ಶೇರ್
 
Comments
ಕುಶಿನಗರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದೆಲ್ಲೆಡೆ ಇರುವ ಬೌದ್ಧ ಸಮಾಜದ ಭಕ್ತಿಗೆ ನೀಡಿರುವ ಗೌರವವಾಗಿದೆ: ಪ್ರಧಾನ ಮಂತ್ರಿ ಬಣ್ಣನೆ
“ಭಗವಾನ್ ಬುದ್ಧ ನಡೆದಾಡಿದ, ಆತನ ಗಾಢ ಪ್ರಭಾವವಿರುವ ಸ್ಥಳಗಳಿಗೆ ಉತ್ತಮ ಸಂಚಾರ ಸಂಪರ್ಕ ಅಭಿವೃದ್ಧಿಪಡಿಸಲು, ಬುದ್ಧನ ಅಪಾರ ಅನುಯಾಯಿಗಳು, ಭಕ್ತರಿಗೆ ಸಂಚಾರ ಸೌಲಭ್ಯ ಕಲ್ಪಿಸಲು ವಿಶೇಷ ಗಮನ ನೀಡಲಾಗಿದೆ”
“ಉಡಾನ್ ಯೋಜನೆ ಅಡಿ 900ಕ್ಕಿಂತ ಅಧಿಕ ಹೊಸ ವೈಮಾನಿಕ ಮಾರ್ಗಗಳ ಅಭಿವೃದ್ಧಿಗೆ ಅನುಮೋದನೆ, 350 ಮಾರ್ಗಗಳಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭ, 50ಕ್ಕಿಂತ ಅಧಿಕ ಹೊಸ ಏರ್ ಪೋರ್ಟ್ ಸೇವಾ ಕಾರ್ಯಾಚರಣೆ ಆರಂಭ”
“ಕುಶಿನಗರ್ ವಿಮಾನ ನಿಲ್ದಾಣಕ್ಕೆ ಮುನ್ನ ಉತ್ತರಪ್ರದೇಶದಲ್ಲಿ 8 ಹೊಸ ಏರ್ ಪೋರ್ಟ್ ಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. ಲಕ್ನೋ, ವಾರಾಣಸಿ ಮತ್ತು ಕುಶಿನಗರ್ ನಂತರ ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿ. ಅಯೋಧ್ಯ, ಅಲಿಘರ್, ಅಝಾಮ್ ಘರ್, ಚಿತ್ರಕೂಟ್, ಮೊರದಾಬಾದ್ ಮತ್ತು ಶ್ರವಸ್ತಿ ಏರ್ ಪೋರ್ಟ್ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿ”
“ಏರ್ ಇಂಡಿಯಾ ಅಭಿವೃದ್ಧಿ ನಿರ್ಧಾರವು ಭಾರತದ ವೈಮಾನಿಕ ರಂಗಕ್ಕೆ ಹೊಸ ಶಕ್ತಿ ನೀಡಲಿದೆ”
“ಇತ್ತೀಚೆಗೆ ಅನಾವರಣಗೊಳಿಸಿದ ಡ್ರೋನ್ ನೀತಿಯಿಂದಾಗಿ ಕೃಷಿಯಿಂದ ಆರೋಗ್ಯ ವಲಯದವರೆಗೆ, ವಿಕೋಪಗಳ ನಿರ್ವಹಣೆಯಿಂದ ರಕ್ಷಣಾ ಕ್ಷೇತ್ರದವರೆಗೆ ಜೀವನ ಬದಲಾವಣೆಯ ಪರಿವರ್ತನೆಗಳು ಆಗಲಿವೆ”

ಉತ್ತರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಜೀ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಜೀ, ಶ್ರೀ ಕಿರೆನ್ ರಿಜಿಜು, ಶ್ರೀ ಕೆಶೆನ್ ರೆಡ್ಡಿ, ಜನರಲ್ ವಿ.ಕೆ. ಸಿಂಗ್, ಶ್ರೀ ಅರ್ಜುನ್ ರಾಮ್ ಮೇಘ್ವಾಲ್, ಶ್ರೀಪಾದ್ ನಾಯಿಕ್, ಶ್ರೀಮತಿ ಮೀನಾಕ್ಷಿ ಲೇಖಿ, ಉತ್ತರ ಪ್ರದೇಶ ಸಚಿವರಾದ ಶ್ರೀ ನಂದಗೋಪಾಲ್ ನಂದಿ, ಸಂಸತ್ತಿನ ನನ್ನ ಸಹೋದ್ಯೋಗಿ ಶ್ರೀ ವಿಜಯ್ ಕುಮಾರ್ ದುಬೆ, ಶಾಸಕರಾದ ಶ್ರೀ ರಜನೀಕಾಂತ್ ಮಣಿ ತ್ರಿಪಾಠಿ, ವಿವಿಧ ರಾಷ್ಟ್ರಗಳ ರಾಯಭಾರಿಗಳು ಮತ್ತು ದೂತವಾಸ ಅಧಿಕಾರಿಗಳು ಮತ್ತು ಇಲ್ಲಿ ಉಪಸ್ಥಿತರಿರುವ ಎಲ್ಲ ಜನಪ್ರತಿನಿಧಿಗಳೇ....

ಸಹೋದರ, ಸಹೋದರಿಯರೇ!

ವಿಶ್ವಾದ್ಯಂತ ಇರುವ ಬೌದ್ಧ ಸಮಾಜಕ್ಕೆ ಭಾರತವು ಭಕ್ತಿ, ಧರ್ಮ, ನಂಬಿಕೆ ಮತ್ತು ಸ್ಫೂರ್ತಿಯ ತಾಣವಾಗಿದೆ. ನಾವಿಂದು ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸುವ ಮೂಲಕ ಬೌದ್ಧ ಸಮಾಜದ ಭಕ್ತಿಗೆ ಗೌರವ ಸಲ್ಲಿಸುತ್ತಿದ್ದೇವೆ. ಭಗವಾನ್ ಬುದ್ಧನಿಗೆ ಜ್ಞಾನೋದಯ (ಮನ ಪರಿವರ್ತನೆ) ಆದಾಗಿನಿಂದ ಹಿಡಿದು ಮಹಾಪರಿನಿರ್ವಾಣಕ್ಕೆ ಹೋಗುವ ತನಕ ಆತನ ಇಡೀ ಜೀವನ ಪಯಣಕ್ಕೆ ಈ ನೆಲವೇ ಸಾಕ್ಷಿಯಾಗಿದೆ, ಕರ್ಮಭೂಮಿಯಾಗಿದೆ. ಈ ಪವಿತ್ರ ನೆಲವಿಂದು ಇಡೀ ವಿಶ್ವಕ್ಕೆ ನೇರ ಸಂಪರ್ಕ ಕಲ್ಪಿಸಿಕೊಂಡಿದೆ. ಶ್ರೀಲಂಕಾ ಏರ್ ಲೈನ್ಸ್ ವಿಮಾನವಿಂದು ಈ ಪವಿತ್ರ ನೆಲ ಕುಶಿನಗರಕ್ಕೆ ಬಂದಿಳಿದು ಭಗವಾನ್ ಗೌತಮ ಬುದ್ಧನಿಗೆ ಗೌರವ ನಮನ ಸಲ್ಲಿಸಿದೆ. ಶ್ರೀಲಂಕಾ ವಿಮಾನದಲ್ಲಿ ಬಂದಿಳಿದ ನಿಯೋಗದ ಗಣ್ಯರನ್ನು ನಾನು ಆತ್ಮೀಯತೆಯಿಂದ, ಹೆಮ್ಮೆಯಿಂದ ಸ್ವಾಗತಿಸುತ್ತೇನೆ. ಇದೇ ದಿನ ಮಹಾಕವಿ ಮಹರ್ಷಿ ವಾಲ್ಮೀಕಿ ಜಯಂತಿ ಬಂದಿರುವುದು ಸಂತೋಷದ ಕಾಕತಾಳೀಯ ಸಂಗತಿ. ವಾಲ್ಮೀಕಿ ಮಹರ್ಷಿ ಅವರ ಸ್ಫೂರ್ತಿಯೊಂದಿಗೆ, ದೇಶವಿಂದು ಸಬ್ಕಾ ಸಾಥ್ ಮತ್ತು ಸಬ್ಕಾ ಪ್ರಯಾಸ್ ಸಹಾಯದೊಂದಿಗೆ ಸಬ್ಕಾ ವಿಕಾಸ್ ಪಥದಲ್ಲಿ ಮುನ್ನಡೆಯುತ್ತಿದೆ.

ಸ್ನೇಹಿತರೆ,

ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವು ದಶಕಗಳ ಕಾಲದ ಭರವಸೆ ಮತ್ತು ನಿರೀಕ್ಷೆಗಳ ಫಲವಾಗಿದೆ. ನನ್ನ ವೈಯಕ್ತಿಕ ಸಂತೋಷ ಇಂದು ದುಪ್ಪಟ್ಟಾಗಿದೆ. ಆಧ್ಯಾತ್ಮಿಕ ಪಯಣದ ಅನ್ವೇಷಕನಾಗಿ ಮಾನಸಿಕ ಸಂತೃಪ್ತಿಯ ಭಾವನೆ ನನ್ನನ್ನು ಆವರಿಸಿದೆ. ಅಲ್ಲದೆ, ಪೂರ್ವಾಂಚಲ್ ಭಾಗದ ಪ್ರತಿನಿಧಿಯಾಗಿ ಬದ್ಧತೆ ಸಾಧಿಸಿದ ಸುಸಂದರ್ಭ ಇದಾಗಿದೆ. ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲೋಕಾರ್ಪಣೆ ಸಂದರ್ಭದಲ್ಲಿ ಕುಶಿನಗರ,  ಭಾರತದ ಪೂರ್ವ ಭಾಗ ಪೂರ್ವಾಂಚಲ್|ನ ಮಹಾಜನತೆ ಹಾಗೂ ವಿಶ್ವಾದ್ಯಂತ ಇರುವ ಭಗವಾನ್ ಬುದ್ಧನ ಅಪಾರ ಅನುಯಾಯಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಭಗವಾನ್ ಬುದ್ಧ ಹೆಜ್ಜೆ ಇಟ್ಟಿರುವ, ಆತನ ಗಾಢ ಪ್ರಭಾವವಿರುವ ನೆಲೆಗಳಿಗೆ ಉತ್ತಮ ಸಂಪರ್ಕ ಸೌಲಭ್ಯ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ವಿಶೇಷ ಗಮನ ನೀಡುತ್ತಿದೆ. ಕುಶಿನಗರ ಅಭಿವೃದ್ಧಿಗೆ ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರ ಪ್ರಮುಖ ಆದ್ಯತೆ ನೀಡಿದೆ. ಭಗವಾನ್ ಬುದ್ಧನ ಜನ್ಮಸ್ಥಳ ಲುಂಬಿನಿ ಕುಶಿನಗರಕ್ಕೆ ಸಮೀಪದಲ್ಲೇ ಇದೆ. ನನ್ನ ಸಂಪುಟ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈಗಷ್ಟೇ ಈ ಬಗ್ಗೆ ವಿವರ ಮಾಹಿತಿ ನೀಡಿದ್ದಾರೆ. ಆದರೂ ನಾನು ಇಲ್ಲಿ ಮತ್ತೊಮ್ಮೆ ಈ ಪ್ರದೇಶದ ಮಹತ್ವ ಮತ್ತು ಅಭಿವೃದ್ಧಿ ಕುರಿತು ನೆನಪು ಮಾಡುತ್ತಿದ್ದೇನೆ. ಈ ಪ್ರದೇಶ ದೇಶದ ಕೇಂದ್ರಬಿಂದು ಎಂಬುದನ್ನು ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಕಪಿಲಾವಸ್ತು ಸಹ ಇಲ್ಲಿಗೆ ಸಮೀಪದಲ್ಲೇ ಇದೆ. ಭಗವಾನ್ ಗೌತಮ ಬುದ್ಧ ಚೊಚ್ಚಲ ಧರ್ಮ ಪ್ರವಚನ ನೀಡಿದ ಸಾರ್ ನಾಥ್ ಇಲ್ಲಿಗೆ 100-250 ಕಿ.ಮೀ. ಅಂತರದಲ್ಲಿದೆ. ಬುದ್ಧನಿಗೆ ಜ್ಞಾನೋದಯ(ಮನ ಪರಿವರ್ತನೆ)ವಾದ ಸ್ಥಳ ಬೋಧ್ ಗಯಾ ಇಲ್ಲಿಗೆ ಕೆಲವೇ ತಾಸುಗಳ ಪ್ರಯಾಣ ದೂರದಲ್ಲಿದೆ. ಆದ್ದರಿಂದ, ಈ ಪ್ರದೇಶವು ಮಹತ್ವದ ಧಾರ್ಮಿಕ ತಾಣವಾಗಿ, ಆಕರ್ಷಕ ನೆಲೆಯಾಗಿ ರೂಪುಗೊಂಡಿದೆ. ಭಾರತದಲ್ಲಿರುವ ಬುದ್ಧ ಅನುಯಾಯಿಗಳಿಗೆ ಮಾತ್ರವಲ್ಲದೆ, ಶ್ರೀಲಂಕಾ, ಥಾಯ್ಲೆಂಡ್, ಸಿಂಗಾಪುರ, ಲಾವೋಸ್, ಕಾಂಬೋಡಿಯಾ, ಜಪಾನ್, ಕೊರಿಯಾ ಇತ್ಯಾದಿ ದೇಶಗಳ ನಾಗರೀಕರಿಗೂ ಇದು ಗಮ್ಯತಾಣವಾಗಿದೆ.

ಸಹೋದರ, ಸಹೋದರಿಯರೇ, 

ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ ವೈಮಾನಿಕ ಸಂಪರ್ಕ ಮಾಧ್ಯಮವಾಗಿರದೆ, ಕೃಷಿಕರು, ಜಾನುವಾರು ಸಾಕಣೆದಾರರು, ವರ್ತಕರು, ವ್ಯಾಪಾರಸ್ಥರು, ಉದ್ಯಮಶೀಲರು ಮತ್ತು ಕಾರ್ಮಿಕರಿಗೆ ನೇರ ಪ್ರಯೋಜನ ಒದಗಿಸಲಿದೆ. ಉದ್ಯಮ ಮತ್ತು ವ್ಯಾಪಾರದ ಸಂಪೂರ್ಣ ಪರಿಸರ ಇಲ್ಲಿ ಅಭಿವೃದ್ಧಿಗೊಳ್ಳಲಿದೆ. ಪ್ರವಾಸೋದ್ಯಮ, ಟ್ಯಾಕ್ಸಿ ಚಾಲಕರು, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಸಣ್ಣ ಉದ್ದಿಮೆದಾರರು ಗರಿಷ್ಠ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಭಾಗದ ಯುವ ಸಮುದಾಯಕ್ಕೆ ಹಲವಾರು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಸಹೋದರ, ಸಹೋದರಿಯರೇ,

ಧಾರ್ಮಿಕ ತಾಣವೇ ಇರಲಿ, ವಿರಾಮ ಅಥವಾ ಮನರಂಜನೆಯ ತಾಣವೇ ಇರಲಿ, ಪ್ರವಾಸೋದ್ಯಮದ ಎಲ್ಲಾ ರೂಪಗಳಿಗೆ ಆಧುನಿಕ ಮೂಲಸೌಕರ್ಯ ಅತಿಮುಖ್ಯ. ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಅಭಿವೃದ್ಧಿ ಪೂರ್ವ ಷರತ್ತಾಗಿದೆ. ರೈಲು ಮಾರ್ಗ, ರಸ್ತೆ, ವೈಮಾನಿಕ ಮಾರ್ಗ, ಜಲಮಾರ್ಗ, ಹೋಟೆಲ್ ಗಳು, ಆಸ್ಪತ್ರೆಗಳು, ಅಂತರ್ಜಾಲ ಸಂಪರ್ಕ, ಸ್ವಚ್ಛತೆ, ಒಳಚರಂಡಿ ಸಂಸ್ಕರಣೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಸ್ಥಾಪನೆ ಮೂಲಕ ಆಧುನಿಕ ಮೂಲಸೌಕರ್ಯವು ಪರಿಪೂರ್ಣವಾಗಿರಬೇಕು. ಪ್ರವಾಸಿ ತಾಣಗಳಲ್ಲಿ ಸ್ವಚ್ಛ ಪರಿಸರ ಖಾತ್ರಿಪಡಿಸಬೇಕಾದರೆ,  ಈ ಎಲ್ಲಾ ಕಾಮಗಾರಿಗಳನ್ನು ಏಕಕಾಲದಲ್ಲಿ ಮಾಡಬೇಕು. 21ನೇ ಶತಮಾನದಲ್ಲಿ ಭಾರತವು ಈ ಕಾರ್ಯವಿಧಾನದಲ್ಲೇ ಮುನ್ನಡೆಯುತ್ತಿದೆ. ಇದೀಗ ಪ್ರವಾಸೋದ್ಯಮಕ್ಕೆ ಹೊಸ ಅಂಶವನ್ನು ಸೇರಿಸಲಾಗಿದೆ. ಅದೇನೆಂದರೆ, ಲಸಿಕೆ ನೀಡಿಕೆಯಲ್ಲಿ ಭಾರತದ ತ್ವರಿತ ಪ್ರಗತಿ ಸಾಧಿಸಲಾಗುತ್ತಿದೆ. ಇದರಿಂದ ವಿದೇಶಿ ಪ್ರವಾಸಿಗರಲ್ಲಿ ಆತ್ಮವಿಶ್ವಾಸ ತುಂಬಲಾಗುತ್ತಿದೆ. ಭಾರತದಲ್ಲಿ ವ್ಯಾಪಕವಾಗಿ ಲಸಿಕೆ ಹಾಕಲಾಗುತ್ತಿದೆ. ಪ್ರವಾಸ ಕೈಗೊಳ್ಳಲು, ಯಾವುದೇ ಕೆಲಸದ ನಿಮಿತ್ತ ಹೋಗಲು ಭಾರತ ಸುರಕ್ಷಿತ ತಾಣ ಎಂಬ ಭಾವನೆ ಅವರಲ್ಲಿ ಮೂಡುತ್ತಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆ ಆರಂಭವಾಗಿ 4 ವರ್ಷ ತುಂಬುತ್ತಿದೆ. ಈ ಯೋಜನೆ ಅಡಿ, ಕಳೆದ ಕೆಲವೇ ವರ್ಷಗಳಲ್ಲಿ 900ಕ್ಕಿಂತ ಹೆಚ್ಚಿನ ಹೊಸ ವೈಮಾನಿಕ ಮಾರ್ಗಗಳ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ಅವುಗಳ ಪೈಕಿ 350ಕ್ಕಿಂತ ಹೆಚ್ಚಿನ ಹೊಸ ಮಾರ್ಗಗಳಲ್ಲಿ ವೈಮಾನಿಕ ಸಂಚಾರ ಸೇವೆ ಆರಂಭವಾಗಿದೆ. 50ಕ್ಕಿಂತ ಹೆಚ್ಚಿನ ಹೊಸ ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಶುರು ಮಾಡಿವೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 200ಕ್ಕಿಂತ ಹೆಚ್ಚಿನ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್ ಗಳು ಮತ್ತು ಸಾಗರವಿಮಾನಗಳ ಜಾಲವನ್ನು ಸೃಜಿಸುವ ಯೋಜನೆ ರೂಪಿಸಲಾಗಿದೆ. ವೈಮಾನಿಕ ಸಂಚಾರ ಸೌಲಭ್ಯಗಳನ್ನು ಹೆಚ್ಚಿಸಿರುವ ಪರಿಣಾಮ, ದೇಶದ ಶ್ರೀಸಾಮಾನ್ಯ ಇದೀಗ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಾಗಿ ಕಾಣುತ್ತಿರುವ ವಾಸ್ತವ ಸಂಗತಿಗೆ ನಾನು ಮತ್ತು ನೀವೆಲ್ಲಾ ಸಾಕ್ಷಿಯಾಗಿದ್ದೇವೆ. ಮಧ್ಯಮ ವರ್ಗದ ಅಪಾರ ಜನರು ವಿಮಾನಗಳ ಪ್ರಯೋಜನಗಳನ್ನು ಹೆಚ್ಚಾಗಿ ಪಡೆಯುತ್ತಿದ್ದಾರೆ. ಉಡಾನ್ ಯೋಜನೆ ಅಡಿ, ಉತ್ತರ ಪ್ರದೇಶದಲ್ಲಿ ವೈಮಾನಿಕ ಸಂಚಾರ ಸ್ಥಿರವಾಗಿ ಸುಧಾರಣೆ ಕಾಣುತ್ತಿದೆ. ಉತ್ತರ ಪ್ರದೇಶದ 8 ವಿಮಾನ ನಿಲ್ದಾಣಗಳಿಂದ ವಿಮಾನಗಳು ಹಾರಾಡುತ್ತಿವೆ. ಲಕ್ನೋ, ವಾರಾಣಸಿ, ಕುಶಿನಗರ ಏರ್ ಪೋರ್ಟ್ ಗಳ ನಂತರ ಇದೀಗ ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದೆ. ಅದಲ್ಲದೆ, ಅಯೋಧ್ಯ, ಅಲಿಘರ್, ಅಝಾಮ್ ಘರ್, ಚಿತ್ರಕೂಟ್, ಮೊರದಾಬಾದ್ ಮತ್ತು ಶ್ರವಸ್ತಿಯಲ್ಲೂ ಏರ್ ಪೋರ್ಟ್ ಕಾಮಗಾರಿಗಳು ನಡೆಯುತ್ತಿವೆ. ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ವೈಮಾನಿಕ ಸಂಪರ್ಕವನ್ನು ಅತಿ ಶೀಘ್ರವೇ ಬಲಪಡಿಸಲಾಗುವುದು. ಮುಂದಿನ ಕೆಲವೇ ವಾರಗಳಲ್ಲಿ ದೆಹಲಿ ಮತ್ತು ಕುಶಿನಗರದ ನಡುವೆ ಸ್ಪೈಸ್ ಜೆಟ್ ವಿಮಾನಗಳು ನೇರ ಹಾರಾಟ ನಡೆಸಲಿವೆ ಎಂಬ ವಿಚಾರವನ್ನು ನಾನು ಕೇಳಿದ್ದೇನೆ. ಇನ್ನೂ ಕೆಲವು ಮಾರ್ಗಗಳಲ್ಲಿ ವಿಮಾನಗಳು ಹಾರಾಟ ನಡೆಸುವ ಕುರಿತು ಜ್ಯೋತಿರಾದಿತ್ಯ ಸಿಂಧಿಯಾ ಅವರು ನನಗೆ ತಿಳಿಸಿದರು. ಇದರಿಂದ ವಿಮಾನ ಪ್ರಯಾಣಿಕರು ಮತ್ತು ಭಕ್ತ ಸಮೂಹಕ್ಕೆ ಸಾಕಷ್ಟು ಅನುಕೂಲಗಳಾಗಲಿವೆ.

ಸ್ನೇಹಿತರೇ,

ಏರ್ ಇಂಡಿಯಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಅತಿ ಮುಖ್ಯವಾದ ಕ್ರಮವನ್ನು ಕೈಗೊಂಡಿದೆ. ಇದರಿಂದ ಭಾರತದ ವೈಮಾನಿಕ ಕ್ಷೇತ್ರ ವೃತ್ತಿಪರತೆಯಿಂದ ಕೆಲಸ ಮಾಡಲು, ಪ್ರಯಾಣಿಕರಿಗೆ ಅನುಕೂಲ ಮತ್ತು ಸುರಕ್ಷತೆ ಕಲ್ಪಿಸಲು ಆದ್ಯತೆ ನೀಡಿರುವ ಕೇಂದ್ರದ ಈ ಕ್ರಮವು ನೆರವಾಗಲಿದೆ. ಭಾರತದ ವೈಮಾನಿಕ ರಂಗಕ್ಕೆ ಇದು ಹೊಸ ಶಕ್ತಿ ನೀಡಲಿದೆ. ಮಹತ್ವದ ಸುಧಾರಣೆಗಳಲ್ಲಿ ಪ್ರಮುಖವಾದ ನಿರ್ಧಾರವೆಂದರೆ, ರಕ್ಷಣಾ ವಲಯದ ವೈಮಾನಿಕ ನೆಲೆಯನ್ನು ನಾಗರಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಈ ಮಹತ್ವದ ನಿರ್ಧಾರದಿಂದ ಹಲವು ವೈಮಾನಿಕ ಮಾರ್ಗಗಳಲ್ಲಿ ವಿಮಾನ ಪ್ರಯಾಣ ದೂರ ತಗ್ಗಲಿದೆ. ಪ್ರಯಾಣಿಕರಿಗೆ ಸಮಯ ಉಳಿಯಲಿದೆ. ದಣಿವು ಕಡಿಮೆ ಆಗಲಿದೆ. ದೇಶದ 5 ಏರ್ ಪೋರ್ಟ್ ಗಳಲ್ಲಿ 8 ಹೊಸ ವಿಮಾನ ಹಾರಾಟ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಭಾರತದ ಯುವ ಸಮುದಾಯಕ್ಕೆ ಇಲ್ಲಿ ಉನ್ನತ ತರಬೇತಿ ನೀಡಿ, ಉದ್ಯೋಗ ಕಲ್ಪಿಸಲಾಗುತ್ತದೆ. ತರಬೇತಿಗೆ ಏರ್ ಪೋರ್ಟ್ ಗಳ ಬಳಕೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಸರಳೀಕರಿಸಲಾಗಿದೆ. ಭಾರತ ಇತ್ತೀಚೆಗೆ ಅನಾವರಣಗೊಳಿಸಿದ ಡ್ರೋನ್ ನೀತಿಯ ಜೀವನ ಬದಲಾವಣೆಯ ಪರಿವರ್ತನೆಗಳನ್ನು ತರಲಿದೆ. ಈ ನೀತಿಯು ಕೃಷಿಯಿಂದ ಹಿಡಿದು ಆರೋಗ್ಯ ರಂಗದವರೆಗೆ, ವಿಪತ್ತು ನಿರ್ವಹಣೆಯಿಂದ ರಕ್ಷಣಾ ಕ್ಷೇತ್ರದವರೆಗೆ ಪರಿವರ್ತನೆಗಳನ್ನು ತರಲಿದೆ. ತರಬೇತಾದ ಮಾನವ ಸಂಪನ್ಮೂಲಗಳನ್ನು ಸೃಜಿಸಲು ಅಗತ್ಯವಾದ ಡ್ರೋನ್ ಗಳ ಉತ್ಪಾದನೆಗೆ ಪರಿಪೂರ್ಣವಾದ ಪರಿಸರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇತ್ತೀಚೆಗೆ ಪ್ರಧಾನ ಮಂತ್ರಿಗಳ ಗತಿಶಕ್ತಿ ರಾಷ್ಟ್ರೀಯ ಬೃಹತ್ ಯೋಜನೆ (ಮಾಸ್ಟರ್ ಪ್ಲಾನ್) ಯನ್ನು ಅನಾವರಣಗೊಳಿಸಲಾಗಿದೆ. ಇದರಿಂದ ಈ ಎಲ್ಲಾ ಯೋಜನೆಗಳು ಮತ್ತು ನೀತಿಗಳು ವೇಗವಾಗಿ ಜಾರಿಯಾಗಲಿದ್ದು, ಯಾವುದೇ ರೀತಿಯ ಅಡೆತಡೆಗಳು ಎದುರಾಗದು. ಇದರಿಂದ ಆಡಳಿತದಲ್ಲಿ ಸುಧಾರಣೆ ಕಂಡುಬರುವ ಜತೆಗೆ, ಎಲ್ಲಾ ರೂಪದ ಸಾರಿಗೆ ವ್ಯವಸ್ಥೆಗಳಾದ ರೈಲು, ರಸ್ತೆ, ವೈಮಾನಿಕ ಮಾರ್ಗ ಇತ್ಯಾದಿ ಪರಸ್ಪರ ಬೆಂಬಲ ನೀಡುತ್ತಾ, ಪ್ರತಿ ಸಾರಿಗೆ ವ್ಯವಸ್ಥೆಯ ಸಾಮರ್ಥ್ಯ ಹೆಚ್ಚಳವಾಗಲಿದೆ. ಅವಿರತ ಸುಧಾರಣಾ ಕ್ರಮಗಳ ಫಲವಾಗಿ, ಭಾರತದ ನಾಗರಿಕ ವಿಮಾನಯಾನ ವಲಯಕ್ಕೆ ಇನ್ನೂ 1 ಸಾವಿರ ಹೊಸ ವಿಮಾನಗಳನ್ನು ಸೇರಿಸಲು ಅಂದಾಜಿಸಲಾಗಿದೆ.

ಸ್ನೇಹಿತರೇ,

ದೇಶವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ, ಭಾರತದ ನಾಗರಿಕ ವಿಮಾನಯಾನ ಕ್ಷೇತ್ರವು ರಾಷ್ಟ್ರದ ಪ್ರಗತಿಯ ಸಂಕೇತವಾಗಲಿದೆ. ಉತ್ತರ ಪ್ರದೇಶದ ಶಕ್ತಿಯನ್ನು ಇದರಲ್ಲಿ ಸೇರಿಸಿಕೊಳ್ಳಲಾಗುವುದು. ಈ ಶುಭ ಕಾಮನೆಯೊಂದಿಗೆ, ನಾನು ನಿಮ್ಮೆಲ್ಲರನ್ನು, ವಿಶ್ವದೆಲ್ಲೆಡೆ ನೆಲೆಸಿರುವ ಬುದ್ಧನ ಅಪಾರ ಅನುಯಾಯಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಮಗೆಲ್ಲರಿಗೂ ಉತ್ತಮ ಮತ್ತು ಉತ್ಕೃಷ್ಟ ಸೇವೆ ಒದಗಿಸಲಿ ಎಂದು ಆಶಿಸುತ್ತೇನೆ. ಇಲ್ಲಿಂದ ನಾನು ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆಯಲು ತೆರಳುತ್ತಿದ್ದೇನೆ. ತದನಂತರ ನಾನು ಉತ್ತರ ಪ್ರದೇಶದ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸುವ ಸದವಕಾಶವನ್ನು ಪಡೆಯುತ್ತೇನೆ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.

 

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Symbol Of Confident, 21st Century India

Media Coverage

Symbol Of Confident, 21st Century India
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಮೇ 2023
May 29, 2023
ಶೇರ್
 
Comments

Appreciation For the Idea of Sabka Saath, Sabka Vikas as Northeast India Gets its Vande Bharat Train

PM Modi's Impactful Leadership – A Game Changer for India's Economy and Infrastructure