ʻಜಾಗತಿಕ ವ್ಯಾಪಾರ ಮೇಳʼ ಮತ್ತು ʻಇನ್ವೆಸ್ಟ್ ಯುಪಿ-2.0ʼಗೆ ಚಾಲನೆ ನೀಡಿದ ಪ್ರಧಾನಿ
ಪ್ರಧಾನಮಂತ್ರಿಯವರ ನಾಯಕತ್ವ ಮತ್ತು ಉತ್ತರಪ್ರದೇಶದಲ್ಲಿ ಬೆಳವಣಿಗೆಯ ಅವಕಾಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉದ್ಯಮ ನಾಯಕರು
"ಈಗ ಉತ್ತರ ಪ್ರದೇಶವು ಉತ್ತಮ ಆಡಳಿತ, ಉತ್ತಮ ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಸ್ಥಿರತೆಗೆ ಹೆಸರುವಾಸಿಯಾಗಿದೆ"
"ಇಂದು ಉತ್ತರ ಪ್ರದೇಶವು ಭರವಸೆ ಮತ್ತು ಸ್ಫೂರ್ತಿಯ ಮೂಲವಾಗಿದೆ"
"ದೇಶದ ಪ್ರತಿಯೊಬ್ಬ ನಾಗರಿಕನು ಅಭಿವೃದ್ಧಿಯ ಹಾದಿಯಲ್ಲಿ ನಡೆಯಲು ಬಯಸುತ್ತಾನೆ ಮತ್ತು 'ವಿಕಸಿತ ಭಾರತ'ಕ್ಕೆ ಸಾಕ್ಷಿಯಾಗಲು ಬಯಸುತ್ತಾನೆ"
"ಇಂದು, ಭಾರತವು ಕೈಗೊಂಡಿರುವ ಸುಧಾರಣೆಗಳು ಬಲವಂತದಿಂದಲ್ಲ, ಬದಲಿಗೆ ದೃಢನಿಶ್ಚಯದಿಂದ"
"ಹೊಸ ಮೌಲ್ಯ ಮತ್ತು ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಉತ್ತರ ಪ್ರದೇಶವು ಚಾಂಪಿಯನ್ ಆಗಿ ಹೊರಹೊಮ್ಮಿದೆ"
"ಒಂದೆಡೆ ಡಬಲ್ ಎಂಜಿನ್ ಸರ್ಕಾರದ ಸಂಕಲ್ಪ ಮತ್ತು ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿರುವ ಅಗಾಧ ಸಾಧ್ಯತೆಗಳು- ಇದಕ್ಕಿಂತ ಉತ್ತಮ ಪಾಲುದಾರಿಕೆ ಮತ್ತೊಂದಿರಲು ಸಾಧ್ಯವಿಲ್ಲ"

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಜಿ ಮತ್ತು ಬ್ರಜೇಶ್ ಪಾಠಕ್ ಜಿ, ಕೇಂದ್ರ ಸಂಪುಟದ ನನ್ನ ಹಿರಿಯ ಸಹೋದ್ಯೋಗಿ ಶ್ರೀ ರಾಜನಾಥ್ ಸಿಂಗ್ ಜಿ, ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಭಾಗವಹಿಸಿರುವ ವಿವಿಧ ದೇಶಗಳ ಗಣ್ಯರು, ಉತ್ತರ ಪ್ರದೇಶದ ಎಲ್ಲಾ ಸಚಿವರು ಮತ್ತು ಉದ್ಯಮದ ಗೌರವಾನ್ವಿತ ಸದಸ್ಯರು, ಜಾಗತಿಕ ಹೂಡಿಕೆದಾರರು, ನೀತಿ ನಿರೂಪಕರು, ಕಾರ್ಪೊರೇಟ್ ವಲಯದ ದಿಗ್ಗಜರು, ಲಕ್ನೋ ಜನಪ್ರತಿನಿಧಿಗಳು, ಮಹಿಳೆಯರು ಮತ್ತು ಮಹನೀಯರೆ!

ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತೇನೆ! ಮುಖ್ಯ ಅತಿಥಿಯಾಗಿ ನಿಮ್ಮನ್ನು ಸ್ವಾಗತಿಸುವ ಜವಾಬ್ದಾರಿಯನ್ನು ನಾನೇಕೆ ಹೊರುತ್ತಿದ್ದೇನೆ ಎಂದು ನೀವು ಯೋಚಿಸುತ್ತಿರಬೇಕು. ಏಕೆಂದರೆ ನನಗೆ ಇನ್ನೊಂದು ಪಾತ್ರವಿದೆ. ನೀವೆಲ್ಲರೂ ನನ್ನನ್ನು ಭಾರತದ ಪ್ರಧಾನಿಯನ್ನಾಗಿ ಮಾಡಿದ್ದೀರಿ ಮತ್ತು ಉತ್ತರ ಪ್ರದೇಶದ ಸಂಸದನಾಗಿ ಮಾಡಿದ್ದೀರಿ. ಹಾಗಾಗಿ, ಉತ್ತರ ಪ್ರದೇಶದ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ.  ಉತ್ತರ ಪ್ರದೇಶದ ಜನರ ಬಗ್ಗೆಯೂ ನನಗೆ ವಿಶೇಷ ಜವಾಬ್ದಾರಿ ಇದೆ. ಇಂದು ಆ ಜವಾಬ್ದಾರಿಯನ್ನು ಪೂರೈಸಲು ನಾನು ಈ ಶೃಂಗಸಭೆಯ ಭಾಗವಾಗಿದ್ದೇನೆ. ಆದ್ದರಿಂದ, ಉತ್ತರ ಪ್ರದೇಶಕ್ಕೆ ಬಂದಿರುವ ಭಾರತ ಮತ್ತು ವಿದೇಶಗಳ ಎಲ್ಲಾ ಹೂಡಿಕೆದಾರರನ್ನು ನಾನು ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಉತ್ತರ ಪ್ರದೇಶವು ತನ್ನ ಸಾಂಸ್ಕೃತಿಕ ವೈಭವ, ಅದ್ಭುತ ಇತಿಹಾಸ ಮತ್ತು ಶ್ರೀಮಂತ ಪರಂಪರೆಗೆ ಹೆಸರುವಾಸಿ. ಅಷ್ಟೊಂದು ಸಾಮರ್ಥ್ಯ ಹೊಂದಿದ್ದರೂ, ಕೆಲವು ಅಹಿತಕರ ಸಂಗತಿಗಳು ಯುಪಿಯೊಂದಿಗೆ ಸಂಬಂಧ ಹೊಂದಿದ್ದವು. ಯುಪಿ ಅಭಿವೃದ್ಧಿ ಕಷ್ಟ ಎಂದು ಜನರು ಹೇಳುತ್ತಿದ್ದರು. ಇಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸುವುದು ಅಸಾಧ್ಯ ಎಂದು ಜನರು ಹೇಳುತ್ತಿದ್ದರು. ಯುಪಿಯನ್ನು ಬಿಮಾರು ರಾಜ್ಯ ಎಂದು ಕರೆಯಲಾಯಿತು. ನಿತ್ಯ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆಯುತ್ತಿತ್ತು. ಎಲ್ಲರೂ ಯುಪಿಯಲ್ಲಿ ತಮ್ಮ ಭರವಸೆ ಕೈಬಿಟ್ಟಿದ್ದರು. ಆದರೆ ಯುಪಿಯು ಕೇವಲ 5-6  ವರ್ಷಗಳಲ್ಲಿ ತನ್ನದೇ ಆದ ಹೊಸ ಗುರುತು ಸ್ಥಾಪಿಸಿಕೊಂಡಿದೆ, ಅದು ತುಂಬಾ ಸದೃಢವಾಗಿ. ಈಗ ಯುಪಿಯು ಉತ್ತಮ ಆಡಳಿತದಿಂದ ಗುರುತಿಸಲ್ಪಡುತ್ತಿದೆ. ಈಗ ಯುಪಿ ಉತ್ತಮ ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಮತ್ತು ಸ್ಥಿರತೆಗೆ ಹೆಸರುವಾಸಿಯಾಗಿದೆ. ಸಂಪತ್ತು ಸೃಷ್ಟಿಸುವವರಿಗೆ ಈಗ ಇಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಉತ್ತರ ಪ್ರದೇಶದ ಈ ಆಧುನಿಕ ಮೂಲಸೌಕರ್ಯ ಉಪಕ್ರಮದ ಫಲಿತಾಂಶಗಳು ಕಳೆದ ಕೆಲವು ವರ್ಷಗಳಲ್ಲಿ ಗೋಚರಿಸುತ್ತಿವೆ. ವಿದ್ಯುತ್ ಸಂಪರ್ಕದಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಯಾಗಿದೆ. ಅತಿ ಶೀಘ್ರದಲ್ಲೇ, ಯುಪಿಯು 5 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ದೇಶದ ಏಕೈಕ ರಾಜ್ಯ ಎಂದು ಕೂಡ ಕರೆಯಲ್ಪಡುತ್ತದೆ. ಮೀಸಲಾದ ಸರಕು ಸಾಗಣೆ ಕಾರಿಡಾರ್ ಮೂಲಕ, ಯುಪಿ ನೇರವಾಗಿ ಸಮುದ್ರಕ್ಕೆ ಮತ್ತು ಗುಜರಾತ್ ಮತ್ತು ಮಹಾರಾಷ್ಟ್ರದ ಬಂದರುಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಮೂಲಸೌಕರ್ಯಗಳ ಜತೆಗೆ, ಸುಲಭವಾಗಿ ಉದ್ಯಮ ವ್ಯಾಪಾರ ವ್ಯವಹಾರ ಮಾಡಲು ಯುಪಿ ಸರ್ಕಾರದ ಚಿಂತನೆ ಮತ್ತು ವಿಧಾನದಲ್ಲಿ ಗಮನಾರ್ಹ ಬದಲಾವಣೆಯಾಗಿದೆ.

ಸ್ನೇಹಿತರೆ,

ಇಂದು ಉತ್ತರ ಪ್ರದೇಶವು ಭರವಸೆಯನ್ನು ಪ್ರತಿನಿಧಿಸುತ್ತದೆ. ಭಾರತ ಇಂದು ವಿಶ್ವದಲ್ಲಿ ಉಜ್ವಲ ತಾಣವಾಗಿದ್ದರೆ, ಯುಪಿಯು ಭಾರತದ ಬೆಳವಣಿಗೆಗೆ ಚಾಲನಾಶಕ್ತಿಯಾಗಿದೆ.

ಸ್ನೇಹಿತರೆ,

ಎಲ್ಲ ಉದ್ಯಮದ ದಿಗ್ಗಜರು ಇಲ್ಲಿದ್ದಾರೆ. ನಿಮ್ಮಲ್ಲಿ ಹೆಚ್ಚಿನವರಿಗೆ ದೀರ್ಘ ಅನುಭವವೂ ಇದೆ. ವಿಶ್ವದ ಪ್ರಸ್ತುತ ಪರಿಸ್ಥಿ ನಿಮ್ಮಿಂದ ಮರೆಯಾಗಿಲ್ಲ. ನೀವು ಭಾರತದ ಆರ್ಥಿಕತೆಯ ಇಂದಿನ ಸಾಮರ್ಥ್ಯವನ್ನು ಮತ್ತು ಇಲ್ಲಿನ ಸ್ಥೂಲ ಮತ್ತು ಸೂಕ್ಷ್ಮ ಆರ್ಥಿಕ ಮೂಲಭೂತ ಅಂಶಗಳನ್ನು ಬಹಳ ಹತ್ತಿರದಿಂದ ನೋಡುತ್ತಿದ್ದೀರಿ. ಕೊರೊನಾ ಸಾಂಕ್ರಾಮಿಕ ಮತ್ತು ಯುದ್ಧದ ಆಘಾತಗಳನ್ನು ಎದುರಿಸಿದ ನಂತರ ಭಾರತವು ಹೇಗೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಯಿತು? ಇಂದು ವಿಶ್ವದ ಪ್ರತಿಯೊಂದು ವಿಶ್ವಾಸಾರ್ಹ ಧ್ವನಿಯು, ಭಾರತದ ಆರ್ಥಿಕತೆಯು ಅದೇ ವೇಗದಲ್ಲಿ ಬೆಳೆಯುವುದನ್ನು ಮುಂದುವರಿಸುತ್ತದೆ ಎಂದು ನಂಬುತ್ತಿದೆ. ಜಾಗತಿಕ ಬಿಕ್ಕಟ್ಟಿನ ಈ ಅವಧಿಯಲ್ಲಿ ಭಾರತವು ಸ್ಥಿಪುಟಿದೇಳುವ ಸಾಮರ್ಥ್ಯ ತೋರಿದ್ದು ಮಾತ್ರವಲ್ಲದೆ, ಅಷ್ಟೇ ವೇಗವಾಗಿ ಚೇತರಿಸಿಕೊಂಡಿದೆ.

ಸ್ನೇಹಿತರೆ,

ಭಾರತೀಯರಲ್ಲಿ ಹೆಚ್ಚುತ್ತಿರುವ ಆತ್ಮವಿಶ್ವಾಸವೇ ಇದರ ಹಿಂದಿನ ದೊಡ್ಡ ಕಾರಣ. ಇಂದು, ಭಾರತೀಯ ಸಮಾಜದ ಚಿಂತನೆ ಮತ್ತು ಆಕಾಂಕ್ಷೆಗಳಲ್ಲಿ, ಭಾರತದ ಯುವಜನರ ಚಿಂತನೆಯಲ್ಲಿ ದೊಡ್ಡ ಬದಲಾವಣೆ ಕಾಣಬಹುದು. ಇಂದು ಭಾರತದ ಪ್ರತಿಯೊಬ್ಬ ಪ್ರಜೆಯೂ ಹೆಚ್ಚು ಮತ್ತು ಕ್ಷಿಪ್ರ ಅಭಿವೃದ್ಧಿ ಕಾಣಲು ಬಯಸುತ್ತಿದ್ದಾನೆ. ಅವರು ಈಗ ಭಾರತವನ್ನು ಸಾಧ್ಯವಾದಷ್ಟು ಬೇಗ ಅಭಿವೃದ್ಧಿಪಡಿಸಲು ಬಯಸುತ್ತಿದ್ದಾರೆ. ಇಂದು, ಭಾರತ ಸಮಾಜದ ಆಶಯಗಳು ಸರ್ಕಾರಗಳನ್ನು ಮುಂದಕ್ಕೆ ತಳ್ಳುತ್ತಿವೆ ಮತ್ತು ಈ ಆಶಯಗಳು ಅಭಿವೃದ್ಧಿ ಯೋಜನೆಗಳನ್ನು ವೇಗಗೊಳಿಸುತ್ತಿವೆ.

ಮತ್ತು ಸ್ನೇಹಿತರೆ,

ಇಂದು ನೀವು ಇರುವ ರಾಜ್ಯವು ಸುಮಾರು 25 ಕೋಟಿ ಜನಸಂಖ್ಯೆ ಹೊಂದಿದೆ ಎಂಬುದನ್ನು ಮರೆಯಬೇಡಿ. ವಿಶ್ವದ ಪ್ರಮುಖ ದೇಶಗಳಿಗಿಂತ ಉತ್ತರ ಪ್ರದೇಶ ಮಾತ್ರ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇಡೀ ಭಾರತದಂತೆಯೇ, ಇಂದು ಯುಪಿಯಲ್ಲಿ ಒಂದು ದೊಡ್ಡ ಮಹತ್ವಾಕಾಂಕ್ಷೆಯ ಸಮಾಜ ನಿಮಗಾಗಿ ಕಾಯುತ್ತಿದೆ.

ಸ್ನೇಹಿತರೆ,

ಇಂದು ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಸಾಮಾಜಿಕ, ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯದಿಂದ ಯುಪಿ ಸಾಕಷ್ಟು ಪ್ರಯೋಜನ ಪಡೆದಿದೆ. ಇದರ ಫಲವಾಗಿ ಇದೀಗ  ಇಲ್ಲಿನ ಸಮಾಜ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಎಲ್ಲರನ್ನೂ ಒಳಗೊಳ್ಳುತ್ತಿದೆ. ಭಾರತವು ಮಾರುಕಟ್ಟೆಯಾಗಿ ಈಗ ತಡೆರಹಿತವಾಗುತ್ತಿದೆ ಮತ್ತು ಸರ್ಕಾರದ ಕಾರ್ಯವಿಧಾನಗಳು ಸಹ ಸರಳವಾಗುತ್ತಿವೆ. ಇಂದು ಭಾರತವು ಬಲವಂತದಿಂದಲ್ಲ, ಆದರೆ ಪ್ರಜ್ಞಾಪೂರ್ವಕವಾಗಿ ಮತ್ತು ಬಲವಾದ ನಂಬಿಕೆಗಳಿಂದ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಎಂದು ನಾನು ಆಗಾಗ್ಗೆ ಹೇಳುತ್ತೇನೆ. ಭಾರತವು 40,000ಕ್ಕೂ ಹೆಚ್ಚಿನ ಕಾನೂನು ಅನುಸರಣೆಗಳನ್ನು ತೊಡೆದುಹಾಕಲು ಮತ್ತು ಹತ್ತಾರು ಪುರಾತನ ಕಾನೂನುಗಳನ್ನು ರದ್ದುಗೊಳಿಸಲು ಇದು ಕಾರಣವಾಗಿದೆ.

ಸ್ನೇಹಿತರೆ,

ಇಂದು ಭಾರತವು ನಿಜವಾಗಿಯೂ ವೇಗ ಮತ್ತು ಮಾಪನದ ಹಾದಿಯಲ್ಲಿ ಮುನ್ನಡೆಯುತ್ತಿದೆ. ನಾವು ಬಹು ದೊಡ್ಡದಾದ ಮೂಲಭೂತ ಅಗತ್ಯಗಳನ್ನು ಪೂರೈಸಿದ್ದೇವೆ. ಹಾಗಾಗಿ, ಅಪಾರ ಜನರು  ಮತ್ತು ವಿದೇಶಿ ಹೂಡಿಕೆದಾರರು ವಿಶಾಲವಾಗಿ ಯೋಚಿಸಲು ಪ್ರಾರಂಭಿಸಿದ್ದಾರೆ. ಇದು ಭಾರತದ ಮೇಲಿನ ನಂಬಿಕೆಗೆ ಬಹುದೊಡ್ಡ ಕಾರಣ.

ಸ್ನೇಹಿತರೆ,
ಕೆಲವು ದಿನಗಳ ಹಿಂದೆ ಭಾರತ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಅದೇ ಬದ್ಧತೆಯನ್ನು ನೀವು ಸ್ಪಷ್ಟವಾಗಿ ನೋಡಿದ್ದೀರಿ. ಇಂದು ಸರ್ಕಾರ ಮೂಲಸೌಕರ್ಯಕ್ಕೆ ದಾಖಲೆಯ ಖರ್ಚು ಮಾಡುತ್ತಿದ್ದು, ಪ್ರತಿ ವರ್ಷ ಅದನ್ನು ಹೆಚ್ಚಿಸುತ್ತಿದ್ದೇವೆ. ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇಂದು ನಿಮಗೆ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಹಲವು ಅವಕಾಶಗಳಿವೆ. ಭಾರತವು ಆರಂಭಿಸಿರುವ ಹಸಿರು ಬೆಳವಣಿಗೆಯ ಮಾರ್ಗವನ್ನು ಅನುಸರಿಸಲು ನಾನು ನಿಮ್ಮನ್ನು ವಿಶೇಷವಾಗಿ ಆಹ್ವಾನಿಸುತ್ತೇನೆ. ಈ ಬಾರಿಯ ಬಜೆಟ್‌ನಲ್ಲಿ ಇಂಧನ ಪರಿವರ್ತನೆಗಾಗಿ 35,000 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಇದು ನಮ್ಮ ಉದ್ದೇಶವನ್ನು ತೋರಿಸುತ್ತದೆ. ಮಿಷನ್ ಗ್ರೀನ್ ಹೈಡ್ರೋಜನ್ ನಮ್ಮ ಉದ್ದೇಶಕ್ಕೆ ಉತ್ತೇಜನ ನೀಡುತ್ತಿದೆ. ಅದಕ್ಕೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಈ ವರ್ಷದ ಬಜೆಟ್‌ನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿದ್ಯುತ್ ಚಲನಶೀಲತೆಯ ರೂಪಾಂತರಕ್ಕಾಗಿ ನಾವು ಹೊಸ ಪೂರೈಕೆ ಮತ್ತು ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.

ಸ್ನೇಹಿತರೆ,

ಇಂದು ಯುಪಿ ಹೊಸ ಮೌಲ್ಯ ಮತ್ತು ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸಲು ಹೊಸ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದೆ ಎಂದು ನನಗೆ ಸಂತೋಷವಾಗಿದೆ. ಎಂಎಸ್‌ಎಂಇಗಳ ಅತ್ಯಂತ ಬಲವಾದ ಜಾಲ, ಸಾಂಪ್ರದಾಯಿಕ ಮತ್ತು ಆಧುನಿಕತೆಗೆ ಸಂಬಂಧಿಸಿದ ಕೈಗಾರಿಕೆಗಳು ಇಂದು ಉತ್ತರ ಪ್ರದೇಶದಲ್ಲಿ ರೋಮಾಂಚಕವಾಗಿವೆ. ಭದೋಹಿ ರತ್ನಗಂಬಳಿಗಳು ಮತ್ತು ಬನಾರಸಿ ರೇಷ್ಮೆ ಇವೆ. ಭದೋಹಿ ಕಾರ್ಪೆಟ್ ಕ್ಲಸ್ಟರ್ ಮತ್ತು ವಾರಣಾಸಿ ಸಿಲ್ಕ್ ಕ್ಲಸ್ಟರ್‌ನಿಂದಾಗಿ ಯುಪಿ ಭಾರತದ ಜವಳಿ ಕೇಂದ್ರವಾಗಿದೆ. ಇಂದು ಭಾರತದಲ್ಲಿ 60 ಪ್ರತಿಶತಕ್ಕೂ ಹೆಚ್ಚು ಮೊಬೈಲ್ ಉತ್ಪಾದನೆಯು ಉತ್ತರ ಪ್ರದೇಶದಲ್ಲಿ ಮಾತ್ರ ನಡೆಯುತ್ತಿದೆ. ಯುಪಿಯಲ್ಲಿ ಮೊಬೈಲ್ ಘಟಕಗಳ ಗರಿಷ್ಠ ಉತ್ಪಾದನೆಯನ್ನು ಸಹ ಮಾಡಲಾಗುತ್ತಿದೆ. ಈಗ ದೇಶದ 2 ರಕ್ಷಣಾ ಕಾರಿಡಾರ್‌ಗಳಲ್ಲಿ ಒಂದನ್ನು ಯುಪಿಯಲ್ಲಿ ನಿರ್ಮಿಸಲಾಗುತ್ತಿದೆ. ಯುಪಿ ಡಿಫೆನ್ಸ್ ಕಾರಿಡಾರ್ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇಂದು ಮೇಡ್ ಇನ್ ಇಂಡಿಯಾ ರಕ್ಷಣಾ ಸಾಧನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತೀಯ ಸೇನೆಗೆ ಗರಿಷ್ಠ ಮೇಡ್ ಇನ್ ಇಂಡಿಯಾ ರಕ್ಷಣಾ ವ್ಯವಸ್ಥೆ ಮತ್ತು ವೇದಿಕೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಈ ಮಹತ್ತರ ಯೋಜನೆಯ ನಾಯಕತ್ವವನ್ನು ಲಕ್ನೋದ ನಮ್ಮ ಕರ್ಮವೀರ್ ರಾಜನಾಥ್ ಸಿಂಗ್ ಜಿ ನಿರ್ವಹಿಸುತ್ತಿದ್ದಾರೆ. ಭಾರತವು ರೋಮಾಂಚಕ ರಕ್ಷಣಾ ಉದ್ಯಮವನ್ನು ಅಭಿವೃದ್ಧಿಪಡಿಸುತ್ತಿರುವ ಸಮಯದಲ್ಲಿ, ನೀವು ಮೊದಲು ಚಲನಶೀಲ ಲಾಭವನ್ನು ಪಡೆದುಕೊಳ್ಳಬೇಕು.

ಸ್ನೇಹಿತರೆ,

ಉತ್ತರ ಪ್ರದೇಶದಲ್ಲಿ ಡೇರಿ, ಮೀನುಗಾರಿಕೆ, ಕೃಷಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ಹಲವು ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿ ಹಣ್ಣುಗಳು ಮತ್ತು ತರಕಾರಿಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವೈವಿಧ್ಯತೆಗಳಿವೆ. ಖಾಸಗಿ ವಲಯದ ಭಾಗವಹಿಸುವಿಕೆ ಇನ್ನೂ ಬಹಳ ಸೀಮಿತವಾಗಿರುವ ಕ್ಷೇತ್ರ ಇದಾಗಿದೆ. ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ನಾವು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ(ಪಿಎಲ್‌ಐ) ಯೋಜನೆ ಜಾರಿಗೆ ತಂದಿದ್ದೇವೆ ಎಂಬುದು ನಿಮಗೆ ತಿಳಿದಿದೆ. ಈ ಯೋಜನೆಯ ಲಾಭವನ್ನು ನೀವು ಪಡೆದುಕೊಳ್ಳಲೇಬೇಕು.
 
ಸ್ನೇಹಿತರೆ,

ಇಂದು ರೈತರಿಗೆ ಬೆಳೆ ಉತ್ಪಾದನೆಯಿಂದ ಹಿಡಿದು ಕೊಯ್ಲು ನಂತರದ ನಿರ್ವಹಣೆಯವರೆಗೆ ಆಧುನಿಕ ವ್ಯವಸ್ಥೆ ಲಭ್ಯವಾಗಬೇಕು ಎಂಬುದು ಸರ್ಕಾರದ ಪ್ರಯತ್ನವಾಗಿದೆ. ಸಣ್ಣ ಹೂಡಿಕೆದಾರರು ಕೃಷಿ ಮೂಲಸೌಕರ್ಯ ನಿಧಿಯನ್ನು ಬಳಸಬಹುದು. ಅದೇ ರೀತಿ, ದೇಶಾದ್ಯಂತ ಬೃಹತ್ ಶೇಖರಣಾ ಸಾಮರ್ಥ್ಯ ಅಭಿವೃದ್ಧಿಪಡಿಸಲು ನಾವು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿದ್ದೇವೆ. ಸಣ್ಣ ಹೂಡಿಕೆದಾರರಿಗೂ ಇದೊಂದು ಉತ್ತಮ ಅವಕಾಶ.

ಸ್ನೇಹಿತರೆ,

ಇಂದು ಭಾರತದಲ್ಲಿ ನಮ್ಮ ಹೆಚ್ಚಿನ ಗಮನವು ಬೆಳೆ ವೈವಿಧ್ಯೀಕರಣ, ಸಣ್ಣ ರೈತರಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಅವರ ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದಾಗಿದೆ. ಅದಕ್ಕಾಗಿಯೇ ನಾವು ನೈಸರ್ಗಿಕ ಕೃಷಿಯತ್ತ ವೇಗವಾಗಿ ಸಾಗುತ್ತಿದ್ದೇವೆ. ಯುಪಿಯಲ್ಲಿ ಗಂಗಾ ನದಿಯ ಎರಡೂ ಬದಿಯ 5 ಕಿಲೋಮೀಟರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಆರಂಭವಾಗಿದೆ. ಈಗ ನಾವು ರೈತರಿಗೆ ಸಹಾಯ ಮಾಡಲು ಈ ವರ್ಷದ ಬಜೆಟ್‌ನಲ್ಲಿ 10,000 ಜೈವಿಕ ಕೃಷಿ ಉತ್ಪಾದನೆ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲು ಘೋಷಿಸಿದ್ದೇವೆ. ಇದು ನೈಸರ್ಗಿಕ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಈ ನಿಟ್ಟಿನಲ್ಲಿ ಖಾಸಗಿ ಉದ್ಯಮಿಗಳಿಗೆ ಹೂಡಿಕೆಯ ಹಲವು ಸಾಧ್ಯತೆಗಳಿವೆ.

ಸ್ನೇಹಿತರೆ,

ಸಿರಿ ಧಾನ್ಯಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಹೊಸ ಅಭಿಯಾನ ಆರಂಭವಾಗಿದೆ. ಭಾರತದ ಸಿರಿ ಧಾನ್ಯಗಳನ್ನು ಸಾಮಾನ್ಯವಾಗಿ ಒರಟಾದ ಧಾನ್ಯಗಳು ಎಂದು ಕರೆಯಲಾಗುತ್ತದೆ. ಈಗ ಅದರಲ್ಲಿ ಹಲವು ವಿಧಗಳಿವೆ. ವಿಶ್ವ ಮಾರುಕಟ್ಟೆಯಲ್ಲಿ ತನ್ನ ಗುರುತು ಸೃಷ್ಟಿಸುವ ಸಲುವಾಗಿ ನಾವು ಒರಟಾದ ಸಿರಿಧಾನ್ಯಕ್ಕೆ 'ಶ್ರೀ ಅನ್ನ' ಎಂದು ಹೊಸ ಹೆಸರು ಇಟ್ಟಿದ್ದೇವೆ ಎಂಬುದನ್ನು ನೀವು ಈ ವರ್ಷದ ಬಜೆಟ್‌ನಲ್ಲಿ ಕೇಳಿರಬೇಕು. ‘ಶ್ರೀ ಅನ್ನ’ದಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಇದು ಉತ್ಕೃಷ್ಟ ಆರೋಗ್ಯಕರ ಪೌಷ್ಟಿಕಾಂಶಭರಿತ ಆಹಾರವಾಗಿದೆ. ಶ್ರೀಫಲನಂತೆ ‘ಶ್ರೀ ಅನ್ನ’ ಕೂಡ ಹೊಸತನವಾಗಿ ಮೂಡಿಬರಲಿದೆ. ಭಾರತದ ‘ಶ್ರೀ ಅನ್ನ’ ಜಾಗತಿಕ ಪೌಷ್ಟಿಕಾಂಶ ಭದ್ರತೆ ತಿಳಿಸುವುದು ನಮ್ಮ ಪ್ರಯತ್ನವಾಗಿದೆ. ಜಗತ್ತು ಈ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ  ಆಚರಿಸುತ್ತಿದೆ. ಆದ್ದರಿಂದ ಒಂದೆಡೆ ‘ಶ್ರೀ ಅನ್ನ’ ಉತ್ಪಾದನೆಗೆ ರೈತರನ್ನು ಪ್ರೇರೇಪಿಸುತ್ತಿದ್ದರೆ, ಇನ್ನೊಂದೆಡೆ ಅದಕ್ಕೆ ಜಾಗತಿಕ ಮಾರುಕಟ್ಟೆಯನ್ನೂ ವಿಸ್ತರಿಸುತ್ತಿದ್ದೇವೆ. ಆಹಾರ ಸಂಸ್ಕರಣಾ ವಲಯಕ್ಕೆ ಸಂಬಂಧಿಸಿದ ಸ್ನೇಹಿತರು 'ರೆಡಿ ಟು ಈಟ್' ಮತ್ತು 'ರೆಡಿ ಟು ಕುಕ್' 'ಶ್ರೀ ಅನ್ನ' ಉತ್ಪನ್ನಗಳಲ್ಲಿನ ಸಾಧ್ಯತೆಗಳನ್ನು ಅನ್ವೇಷಿಸಬಹುದು ಮತ್ತು ಮನುಕುಲಕ್ಕೆ ದೊಡ್ಡ ರೀತಿಯಲ್ಲಿ ಸೇವೆ ಸಲ್ಲಿಸಬಹುದು.

ಸ್ನೇಹಿತರೆ,

ಉತ್ತರ ಪ್ರದೇಶದಲ್ಲಿ ಮತ್ತೊಂದು ವಿಚಾರಕ್ಕೆ ಸಂಬಂಧಿಸಿದಂತೆ ಶ್ಲಾಘನೀಯ ಕೆಲಸವೊಂದು ನಡೆದಿದೆ. ಇದು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ. ಮಹಾಯೋಗಿ ಗುರು ಗೋರಖ್ ನಾಥ್ ಆಯುಷ್ ವಿಶ್ವವಿದ್ಯಾಲಯ, ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ವಿಶ್ವವಿದ್ಯಾಲಯ, ರಾಜ ಮಹೇಂದ್ರ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯ, ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಯುವಕರನ್ನು ವಿಭಿನ್ನ ಕೌಶಲ್ಯಗಳಿಗೆ ಸಿದ್ಧಪಡಿಸುತ್ತವೆ. ಕೌಶಲ್ಯ ಅಭಿವೃದ್ಧಿ ಮಿಷನ್ ಅಡಿ, ಇದುವರೆಗೆ ಯುಪಿಯ 16 ಲಕ್ಷಕ್ಕೂ ಹೆಚ್ಚು ಯುವಕರು ವಿವಿಧ ಕೌಶಲ್ಯಗಳಲ್ಲಿ ತರಬೇತಿ ಪಡೆದಿದ್ದಾರೆ ಎಂದು ನನಗೆ ತಿಳಿದುಬಂದಿದೆ. ಯುಪಿ ಸರ್ಕಾರವು ಪಿಜಿಐ ಲಕ್ನೋ ಮತ್ತು ಐಐಟಿ ಕಾನ್ಪುರದಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಪ್ರಾರಂಭಿಸಿದೆ. ನನ್ನ ದಾರಿಯಲ್ಲಿ ಶಿಕ್ಷಣದ ಉಸ್ತುವಾರಿ ಹೊತ್ತಿರುವ ನಮ್ಮ ರಾಜ್ಯಪಾಲರು ಕುಲಪತಿಯಾಗಿದ್ದು, ಈ ಬಾರಿ ಉತ್ತರ ಪ್ರದೇಶದ 4 ವಿಶ್ವವಿದ್ಯಾಲಯಗಳು ಭಾರತದ ಒಟ್ಟಾರೆ ಮಾನ್ಯತೆಯಲ್ಲಿ ತಮ್ಮ ಛಾಪು ಮೂಡಿಸಿರುವುದು ಉತ್ತರ ಪ್ರದೇಶಕ್ಕೆ ಅತ್ಯಂತ ಹೆಮ್ಮೆಯ ಸಂಗತಿ. ಈ ಸಾಧನೆಗಾಗಿ ನಾನು ಶಿಕ್ಷಣ ರಂಗದೊಂದಿಗೆ ಸಂಬಂಧ ಹೊಂದಿರುವ ಜನರನ್ನು ಮತ್ತು ಕುಲಪತಿ ಮೇಡಂ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ದೇಶದ ಸ್ಟಾರ್ಟಪ್ ಕ್ರಾಂತಿಯಲ್ಲಿ ಯುಪಿ ಪಾತ್ರವೂ ನಿರಂತರವಾಗಿ ಹೆಚ್ಚುತ್ತಿದೆ. ಯುಪಿ ಸರ್ಕಾರವು ಮುಂದಿನ ದಿನಗಳಲ್ಲಿ 100 ಇನ್ ಕ್ಯುಬೇಟರ್‌(ಪೋಷಣಾ ಕೇಂದ್ರಗಳು)ಗಳು ಮತ್ತು 3 ಅತ್ಯಾಧುನಿಕ ಕೇಂದ್ರಗಳನ್ನು ಹೊಂದುವ ಗುರಿ ಹೊಂದಿದೆ. ಇದರರ್ಥ ಇಲ್ಲಿಗೆ ಬರುವ ಹೂಡಿಕೆದಾರರು ಪ್ರತಿಭಾವಂತ ಮತ್ತು ನುರಿತ ಯುವಕರ ದೊಡ್ಡ ಸಮೂಹವನ್ನು ಪಡೆಯಲಿದ್ದಾರೆ.
 
ಸ್ನೇಹಿತರೆ,

ಇದಕ್ಕಿಂತ ಉತ್ತಮ ಪಾಲುದಾರಿಕೆ ಇರಲಾರದು. ಒಂದು ಕಡೆ ಡಬಲ್ ಇಂಜಿನ್ ಸರ್ಕಾರದ ಉದ್ದೇಶವಿದೆ, ಇನ್ನೊಂದು ಕಡೆ ಉತ್ತರ ಪ್ರದೇಶವು ಅಪಾರ ಸಾಧ್ಯತೆಗಳಿಂದ ತುಂಬಿದೆ. ನಾವು ಈ ಸಮಯವನ್ನು ವ್ಯರ್ಥ ಮಾಡಬಾರದು. ಭಾರತದ ಏಳಿಗೆಯಲ್ಲೇ ಜಗತ್ತಿನ ಏಳಿಗೆ ಅಡಗಿದೆ. ಭಾರತದ ಉಜ್ವಲ ಭವಿಷ್ಯದಲ್ಲಿ ಜಗತ್ತಿನ ಉಜ್ವಲ ಭವಿಷ್ಯ ಖಚಿತ. ಈ ಸಮೃದ್ಧಿಯ ಪಯಣದಲ್ಲಿ ನಿಮ್ಮ ಸಹಭಾಗಿತ್ವ ಬಹಳ ಮುಖ್ಯ. ಈ ಹೂಡಿಕೆಯು ಮಂಗಳಕರವಾಗಿರಲಿ ಮತ್ತು ಎಲ್ಲರಿಗೂ ಒಳ್ಳೆಯದನ್ನು ತರಲಿ. ಈ ಹಾರೈಕೆಯೊಂದಿಗೆ, ಹೂಡಿಕೆಗೆ ಮುಂದೆ ಬಂದಿರುವ ದೇಶಗಳು ಮತ್ತು ವಿಶ್ವದ ಎಲ್ಲಾ ಹೂಡಿಕೆದಾರರಿಗೆ ಅನೇಕ ಶುಭಾಶಯಗಳನ್ನು ಕೋರುತ್ತೇನೆ. ಉತ್ತರ ಪ್ರದೇಶದ ಸಂಸದನಾಗಿ, ಉತ್ತರ ಪ್ರದೇಶ ಸರ್ಕಾರ ಮತ್ತು ಅಧಿಕಾರಶಾಹಿ ನಿಮ್ಮ ಕನಸುಗಳನ್ನು ನನಸಾಗಿಸುವ ಸಂಕಲ್ಪದೊಂದಿಗೆ ಪ್ರಗತಿಯ ಹಾದಿಯಲ್ಲಿ ಸಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಈ ನಂಬಿಕೆಯೊಂದಿಗೆ, ನಾನು ಮತ್ತೊಮ್ಮೆ ನಮ್ಮ ದೇಶ ಮತ್ತು ವಿದೇಶಗಳ ಹೂಡಿಕೆದಾರರನ್ನು ಉತ್ತರ ಪ್ರದೇಶದ ಪುಣ್ಯಭೂಮಿಗೆ ಸ್ವಾಗತಿಸುತ್ತೇನೆ.
ತುಂಬು ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Rural commercial vehicle retail sales growth outpaces urban: Fada data

Media Coverage

Rural commercial vehicle retail sales growth outpaces urban: Fada data
NM on the go

Nm on the go

Always be the first to hear from the PM. Get the App Now!
...
PM condoles loss of lives in firecracker factory mishap in Kaushambi
August 31, 2026
PM announces ex-gratia from Prime Minister’s National Relief Fund

The Prime Minister, Shri Narendra Modi has expressed deep sorrow over the loss of lives in a mishap at a firecracker factory in Kaushambi, Uttar Pradesh. Shri Modi conveyed his condolences to the bereaved families and prayed for the speedy recovery of the injured.

Shri Modi also announced an ex-gratia of ₹2 lakh from the Prime Minister’s National Relief Fund (PMNRF) to the next of kin of each deceased and ₹50,000 for the injured.

The Prime Minister posted on X;

Extremely saddened by the loss of lives due to a mishap at a firecracker factory in Kaushambi, Uttar Pradesh. My thoughts are with the bereaved families in this hour of grief. May the injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi