ನಮಸ್ಕಾರ..!

ಗುಲ್ಮಾರ್ಗ್ ನ ಕಣಿವೆಯಲ್ಲಿ ಇನ್ನೂ ಚಳಿಗಾಳಿ ಇದೆ. ಆದರೆ ಪ್ರತಿಯೊಬ್ಬ ಭಾರತೀಯನೂ ನಿಮ್ಮಲ್ಲಿನ ಬೆಚ್ಚನೆಯ ಮತ್ತು ಶಕ್ತಿಯ ಭಾವನೆಯನ್ನು ಕಾಣುತ್ತಿದ್ದಾರೆ. ಇಂದು ಖೇಲೋ ಇಂಡಿಯಾದ ಚಳಿಗಾಲದ ಕ್ರೀಡಾಕೂಟದ ಎರಡನೇ ಆವೃತ್ತಿ ಆರಂಭವಾಗುತ್ತಿದೆ. ಭಾರತ ಅಂತಾರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುತ್ತಿರುವುದೇ ಅಲ್ಲದೆ, ಇದು ಜಮ್ಮು ಮತ್ತು ಕಾಶ್ಮೀರವನ್ನು ಪ್ರಮುಖ ಚಳಿಗಾಲದ ಕ್ರೀಡಾಕೂಟದ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅದಕ್ಕಾಗಿ ನಾನು ಜಮ್ಮು-ಕಾಶ್ಮೀರವನ್ನು ಮತ್ತು ದೇಶದೆಲ್ಲೆಡೆ ಆಗಮಿಸಿ ಇಲ್ಲಿ ಪಾಲ್ಗೊಂಡಿರುವ ಕ್ರೀಡಾ ವ್ಯಕ್ತಿಗಳನ್ನು ಅಭಿನಂದಿಸುತ್ತೇನೆ.

ದೇಶದ ಎಲ್ಲ ಭಾಗಗಳಿಂದ ಆಟಗಾರರು ಆಗಮಿಸಿರುವುದು ಏಕ ಭಾರತ್, ಶ್ರೇಷ್ಠ ಭಾರತ್ ಸ್ಪೂರ್ತಿಯನ್ನು ಬಲವರ್ಧನೆಗೊಳಿಸುತ್ತದೆ. ಈ ಚಳಿಗಾಲದ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಈ ಬಾರಿ ದುಪ್ಪಟ್ಟಾಗಿದೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಇದು ದೇಶಾದ್ಯಂತ ಚಳಿಗಾಲದ ಕ್ರೀಡೆಗಳತ್ತ ಹೆಚ್ಚುತ್ತಿರುವ ಪ್ರವೃತ್ತಿ ಮತ್ತು ಅತ್ಯುತ್ಸಾಹವನ್ನು ತೋರುತ್ತದೆ. ಕಳೆದ ಬಾರಿ ಜಮ್ಮು ಮತ್ತು ಕಾಶ್ಮೀರ ತಂಡ ಅತ್ಯದ್ಭುತ ಪ್ರದರ್ಶನವನ್ನು ನೀಡಿತ್ತು. ನನಗೆ ವಿಶ್ವಾಸವಿದೆ. ಈ ಬಾರಿ ಜಮ್ಮು-ಕಾಶ್ಮೀರದ ಪ್ರತಿಭಾವಂತ ತಂಡಕ್ಕೆ ಇತರೆ ತಂಡಗಳಿಂದ ಉತ್ತಮ ಸ್ಪರ್ಧೆ ಎದುರಾಗಲಿದೆ ಮತ್ತು ದೇಶದ ಎಲ್ಲೆಡೆಯಿಂದ ಬಂದಿರುವ ಆಟಗಾರರು ಜಮ್ಮು-ಕಾಶ್ಮೀರದಲ್ಲಿನ ತಮ್ಮ ಸಹವರ್ತಿಗಳ ಕೌಶಲ್ಯ ಮತ್ತು ಸಾಮರ್ಥ್ಯವನ್ನು ನೋಡಿ ಕಲಿತುಕೊಳ್ಳಲಿದ್ದಾರೆ. ಅಲ್ಲದೆ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾರತದ ಘನತೆಯನ್ನು ಹೆಚ್ಚಿಸಲು ಈ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ಅನುಭವ ಅತ್ಯಂತ ಉಪಯುಕ್ತವಾಗಲಿದೆ ಎಂಬ ವಿಶ್ವಾಸ ನನಗಿದೆ.

ಮಿತ್ರರೇ,

ಜಮ್ಮು ಮತ್ತು ಕಾಶ್ಮೀರ ಗುಲ್ಮಾರ್ಗ್ ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟ ಆ ಪ್ರದೇಶವನ್ನು ಅಭಿವೃದ್ಧಿ ಮತ್ತು ಶಾಂತಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬುದು ಸಾಬೀತಾಗಿದೆ. ಈ ಚಳಿಗಾಲದ ಕ್ರೀಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಕ್ರೀಡಾ ಪೂರಕ ವ್ಯವಸ್ಥೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜಮ್ಮು ಮತ್ತು ಶ್ರೀನಗರದಲ್ಲಿನ ಎರಡು ಖೇಲೋ ಇಂಡಿಯಾ ಶ್ರೇಷ್ಠತಾ ಕೇಂದ್ರಗಳು ಮತ್ತು 20 ಜಿಲ್ಲೆಗಳಲ್ಲಿನ ಖೇಲೋ ಇಂಡಿಯಾ ಕೇಂದ್ರಗಳು, ಯುವ ಕ್ರೀಡಾಪಟುಗಳಿಗೆ ಭಾರೀ ಸೌಕರ್ಯಗಳನ್ನು ಒದಗಿಸಿವೆ. ಅಂತಹ ಕೇಂದ್ರಗಳನ್ನು ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಆರಂಭಿಸಲಾಗುವುದು. ಅಲ್ಲದೆ ಈ ಕ್ರೀಡಾಕೂಟ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿದೆ. ಕೊರೊನಾದಿಂದ ಎದುರಾದ ಕಷ್ಟಗಳೂ ಸಹ ಕ್ರಮೇಣ ಕಡಿಮೆಯಾಗುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ.

ಮಿತ್ರರೇ,

ಕ್ರೀಡೆಗಳು ಕೇವಲ ಹವ್ಯಾಸಗಳಲ್ಲ ಅಥವಾ ಕಾಲ ಕಳೆಯುವುದಕ್ಕಲ್ಲ, ನಾವು ಕ್ರೀಡೆಯಿಂದ ತಂಡದ ಸ್ಫೂರ್ತಿಯನ್ನು ಕಲಿಯುತ್ತೇವೆ. ಸೋಲಿನಲ್ಲಿ ಹೊಸ ಮಾರ್ಗವನ್ನು ಕಂಡುಕೊಳ್ಳುತ್ತೇವೆ. ಗೆಲುವನ್ನು ಪುನಃ ಸಾಧಿಸುವುದನ್ನು ಕಲಿಯುತ್ತೇವೆ ಮತ್ತು ಬದ್ಧತೆಯನ್ನು ಕಲಿಸುತ್ತದೆ. ಕ್ರೀಡೆ ಪ್ರತಿಯೊಬ್ಬ ವ್ಯಕ್ತಿಯ ಜೀವನ ಮತ್ತು ಆತನ ಜೀವನಶೈಲಿ ಬದಲಾಯಿಸುತ್ತದೆ. ಕ್ರೀಡೆ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ ಅದು ಸ್ವಾವಲಂಬನೆಗೆ ಅತ್ಯಂತ ಪ್ರಮುಖವಾದುದು.

ಮಿತ್ರರೇ,

ಯಾವುದೇ ದೇಶ ಜಗತ್ತಿನಲ್ಲಿ ಶ್ರೇಷ್ಠವಾಗಿರಬೇಕಾದರೆ ಕೇವಲ ಆರ್ಥಿಕ ಮತ್ತು ಕಾರ್ಯತಾಂತ್ರಿಕ ದೃಷ್ಟಿಯಿಂದ ಮಾತ್ರವಲ್ಲ. ಇತರೆ ಹಲವು ಅಂಶಗಳು ಕಾರಣವಾಗುತ್ತವೆ. ಓರ್ವ ವಿಜ್ಞಾನಿ ತನ್ನ ಸಣ್ಣ ಆವಿಷ್ಕಾರದಿಂದಾಗಿ ಜಗತ್ತಿನ ಎಲ್ಲೆಡೆ ದೇಶದ ಹೆಸರನ್ನು ಪ್ರಕಾಶಮಾನಗೊಳಿಸುತ್ತಾರೆ. ಅಂತಹ ಹಲವು ವಲಯಗಳಿವೆ. ಆದರೆ ಕ್ರೀಡೆ ಅತ್ಯಂತ ವ್ಯವಸ್ಥಿತವಾಗಿ ಮತ್ತು ಸಂಘಟಿತವಾಗಿ ಅಭಿವೃದ್ಧಿಯಾಗುತ್ತಿದ್ದು ಮತ್ತು ಇಂದು ಅದು ಜಗತ್ತಿನಲ್ಲಿ ದೇಶದ ವರ್ಚಸ್ಸು ಮತ್ತು ಶಕ್ತಿಯನ್ನು ಪರಿಚಯಿಸುತ್ತಿದೆ. ವಿಶ್ವದ ಅತ್ಯಂತ ಸಣ್ಣ ರಾಷ್ಟ್ರಗಳೂ ಕೂಡ ಕ್ರೀಡೆಯಿಂದಾಗಿ ಜಗತ್ತಿನಲ್ಲಿ ತಮ್ಮ ಹೆಗ್ಗುರುತನ್ನು ಮೂಡಿಸುತ್ತಿವೆ ಮತ್ತು ಕ್ರೀಡೆಗಳಿಂದ ಇಡೀ ದೇಶಕ್ಕೆ ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡುತ್ತಿವೆ. ಆದ್ದರಿಂದ ಕ್ರೀಡೆಯನ್ನು ಸೋಲು ಅಥವಾ ಗೆಲ್ಲುವುದಕ್ಕೆ ಒಂದು ಸ್ಪರ್ಧೆಯೆಂಬಂತೆ ಪರಿಗಣಿಸಬಾರದು ಮತ್ತು ಕ್ರೀಡೆ ಕೇವಲ ಪದಕಗಳಿಗೆ ಅಥವಾ ಸಾಧನೆಗಳಿಗೆ ಸೀಮಿತವಲ್ಲ. ಕ್ರೀಡೆ ಒಂದು ಜಾಗತಿಕ ವಿದ್ಯಮಾನವಾಗಿದೆ. ನಾವು ಕ್ರಿಕೆಟ್ ನ ಆಯಾಮದಿಂದ ಭಾರತದಲ್ಲಿ ಇದನ್ನು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಇದು ಎಲ್ಲಾ ಅಂತಾರಾಷ್ಟ್ರೀಯ ಕ್ರೀಡೆಗಳಿಗೂ ಅನ್ವಯವಾಗುತ್ತದೆ. ಇದೇ ದೂರದೃಷ್ಟಿಯೊಂದಿಗೆ ಹಲವು ವರ್ಷಗಳಿಂದೀಚೆಗೆ ದೇಶದಲ್ಲಿ ಕ್ರೀಡೆಗೆ ಪೂರಕ ವ್ಯವಸ್ಥೆ ಸುಧಾರಣೆಗಳನ್ನು ತರಲಾಗಿದೆ.

ಖೇಲೋ ಇಂಡಿಯಾ ಅಭಿಯಾನದಿಂದ ಒಲಿಂಪಿಕ್ ಪೋಡಿಯಂ ಯೋಜನೆವರೆಗೆ ನಾವು ಸಮಗ್ರ ಮನೋಭಾವದೊಂದಿಗೆ ಮುನ್ನಡೆಯುತ್ತಿದ್ದೇವೆ. ಸರ್ಕಾರವೂ ಕೂಡ ಕ್ರೀಡಾ ವೃತ್ತಿಪರರನ್ನು ಕೈಹಿಡಿಯುತ್ತಿದ್ದು, ತಳಮಟ್ಟದಲ್ಲಿ ಪ್ರತಿಭಾವಂತರನ್ನು ಗುರುತಿಸಲಾಗುತ್ತಿದೆ ಮತ್ತು ಅವರನ್ನು ದೊಡ್ಡ ವೇದಿಕೆಗಳಿಗೆ ಕರೆತರಲಾಗುತ್ತಿದೆ. ಪ್ರತಿಭೆಗಳನ್ನು ಗುರುತಿಸುವುದರಿಂದ ಹಿಡಿದು ತಂಡಗಳ ಆಯ್ಕೆಯವರೆಗೆ ಸರ್ಕಾರ ಪಾರದರ್ಶಕತೆಗೆ ಆದ್ಯತೆ ನೀಡಿದೆ. ಅಲ್ಲದೆ ತಮ್ಮ ಜೀವನದುದ್ದಕ್ಕೂ ದೇಶವನ್ನು ವೈಭವೀಕರಣಗೊಳಿಸಿದ ಆಟಗಾರರ ಘನತೆಯನ್ನು ಹೆಚ್ಚಿಸಲೂ ಸಹ ಇದನ್ನು ಖಾತ್ರಿಪಡಿಸಲಾಗುತ್ತಿದೆ ಮತ್ತು ಹೊಸ ಆಟಗಾರರು ಅಂತಹವರ ಅನುಭವದ ಪ್ರಯೋಜನವನ್ನು ಪಡೆಯಬಹುದಾಗಿದೆ.

ಮಿತ್ರರೇ,

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಮೊದಲು ಕ್ರೀಡೆಯನ್ನು ಕೇವಲ ಪಠ್ಯೇತರ ಚಟುವಟಿಕೆಯನ್ನಾಗಿ ಪರಿಗಣಿಸಲಾಗಿತ್ತು. ಇದೀಗ ಕ್ರೀಡೆ ಕೂಟ ಪಠ್ಯಕ್ರಮದ ಒಂದು ಭಾಗವಾಗಿದೆ. ಕ್ರೀಡೆಯಲ್ಲಿನ ಶ್ರೇಣೀಕರಣ ಕೂಡ ಮಕ್ಕಳ ಶಿಕ್ಷಣಕ್ಕೆ ಪರಿಗಣಿಸಲ್ಪಡುತ್ತದೆ. ನಮ್ಮ ಕ್ರೀಡೆಯಲ್ಲಿ ಮತ್ತು ನಮ್ಮ ವಿದ್ಯಾರ್ಥಿಗಳಲ್ಲಿ ಭಾರೀ ದೊಡ್ಡ ಸುಧಾರಣೆಗಳಾಗುತ್ತಿವೆ. ಮಿತ್ರರೇ ಇಂದು ದೇಶದಲ್ಲಿ ಉನ್ನತ ಶಿಕ್ಷಣದ ಕ್ರೀಡಾ ಕೇಂದ್ರಗಳು ಮತ್ತು ಕ್ರೀಡಾ ವಿಶ್ವವಿದ್ಯಾಲಯಗಳು ಆರಂಭವಾಗುತ್ತಿವೆ. ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ನಿರ್ವಹಣೆಯನ್ನು ಶಾಲಾ ಹಂತಕ್ಕೆ ಕೊಂಡೊಯ್ಯುವುದು ಹೇಗೆ ಎಂಬುದರ ಬಗ್ಗೆ ಯೋಚಿಸಲು ಇದು ಸಕಾಲವಾಗಿದೆ. ಇದರಿಂದ ನಮ್ಮ ಯುವಜನತೆಗೆ ಅತ್ಯುತ್ತಮ ವೃತ್ತಿ ಅವಕಾಶಗಳು ದೊರಕಲಿವೆ ಹಾಗೂ ಕ್ರೀಡಾ ಆರ್ಥಿಕತೆಯಲ್ಲಿ ಭಾರತದ ಪಾಲನ್ನು ಗಣನೀಯವಾಗಿ ಹೆಚ್ಚಿಸಲಿವೆ.

ನನ್ನ ಯುವ ಮಿತ್ರರೇ,

ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜೊತೆಗೆ ನೀವು ಕ್ರೀಡೆಯ ಒಂದು ಭಾಗವಷ್ಟೇ ಮಾತ್ರವಲ್ಲ, ನೀವು ಆತ್ಮನಿರ್ಭರ ಭಾರತದ ಬ್ರಾಂಡ್ ರಾಯಭಾರಿಗಳೂ ಹೌದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಮೈದಾನದಲ್ಲಿ ಮಾಡುವ ಅಚ್ಚರಿಯ ಸಾಧನೆಗಳು ಜಗತ್ತಿನಲ್ಲಿ ಭಾರತಕ್ಕೆ ಮಾನ್ಯತೆ ತಂದುಕೊಡಲಿದೆ. ಹಾಗಾಗಿ ನೀವು ಯಾವುದೇ ಸಂದರ್ಭದಲ್ಲಿ ಮೈದಾನಕ್ಕಿಳಿದರೂ ನಿಮ್ಮ ಮನಸ್ಸು ಮತ್ತು ಆತ್ಮದಲ್ಲಿ ಮಾತೃಭೂಮಿಯನ್ನು ಸದಾ ಸ್ಮರಿಸಿಕೊಳ್ಳಿ. ನೀವು ಕ್ರೀಡೆಯಲ್ಲಿ ಅದ್ಭುತ ಸಾಧನೆಗಳನ್ನು ಮಾಡುವುದಷ್ಟೇ ಅಲ್ಲ, ನಿಮ್ಮ ವ್ಯಕ್ತಿತ್ವವೂ ಅರಳುತ್ತದೆ. ನೀವು ಆಟದ ಮೈದಾನದಲ್ಲಿ ಇದ್ದಷ್ಟೂ ಸಮಯದಲ್ಲಿ ನೀವು ಒಬ್ಬಂಟಿಯಲ್ಲ. ದೇಶದ 130 ಕೋಟಿ ಜನರು ನಿಮ್ಮೊಂದಿಗಿರುತ್ತಾರೆ.

ಈ ಆಹ್ಲಾದಕರ ವಾತಾವರಣದಲ್ಲಿ ನಡೆಯುತ್ತಿರುವ ಕ್ರೀಡಾ ಹಬ್ಬದಲ್ಲಿ ನೀವು ಸಾಧನೆ ಮಾಡಿ ಮತ್ತು ಆನಂದಿಸಿ ಎಂದು ನಾನು ಮತ್ತೊಮ್ಮೆ ಹೇಳುತ್ತೇನೆ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭಾಶಯಗಳನ್ನು ಕೋರುತ್ತೇನೆ. ಗೌರವಾನ್ವಿತ ಮನೋಜ್ ಸಿನ್ಹಾ ಜಿ, ಕಿರಣ್ ರಿಜಿಜು ಜಿ, ಎಲ್ಲ ಇತರ ಆಯೋಜಕರು ಮತ್ತು ಜಮ್ಮು-ಕಾಶ್ಮೀರದ ಜನತೆಗೆ ಈ ಅದ್ಭುತ ವ್ಯವಸ್ಥೆಗಳನ್ನು ಮಾಡಿರುವುದಕ್ಕಾಗಿ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಧನ್ಯವಾದಗಳು

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Skyroot to launch first private orbital mission Vikram-1, PM Modi calls it 'historic frontier' for India's space journey

Media Coverage

Skyroot to launch first private orbital mission Vikram-1, PM Modi calls it 'historic frontier' for India's space journey
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಜುಲೈ 2026
July 17, 2026

Green Trains, Private Rockets & Global Partnerships — PM Modi’s New India is Playing to Win