"ಐಎನ್‌ಎಸ್ ವಿಕ್ರಾಂತ್ ಅನ್ನು ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಎಂಎಸ್‌ಎಂಇಗಳು ಒದಗಿಸಿದ ದೇಶೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ"
"ಇದು ಭಾರತದ ಕಡಲ ಇತಿಹಾಸದಲ್ಲಿ ನಿರ್ಮಿಸಲಾದ ಅತಿದೊಡ್ಡ ಹಡಗು ಮತ್ತು ಅತ್ಯಾಧುನಿಕ ಯಾಂತ್ರೀಕೃತ ವೈಶಿಷ್ಟ್ಯಗಳನ್ನು ಹೊಂದಿದೆ"
"ಗತಕಾಲದ ವಸಾಹತುಶಾಹಿ ಕುರುಹು ತೊಡೆದುಹಾಕುವ ಹೊಸ ನೌಕಾ ಧ್ವಜವನ್ನು ಪ್ರಧಾನಿಯವರು ಅನಾವರಣಗೊಳಿಸಿದರು, ಈ ಧ್ವಜವನ್ನು ಛತ್ರಪತಿ ಶಿವಾಜಿಯವರಿಗೆ ಸಮರ್ಪಿಸಿದರು"
“ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ. ಇದು 21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ”
"ಐಎನ್‌ಎಸ್ ವಿಕ್ರಾಂತ್ ಸ್ವಾವಲಂಬಿ ಭಾರತದ ಪ್ರತಿಬಿಂಬವಾಗಿದೆ"
" ಐಎನ್‌ಎಸ್ ವಿಕ್ರಾಂತ್ ದೇಶೀಯ ಸಾಮರ್ಥ್ಯ, ದೇಶೀಯ ಸಂಪನ್ಮೂಲಗಳು ಮತ್ತು ದೇಶೀಯ ಕೌಶಲ್ಯಗಳ ಸಂಕೇತವಾಗಿದೆ"
"ಇದುವರೆಗೂ ಭಾರತೀಯ ನೌಕಾಪಡೆಯ ಧ್ವಜದಲ್ಲಿ ಗುಲಾಮಗಿರಿಯ ಗುರುತು ಉಳಿದಿತ್ತು. ಆದರೆ ಇಂದಿನಿಂದ ಛತ್ರಪತಿ ಶಿವಾಜಿಯಿಂದ ಪ್ರೇರಿತವಾಗಿರುವ ಹೊಸ ನೌಕಾ ಧ್ವಜವು ಸಮುದ್ರದಲ್ಲಿ ಮತ್ತು ಆಕಾಶದಲ್ಲಿ ಹಾರಾಡಲಿದೆ”
“ನೌಕಾಪಡೆಯ ಅನೇಕ ಮಹಿಳಾ ಸೈನಿಕರು ವಿಕ್ರಾಂತ್‌ನಲ್ಲಿ ಕೆಲಸ ನಿರ್ವಹಿಸಲಿದ್ದಾರೆ".

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್  ಕಾರ್ಯಾರಂಭಕ್ಕೆ  ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಗತಕಾಲದ ವಸಾಹತುಶಾಹಿ ಕುರುಹನ್ನು ತೊಡೆದುಹಾಕುವ ಮತ್ತು ಶ್ರೀಮಂತ ಭಾರತೀಯ ಕಡಲ ಪರಂಪರೆಗೆ ಸರಿಹೊಂದುವ ನೂತನ ನೌಕಾ ಧ್ವಜವನ್ನು (ನಿಶಾನ್) ಪ್ರಧಾನ ಮಂತ್ರಿಯವರು ಅನಾವರಣಗೊಳಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಇಂದು, ಕೇರಳದ ಕರಾವಳಿಯಲ್ಲಿ, ಪ್ರತಿಯೊಬ್ಬ ಭಾರತೀಯನೂ ಹೊಸ ಭವಿಷ್ಯದ ಸೂರ್ಯೋದಯಕ್ಕೆ ಸಾಕ್ಷಿಯಾಗುತ್ತಿದ್ದಾನೆ. ಐಎನ್‌ಎಸ್ ವಿಕ್ರಾಂತ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ವಿಶ್ವದ ದಿಗಂತದಲ್ಲಿ ಭಾರತದ ಉದಯೋನ್ಮುಖ ಶಕ್ತಿಯ ದ್ಯೋತಕವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕನಸು ಕಂಡಿದ್ದ ಸಮರ್ಥ ಮತ್ತು ಬಲಿಷ್ಠ ಭಾರತವನ್ನು ಇಂದು ನಾವು ಕಾಣುತ್ತಿದ್ದೇವೆ ಎಂದು ಹೇಳಿದರು. “ವಿಕ್ರಾಂತ್ ಬೃಹತ್ತಾಗಿದೆ, ಅಗಾಧವಾಗಿದೆ ಮತ್ತು ವಿಶಾಲವಾಗಿದೆ. ವಿಕ್ರಾಂತ್ ವಿಶಿಷ್ಟವಾಗಿದೆ ಮತ್ತು ವಿಶೇಷವಾಗಿದೆ. ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ. ಇದು 21ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಗುರಿಗಳು ದೂರವಾಗಿದ್ದರೆ, ಪ್ರಯಾಣಗಳು ಸುದೀರ್ಘವಾಗಿರುತ್ತವೆ, ಸಾಗರ ಮತ್ತು ಸವಾಲುಗಳಿಗೆ ಅಂತ್ಯವೆಂಬುದು ಇರುವುದಿಲ್ಲ – ಇದಕ್ಕೆ ಭಾರತದ ಉತ್ತರ ವಿಕ್ರಾಂತ್. ಆಜಾದಿ ಕಾ ಅಮೃತ ಮಹೋತ್ಸವದ ಅನುಪಮ ಅಮೃತವೆಂದರೆ ವಿಕ್ರಾಂತ್. ವಿಕ್ರಾಂತ್ ಸ್ವಾವಲಂಬಿ ಭಾರತದ ವಿಶಿಷ್ಟ ಪ್ರತಿಬಿಂಬವಾಗಿದೆ.” ಎಂದು ಪ್ರಧಾನಿ ಹೇಳಿದರು.

ರಾಷ್ಟ್ರದ ಹೊಸ ಮನಸ್ಥಿತಿಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಭಾರತಕ್ಕೆ ಯಾವುದೇ ಸವಾಲು ಸಹ ತುಂಬಾ ಕಷ್ಟಕರವಲ್ಲ. ಇಂದು, ಭಾರತವು ದೇಶೀಯ ತಂತ್ರಜ್ಞಾನದೊಂದಿಗೆ ಇಂತಹ ಬೃಹತ್ ವಿಮಾನವಾಹಕ ನೌಕೆಯನ್ನು ನಿರ್ಮಿಸುವ ವಿಶ್ವದ ರಾಷ್ಟ್ರಗಳ ಸಾಲಿಗೆ ಸೇರಿಕೊಂಡಿದೆ. ಇಂದು ಐಎನ್‌ಎಸ್ ವಿಕ್ರಾಂತ್ ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ ಮತ್ತು ದೇಶದಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದೆ ಎಂದರು. ನೌಕಾಪಡೆ, ಕೊಚ್ಚಿನ್ ಶಿಪ್‌ಯಾರ್ಡ್‌ನ ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ವಿಶೇಷವಾಗಿ ಈ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರ ಕೊಡುಗೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಓಣಂನ ಶುಭ ಸಂದರ್ಭದಲ್ಲಿ ಇದು ಇನ್ನಷ್ಟು ಸಂತೋಷವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಐಎನ್‌ಎಸ್ ವಿಕ್ರಾಂತ್‌ನ ಪ್ರತಿಯೊಂದು ಭಾಗವೂ ತನ್ನದೇ ಆದ ಅರ್ಹತೆ, ಶಕ್ತಿ, ಮತ್ತು ಅಭಿವೃದ್ಧಿ ಪಯಣವನ್ನು ಹೊಂದಿದೆ. ಇದು ದೇಶೀಯ ಸಾಮರ್ಥ್ಯ, ದೇಶೀಯ ಸಂಪನ್ಮೂಲಗಳು ಮತ್ತು ದೇಶೀಯ ಕೌಶಲ್ಯಗಳ ಸಂಕೇತವಾಗಿದೆ. ಇದರ ವಾಯುನೆಲೆಯಲ್ಲಿ ಸ್ಥಾಪಿಸಲಾದ ಉಕ್ಕು ಸಹ ದೇಶೀಯವಾದುದು, ಇದನ್ನು ಡಿ ಆರ್ ಡಿ ಒ  ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಮತ್ತು ಭಾರತೀಯ ಕಂಪನಿಗಳು ನಿರ್ಮಿಸಿವೆ ಎಂದು ಅವರು ಹೇಳಿದರು. ನೌಕೆಯ ಅಗಾಧತೆಯ ಬಗ್ಗೆ ವಿವರಿಸಿದ ಪ್ರಧಾನಿ, ಇದೊಂದು ತೇಲುವ ನಗರವಿದ್ದಂತೆ ಎಂದರು. ಇದು 5000 ಮನೆಗಳಿಗೆ ಸಾಕಾಗುವಷ್ಟು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಇದರಲ್ಲಿ ಬಳಸಿರುವ ವೈರಿಂಗ್ ಕೊಚ್ಚಿಯಿಂದ ಕಾಶಿಯವರೆಗೆ ತಲುಪುತ್ತದೆ ಎಂದು ಅವರು ಹೇಳಿದರು. ಐಎನ್‌ಎಸ್ ವಿಕ್ರಾಂತ್ ತಾವು ಕೆಂಪು ಕೋಟೆಯಿಂದ ಘೋಷಿಸಿದ ಪಂಚಪ್ರಾಣಗಳ ಜೀವಂತ ಸಾಕಾರವಾಗಿದೆ ಎಂದು ಪ್ರಧಾನಿ ಹೇಳಿದರು.

ಭಾರತದ ಕಡಲ ಪರಂಪರೆ ಮತ್ತು ನೌಕಾ ಸಾಮರ್ಥ್ಯಗಳ ಬಗ್ಗೆ ಮಾತನಾಡಿದ ಪ್ರಧಾನಿಯವರು, ಛತ್ರಪತಿ ಶಿವಾಜಿ ಮಹಾರಾಜರು ಈ ಸಮುದ್ರ ಶಕ್ತಿಯ ಬಲದ ಮೇಲೆ ನೌಕಾಪಡೆಯನ್ನು ನಿರ್ಮಿಸಿದರು, ಇದರಿಂದ ಅವರು ತಮ್ಮ ಶತ್ರುಗಳನ್ನು ಹಿಮ್ಮೆಟ್ಟಿಸಿದರು. ಬ್ರಿಟಿಷರು ಭಾರತಕ್ಕೆ ಬಂದಾಗ, ಅವರು ಭಾರತೀಯ ಹಡಗುಗಳ ಬಲ ಮತ್ತು ಅವುಗಳ ಮೂಲಕ ನಡೆಯುತ್ತಿದ್ದ ವ್ಯಾಪರವನ್ನು ಕಂಡು ಹೆದರಿದರು. ಆದ್ದರಿಂದ ಅವರು ಭಾರತದ ಸಮುದ್ರ ಶಕ್ತಿಯ ಬಲವನ್ನು ಮುರಿಯಲು ನಿರ್ಧರಿಸಿದರು. ಆ ಸಮಯದಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ಕಾನೂನನ್ನು ಜಾರಿಗೊಳಿಸುವ ಮೂಲಕ ಭಾರತೀಯ ಹಡಗುಗಳು ಮತ್ತು ವ್ಯಾಪಾರಿಗಳ ಮೇಲೆ ಹೇಗೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಯಿತು ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಇಂದು ಸೆಪ್ಟೆಂಬರ್ 2, 2022 ರ ಐತಿಹಾಸಿಕ ದಿನವಾಗಿದೆ. ಭಾರತವು ಗುಲಾಮಗಿರಿಯ ಕುರುಹನ್ನು, ಗುಲಾಮಗಿರಿಯ ಹೊರೆಯನ್ನು ತೆಗೆದುಹಾಕಿದೆ ಎಂದು ಪ್ರಧಾನಿ ಹೇಳಿದರು. ಭಾರತೀಯ ನೌಕಾಪಡೆಗೆ ಇಂದಿನಿಂದ ಹೊಸ ಧ್ವಜ ಸಿಕ್ಕಿದೆ. ಇಲ್ಲಿಯವರೆಗೆ ಭಾರತೀಯ ನೌಕಾಪಡೆಯ ಧ್ವಜದಲ್ಲಿ ಗುಲಾಮಗಿರಿಯ ಗುರುತು ಉಳಿದಿತ್ತು. ಆದರೆ ಇಂದಿನಿಂದ ಛತ್ರಪತಿ ಶಿವಾಜಿಯಿಂದ ಪ್ರೇರಿತವಾದ ನೌಕಾಪಡೆಯ ನೂತನ ಧ್ವಜವು ಸಮುದ್ರದಲ್ಲಿ ಹಾಗೂ ಆಕಾಶದಲ್ಲಿ ಹಾರಾಡಲಿದೆ ಎಂದು ಅವರು ಹೇಳಿದರು.

ವಿಕ್ರಾಂತ್ ನಮ್ಮ ಕಡಲ ವಲಯವನ್ನು ರಕ್ಷಿಸಲು ಇಳಿದಾಗ, ನೌಕಾಪಡೆಯ ಅನೇಕ ಮಹಿಳಾ ಸೈನಿಕರು ಸಹ ಇಲ್ಲಿ ನೆಲೆಸುತ್ತಾರೆ ಎಂದು ಪ್ರಧಾನಿ ಹೇಳಿದರು.  ಸಾಗರದ ಅಗಾಧ ಶಕ್ತಿ, ಅಪರಿಮಿತ ಸ್ತ್ರೀ ಶಕ್ತಿಯು ನವ ಭಾರತದ ಅತ್ಯುನ್ನತ ಗುರುತಾಗುತ್ತಿದೆ. ಇದೀಗ ಭಾರತೀಯ ನೌಕಾಪಡೆಯು ತನ್ನ ಎಲ್ಲಾ ಶಾಖೆಗಳನ್ನು ಮಹಿಳೆಯರಿಗಾಗಿ ಮುಕ್ತಗೊಳಿಸಲು ನಿರ್ಧರಿಸಿದೆ. ನಿರ್ಬಂಧಗಳನ್ನು ಈಗ ತೆಗೆದುಹಾಕಲಾಗುತ್ತಿದೆ. ದೈತ್ಯ ಅಲೆಗಳಿಗೆ ಯಾವುದೇ ಗಡಿಗಳಿಲ್ಲದಂತೆಯೇ, ಭಾರತದ ಹೆಣ್ಣುಮಕ್ಕಳಿಗೂ ಸಹ ಯಾವುದೇ ಗಡಿ ಅಥವಾ ನಿರ್ಬಂಧಗಳಿರುವುದಿಲ್ಲ ಎಂದು ಅವರು ಹೇಳಿದರು.

ಹನಿ ಹನಿ ನೀರು ಸೇರಿ ವಿಶಾಲ ಸಾಗರವಾಗುವಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ 'ಲೋಕಲ್ ಫಾರ್ ವೋಕಲ್' ಎಂಬ ಮಂತ್ರವನ್ನು ಪಾಲಿಸಿದರೆ, ದೇಶವು ಸ್ವಾವಲಂಬಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದ ಪ್ರಧಾನಿಯವರು, ಈ ಸ್ವಾತಂತ್ರ್ಯ ದಿನದಂದು ದೇಶೀಯ ಫಿರಂಗಿಗಳ  ಮೂಲಕ ನೀಡಿದ ಗೌರವ ವಂದನೆಯನ್ನು ಉಲ್ಲೇಖಿಸಿದರು. 

ಬದಲಾಗುತ್ತಿರುವ ಭೌಗೋಳಿಕ-ಕಾರ್ಯತಂತ್ರದ ಪರಿಸ್ಥಿತಿಯ ಕುರಿತು ಮಾತನಾಡಿದ ಪ್ರಧಾನಿಯವರು, ಈ ಹಿಂದೆ ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಹಿಂದೂ ಮಹಾಸಾಗರದಲ್ಲಿ ಭದ್ರತಾ ಕಾಳಜಿಗಳನ್ನು ನಿರ್ಲಕ್ಷಿಸಲಾಗಿತ್ತು ಎಂದು ಹೇಳಿದರು. ಆದರೆ, ಇಂದು ಈ ಪ್ರದೇಶವು ನಮಗೆ ದೇಶದ ಪ್ರಮುಖ ರಕ್ಷಣಾ ಆದ್ಯತೆಯಾಗಿದೆ. ಅದಕ್ಕಾಗಿಯೇ ನಾವು ನೌಕಾಪಡೆಗೆ ಬಜೆಟ್ ಅನ್ನು ಹೆಚ್ಚಿಸುವುದರಿಂದ ಅದರ ಸಾಮರ್ಥ್ಯವನ್ನು ಹೆಚ್ಚಿಸುವವರೆಗೆ ಪ್ರತಿಯೊಂದು ದಿಕ್ಕಿನಲ್ಲೂ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಬಲಿಷ್ಠ ಭಾರತ ಶಾಂತಿಯುತ ಮತ್ತು ಸುರಕ್ಷಿತ ಜಗತ್ತಿಗೆ ದಾರಿ ಮಾಡಿಕೊಡಲಿದೆ ಎಂದು ಪ್ರಧಾನಿ ಹೇಳಿದರು.

ಕೇರಳ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್. ಕೇಂದ್ರ ಸಚಿವರಾದ ಶ್ರೀ ರಾಜನಾಥ್ ಸಿಂಗ್, ಶ್ರೀ ಸರ್ಬಾನಂದ ಸೋನೋವಾಲ್, ಶ್ರೀ ವಿ ಮುರಳೀಧರನ್, ಶ್ರೀ ಅಜಯ್ ಭಟ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ದೋವಲ್, ನೌಕಾಪಡೆಯ ಮುಖ್ಯಸ್ಥ ಶ್ರೀ ಆರ್ ಹರಿ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಐಎನ್‌ಎಸ್ ವಿಕ್ರಾಂತ್

ಐಎನ್‌ಎಸ್ ವಿಕ್ರಾಂತ್ ಅನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ (ಡಬ್ಲ್ಯುಡಿಬಿ) ವಿನ್ಯಾಸಗೊಳಿಸಿದೆ ಮತ್ತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಸಾರ್ವಜನಿಕ ವಲಯದ  ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದೆ, ವಿಕ್ರಾಂತ್ ಅನ್ನು ಅತ್ಯಾಧುನಿಕ ಯಾಂತ್ರೀಕೃತ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ ಮತ್ತು ಭಾರತದ ಕಡಲ ಇತಿಹಾಸದಲ್ಲಿ ನಿರ್ಮಿಸಲಾದ ಅತಿದೊಡ್ಡ ಹಡಗು ಎನಿಸಿಕೊಂಡಿದೆ.

1971 ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ವಿಮಾನವಾಹಕ ನೌಕೆಯ ಹೆಸರನ್ನು ಈ ಸ್ವದೇಶಿ ವಿಮಾನವಾಹಕ ನೌಕೆಗೆ ಇಡಲಾಗಿದೆ. ಇದು ದೇಶದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಎಂ ಎಸ್ ಎಂ ಇ ಗಳು ಒದಗಿಸಿರುವ ದೊಡ್ಡ ಸಂಖ್ಯೆಯ ದೇಶೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಹೊಂದಿದೆ, ವಿಕ್ರಾಂತ್ ಕಾರ್ಯಾರಂಭದೊಂದಿಗೆ, ಭಾರತವು ಎರಡು ಕಾರ್ಯಾಚರಣೆಯ ವಿಮಾನವಾಹಕ ನೌಕೆಗಳನ್ನು ಹೊಂದಿರುತ್ತದೆ, ಇದು ರಾಷ್ಟ್ರದ ಕಡಲ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಈ ಸಂದರ್ಭದಲ್ಲಿ, ವಸಾಹತುಶಾಹಿ ಕುರುಹನ್ನು ತೊಡೆದುಹಾಕುವ ಮತ್ತು ಶ್ರೀಮಂತ ಭಾರತೀಯ ಕಡಲ ಪರಂಪರೆಗೆ ಸರಿಹೊಂದುವ ಹೊಸ ನೌಕಾ ಧ್ವಜವನ್ನು (ನಿಶಾನ್) ಪ್ರಧಾನ ಮಂತ್ರಿಯವರು ಅನಾವರಣಗೊಳಿಸಿದರು.

 

 

 

 

 

 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Two-wheeler sales rise 35% in February on low base, GST-led recovery

Media Coverage

Two-wheeler sales rise 35% in February on low base, GST-led recovery
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 3 ಮಾರ್ಚ್ 2026
March 03, 2026

Citizens Express Their Appreciation on Heartfelt Leadership, Historic Gains: PM Modi’s India Shines in Conservation, Commerce, and Clean Energy