"ಭಾರತೀಯ ಆರೋಗ್ಯ ಕ್ಷೇತ್ರ ಗಳಿಸಿರುವ ಜಾಗತಿಕ ವಿಶ್ವಾಸ ಇತ್ತೀಚಿನ ದಿನಗಳಲ್ಲಿ ಭಾರತವನ್ನು "ವಿಶ್ವದ ಔಷಧಾಲಯ" ಎಂದು ಕರೆಯುವಂತೆ ಮಾಡಿದೆ"
"ನಾವು ಇಡೀ ಮಾನವಕುಲದ ಯೋಗಕ್ಷೇಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಮತ್ತು, ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ನಾವು ಇಡೀ ಜಗತ್ತಿಗೆ ಈ ಮನೋಭಾವವನ್ನು ತೋರಿಸಿದ್ದೇವೆ.
"ಭಾರತವು ಉದ್ಯಮವನ್ನು ಬೃಹತ್ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ದೊಡ್ಡ ಸಮೂಹವನ್ನು ಹೊಂದಿದೆ. ಈ ಶಕ್ತಿಯನ್ನು "ಸಂಶೋಧನೆ ಮತ್ತು ಮೇಕ್ ಇನ್ ಇಂಡಿಯಾ" ಗೆ ಬಳಸಿಕೊಳ್ಳುವ ಅಗತ್ಯವಿದೆ.
"ಲಸಿಕೆಗಳು ಮತ್ತು ಔಷಧಿಗಳಿಗೆ ಪ್ರಮುಖ ಪದಾರ್ಥಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ನಾವು ಯೋಚಿಸಬೇಕು. ಇದು ಭಾರತ ಸಾಧಿಸಬೇಕಾದ ಒಂದು ಎಲ್ಲೆಯಾಗಿದೆ”
“ನಾನು ನಿಮ್ಮೆಲ್ಲರನ್ನೂ ಭಾರತದಲ್ಲಿ ಐಡಿಏಟ್ ಇನ್ ಇಂಡಿಯಾ, ಇನ್ನೋವೇಟ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಮಾಡಲು ಆಹ್ವಾನಿಸುತ್ತೇನೆ. ನಿಮ್ಮ ನಿಜವಾದ ಶಕ್ತಿಯನ್ನು ಅನ್ವೇಷಿಸಿ ಮತ್ತು ಜಗತ್ತಿಗೆ ಸೇವೆ ಸಲ್ಲಿಸಿ"

ನನ್ನ ಸಂಪುಟ ಸಹೋದ್ಯೋಗಿ ಶ್ರೀ ಮನ್ಸುಖ್ ಬಾಯ್, ಭಾರತೀಯ ಔಷಧ ಒಕ್ಕೂಟದ ಅಧ್ಯಕ್ಷ ಶ್ರೀ ಸಮೀರ್ ಮೆಹ್ತಾ, ಕೆಡಿಲ್ಲಾ ಹೆಲ್ತ್ ಕೇರ್ ಲಿಮಿಟೆಡ್ ಅಧ್ಯಕ್ಷ ಶ್ರೀ ಪಂಕಜ್ ಪಟೇಲ್ ಮತ್ತು ಗೌರವಾನ್ವಿತ ಅತಿಥಿಗಳೇ,

ನಮಸ್ತೆ!

ಮೊದಲಿಗೆ, ಈ ಜಾಗತಿಕ ನಾವೀನ್ಯತಾ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ನಾನು ಭಾರತೀಯ ಔಷಧ ಸಂಘಟನೆಯನ್ನು ಅಭಿನಂದಿಸುತ್ತೇನೆ.

ಕೋವಿಡ್-19 ಸಾಂಕ್ರಾಮಿಕ ರೋಗವು ಆರೋಗ್ಯ ಕ್ಷೇತ್ರದ ಪ್ರಾಮುಖ್ಯತೆಯನ್ನು ಗಮನಕ್ಕೆ ತಂದಿದೆ. ಅದು ಜೀವನಶೈಲಿಯೇ ಇರಬಹುದು, ಔಷಧಗಳೇ ಇರಬಹುದು, ವೈದ್ಯಕೀಯ ತಂತ್ರಜ್ಞಾನ ಅಥವಾ ಲಸಿಕೆಯೇ ಇರಬಹುದು, ಆರೋಗ್ಯ ಸಂರಕ್ಷಣೆಯ ಪ್ರತಿ ಅಂಶವು ಕಳೆದ 2 ವರ್ಷಗಳಲ್ಲಿ ಜಾಗತಿಕ ಗಮನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಔಷಧ ಉದ್ಯಮವು ಸಹ ಸವಾಲನ್ನು ಎದುರಿಸುತ್ತಿದೆ.

ಭಾರತದ ಆರೋಗ್ಯ ಸಂರಕ್ಷಣಾ ಕ್ಷೇತ್ರವು ಗಳಿಸಿದ ಜಾಗತಿಕ ನಂಬಿಕೆಯ ಫಲವಾಗಿ ಇತ್ತೀಚಿನ ದಿನಗಳಲ್ಲಿ ಭಾರತವನ್ನು "ವಿಶ್ವದ ಔಷಧಾಲಯ" ಎಂದು ಕರೆಯಲಾಗುತ್ತಿದೆ. ಈ ಉದ್ಯಮವು ಸುಮಾರು 30 ಲಕ್ಷ ಜನರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 13 ಶತಕೋಟಿ ಡಾಲರ್ ವ್ಯಾಪಾರ ವಹಿವಾಟು ನಡೆಸುತ್ತಿದೆ.  ಭಾರತೀಯ ಔಷಧ ಉದ್ಯಮವು ನಮ್ಮ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾಶಕ್ತಿಯಾಗಿದೆ.

ಕೈಗೆಟುಕುವ ಬೆಲೆಗೆ ಉತ್ತಮ ಗುಣಮಟ್ಟದ ಮತ್ತು ಅಧಿಕ ಪ್ರಮಾಣದ ಔಷಧ ಲಭ್ಯತೆಯ ಸಂಯೋಜನಾ ಸೂತ್ರ ಅಳವಡಿಸಿಕೊಂಡಿರುವ ಭಾರತೀಯ ಔಷಧ ವಲಯದ ಬಗ್ಗೆ ಇಡೀ ವಿಶ್ವಾದ್ಯಂತ ಅಪಾರ ಆಸಕ್ತಿ ಹುಟ್ಟುಹಾಕಿದೆ. 2014 ರಿಂದ ಭಾರತೀಯ ಆರೋಗ್ಯ ಸಂರಕ್ಷಣಾ ಕ್ಷೇತ್ರವು 12 ಶತಕೋಟಿ ಡಾಲರ್‌ ವಿದೇಶಿ ನೇರ ಹೂಡಿಕೆಯಲ್ಲಿ ಆಕರ್ಷಿಸಿದೆ. ಇನ್ನೂ ಹೆಚ್ಚಿನ ಹೂಡಿಕೆ ಸೆಳೆಯುವ ಸಾಮರ್ಥ್ಯವನ್ನು ಈ ವಲಯ ಹೊಂದಿದೆ.

ಸ್ನೇಹಿತರೆ,

ಯೋಗಕ್ಷೇಮದ ನಮ್ಮ ವ್ಯಾಖ್ಯಾನವು ಭೌತಿಕ ಗಡಿಗಳಿಂದ ಸೀಮಿತವಾಗಿಲ್ಲ. ನಾವು ಇಡೀ ಮಾನವಕುಲದ ಯೋಗಕ್ಷೇಮವನ್ನು ನಂಬುತ್ತೇವೆ.

सर्वे भवन्तु सुखिनः सर्वे सन्तु निरामयाः

ಕೋವಿಡ್-19 ಜಾಗತಿಕ ಸಾಂಕ್ರಾಮಿಕ ಕಾಲಘಟ್ಟದಲ್ಲಿ ನಾವು ಈ ಮನೋಭಾವವನ್ನು ಇಡೀ ಜಗತ್ತಿಗೆ ತೋರಿಸಿದ್ದೇವೆ. ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಆರಂಭಿಕ ಹಂತದಲ್ಲಿ ನಾವು 150 ದೇಶಗಳಿಗೆ ಜೀವ ಸಂರಕ್ಷಕ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡಿದ್ದೇವೆ. ನಾವು ಈ ವರ್ಷ ಸುಮಾರು 100 ದೇಶಗಳಿಗೆ 65 ದಶಲಕ್ಷ ಡೋಸ್ ಕೋವಿಡ್ ಲಸಿಕೆಗಳನ್ನು ರಫ್ತು ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ, ನಾವು ನಮ್ಮ ಲಸಿಕೆ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಿದಂತೆ, ನಾವು ಇನ್ನೂ ಹೆಚ್ಚಿನ ಉತ್ಪಾದನಾ ಸಾಮರ್ಥ್ಯವನ್ನು ಮಾಡುತ್ತೇವೆ.

ಸ್ನೇಹಿತರೆ,

ಕೋವಿಡ್-19 ಕಾಲಘಟ್ಟದಲ್ಲಿ ಜೀವನದ ಎಲ್ಲಾ ಹಂತಗಳಲ್ಲಿ ನಾವೀನ್ಯತೆಯ ಪ್ರಾಮುಖ್ಯತೆಯನ್ನು ಬಲಪಡಿಸಲಾಗಿದೆ. ನಮಗೆ ಎದಿರಾದ ಅಡೆತಡೆಗಳು ನಮ್ಮ ಜೀವನಶೈಲಿಯನ್ನು, ನಾವು ಯೋಚಿಸುವ ಮತ್ತು ಕೆಲಸ ಮಾಡುವ ವಿಧಾನವನ್ನು ಮರು-ಕಲ್ಪಿಸಲು ಒತ್ತಾಯಿಸಿದವು. ಭಾರತೀಯ ಔಷಧ ವಲಯದಲ್ಲೂ ಸಹ ವೇಗ, ಪ್ರಮಾಣ ಮತ್ತು ನಾವೀನ್ಯತೆಯ ಇಚ್ಛೆಯು ನಿಜವಾಗಿಯೂ ಪ್ರಭಾವಶಾಲಿಯಾಗಿದೆ. ಉದಾಹರಣೆಗೆ, ಭಾರತವು PPE ಕಿಟ್ ಗಳ ಪ್ರಮುಖ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಲು  ನಾವೀನ್ಯತೆಯ ಮನೋಭಾವವೇ ಕಾರಣ. ಆ ನಾವೀನ್ಯತೆಯ ಮನೋಭಾವದಿಂದಲೇ ಭಾರತವು ಕೋವಿಡ್ -19 ಲಸಿಕೆಗಳನ್ನು ಆವಿಷ್ಕರಿಸುವ, ಉತ್ಪಾದಿಸುವ, ನಿರ್ವಹಿಸುವ ಮತ್ತು ರಫ್ತು ಮಾಡುವಲ್ಲಿ ಮುಂಚೂಣಿಯಲ್ಲಿರಲು ಕಾರಣವಾಯಿತು.

ಸ್ನೇಹಿತರೆ,

ದೇಶದ ಔಷಧ ಕ್ಷೇತ್ರದ ಬೆಳವಣಿಗೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮಗಳಲ್ಲಿ ಅದೇ ನಾವೀನ್ಯತೆಯ ಮನೋಭಾವವು ಪ್ರತಿಫಲಿಸುತ್ತಿದೆ. ಭಾರತ ಸರ್ಕಾರವು ಕಳೆದ ತಿಂಗಳು, "ಭಾರತದ ಔಷಧ- ವೈದ್ಯಕೀಯ ತಂತ್ರಜ್ಞಾನ ವಲಯದಲ್ಲಿ ಸಂಶೋಧನೆ-ಅಭಿವೃದ್ಧಿ ಮತ್ತು ನಾವೀನ್ಯತೆ ವೇಗಗೊಳಿಸುವ ನೀತಿ"ಯ ಕರಡು ದಾಖಲೆಯನ್ನು ಬಿಡುಗಡೆ ಮಾಡಿದೆ. ಈ ನೀತಿಯು ಔಷಧ ಮತ್ತು ವೈದ್ಯಕೀಯ ಸಾಧನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರೋತ್ಸಾಹಿಸುವ ಭಾರತದ ಬದ್ಧತೆಯನ್ನು ಪ್ರತಿಫಲಿಸುತ್ತಿದೆ.

ಸ್ನೇಹಿತರೆ,

ಔಷಧ ಅನ್ವೇಷಣೆ ಮತ್ತು ನವೀನ ವೈದ್ಯಕೀಯ ಸಾಧನ ಸಲಕರಣೆಗಳ ಉತ್ಪಾದನೆಯಲ್ಲಿ ಭಾರತವನ್ನು ಸರದಾರನನ್ನಾಗಿ ಮಾಡುವ ನಾವೀನ್ಯತಾ  ಪರಿಸರ ವ್ಯವಸ್ಥೆ ರೂಪಿಸುವುದು ನಮ್ಮ ದೃಷ್ಟಿಯಾಗಿದೆ. ಎಲ್ಲಾ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಯ ಆಧಾರದ ಮೇಲೆ ನಮ್ಮ ನೀತಿಗಳನ್ನು ನಿರೂಪಿಸಲಾಗುತ್ತಿದೆ. ನಿಯಂತ್ರಣ ಮಾರ್ಗಸೂಚಿಗಳ ಬದಲಾವಣೆ ಕುರಿತ ಉದ್ಯಮ ಬೇಡಿಕೆಗಳನ್ನು ಈಡೇರಿಸಲು ನಾವು ಸಂವೇದನಾಶೀಲರಾಗಿದ್ದೇವೆ ಮತ್ತು ಈ ದಿಕ್ಕಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ಉತ್ಪಾದನಾ ವಲಯಕ್ಕೆ 30 ಸಾವಿರ ಕೋಟಿ ರೂಪಾಯಿ ಮೌಲ್ಯದ ಉತ್ಪಾದನಾ ಸಂಪರ್ಕಿತ ಉತ್ತೇಜನಾ ಯೋಜನೆ ಮೂಲಕ ದೇಶದ ಔಷಧ ಉದ್ಯಮಕ್ಕೆ ಬಹುದೊಡ್ಡ ಪ್ರಮುಖ ಉತ್ತೇಜನ ನೀಡಲಾಗಿದೆ.

ಸ್ನೇಹಿತರೆ,

ಉದ್ಯಮ(ಕೈಗಾರಿಕಾ ರಂಗ), ಶೈಕ್ಷಣಿಕ ವಲಯ ಮತ್ತು ವಿಶೇಷವಾಗಿ ನಮ್ಮ ಪ್ರತಿಭಾವಂತ ಯುವ ಸಮುದಾಯದ ಬೆಂಬಲ ಮುಖ್ಯವಾಗಿದೆ. ಅದಕ್ಕಾಗಿಯೇ ನಾವು ಶೈಕ್ಷಣಿಕ ವಲಯ ಮತ್ತು ಉದ್ಯಮದ ನಡುವಿನ ಸಹಭಾಗಿತ್ವವನ್ನು ಪ್ರೋತ್ಸಾಹಿಸುತ್ತಿದ್ದೇವೆ. ಭಾರತವು ಉದ್ಯಮ ವಲಯವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ದೊಡ್ಡ ಸಮೂಹ ಶಕ್ತಿಯನ್ನೇ ಹೊಂದಿದೆ. ಈ ಪ್ರಬಲ ಶಕ್ತಿಯನ್ನು ''ಡಿಸ್ಕವರ್ ಅಂಡ್ ಮೇಕ್ ಇನ್ ಇಂಡಿಯಾ''ಗೆ ಬಳಸಿಕೊಳ್ಳಬೇಕಾಗಿದೆ.

ಸ್ನೇಹಿತರೆ,

ನಾನು ಬಯಸುವ ಎರಡು ಕ್ಷೇತ್ರಗಳಲ್ಲಿ ನೀವು ಎಚ್ಚರಿಕೆಯಿಂದ ಅನ್ವೇಷಣೆ ನಡೆಸಬೇಕೆಂದು ಬಯಸುತ್ತೇನೆ. ಆ 2 ಕ್ಷೇತ್ರಗಳ ಮೇಲೆ ನಾನಿಲ್ಲಿ ಬೆಳಕು ಚೆಲ್ಲುತ್ತಿದ್ದೇನೆ. ಮೊದಲನೆಯದು ಕಚ್ಚಾ ವಸ್ತುಗಳ ಅವಶ್ಯಕತೆಗಳಿಗೆ ಸಂಬಂಧಿಸಿದ್ದಾಗಿದೆ.  ನಾವು ಕೋವಿಡ್-19 ವಿರುದ್ಧ ಹೋರಾಡುತ್ತಿರುವಾಗ, ಇದು ಹೆಚ್ಚು ಗಮನ ಹರಿಸಬೇಕಾದ ಒಂದು ಪ್ರಮುಖ ಸಮಸ್ಯೆ ಎಂದು ನಾವು ಕಂಡುಕೊಂಡಿದ್ದೇವೆ. ಇಂದು, ಭಾರತದ 130 ಕೋಟಿ ಜನರು ಭಾರತವನ್ನು ಆತ್ಮನಿರ್ಭರ್ ಮಾಡಲು ತಮ್ಮನ್ನು ತಾವು ತೊಡಗಿಸಿಕೊಂಡಿರುವಾಗ,  ಲಸಿಕೆಗಳು ಮತ್ತು ಔಷಧಗಳಿಗೆ ಅಗತ್ಯವಾದ ಪ್ರಮುಖ ಕಚ್ಚಾ ಪದಾರ್ಥಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ನಾವು ಯೋಚಿಸಬೇಕು. ಈ ವಿಷಯದಲ್ಲಿ ನಾವು ಗೆಲ್ಲಲೇಬೇಕಿದೆ.

ಈ ಸವಾಲನ್ನು ಜಯಿಸಲು ಹೂಡಿಕೆದಾರರು ಮತ್ತು ನವೋದ್ಯಮಿಗಳು ಒಟ್ಟಾಗಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದು ನನಗೆ ಖಾತ್ರಿಯಿದೆ. ಎರಡನೆಯ ಕ್ಷೇತ್ರವು ಭಾರತದ ಸಾಂಪ್ರದಾಯಿಕ ಔಷಧಗಳಿಗೆ ಸಂಬಂಧಿಸಿದ್ದಾಗಿದೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳಿಗೆ ಈಗ ಗಮನಾರ್ಹ ಮತ್ತು ಹೆಚ್ಚುತ್ತಿರುವ ಬೇಡಿಕೆಯಿದೆ. ಇತ್ತೀಚಿನ ವರ್ಷಗಳಲ್ಲಿ ಈ ಉತ್ಪನ್ನಗಳ ರಫ್ತು ವಹಿವಾಟು ತೀವ್ರ ಏರಿಕೆ ಕಾಣುತ್ತಿರುವುದನ್ನು ನಾವು ನೋಡುತ್ತಿದ್ದೇವೆ. 2020-21ರಲ್ಲಿ ಮಾತ್ರ, ಭಾರತವು 5 ಶತಕೋಟಿ ಡಾಲರ್‌ ಮೌಲ್ಯದ ಗಿಡಮೂಲಿಕೆ ಔಷಧಗಳನ್ನು ರಫ್ತು ಮಾಡಿದೆ. ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಲು ವಿಶ್ವ ಆರೋಗ್ಯ ಸಂಸ್ಥೆ (WHO) ಕೆಲಸ ಮಾಡುತ್ತಿದೆ. ಜಾಗತಿಕ ಅಗತ್ಯತೆಗಳು, ವೈಜ್ಞಾನಿಕ ಮಾನದಂಡಗಳು ಮತ್ತು ಉತ್ತಮ ಉತ್ಪಾದನಾ ಅಭ್ಯಾಸಗಳಿಗೆ ಅನುಗುಣವಾಗಿ ನಮ್ಮ ಸಾಂಪ್ರದಾಯಿಕ ಔಷಧಗಳನ್ನು ಜನಪ್ರಿಯಗೊಳಿಸಲು ನಾವು ಹೆಚ್ಚಿನ ಮಾರ್ಗಗಳನ್ನು, ವಿಧಾನಗಳನ್ನು ಕಂಡುಕೊಳ್ಳಬಹುದಲ್ಲವೆ?

ಸ್ನೇಹಿತರೆ,

ಭಾರತದಲ್ಲೇ ಕಲ್ಪನೆಗಳನ್ನು ರೂಪಿಸಿ, ಭಾರತದಲ್ಲೇ ಅನ್ವೇಷಿಸಿ, ಭಾರತದಲ್ಲಿ ತಯಾರಿಸಿ, ಭಾರತದಲ್ಲೇ ಉತ್ಪಾದಿಸಿ ಮತ್ತು ಇಡೀ ವಿಶ್ವಕ್ಕಾಗಿ ತಯಾರಿಸಿ ಮತ್ತು ಉತ್ಪಾದಿಸಿ ಎಂದು ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ, ನಿಮ್ಮ ನಿಜವಾದ ಶಕ್ತಿ ಸಾಮರ್ಥ್ಯವನ್ನು ಅನ್ವೇಷಿಸಿ ಮತ್ತು ಜಗತ್ತಿಗೆ ಸೇವೆ ಮಾಡಿ.

ನಾವೀನ್ಯತೆ ಮತ್ತು ಉದ್ಯಮಕ್ಕೆ ಅಗತ್ಯವಿರುವ ಪ್ರತಿಭೆ, ಸಂಪನ್ಮೂಲಗಳು ಮತ್ತು ಪರಿಸರ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ. ಔಷಧ ವಲಯದಲ್ಲಿ ನಮ್ಮ ಕ್ಷಿಪ್ರ ದಾಪುಗಾಲುಗಳು, ನಾವೀನ್ಯತೆಯ ಸ್ಫೂರ್ತಿ ಮತ್ತು ಸಾಧನೆಗಳನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ಇನ್ನೂ ಮುಂದೆ ಸಾಗಲು ಮತ್ತು ಹೊಸ ಎತ್ತರಕ್ಕೆ ಜಿಯಲು ಇದು ಅತ್ಯುತ್ತಮ ಸಮಯ. ನಾವೀನ್ಯತೆಗಾಗಿ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಭಾರತವು ಬದ್ಧವಾಗಿದೆ ಎಂದು ನಾನು ಜಾಗತಿಕ ಮತ್ತು ದೇಶೀಯ ಉದ್ಯಮದ ನಾಯಕರು ಮತ್ತು ಎಲ್ಲಾ ಪಾಲುದಾರರಿಗೆ ಭರವಸೆ ನೀಡುತ್ತೇನೆ. ಈ ಶೃಂಗಸಭೆಯು ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ನಾವೀನ್ಯತೆಯಲ್ಲಿ ಭಾರತೀಯ ಔಷಧ ಉದ್ಯಮದ ಸ್ಥಾನವನ್ನು ಬಲಪಡಿಸುವ ಪ್ರಮುಖ ಘಟನೆಯಾಗಿ ಕಾರ್ಯ ನಿರ್ವಹಿಸಲಿ.

ನಾನು ಮತ್ತೊಮ್ಮೆ ಈ ಕಾರ್ಯಕ್ರಮ ಸಂಘಟಕರನ್ನು ಅಭಿನಂದಿಸುತ್ತೇನೆ.  ಎರಡು ದಿನಗಳ ಶೃಂಗಸಭೆಯಲ್ಲಿ ನಡೆದ ವಿಸ್ತೃತ ಚರ್ಚೆಗಳು ಫಲಪ್ರದವಾಗಲಿ ಎಂದು ಹಾರೈಸುತ್ತೇನೆ.

ಎಲ್ಲರಿಗೂ ಧನ್ಯವಾದಗಳು...

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's engineering goods exports rise 21 pc in June, Oman shipments jump five‑fold

Media Coverage

India's engineering goods exports rise 21 pc in June, Oman shipments jump five‑fold
NM on the go

Nm on the go

Always be the first to hear from the PM. Get the App Now!
...
Prime Minister congratulates Weightlifter, Bindyarani Devi Sorokhaibam on winning Bronze at Commonwealth Games 2026
July 28, 2026

The Prime Minister, Shri Narendra Modi, has congratulated Weightlifter, Bindyarani Devi Sorokhaibam on winning the Bronze medal in the women’s 58 kg weightlifting event at the Commonwealth Games 2026.

The Prime Minister said that her success is the result of her hard work and determination.

Shri Modi extended his best wishes to her for her future endeavours.

The Prime Minister wrote on X;

“Yet another medal for India in Weightlifting! Proud of Bindyarani Devi Sorokhaibam for winning a Bronze in the Women's 58kg event at the Glasgow Commonwealth Games. Her success is due to her hard work and determination. Wishing her the very best for the endeavours ahead.

#CWG2026”