಗ, ಅವರು ಸಾರ್ವತ್ರಿಕ ದೃಷ್ಟಿಯ ಮಹಾನ್ ವ್ಯಕ್ತಿ ಎನ್ನುವುದು ನಮಗೆ ಅರಿವಾಗುತ್ತದೆ.

ಶ್ರೀ ಕಿಶೋರ್ ಮಕ್ವಾನಾ ಜಿ ಅವರ ಪುಸ್ತಕಗಳಲ್ಲಿ ಬಾಬಾಸಾಹೇಬನ  ತತ್ತ್ವಶಾಸ್ತ್ರದ ಸ್ಪಷ್ಟ ದೃಷ್ಟಿ ಇದೆ. ಅವರ ಪುಸ್ತಕವೊಂದರಲ್ಲಿ ಬಾಬಾಸಾಹೇಬರ “ಜೀವನ ದರ್ಶನ” (ಜೀವನದ ತತ್ವಶಾಸ್ತ್ರ) ವನ್ನು ಪರಿಚಯಿಸಿದರೆ, ಇನ್ನೊಂದು ಪುಸ್ತಕವು “ವ್ಯಕ್ಷಿ ದರ್ಶನ”(ವೈಯಕ್ತಿಕ ತತ್ವಶಾಸ್ತ್ರ) ದ ಮೇಲೆ ಕೇಂದ್ರೀಕರಿಸುತ್ತದೆ.  ಅದೇ ರೀತಿ, ಮೂರನೆಯ ಪುಸ್ತಕವು ಬಾಬಾಸಾಹೇಬನ “ರಾಷ್ಟ್ರ ದರ್ಶನ” (ರಾಷ್ಟ್ರೀಯ ತತ್ವಶಾಸ್ತ್ರ) ವನ್ನು ಎತ್ತಿ ತೋರಿಸುತ್ತದೆ,  ಆದರೆ ನಾಲ್ಕನೆಯ ಪುಸ್ತಕ “ಆಯಾಮ ದರ್ಶನ” ತನ್ನ ಆಯಾಮದ ತತ್ತ್ವವನ್ನು ದೇಶವಾಸಿಗಳಿಗೆ ಪರಿಚಯಿಸುತ್ತದೆ. ಈ ನಾಲ್ಕು ತತ್ತ್ವಚಿಂತನೆಗಳು ತಮ್ಮಲ್ಲಿರುವ ಆಧುನಿಕ ಗ್ರಂಥಗಳಿಗಿಂತ ಕಡಿಮೆಯಿಲ್ಲ.

ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಮ್ಮ ಹೊಸ ತಲೆಮಾರಿನವರು ಇಂತಹ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕೆಂದು ನಾನು ಬಯಸುತ್ತೇನೆ. ಈ ಎಲ್ಲ ಆಯಾಮಗಳು, ಅದು ಎಲ್ಲರನ್ನೂ ಒಳಗೊಂಡ ಸಮಾಜವಾಗಲಿ, ದಲಿತ ವಂಚಿತ ಸಮಾಜದ ಹಕ್ಕುಗಳ ಬಗೆಗಿನ ಕಾಳಜಿಯಾಗಲಿ, ಮಹಿಳೆಯರ ಉನ್ನತಿ ಮತ್ತು ಕೊಡುಗೆಯ ಪ್ರಶ್ನೆಯಾಗಲಿ, ಅಥವಾ ಶಿಕ್ಷಣದ ಬಗ್ಗೆ ಮತ್ತು ವಿಶೇಷವಾಗಿ ಉನ್ನತ ಶಿಕ್ಷಣದ ಬಗ್ಗೆ ಬಾಬಾಸಾಹೇಬರ ದೃಷ್ಟಿಕೋನವು ದೇಶದ ಯುವಕರಿಗೆ ಬಾಬಾಸಾಹೇಬನನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ.

ಸ್ನೇಹಿತರೇ,

ಡಾಕ್ಟರ್ ಅಂಬೇಡ್ಕರ್ ಹೇಳುತ್ತಿದ್ದರು:

"ನನ್ನ ಮೂರು ಪೂಜ್ಯ ದೇವತೆಗಳೆಂದರೆ - ಜ್ಞಾನ, ಸ್ವಾಭಿಮಾನ ಮತ್ತು ವಿನಯ." ಸ್ವಾಭಿಮಾನವು ಜ್ಞಾನದೊಂದಿಗೆ ಬರುತ್ತದೆ ಮತ್ತು ಒಬ್ಬ ವ್ಯಕ್ತಿಯು ಅವನ ಅಥವಾ ಅವಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತದೆ. ಸಮಾನ ಹಕ್ಕುಗಳ ಮೂಲಕ ಸಾಮಾಜಿಕ ಸಾಮರಸ್ಯವು ಹೊರಹೊಮ್ಮುತ್ತದೆ ಮತ್ತು ದೇಶವು ಪ್ರಗತಿಯಾಗುತ್ತದೆ.

ಬಾಬಾಸಾಹೇಬನ ಜೀವನದ ಹೋರಾಟಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಎಷ್ಟೋ ಹೋರಾಟಗಳ ನಂತರ ಬಾಬಾಸಾಹೇಬನು ತಲುಪಿದ ಸ್ಥಾನ ನಮ್ಮೆಲ್ಲರಿಗೂ ದೊಡ್ಡ ಪ್ರೇರಣೆಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ತೋರಿಸಿದ ಹಾದಿಯಲ್ಲಿ ದೇಶವನ್ನು ಮುಂದೆ ಸಾಗಿಸುವ ಜವಾಬ್ದಾರಿ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ವಿಶ್ವವಿದ್ಯಾಲಯಗಳಿಗೆ ಇದೆ. ಮತ್ತು ಇದು ಒಂದು ರಾಷ್ಟ್ರವಾಗಿ ಸಾಮಾನ್ಯ ಗುರಿಗಳು ಮತ್ತು ಹಂಚಿಕೆಯ ಪ್ರಯತ್ನಗಳ ವಿಷಯವಾದಾಗ, ಸಾಮೂಹಿಕ ಪ್ರಯತ್ನಗಳು ಸಾಧನೆಯ ಸಾಧನವಾಗುತ್ತವೆ.

ಆದ್ದರಿಂದ, ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಪಾತ್ರ ಬಹಳ ಮುಖ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಎಐಯು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಿ, ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ, ಶ್ರೀಮತಿ ಹನ್ಸಾ ಮೆಹ್ತಾ ಮತ್ತು ಡಾ. ಜಾಕಿರ್ ಹುಸೇನ್ ಅವರಂತಹ ವಿದ್ವಾಂಸರ ಪರಂಪರೆಯನ್ನು ಸಹ ಹೊಂದಿದೆ.

ಡಾ. ರಾಧಾಕೃಷ್ಣನ್ ಜಿ ಹೇಳುತ್ತಾರೆ: "ಶಿಕ್ಷಣದ ಅಂತಿಮ ಉತ್ಪನ್ನವು ಸ್ವತಂತ್ರ ಸೃಜನಶೀಲ ವ್ಯಕ್ತಿಯಾಗಿರಬೇಕು, ಅವರು ಐತಿಹಾಸಿಕ ಸಂದರ್ಭಗಳು ಮತ್ತು ಪ್ರಕೃತಿಯ ಪ್ರತಿಕೂಲಗಳ ವಿರುದ್ಧ ಹೋರಾಡಬಲ್ಲರು".

ಶಿಕ್ಷಣವು ವ್ಯಕ್ತಿಯನ್ನು ಸ್ವತಂತ್ರಗೊಳಿಸುವಂತಹದ್ದಾಗಿರಬೇಕು, ಇದರಿಂದ ಅವನು ಮುಕ್ತವಾಗಿ ಯೋಚಿಸಬಹುದು ಮತ್ತು ಹೊಸ ಆಲೋಚನೆಯೊಂದಿಗೆ ಹೊಸದನ್ನು ಮಾಡಬಹುದು. ನಮ್ಮ ಶಿಕ್ಷಣ ನಿರ್ವಹಣೆಯನ್ನು ನಾವು ಇಡೀ ಪ್ರಪಂಚದ ಒಂದು ಘಟಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಅವರು ನಂಬಿದ್ದರು. ಆದರೆ ಅದೇ ಸಮಯದಲ್ಲಿ ಅವರು ಶಿಕ್ಷಣದ ಭಾರತೀಯ ಸ್ವರೂಪಕ್ಕೆ ಒತ್ತು ನೀಡಿದರು. ಇಂದಿನ ಜಾಗತಿಕ ಸನ್ನಿವೇಶದಲ್ಲಿ ಇದು ಇನ್ನಷ್ಟು ಮಹತ್ವದ್ದಾಗಿದೆ.

ಇಲ್ಲಿ ಹೊಸ 'ರಾಷ್ಟ್ರೀಯ ಶಿಕ್ಷಣ ನೀತಿ' ಮತ್ತು ಅದರ ಅನುಷ್ಠಾನದ ಯೋಜನೆ ಕುರಿತು ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು. ಈ ವಿಷಯಗಳು ಹೇಗೆ ರಾಷ್ಟ್ರೀಯ ಶಿಕ್ಷಣ ನೀತಿಯು ಭವಿಷ್ಯದ ನೀತಿಯಾಗಿದೆ, ಜಾಗತಿಕ ನಿಯತಾಂಕಗಳ ನೀತಿಯಾಗಿದೆ ಎಂಬುದರ ವಿವರವಾದ ದಾಖಲೆಗಳಾಗಿವೆ. ನೀವೆಲ್ಲರೂ ವಿದ್ವಾಂಸರು ರಾಷ್ಟ್ರೀಯ ಶಿಕ್ಷಣ ನೀತಿಯ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದಿದ್ದೀರಿ. ಡಾ. ರಾಧಾಕೃಷ್ಣನ್ ಜಿ ಅವರು ಮಾತನಾಡಿದ ಶಿಕ್ಷಣದ ಉದ್ದೇಶ ಈ ನೀತಿಯ ತಿರುಳಿನಲ್ಲಿ ಪ್ರತಿಫಲಿಸುತ್ತದೆ.

ಈ ಬಾರಿ ವಿಚಾರಸಂಕಿರಣದ ವಿಷಯವೆಂದರೆ - 'ಭಾರತದಲ್ಲಿ ಉನ್ನತ ಶಿಕ್ಷಣವನ್ನು ಪರಿವರ್ತಿಸಲು ರಾಷ್ಟ್ರೀಯ ಶೈಕ್ಷಣಿಕ ನೀತಿ -2020 ಅನ್ನು ಜಾರಿಗೊಳಿಸುವುದು'. ಇದಕ್ಕಾಗಿ ನೀವೆಲ್ಲರೂ ಅಭಿನಂದನೆಗೆ ಅರ್ಹರು.

ನಾನು  ನಿರಂತರವಾಗಿ ತಜ್ಞರೊಂದಿಗೆ ಎನ್ಇಪಿಯನ್ನು ಚರ್ಚಿಸುತ್ತಿದ್ದೆ. ರಾಷ್ಟ್ರೀಯ ಶಿಕ್ಷಣ ನೀತಿ ಅದರ ಅನುಷ್ಠಾನದಷ್ಟೇ ಪ್ರಾಯೋಗಿಕವಾಗಿದೆ.

ಸ್ನೇಹಿತರೇ,

ನಿಮ್ಮ ಇಡೀ ಜೀವನವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದೀರಿ. ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನದೇ ಆದ ಕ್ಷಮತೆ ಮತ್ತು ಸಾಮರ್ಥ್ಯವಿದೆ ಎಂದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಈ ಸಾಮರ್ಥ್ಯಗಳ ಆಧಾರದ ಮೇಲೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಹ ಮೂರು ಪ್ರಶ್ನೆಗಳನ್ನು ಹೊಂದಿದ್ದಾರೆ.

ಮೊದಲನೆಯದು: ಅವರು ಏನು ಮಾಡಬಹುದು?

ಎರಡನೆಯದು: ಸರಿಯಾಗಿ ಕಲಿಸಿದರೆ ಅವರ ಸಾಮರ್ಥ್ಯ ಏನು?

ಮತ್ತು, ಮೂರನೆಯದಾಗಿ, ಅವರು ಏನು ಮಾಡಲು ಬಯಸುತ್ತಾರೆ?

ಒಬ್ಬ ವಿದ್ಯಾರ್ಥಿಯು ಏನು ಮಾಡಬಹುದೆನ್ನುವುದು ಅವನ ಆಂತರಿಕ ಶಕ್ತಿ. ಆದರೆ ನಾವು ಅವನ ಆಂತರಿಕ ಶಕ್ತಿಗೆ ಸಾಂಸ್ಥಿಕ ಶಕ್ತಿಯನ್ನು ಸೇರಿಸಿದರೆ, ಅವನ ಬೆಳವಣಿಗೆಯು ವಿಸ್ತಾರವಾಗುತ್ತದೆ. ಈ ಸಂಯೋಜನೆಯೊಂದಿಗೆ, ನಮ್ಮ ಯುವಕರು ಏನು ಮಾಡಬಯಸುವರೋ ಅದನ್ನು ಮಾಡಬಹುದು. ಆದ್ದರಿಂದ, ಕೌಶಲ್ಯ ಅಭಿವೃದ್ಧಿಗೆ ದೇಶದ ವಿಶೇಷ ಒತ್ತು. ಆತ್ಮ ನಿರ್ಭರ ಭಾರತ ಧ್ಯೇಯದೊಂದಿಗೆ ದೇಶವು ಮುಂದೆ ಸಾಗುತ್ತಿರುವಾಗ, ನುರಿತ ಯುವಕರ ಪಾತ್ರ ಮತ್ತು ಬೇಡಿಕೆಯೂ ಹೆಚ್ಚುತ್ತಿದೆ.

ಸ್ನೇಹಿತರೇ,

ಕೌಶಲ್ಯಗಳ ಬಲವನ್ನು ಗಮನದಲ್ಲಿಟ್ಟುಕೊಂಡು ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ದಶಕಗಳ ಹಿಂದೆ ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಸಹಯೋಗಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಇಂದು, ದೇಶವು ಅಪಾರ ಅವಕಾಶಗಳನ್ನು ಹೊಂದಿದೆ, ಮತ್ತು ಆಧುನಿಕ ಕಾಲದ ಹೊಸ ಕೈಗಾರಿಕೆಗಳಿವೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ಬಿಗ್ ಡಾಟಾ, 3 ಡಿ ಪ್ರಿಂಟಿಂಗ್, ವರ್ಚುವಲ್ ರಿಯಾಲಿಟಿ, ರೊಬೊಟಿಕ್ಸ್, ಮೊಬೈಲ್ ತಂತ್ರಜ್ಞಾನ, ಜಿಯೋ-ಇನ್ಫಾರ್ಮ್ಯಾಟಿಕ್ಸ್, ಸ್ಮಾರ್ಟ್ ಹೆಲ್ತ್‌ಕೇರ್ ಮತ್ತು ರಕ್ಷಣಾ ಕ್ಷೇತ್ರದ ಮುಂದಿನ ಕೇಂದ್ರವಾಗಿ ಭಾರತವನ್ನು ಕಾಣಲಾಗುತ್ತಿದೆ. ಈ ಅವಶ್ಯಕತೆಗಳನ್ನು ಪೂರೈಸಲು ದೇಶವು ಭಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ದೇಶದ ಮೂರು ದೊಡ್ಡ ಮಹಾನಗರಗಳಲ್ಲಿ ಭಾರತೀಯ ಕೌಶಲ್ಯ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಕಿಲ್ಸ್‌ನ ಮೊದಲ ಬ್ಯಾಚ್ ಈಗಾಗಲೇ ಕೆಲವು ತಿಂಗಳ ಹಿಂದೆ ಮುಂಬೈನಲ್ಲಿ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದೆ. ಫ್ಯೂಚರ್ ಸ್ಕಿಲ್ಸ್ ಇನಿಶಿಯೇಟಿವ್ ಅನ್ನು ನಾಸ್ಕಾಂನೊಂದಿಗೆ 2018 ರಲ್ಲಿ ಪ್ರಾರಂಭಿಸಲಾಯಿತು. ಈ ಉಪಕ್ರಮವು 10 ಉದಯೋನ್ಮುಖ ತಂತ್ರಜ್ಞಾನಗಳಲ್ಲಿ 150 ಕ್ಕೂ ಹೆಚ್ಚು ಕೌಶಲ್ಯ ಸೆಟ್‌ಗಳಲ್ಲಿ ತರಬೇತಿ ನೀಡುತ್ತದೆ.

ಸ್ನೇಹಿತರೇ,

ಶಿಕ್ಷಣದ ಹೊಸ ರಾಷ್ಟ್ರೀಯ ನೀತಿಯು ಎನ್‌ಇಟಿಎಫ್‌ಗೆ ಸಹ ಒದಗಿಸುತ್ತದೆ, ಇದು ಶಿಕ್ಷಣದಲ್ಲಿ ತಂತ್ರಜ್ಞಾನದ ಗರಿಷ್ಠ ಬಳಕೆಯನ್ನು ಒತ್ತಿಹೇಳುತ್ತದೆ. ಎಲ್ಲಾ ವಿಶ್ವವಿದ್ಯಾಲಯಗಳು ಬಹು ವಿಷಯದ್ದಾಗಿರಬೇಕು ಎಂದು ನಾವು ಬಯಸುತ್ತೇವೆ. ವಿದ್ಯಾರ್ಥಿಗಳಿಗೆ ಸುಲಭವಾಗಿ ಪ್ರವೇಶ ನಿರ್ಗಮನ ಮತ್ತು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಮೂಲಕ ಎಲ್ಲಿಯಾದರೂ ಸುಲಭವಾಗಿ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ನಾವು ಅವರಿಗೆ ಹೊಂದಿಕೊಳ್ಳುವ ಅವಕಾಶ ನೀಡಲು ಬಯಸುತ್ತೇವೆ. ಈ ಎಲ್ಲಾ ಗುರಿಗಳನ್ನು ಸಾಧಿಸಲು ದೇಶದ ಪ್ರತಿಯೊಂದು ವಿಶ್ವವಿದ್ಯಾಲಯವೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ಉಪಕುಲಪತಿಗಳು ಈ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ.

ದೇಶದಲ್ಲಿ ನಾವು ರಚಿಸಬಹುದಾದ ಹೊಸ ಸಾಧ್ಯತೆಗಳಿಗಾಗಿ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಬೃಹತ್ ಕೌಶಲ್ಯ ಪೂಲ್ ರಚಿಸಲಾಗುವುದು. ಈ ದಿಕ್ಕಿನಲ್ಲಿ ಹೆಚ್ಚು ತ್ವರಿತವಾಗಿ ಕೆಲಸ ಮಾಡಲು ನಿಮ್ಮೆಲ್ಲರನ್ನೂ ಕೋರಲಾಗಿದೆ ಮತ್ತು ನಿಗದಿತ ಸಮಯದೊಳಗೆ ಕೆಲಸವನ್ನು ಪೂರ್ಣಗೊಳಿಸಬೇಕು.

ಸ್ನೇಹಿತರೇ,

ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಜ್ಜೆಗಳನ್ನು ಅನುಸರಿಸಿ ಬಡವರು, ದಲಿತರು,  ದೀನರು, ಶೋಷಿತರು ಮತ್ತು ವಂಚಿತರ ಜೀವನವನ್ನು ದೇಶವು ವೇಗವಾಗಿ ಪರಿವರ್ತಿಸುತ್ತಿದೆ. ಬಾಬಾಸಾಹೇಬ್ ಸಮಾನ ಅವಕಾಶಗಳು ಮತ್ತು ಸಮಾನ ಹಕ್ಕುಗಳ ಬಗ್ಗೆ ಮಾತನಾಡಿದರು. ಇಂದು, ಜನ್ ಧನ್ ಖಾತೆಗಳಂತಹ ಯೋಜನೆಗಳು ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಸೇರ್ಪಡೆಗೆ ಕಾರಣವಾಗುತ್ತಿವೆ ಮತ್ತು ಡಿಬಿಟಿ ಹಣದ ಮೂಲಕ ನೇರವಾಗಿ ಅವರ ಖಾತೆಗಳಿಗೆ ತಲುಪುತ್ತಿದೆ. ಡಿಜಿಟಲ್ ಆರ್ಥಿಕತೆಗಾಗಿ ಪ್ರಾರಂಭಿಸಲಾದ ಭೀಮ್ ಯುಪಿಐ ಇಂದು ಬಡವರಿಗೆ ದೊಡ್ಡ ಶಕ್ತಿಯಾಗಿದೆ. ಇಂದು, ಪ್ರತಿಯೊಬ್ಬ ಬಡವನಿಗೆ ಮನೆ ಮತ್ತು ಉಚಿತ ವಿದ್ಯುತ್ ಸಂಪರ್ಕ ಸಿಗುತ್ತಿದೆ. ಅದೇ ರೀತಿ ಜಲ ಜೀವನ್ ಮಿಷನ್ ಅಡಿಯಲ್ಲಿ ಹಳ್ಳಿಗಳಿಗೆ ಶುದ್ಧ ನೀರು ಒದಗಿಸುವ ಕೆಲಸ ಪ್ರಗತಿಯಲ್ಲಿದೆ.

ಕೊರೊನಾ ಬಿಕ್ಕಟ್ಟು ಉಂಟಾದಾಗ, ದೇಶವು ಬಡವರಿಗೆ ಮತ್ತು ಕಾರ್ಮಿಕರ ನೆರವಿಗೆ ನಿಂತಿತು. ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಬಡವರು ಮತ್ತು ಶ್ರೀಮಂತರಲ್ಲಿ ಯಾವುದೇ ತಾರತಮ್ಯವಿಲ್ಲ. ಇದು ಬಾಬಾಸಾಹೇಬರು ತೋರಿಸಿದ ಮಾರ್ಗ ಮತ್ತು ಇವು ಅವರ ಆದರ್ಶಗಳು.

ಸ್ನೇಹಿತರೇ,

ಬಾಬಾಸಾಹೇಬ್ ಯಾವಾಗಲೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿದ್ದರು ಮತ್ತು ಈ ದಿಕ್ಕಿನಲ್ಲಿ ಅನೇಕ ಪ್ರಯತ್ನಗಳನ್ನು ಮಾಡಿದರು. ಈ ದೃಷ್ಟಿಯಿಂದಲೇ ದೇಶವು ಇಂದು ತನ್ನ ಹೆಣ್ಣುಮಕ್ಕಳಿಗೆ ಹೊಸ ಅವಕಾಶಗಳನ್ನು ನೀಡುತ್ತಿದೆ. ಮನೆಯಲ್ಲಿನ ಶೌಚಾಲಯಗಳ, ಶಾಲೆಗಳಿಂದ ಹಿಡಿದು ಸೈನ್ಯದಲ್ಲಿಯೂ ಕಾರ್ಯ ನಿರ್ವಹಿಸಲು ಮಹಿಳೆಯರು ಇಂದು ದೇಶದ ಪ್ರತಿಯೊಂದು ನೀತಿಯ ಕೇಂದ್ರದಲ್ಲಿದ್ದಾರೆ.

ಅದೇ ರೀತಿ ಬಾಬಾಸಾಹೇಬರ ಸಂದೇಶವನ್ನು ಜನರಿಗೆ ಹರಡಲು ದೇಶವು ಕೆಲಸ ಮಾಡುತ್ತಿದೆ. ಬಾಬಾಸಾಹೇಬ್‌ಗೆ ಸಂಬಂಧಿಸಿದ ಸ್ಥಳಗಳನ್ನು ಪಂಚ ತೀರ್ಥವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಕೆಲವು ವರ್ಷಗಳ ಹಿಂದೆ, ಡಾ.ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರವನ್ನು ಅರ್ಪಿಸಲು ನನಗೆ ಅವಕಾಶ ಸಿಕ್ಕಿತು. ಇಂದು, ಈ ಕೇಂದ್ರವು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಮತ್ತು ಬಾಬಾಸಾಹೇಬರ ಜೀವನದ ಕುರಿತಾದ ಸಂಶೋಧನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

ಸ್ನೇಹಿತರೇ,

ಇಂದು, ನಾವು ಸ್ವಾತಂತ್ರ್ಯದ 75 ವರ್ಷಗಳ ಹತ್ತಿರದಲ್ಲಿದ್ದೇವೆ ಮತ್ತು ಮುಂದಿನ 25 ವರ್ಷಗಳ ಗುರಿಗಳನ್ನು ಹೊಂದಿದ್ದೇವೆ. ದೇಶದ ಭವಿಷ್ಯ, ದೇಶದ ಭವಿಷ್ಯದ ಗುರಿಗಳು ಮತ್ತು ಯಶಸ್ಸುಗಳು ನಮ್ಮ ಯುವಕರೊಂದಿಗೆ ಸಂಬಂಧ ಹೊಂದಿವೆ. ಈ ನಿರ್ಣಯಗಳನ್ನು ಈಡೇರಿಸುವುದು ನಮ್ಮ ಯುವಕರು. ದೇಶದ ಯುವಕರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಅವಕಾಶಗಳನ್ನು ನೀಡಬೇಕಾಗಿದೆ.

ಶಿಕ್ಷಣ ಪ್ರಪಂಚದ ನಮ್ಮ ಸಾಮೂಹಿಕ ಸಂಕಲ್ಪ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನಗಳು ಹೊಸ ಭಾರತದ ಈ ಕನಸನ್ನು ನನಸಾಗಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

ನಮ್ಮ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮವು ಬಾಬಾಸಾಹೇಬರಿಗೆ ನೀಡುವ ನಮ್ಮ ಗೌರವವಾಗಿರುತ್ತದೆ.

ಈ ಶುಭಾಶಯಗಳೊಂದಿಗೆ, ನಾನು ಮತ್ತೊಮ್ಮೆ ನಿಮಗೆ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಈ ನವರಾತ್ರಿಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ನನ್ನ ವಿಶೇಷ ಶುಭಾಶಯಗಳನ್ನು ತಿಳಿಸುತ್ತೇನೆ.

ಬಹಳ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India leads globally in renewable energy; records highest-ever 31.25 GW non-fossil addition in FY 25-26: Pralhad Joshi.

Media Coverage

India leads globally in renewable energy; records highest-ever 31.25 GW non-fossil addition in FY 25-26: Pralhad Joshi.
NM on the go

Nm on the go

Always be the first to hear from the PM. Get the App Now!
...
Prime Minister condoles loss of lives due to a mishap in Nashik, Maharashtra
December 07, 2025

The Prime Minister, Shri Narendra Modi has expressed deep grief over the loss of lives due to a mishap in Nashik, Maharashtra.

Shri Modi also prayed for the speedy recovery of those injured in the mishap.

The Prime Minister’s Office posted on X;

“Deeply saddened by the loss of lives due to a mishap in Nashik, Maharashtra. My thoughts are with those who have lost their loved ones. I pray that the injured recover soon: PM @narendramodi”