“Key programmes of the last 8 years carry an insistence on environment protection”
“On World Environment Day, Prime Minister Shri Narendra Modi attended a programme on ‘Save Soil Movement’ today”
“India's role in climate change is negligible but India is working on a long term vision in collaboration with the International community on protecting the Environment”
“India has a five-pronged programme of soil conservation”
“Policies related to Biodiversity and Wildlife that India is following today have also led to a record increase in the number of wildlife”
“Today, India has achieved the target of 10 percent ethanol blending, 5 months ahead of schedule”
“In 2014 ethanol blending was at 1.5 percent”
“10 percent ethanol blending has led to reduction of 27 lakh tonnes of carbon emission, saved foreign exchange worth 41 thousand crore and earned 40 thousand 600 crores in the last 8 years to our farmers”

ನಮಸ್ಕಾರ!
ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು! ಈ ಸಂದರ್ಭದಲ್ಲಿ ಸದ್ಗುರು ಮತ್ತು ಇಶಾ ಫೌಂಡೇಶನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮಾರ್ಚ್‌ನಲ್ಲಿ ಅವರ ಸಂಸ್ಥೆಯು ಮಣ್ಣನ್ನು ಉಳಿಸಿ ಅಭಿಯಾನವನ್ನು ಆರಂಭಿಸಿತು. 27 ದೇಶಗಳ ಮೂಲಕ ಅವರ ಪಯಣ ಇಂದು 75ನೇ ದಿನಕ್ಕೆ ಕಾಲಿಟ್ಟಿದೆ. ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ಮತ್ತು ಈ 'ಅಮೃತಕಾಲ'ದಲ್ಲಿ ಹೊಸ ಸಂಕಲ್ಪಗಳನ್ನು ಮಾಡುತ್ತಿರುವಾಗ, ಇಂತಹ ಜನಾಂದೋಲನಗಳು ಪ್ರಮುಖವಾಗುತ್ತವೆ.


ಸ್ನೇಹಿತರೇ,
ಕಳೆದ 8 ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಪರಿಸರವನ್ನು ಯಾವುದಾದರೂ ರೀತಿಯಲ್ಲಿ ರಕ್ಷಿಸಲು ಅಂತರ್ಗತವಾದ ಉದ್ದೇಶ ಹೊಂದಿವೆ ಎಂದು ನನಗೆ ಸಂತೋಷವಾಗಿದೆ. ಸ್ವಚ್ಛ ಭಾರತ ಅಭಿಯಾನ ಅಥವಾ ತ್ಯಾಜ್ಯದಿಂದ ಸಂಪತ್ತು ಸೃಷ್ಟಿಗೆ ಸಂಬಂಧಿಸಿದ ಯೋಜನೆಗಳು, ಅಮೃತ್ ಮಿಷನ್ ಅಡಿಯಲ್ಲಿ ನಗರಗಳಲ್ಲಿ ಆಧುನಿಕ ಕೊಳಚೆ ಸಂಸ್ಕರಣಾ ಘಟಕಗಳ ನಿರ್ಮಾಣ ಅಥವಾ ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನ ಅಭಿಯಾನ ಅಥವಾ ನಮಾಮಿ ಗಂಗೆ ಯೋಜನೆಯ ಅಡಿಯಲ್ಲಿ ಗಂಗಾ ಶುದ್ಧೀಕರಣದ ಅಭಿಯಾನ, ಅಥವಾ ಸೌರ ಶಕ್ತಿಯ ಮೇಲೆ ಒತ್ತು, ಒಂದು ಸೂರ್ಯ-ಒಂದು ಗ್ರಿಡ್ ಅಥವಾ ಎಥೆನಾಲ್ ಉತ್ಪಾದನೆ ಮತ್ತು ಮಿಶ್ರಣ ಎರಡರಲ್ಲೂ ಹೆಚ್ಚಳ ಇವೆಲ್ಲವೂ ಪರಿಸರವನ್ನು ರಕ್ಷಿಸಲು ಭಾರತದ ಬಹುಮುಖ ಪ್ರಯತ್ನಗಳಾಗಿವೆ. ಹವಾಮಾನ ಬದಲಾವಣೆಯ ಸಮಸ್ಯೆಯಿಂದ ಜಗತ್ತು ತತ್ತರಿಸಿರುವ ಸಮಯದಲ್ಲಿ ಭಾರತ ಈ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಹವಾಮಾನ ಬದಲಾವಣೆಯಂತಹ ವಿಪತ್ತಿನಲ್ಲಿ ಭಾರತದ ಪಾತ್ರವಿಲ್ಲ.
ವಿಶ್ವದ ದೊಡ್ಡ ದೇಶಗಳು ಭೂಮಿಯ ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವುದು ಮಾತ್ರವಲ್ಲ, ವಿಶ್ವದ ಅತಿ ಹೆಚ್ಚು ಇಂಗಾಲವನ್ನು ಹೊರಸೂಸುತ್ತಿವೆ. ಇಂಗಾಲದ ಹೊರಸೂಸುವಿಕೆಯ ಜಾಗತಿಕ ಸರಾಸರಿಯು ಪ್ರತಿ ವ್ಯಕ್ತಿಗೆ 4 ಟನ್‌ಗಳು; ಆದರೆ ಭಾರತದಲ್ಲಿ ತಲಾ ಇಂಗಾಲದ ಹೊರಸೂಸುವಿಕೆಯು ಪ್ರತಿ ವ್ಯಕ್ತಿಗೆ ಸುಮಾರು ಅರ್ಧ ಟನ್ ಮಾತ್ರ. ಇದರ ಹೊರತಾಗಿಯೂ, ಭಾರತವು ದೇಶದಲ್ಲಿ ಮಾತ್ರವಲ್ಲದೆ ಜಾಗತಿಕ ಸಮುದಾಯದೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಸಮಗ್ರ ವಿಧಾನದೊಂದಿಗೆ ಪರಿಸರ ಸಂರಕ್ಷಣೆಯ ಕೆಲಸ ಮಾಡುತ್ತಿದೆ. ಅಂತಾರಾಷ್ಟ್ರೀಯವಾಗಿ, ಭಾರತವು ವಿಪತ್ತು ತಾಳಿಕೆ ಮೂಲಸೌಕರ್ಯಗಳ ಒಕ್ಕೂಟದ (ಸಿ ಡಿ ಆರ್‌ ಐ) ರಚನೆಯ ನೇತೃತ್ವ ವಹಿಸಿದೆ ಮತ್ತು ಸದ್ಗುರು ಅವರು ಅಂತರರಾಷ್ಟ್ರೀಯ ಸೌರ ಒಕ್ಕೂಟ ಅಥವಾ ಐ ಎಸ್‌ ಎ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಳೆದ ವರ್ಷ, ಭಾರತವು 2070 ರ ವೇಳೆಗೆ ಇಂಗಾಲದ ನಿವ್ವಳ ಶೂನ್ಯ (ನೆಟ್‌ ಝೀರೋ) ಗುರಿಯನ್ನು ಸಾಧಿಸಲು ಪ್ರತಿಜ್ಞೆ ಮಾಡಿದೆ.


ಸ್ನೇಹಿತರೇ,
ಈ ಮಣ್ಣು ಅಥವಾ ಭೂಮಿ ನಮಗೆ ಪಂಚಭೂತಗಳಲ್ಲಿ ಒಂದು. ಬಹಳ ಹೆಮ್ಮೆಯಿಂದ ನಾವು ನಮ್ಮ ಹಣೆಗೆ ಮಣ್ಣನ್ನು ಹಚ್ಚಿಕೊಳ್ಳುತ್ತೇವೆ. ಆಟವಾಡುವಾಗ ಈ ನೆಲದ ಮೇಲೆಯೇ ಬಿದ್ದು ಎದ್ದು ಬೆಳೆಯುತ್ತೇವೆ. ಮಣ್ಣಿನ ಗೌರವಕ್ಕೆ ಕೊರತೆಯಿಲ್ಲ; ಮಣ್ಣಿನ ಮಹತ್ವವನ್ನು ಅರ್ಥಮಾಡಿಕೊಳ್ಳಲು ಯಾವುದೇ ಕೊರತೆಯಿಲ್ಲ. ದುರದೃಷ್ಟವಶಾತ್, ಮನುಕುಲದ ಚಟುವಟಿಕೆಗಳು ಮಣ್ಣಿಗೆ ಎಷ್ಟು ಹಾನಿಯನ್ನುಂಟುಮಾಡಿವೆ ಎಂಬುದನ್ನು ಒಪ್ಪಿಕೊಳ್ಳುವುದರಲ್ಲಿ ಕೊರತೆಯಿದೆ! ಮತ್ತು ಈಗಷ್ಟೇ ಸದ್ಗುರು ಅವರು ಹೇಳಿದಂತೆ, ಸಮಸ್ಯೆ ಏನೆಂದು ಎಲ್ಲರಿಗೂ ಗೊತ್ತಿದೆ! 
ನಾವು ಚಿಕ್ಕವರಿದ್ದಾಗ, ನಮಗೆ ಒಂದು ಪಾಠ ಹೇಳಿಕೊಡಲಾಗಿತ್ತು. ನಾನು ಗುಜರಾತಿಯಲ್ಲಿ ಓದಿದ್ದೇನೆ; ಇತರರು ತಮ್ಮ ತಮ್ಮ ಭಾಷೆಗಳಲ್ಲಿ ಓದಿರಬಹುದು.  ಆ ಕಥೆಯ ಪ್ರಕಾರ ದಾರಿಯಲ್ಲಿ ಒಂದು ಕಲ್ಲು ಬಿದ್ದಿತ್ತು. ಆ ಕಲ್ಲು ದಾರಿಗೆ ಅಡ್ಡಿಯಾಗುತ್ತಿದ್ದರಿಂದ ಅಲ್ಲಿ ಓಡಾಡುತ್ತಿದ್ದ ಜನರು ಸಿಟ್ಟಿಗೇಳುತ್ತಿದ್ದರು. ಕೆಲವರು ಆ ಕಲ್ಲಿಗೆ ಒದೆಯುತ್ತಿದ್ದರು, ಇನ್ನು ಕೆಲವರು ಈ ಕಲ್ಲು ಹಾಕಿದ್ದು ಯಾರು, ಎಲ್ಲಿಂದ ಬಂತು ಇತ್ಯಾದಿ ಕೇಳುತ್ತಿದ್ದರು. ಆದರೆ ಅದನ್ನು ಯಾರೂ ಎತ್ತಿ ಪಕ್ಕಕ್ಕೆ ಇಡಲಿಲ್ಲ. ಆದರೆ ಅಲ್ಲಿ ಹೋಗುತ್ತಿದ್ದ ಒಬ್ಬ ಸಂಭಾವಿತ ವ್ಯಕ್ತಿ ಮಾತ್ರ ದಾರಿಯಿಂದ ಆ ಕಲ್ಲನ್ನು ತೆಗೆದುಹಾಕಿದ. ಬಹುಶಃ, ಆತ ಸದ್ಗುರುವಿನಂತವನು.
ಯುಧಿಷ್ಠಿರ ಮತ್ತು ದುರ್ಯೋಧನನ ಭೇಟಿಯ ಕುರಿತು ಹೇಳುವಾಗ, ದುರ್ಯೋಧನನ ಕುರಿತು ಹೀಗೆ ಹೇಳಲಾಗಿದೆ - "जानाम धर्मं न च में प्रवृत्ति।।
ಅಂದರೆ, ನನಗೆ ನನ್ನ ಕರ್ತವ್ಯದ ಅರಿವಿದೆ, ಆದರೆ ಅದನ್ನು ಮಾಡಲು ನನಗೆ ಮನಸ್ಸಿಲ್ಲ; ನನಗೆ ಸಾಧ್ಯವಿಲ್ಲ; ಸತ್ಯ ಏನು ಎಂದು ನನಗೆ ತಿಳಿದಿದೆ, ಆದರೆ ನಾನು ಆ ದಾರಿಯಲ್ಲಿ ನಡೆಯಲು ಆಗುತ್ತಿಲ್ಲ. ಹಾಗಾಗಿ ಸಮಾಜದಲ್ಲಿ ಈ ಪ್ರವೃತ್ತಿ ಹೆಚ್ಚಾದಾಗ ಇಂತಹ ಬಿಕ್ಕಟ್ಟುಗಳು ತಲೆದೋರುತ್ತವೆ. ಆಗ, ಜನಾಂದೋಲನಗಳ ಮೂಲಕ, ಸಮಸ್ಯೆಗಳನ್ನು ಪರಿಹರಿಸಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು.
ಕಳೆದ ಎಂಟು ವರ್ಷಗಳಲ್ಲಿ ದೇಶವು ಮಣ್ಣನ್ನು ಉಳಿಸಲು ಅವಿರತವಾಗಿ ಶ್ರಮಿಸಿದೆ ಎಂದು ನನಗೆ ಖುಷಿಯಿದೆ. ಮಣ್ಣನ್ನು ಉಳಿಸಲು, ನಾವು ಐದು ಪ್ರಮುಖ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ.
ಮೊದಲನೆಯದಾಗಿ, ಮಣ್ಣನ್ನು ರಾಸಾಯನಿಕ ಮುಕ್ತ ಮಾಡುವುದು ಹೇಗೆ? ಎರಡನೆಯದಾಗಿ, ಮಣ್ಣಿನಲ್ಲಿ ವಾಸಿಸುವ ಜೀವಿಗಳನ್ನು, ಅಂದರೆ ತಾಂತ್ರಿಕ ಭಾಷೆಯಲ್ಲಿ ಮಣ್ಣಿನ ಸಾವಯವ ಅಂಶವನ್ನು ಉಳಿಸುವುದು ಹೇಗೆ? ಮತ್ತು ಮೂರನೆಯದಾಗಿ, ಮಣ್ಣಿನ ತೇವಾಂಶವನ್ನು ಕಾಪಾಡುವುದು ನಿರ್ವಹಿಸುವುದು? ಮಣ್ಣಿಗೆ ನೀರಿನ ಲಭ್ಯತೆಯನ್ನು ಹೆಚ್ಚಿಸುವುದು ಹೇಗೆ? ನಾಲ್ಕನೆಯದಾಗಿ, ಕಡಿಮೆ ಅಂತರ್ಜಲದಿಂದಾಗಿ ಮಣ್ಣಿಗಾಗುವ ಹಾನಿಯನ್ನು ತಡೆಯುವುದು ಹೇಗೆ? ಮತ್ತು ಐದನೆಯದಾಗಿ, ಅರಣ್ಯದ ವ್ಯಾಪ್ತಿ ಕಡಿಮೆಯಾಗುವುದರಿಂದ ಆಗುವ ಮಣ್ಣಿನ ನಿರಂತರ ಸವೆತವನ್ನು ನಿಲ್ಲಿಸುವುದು ಹೇಗೆ?

ಸ್ನೇಹಿತರೇ,
ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಆಗಿರುವ ದೊಡ್ಡ ಬದಲಾವಣೆ ಎಂದರೆ ದೇಶದ ಕೃಷಿ ನೀತಿ. ಈ ಹಿಂದೆ ನಮ್ಮ ದೇಶದ ರೈತನಿಗೆ ತನ್ನ ಮಣ್ಣಿನ ಬಗೆ, ಮಣ್ಣಿನ ಕೊರತೆ ಇತ್ಯಾದಿಗಳ ಬಗ್ಗೆ ಮಾಹಿತಿಯ ಕೊರತೆ ಇತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು ದೇಶದ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ನೀಡುವ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಮನುಷ್ಯರಿಗೆ ಆರೋಗ್ಯ ಕಾರ್ಡ್ ನೀಡಿದರೆ ಮೋದಿ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಆದರೆ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿದ ವಿಷಯದಲ್ಲಿ ಮಾಧ್ಯಮಗಳ ಸುದ್ದಿ ತೀರಾ ಅತ್ಯಲ್ಪ.
ದೇಶಾದ್ಯಂತ 22 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ರೈತರಿಗೆ ನೀಡಲಾಗಿದೆ. ಮತ್ತು ಕೇವಲ ಕಾರ್ಡ್‌ಗಳಲ್ಲದೇ ಮಣ್ಣಿನ ಪರೀಕ್ಷೆಗೆ ಸಂಬಂಧಿಸಿದ ಬೃಹತ್ ಜಾಲವನ್ನು ದೇಶಾದ್ಯಂತ ರಚಿಸಲಾಗಿದೆ. ಇಂದು, ದೇಶದ ಕೋಟಿಗಟ್ಟಲೆ ರೈತರು ಮಣ್ಣಿನ ಆರೋಗ್ಯ ಕಾರ್ಡ್‌ನಿಂದ ಪಡೆದ ಮಾಹಿತಿಯ ಆಧಾರದ ಮೇಲೆ ರಸಗೊಬ್ಬರಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಬಳಸುತ್ತಿದ್ದಾರೆ. ಇದರಿಂದ ರೈತರು ತಮ್ಮ ಕೃಷಿ ವೆಚ್ಚದಲ್ಲಿ ವೆಚ್ಚದಲ್ಲಿ ಸುಮಾರು ಶೇ. 8 ರಿಂದ 10 ರಷ್ಟು ಉಳಿಸಿದ್ದಾರೆ ಮತ್ತು ಇಳುವರಿಯಲ್ಲಿ ಶೇ. 5 ರಿಂದ 6 ರಷ್ಟು ಹೆಚ್ಚಳವನ್ನು ಕಂಡಿದ್ದಾರೆ. ಅಂದರೆ ಮಣ್ಣು ಆರೋಗ್ಯಕರವಾಗುತ್ತಿರುವುದರಿಂದ ಉತ್ಪಾದನೆಯೂ ಹೆಚ್ಚುತ್ತಿದೆ.
ಶೇ. 100 ರಷ್ಟು ಬೇವಿನ ಲೇಪನದ ಯೂರಿಯಾವು ಮಣ್ಣಿಗೆ ಸಾಕಷ್ಟು ಸಹಾಯ ಮಾಡಿದೆ. ಸೂಕ್ಷ್ಮ ನೀರಾವರಿ ಮತ್ತು ಅಟಲ್ ಭೂಜಲ ಯೋಜನೆಗೆ ಉತ್ತೇಜನ ನೀಡಿರುವುದರಿಂದ ದೇಶದ ಹಲವು ರಾಜ್ಯಗಳಲ್ಲಿ ಮಣ್ಣಿನ ಆರೋಗ್ಯ ಸುಧಾರಿಸುತ್ತಿದೆ. ಉದಾಹರಣೆಗೆ, ಅಪೌಷ್ಟಿಕತೆ, ಅನಾರೋಗ್ಯದ 2 ವರ್ಷದ ಮಗು ಇದ್ದರೆ ಅದರ ಆರೋಗ್ಯ ಉತ್ತಮವಾಗಿರುವುದಿಲ್ಲ. ಮಗುವಿನ ತೂಕ ಕಡಿಮೆ ಇರುತ್ತದೆ ಮತ್ತು ಎತ್ತರವಾಗಿ ಬೆಳೆಯುವುದಿಲ್ಲ. ಆದರೆ ಹಾಲು ಮತ್ತು ಇತರ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಯಾರಾದರೂ ತಾಯಿಗೆ ಸಲಹೆ ನೀಡುತ್ತಾರೆ. ಆ ಸಲಹೆಯಂತೆ, ತಾಯಿ ಅವನಿಗೆ ಪ್ರತಿದಿನ 10 ಲೀಟರ್ ಹಾಲು ಕೊಡುತ್ತಾಳೆ; ಅವನ ಆರೋಗ್ಯ ಚೆನ್ನಾಗಿರುತ್ತದೆಯೇ? ಆದರೆ, ಸಂವೇದನಾಶೀಲ ತಾಯಿಯು ತನ್ನ ಮಗುವಿಗೆ ಸ್ವಲ್ಪ ಪ್ರಮಾಣದ ಹಾಲು ನೀಡುತ್ತಾಳೆ, ದಿನಕ್ಕೆ ಎರಡು ಬಾರಿ, ಐದು ಬಾರಿ ಅಥವಾ ಏಳು ಬಾರಿ ಒಂದು ಚಮಚ ಹಾಲನ್ನು ಕುಡಿಸಿದರೆ, ಕ್ರಮೇಣ ಮಗುವಿನ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. 
ಬೆಳೆಗಳಿಗೂ ಅಷ್ಟೇ. ಅಪಾರ ಪ್ರಮಾಣದ ನೀರುಣಿಸಿದರೆ ಉತ್ತಮ ಫಸಲು ಬರುತ್ತದೆ ಎಂದಲ್ಲ. ಬದಲಾಗಿ, ಬೆಳೆಗೆ ಹನಿ ಹನಿ ನೀರನ್ನು ನೀಡಿದರೆ, ಅಂದರೆ ಪ್ರತಿ ಹನಿ ಹೆಚ್ಚು ಬೆಳೆ, ಅದು ಹೆಚ್ಚು ಉತ್ತಮವಾಗಿರುತ್ತದೆ. ಅನಕ್ಷರಸ್ಥ ತಾಯಿ ಕೂಡ ತನ್ನ ಮಗುವಿಗೆ ಹತ್ತು ಲೀಟರ್ ಹಾಲು ಕೊಡುವುದಿಲ್ಲ, ಆದರೆ ಕೆಲವೊಮ್ಮೆ ನಾವು ವಿದ್ಯಾವಂತರು ಇಡೀ ಹೊಲವನ್ನು ನೀರಿನಿಂದ ತುಂಬಿಸುತ್ತೇವೆ. ಹೇಗಾದರೂ, ನಾವು ಇಂತಹ ವಿಷಯಗಳಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಲೇ ಇರಬೇಕು.
ಮಳೆ ನೀರು ಹಿಡಿದಿಡಿ (ಕ್ಯಾಚ್ ದಿ ರೈನ್‌) ಯಂತಹ ಅಭಿಯಾನಗಳ ಮೂಲಕ ನಾವು ದೇಶದ ಜನರನ್ನು ಜಲ ಸಂರಕ್ಷಣೆಯೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಈ ವರ್ಷದ ಮಾರ್ಚ್‌ನಲ್ಲಿ ದೇಶದ 13 ಪ್ರಮುಖ ನದಿಗಳನ್ನು ಸಂರಕ್ಷಿಸುವ ಅಭಿಯಾನವೂ ಆರಂಭವಾಗಿದೆ. ಈ ಉಪಕ್ರಮದ ಅಡಿಯಲ್ಲಿ, ಜಲಮಾಲಿನ್ಯವನ್ನು ಕಡಿಮೆ ಮಾಡುವ ಜೊತೆಗೆ, ನದಿಗಳ ದಡದಲ್ಲಿ ಕಾಡುಗಳನ್ನು ಬೆಳೆಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ. ಇದು ಭಾರತದ ಅರಣ್ಯ ಪ್ರದೇಶವನ್ನು 7400 ಚದರ ಕಿಲೋಮೀಟರ್‌ಗಿಂತ ಹೆಚ್ಚು ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ. ಭಾರತವು ಕಳೆದ ಎಂಟು ವರ್ಷಗಳಲ್ಲಿ 20 ಸಾವಿರ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಅರಣ್ಯ ಪ್ರದೇಶವನ್ನು ಹೆಚ್ಚಿಸಿದೆ ಮತ್ತು ಈ ಉಪಕ್ರಮವು ಅರಣ್ಯವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.


ಸ್ನೇಹಿತರೇ,
ಭಾರತವು ಇಂದು ಅನುಸರಿಸುತ್ತಿರುವ ಜೀವವೈವಿಧ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ನೀತಿಗಳು ವನ್ಯಜೀವಿಗಳ ಸಂಖ್ಯೆಯನ್ನು ಹೆಚ್ಚಿಸಿವೆ. ಇಂದು ದೇಶದಲ್ಲಿ ಹುಲಿ, ಸಿಂಹ, ಚಿರತೆ ಮತ್ತು ಆನೆಗಳ ಸಂಖ್ಯೆ ಹೆಚ್ಚುತ್ತಿದೆ.


ಸ್ನೇಹಿತರೇ,
ದೇಶದಲ್ಲಿ ಮೊದಲ ಬಾರಿಗೆ, ನಮ್ಮ ಹಳ್ಳಿಗಳು ಮತ್ತು ನಗರಗಳನ್ನು ಸ್ವಚ್ಛವಾಗಿಡುವ, ಇಂಧನದಲ್ಲಿ ಸ್ವಾವಲಂಬನೆ ಸಾಧಿಸುವ, ಮಣ್ಣಿನ ಆರೋಗ್ಯವನ್ನು ಖಚಿತಪಡಿಸುವ ಮತ್ತು ರೈತರಿಗೆ ಹೆಚ್ಚುವರಿ ಆದಾಯವನ್ನು ಒದಗಿಸುವ ಅಭಿಯಾನಗಳನ್ನು ನಾವು ಒಟ್ಟಿಗೆ ಜೋಡಿಸಿದ್ದೇವೆ. ಗೋಬರ್ಧನ್ ಯೋಜನೆಯು ಅಂತಹ ಒಂದು ಪ್ರಯತ್ನವಾಗಿದೆ. ನಾನು ಗೋಬರ್ಧನ್ ಬಗ್ಗೆ ಮಾತನಾಡುವಾಗ, ಕೆಲವು ಜಾತ್ಯತೀತರು ಅದನ್ನು ಪ್ರಶ್ನಿಸಲು ಪ್ರಾರಂಭಿಸುತ್ತಾರೆ. ಅವರು ಅಸಮಾಧಾನಗೊಳ್ಳುತ್ತಾರೆ.
ಗೋಬರ್ಧನ್ ಯೋಜನೆಯಡಿ, ಗೋವಿನ ಸಗಣಿ ಮತ್ತು ಇತರ ಕೃಷಿ ತ್ಯಾಜ್ಯವನ್ನು ಜೈವಿಕ ಅನಿಲ ಘಟಕಗಳ ಮೂಲಕ ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ನೀವು ಎಂದಾದರೂ ಕಾಶಿ ವಿಶ್ವನಾಥ ಮಂದಿರಕ್ಕೆ ಹೋದರೆ, ದಯವಿಟ್ಟು ಕೆಲವು ಕಿಲೋಮೀಟರ್ ದೂರದಲ್ಲಿ ಸ್ಥಾಪಿಸಲಾಗಿರುವ ಗೋಬರ್ಧನ್ ಘಟಕಗಳನ್ನು ನೋಡಿ. ಈ ಗಿಡಗಳಿಂದ ತಯಾರಿಸಿದ ಸಾವಯವ ಗೊಬ್ಬರವನ್ನು ಹೊಲಗಳಲ್ಲಿ ಬಳಸಲಾಗುತ್ತಿದೆ. ಕಳೆದ 7-8 ವರ್ಷಗಳಲ್ಲಿ, 1600 ಕ್ಕೂ ಹೆಚ್ಚು ಹೊಸ ತಳಿಗಳ ಬೀಜಗಳು ರೈತರಿಗೆ ಲಭ್ಯವಿವೆ, ಇದರಿಂದ ನಾವು ಮಣ್ಣಿನ ಮೇಲೆ ಹೆಚ್ಚುವರಿ ಒತ್ತಡವನ್ನು ಹಾಕದೆ ಸಾಕಷ್ಟು ಉತ್ಪಾದಿಸಬಹುದು.


ಸ್ನೇಹಿತರೇ,
ಸಹಜ ಕೃಷಿಯು ಇಂದಿನ ನಮ್ಮ ಸವಾಲುಗಳಿಗೆ ಉತ್ತಮ ಪರಿಹಾರವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಗಂಗಾನದಿಯ ದಡದಲ್ಲಿರುವ ಹಳ್ಳಿಗಳಲ್ಲಿ ಸಹಜ ಕೃಷಿಗೆ ಉತ್ತೇಜನ ನೀಡಿ ಸಹಜ ಕೃಷಿಯ ಬೃಹತ್ ಕಾರಿಡಾರ್ ಸ್ಥಾಪಿಸಲು ನಿರ್ಧರಿಸಿದ್ದೇವೆ. ನಮ್ಮ ದೇಶದಲ್ಲಿ ಇದುವರೆಗೆ ಕೈಗಾರಿಕಾ ಕಾರಿಡಾರ್ ಮತ್ತು ರಕ್ಷಣಾ ಕಾರಿಡಾರ್ ಬಗ್ಗೆ ಕೇಳಿದ್ದೇವೆ. ಆದರೆ ಈಗ ನಾವು ಸಹಜ ಕೃಷಿಯ ಹೊಸ ಕಾರಿಡಾರ್ ಅಂದರೆ ಗಂಗಾ ದಡದಲ್ಲಿ ಕೃಷಿ ಕಾರಿಡಾರ್ ಅನ್ನು ಪ್ರಾರಂಭಿಸಿದ್ದೇವೆ. ಇದರೊಂದಿಗೆ ನಮ್ಮ ಹೊಲಗಳು ರಾಸಾಯನಿಕ ಮುಕ್ತವಾಗುವುದಲ್ಲದೆ, ನಮಾಮಿ ಗಂಗೆ ಅಭಿಯಾನಕ್ಕೂ ಹೊಸ ಚಾಲನೆ ದೊರೆಯಲಿದೆ. ಭಾರತವು 2030 ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ಬಂಜರು ಭೂಮಿಯನ್ನು ಮರುಸ್ಥಾಪಿಸುವ ಗುರಿ ಸಾಧಿಸಲು ಕಾರ್ಯನಿರ್ವಹಿಸುತ್ತಿದೆ.

ಸ್ನೇಹಿತರೇ,
ಪರಿಸರವನ್ನು ರಕ್ಷಿಸಲು, ಇಂದು ಭಾರತವು ಹೊಸ ಆವಿಷ್ಕಾರಗಳು ಮತ್ತು ಪರಿಸರ ಪರವಾದ ತಂತ್ರಜ್ಞಾನಕ್ಕೆ ನಿರಂತರವಾಗಿ ಒತ್ತು ನೀಡುತ್ತಿದೆ. ಮಾಲಿನ್ಯವನ್ನು ಕಡಿಮೆ ಮಾಡಲು ನಾವು ಬಿಎಸ್-5 ಮಾನದಂಡವನ್ನು ಅಳವಡಿಸಿಕೊಂಡಿಲ್ಲ ಎಂಬುದು ನಿಮಗೆಲ್ಲರಿಗೂ ತಿಳಿದಿದೆ; ಬದಲಿಗೆ, ನಾವು ಬಿಎಸ್-4 ರಿಂದ ನೇರವಾಗಿ ಬಿಎಸ್-6 ಗೆ ಜಿಗಿದಿದ್ದೇವೆ. ದೇಶಾದ್ಯಂತ ಎಲ್‌ಇಡಿ ಬಲ್ಬ್‌ಗಳನ್ನು ಒದಗಿಸಲು ನಾವು ಪ್ರಾರಂಭಿಸಿದ ಉಜಾಲಾ ಯೋಜನೆಯಿಂದಾಗಿ, ವಾರ್ಷಿಕವಾಗಿ ಸುಮಾರು 40 ಮಿಲಿಯನ್ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತಿದೆ. ಎಲ್ಲರೂ ಕೈಜೋಡಿಸಿದರೆ, ಪ್ರತಿಯೊಬ್ಬರ ಪ್ರಯತ್ನಗಳು ಬೃಹತ್ ಫಲಿತಾಂಶಗಳನ್ನು ತರಬಹುದು.‌
ಭಾರತವು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ನವೀಕರಿಸಬಹುದಾದ ಮೂಲಗಳಿಂದ ನಮ್ಮ ಇಂಧನ ಅಗತ್ಯಗಳನ್ನು ಪೂರೈಸಲು, ನಾವು ದೊಡ್ಡ ಗುರಿಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ನಮ್ಮ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇ.40 ಅನ್ನು ಪಳೆಯುಳಿಕೆಯೇತರ ಇಂಧನ ಆಧಾರಿತ ಮೂಲಗಳಿಂದ ಸಾಧಿಸುವ ಗುರಿಯನ್ನು ನಾವು ಹೊಂದಿದ್ದೆವು. ಭಾರತವು ತನ್ನ ನಿಗದಿತ ಅವಧಿಗಿಂತ 9 ವರ್ಷಗಳ ಮುಂಚಿತವಾಗಿ ಈ ಗುರಿಯನ್ನು ಸಾಧಿಸಿದೆ. ಇಂದು ನಮ್ಮ ಸೌರ ಶಕ್ತಿಯ ಸಾಮರ್ಥ್ಯ ಸುಮಾರು 18 ಪಟ್ಟು ಹೆಚ್ಚಾಗಿದೆ. ಹೈಡ್ರೋಜನ್ ಮಿಷನ್ ಮತ್ತು ಸುತ್ತೋಲೆ ನೀತಿ ಎರಡೂ ಪರಿಸರವನ್ನು ರಕ್ಷಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿವೆ. ಹಳೆಯ ವಾಹನಗಳಿಗೆ ಗುಜರಿ ನೀತಿಯನ್ನು ಜಾರಿಗೆ ತಂದಿದ್ದೇವೆ. ಈ ಗುಜರಿ ನೀತಿಯು ಪ್ರಮುಖ ಬದಲಾವಣೆಗಳಿಗೆ ಕಾರಣವಾಗಲಿದೆ. 

ಸ್ನೇಹಿತರೇ,
ಈ ಪ್ರಯತ್ನಗಳ ನಡುವೆಯೇ ಪರಿಸರ ದಿನದಂದು ಭಾರತ ಮತ್ತೊಂದು ಸಾಧನೆ ಮಾಡಿದೆ. ಅದೃಷ್ಟವಶಾತ್ ಇಂದು ನಾನು ಶುಭ ಸುದ್ದಿಯನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯಲ್ಲಿದ್ದೇನೆ. ಸಾಂಪ್ರದಾಯಿಕವಾಗಿ, ಭಾರತದಲ್ಲಿ ನೀವು ತೀರ್ಥಯಾತ್ರೆಯಿಂದ ಹಿಂದಿರುಗುವವರನ್ನು ಮುಟ್ಟಿದರೆ, ನಿಮಗೂ ಅರ್ಧದಷ್ಟು ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಇಂದು ನಾನು ಈ ಒಳ್ಳೆಯ ಸುದ್ದಿಯನ್ನು ದೇಶದೊಂದಿಗೆ ಹಂಚಿಕೊಳ್ಳುತ್ತಿದ್ದಂತೆ, ಪ್ರಪಂಚದಾದ್ಯಂತದ ಜನರು ಸಹ ಅದನ್ನು ಸವಿಯುತ್ತಾರೆ. ಹೌದು ಕೆಲವರು ಆನಂದವನ್ನು ಮಾತ್ರ ಹುಡುಕಬಹುದು. ಇಂದು ಭಾರತವು ಪೆಟ್ರೋಲ್‌ನಲ್ಲಿ ಶೇಕಡಾ 10 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದೆ.
ಭಾರತವು ನಿಗದಿಪಡಿಸಿಕೊಂಡಿದ್ದ ಸಮಯಕ್ಕಿಂತ 5 ತಿಂಗಳ ಮುಂಚಿತವಾಗಿ ಈ ಗುರಿಯನ್ನು ತಲುಪಿದೆ ಎಂದು ತಿಳಿದಾಗ ನೀವು ಹೆಮ್ಮೆಪಡುತ್ತೀರಿ. 2014ರಲ್ಲಿ ಭಾರತದಲ್ಲಿ ಕೇವಲ ಶೇ.1.5 ರಷ್ಟು ಎಥೆನಾಲ್ ಅನ್ನು ಮಾತ್ರ ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು ಎಂಬ ಅಂಶದಿಂದ ಈ ಸಾಧನೆಯ ಅಗಾಧತೆಯನ್ನು ನೀವು ಊಹಿಸಬಹುದು.

ಈ ಗುರಿಯನ್ನು ಮುಟ್ಟುವ ಮೂಲಕ ಭಾರತ ಮೂರು ನೇರ ಪ್ರಯೋಜನಗಳನ್ನು ಪಡೆದುಕೊಂಡಿದೆ. ಒಂದು, ಸುಮಾರು 27 ಲಕ್ಷ ಟನ್ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿದೆ. ಎರಡನೆಯದಾಗಿ, ಭಾರತವು 41 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಿದೇಶಿ ವಿನಿಮಯವನ್ನು ಉಳಿಸಿದೆ ಮತ್ತು ಮೂರನೇ ಪ್ರಮುಖ ಅನುಕೂಲವೆಂದರೆ ಎಥೆನಾಲ್ ಮಿಶ್ರಣದ ಹೆಚ್ಚಳದಿಂದ ದೇಶದ ರೈತರು 8 ವರ್ಷಗಳಲ್ಲಿ 40 ಸಾವಿರ ಕೋಟಿ ರೂ. ಗೂ ಹೆಚ್ಚು ಆದಾಯ ಗಳಿಸಿದ್ದಾರೆ. ಈ ಸಾಧನೆಗಾಗಿ ನಾನು ದೇಶದ ಜನತೆ, ದೇಶದ ರೈತರು ಮತ್ತು ದೇಶದ ತೈಲ ಕಂಪನಿಗಳನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,
ಇಂದು ದೇಶದಲ್ಲಿ ನಡೆಯುತ್ತಿರುವ ಪಿಎಂ-ರಾಷ್ಟ್ರೀಯ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಪರಿಸರವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗತಿ-ಶಕ್ತಿಯಿಂದಾಗಿ ದೇಶದಲ್ಲಿ ಲಾಜಿಸ್ಟಿಕ್ ವ್ಯವಸ್ಥೆ ಆಧುನಿಕವಾಗಲಿದ್ದು, ಸಾರಿಗೆ ವ್ಯವಸ್ಥೆ ಬಲಿಷ್ಠವಾಗಲಿದೆ. ಇದು ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ದೇಶದಲ್ಲಿನ ಬಹುಮಾದರಿ ಸಂಪರ್ಕ ಮತ್ತು ನೂರಕ್ಕೂ ಹೆಚ್ಚು ಹೊಸ ಜಲಮಾರ್ಗಗಳ ಕೆಲಸವು ಪರಿಸರವನ್ನು ರಕ್ಷಿಸಲು ಮತ್ತು ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಭಾರತಕ್ಕೆ ನೆರವಾಗುತ್ತದೆ.


ಸ್ನೇಹಿತರೇ,
ಭಾರತದ ಈ ಪ್ರಯತ್ನಗಳಲ್ಲಿ ಮತ್ತೊಂದು ಆಯಾಮವಿದೆ, ಅದರ ಬಗ್ಗೆ ಮಾತನಾಡುವುದು ವಿರಳ.  ಅದೇ ಹಸಿರು ಉದ್ಯೋಗಗಳ ವಿಷಯ. ಭಾರತವು ಪರಿಸರದ ಹಿತಾಸಕ್ತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಅವುಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುತ್ತಿದೆ, ಇದು ಹೆಚ್ಚಿನ ಸಂಖ್ಯೆಯ ಹಸಿರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಇದು ಕೂಡ ಯೋಚಿಸಬೇಕಾದ ವಿಷಯ.

ಸ್ನೇಹಿತರೇ,
ಪರಿಸರ ಸಂರಕ್ಷ ಣೆ, ಭೂಮಿಯ ರಕ್ಷಣೆ, ಮಣ್ಣನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜನಜಾಗೃತಿ ಹೆಚ್ಚಾದರೆ ಫಲಿತಾಂಶ ಇನ್ನಷ್ಟು ಉತ್ತಮವಾಗಲಿದೆ. ದೇಶಕ್ಕೆ, ದೇಶದ ಎಲ್ಲಾ ಸರ್ಕಾರಗಳಿಗೆ, ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಎಲ್ಲಾ ಸ್ವಯಂಸೇವಾ ಸಂಸ್ಥೆಗಳಿಗೆ ನನ್ನ ವಿನಂತಿ ಏನೆಂದರೆ, ತಮ್ಮ ಈ ಪ್ರಯತ್ನಗಳಲ್ಲಿ ಶಾಲಾ-ಕಾಲೇಜುಗಳು, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿಯನ್ನು ಸಂಯೋಜಿಸಿಕೊಳ್ಳಿ. 
ನಾನು 'ಆಜಾದಿ ಕಾ ಅಮೃತ್ ಮಹೋತ್ಸವ'ದಲ್ಲಿ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಇನ್ನೂ ಒಂದು ವಿನಂತಿಯನ್ನು ಮಾಡಲು ಬಯಸುತ್ತೇನೆ. ಮುಂದಿನ ವರ್ಷ ಆಗಸ್ಟ್ 15 ರೊಳಗೆ ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 75 ಅಮೃತ ಸರೋವರಗಳು ಇರುವಂತೆ ನೋಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರ ಮುಂದಿನ ಪೀಳಿಗೆಗೆ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಈ ಅಮೃತ ಸರೋವರಗಳು ತಮ್ಮ ಸುತ್ತಲಿನ ಮಣ್ಣಿನಲ್ಲಿ ತೇವಾಂಶವನ್ನು ಹೆಚ್ಚಿಸುತ್ತವೆ, ನೀರಿನ ಮಟ್ಟವು ಕಡಿಮೆಯಾಗುವುದನ್ನು ತಡೆಯುತ್ತವೆ ಮತ್ತು ಜೀವವೈವಿಧ್ಯತೆಯನ್ನು ಸುಧಾರಿಸುತ್ತವೆ. ನಾಗರಿಕರಾಗಿ, ಈ ಬೃಹತ್ ಸಂಕಲ್ಪದಲ್ಲಿ ಪ್ರತಿಯೊಬ್ಬರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದನ್ನು ನಾವೆಲ್ಲರೂ ಪರಿಗಣಿಸಬೇಕು.


ಸ್ನೇಹಿತರೇ,
ತ್ವರಿತ ಅಭಿವೃದ್ಧಿಯೊಂದಿಗೆ ಪರಿಸರದ ರಕ್ಷಣೆಯು ಸಮಗ್ರ ವಿಧಾನ ಮತ್ತು ಎಲ್ಲರ ಪ್ರಯತ್ನದಿಂದ ಮಾತ್ರ ಸಾಧ್ಯ. ಅದರಲ್ಲಿ ನಮ್ಮ ಜೀವನ ಶೈಲಿಯ ಪಾತ್ರವೇನು? ನಾವು ಅದನ್ನು ಹೇಗೆ ಬದಲಾಯಿಸಬೇಕು? ಈ ವಿಷಯಗಳ ಬಗ್ಗೆ ಇಂದು ರಾತ್ರಿಯ ಕಾರ್ಯಕ್ರಮದಲ್ಲಿ ಮಾತನಾಡಲಿದ್ದೇನೆ. ನಾನು ಅದರ ಬಗ್ಗೆ ವಿವರವಾಗಿ ಮಾತನಾಡಲಿದ್ದೇನೆ. ಏಕೆಂದರೆ ಆ ಕಾರ್ಯಕ್ರಮವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆಯಲಿದೆ. ಪರಿಸರಕ್ಕಾಗಿ ಜೀವನಶೈಲಿ ಅಂದರೆ ಮಿಷನ್ ಲೈಫ್ ಈ ಶತಮಾನದ ಚಿತ್ರಣವಾಗಿರುತ್ತದೆ. ಈ ಶತಮಾನದಲ್ಲಿ ಭೂಮಿಯ ಭವಿಷ್ಯವನ್ನು ಬದಲಾಯಿಸುವ ಕಾರ್ಯಾಚರಣೆಯ ಪ್ರಾರಂಭವು ಪಿ-3 ಅಂದರೆ ಪ್ರೊ-ಪ್ಲಾನೆಟ್-ಪೀಪಲ್‌ ಚಳುವಳಿಯಾಗಿದೆ. ಪರಿಸರದ ಜಾಗತಿಕ ಕರೆಗಾಗಿ ಜೀವನಶೈಲಿಯನ್ನು ಇಂದು ಸಂಜೆ ಪ್ರಾರಂಭಿಸಲಾಗುತ್ತಿದೆ. ಪರಿಸರವನ್ನು ಸಂರಕ್ಷಿಸುವ ಪ್ರಜ್ಞೆ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಅದರಲ್ಲಿ ಸೇರಬೇಕೆಂದು ನಾನು ಒತ್ತಾಯಿಸುತ್ತೇನೆ. ಇಲ್ಲವಾದರೆ ಮೈಮೇಲೆ ಹೊದಿಕೆ ಹೊದ್ದುಕೊಂಡು ಎಸಿ ಆನ್ ಮಾಡುವಂಥ ಬೂಟಾಟಿಕೆಯ ಸ್ಥಿತಿ ನಿರ್ಮಾಣವಾಗುತ್ತದೆ. ಅದೇ ಸಮಯದಲ್ಲಿ ನಾವು ಸೆಮಿನಾರ್‌ಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಸುದೀರ್ಘ ಭಾಷಣಗಳನ್ನು ಮಾಡುತ್ತೇವೆ!


ಸ್ನೇಹಿತರೇ,
ನೀವು ಇಡೀ ಮನುಕುಲಕ್ಕೆ ದೊಡ್ಡ ಸೇವೆ ಮಾಡುತ್ತಿದ್ದೀರಿ. ಸದ್ಗುರು ಅವರು ಬೈಕ್‌ನಲ್ಲಿ ಕೈಗೊಂಡಿರುವ ಈ ಸುದೀರ್ಘ ಮತ್ತು ಪ್ರಯಾಸಕರ ಪ್ರಯಾಣದಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಬಾಲ್ಯದಿಂದಲೂ ಅವರು ಅದರತ್ತ ಒಲವು ಹೊಂದಿದ್ದರೂ, ಅದು ನಿಜವಾಗಿಯೂ ಆಯಾಸದ ಕೆಲಸವಾಗಿದೆ. ನಾನು ಪ್ರವಾಸಗಳನ್ನು ಆಯೋಜಿಸುವಾಗ, ಯಾತ್ರೆಯನ್ನು ಆಯೋಜಿಸುವುದು ಎಂದರೆ ವಯಸ್ಸನ್ನು ಐದರಿಂದ ಹತ್ತು ವರ್ಷಗಳವರೆಗೆ ಕಡಿಮೆ ಮಾಡುವುದು ಎಂದು ನಾನು ನನ್ನ ಪಕ್ಷಕ್ಕೆ ಹೇಳುತ್ತೇನೆ. ಏಕೆಂದರೆ ಅದು ತುಂಬಾ ಶ್ರಮವನ್ನು ತೆಗೆದುಕೊಳ್ಳುತ್ತದೆ. ಸದ್ಗುರು ಅವರು ಪ್ರಯಾಣ ಮಾಡಿದ್ದಾರೆ ಮತ್ತು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಜಗತ್ತು ಮಣ್ಣಿನ ಮೇಲಿನ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಅದೇ ಸಮಯದಲ್ಲಿ ಭಾರತದ ಮಣ್ಣಿನ ಶಕ್ತಿಯ ಪರಿಚಯವನ್ನು ಮಾಡಿಕೊಳ್ಳಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ.
ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು.
ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Over 2.17 Crore UP Farmers Receive Rs 4,352 Crore As PM Modi Releases PM-Kisan Installment

Media Coverage

Over 2.17 Crore UP Farmers Receive Rs 4,352 Crore As PM Modi Releases PM-Kisan Installment
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the transformative impact of Yoga
June 22, 2026

The Prime Minister, Shri Narendra Modi, said that the remarkable success of the International Day of Yoga is proof that Yoga is not only helping millions of people across the world achieve physical well-being, but is also inspiring them to lead positive lives with confidence.

The Prime Minister shared a Sanskrit Subhashitam-

“चित्तप्रशमनोपायो योग इत्यभिधीयते। प्राणस्पन्दनिरोधो वा द्वेधा योगस्य धारणा॥”

The Subhashitam conveys that yoga is the means of completely calming and quieting the mind. To attain this goal, two principal methods of yoga are prescribed: calming the mind and regulating the flow of the breath.

The Prime Minister wrote on X;

“अंतर्राष्ट्रीय योग दिवस की बड़ी सफलता इस बात का प्रमाण है कि योग न केवल दुनियाभर में करोड़ों लोगों को शारीरिक रूप से स्वस्थ बना रहा है, बल्कि उन्हें आत्मविश्वास के साथ सकारात्मक जीवन जीने के लिए प्रेरित भी कर रहा है।

चित्तप्रशमनोपायो योग इत्यभिधीयते। प्राणस्पन्दनिरोधो वा द्वेधा योगस्य धारणा॥”