ವಿಕ್ಷಿತ ಭಾರತದೆಡೆಗೆ ಭಾರತದ ಪ್ರಯಾಣದಲ್ಲಿ ಕಳೆದ ವರ್ಷದಲ್ಲಿ ಆಗಿರುವ ತ್ವರಿತ ಪ್ರಗತಿಯನ್ನು ರಾಷ್ಟ್ರಪತಿ ಜೀ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ: ಪ್ರಧಾನಮಂತ್ರಿ
ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಈ ಶತಮಾನದ ಎರಡನೇ ಕಾಲು ಭಾಗದ ಕಾಲಾವಧಿಯು ಮಹತ್ವದ್ದಾಗಿದೆ: ಪ್ರಧಾನಮಂತ್ರಿ
ಪ್ರತಿಯೊಬ್ಬ ನಾಗರಿಕನು ರಾಷ್ಟ್ರವು ನಿರ್ಣಾಯಕ ಕ್ಷಣವನ್ನು ತಲುಪಿದೆ ಎಂದು ಭಾವಿಸುತ್ತಿದ್ದಾನೆ ಮತ್ತು ಹಿಂತಿರುಗಿ ನೋಡದೆ ಮುಂದುವರಿಯುತ್ತಲೇ ಇರಬೇಕು: ಪ್ರಧಾನಮಂತ್ರಿ
ಭಾರತವು ಜಾಗತಿಕ ದಕ್ಷಿಣದ ಬಲವಾದ ಧ್ವನಿಯಾಗಿ ಹೊರಹೊಮ್ಮಿದೆ: ಪ್ರಧಾನಮಂತ್ರಿ
ದೇಶದ ಯುವಜನರಿಗೆ, ಇದು ಅಪರಿಮಿತ ಅವಕಾಶಗಳ ಕಾಲ: ಪ್ರಧಾನಮಂತ್ರಿ
ಎಷ್ಟೇ ಸವಾಲುಗಳಿದ್ದರೂ, ನಮ್ಮಲ್ಲಿ 140 ಕೋಟಿ ಪರಿಹಾರಗಳಿವೆ: ಪ್ರಧಾನಮಂತ್ರಿ
ಭಾರತ ಇನ್ನು ಮುಂದೆ ಅವಕಾಶಗಳನ್ನು ತಪ್ಪಿಸಿಕೊಳ್ಳುವುದಿಲ್ಲ, ಅದು ಈಗ ಮುಂಚೂಣಿಯಲ್ಲಿ ನಿಂತು ಮುನ್ನಡೆಸಲಿದೆ: ಪ್ರಧಾನಮಂತ್ರಿ

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಿಸಿದರು. ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ವಂದನಾ ನಿರ್ಣಯವನ್ನು ಬೆಂಬಲಿಸಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಸೌಭಾಗ್ಯ ತಮಗೆ ಸಿಕ್ಕಿದೆ ಎಂದು ಹೇಳಿದರು. ಕಳೆದ ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ  ಪ್ರಯಾಣದಲ್ಲಿ ತ್ವರಿತ ಪ್ರಗತಿಯಾಗಿದ್ದು, ಪ್ರತಿಯೊಂದು ವಲಯದಲ್ಲಿ ಮತ್ತು ಸಮಾಜದ ಎಲ್ಲಾ ವರ್ಗಗಳಲ್ಲಿ ಪರಿವರ್ತನೆ ಗೋಚರಿಸುತ್ತಿದೆ, ರಾಷ್ಟ್ರವು ಸರಿಯಾದ ದಿಕ್ಕಿನಲ್ಲಿ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತಿದೆ ಎಂದು ಹೇಳಿದರು. ರಾಷ್ಟ್ರಪತಿಗಳು ಈ ವಿಷಯಗಳನ್ನು ಸೂಕ್ಷ್ಮತೆ ಮತ್ತು ಸ್ಪಷ್ಟತೆಯೊಂದಿಗೆ ಪ್ರಸ್ತುತಪಡಿಸಿದ್ದಾರೆ ಎಂಬುದನ್ನೂ ಶ್ರೀ ಮೋದಿ ಉಲ್ಲೇಖಿಸಿದರು.

ರಾಷ್ಟ್ರಪತಿಗಳು ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ, ಬಡವರು, ಹಳ್ಳಿಗಳು, ರೈತರು, ಮಹಿಳೆಯರು, ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿಯ ಬಗ್ಗೆ ವಿವರವಾಗಿ ಮಾತನಾಡಿದರು, ಭಾರತದ ಪ್ರಗತಿಯ ಧ್ವನಿಯನ್ನು ಸಂಸತ್ತಿನಲ್ಲಿ ಮಂಡಿಸಿದರು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಭಾರತದ ಉಜ್ವಲ ಭವಿಷ್ಯದಲ್ಲಿ ಪ್ರತಿಯೊಂದು ವರ್ಗದ ಸಾಮರ್ಥ್ಯಗಳನ್ನು ವ್ಯಕ್ತಪಡಿಸುವುದರ ಜೊತೆಗೆ, ಯುವಜನರು ಭಾರತದ ಶಕ್ತಿಯನ್ನು ಹೇಗೆ ಮುನ್ನಡೆಸುತ್ತಿದ್ದಾರೆ ಎಂಬುದನ್ನು ರಾಷ್ಟ್ರಪತಿಗಳು ವಿವರಿಸಿದರು, ಇದು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಅವರು ಹೇಳಿದರು.

21ನೇ ಶತಮಾನದ ಮೊದಲ ಕಾಲುಭಾಗದ ಅವಧಿಯು  ಮುಕ್ತಾಯಗೊಂಡಿದೆ ಮತ್ತು ಕಳೆದ ಶತಮಾನದ ಎರಡನೇ ಕಾಲು ಭಾಗದ ಅವಧಿಯು  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕವಾಗಿದ್ದಂತೆಯೇ, ಈ ಶತಮಾನದ ಎರಡನೇ ಕಾಲುಭಾಗದ ಅವಧಿಯೂ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಅಷ್ಟೇ ಶಕ್ತಿಶಾಲಿ ಮತ್ತು ವೇಗವನ್ನು ಒಳಗೊಂಡಿರುತ್ತದೆ ಎಂದು ಶ್ರೀ ಮೋದಿ ಹೇಳಿದರು. ಪ್ರತಿಯೊಬ್ಬ ನಾಗರಿಕನು ರಾಷ್ಟ್ರವು ನಿರ್ಣಾಯಕ ಹಂತವನ್ನು ತಲುಪಿದೆ ಎಂದು ಭಾವಿಸುತ್ತಾನೆ, ಅಲ್ಲಿ ನಿಲ್ಲುವ ಅಥವಾ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ, ವೇಗದಲ್ಲಿ ಮುಂದುವರಿಯುವುದು, ಗುರಿಯನ್ನು ಸಾಧಿಸುವುದು ಮತ್ತು ಅದನ್ನು ತಲುಪಿದ ನಂತರ ಮಾತ್ರವೇ ಉಸಿರಾಡುವುದು ಮತ್ತು ಈ ದಿಕ್ಕಿನಲ್ಲಿ ದೇಶವು ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು.

ಭಾರತವು ಪ್ರಸ್ತುತ ಅನುಕೂಲಕರ ಸನ್ನಿವೇಶಗಳ ಅಪರೂಪದ ಸಂಗಮಕ್ಕೆ ಸಾಕ್ಷಿಯಾಗುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಇದನ್ನು ಅತ್ಯಂತ ಶುಭಕರ ಸಂಯೋಜನೆ/ಜೋಡಣೆ ಎಂದು ಕರೆದರು. ವಿಶ್ವದ ಶ್ರೀಮಂತ ರಾಷ್ಟ್ರಗಳಿಗೆ ವಯಸ್ಸಾಗುತ್ತಿರುವಾಗ, ಭಾರತವು ಏಕಕಾಲದಲ್ಲಿ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತಿದೆ ಮತ್ತು ಹೆಚ್ಚು ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ಪ್ರತಿಭಾನ್ವಿತ ಗುಂಪಿಗೆ ಜಾಗತಿಕ ಮನ್ನಣೆ ದೊರೆಯುವುದರೊಂದಿಗೆ, ಭಾರತದ ಕಡೆಗೆ ವಿಶ್ವದ ಆಕರ್ಷಣೆ ಗಮನಾರ್ಹವಾಗಿ ಬೆಳೆದಿದೆ ಎಂದೂ ಶ್ರೀ ಮೋದಿ ಒತ್ತಿ ಹೇಳಿದರು. ಭಾರತವು ಕನಸುಗಳು, ದೃಢನಿಶ್ಚಯ ಮತ್ತು ಸಾಮರ್ಥ್ಯ ಹೊಂದಿರುವ ಯುವ ಪ್ರತಿಭೆಗಳ ಆಗರವಾಗಿದೆ ಎಂದು ಅವರು ಗಮನಿಸಿದರು, ಇದನ್ನು ಅವರು ಶಕ್ತಿಯ ಎರಡನೇ ಆಶೀರ್ವಾದ ಎಂದು ಬಣ್ಣಿಸಿದರು.

ಭಾರತವು ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುತ್ತಾ ಭರವಸೆಯ ದಾರಿದೀಪವಾಗಿ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿ ಹೇಳಿದರು, ಮತ್ತು ಭಾರತದ ಆರ್ಥಿಕತೆಯಲ್ಲಿ ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರದ ವಿಶಿಷ್ಟ ಸಂಯೋಜನೆಯು ಅದರ ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದೂ ಹೇಳಿದರು. ತಮ್ಮ ಸರ್ಕಾರಕ್ಕೆ ಸೇವೆ ಸಲ್ಲಿಸಲು ಅವಕಾಶ ದೊರೆತ ಕಾಲದಲ್ಲಿ, ಭಾರತವನ್ನು 'ದುರ್ಬಲ ಐದು' ದೇಶಗಳಲ್ಲಿ ಒಂದಾಗಿ ಪರಿಗಣಿಸಲಾಗಿತ್ತು ಮತ್ತು ಸ್ವಾತಂತ್ರ್ಯದ ಸಮಯದಲ್ಲಿ ದೇಶವು ಆರನೇ ಅತಿದೊಡ್ಡ ಆರ್ಥಿಕತೆಯಾಗಿದ್ದರೂ, ಅದು ಹನ್ನೊಂದನೇ ಸ್ಥಾನಕ್ಕೆ ಕುಸಿದಿತ್ತು, ಆದರೆ ಇಂದು ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಅವರು ನೆನಪಿಸಿಕೊಂಡರು.

ವಿಜ್ಞಾನ, ಬಾಹ್ಯಾಕಾಶ, ಕ್ರೀಡೆ - ಹೀಗೆ ಪ್ರತಿಯೊಂದು ವಲಯದಲ್ಲೂ ಭಾರತವು ಆತ್ಮವಿಶ್ವಾಸದಿಂದ ತುಂಬಿದೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಕೋವಿಡ್ ನಂತರದ ಜಗತ್ತಿನಲ್ಲಿ, ಜಾಗತಿಕ ಅಸ್ಥಿರತೆ ಬೆಳೆದಂತೆ, ಹೊಸ ವಿಶ್ವ ವ್ಯವಸ್ಥೆಯು ಹೊರಹೊಮ್ಮುತ್ತಿದೆ ಮತ್ತು ನಿಷ್ಪಕ್ಷಪಾತ ವಿಶ್ಲೇಷಣೆಯು ಭಾರತದ ಕಡೆಗೆ ಸ್ಪಷ್ಟವಾದ ಒಲವು ತೋರಿಸುತ್ತಿದೆ ಎಂಬುದರತ್ತ ಅವರು ಗಮನ ಸೆಳೆದರು. ಭಾರತವು ಅನೇಕ ರಾಷ್ಟ್ರಗಳಿಗೆ ವಿಶ್ವಾಸಾರ್ಹ ಪಾಲುದಾರ ಮತ್ತು ಸ್ನೇಹಿತನಾಗಿ ಮಾರ್ಪಟ್ಟಿದೆ, ಜಾಗತಿಕ ಕಲ್ಯಾಣಕ್ಕೆ ಹೆಗಲಿಗೆ ಹೆಗಲು ಕೊಟ್ಟು ಕೊಡುಗೆ ನೀಡಿದೆ ಎಂದು ಅವರು ಒತ್ತಿ ಹೇಳಿದರು. ಭಾರತವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಜಾಗತಿಕ ದಕ್ಷಿಣದ ಬಲವಾದ ಧ್ವನಿಯಾಗಿದೆ ಮತ್ತು ಪ್ರಮುಖ ದೇಶಗಳೊಂದಿಗೆ "ಭವಿಷ್ಯಕ್ಕೆ ಅವಶ್ಯವಾದ ವ್ಯಾಪಾರ ಒಪ್ಪಂದಗಳನ್ನು" ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. 27 ದೇಶಗಳನ್ನು ಒಳಗೊಂಡ ಯುರೋಪಿಯನ್ ಒಕ್ಕೂಟದೊಂದಿಗೆ "ಎಲ್ಲಾ ಒಪ್ಪಂದಗಳ ತಾಯಿ" ಎಂಬಂತಿರುವ ಒಪ್ಪಂದ ಸೇರಿದಂತೆ ಒಂಬತ್ತು ಮಹತ್ವದ ವ್ಯಾಪಾರ ಒಪ್ಪಂದಗಳಿಗೆ ಇತ್ತೀಚೆಗೆ ಸಹಿ ಹಾಕಲಾಗಿದೆ ಎಂಬುದನ್ನೂ ಅವರು ಉಲ್ಲೇಖಿಸಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತದೊಂದಿಗೆ ಪಾಲುದಾರಿಕೆ ಹೊಂದಲು ಉತ್ಸುಕರಾಗಿರುವ ಪ್ರಸ್ತುತ ಸನ್ನಿವೇಶಕ್ಕೆ ವಿರುದ್ಧವಾಗಿ ಯಾವುದೇ ದೇಶವು ವ್ಯಾಪಾರ ಒಪ್ಪಂದಗಳಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸದ ಸ್ಥಿತಿಯಲ್ಲಿ ಭಾರತವನ್ನು ಬಿಟ್ಟಿದ್ದಕ್ಕಾಗಿ ಅವರು ಹಿಂದಿನ ಸರ್ಕಾರಗಳನ್ನು ಟೀಕಿಸಿದರು.

ಗುಜರಾತ್‌ನಲ್ಲಿ ಜಪಾನ್ ಪಾಲುದಾರ ರಾಷ್ಟ್ರವಾಗಿದ್ದ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ತಮ್ಮ ಅನುಭವವನ್ನು ನೆನಪಿಸಿಕೊಂಡ ಶ್ರೀ ಮೋದಿ, ಇಂದು ಭಾರತವು ಒಂದು ರಾಷ್ಟ್ರವಾಗಿ ಇದೇ ರೀತಿಯ ಶಕ್ತಿಯನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದರು. ಆರ್ಥಿಕ ಶಕ್ತಿ, ನಾಗರಿಕ ಶಕ್ತಿ ಮತ್ತು ಬಲವಾದ ಉತ್ಪಾದನಾ ಪರಿಸರ ವ್ಯವಸ್ಥೆ ಇದ್ದಾಗ ಮಾತ್ರ ಇದು ಸಾಧ್ಯ ಎಂದು ಅವರು ಒತ್ತಿ ಹೇಳಿದರು. ಈ ಆದ್ಯತೆಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಮತಬ್ಯಾಂಕ್ ರಾಜಕೀಯವನ್ನು ಟೀಕಿಸಿದರು ಮತ್ತು ವಿರೋಧ ಪಕ್ಷಗಳ ಸರ್ಕಾರಗಳಿಗೆ ಚಿಂತನಾ ದೃಷ್ಟಿಕೋನ, ಇಚ್ಛಾಶಕ್ತಿ ಮತ್ತು ಆಲೋಚನೆಗಳ ಕೊರತೆಯಿದೆ, ಇದು ರಾಷ್ಟ್ರವನ್ನು ಸಂಕಷ್ಟಕ್ಕೆ ದೂಡಿದೆ ಎಂದು ಪ್ರತಿಪಾದಿಸಿದರು.

ಸೇವೆ ಸಲ್ಲಿಸಲು ಅವಕಾಶ ನೀಡಿದ ಜನರಿಗೆ ಶ್ರೀ ಮೋದಿ ಕೃತಜ್ಞತೆ ಸಲ್ಲಿಸಿದರು, ತಮ್ಮ ಸರ್ಕಾರದ ಹೆಚ್ಚಿನ ಶಕ್ತಿಯು ಹಿಂದಿನ ತಪ್ಪುಗಳನ್ನು ಸರಿಪಡಿಸಲು ಮತ್ತು ಭಾರತದ ಜಾಗತಿಕ ಚಿತ್ರಣವನ್ನು ಪುನರ್ನಿರ್ಮಿಸಲು ಬಳಸಲಾಗಿದೆ ಎಂದು ಹೇಳಿದರು. ಭಾರತವು ಈಗ ನೀತಿಯಿಂದ ನಡೆಸಲ್ಪಡುತ್ತಿದೆ, ತಾತ್ಕಾಲಿಕ ವ್ಯವಸ್ಥೆಯಿಂದಲ್ಲ, ಮತ್ತು "ಸುಧಾರಣೆ, ಸಾಧನೆ, ಪರಿವರ್ತನೆ" ಎಂಬ ಮಂತ್ರವು ರಾಷ್ಟ್ರವನ್ನು "ಸುಧಾರಣಾ ಎಕ್ಸ್‌ಪ್ರೆಸ್" ನಲ್ಲಿ ಇರಿಸಿದೆ ಎಂದು ಅವರು ಒತ್ತಿ ಹೇಳಿದರು. ಉತ್ಪಾದನೆಯನ್ನು ಬಲಪಡಿಸುವುದು, ಉದ್ಯಮಿಗಳನ್ನು ಸಬಲೀಕರಣಗೊಳಿಸುವುದು ಮತ್ತು ಮೌಲ್ಯವರ್ಧನೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ರಚನಾತ್ಮಕ, ಪ್ರಕ್ರಿಯಾತ್ಮಕ ಮತ್ತು ನೀತಿ ಸುಧಾರಣೆಗಳನ್ನು ಅವರು ವಿವರಿಸಿದರು, ಭಾರತವು ಈಗ ಜಾಗತಿಕವಾಗಿ ಸ್ಪರ್ಧಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಘೋಷಿಸಿದರು.

ಜಾಗತಿಕ ಸಿಇಒ ವೇದಿಕೆಗಳು ಈಗ ಭಾರತೀಯ ಉದ್ಯಮಿಗಳನ್ನು ಸಮಾನವಾಗಿ ನೋಡುತ್ತಿವೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಎಲ್ಲಾ ರಾಜಕೀಯ ಪಕ್ಷಗಳ ನಿಯೋಗಗಳು ಸಹ ವಿದೇಶಗಳಲ್ಲಿ ಈ ಸಮಾನತೆಯನ್ನು ಅನುಭವಿಸಿವೆ, ಹೆಮ್ಮೆಯಿಂದ ಹಿಂತಿರುಗಿವೆ ಎಂದು ಹೇಳಿದರು. ದೀರ್ಘಕಾಲೀನ ಆರ್ಥಿಕ ಶಕ್ತಿಯನ್ನು ಒದಗಿಸುವ ಭಾರತದ ಎಂಎಸ್‌ಎಂಇ ಜಾಲದ ಬಲವನ್ನು ಅವರು ಒತ್ತಿ ಹೇಳಿದರು ಮತ್ತು ವಿಮಾನದ ಅನೇಕ ಘಟಕಗಳನ್ನು ಭಾರತದ ಸಣ್ಣ ಎಂಎಸ್‌ಎಂಇಗಳು ತಯಾರಿಸುತ್ತವೆ, ಇದು ಜಾಗತಿಕ ವಿಶ್ವಾಸವನ್ನು ಗಳಿಸುತ್ತಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಈ ಪ್ರಯತ್ನಗಳ ಫಲಿತಾಂಶಗಳು ಸ್ಪಷ್ಟವಾಗಿವೆ, ಪ್ರಮುಖ ರಾಷ್ಟ್ರಗಳು ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ನಿರ್ಮಿಸಲು ಉತ್ಸುಕವಾಗಿವೆ ಎಂದು ಅವರು ಹೇಳಿದರು. ಯುರೋಪಿಯನ್ ಒಕ್ಕೂಟದ ವ್ಯಾಪಾರ ಒಪ್ಪಂದ ಮತ್ತು ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಇತ್ತೀಚಿನ ಒಪ್ಪಂದವನ್ನು ಅವರು ಉಲ್ಲೇಖಿಸಿದರು, ಇವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಪ್ರಶಂಸಿಸಲಾಗಿದೆ ಎಂದರು. ಯುರೋಪಿಯನ್ ಒಕ್ಕೂಟದ ಒಪ್ಪಂದವು ಜಾಗತಿಕ ಸ್ಥಿರತೆಯಲ್ಲಿ ಜಗತ್ತಿಗೆ ವಿಶ್ವಾಸವನ್ನು ನೀಡಿತು ಮತ್ತು ಯುಎಸ್ ಒಪ್ಪಂದವು ವೇಗದ ಪ್ರಜ್ಞೆಯನ್ನು ಬಲಪಡಿಸಿತು, ಎರಡೂ ಜಗತ್ತಿಗೆ ಸಕಾರಾತ್ಮಕ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.

ಪ್ರಸ್ತುತ ಅವಕಾಶಗಳ ಹೆಚ್ಚಿನ ಪ್ರಯೋಜನ ಭಾರತದ ಯುವಜನರಿಗೆ ಸಿಗಲಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು, ತಾವು ಯುವಜನರ ಬಗ್ಗೆ ಮಾತನಾಡುವಾಗ, ಮಧ್ಯಮ ವರ್ಗದ ಯುವಜನರು, ನಗರ ಯುವಜನರು, ಗ್ರಾಮೀಣ ಯುವಜನರು, ಪುತ್ರರು ಮತ್ತು ಪುತ್ರಿಯರು ಎಲ್ಲರೂ ಅದರಲ್ಲಿ ಒಳಗೊಳ್ಳುತ್ತಾರೆ  ಮತ್ತು ಅವರನ್ನು ತುಣುಕುಗಳಾಗಿ ನೋಡಲಾಗದು ಎಂದು ಒತ್ತಿ ಹೇಳಿದರು. ಜಾಗತಿಕ ಮಾರುಕಟ್ಟೆ ಈಗ ಅವರಿಗೆ ಎಲ್ಲೆಡೆ ಅವಕಾಶಗಳನ್ನು ಒದಗಿಸುತ್ತಿರುವುದರಿಂದ, ರಾಷ್ಟ್ರವು ತನ್ನ ಯುವಜನರ ಬಲದ ಬಗ್ಗೆ ಹೆಮ್ಮೆ ಪಡಬೇಕು ಎಂದು ಅವರು ಒತ್ತಿ ಹೇಳಿದರು. ಶ್ರೀ ಮೋದಿ ಅವರು ಯುವಜನರನ್ನು ಪ್ರೋತ್ಸಾಹಿಸಿದರು, ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇನೆ ಎಂದು ಹೇಳಿದರು, ರಾಷ್ಟ್ರವು ಅವರನ್ನು ಬೆಂಬಲಿಸುತ್ತದೆ ಮತ್ತು ಜಗತ್ತು ಅವರ ಕೊಡುಗೆಗಾಗಿ ಕಾಯುತ್ತಿದೆ, ಅವರು ಧೈರ್ಯದಿಂದ ಮುಂದುವರಿಯಬೇಕೆಂದು ಒತ್ತಾಯಿಸಿದರು. ಆರೈಕೆದಾರರು ಸೇರಿದಂತೆ ಭಾರತೀಯ ವೃತ್ತಿಪರರಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಪ್ರಧಾನಮಂತ್ರಿ ಗಮನಿಸಿದರು, ಕಂಪನಿಗಳು ಅರ್ಹ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಭಾರತದಲ್ಲಿ ವಿಶೇಷ ಕಚೇರಿಗಳನ್ನು ಸ್ಥಾಪಿಸುತ್ತಿವೆ, ಇದು ವಿಶ್ವಾದ್ಯಂತ ಭಾರತೀಯ ವೃತ್ತಿಪರರಿಗೆ ತೆರೆದುಕೊಳ್ಳುತ್ತಿರುವ ವಿಶಾಲ ಅವಕಾಶಗಳನ್ನು ತೋರಿಸುತ್ತದೆ  ಎಂದರು.

ರಾಜ್ಯಸಭೆಯು ರಾಜ್ಯಗಳನ್ನು ಪ್ರತಿನಿಧಿಸುತ್ತದೆ ಎಂದು ಶ್ರೀ ಮೋದಿ ಗಮನಿಸಿದರು, ಆದರೆ ತಾವು ನೋಡಿದ ಚರ್ಚೆಯ ಮಟ್ಟವು ಹೆಚ್ಚಾಗಿರಬೇಕಿತ್ತು, ವಿಶೇಷವಾಗಿ ದಶಕಗಳಿಂದ ಆಡಳಿತ ನಡೆಸಿದವರು ಈ ಬಗ್ಗೆ ಗಮನ ಹರಿಸಬೇಕಾಗಿತ್ತು, ಆದರೆ ಅವರು ಅವಕಾಶವನ್ನು ಕಳೆದುಕೊಂಡರು, ಇದು ರಾಷ್ಟ್ರವು ಅವರನ್ನು ಹೇಗೆ ನಂಬಬಹುದು ಎಂಬ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಆರ್ಥಿಕ ಸಮಾನತೆಯ ಬಗ್ಗೆ ಮಾತನಾಡುವ, ಸದಸ್ಯರೊಬ್ಬರು ತಮ್ಮನ್ನು ತಾವು ರಾಜ ಎಂದು ಹೆಮ್ಮೆಯಿಂದ ಕರೆದುಕೊಳ್ಳುವ ವ್ಯಂಗ್ಯವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು ಅಂತಹ ವಿರೋಧಾಭಾಸಗಳಿಗೆ  ದೇಶವು  ಸಾಕ್ಷಿಯಾಗಬೇಕಾಗಿದೆಯೇ ಎಂದು ಪ್ರಶ್ನಿಸಿದರು.  ಪಶ್ಚಿಮ ಬಂಗಾಳದ ಆಡಳಿತ ಪಕ್ಷವನ್ನು ಟೀಕಿಸಿದ ಪ್ರಧಾನಮಂತ್ರಿ, ಅವರ ಆಡಳಿತವು ಎಲ್ಲಾ ನಿಯತಾಂಕಗಳಲ್ಲಿಯೂ ಅವನತಿಯಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸಿದೆ, ಜನರ ಭವಿಷ್ಯವನ್ನು ಕತ್ತಲೆಯಲ್ಲಿ ಬಿಡುತ್ತಿದೆ ಮತ್ತು ಅವರು ಇತರರಿಗೆ ಉಪನ್ಯಾಸ ನೀಡುತ್ತಿದ್ದಾರೆ ಎಂದು ಹೇಳಿದರು. ಅಕ್ರಮ ನುಸುಳುಕೋರರ ರಕ್ಷಣೆಯನ್ನು ಅವರು ಖಂಡಿಸಿದರು, ಅಂತಹ ನುಸುಳುಕೋರರು ಭಾರತೀಯ ಯುವಜನರ ಹಕ್ಕುಗಳು, ಜೀವನೋಪಾಯಗಳು, ಬುಡಕಟ್ಟು ಭೂಮಿಯನ್ನು ಕಸಿದುಕೊಳ್ಳುತ್ತಾರೆ ಮತ್ತು ಪುತ್ರರು ಮತ್ತು ಪುತ್ರಿಯರ ಜೀವಕ್ಕೆ ಬೆದರಿಕೆ ಹಾಕುತ್ತಾರೆ, ಜೊತೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಅನಿಯಂತ್ರಿತವಾಗಿ ಮುಂದುವರಿಯುತ್ತವೆ ಎಂದು ಹೇಳಿದರು. ನುಸುಳುಕೋರರನ್ನು ರಕ್ಷಿಸಲು ನ್ಯಾಯಾಲಯಗಳ ಮೇಲೆ ಒತ್ತಡ ಹೇರುವವರು ಭಾರತದ ಯುವಜನರಿಗೆ ದ್ರೋಹ ಮಾಡುತ್ತಿದ್ದಾರೆ ಮತ್ತು ಅಂತಹ ಕ್ರಮಗಳನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಭ್ರಷ್ಟಾಚಾರ ಮತ್ತು ದುಷ್ಕೃತ್ಯಗಳಲ್ಲಿ ಮುಳುಗಿರುವ ಸರ್ಕಾರಗಳ ಸದಸ್ಯರನ್ನು ಪ್ರಧಾನಮಂತ್ರಿ ಟೀಕಿಸಿದರು, ಅವರ ಅರಮನೆಗಳು ದ್ವೇಷದ ಸಂಕೇತಗಳಾಗಿವೆ ಎಂದು ಹೇಳಿದರು. ವಿರೋಧ ಪಕ್ಷಗಳೆಲ್ಲವೂ ಕೇಂದ್ರ ಮತ್ತು ರಾಜ್ಯಗಳಲ್ಲಿ ದಶಕಗಳಿಂದ ಅಧಿಕಾರದಲ್ಲಿದ್ದರೂ, ಅವರ ಗುರುತು ಭ್ರಷ್ಟಾಚಾರ ಮತ್ತು ವಿಫಲ ಆಡಳಿತ ಎಂದು ಅವರು ಘೋಷಿಸಿದರು. ಇಂದು ಮಸೂದೆಗಳನ್ನು ಚರ್ಚಿಸಿದಾಗ, ಅವುಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಲಾಗುತ್ತದೆ, ಆದರೆ ಹಿಂದೆ, ಒಪ್ಪಂದಗಳ ಚರ್ಚೆಗಳು ಬೋಫೋರ್ಸ್ ಅವ್ಯವಹಾರದಂತಹ ಹಗರಣಗಳನ್ನು ಮಾತ್ರ ಹೊರಗೆ ತಂದವು, ಏಕೆಂದರೆ ಆ ಸರ್ಕಾರಗಳು ನಾಗರಿಕರ ಜೀವನವನ್ನು ಸುಧಾರಿಸುವತ್ತ ಗಮನಹರಿಸದೆ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುವುದರ ಮೇಲೆ ಮಾತ್ರ ಗಮನಹರಿಸಿದವು ಎಂದು ಅವರು ಹೇಳಿದರು.

ಶ್ರೀ ಮೋದಿ ಬ್ಯಾಂಕಿಂಗ್ ವಲಯದ ಉದಾಹರಣೆಯನ್ನು ನೀಡಿದರು, ಅದನ್ನು ಆರ್ಥಿಕತೆಯ ಗ್ರಿಡ್ ಎಂದು ಬಣ್ಣಿಸಿದರು. 2014ಕ್ಕಿಂತ ಮೊದಲು, "ಫೋನ್ ಬ್ಯಾಂಕಿಂಗ್" ಯುಗವು ಚಾಲ್ತಿಯಲ್ಲಿತ್ತು, ಅಲ್ಲಿ ನಾಯಕರ ಕರೆಗಳು ಕೋಟ್ಯಂತರ ರೂಪಾಯಿಗಳ ವಿತರಣೆಯನ್ನು ನಿರ್ಧರಿಸುತ್ತಿದ್ದವು, ಆದರೆ ಬಡವರನ್ನು ತಿರಸ್ಕಾರದಿಂದ ನಡೆಸಿಕೊಳ್ಳಲಾಗುತ್ತಿತ್ತು ಮತ್ತು ಪ್ರವೇಶವನ್ನು ನಿರಾಕರಿಸಲಾಗುತ್ತಿತ್ತು ಎಂದು ಅವರು ನೆನಪಿಸಿಕೊಂಡರು. ಜನಸಂಖ್ಯೆಯ 50% ಕ್ಕಿಂತ ಹೆಚ್ಚು ಜನರು ಬ್ಯಾಂಕಿನ ಬಾಗಿಲುಗಳನ್ನು ಎಂದಿಗೂ ನೋಡಿರಲಿಲ್ಲ ಎಂದು ಅವರು ಎತ್ತಿ ತೋರಿಸಿದರು, ಆದರೆ ಆಗಿನ ಆಡಳಿತ ನಾಯಕರು ಹಣವನ್ನು ವೈಯಕ್ತಿಕ ಆಸ್ತಿಯಂತೆ ಪರಿಗಣಿಸುತ್ತಿದ್ದ ತಮ್ಮ ಸಹಚರರಿಗೆ ಶತಕೋಟಿ ಹಣವನ್ನು ಹಸ್ತಾಂತರಿಸುವುದನ್ನು ಖಚಿತಪಡಿಸಿಕೊಂಡರು. ಆಗಿನ ಆಡಳಿತ ವಿತರಣಾ ನಿಯಮದಲ್ಲಿ ಮತ್ತು ಈಗ ವಿರೋಧ ಪಕ್ಷದ ಮೈತ್ರಿಕೂಟದ ರಾಜ್ಯಗಳಲ್ಲಿ, ಬ್ಯಾಂಕಿಂಗ್ ವ್ಯವಸ್ಥೆಯು ಕುಸಿತದ ಅಂಚಿನಲ್ಲಿದೆ ಎಂಬುದರತ್ತ ಅವರು ಗಮನ ಸೆಳೆದರು. ತಾವು ಮೊದಲು ಪ್ರಧಾನಮಂತ್ರಿಯಾದಾಗ, ವಿದೇಶಿ ನಾಯಕರೊಬ್ಬರು ಸುಧಾರಣೆಗಳನ್ನು ಪ್ರಯತ್ನಿಸುವ ಮೊದಲು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಸಲಹೆ ನೀಡಿದ್ದರು, ಇದು ವ್ಯವಹಾರಗಳ ಭೀಕರ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಹಿಂದಿನ ಸರ್ಕಾರಗಳು ಎನ್‌ಪಿಎಗಳನ್ನು ಪರ್ವತಗಳಂತೆ ರಾಶಿ ಹಾಕಲು ಅವಕಾಶ ಮಾಡಿಕೊಟ್ಟವು, ಎನ್‌ಪಿಎ ಬಿಕ್ಕಟ್ಟಿನಿಂದ ಬದುಕುಳಿಯುವುದು ಹೇಗೆ ಎಂಬುದರ ಸುತ್ತ ನಿರಂತರ ಚರ್ಚೆಗಳು ನಡೆಯುತ್ತಿದ್ದವು, ಬ್ಯಾಂಕಿಂಗ್ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ದುರುಪಯೋಗವನ್ನು ಅವು ತೋರಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ಸವಾಲು ಅಗಾಧವಾಗಿತ್ತು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು, ಆದರೆ ಸರ್ಕಾರವು ಬ್ಯಾಂಕಿಂಗ್ ವ್ಯವಸ್ಥೆಯ ಎಲ್ಲಾ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬುದ್ಧಿವಂತಿಕೆಯಿಂದ ವರ್ತಿಸಿತು. ಸುಧಾರಣೆಗಳು ಅಗತ್ಯವಾಗಿದ್ದವು ಮತ್ತು ಅವುಗಳನ್ನು ಧೈರ್ಯದಿಂದ ಕೈಗೊಳ್ಳಲಾಯಿತು, ಪಾರದರ್ಶಕ ವ್ಯವಸ್ಥೆಯನ್ನು ಸೃಷ್ಟಿಸಲಾಯಿತು ಎಂದು ಅವರು ಒತ್ತಿ ಹೇಳಿದರು. ಹಲವಾರು ಬ್ಯಾಂಕಿಂಗ್ ಸುಧಾರಣೆಗಳನ್ನು ಕೈಗೊಳ್ಳಲಾಯಿತು ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ದುರ್ಬಲ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಬಲವಾದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಲಾಯಿತು ಎಂದೂ ಅವರು ಹೇಳಿದರು. ಮೋದಿ ಸರ್ಕಾರವು ಇದನ್ನು ಸಾಧಿಸಲು ಸಾಧ್ಯವಾದರೆ, ಅದು ಭಾರತಕ್ಕೆ ಒಂದು ಪ್ರಮುಖ ಸುಧಾರಣೆಯಾಗುತ್ತದೆ ಎಂದು ಒಬ್ಬ ಬುದ್ಧಿಜೀವಿ ಒಮ್ಮೆ ಬರೆದಿದ್ದನ್ನು ಶ್ರೀ ಮೋದಿ ನೆನಪಿಸಿಕೊಂಡರು ಮತ್ತು ಅಧಿಕಾರ ವಹಿಸಿಕೊಂಡ ತಕ್ಷಣ ಇದನ್ನು ಸಾಧಿಸಲಾಯಿತು ಎಂದು ಅವರು ಒತ್ತಿ ಹೇಳಿದರು. ಪರಿಣಾಮವಾಗಿ, ಬ್ಯಾಂಕುಗಳು ಆಳವಾಗಿ ಬೇರೂರಿರುವ ಅಸ್ವಸ್ಥತೆಯಿಂದ ಮುಕ್ತವಾದವು, ಅವುಗಳ ಆರೋಗ್ಯವು ಸ್ಥಿರವಾಗಿ ಸುಧಾರಿಸಿತು ಮತ್ತು ಅವು ಈಗ ವೇಗವಾಗಿ ಪ್ರಗತಿ ಹೊಂದುತ್ತಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆರೋಗ್ಯಕರ ಬ್ಯಾಂಕುಗಳೊಂದಿಗೆ, ವಹಿವಾಟುಗಳು ಹೆಚ್ಚಾದವು, ಜನರು ನಿಧಿಗೆ ಪ್ರವೇಶವನ್ನು ಪಡೆದರು ಮತ್ತು ಸಾಮಾನ್ಯ ನಾಗರಿಕರು ಹಣವನ್ನು ಪಡೆದರು ಎಂದು ಅವರು ಗಮನಿಸಿದರು. ಒಂದು ಕಾಲದಲ್ಲಿ ಬ್ಯಾಂಕುಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದ್ದ ಬಡ ಜನರಿಗೆ ಸಾಲಗಳು ತಲುಪುತ್ತವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಯುವಜನರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಅಧಿಕಾರ ನೀಡುವ ಮತ್ತು ಸ್ವಯಂ ಉದ್ಯೋಗಕ್ಕೆ ಸ್ಫೂರ್ತಿ ನೀಡುವ ಮುದ್ರಾ ಯೋಜನೆಯ ಯಶಸ್ಸನ್ನು ಅವರು ಎತ್ತಿ ತೋರಿಸಿದರು, ಇದು ಸಾಧಿತವಾದುದು ಕೇವಲ ಭಾಷಣಗಳ ಮೂಲಕವಲ್ಲ,  ನಿಜವಾದ ಬೆಂಬಲವನ್ನು ನೀಡುವ ಮೂಲಕ ಎಂದವರು ಹೇಳಿದರು. ಮುದ್ರಾ ಯೋಜನೆಯ ಮೂಲಕ ಯುವಜನರಿಗೆ ₹30 ಲಕ್ಷ ಕೋಟಿಗೂ ಹೆಚ್ಚು ಸಾಲಗಳನ್ನು ಖಾತರಿ ಇಲ್ಲದೆ ವಿತರಿಸಲಾಗಿದೆ ಎಂದು ಅವರು ಹೇಳಿದರು, ಇದರಿಂದಾಗಿ ಅವರು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಸಾಧ್ಯವಾಯಿತು, ಇದರಲ್ಲಿ ಗಮನಾರ್ಹ ಸಂಖ್ಯೆಯ ಮಹಿಳಾ ಫಲಾನುಭವಿಗಳು ಸೇರಿದ್ದಾರೆ. ಸ್ವಸಹಾಯ ಗುಂಪುಗಳ ಮೂಲಕ ಗ್ರಾಮೀಣ ಮಹಿಳೆಯರು ಈಗ ದೊಡ್ಡ ಕನಸು ಕಾಣುತ್ತಿದ್ದಾರೆ ಮತ್ತು ಸ್ವತಂತ್ರವಾಗಿ ನಿಲ್ಲುತ್ತಿದ್ದಾರೆ, 10 ಕೋಟಿ ಮಹಿಳೆಯರು ನೇರ ಆರ್ಥಿಕ ನೆರವು ಪಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಎಂಎಸ್‌ಎಂಇ ವಲಯಕ್ಕೆ ಸಾಕಷ್ಟು ಸಾಲಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. 2014 ಕ್ಕಿಂತ ಮೊದಲು ಬೆಟ್ಟದಷ್ಟಿದ್ದ ಎನ್‌ಪಿಎಗಳನ್ನು ಈಗ ಶೇಕಡಾ ಒಂದಕ್ಕಿಂತ ಕಡಿಮೆಗೆ ಇಳಿಸಲಾಗಿದೆ, ಇದು ಬ್ಯಾಂಕುಗಳ ಆರೋಗ್ಯವನ್ನು ಬಲಪಡಿಸುತ್ತದೆ ಎಂದು ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು. ಬ್ಯಾಂಕುಗಳು ಅಭೂತಪೂರ್ವ ಲಾಭವನ್ನು ದಾಖಲಿಸುತ್ತಿವೆ, ಇದು ಒಟ್ಟಾರೆ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

ಪ್ರಧಾನಮಂತ್ರಿಯವರು ಪಿಎಸ್‌ಯುಗಳ ಉದಾಹರಣೆಯನ್ನು ನೀಡಿದರು. ಅವುಗಳನ್ನು ಒಂದು ಕಾಲದಲ್ಲಿ ವಿಫಲಗೊಳ್ಳುವ, ಕುಸಿಯುವ ಅಥವಾ ಮುಚ್ಚುವ ಸಂಸ್ಥೆಗಳೆಂದು ಭಾವಿಸಲಾಗಿತ್ತು ಎಂದು ಹೇಳಿದರು. ವಾಸ್ತವಗಳ ಆಧಾರದ ಮೇಲೆ ಈ ಮನಸ್ಥಿತಿಯನ್ನು ಯಶಸ್ವಿಯಾಗಿ ಬದಲಾಯಿಸಲಾಗಿದೆ ಎಂದು ಅವರು ಹೇಳಿದರು. ಪಿಎಸ್‌ಯುಗಳ ಬಗ್ಗೆ ನಕಾರಾತ್ಮಕತೆಯನ್ನು ಹರಡುವವರನ್ನು ಶ್ರೀ ಮೋದಿ ಟೀಕಿಸಿದರು, ಅವರ ಕ್ರಮಗಳನ್ನು ಪಿಎಸ್‌ಯು ಗೇಟ್‌ಗಳ ಹೊರಗೆ ಕಾರ್ಮಿಕರನ್ನು ದಾರಿ ತಪ್ಪಿಸುವ ನಗರ ನಕ್ಸಲರಿಗೆ ಹೋಲಿಸಿದರು. ಎಲ್‌ಐಸಿ, ಎಸ್‌ಬಿಐ ಮತ್ತು ಎಚ್‌ಎಎಲ್‌ನಂತಹ ಸಂಸ್ಥೆಗಳು ಹಿಂದಿನ ಸರ್ಕಾರಗಳ ಅಡಿಯಲ್ಲಿ ದುರಾಡಳಿತಕ್ಕೆ ಒಳಗಾದವು, ಆದರೆ ತಮ್ಮ ಸರ್ಕಾರವು ಧೈರ್ಯವನ್ನು ತೋರಿಸಿತು ಮತ್ತು ನಿರಂತರ ಸುಧಾರಣೆಗಳನ್ನು ಜಾರಿಗೆ ತಂದಿತು ಎಂಬುದರತ್ತ ಪ್ರಧಾನಮಂತ್ರಿ ಗಮನಸೆಳೆದರು. ಎಲ್‌ಐಸಿ ತನ್ನ ಅತ್ಯುತ್ತಮ ಕಾರ್ಯಕ್ಷಮತೆಯ ಸಾಧನೆಯ ಅವಧಿಯನ್ನು ದಾಖಲಿಸಿದೆ ಮತ್ತು ವಿರೋಧ ಪಕ್ಷದ ಆಳ್ವಿಕೆಯಲ್ಲಿ ಮುಚ್ಚುವ ಅಂಚಿನಲ್ಲಿದ್ದ ಪಿಎಸ್‌ಯುಗಳು ಈಗ ಲಾಭವನ್ನು ದಾಖಲಿಸುತ್ತಿವೆ ಎಂದು ಅವರು ಎತ್ತಿ ತೋರಿಸಿದರು. ಪಿಎಸ್‌ಯುಗಳು ಈಗ ಮೇಕ್ ಇನ್ ಇಂಡಿಯಾವನ್ನು ವೇಗವರ್ಧಕ ಏಜೆಂಟ್‌ಗಳಾಗಿ ಮುನ್ನಡೆಸುತ್ತಿವೆ, ದಾಖಲೆಯ ಉದ್ಯೋಗವನ್ನು ಸೃಷ್ಟಿಸುತ್ತಿವೆ ಮತ್ತು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ದೊಡ್ಡ ಆದೇಶಗಳನ್ನು ಪಡೆಯುವ ಮೂಲಕ ಜಾಗತಿಕವಾಗಿ ವಿಸ್ತರಿಸುತ್ತಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಪಿಎಸ್‌ಯುಗಳು ಈಗ ಹಲವಾರು ದೇಶಗಳ ಅಭಿವೃದ್ಧಿ ಪ್ರಯಾಣಗಳಲ್ಲಿ ಭಾಗವಹಿಸುತ್ತಿವೆ, ಇದು ಈ ನಿರ್ಣಾಯಕ 25 ವರ್ಷಗಳ ಅವಧಿಯಲ್ಲಿ ಭಾರತದ ಗಮನಾರ್ಹ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ 10 ಕೋಟಿ ಸಣ್ಣ ರೈತರನ್ನು ನಿರ್ಲಕ್ಷಿಸಲಾಗಿತ್ತು ಎಂದು ಹೇಳಿದ ಪ್ರಧಾನಮಂತ್ರಿ ಮೋದಿ, ಪ್ರತಿಪಕ್ಷಗಳು ದೇಶದ ರೈತರಿಗೂ ದ್ರೋಹ ಬಗೆದಿವೆ ಎಂದು ಟೀಕಿಸಿದರು. ಸಣ್ಣ ರೈತರನ್ನು ನಿರ್ಲಕ್ಷಿಸಿ, ವ್ಯವಸ್ಥೆಯನ್ನು ನಡೆಸಲು ಕೆಲವು ದೊಡ್ಡ ರೈತರನ್ನು ನಿರ್ವಹಿಸುವುದು ಸಾಕು ಎಂದು ಪ್ರತಿಪಕ್ಷಗಳು ನಂಬಿದ್ದವು ಎಂದು ಅವರು ಹೇಳಿದರು. ತಮ್ಮ ಸರ್ಕಾರವು ಸಣ್ಣ ರೈತರ ನೋವನ್ನು ಅನುಭವಕ್ಕೆ ತೆಗೆದುಕೊಂಡು ಮತ್ತು ನೆಲದ ವಾಸ್ತವಗಳನ್ನು ಅರಿತುಕೊಂಡು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪರಿಚಯಿಸಿದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಅಲ್ಪಾವಧಿಯಲ್ಲಿಯೇ ₹4 ಲಕ್ಷ ಕೋಟಿಗಳನ್ನು ಸಣ್ಣ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ, ಇದು ಅವರಿಗೆ ಹೊಸ ಶಕ್ತಿ ಮತ್ತು ದೊಡ್ಡ ಕನಸು ಕಾಣುವ ಸಾಮರ್ಥ್ಯವನ್ನು ನೀಡಿದೆ ಎಂದು ಅವರು ಹೇಳಿದರು. ಭಾರತದ ಆಕಾಂಕ್ಷೆಗಳಿಗೆ ಅನುಗುಣವಾಗಿ ರೈತರು ಫಲಿತಾಂಶಗಳನ್ನು ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅನುಷ್ಠಾನಕ್ಕೆ ಸಂಬಂಧಿಸಿದ ಟೀಕೆಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು, ಕೆಲವು ಸದಸ್ಯರು ದೂರುಗಳನ್ನು ಎತ್ತಲು ಪೂರ್ವನಿರ್ಧರಿತವಾಗಿ ಬಂದಂತೆ ಕಾಣುತ್ತಿತ್ತು, ಅವರು ಆ ಮೂಲಕ ಅವರ ನಡುವಿನ  ಮೈತ್ರಿಯನ್ನು ಬಹಿರಂಗಪಡಿಸಿದರು ಎಂದು ಹೇಳಿದರು. ಈ ಬಗ್ಗೆ  ಒಂದು ಘಟನೆಯನ್ನು ವಿವರಿಸಿದರು, ತಾವು  ಕೇವಲ  ವಸ್ತು ಸ್ಥಿತಿಯನ್ನು ಮಂಡಿಸುತ್ತಿರುವುದಾಗಿಯೂ ಸ್ಪಷ್ಟಪಡಿಸಿದರು. ಗುಡ್ಡಗಾಡು ಪ್ರದೇಶಗಳಿಗೆ ಪ್ರತ್ಯೇಕ ಯೋಜನೆಗಳನ್ನು ವಿನ್ಯಾಸಗೊಳಿಸಲು ನಿರಾಕರಿಸಿದ ಯೋಜನಾ ಆಯೋಗದೊಂದಿಗೆ ಹೋರಾಡುತ್ತಿರುವುದಾಗಿ ಹಿರಿಯ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಪ್ರಧಾನಮಂತ್ರಿ ಸ್ವತಃ ಒಪ್ಪಿಕೊಂಡಿದ್ದಾರೆ ಎಂಬುದನ್ನೂ  ಶ್ರೀ ಮೋದಿ ನೆನಪಿಸಿಕೊಂಡರು. ದೋಷಪೂರಿತ ಕೆಲಸದ ಸಂಸ್ಕೃತಿಯನ್ನು ಒಪ್ಪಿಕೊಂಡರೂ, ಯಾವುದೇ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಯೋಜನಾ ಆಯೋಗವು ದಶಕಗಳಿಂದ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಲೇ ಇತ್ತು ಎಂದ ಅವರು, 2014 ರವರೆಗೆ ಜನರು ಸಂಕಷ್ಟವನ್ನು ಅನುಭವಿಸುವಂತಾಗಿತ್ತು ಎಂದೂ ಹೇಳಿದರು. ಅಧಿಕಾರಕ್ಕೆ ಬಂದ ನಂತರ, ತಮ್ಮ ಸರ್ಕಾರ ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗವನ್ನು ಸ್ಥಾಪಿಸಿತು, ಅದು ಈಗ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಜಾಗತಿಕ ಸಂಸ್ಥೆಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಭಿವೃದ್ಧಿ ಮಾದರಿಯಾಗಿ ಗುರುತಿಸುತ್ತಿರುವ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಯಶಸ್ಸನ್ನು ಅವರು ಎತ್ತಿ ತೋರಿಸಿದರು. ಒಂದು ಕಾಲದಲ್ಲಿ ಹಿಂದುಳಿದ ಮತ್ತು ನಿರ್ಲಕ್ಷ್ಯಕ್ಕೊಳಗಾಗಿದ್ದ ಜಿಲ್ಲೆಗಳು ಈಗ ರೂಪಾಂತರಕ್ಕೆ ಸಾಕ್ಷಿಯಾಗುತ್ತಿವೆ ಎಂದು ಅವರು ವಿವರಿಸಿದರು. ಇಂತಹ ಜಿಲ್ಲೆಗಳಿಗೆ ಶಿಕ್ಷಾರ್ಹ ರೀತಿಯಲ್ಲಿ ಅಧಿಕಾರಿಗಳನ್ನು ಕಳುಹಿಸುವ ಹಿಂದಿನ ಸಂಸ್ಕೃತಿಯನ್ನು ಶ್ರೀ ಮೋದಿ ಟೀಕಿಸಿದರು, ಇದರಿಂದ ಪರಿಸ್ಥಿತಿಗಳು ಹದಗೆಡುತ್ತಿದ್ದವು. ತಮ್ಮ ಸರ್ಕಾರವು ಯುವ, ಪ್ರತಿಭಾನ್ವಿತ ಅಧಿಕಾರಿಗಳನ್ನು ಮೂರು ವರ್ಷಗಳ ಅವಧಿಗೆ ನೇಮಿಸುವ ಮೂಲಕ, ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಇದನ್ನು ಬದಲಾಯಿಸಿದೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಯಾಗಿದ್ದ ಛತ್ತೀಸ್‌ಗಢದ ಬಸ್ತಾರ್, ಈಗ ಬಸ್ತಾರ್ ಒಲಿಂಪಿಕ್ಸ್‌ಗೆ ದೇಶಾದ್ಯಂತ ಹೆಸರುವಾಸಿಯಾಗಿದೆ, ಅಭಿವೃದ್ಧಿಯು ಹಳ್ಳಿಗಳನ್ನು ತಲುಪುತ್ತಿದೆ, ಅಲ್ಲಿ ಬಸ್‌ಗಳು ಮೊದಲ ಬಾರಿಗೆ ಕಂಡುಬರುತ್ತಿವೆ ಮತ್ತು ಅಭಿವೃದ್ಧಿ ಹಬ್ಬಗಳಾಗಿ ಆಚರಿಸಲ್ಪಡುತ್ತಿದೆ ಎಂಬುದನ್ನೂಅವರು ಎತ್ತಿ ತೋರಿಸಿದರು. ಈ ರೂಪಾಂತರವು ರಾಷ್ಟ್ರದ ಹೊಸ ದಿಕ್ಕನ್ನು ಪ್ರತಿಬಿಂಬಿಸುತ್ತದೆ, ಹಿಂದಿನ ನಿರ್ಲಕ್ಷ್ಯದ ಕಾಲಕ್ಕೆ  ತೀವ್ರವಾಗಿ ವ್ಯತಿರಿಕ್ತವಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಮಹತ್ವಾಕಾಂಕ್ಷೆಯ ಜಿಲ್ಲೆಗಳು ನಿಜವಾದ ಅನುಷ್ಠಾನದ ಅರ್ಥಕ್ಕೆ ಒಂದು ಉಜ್ವಲ ಉದಾಹರಣೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು, ಅಂತಹ ನೂರಾರು ಉದಾಹರಣೆಗಳಿದ್ದರೂ, ಅವರು ಇದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದರು. ಅನುಷ್ಠಾನದಿಂದ ಉಂಟಾಗುವ ಬದಲಾವಣೆಯನ್ನು ನೋಡಲು ವಿರೋಧ ಪಕ್ಷದ ನಾಯಕರು ವಿಫಲರಾಗಿದ್ದಾರೆ, ಹಳೆಯ ಯೋಜನಾ ಆಯೋಗದ ಜೀಪುಗಳು ಮತ್ತು ಹೇಸರಗತ್ತೆಗಳ ಮಾದರಿಯಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅದಕ್ಕಿಂತ ಹೆಚ್ಚಿನದನ್ನು ತಿಳಿದಿಲ್ಲ ಎಂದು ಅವರು ಹೇಳಿದರು. ತಾವು ಹುಟ್ಟುವ ಮೊದಲೇ ನರ್ಮದಾ ನದಿಗೆ ಅಣೆಕಟ್ಟು ನಿರ್ಮಿಸುವ ಕಲ್ಪನೆಯನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಹೊಂದಿದ್ದರು, ಅದಕ್ಕೆ ಶ್ರೀ ಜವಾಹರಲಾಲ್ ನೆಹರು ಅವರು ಅಡಿಪಾಯ ಹಾಕಿದ್ದರು, ಆದರೆ ತಾವು ಪ್ರಧಾನಮಂತ್ರಿಯಾದ ನಂತರವೇ ಉದ್ಘಾಟನೆ ನಡೆಯಿತು ಎಂದು ಶ್ರೀ ಮೋದಿ ನೆನಪಿಸಿಕೊಂಡರು, ಇದು ಹಿಂದಿನ ಸರ್ಕಾರಗಳ ಅನುಷ್ಠಾನದ ವೈಫಲ್ಯವನ್ನು ಒತ್ತಿಹೇಳುತ್ತದೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣವನ್ನು ಅನುಷ್ಠಾನಕ್ಕೆ ತರಲು ಗುಜರಾತ್‌ನ ರೈತರಿಗಾಗಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸಬೇಕಾಯಿತು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ  ಕ್ರಮ ಕೈಗೊಳ್ಳುವಂತೆ ಮಾಡಲು ತಮ್ಮನ್ನು ತಾವು ಪಣಕ್ಕಿಟ್ಟದ್ದನ್ನು ನೆನಪಿಸಿಕೊಂಡ ಅವರು  ಅಂತಿಮವಾಗಿ ಯೋಜನೆಯು ವೇಗವನ್ನು ಪಡೆದುಕೊಂಡಿತು ಎಂದೂ ನೆನಪಿಸಿಕೊಂಡರು. ಇಂದು ಶುದ್ಧ ನರ್ಮದಾ ನೀರು ಬಿಎಸ್‌ಎಫ್ ಸಿಬ್ಬಂದಿ ಇರುವ ಕಚ್‌ನ ಖಾವ್ಡಾದವರೆಗೆ ತಲುಪಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ಅನುಷ್ಠಾನಗೊಳಿಸದೆ, ದೀಪಗಳನ್ನು ಬೆಳಗಿ ಮತ್ತು ಕಲ್ಲುಗಳನ್ನು ಹಾಕಿ, ನಂತರ ಏನನ್ನೂ ಮಾಡದೆ ರಾಜಕೀಯ ಲಾಭಕ್ಕಾಗಿ ಯೋಜನೆಗಳನ್ನು ಘೋಷಿಸುವ ವಿರೋಧ ಪಕ್ಷಗಳನ್ನು ಪ್ರಧಾನಮಂತ್ರಿ ಟೀಕಿಸಿದರು.. ಈ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಲು, ತಾವು ಪ್ರಗತಿ ಎಂಬ ತಂತ್ರಜ್ಞಾನ ವೇದಿಕೆಯನ್ನು ರಚಿಸಿದ್ದನ್ನು ಪ್ರಸ್ತಾಪಿಸಿದ ಅವರು, ಇದು ಸ್ಥಗಿತಗೊಂಡ ಯೋಜನೆಗಳನ್ನು ಪರಿಶೀಲಿಸುತ್ತದೆ ಎಂದು ಹೇಳಿದರು. ಹಿಮಾಚಲ ಪ್ರದೇಶಕ್ಕಾಗಿ, ಬಹುಶಃ ಉನಾಗಾಗಿ ಸಂಸತ್ತಿನಲ್ಲಿ ಘೋಷಿಸಲಾದ ರೈಲಿನ ಉದಾಹರಣೆಯನ್ನು ಅವರು ನೀಡಿದರು, ತಾವು ಬರುವವರೆಗೂ ಅದಕ್ಕೆ ರೇಖಾಚಿತ್ರವನ್ನು ಕೂಡಾ ಸಿದ್ಧಪಡಿಸಲಾಗಿರಲಿಲ್ಲ, ಆದಾಗ್ಯೂ ಚುನಾವಣಾ ಲಾಭಕ್ಕಾಗಿ ಅದನ್ನು ಘೋಷಿಸಲಾಯಿತು. ಪ್ರಗತಿಯ ಮೂಲಕ, ಯೋಜನೆಗಳು ಏಕೆ ಸ್ಥಗಿತಗೊಂಡಿವೆ, ಯಾವ ಇಲಾಖೆಗಳು ಜವಾಬ್ದಾರರಾಗಿರುತ್ತವೆ, ರಾಜ್ಯಗಳು ಯಾವ ತೊಂದರೆಗಳನ್ನು ಎದುರಿಸುತ್ತಿವೆ ಮತ್ತು ದುರಾಡಳಿತದಿಂದಾಗಿ ವೆಚ್ಚಗಳು ₹900 ಕೋಟಿಯಿಂದ ₹90,000 ಕೋಟಿಗೆ ಹೇಗೆ ಏರಿತು ಎಂಬುದನ್ನು ತಾವು  ಪರಿಶೀಲಿಸಿದ್ದಾಗಿ  ಶ್ರೀ ಮೋದಿ ವಿವರಿಸಿದರು. ಪ್ರತಿ ತಿಂಗಳು ಈ ಯೋಜನೆಗಳನ್ನು ವೈಯಕ್ತಿಕವಾಗಿ ಪರಿಶೀಲಿಸುವ ಮೂಲಕ, ಅಂತಹ ಸಭೆಗಳ 50 ಸಂಚಿಕೆಗಳನ್ನು ಪೂರ್ಣಗೊಳಿಸುವ ಮೂಲಕ ಮತ್ತು ರಾಜ್ಯಗಳನ್ನು ಒಳಗೊಳಿಸಿಕೊಳ್ಳುವ ಮೂಲಕ, ತಾವು ಪ್ರಗತಿಯನ್ನು ಖಚಿತಪಡಿಸಿಕೊಂಡಿದ್ದಾಗಿಯೂ ಎಂದು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಮಟ್ಟದಲ್ಲಿ ಈ ವಿವರವಾದ ಮೇಲ್ವಿಚಾರಣೆಯಿಂದಾಗಿ, ₹85 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಅನ್‌ಲಾಕ್ ಮಾಡಲಾಗಿದೆ ಮತ್ತು ವೇಗಗೊಳಿಸಲಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು, ಅನುಷ್ಠಾನ ಎಂದರೆ  ನಿಜವಾಗಿಯೂ ಏನು ಎಂಬುದನ್ನು ಇದು ಸೂಚಿಸುತ್ತದೆ ಎಂದವರು ಹೇಳಿದರು. ರೈಲ್ವೆ, ರಸ್ತೆಗಳು, ನೀರಾವರಿ ಮತ್ತು ಗ್ರಾಮೀಣ ಮೂಲಸೌಕರ್ಯಗಳನ್ನು ಈ ಕಾರ್ಯವಿಧಾನದ ಅಡಿಯಲ್ಲಿ ಪರಿಶೀಲಿಸಲಾಗಿದೆ ಎಂದು ಅವರು ಹೇಳಿದರು.

ಜಮ್ಮು-ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗವನ್ನು ಉದಾಹರಣೆಯಾಗಿ ಶ್ರೀ ಮೋದಿ ಉಲ್ಲೇಖಿಸಿದರು, ಈ ಯೋಜನೆಯು ಮೂರು ದಶಕಗಳ ಕಾಲ ಸ್ಥಗಿತಗೊಂಡಿತ್ತು, ಅಂದರೆ ಎರಡು ತಲೆಮಾರುಗಳ ಕಾಲ, ಆದರೆ ತಮ್ಮ ಸರ್ಕಾರ ಅದನ್ನು ಪೂರ್ಣಗೊಳಿಸಿತು. ಹಿಮದಿಂದ ಆವೃತವಾದ ಭೂದೃಶ್ಯಗಳ ಮೂಲಕ ವಂದೇ ಭಾರತ್ ರೈಲು ಚಲಿಸುತ್ತಿರುವ ವೈರಲ್ ವೀಡಿಯೊವನ್ನು ಅವರು ಉಲ್ಲೇಖಿಸಿದರು, ಜನರು ಅದು ವಿದೇಶಿಯಾಗಿ ಕಾಣುತ್ತದೆ, ಆದರೆ ಅದು ಭಾರತ ಎಂದು ಹೇಳಿದ್ದನ್ನು ಉಲ್ಲೇಖಿಸಿದರು. ಇದು ಅನುಷ್ಠಾನದ ಶಕ್ತಿ ಎಂದು ಅವರು ಒತ್ತಿ ಹೇಳಿದರು.

ನಂತರ ಪ್ರಧಾನಮಂತ್ರಿ ಅಸ್ಸಾಂನ್ನು ಉಲ್ಲೇಖಿಸಿದರು, ಅರುಣಾಚಲ ಮತ್ತು ಅಸ್ಸಾಂ ಸಂಪರ್ಕಿಸುವ ಬೋಗಿಬೀಲ್ ಸೇತುವೆಯನ್ನು ಉಲ್ಲೇಖಿಸಿ ವಿರೋಧ ಪಕ್ಷಗಳನ್ನು ಟೀಕಿಸಿದರು, ಅದು ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ತಮ್ಮ ಸರ್ಕಾರವು ಪ್ರಗತಿಯ ಅಡಿಯಲ್ಲಿ ಅದನ್ನು ಪರಿಶೀಲಿಸಿ ಪೂರ್ಣಗೊಳಿಸಿದೆ ಎಂದು ಅವರು ಎತ್ತಿ ತೋರಿಸಿದರು, ಇದು ಅಸ್ಸಾಂ ಮತ್ತು ಇಡೀ ಈಶಾನ್ಯಕ್ಕೆ ಅಪಾರ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ತಮ್ಮ ಸರಕಾರ ಯೋಜನೆಗಳನ್ನು ಅವಧಿಬದ್ಧವಾಗಿ ಪೂರ್ಣಗೊಳಿಸುವುದು ಮಾತ್ರವಲ್ಲದೆ ನಿಗದಿತ ಅವಧಿಗೆ ಮುಂಚಿತವಾಗಿಯೇ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದೂ ಪ್ರಧಾನಮಂತ್ರಿ ಹೇಳಿದರು. ಭಾರತವು 2030 ರ ವೇಳೆಗೆ ಕೆಲವು ನಿರ್ದಿಷ್ಟ ಸೌರ ಗುರಿಗಳನ್ನು ಸಾಧಿಸಲು ಬದ್ಧವಾಗಿರುವುದಾಗಿ ಹೇಳಿತ್ತು.  ಆದರೆ ತಮ್ಮ ಸರಕಾರ ಅವುಗಳನ್ನು ನಿಗದಿತ ವೇಳೆಗಿಂತ ಮೊದಲೇ ಅಂದರೆ 2025 ರ ವೇಳೆಗೆ ಸಾಧಿಸಿತು. ಅದೇ ರೀತಿ, ಎಥೆನಾಲ್ ಗುರಿಗಳನ್ನು ಎರಡು ಮೂರು ವರ್ಷಗಳ ಮುಂಚಿತವಾಗಿ ಸಾಧಿಸಲಾಯಿತು. ಇದು ತಮ್ಮ ಸರ್ಕಾರದ ಅನುಷ್ಠಾನದ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಅವರು ಒತ್ತಿ ಹೇಳಿದರು, ಇದು ನಿಗದಿತ ಸಮಯಕ್ಕೆ ಮುಂಚಿತವಾಗಿ ಫಲಿತಾಂಶಗಳನ್ನು ನೀಡುವಲ್ಲಿ  ಭರವಸೆಯ ಗೆರೆಯನ್ನು ದಾಟಿ ಕೆಲಸ ಮಾಡುತ್ತಿರುವುದಕ್ಕೆ ಉದಾಹರಣೆ ಎಂದರು.

ಸವಾಲುಗಳು ಮತ್ತು ಪರಿಹಾರಗಳ ಕಡೆಗೆ ತಮ್ಮ ಪಕ್ಷದ ಕಾರ್ಯವಿಧಾನವು ವಿರೋಧ ಪಕ್ಷಗಳಿಗೆ ಹೋಲಿಸಿದಾಗ ಮೂಲಭೂತವಾಗಿ ಭಿನ್ನವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು, ಇದನ್ನು ಆಕಾಶ ಮತ್ತು ಭೂಮಿಯಷ್ಟು ವಿಶಾಲವಾದ ವ್ಯತ್ಯಾಸ ಎಂದು ಬಣ್ಣಿಸಿದರು. 140 ಕೋಟಿ ನಾಗರಿಕರು ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಸರ್ಕಾರದ ನಂಬಿಕೆ ಮತ್ತು ಜನರ ಮೇಲಿನ ಈ ನಂಬಿಕೆಯೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಎಂದು ಅವರು ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ, ವಿರೋಧ ಪಕ್ಷಗಳು ನಾಗರಿಕರನ್ನು ಸಮಸ್ಯೆಗಳೆಂದು ಪರಿಗಣಿಸುತ್ತವೆ ಎಂದು ಅವರು ಎತ್ತಿ ತೋರಿಸಿದರು. ಹಿಂದಿನ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಭಾರತದ ಜನರಲ್ಲಿ 140 ಕೋಟಿ ಪರಿಹಾರಗಳು ಅಸ್ತಿತ್ವದಲ್ಲಿವೆ ಎಂಬ ತಮ್ಮ ಸರ್ಕಾರದ ನಂಬಿಕೆಗಿಂತ ಭಿನ್ನವಾಗಿ, ನಾಗರಿಕರನ್ನು ಸಮಸ್ಯೆಗಳಾಗಿ ನೋಡುವ ಮನಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಒತ್ತಿ ಹೇಳಿದರು. ತಮ್ಮ ಸರ್ಕಾರಕ್ಕೆ, ನಾಗರಿಕರೆಂದರೆ ಬೆಂಬಲ ನೀಡುವಂತಹ ಬಂಡವಾಳ, ಭಾರತದ ಉಜ್ವಲ ಭವಿಷ್ಯದ ಶಿಲ್ಪಿಗಳು ಮತ್ತು ಚಾಲಕರು ಮತ್ತು ಅವರನ್ನು ಸಮಸ್ಯೆಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

ಜನರನ್ನು ಅವಮಾನಿಸುವುದು ವಿರೋಧ ಪಕ್ಷದ ಸ್ವಭಾವ ಮತ್ತು ಅದು ಅವರ ಸಂಸ್ಕೃತಿಯಲ್ಲಿ ಬೇರೂರಿದೆ  ಎಂದು ಶ್ರೀ ಮೋದಿ ಹೇಳಿದರು. ವಿರೋಧ ಪಕ್ಷಗಳು ಇತ್ತೀಚೆಗೆ ಭಾರತದ ರಾಷ್ಟ್ರಪತಿಗಳನ್ನು ಅವಮಾನಿಸಿವೆ ಮತ್ತು ಚುನಾವಣೆಯ ನಂತರ ಬಳಸಿದ ಪದಗಳು ನಾಚಿಕೆಗೇಡಿನವು ಎಂದು ಅವರು ಉಲ್ಲೇಖಿಸಿದರು. ಲೋಕಸಭೆಯಲ್ಲಿಯೂ ಸಹ, ರಾಷ್ಟ್ರಪತಿಗಳ ಭಾಷಣದ ಕುರಿತು ಚರ್ಚೆ ನಡೆಯಲಿಲ್ಲ, ಇದನ್ನು ಅವರು ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡಿದ ಗಂಭೀರ ಅವಮಾನ ಎಂದು ಬಣ್ಣಿಸಿದರು. ಬಡ, ಬುಡಕಟ್ಟು ಕುಟುಂಬದ ಮಹಿಳೆಯೊಬ್ಬರು ಅತ್ಯುನ್ನತ ಸಾಂವಿಧಾನಿಕ ಸ್ಥಾನಕ್ಕೆ ಏರಿದಾಗ, ಅವರನ್ನು ಅವಮಾನಿಸುವುದು ಅವರಿಗೆ ಮಾತ್ರವಲ್ಲದೆ ಬುಡಕಟ್ಟು ಸಮುದಾಯಕ್ಕೆ, ಮಹಿಳೆಯರಿಗೆ, ಸಂವಿಧಾನಕ್ಕೆ ಮತ್ತು ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಅವರು ಒತ್ತಿ ಹೇಳಿದರು.

ಲೋಕಸಭೆಯಲ್ಲಿ ಅಸ್ಸಾಂನ ಸದಸ್ಯರೊಬ್ಬರು ಅಧ್ಯಕ್ಷತೆ ವಹಿಸಿದ್ದಾಗ ಕಾಗದಗಳನ್ನು ಎಸೆದು ಮೇಜುಗಳನ್ನು ಹತ್ತಿದ ನೋವಿನ ಘಟನೆಯನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. ಇದು ಈಶಾನ್ಯ ಮತ್ತು ಅದರ ನಾಗರಿಕರಿಗೆ ಮಾಡಿದ ಅವಮಾನವಲ್ಲವೇ ಎಂದು ಅವರು ಪ್ರಶ್ನಿಸಿದರು. ಆಂಧ್ರಪ್ರದೇಶದ ದಲಿತ ಕುಟುಂಬದ ಮಗ ಅಧ್ಯಕ್ಷ ಸ್ಥಾನದಲ್ಲಿದ್ದಾಗ, ಅವರನ್ನೂ ಅವಮಾನಿಸಲಾಯಿತು, ಇದು ಅಂಚಿನಲ್ಲಿರುವ ಸಮುದಾಯಗಳ ಬಗ್ಗೆ ಪ್ರತಿಪಕ್ಷಗಳ ತಿರಸ್ಕಾರವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಅಸ್ಸಾಂನ ಜನರು ವಂಚನೆ/ದ್ರೋಹ ಎಸಗಿದ್ದಾರೆಂದು ಪ್ರತಿಪಕ್ಷಗಳು ಅವರ ಬಗ್ಗೆ ದ್ವೇಷಭಾವನೆಯನ್ನು ಹೊಂದಿರುವಂತಿದೆ ಅವರ ಈ ವರ್ತನೆ ಎಂದು ಶ್ರೀ ಮೋದಿ ಟೀಕಿಸಿದರು. ಭಾರತ ರತ್ನ ಭೂಪೇನ್ ಹಜಾರಿಕಾ ಅವರ ಬಗ್ಗೆ ಇರುವ ಅಪಾರ ಗೌರವವನ್ನು ಅವರು ನೆನಪಿಸಿಕೊಂಡರು, ಅವರ ಧ್ವನಿ ಮತ್ತು ಅಭಿವ್ಯಕ್ತಿ ರಾಷ್ಟ್ರವನ್ನು ಒಂದುಗೂಡಿಸಿತು ಮತ್ತು ತಮ್ಮ ಸರ್ಕಾರ ಅವರಿಗೆ ಭಾರತ ರತ್ನವನ್ನು ನೀಡಿ ಗೌರವಿಸಿತು ಎಂದು ಅವರು ಉಲ್ಲೇಖಿಸಿದರು. ಇದನ್ನು ವಿರೋಧಿಸಿದ್ದಕ್ಕಾಗಿ ಅವರು ವಿರೋಧ ಪಕ್ಷವನ್ನು ಟೀಕಿಸಿದರು, ಇದು ಅಸ್ಸಾಂಗೆ, ದೇಶಾದ್ಯಂತದ ಕಲಾ ಪ್ರೇಮಿಗಳಿಗೆ ಮತ್ತು ಹಜಾರಿಕಾ ಅವರ ಪರಂಪರೆಗೆ ಮಾಡಿದ ಅವಮಾನ ಎಂದು ಕರೆದರು.

ವಿರೋಧ ಪಕ್ಷದ ನಾಯಕರೊಬ್ಬರು ಸಿಖ್ ಸಂಸತ್ ಸದಸ್ಯರನ್ನು "ದೇಶದ್ರೋಹಿ" ಎಂದು ಕರೆದ ಘಟನೆಯನ್ನು ಶ್ರೀ ಮೋದಿ ಖಂಡಿಸಿದರು, ದುರಹಂಕಾರವು ಪರಾಕಾಷ್ಠೆಯನ್ನು ತಲುಪಿದೆ ಎಂದು ಹೇಳಿದರು. ಅನೇಕ ನಾಯಕರು ವಿರೋಧ ಪಕ್ಷವನ್ನು ತೊರೆದಿದ್ದಾರೆ, ಆದರೆ ಈ ಸಿಖ್ ಸಂಸದನನ್ನು ಹೊರತುಪಡಿಸಿ ಯಾರನ್ನೂ ದೇಶದ್ರೋಹಿಗಳೆಂದು ಕರೆಯಲಾಗಿಲ್ಲ ಎಂಬುದರತ್ತ ಅವರು ಗಮನಸೆಳೆದರು, ಇದು ಸಿಖ್ಖರಿಗೆ, ಗುರುಗಳಿಗೆ ಮಾಡಿದ ಅವಮಾನ ಮತ್ತು ಸಿಖ್ ಸಮುದಾಯದ ವಿರುದ್ಧ ವಿರೋಧ ಪಕ್ಷದ ಆಳವಾದ ಪೂರ್ವಾಗ್ರಹದ ಅಭಿವ್ಯಕ್ತಿ ಎಂದು ಅವರು ಬಣ್ಣಿಸಿದರು. ನಾಗರಿಕನನ್ನು ದೇಶದ್ರೋಹಿ ಎಂದು ಕರೆಯುವುದು ಸ್ವೀಕಾರಾರ್ಹವಲ್ಲ, ವಿಶೇಷವಾಗಿ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಕುಟುಂಬದಿಂದ ಬಂದವರು ಅವರು ಎಂದು ಒತ್ತಿ ಹೇಳಿದರು.

ರಾಜಕೀಯ ದ್ವೇಷದಿಂದಾಗಿ ಎರಡೂ ಕಾಲುಗಳನ್ನು ಕಳೆದುಕೊಂಡರೂ, ನಮ್ರತೆ ಮತ್ತು ಕಹಿ ಇಲ್ಲದೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಸದಾನಂದನ್ ಮಾಸ್ಟರ್ ಅವರ ಘನತೆಯೊಂದಿಗೆ ಪ್ರಧಾನಮಂತ್ರಿ ಇದನ್ನು ಹೋಲಿಸಿದರು. ತಮ್ಮ ಮೊದಲ ಭಾಷಣದ ಸಮಯದಲ್ಲಿ ಸದಾನಂದನ್ ಜೀ,  ತಮ್ಮ ಕೃತಕ ಅಂಗವನ್ನು ಸದನದಲ್ಲಿ ಇರಿಸಿದ ಕ್ಷಣವನ್ನು ಅತ್ಯಂತ ನೋವಿನಿಂದ ಕೂಡಿದ ಕ್ಷಣ ಎಂದು ಹೇಳಿದ ಪ್ರಧಾನಮಂತ್ರಿ ಅವರು  ಆದರೆ ಇದು ದೇಶಕ್ಕೆ ಸ್ಪೂರ್ತಿದಾಯಕವಾಗಿದೆ ಎಂದೂ ಬಣ್ಣಿಸಿದರು. ಸಮಾಜದಿಂದ ಗೌರವಿಸಲ್ಪಟ್ಟ ಯುವ ಶಿಕ್ಷಕನ ಮೇಲಿನ ಇಂತಹ ಹಿಂಸಾಚಾರಕ್ಕೆ ವಿರೋಧ ಪಕ್ಷಗಳ ಮೈತ್ರಿಕೂಟ ಕಾರಣ ಎಂದು ಶ್ರೀ ಮೋದಿ ಖಂಡಿಸಿದರು. ಕ್ರೂರ ದಾಳಿಯ ಹೊರತಾಗಿಯೂ ತಮ್ಮ ಸೇವಾ ಪ್ರತಿಜ್ಞೆಯನ್ನು ಮುಂದುವರೆಸಿದ್ದಕ್ಕಾಗಿ ಮತ್ತು ನೀತಿ ನಿರೂಪಣೆಗೆ ಕೊಡುಗೆ ನೀಡಿದ್ದಕ್ಕಾಗಿ ಅವರು ಸದಾನಂದನ್ ಮಾಸ್ಟರ್ ಅವರನ್ನು ಶ್ಲಾಘಿಸಿದರು, ಇದು ಹೆಮ್ಮೆಯ ವಿಷಯ ಎಂದು ಹೇಳಿದರು. ಅಂತಹ ವ್ಯಕ್ತಿಗಳು ತ್ಯಾಗ ಮತ್ತು ಸೇವೆಯ ಮನೋಭಾವವನ್ನು ಸಾಕಾರಗೊಳಿಸುತ್ತಾರೆ ಮತ್ತು ಅವರಂತಹ ಅಸಂಖ್ಯಾತ ಕಾರ್ಮಿಕರ ಸಮರ್ಪಣೆಯ ಮೂಲಕವೇ ರಾಷ್ಟ್ರವು ಭಾರತದ ಪ್ರಗತಿಗಾಗಿ ಬದುಕಲು ಮತ್ತು ಕೆಲಸ ಮಾಡಲು ಸ್ಫೂರ್ತಿ ಪಡೆಯುತ್ತದೆ ಎಂದರು.  

ಪ್ರಧಾನಮಂತ್ರಿ ಮೋದಿ ಅವರು, ತಮಗೆ ವಹಿಸಲಾದ ಜವಾಬ್ದಾರಿಗಳ ಹೊರತಾಗಿಯೂ, ರಾಷ್ಟ್ರಕ್ಕಾಗಿ ಬದುಕಲು ಕಲಿತಿರುವುದಾಗಿ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಬಲಪಡಿಸಲು ಕೆಲಸ ಮಾಡುತ್ತಿರುವುದಾಗಿ, ಯುವಜನರಿಗೆ ಗಟ್ಟಿಯಾದ ನೆಲೆಯನ್ನು ಸಿದ್ಧಪಡಿಸುತ್ತಿರುವುದಾಗಿ ಹೇಳಿದರು. ವಿರೋಧ ಪಕ್ಷಗಳು ಯಾವುದೇ ವಿಷಾದವನ್ನು ತೋರಿಸುವುದಿಲ್ಲ ಬದಲು ಪ್ರಧಾನಮಂತ್ರಿಯವರು ರಾಜ್ಯಸಭೆಯಲ್ಲಿ ಅಳುತ್ತಿದ್ದರು ಎಂದು ಹೇಳಿಕೊಳ್ಳುತ್ತಾರೆ, ಇದು ಅವರು ಬೆಳೆದ ಪರಿಸರದ ಮೌಲ್ಯಗಳು ಮತ್ತು ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. 2002 ರಿಂದ, ವಿರೋಧ ಪಕ್ಷದಲ್ಲಿರಲಿ ಅಥವಾ 2004 ರಿಂದ ಅಧಿಕಾರದಲ್ಲಿರಲಿ, ಮತ್ತು 2014ರಲ್ಲಿ ಸಂಸತ್ತನ್ನು ಪ್ರವೇಶಿಸಿದ ನಂತರ, 25 ವರ್ಷಗಳಿಂದ ಒಂದೇ ಒಂದು ಅಧಿವೇಶನವು ವಿರೋಧ ಪಕ್ಷಗಳು ತಮ್ಮನ್ನು ನಿಂದಿಸದೆ ಕಳೆದಿಲ್ಲ ಎಂದು ಅವರು ನೆನಪಿಸಿಕೊಂಡರು.

ತಮ್ಮ ಸರ್ಕಾರವು 370ನೇ ವಿಧಿಯನ್ನು ತೆಗೆದುಹಾಕಿತು, ಈಶಾನ್ಯಕ್ಕೆ ಶಾಂತಿ ಮತ್ತು ಅಭಿವೃದ್ಧಿಯನ್ನು ತಂದಿತು, ಪಾಕಿಸ್ತಾನಿ ಭಯೋತ್ಪಾದಕರ ಮನೆಗಳಿಗೆ ನುಗ್ಗುವ ಮೂಲಕ ಅವರಿಗೆ ಪ್ರತಿಕ್ರಿಯಿಸಿತು, ಆಪರೇಷನ್ ಸಿಂಧೂರ್ ನಡೆಸಿತು, ರಾಷ್ಟ್ರವನ್ನು ಮಾವೋವಾದಿ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿತು ಮತ್ತು ಅಂದಿನ ಪ್ರಧಾನಮಂತ್ರಿಯವರು ಸಹಿ ಮಾಡಿದ ಅನ್ಯಾಯದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ವಿರೋಧ ಪಕ್ಷದ ನಿಜವಾದ ಸಮಸ್ಯೆ ಎಂದರೆ ತಾನು ಈ ಸ್ಥಾನಕ್ಕೆ ಹೇಗೆ ತಲುಪಿದೆ ಎಂಬುದನ್ನು ಒಪ್ಪಿಕೊಳ್ಳುವಲ್ಲಿ ಇರುವ  ಅಸಮರ್ಥತೆ ಮತ್ತು ತಮ್ಮ ನಿರಂತರ ಉಪಸ್ಥಿತಿಯಿಂದ ಅವರಲ್ಲಿ ಹೆಚ್ಚುತ್ತಿರುವ ಹತಾಶೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ವಿರೋಧ ಪಕ್ಷದವರು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಯಾವುದೇ ಅರ್ಥವಿಲ್ಲ ಎಂದು ನಂಬುತ್ತಾರೆ, ಪ್ರಧಾನಮಂತ್ರಿ ಕುರ್ಚಿ ತಮ್ಮ ಕುಟುಂಬದ ಆನುವಂಶಿಕತೆ ಎಂದು ಭಾವಿಸುತ್ತಾರೆ ಮತ್ತು ಬೇರೆ ಯಾರೂ ಅದನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ನಂಬುತ್ತಾರೆಂದರು. .

ವಿರೋಧ ಪಕ್ಷಗಳಿಗೆ ರಾಷ್ಟ್ರವು ದಶಕಗಳ ಕಾಲ ಅವಕಾಶಗಳನ್ನು ನೀಡಿತು, ಜನರು ತಮ್ಮ ಭವಿಷ್ಯವನ್ನು ಅವರ ಮೇಲೆ ಪಣಕ್ಕಿಟ್ಟು ಅವಕಾಶ ನೀಡಿದರು, ಆದರೆ ಅವರು ಬಡತನ ನಿರ್ಮೂಲನೆಯ ಘೋಷಣೆಗಳೊಂದಿಗೆ ದೇಶವನ್ನು ದಾರಿ ತಪ್ಪಿಸಿದರು ಎಂದು ಪ್ರಧಾನಮಂತ್ರಿ ಮೋದಿ ಉಲ್ಲೇಖಿಸಿದರು. ಪ್ರತಿ ವಿರೋಧ ಪಕ್ಷದ ಪ್ರಧಾನಮಂತ್ರಿಯೂ ಕೆಂಪು ಕೋಟೆಯಿಂದ ಬಡತನ ನಿರ್ಮೂಲನೆಯ ಬಗ್ಗೆ ಮಾತನಾಡಿದರು, ಆದರೆ ಯಾರೂ ಎಂದಿಗೂ ದೃಢವಾದ ಕ್ರಮವನ್ನು ಮಂಡಿಸಲಿಲ್ಲ, ಏಕೆಂದರೆ ಅವರ ಘೋಷಣೆಗಳು ಟೊಳ್ಳಾಗಿದ್ದವು ಎಂದು ಅವರು ಹೇಳಿದರು. ಬಡವರನ್ನು ಸಬಲೀಕರಣಗೊಳಿಸುವ ಮಾರ್ಗವನ್ನು ತಾವು ಆರಿಸಿಕೊಂಡಿರುವುದಾಗಿ ಶ್ರೀ ಮೋದಿ ಒತ್ತಿ ಹೇಳಿದರು, ಸರ್ಕಾರಿ ಯೋಜನೆಗಳನ್ನು ಅರ್ಥಮಾಡಿಕೊಂಡು ಮತ್ತು ಅಳವಡಿಸಿಕೊಂಡಿದ್ದಕ್ಕಾಗಿ ಭಾರತದ ಬಡವರಿಗೆ ನಮಸ್ಕರಿಸಿದರು ಮತ್ತು ತಮ್ಮದೇ ಆದ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. ಸರ್ಕಾರದ ಉದ್ದೇಶದಲ್ಲಿ ಬಡವರ ನಂಬಿಕೆಯನ್ನು ಅವರು ಶ್ಲಾಘಿಸಿದರು ಮತ್ತು 25 ಕೋಟಿ ಕುಟುಂಬಗಳು ಬಡತನವನ್ನು ಸೋಲಿಸಿ ಹತಾಶೆಯಿಂದ ಎದ್ದುನಿಂತು ಪ್ರಗತಿಯಲ್ಲಿ ಪಾಲುದಾರರಾದರು ಎಂದು ಗಮನಿಸಿದರು. ಭರವಸೆಯನ್ನು ಕಂಡುಕೊಂಡು ರಾಷ್ಟ್ರದ ಜೊತೆಗೆ ನಡೆಯಲು ಎದ್ದು ನಿಂತ ಈ 25 ಕೋಟಿ ನಾಗರಿಕರಿಗೆ ಅವರು ನಮಸ್ಕರಿಸಿದರು.

2014ಕ್ಕಿಂತ ಮೊದಲು, ನೂರಾರು ಜನರು ರೈಲ್ವೆ ಕ್ರಾಸಿಂಗ್‌ಗಳಲ್ಲಿ ಸಾವನ್ನಪ್ಪಿದರು, ಶಾಲಾ ಬಸ್‌ಗಳು ಡಿಕ್ಕಿ ಹೊಡೆದು ಮಕ್ಕಳು ಸಾವನ್ನಪ್ಪಿದ ದುರಂತ ಘಟನೆಗಳು ನಡೆದವು ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು. ಮಾನವರಹಿತ ರೈಲ್ವೆ ಕ್ರಾಸಿಂಗ್‌ಗಳನ್ನು ಪರಿಹರಿಸುವುದು ಅಸಾಧ್ಯವಾದ ಕೆಲಸವಲ್ಲ ಎಂದು ಅವರು ಒತ್ತಿ ಹೇಳಿದರು, ಆದರೆ ತಮ್ಮ  ಸರ್ಕಾರ ಬಂದು ಅವೆಲ್ಲವನ್ನೂ ಮುಚ್ಚುವವರೆಗೆ ಯಾರೂ ಕ್ರಮ ಕೈಗೊಂಡಿರಲಿಲ್ಲ, ಇದು ಲೆಕ್ಕವಿಲ್ಲದಷ್ಟು ಜೀವಗಳನ್ನು ಉಳಿಸಿತು ಎಂದರು.

2014ಕ್ಕಿಂತ ಮೊದಲು, 18,000 ಹಳ್ಳಿಗಳು ವಿದ್ಯುತ್ ನೋಡಿರಲಿಲ್ಲ, ಬಲ್ಬ್ ಅಥವಾ ಬೆಳಕಿನ ಬಗ್ಗೆ ಎಂದಿಗೂ ಕೇಳಿರಲಿಲ್ಲ ಎಂಬುದರತ್ತ ಶ್ರೀ ಮೋದಿ ಗಮನಸೆಳೆದರು. 2014ರಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ತಮ್ಮ ಸರ್ಕಾರ ಆ ಹಳ್ಳಿಗಳಿಗೆ ಬೆಳಕನ್ನು ತಂದಿತು ಎಂದರು.

ಹಿಂದಿನ ಸುದ್ದಿ ಶೀರ್ಷಿಕೆಗಳು ಗಡಿಗಳಲ್ಲಿ ಕೊರತೆಯನ್ನು ಪದೇ ಪದೇ ವರದಿ ಮಾಡಿದ್ದವು - ಮದ್ದುಗುಂಡುಗಳಿಲ್ಲ, ಗುಂಡು ನಿರೋಧಕ ಜಾಕೆಟ್‌ಗಳಿಲ್ಲ, ಸರಿಯಾದ ಬೂಟುಗಳಿಲ್ಲದೆ ಸೈನಿಕರು ಹಿಮದಲ್ಲಿ ನಿಂತಿದ್ದಾರೆ ಎಂಬ ವರದಿಗಳನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು. ತಮ್ಮ ಸರ್ಕಾರ ಸೈನಿಕರಿಗಾಗಿ ದೇಶದ ಖಜಾನೆಯನ್ನು ತೆರೆದಿದೆ, ಅವರಿಗೆ ಬೇಕಾದುದನ್ನು ಒದಗಿಸಲು ಸಂಕಲ್ಪ ಮಾಡಿದೆ ಎಂದೂ ಶ್ರೀ ಮೋದಿ ಹೇಳಿದರು.

ಹಿಂದಿನ ಸರ್ಕಾರಗಳು ಎಂದಿಗೂ ಪರಿಹರಿಸಲು ಯತ್ನಿಸದ ಬಿಕ್ಕಟ್ಟಿನ ಸಂದರ್ಭವನ್ನು ಉಲ್ಲೇಖಿಸಿದ ಅವರು ಎನ್ಸೆಫಾಲಿಟಿಸ್‌ನಿಂದ ಅಸಂಖ್ಯಾತ ಮಕ್ಕಳು ಸಾಯುತ್ತಿರುವ ಬಗ್ಗೆ ಮಾತನಾಡುವಾಗ ಉತ್ತರ ಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ ಒಮ್ಮೆ ಸಂಸತ್ತಿನಲ್ಲಿ ಹೇಗೆ ದುಃಖಿತರಾಗಿದ್ದರು ಎಂಬುದನ್ನು ನೆನಪಿಸಿಕೊಂಡರು. ವೈಜ್ಞಾನಿಕ ಪ್ರಗತಿಯ ಹೊರತಾಗಿಯೂ ಜನರ ದೃಷ್ಟಿಯನ್ನು ಕಸಿದುಕೊಳ್ಳುತ್ತಿದ್ದ ಟ್ರಕೋಮಾ ಎಂಬ ಕಾಯಿಲೆಯನ್ನು ಸಹ ನಿರ್ಲಕ್ಷಿಸಲಾಗಿತ್ತು ಎಂದು ಹೇಳಿದರು. ತಮ್ಮ ಸರ್ಕಾರವು ರಾಷ್ಟ್ರವನ್ನು ಎನ್ಸೆಫಾಲಿಟಿಸ್‌ನಿಂದ ಮುಕ್ತಗೊಳಿಸಿತು ಮತ್ತು ಕಣ್ಣುಗಳನ್ನು ಟ್ರಕೋಮಾದಿಂದ ರಕ್ಷಿಸಿತು, ಇದು ಸೂಕ್ಷ್ಮತೆ, ಬದ್ಧತೆ ಮತ್ತು ಸಮಾಜಕ್ಕಾಗಿ ಬದುಕುವ ಮತ್ತು ತ್ಯಾಗ ಮಾಡುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ಸಮರ್ಪಣೆ, ಜನರಿಗಾಗಿ ಮಾಡಲಾಗುತ್ತಿರುವ ಈ ನಿರಂತರ ಶ್ರಮ, ತಮ್ಮ ವಿರೋಧಿಗಳನ್ನು ತೊಂದರೆಗೀಡು ಮಾಡುತ್ತಿದೆ ಎಂದೂ ಅವರು ಹೇಳಿದರು.

ಹಿಂದಿನ ಸರ್ಕಾರಗಳು ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತಿದ್ದವು, ಆದರೆ ತಮ್ಮ ಸರ್ಕಾರವೂ ರಿಮೋಟ್ ಮೂಲಕವೇ ನಡೆಯುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು - ಆದರೆ ಆ ರಿಮೋಟ್ ಭಾರತದ 140 ಕೋಟಿ ನಾಗರಿಕರು, ಅವರ ಕನಸುಗಳು, ಆಕಾಂಕ್ಷೆಗಳು ಮತ್ತು ಯುವಜನರ ಸಂಕಲ್ಪ ಎಂದು ಅವರು ಹೇಳಿದರು. ಸ್ವ-ಉದ್ಯೋಗದ ಮೂಲಕ ಲಕ್ಷಾಂತರ ಜನರಿಗೆ ಅಧಿಕಾರ ನೀಡಿದ ಮುದ್ರಾ ಯೋಜನೆಯನ್ನು ಉಲ್ಲೇಖಿಸಿ, ಅಧಿಕಾರವು ಆನಂದದ ಮಾರ್ಗವಲ್ಲ, ಬದಲಾಗಿ ಸೇವೆಯ ಮಾಧ್ಯಮವಾಗಿದೆ ಎಂದು ಅವರು ಒತ್ತಿ ಹೇಳಿದರು. ವಿರೋಧ ಪಕ್ಷಗಳು ಎಂದಿಗೂ ಸ್ಟಾರ್ಟ್‌ಅಪ್ ಸಂಸ್ಕೃತಿಯನ್ನು ಉತ್ತೇಜಿಸಲಿಲ್ಲ, ಕೆಲವು ನೂರು ಸ್ಟಾರ್ಟ್‌ಅಪ್‌ಗಳ ಬಗ್ಗೆಯೂ ತಿಳಿದುಕೊಂಡಿರಲಿಲ್ಲ, ಆದರೆ ತಮ್ಮ ಸರ್ಕಾರವು 2 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಪೋಷಿಸಿದೆ ಎಂದು ಅವರು ಗಮನಿಸಿದರು. ಯಶಸ್ಸು ಜನರ ಹೃದಯಗಳನ್ನು ಗೆಲ್ಲುತ್ತದೆ ಎಂದು ಅವರು ಗಮನಿಸಿದರು. " ಬಿಎಸ್‌ಎನ್‌ಎಲ್ ಅಪಹಾಸ್ಯಕ್ಕೊಳಗಾದ ದಿನಗಳನ್ನು ಶ್ರೀ ಮೋದಿ ನೆನಪಿಸಿಕೊಂಡರು, ಆದರೆ ತಮ್ಮ ಸರ್ಕಾರದ ಅಡಿಯಲ್ಲಿ ಸ್ವದೇಶಿ 4G ಸ್ಟ್ಯಾಕ್ ಅನ್ನು ಸ್ಥಾಪಿಸಲಾಯಿತು ಮತ್ತು ಭಾರತವು ಸಂವಹನ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಮುನ್ನಡೆಸುವ ಮೂಲಕ ಜಾಗತಿಕವಾಗಿ ವೇಗವಾಗಿ 5G ಅನ್ನು ಹೊರತಂದಿತು ಎಂದರು.

ಬಡವರ ಸೇವೆ ಮಾಡುವುದು ತಮ್ಮ ಸೌಭಾಗ್ಯ ಎಂದು ಹೇಳಿದ ಪ್ರಧಾನಮಂತ್ರಿ, 4 ಕೋಟಿ ಬಡ ಕುಟುಂಬಗಳಿಗೆ ಪಕ್ಕಾ ಮನೆಗಳು, ವಿದ್ಯುತ್, ನೀರು, ಗ್ಯಾಸ್ ಸಿಲಿಂಡರ್‌ಗಳು ಮತ್ತು ಶೌಚಾಲಯಗಳನ್ನು ಒದಗಿಸಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಗ್ರಾಮೀಣ ಮಹಿಳೆಯರು ತಮ್ಮನ್ನು ತಾವು "ಲಖ್ಪತಿ ದೀದಿಗಳು" ಎಂದು ಹೆಮ್ಮೆಯಿಂದ ಘೋಷಿಸಿಕೊಳ್ಳುವ ಪರಿವರ್ತನೆಯನ್ನು ಅವರು ಉಲ್ಲೇಖಿಸಿದರು, ಈಗ ಕೋಟ್ಯಾಧಿಪತಿಗಳಾಗುವ ಆಕಾಂಕ್ಷೆಗಳು ಹೆಚ್ಚುತ್ತಿವೆ. ಕೋಟ್ಯಂತರ ನಾಗರಿಕರ ಆಶೀರ್ವಾದ ಮತ್ತು ತಾಯಂದಿರು ಹಾಗು ಸಹೋದರಿಯರ ಆಶೀರ್ವಾದ ರಕ್ಷಣಾತ್ಮಕ ಗುರಾಣಿಯಂತಿದೆ ಎಂದು ಅವರು ಒತ್ತಿ ಹೇಳಿದರು. ಯಾರೂ ಕಾಳಜಿ ವಹಿಸದ ಆದರೆ ಮೋದಿ ಪೂಜಿಸುವ ತಾಯಂದಿರು ಮತ್ತು ಸಹೋದರಿಯರ ಮೇಲಿನ ತಮ್ಮ ಗೌರವವು ವಿರೋಧಿಗಳು ತೊಂದರೆಗೊಳಗಾಗಲು ಕಾರಣವಾಗಿದೆ ಎಂದು ಅವರು ಒತ್ತಿ ಹೇಳಿದರು.

ವಿರೋಧ ಪಕ್ಷಗಳು ಕಳ್ಳತನವನ್ನು ತಮ್ಮ ವಂಶಪಾರಂಪರ್ಯ ವ್ಯಾಪಾರ ಎಂಬುದಾಗಿ ಪರಿಗಾಣಿಸಿದ್ದಾರೆ ಎಂದು ಶ್ರೀ ಮೋದಿ ಟೀಕಿಸಿದರು, ಗುಜರಾತಿ - ಮಹಾತ್ಮ ಗಾಂಧಿಯವರ ಉಪನಾಮವನ್ನೂ ಕೂಡಾ ಕದ್ದಿದ್ದಾರೆ. ಭಾರತದ ಜನರು ಅಂತಹ ವಂಚನೆಗೆ ಬಲವಾದ ಹೊಡೆತಗಳನ್ನು ನೀಡುವಷ್ಟು ಬುದ್ಧಿವಂತರು ಎಂದು ಅವರು ಹೇಳಿದರು. ತಮ್ಮ ಸರ್ಕಾರವು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಹೊತ್ತಿದೆ ಎಂದು ಅವರು ಒತ್ತಿ ಹೇಳಿದರು, ಇದು ಈಗ ಜನರ ಶಕ್ತಿಯಿಂದ ನಡೆಸಲ್ಪಡುವ ರಾಷ್ಟ್ರೀಯ ಸಂಕಲ್ಪವಾಗಿ ರೂಪಾಂತರಗೊಂಡಿದೆ. 2047ರ ದೃಷ್ಟಿಕೋನವನ್ನು ಪ್ರಶ್ನಿಸುವ ಕೆಲವು ಸದಸ್ಯರ ನಿರಾಶಾವಾದದ ಬಗ್ಗೆ ಅವರು ಆಶ್ಚರ್ಯ ವ್ಯಕ್ತಪಡಿಸಿದರು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವಿತಾವಧಿಯಲ್ಲಿ ಸ್ವಾತಂತ್ರ್ಯ ಬರುತ್ತದೆಯೇ ಎಂದು ತಿಳಿಯದೆಯೂ ತ್ಯಾಗ ಮಾಡಿದರು ಎಂದು ಅವರಿಗೆ ನೆನಪಿಸಿದರು. ಅಂತಹ ದೃಷ್ಟಿಕೋನ ಮತ್ತು ತ್ಯಾಗವಿಲ್ಲದೆ ಭಾರತ ಎಂದಿಗೂ ಸ್ವಾತಂತ್ರ್ಯವನ್ನು ಸಾಧಿಸುತ್ತಿರಲಿಲ್ಲ ಎಂದು ಅವರು ವಾದಿಸಿದರು.

ಡಿಜಿಟಲ್ ಇಂಡಿಯಾ, ಫಿನ್‌ಟೆಕ್ ಮತ್ತು ಯುಪಿಐಗಳನ್ನು ಅಪಹಾಸ್ಯ ಮಾಡುವ ಮೂಲಕ, ಬಡವರು ಮೊಬೈಲ್ ಫೋನ್‌ಗಳಲ್ಲಿ ಎಂದಿಗೂ ವಹಿವಾಟು ನಡೆಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡ ಸಂದೇಹವಾದಿಗಳನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು. ಮೂರು ವರ್ಷಗಳಲ್ಲಿ, ಭಾರತವು ಅವುಗಳನ್ನು ತಪ್ಪು ಎಂದು ಸಾಬೀತುಪಡಿಸಿತು ಮತ್ತು ನಿಜವಾದ ಉತ್ತರವು ಜನರ ಕೈಯಲ್ಲಿರುವ ಮೊಬೈಲ್ ಫೋನ್‌ನಲ್ಲಿದೆ, ಭಾಷಣಗಳಲ್ಲಿ ಅಲ್ಲ ಎಂದು ಅವರು ಗಮನಿಸಿದರು. ವಿರೋಧ ಪಕ್ಷದ ಸಮಯದಲ್ಲಿ, "ಭಾರತ ಬಸ್ ತಪ್ಪಿಸಿಕೊಂಡಿದೆ" ಎಂಬ ನುಡಿಗಟ್ಟು ಸಾಮಾನ್ಯವಾಗಿತ್ತು, ಇದು ಕಳೆದುಹೋದ ಅವಕಾಶಗಳನ್ನು ಸಂಕೇತಿಸುತ್ತದೆ ಎಂದು ಅವರು ಗಮನಸೆಳೆದರು. ಇಂದು, ಭಾರತವು ಯಾವುದೇ ಬಸ್ ತಪ್ಪಿಸಿಕೊಳ್ಳುತ್ತಿಲ್ಲ, ಬದಲು ಅದು ಈಗ ಮುಂಚೂಣಿಯಲ್ಲಿ ನಿಂತು  ಮುನ್ನಡೆಸುತ್ತದೆ ಎಂದು ಅವರು ಘೋಷಿಸಿದರು.

ಉಜ್ವಲ ಭವಿಷ್ಯವನ್ನು ನಿರ್ಮಿಸಲು,  ವರ್ತಮಾನವನ್ನು ಬೆಳಗಿಸಲು ನಿರಂತರ ಕೆಲಸ ಅಗತ್ಯವಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ತಮ್ಮ ಸರ್ಕಾರವು ಐದು ವರ್ಷಗಳ ಚಕ್ರಗಳಲ್ಲಿ ಯೋಜನೆಗಳನ್ನು ರೂಪಿಸುತ್ತದೆ, ವಾರ್ಷಿಕ ಬಜೆಟ್‌ಗಳನ್ನು ಸಿದ್ಧಪಡಿಸುತ್ತದೆ ಮತ್ತು ಚುನಾವಣಾ ಲಾಭಕ್ಕಾಗಿ ಅಲ್ಲ, ಬದಲು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಗಾಗಿ ದಿಕ್ಕುಗಳನ್ನು ಹೊಂದಿಸುತ್ತದೆ ಎಂದು ಅವರು ವಿವರಿಸಿದರು. ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ರಾಷ್ಟ್ರವು ಶಾಶ್ವತವಾಗಿರುತ್ತದೆ ಮತ್ತು ಸಮೃದ್ಧ ಭಾರತವನ್ನು ಯುವಜನರಿಗೆ ಹಸ್ತಾಂತರಿಸುವುದು ತಮ್ಮ ಧ್ಯೇಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಇಂದು  ಮಕ್ಕಳನ್ನು ನೋಡಿದಾಗ, ಅವರಿಗಾಗಿ ಬಲಿಷ್ಠವಾದ ಭಾರತವನ್ನು ಬಿಟ್ಟು ಹೋಗುವ  ಕನಸನ್ನು ತಾವು ಕಾಣುತ್ತಿರುವುದಾಗಿ  ಪ್ರಧಾನಮಂತ್ರಿ ಹೇಳಿದರು.

ಭಾರತವು ಬಾಹ್ಯಾಕಾಶ, ವಿಜ್ಞಾನ, ತಂತ್ರಜ್ಞಾನ, ಸಾಗರಗಳು, ಭೂಮಿ, ಆಕಾಶ ಮತ್ತು ಬಾಹ್ಯಾಕಾಶ - ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಶಕ್ತಿ ಮತ್ತು ಸಾಧನೆಗಳೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಹಸಿರು ಹೈಡ್ರೋಜನ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ಮಿಷನ್‌ನಲ್ಲಿನ ಉಪಕ್ರಮಗಳನ್ನು ಅವರು ಗಮನಿಸಿದರು, ಇವುಗಳಿಗೆ ಭಾರತವು ಈಗ ಗಣನೀಯವಾಗಿ ಕೊಡುಗೆ ನೀಡಬಹುದು ಎಂದು ಜಗತ್ತು ನಂಬುತ್ತದೆ. ಭಾರತವು ಭೌಗೋಳಿಕ ರಾಜಕೀಯ ಅಸ್ತ್ರಗಳಾಗಿ ಮಾರ್ಪಟ್ಟಿರುವ ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಖನಿಜಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು, ಇದರಿಂದಾಗಿ ರಾಷ್ಟ್ರವು ಎಂದಿಗೂ ಇತರರ ಎದುರು ಅದಕ್ಕಾಗಿ ತನ್ನ ಕೈ ಚಾಚಬೇಕಾಗಿಲ್ಲ ಎಂದರು.

ಪ್ರಪಂಚವು ಈಗ ಭಾರತದ ಭೂಮಿಯಲ್ಲಿ ತನ್ನ ಭವಿಷ್ಯವನ್ನು ನೋಡುತ್ತಿದೆ, ಭಾರತದ ಪ್ರತಿಭೆಯನ್ನು ನಂಬುತ್ತಿದೆ ಮತ್ತು ಭಾರತದ ಭರವಸೆಯ ಹಾದಿಯೊಂದಿಗೆ ತನ್ನದೇ ಆದ ಉಜ್ವಲ ಭವಿಷ್ಯವನ್ನು ಜೋಡಿಸುತ್ತಿದೆ ಎಂಬ ಕಾರಣದಿಂದಾಗಿ ಲೆಕ್ಕವಿಲ್ಲದಷ್ಟು ಯೋಜನೆಗಳು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿವೆ ಎಂದು ಪ್ರಧಾನಮಂತ್ರಿ ಮೋದಿ ವಿವರಿಸಿದರು. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಬಗ್ಗೆ ಏಕೆ ಮಾತನಾಡುತ್ತಿದೆ ಎಂಬುದನ್ನು ಕೆಲವರು ಗ್ರಹಿಸಲು ವಿಫಲರಾಗಿದ್ದರೂ, ಭಾರತ ಸರಿಯಾದ ದಿಕ್ಕನ್ನು ಆರಿಸಿಕೊಂಡಿದೆ ಎಂದು ಜಗತ್ತು ಅರ್ಥಮಾಡಿಕೊಂಡಿದೆ ಮತ್ತು ಜಾಗತಿಕವಾಗಿ ಚರ್ಚೆಗಳು "ಭಾರತವು ಬಸ್ ತಪ್ಪಿಸುತ್ತದೆ" ಎಂಬುದರಿಂದ "ಭಾರತವನ್ನು ತಲುಪುವಲ್ಲಿ ನಾವು ತಡಮಾಡಬಾರದು" ಎಂಬುದಕ್ಕೆ ಬದಲಾಗಿವೆ ಎಂದು ಅವರು ಎತ್ತಿ ತೋರಿಸಿದರು.

ಮುಂಬರುವ ಯುಗವು ಭಾರತಕ್ಕೆ, ವಿಶೇಷವಾಗಿ ಯುವಜನರಿಗೆ ಅವಕಾಶಗಳಿಂದ ತುಂಬಿದೆ ಮತ್ತು ಈ ಸಾಧ್ಯತೆಗಳನ್ನು ಬಳಸಿಕೊಳ್ಳಲು ನೀತಿಗಳನ್ನು ರೂಪಿಸಲಾಗುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಅವರು ನಾಗರಿಕರಿಗೆ ಆಹ್ವಾನವನ್ನು ನೀಡಿದರು ಮತ್ತು ಸಂಸತ್ತಿನ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿನ ಜನರು ಗುಣಮಟ್ಟದ ಬಗ್ಗೆ ಗಮನಹರಿಸಲು ಪ್ರೋತ್ಸಾಹಿಸುವಂತೆ ಒತ್ತಾಯಿಸಿದರು, ಅವಕಾಶಗಳ ಸುಸ್ಥಿರತೆಯು ರಾಜಿಯಾಗದ ಮಾನದಂಡಗಳ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿ ಹೇಳಿದರು. ಲಾಭ ಕಡಿಮೆ ಇರಬಹುದು, ಆದರೆ ಗುಣಮಟ್ಟವು ನಾವೀನ್ಯತೆ, ಸಂಶೋಧನೆ ಮತ್ತು ಸಾಮಗ್ರಿಗಳ ನವೀಕರಣಗಳ ಮೂಲಕ ನಿರಂತರವಾಗಿ ಸುಧಾರಿಸಬೇಕು, ಇದರಿಂದ ಭಾರತವು ಶ್ರೇಷ್ಠತೆಗಾಗಿ ಜಾಗತಿಕವಾಗಿ ಗುರುತಿಸಲ್ಪಡುತ್ತದೆ ಎಂದು ಅವರು ಒತ್ತಿ ಹೇಳಿದರು. ರಾಜಿಯಾಗದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವಲ್ಲಿ ತಮ್ಮನ್ನು ಬೆಂಬಲಿಸುವಂತೆ ನಾಗರಿಕರಿಗೆ ಅವರು ಮನವಿ ಮಾಡಿದರು, ಜಗತ್ತು "ಮೇಡ್ ಇನ್ ಇಂಡಿಯಾ, ಮೇಡ್ ಇನ್ ಭಾರತ್" ಅನ್ನು ಹೊಗಳುತ್ತದೆ ಎಂದು ಘೋಷಿಸಿದರು.

ಕಳೆದ ದಶಕದಲ್ಲಿ ಐದು ಅಥವಾ ಆರು ಬಾರಿ ಮಾತನಾಡುವುದನ್ನು ತಡೆಯಲು ಅವರು ಪ್ರಯತ್ನಿಸಿದ್ದರು, ಅವರು ತಾವು ಒಮ್ಮೆ ಪ್ರಾರಂಭಿಸಿದರೆ ತಾವು  ನಿಲ್ಲುವುದಿಲ್ಲ ಎಂದು ತಿಳಿದಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಅಂತಹ ಪ್ರಯತ್ನಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಈಗ ಅನುಭವದಿಂದ ಕಲಿತಿದ್ದಾರೆ ಮತ್ತು ಈ ತಿಳುವಳಿಕೆ ಬೆಳೆಯುತ್ತಲೇ ಇರಬೇಕೆಂದು ಅವರು ಹಾರೈಸಿದರು. ರಾಷ್ಟ್ರಪತಿಗಳ ಭಾಷಣಕ್ಕೆ ಕೊಡುಗೆ ನೀಡಿದ ಎಲ್ಲಾ ಸಂಸತ್ ಸದಸ್ಯರಿಗೆ ಶ್ರೀ ಮೋದಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು, ಹಂಚಿಕೊಂಡ ಅಮೂಲ್ಯವಾದ ವಿಚಾರಗಳು ರಾಷ್ಟ್ರದ ಪ್ರಗತಿಗೆ ಸಹಾಯ ಮಾಡುತ್ತವೆ ಎಂದು ದೃಢಪಡಿಸಿದರು. ಅವರು ಗೌರವಾನ್ವಿತ ರಾಷ್ಟ್ರಪತಿಗಳಿಗೆ ಭಾಷಣಕ್ಕಾಗಿ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

Click here to read full text speech

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Total Urea stocks currently at 61.14 LMT, up from 55.22 LMT in March 2025

Media Coverage

Total Urea stocks currently at 61.14 LMT, up from 55.22 LMT in March 2025
NM on the go

Nm on the go

Always be the first to hear from the PM. Get the App Now!
...
Prime Minister pays tribute to Dr. Ram Manohar Lohia on his birth anniversary
March 23, 2026

Prime Minister Shri Narendra Modi today paid rich tributes to the legendary socialist leader and thinker, Dr. Ram Manohar Lohia, on the occasion of his birth anniversary.

Describing Dr. Lohia as a multifaceted personality, Shri Modi highlighted his pivotal role in mobilizing the masses against colonial rule and his subsequent contributions to India’s progress after 1947. The Prime Minister remarked that Dr. Lohia was an outstanding thinker and one of the foremost voices of social justice in the country. Shri Modi affirmed that Dr. Lohia’s unwavering commitment to empowering the poor and the marginalized continues to inspire generations, noting that his thoughts on gender equality and participatory governance remain equally relevant today.

The Prime Minister wrote on X:

"Tributes to Dr. Ram Manohar Lohia Ji on his birth anniversary. He was a multifaceted personality who played a pivotal role in mobilising people against colonial rule and subsequently contributing to the progress of India after 1947. He was an outstanding thinker and one of the foremost voices of social justice. His unwavering commitment to the cause of empowering the poor and the marginalised continues to inspire generations. Equally noteworthy are his thoughts on gender equality and participatory governance."