ನನ್ನ ಮಿತ್ರರಾದ ಪ್ರಧಾನಮಂತ್ರಿಗಳೇ, ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ನಿಯೋಗಕ್ಕೆ ಮತ್ತು ನನಗೆ ನೀಡಿದ ಸ್ವಾಗತದ ರೀತಿ, ಹಾಗೂ ಕೇವಲ ಕೆಲವು ಗಂಟೆಗಳಲ್ಲಿ ಮಲೇಷ್ಯಾದ ಜೀವನದ ಸಾರವನ್ನು ಸಂಪ್ರದಾಯಗಳನ್ನೂ ಮೀರಿ ಅತ್ಯಂತ ಸುಂದರವಾಗಿ ನೀವು ಪ್ರಸ್ತುತಪಡಿಸಿದ ರೀತಿ ನನ್ನ ನೆನಪಿನಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತದೆ. ಇದಕ್ಕಾಗಿ ನಾನು ನನ್ನ ಆಳವಾದ ಪ್ರಶಂಸೆಯನ್ನು ವ್ಯಕ್ತಪಡಿಸುತ್ತೇನೆ. ಸ್ನೇಹ ಎಂದರೆ ಏನು, ಅದರ ಎತ್ತರ ಮತ್ತು ಆಳಗಳು ಎಂಥವು ಎಂಬುದನ್ನು ನಾನು ಇಂದು ನಿಜವಾಗಿಯೂ ಅನುಭವಿಸಿದ್ದೇನೆ ಮತ್ತು ಅದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿದ್ದೇನೆ.

ಮಾನ್ಯರೇ,

ಪ್ರಧಾನಮಂತ್ರಿಯಾಗಿ ಮೂರನೇ ಬಾರಿಗೆ ಮಲೇಷ್ಯಾಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿರುವುದು ಮತ್ತು ನಿಮ್ಮ ಅಧಿಕಾರಾವಧಿಯಲ್ಲಿ ನಾನು ನಿಮ್ಮನ್ನು ನಾಲ್ಕನೇ ಬಾರಿಗೆ ಭೇಟಿಯಾಗುತ್ತಿರುವುದು ನನ್ನ ಸೌಭಾಗ್ಯ. ಇದು ನಮ್ಮ ಸಂಬಂಧದ ವೇಗ ಮತ್ತು ಕ್ರಿಯಾಶೀಲತೆಯನ್ನು ಪ್ರತಿಫಲಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳು ಸಾಧಿಸಿರುವ ವೇಗ ಮತ್ತು ಆಳವು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ನಿಮ್ಮ ಅಮೂಲ್ಯವಾದ ಕೊಡುಗೆಗಾಗಿ ನಾನು ನಿಮಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದು ನಮ್ಮ ಸಹಕಾರವು ಕೃಷಿ ಮತ್ತು ಉತ್ಪಾದನೆಯಿಂದ ಹಿಡಿದು ಶುದ್ಧ ಇಂಧನ ಹಾಗೂ ಸೆಮಿಕಂಡಕ್ಟರ್‌ ಗಳವರೆಗೆ ವ್ಯಾಪಿಸಿದೆ. ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಯಲ್ಲೂ ನಾವು ಪ್ರಮುಖ ಪಾಲುದಾರರಾಗಿದ್ದೇವೆ. ನಮ್ಮ ರಕ್ಷಣಾ ಮತ್ತು ಭದ್ರತಾ ಸಹಯೋಗವು ನಿರಂತರವಾಗಿ ಬಲಗೊಳ್ಳುತ್ತಿದೆ.

ಮಾನ್ಯರೇ,

ಆಸಿಯಾನ್ (ASEAN) ಸಂಘಟನೆಯ ಯಶಸ್ವಿ ಅಧ್ಯಕ್ಷತೆಗಾಗಿ ನಾನು ನಿಮಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಲೇಷ್ಯಾದ ಬೆಂಬಲದೊಂದಿಗೆ, ಆಸಿಯಾನ್ ಜೊತೆಗಿನ ನಮ್ಮ ಸಂಬಂಧಗಳು ಇನ್ನಷ್ಟು ಗಾಢವಾಗುತ್ತವೆ ಮತ್ತು ಅದರ ವ್ಯಾಪ್ತಿ ವಿಸ್ತರಿಸುತ್ತದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ.

ಮಾನ್ಯರೇ,

ನಮ್ಮ ಸಂಬಂಧದ ನಿಜವಾದ ಶಕ್ತಿಯು ಜನರ ನಡುವಿನ ಬಾಂಧವ್ಯದಲ್ಲಿದೆ. ಭಾರತೀಯ ಮೂಲದ ಸುಮಾರು ಮೂವತ್ತು ಲಕ್ಷ ಮಲೇಷ್ಯಾ ನಾಗರಿಕರು ನಮ್ಮ ಎರಡು ರಾಷ್ಟ್ರಗಳ ನಡುವೆ ಒಂದು ‘ಸಜೀವ ಸೇತುವೆ’ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿನ್ನೆ ನಿಮ್ಮೊಂದಿಗೆ ಅಲ್ಲಿನ ಭಾರತೀಯ ಸಮುದಾಯವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅದು ಬಹಳ ವಿಶೇಷವಾದ ಅನುಭವವಾಗಿತ್ತು. ಅವರು ನಿಮ್ಮ ಮೇಲೆ ಹೊಂದಿರುವ ಅಪಾರ ಗೌರವ ಮತ್ತು ಪ್ರೀತಿಯನ್ನು ನಾನು ಕಣ್ಣಾರೆ ಕಂಡೆ, ಇದು ನನಗೆ ಹೆಮ್ಮೆಯನ್ನು ತಂದಿತು. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ, ಮಲೇಷ್ಯಾದಂತಹ ಸ್ನೇಹಪರ ರಾಷ್ಟ್ರಗಳ ಬೆಂಬಲವು ಅತ್ಯಂತ ಮಹತ್ವದ್ದಾಗಿದೆ.

ಮಾನ್ಯರೇ,

ಭಾರತ ಮತ್ತು ಮಲೇಷ್ಯಾದ ಸಮೃದ್ಧಿಯು ಪರಸ್ಪರ ಬೆಸೆದುಕೊಂಡಿದೆ ಎಂದು ನಾವು ದೃಢವಾಗಿ ನಂಬುತ್ತೇವೆ. ಇಂದಿನ ಜಾಗತಿಕ ಅಸ್ಥಿರತೆಯ ಪರಿಸರದಲ್ಲಿ, ಸಮುದ್ರ ತೀರದ ನೆರೆಹೊರೆಯವರಾಗಿ ಭಾರತ ಮತ್ತು ಮಲೇಷ್ಯಾ ತಮ್ಮ ಸಂಬಂಧದ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇಂದು ನನ್ನ ಈ ಭೇಟಿಯ ಪ್ರಮುಖ ಸಂದೇಶವು ಅತ್ಯಂತ ಸ್ಪಷ್ಟವಾಗಿದೆ: ಭಾರತವು ಮಲೇಷ್ಯಾದೊಂದಿಗಿನ ತನ್ನ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಹಾಗೂ ಪ್ರತಿಯೊಂದು ಕ್ಷೇತ್ರದಲ್ಲೂ ಸಹಕಾರವನ್ನು ವಿಸ್ತರಿಸಲು ಮತ್ತು ಬಲಪಡಿಸಲು ಬಯಸುತ್ತದೆ. ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಹಾಗೂ ಭವ್ಯವಾದ ಸ್ವಾಗತಕ್ಕಾಗಿ ನಾನು ನಿಮಗೆ ಮತ್ತು ನಿಮ್ಮ ಇಡೀ ತಂಡಕ್ಕೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India remains among best-performing major economies: S&P Global

Media Coverage

India remains among best-performing major economies: S&P Global
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಎಪ್ರಿಲ್ 2026
April 19, 2026

Building a Stronger Bharat: Infrastructure Revolution, Economic Resilience & Inclusive Welfare Under PM Modi