ವಿಶ್ವದಾದ್ಯಂತದ ಅನೇಕ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ, ಅವುಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಿಬ್ಬಂದಿ ಸದಸ್ಯರಿದ್ದಾರೆ, ಇದು ಭಾರತಕ್ಕೆ ತೀವ್ರ ಕಳವಳದ ವಿಷಯವಾಗಿದೆ: ಪ್ರಧಾನಮಂತ್ರಿ
ಇಂತಹ ನಿರ್ಣಾಯಕ ಸಂದರ್ಭದಲ್ಲಿ, ಭಾರತದ ಸಂಸತ್ತಿನ ಈ ಮೇಲ್ಮನೆಯಿಂದ ಇಡೀ ಜಗತ್ತಿಗೆ ಶಾಂತಿ ಮತ್ತು ಸಂವಾದದ ಏಕೀಕೃತ ಧ್ವನಿ ಹೊರಹೊಮ್ಮುವುದು ಅತ್ಯಗತ್ಯ: ಪ್ರಧಾನಮಂತ್ರಿ
ಸುಮಾರು ಒಂದು ಕೋಟಿ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ, ಅವರ ಜೀವನ ಮತ್ತು ಜೀವನೋಪಾಯದ ಸುರಕ್ಷತೆಯು ಭಾರತಕ್ಕೆ ಬಹಳ ದೊಡ್ಡ ಕಾಳಜಿಯಾಗಿದೆ: ಪ್ರಧಾನಮಂತ್ರಿ
ಪಶ್ಚಿಮ ಏಷ್ಯಾದಲ್ಲಿ ಈ ಯುದ್ಧ ಪ್ರಾರಂಭವಾಗಿ ಮೂರು ವಾರಗಳಿಗೂ ಹೆಚ್ಚು ಕಾಲ ಕಳೆದಿದೆ, ಈ ಯುದ್ಧವು ಇಡೀ ವಿಶ್ವದಾದ್ಯಂತ ತೀವ್ರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ: ಪ್ರಧಾನಮಂತ್ರಿ
ವಾಣಿಜ್ಯ ಹಡಗುಗಳ ಮೇಲಿನ ದಾಳಿ ಮತ್ತು ಹಾರ್ಮುಜ್ ಜಲಸಂಧಿಯಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳ ಅಡ್ಡಿಪಡಿಸುವಿಕೆಯು ಸ್ವೀಕಾರಾರ್ಹವಲ್ಲ: ಪ್ರಧಾನಮಂತ್ರಿ
ನಾಗರಿಕರ ಮೇಲೆ, ನಾಗರಿಕ ಮೂಲಸೌಕರ್ಯದ ಮೇಲೆ ಹಾಗೂ ಇಂಧನ ಮತ್ತು ಸಾರಿಗೆ ಸಂಬಂಧಿತ ಮೂಲಸೌಕರ್ಯದ ಮೇಲಿನ ದಾಳಿಗಳನ್ನು ಭಾರತ ಖಂಡಿಸಿದೆ: ಪ್ರಧಾನಮಂತ್ರಿ
ಯುದ್ಧ ಪ್ರಾರಂಭವಾದಾಗಿನಿಂದ, ನಾನು ಪಶ್ಚಿಮ ಏಷ್ಯಾದ ಹೆಚ್ಚಿನ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಎರಡು ಸುತ್ತಿನ ದೂರವಾಣಿ ಸಂಭಾಷಣೆ ನಡೆಸಿದ್ದೇನೆ: ಪ್ರಧಾನಮಂತ್ರಿ
ನಾವು ಎಲ್ಲಾ ಗಲ್ಫ್ ದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ, ಇರಾನ್, ಇಸ್ರೇಲ್ ಮತ್ತು ಅಮೆರಿಕ ದೊಂದಿಗೂ ಸಂಪರ್ಕದಲ್ಲಿದ್ದೇವೆ: ಪ್ರಧಾನಮಂತ್ರಿ
ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪ್ರದೇಶದಲ್ಲಿ ಶಾಂತಿ ಮರುಸ್ಥಾಪಿಸುವುದೇ ನಮ್ಮ ಗುರಿಯಾಗಿದೆ: ಪ್ರಧಾನಮಂತ್ರಿ
ಉದ್ವಿಗ್ನತೆ ತಗ್ಗಿಸುವ ಮತ್ತು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆಯೂ ಅವರೊಂದಿಗೆ ಚರ್ಚಿಸಿದ್ದೇವೆ: ಪ್ರಧಾನಮಂತ್ರಿ
ಯುದ್ಧದ ಈ ವಾತಾವರಣದಲ್ಲಿಯೂ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರ ಖಾತ್ರಿಪಡಿಸಲು ಭಾರತವು ರಾಜತಾಂತ್ರಿಕತೆಯ ಮೂಲಕ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ: ಪ್ರಧಾನಮಂತ್ರಿ
ಯುದ್ಧ ಪ್ರಾರಂಭವಾದಾಗಿನಿಂದ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ಬಹಳ ಕಠಿಣವಾಗಿದೆ, ಆದರೆ ಈ ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ ನಮ್ಮ ಸರ್ಕಾರವು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಇದಕ್ಕೆ ಪರಿಹಾರ ಹುಡುಕಲು ಪ್ರಯತ್ನಿಸುತ್ತಿದೆ: ಪ್ರಧಾನಮಂತ್ರಿ
ಎಲ್ಲೆಡೆಯಿಂದ ಸಾಧ್ಯವಾದಷ್ಟು ತೈಲ ಮತ್ತು ಅನಿಲ ಪೂರೈಕೆ ಭಾರತಕ್ಕೆ ತಲುಪುವಂತೆ ಖಾತ್ರಿಪಡಿಸುವ ಪ್ರಯತ್ನ ನಡೆಯುತ್ತಿದೆ, ಪ್ರತಿಯೊಂದು ಪ್ರಯತ್ನದ ಫಲಿತಾಂಶವನ್ನು ದೇಶ ನೋಡುತ್ತಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉದ್ಭವಿಸಿದ ಪರಿಸ್ಥಿತಿಯ ಕುರಿತು ಸರ್ಕಾರದ ನಿಲುವನ್ನು ಮಂಡಿಸಿದರು. ಮೂರು ವಾರಗಳಿಗೂ ಹೆಚ್ಚು ಕಾಲದಿಂದ ಭುಗಿಲೆದ್ದಿರುವ ಈ ಯುದ್ಧವು ಭಾರತದ ಮೇಲೆ ತೀವ್ರ ಆತಂಕಕಾರಿ ಪರಿಣಾಮಗಳನ್ನು ಬೀರುವ ಸೂಚನೆಗಳೊಂದಿಗೆ ತೀವ್ರ ಜಾಗತಿಕ ಇಂಧನ ಬಿಕ್ಕಟ್ಟನ್ನು ಉಂಟುಮಾಡಿದೆ ಎಂಬುದನ್ನು ತಿಳಿಸಿದ ಪ್ರಧಾನಮಂತ್ರಿ ಮೋದಿ ಅವರು, ಈ ಸಂಘರ್ಷವು ಭಾರತದ ವ್ಯಾಪಾರ ಮಾರ್ಗಗಳನ್ನು ಅಡ್ಡಿಪಡಿಸುತ್ತಿದೆ ಮತ್ತು ಪೆಟ್ರೋಲ್, ಡೀಸೆಲ್, ಅನಿಲ ಹಾಗೂ ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಸುಮಾರು ಒಂದು ಕೋಟಿ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದು, ಕೆಲಸ ಮಾಡುತ್ತಿರುವುದರಿಂದ, ಅವರ ಸುರಕ್ಷತೆ ಮತ್ತು ಜೀವನೋಪಾಯವು ತೀವ್ರ ಕಳವಳದ ವಿಷಯವಾಗಿ ಮೂಡಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು, ಜೊತೆಗೆ ಹಾರ್ಮುಜ್ ಜಲಸಂಧಿಯಲ್ಲಿ, ಹಡಗುಗಳಲ್ಲಿ ಸಿಲುಕಿಕೊಂಡಿರುವ ಹೆಚ್ಚಿನ ಸಂಖ್ಯೆಯ ಭಾರತೀಯ ಸದಸ್ಯರ ಬಗ್ಗೆಯೂ ಗಮನ ಸೆಳೆದರು. "ಇಂತಹ ಗಂಭೀರ ಸಂದರ್ಭದಲ್ಲಿ, ಭಾರತ ಸಂಸತ್ತಿನ ಈ ಘನ ಮೇಲ್ಮನೆಯಿಂದ ಇಡೀ ಜಗತ್ತಿಗೆ ಶಾಂತಿ ಮತ್ತು ಸಂವಾದದ ಏಕೀಕೃತ ಧ್ವನಿ ಹೊರಹೊಮ್ಮುವುದು ಅತ್ಯಗತ್ಯ" ಎಂದು ಪ್ರಧಾನಮಂತ್ರಿ ಶ್ರೀ. ಮೋದಿ ಅವರು ದೃಢಪಡಿಸಿದರು.

ಯುದ್ಧ ಭುಗಿಲೆದ್ದಾಗಿನಿಂದ ಭಾರತದ ತೀವ್ರ ರಾಜತಾಂತ್ರಿಕ ಪ್ರಯತ್ನಗಳ ಬಗ್ಗೆ ವಿವರ ನೀಡಿದ ಪ್ರಧಾನಮಂತ್ರಿ ಅವರು, ಪಶ್ಚಿಮ ಏಷ್ಯಾದ ಹೆಚ್ಚಿನ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ತಾವು ವೈಯಕ್ತಿಕವಾಗಿ ಎರಡು ಸುತ್ತಿನ ದೂರವಾಣಿ ಸಂಭಾಷಣೆ ನಡೆಸಿದ್ದು, ಎಲ್ಲಾ ಗಲ್ಫ್ ದೇಶಗಳೊಂದಿಗೆ, ಹಾಗೆಯೇ ಇರಾನ್, ಇಸ್ರೇಲ್ ಮತ್ತು ಅಮೆರಿಕ ದೊಂದಿಗೆ ಭಾರತವು ನಿರಂತರ ಸಂಪರ್ಕದಲ್ಲಿದೆ ಎಂದು ಅವರು ಸದನಕ್ಕೆ ತಿಳಿಸಿದರು. ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪ್ರದೇಶದಲ್ಲಿ ಶಾಂತಿ ಮರುಸ್ಥಾಪಿಸುವುದೇ ಗುರಿಯಾಗಿದೆ ಎಂದು ಅವರು ಹೇಳಿದರು ಜೊತೆಗೆ ಉದ್ವಿಗ್ನತೆ ತಗ್ಗಿಸುವ ಹಾಗೂ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ನಿರ್ದಿಷ್ಟವಾಗಿ ಚರ್ಚೆ ನಡೆಸಲಾಗಿದೆ. ಭಾರತದ ದೃಢ ನಿಲುವನ್ನು ಒತ್ತಿ ಹೇಳಿದ ಅವರು, ವಾಣಿಜ್ಯ ಹಡಗುಗಳ ಮೇಲಿನ ದಾಳಿ ಮತ್ತು ಹಾರ್ಮುಜ್ ಜಲಸಂಧಿಯಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳ ಅಡ್ಡಿಪಡಿಸುವಿಕೆಯು ಸ್ವೀಕಾರಾರ್ಹವಲ್ಲ ಎಂದು ಘೋಷಿಸಿದರು ಮತ್ತು ನಾಗರಿಕರ ಮೇಲೆ, ನಾಗರಿಕ ಮೂಲಸೌಕರ್ಯದ ಮೇಲೆ ಹಾಗೂ ಇಂಧನ ಮತ್ತು ಸಾರಿಗೆ ಸಂಬಂಧಿತ ಮೂಲಸೌಕರ್ಯದ ಮೇಲಿನ ಎಲ್ಲಾ ದಾಳಿಗಳನ್ನು ಭಾರತ ಸ್ಪಷ್ಟವಾಗಿ ವಿರೋಧಿಸಿದೆ ಎಂದು ತಿಳಿಸಿದರು. "ಈ ಯುದ್ಧದಲ್ಲಿ ಮಾನವ ಜೀವಕ್ಕೆ ಯಾವುದೇ ಬೆದರಿಕೆಯು ಮಾನವತೆಯ ಹಿತಾಸಕ್ತಿಗಳ ವಿರುದ್ಧವಾಗಿದ್ದು, ಆದ್ದರಿಂದ ಎಲ್ಲಾ ಪಕ್ಷಗಳನ್ನು ಆದಷ್ಟು ಬೇಗ ಶಾಂತಿಯುತ ಪರಿಹಾರದ ಕಡೆಗೆ ಪ್ರೋತ್ಸಾಹಿಸುವುದು ಭಾರತದ ನಿರಂತರ ಪ್ರಯತ್ನವಾಗಿದೆ" ಎಂದು ಪ್ರಧಾನಮಂತ್ರಿ ಶ್ರೀ. ಮೋದಿ ಅವರು ಅಭಿಪ್ರಾಯಪಟ್ಟರು.

ಬಿಕ್ಕಟ್ಟಿನ ಸಮಯದಲ್ಲಿ ದೇಶದಲ್ಲಿ ಮತ್ತು ವಿದೇಶದಲ್ಲಿರುವ ಭಾರತೀಯರ ರಕ್ಷಣೆಯ ಕುರಿತು ಸರ್ಕಾರದ ಅಚಲ ಆದ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಯುದ್ಧ ಪ್ರಾರಂಭವಾದಾಗಿನಿಂದ 3,75,000 ಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ತಿಳಿಸಿದರು — ಇದರಲ್ಲಿ ಇರಾನ್‌ನಿಂದ ಮಾತ್ರ 1,000 ಕ್ಕೂ ಹೆಚ್ಚು ಮಂದಿ ಇದ್ದು, ಅವರಲ್ಲಿ 700 ಕ್ಕೂ ಹೆಚ್ಚು ಯುವ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದ್ದಾರೆ. ಎಲ್ಲಾ ದೇಶಗಳು ತಮ್ಮ ನೆಲದಲ್ಲಿರುವ ಭಾರತೀಯರ ಸಂಪೂರ್ಣ ಸುರಕ್ಷತೆಯನ್ನು ಭರವಸೆ ನೀಡಿವೆ ಎಂದಾದರೂ, ದಾಳಿಗಳಿಂದ ಭಾರತೀಯ ಜೀವಗಳ ನಷ್ಟ ಮತ್ತು ಗಾಯಗಳ ಬಗ್ಗೆ ಪ್ರಧಾನಮಂತ್ರಿ ಅವರು ಆಳವಾದ ದುಃಖ ವ್ಯಕ್ತಪಡಿಸಿದರು ಮತ್ತು ಈ ಬಿಕ್ಕಟ್ಟಿನ ಅವಧಿಯಲ್ಲಿ ಸರ್ಕಾರವು ಸಂಪೂರ್ಣ ಸಂವೇದನಾಶೀಲತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಭರವಸೆ ನೀಡಿದರು. "ಪೀಡಿತ ಕುಟುಂಬಗಳಿಗೆ ಎಲ್ಲಾ ಅಗತ್ಯ ಸಹಾಯ ನೀಡಲಾಗುತ್ತಿದ್ದು, ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಖಾತ್ರಿಪಡಿಸಲಾಗುತ್ತಿದೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ವಿಶ್ವದ ಅತಿ ದೊಡ್ಡ ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ ಕಾರ್ಯತಂತ್ರದ ಮಹತ್ವವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿ ಅವರು, ವಿಶೇಷವಾಗಿ ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರ ಸಾಗಾಣಿಕೆಗೆ ಇದು ಅತ್ಯಂತ ಮಹತ್ವಪೂರ್ಣ ಮಾರ್ಗವಾಗಿದ್ದು, ಯುದ್ಧ ಪ್ರಾರಂಭವಾದಾಗಿನಿಂದ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ಅತ್ಯಂತ ಕಷ್ಟಕರವಾಗಿದೆ ಎಂದು ಒಪ್ಪಿಕೊಂಡರು. ಆದಾಗ್ಯೂ, ಪ್ರತಿಕೂಲ ಸಂದರ್ಭಗಳ ಹೊರತಾಗಿಯೂ, ಭಾರತಕ್ಕೆ ಎಲ್ಲೆಡೆಯಿಂದ ತೈಲ ಮತ್ತು ಅನಿಲ ಪೂರೈಕೆ ತಲುಪುವಂತೆ ಖಾತ್ರಿಪಡಿಸುವ ಏಕೈಕ ಗಮನದಿಂದ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರ್ಯಾಯ ಮಾರ್ಗಗಳನ್ನು ರೂಪಿಸಲು ಸರ್ಕಾರ ಪ್ರಯತ್ನಿಸಿದೆ. "ಪ್ರತಿಯೊಂದು ಪ್ರಯತ್ನದ ಫಲಿತಾಂಶವನ್ನು ದೇಶವು ಕಾಣುತ್ತಿದೆ — ಕಳೆದ ಕೆಲವು ದಿನಗಳಲ್ಲಿ ವಿಶ್ವದಾದ್ಯಂತ ಅನೇಕ ದೇಶಗಳಿಂದ ಕಚ್ಚಾ ತೈಲ ಮತ್ತು LPG ಹೊತ್ತ ಹಡುಗುಗಳು ಭಾರತಕ್ಕೆ ಬಂದಿವೆ ಮತ್ತು ಈ ದಿಕ್ಕಿನಲ್ಲಿ ನಮ್ಮ ಪ್ರಯತ್ನಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಯಲಿವೆ" ಎಂದು ಪ್ರಧಾನಮಂತ್ರಿ ಹೇಳಿದರು.

ದೀರ್ಘಕಾಲೀನ ಅಪಾಯಗಳ ಕಡೆಗೆ ಗಮನ ಸೆಳೆದ ಪ್ರಧಾನಮಂತ್ರಿ ಅವರು, ತೈಲ, ಅನಿಲ ಅಥವಾ ರಸಗೊಬ್ಬರಗಳಾಗಲಿ — ಪ್ರತಿಯೊಂದು ಅಗತ್ಯ ವಸ್ತು ಹೊತ್ತ ಹಡಗುಗಳ ಸುರಕ್ಷಿತ ಆಗಮನ ಖಾತ್ರಿಪಡಿಸುವುದು ಭಾರತದ ಪ್ರಯತ್ನವಾಗಿದ್ದರೂ, ಈ ಯುದ್ಧದಿಂದ ಉಂಟಾಗುತ್ತಿರುವ ಜಾಗತಿಕ ಸವಾಲುಗಳು ದೀರ್ಘಕಾಲ ಮುಂದುವರಿದರೆ ಅನಿವಾರ್ಯವಾಗಿ ಗಂಭೀರ ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ತಿಳಿಸಿದರು. "ಆದ್ದರಿಂದ ಭಾರತವು ಕಳೆದ ವರ್ಷಗಳಲ್ಲಿ ಕೈಗೊಂಡ ಎಲ್ಲಾ ಸ್ಥಿತಿಸ್ಥಾಪಕತ್ವ-ನಿರ್ಮಾಣ ಕ್ರಮಗಳನ್ನು ವೇಗಗೊಳಿಸುತ್ತಿದೆ" ಎಂದು ಪ್ರಧಾನಮಂತ್ರಿ ಶ್ರೀ. ಮೋದಿ ಅವರು ದೃಢವಾಗಿ ಹೇಳಿದರು.

ಭಾರತದ ದಶಕ-ದೀರ್ಘ ಕಾರ್ಯತಂತ್ರದ ಸನ್ನದ್ಧತೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿ ಮೋದಿ ಅವರು, ಪ್ರತಿಯೊಂದು ಬಿಕ್ಕಟ್ಟು, ರಾಷ್ಟ್ರದ ದೃಢಸಂಕಲ್ಪ ಮತ್ತು ಪ್ರಯತ್ನ ಎರಡನ್ನೂ ಪರೀಕ್ಷಿಸುತ್ತದೆ ಎಂದು ಹೇಳಿದರು ಮತ್ತು ದೇಶವು ಇಂತಹ ಸವಾಲುಗಳನ್ನು ಎದುರಿಸಬಲ್ಲದು ಎಂದು ಖಾತ್ರಿಪಡಿಸಲು ಕಳೆದ ಹನ್ನೊಂದು ವರ್ಷಗಳಲ್ಲಿ ನಿರಂತರ ಮತ್ತು ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದರು. ಕಚ್ಚಾ ತೈಲ, LNG ಮತ್ತು LPG ಗಾಗಿ ಹಿಂದಿನ 27 ದೇಶಗಳಿಂದ ಇಂದು 41 ದೇಶಗಳಿಗೆ ಇಂಧನ ಆಮದಿನ ವೈವಿಧ್ಯೀಕರಣದ ವಿವರ ನೀಡಿದ ಅವರು, ಇಂತಹ ಬಿಕ್ಕಟ್ಟಿನ ಸಮಯಕ್ಕಾಗಿಯೇ ಭಾರತವು ಕಚ್ಚಾ ತೈಲ ಮೀಸಲು ನಿರ್ಮಿಸಲು ಆದ್ಯತೆ ನೀಡಿದ್ದು, ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ನ ಗಣನೀಯ ದಾಸ್ತಾನನ್ನು ಕಾಯ್ದುಕೊಳ್ಳುತ್ತಿವೆ ಎಂದು ಸದನಕ್ಕೆ ತಿಳಿಸಿದರು. ಕಳೆದ ಹನ್ನೊಂದು ವರ್ಷಗಳಲ್ಲಿ 53 ಲಕ್ಷ ಮೆಟ್ರಿಕ್ ಟನ್ ಮೀರಿದ ಪೆಟ್ರೋಲಿಯಂ ಮೀಸಲನ್ನು ಅಭಿವೃದ್ಧಿಪಡಿಸಲಾಗಿದ್ದು, 65 ಲಕ್ಷ ಮೆಟ್ರಿಕ್ ಟನ್ ಮೀರಿದ ಮೀಸಲು ಸ್ಥಾಪಿಸಲು ಕಾರ್ಯ ಪ್ರಗತಿಯಲ್ಲಿದೆ, ಜೊತೆಗೆ ಭಾರತದ ಶುದ್ಧೀಕರಣ ಸಾಮರ್ಥ್ಯದ ಗಮನಾರ್ಹ ಹೆಚ್ಚಳವೂ ನಡೆಯುತ್ತಿದೆ. "ಭಾರತವು ಸಾಕಷ್ಟು ಕಚ್ಚಾ ತೈಲ ಸಂಗ್ರಹ ಮತ್ತು ನಿರಂತರ ಹಾಗೂ ಅಡೆತಡೆಯಿಲ್ಲದ ಪೂರೈಕೆಗೆ ಭದ್ರ ವ್ಯವಸ್ಥೆಯನ್ನು ಹೊಂದಿದೆ ಎಂದು ಈ ಸದನಕ್ಕೆ ಮತ್ತು ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ" ಎಂದು ಪ್ರಧಾನಮಂತ್ರಿ ದೃಢಪಡಿಸಿದರು.

ಯಾವುದೇ ಒಂದು ಇಂಧನ ಮೂಲದ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡುವ ಸರ್ಕಾರದ ಕಾರ್ಯತಂತ್ರದ ಬಗ್ಗೆ ವಿವರವಾಗಿ ತಿಳಿಸಿದ ಪ್ರಧಾನಮಂತ್ರಿ ಅವರು, ಗೃಹಬಳಕೆಯ ಅನಿಲ ಪೂರೈಕೆಗಾಗಿ LPG ಜೊತೆಗೆ ಪೈಪ್ಡ್ ನೈಸರ್ಗಿಕ ಅನಿಲ (PNG) ಮೇಲೆ ಒತ್ತು ನೀಡುತ್ತಿರುವುದನ್ನು ಎತ್ತಿ ತೋರಿಸಿದರು. ಕಳೆದ ದಶಕದಲ್ಲಿ PNG ಸಂಪರ್ಕಗಳ ಕುರಿತು ಅಭೂತಪೂರ್ವ ಕಾರ್ಯ ನಡೆದಿದ್ದು, ಈ ಪ್ರಯತ್ನವನ್ನು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸಲಾಗಿದೆ. "ಏಕಕಾಲದಲ್ಲಿ, LPG ಯ ದೇಶೀಯ ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ದೊಡ್ಡ ಪ್ರಮಾಣದ ಪ್ರಯತ್ನಗಳು ನಡೆಯುತ್ತಿವೆ" ಎಂದು ಪ್ರಧಾನಮಂತ್ರಿ ಶ್ರೀ. ಮೋದಿ ಅವರು ಹೇಳಿದರು.

ಭಾರತದ ಸ್ವಾವಲಂಬನೆಯ ದೃಷ್ಟಿಕೋನವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಪ್ರತಿಯೊಂದು ವಲಯದಲ್ಲೂ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಸರ್ಕಾರದ ಕಳೆದ ಹಲವು ವರ್ಷಗಳ ನಿರಂತರ ಪ್ರಯತ್ನವಾಗಿದೆ ಎಂದು ಹೇಳಿದರು — ಭಾರತದ ಶೇಕಡಾ 90 ಕ್ಕೂ ಹೆಚ್ಚು ತೈಲವನ್ನು ಪ್ರಸ್ತುತ ವಿದೇಶಿ-ಧ್ವಜ ಹಡಗುಗಳ ಮೂಲಕ ಸಾಗಿಸಲಾಗುತ್ತಿದೆ, ಇದು ಯಾವುದೇ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರದ ದುರ್ಬಲತೆಯನ್ನು ಹೆಚ್ಚಿಸುತ್ತದೆ ಎಂದು ಗಮನಿಸಿದರು. ಇದನ್ನು ಪರಿಹರಿಸಲು, ಸರ್ಕಾರವು ಮೇಡ್-ಇನ್-ಇಂಡಿಯಾ ಹಡಗುಗಳನ್ನು ನಿರ್ಮಿಸಲು ಸುಮಾರು ₹70,000 ಕೋಟಿ ಮೌಲ್ಯದ ಮಿಷನ್ ಅನ್ನು ಪ್ರಾರಂಭಿಸಿದ್ದು, ಹಡಗು ನಿರ್ಮಾಣ, ಹಡಗು ವಿಸರ್ಜನೆ ಮತ್ತು ನಿರ್ವಹಣೆ ಹಾಗೂ ಮರುಸ್ಥಾಪನೆಯಲ್ಲಿ ವೇಗವಾಗಿ ಸಾಮರ್ಥ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದ ರಕ್ಷಣಾ ವಲಯಕ್ಕೆ ಹೆಚ್ಚು ಪುಷ್ಟಿ ನೀಡಲಾಗುತ್ತಿದ್ದು, ದೇಶವು ಈಗ ತನಗೆ ಅಗತ್ಯವಿರುವ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿ ತಯಾರಿಸುತ್ತಿದೆ ಎಂಬುದನ್ನೂ ಅವರು ಎತ್ತಿ ತೋರಿಸಿದರು, ಜೊತೆಗೆ ಜೀವ ರಕ್ಷಕ ಔಷಧಗಳಿಗಾಗಿ ದೇಶೀಯ API ಪರಿಸರ ವ್ಯವಸ್ಥೆ ನಿರ್ಮಿಸುವಲ್ಲಿ ಮತ್ತು ಅಪರೂಪದ ಭೂಮಿ ಖನಿಜಗಳ ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಅವರು ತಿಳಿಸಿದರು. "ಪ್ರತಿಯೊಂದು ನಿರ್ಣಾಯಕ ವಲಯದಲ್ಲಿ ಹೆಚ್ಚಿನ ಸ್ವಾವಲಂಬನೆಯೇ ಮುಂದಿನ ಏಕೈಕ ಮಾರ್ಗ ಮತ್ತು ಈ ಪ್ರತಿಯೊಂದು ರಂಗಗಳಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ಪ್ರಸ್ತುತ ಬಿಕ್ಕಟ್ಟಿನ ಆರ್ಥಿಕ ಪರಿಣಾಮವನ್ನು ಮೌಲ್ಯಮಾಪನ ಮಾಡಿದ ಪ್ರಧಾನಮಂತ್ರಿ ಅವರು, ಸಂಘರ್ಷವು ವಿಶ್ವದಾದ್ಯಂತ ಆರ್ಥಿಕತೆಗಳನ್ನು ನಡುಗಿಸಿದೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಒಪ್ಪಿಕೊಂಡರು. ಭಾರತದ ಮೇಲಿನ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ, ರಾಷ್ಟ್ರದ ಬಲಿಷ್ಠ ಆರ್ಥಿಕ ಮೂಲಭೂತ ಅಂಶಗಳು ಮತ್ತು ಸರ್ಕಾರದ ನಿರಂತರ ಮೇಲ್ವಿಚಾರಣೆಯು ಭದ್ರ ನೆಲೆಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಆಮದು ಮತ್ತು ರಫ್ತಿಗೆ ಸಂಬಂಧಿಸಿದ ಸವಾಲುಗಳನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಿ ಪರಿಹರಿಸಲು ಅಂತರ-ಸಚಿವಾಲಯ ತಂಡಗಳನ್ನು ರಚಿಸಿರುವ ಬಗ್ಗೆ ಮತ್ತು COVID-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ರಚಿಸಿದ ತಂಡಗಳ ಮಾದರಿಯಲ್ಲಿ ಪೂರೈಕೆ ಸರಪಳಿ, ಪೆಟ್ರೋಲ್-ಡೀಸೆಲ್, ರಸಗೊಬ್ಬರ, ಅನಿಲ ಮತ್ತು ಹಣದುಬ್ಬರದ ಮೇಲೆ ತ್ವರಿತ ಮತ್ತು ವ್ಯಾಪಕ ಕ್ರಮ ತೆಗೆದುಕೊಳ್ಳಲು ಏಳು ಹೊಸ ಸಬಲೀಕೃತ ತಂಡಗಳನ್ನು ರಚಿಸಿರುವ ಬಗ್ಗೆ ಸದನಕ್ಕೆ ತಿಳಿಸಿದ ಪ್ರಧಾನಮಂತ್ರಿ, ಸಾಮೂಹಿಕ ವಿಧಾನದಲ್ಲಿ ತಮಗಿರುವ ವಿಶ್ವಾಸವನ್ನು ವ್ಯಕ್ತಪಡಿಸಿದರು. "ಈ ಹಂಚಿಕೆಯ ಮತ್ತು ಸಂಘಟಿತ ಪ್ರಯತ್ನಗಳ ಮೂಲಕ ನಾವು ಈ ಸಂದರ್ಭಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಕೃಷಿ ವಲಯದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಮೋದಿ ಅವರು, ಮುಂಬರುವ ಮುಂಗಾರಿನ ಋತುವಿನಲ್ಲಿ ರೈತರಿಗೆ ಸಾಕಷ್ಟು ರಸಗೊಬ್ಬರ ಪೂರೈಕೆ ಖಾತ್ರಿಪಡಿಸಲು ಎಲ್ಲಾ ಅಗತ್ಯ ಸಿದ್ಧತೆಗಳು ಈಗಾಗಲೇ ಆಗಿವೆ ಎಂದು ರಾಷ್ಟ್ರಕ್ಕೆ ಭರವಸೆ ನೀಡಿದರು. "ಪ್ರತಿಯೊಂದು ಸವಾಲಿಗೂ ಪರಿಹಾರ ಕಂಡುಕೊಳ್ಳಲು ಸರ್ಕಾರವು ಅವರ ಜೊತೆ ದೃಢವಾಗಿ ನಿಂತಿದೆ ಎಂದು ದೇಶದ ರೈತರಿಗೆ ಮತ್ತೊಮ್ಮೆ ಭರವಸೆ ನೀಡಲು ಬಯಸುತ್ತೇನೆ ಮತ್ತು ಯಾವುದೇ ಬಿಕ್ಕಟ್ಟಿನ ಹೊರೆ ಅವರ ಹೆಗಲ ಮೇಲೆ ಬೀಳದಂತೆ ಮಾಡುವುದು ನಮ್ಮ ಅಚಲ ಬದ್ಧತೆಯಾಗಿ ಉಳಿಯುತ್ತದೆ" ಎಂದು ಪ್ರಧಾನಮಂತ್ರಿ ಶ್ರೀ. ಮೋದಿ ದೃಢಪಡಿಸಿದರು.

ರಾಜ್ಯಗಳ ಪರಿಷತ್ತಿನ ಸಾಮರ್ಥ್ಯದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಮುಂಬರುವ ಅವಧಿಯು ದೇಶಕ್ಕೆ ಮಹತ್ವದ ಪರೀಕ್ಷೆಯನ್ನು ಒಡ್ಡಲಿದೆ ಮತ್ತು ಯಶಸ್ಸಿಗೆ ರಾಜ್ಯಗಳ ಸಹಕಾರ ಅನಿವಾರ್ಯವಾಗಿರುತ್ತದೆ ಎಂದು ಹೇಳಿದರು. ಬಿಕ್ಕಟ್ಟಿನ ಸಂದರ್ಭಗಳು ಬಡವರು, ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ಮೇಲೆ ಅಸಮಾನ ಪ್ರಮಾಣದಲ್ಲಿ ಪರಿಣಾಮ ಬೀರುತ್ತವೆ  ಆದ್ದರಿಂದ, PM ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಲಾಭಗಳು ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪುವಂತೆ ಖಾತ್ರಿಪಡಿಸಲು ಎಲ್ಲಾ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು. ವಲಸೆ ಕಾರ್ಮಿಕರು ಎದುರಿಸುವ ತೊಂದರೆಗಳನ್ನು ಪರಿಹರಿಸಲು ಪೂರ್ವಭಾವಿ ಕ್ರಮಗಳು ಮತ್ತು ರಾಜ್ಯ ಸರ್ಕಾರಗಳಿಂದ ವಿಶೇಷ ಮೇಲ್ವಿಚಾರಣಾ ಕಾರ್ಯವಿಧಾನಗಳಿಗೆ ಕರೆ ನೀಡಿದ ಅವರು, ಇಂತಹ ಸಮಯಗಳಲ್ಲಿ ಕಾಳಸಂತೆಕೋರರು ಮತ್ತು ದಾಸ್ತಾನುದಾರರು ಹೆಚ್ಚು ಸಕ್ರಿಯರಾಗುತ್ತಾರೆ ಎಂದು ಎಚ್ಚರಿಸಿ, ಇಂತಹ ದೂರುಗಳು ಬರುವ ಕಡೆ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. "ಅಗತ್ಯ ವಸ್ತುಗಳ ಅಡೆತಡೆಯಿಲ್ಲದ ಪೂರೈಕೆಯು ಪ್ರತಿಯೊಂದು ರಾಜ್ಯದ ಅತ್ಯಂತ ಪ್ರಮುಖ ಆದ್ಯತೆಯಾಗಿರಬೇಕು ಮತ್ತು ಇದನ್ನು ಖಾತ್ರಿಪಡಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಾನು ಮನಃಪೂರ್ವಕವಾಗಿ ಮನವಿ ಮಾಡುತ್ತೇನೆ" ಎಂದು ಪ್ರಧಾನಮಂತ್ರಿ ಶ್ರೀ. ಮೋದಿ ಹೇಳಿದರು.

ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಬಿಕ್ಕಟ್ಟಿನ ಪ್ರಮಾಣ ಎಷ್ಟೇ ಇರಲಿ, ಭಾರತದ ಬಲಿಷ್ಠ ಬೆಳವಣಿಗೆಯ ಹಾದಿಯನ್ನು ಕಾಯ್ದುಕೊಳ್ಳಲು ಮತ್ತು ಪ್ರತಿಯೊಂದು ಅಗತ್ಯ ಕ್ರಮ ಹಾಗೂ ಪ್ರತಿಯೊಂದು ಅಗತ್ಯ ಸುಧಾರಣೆಯನ್ನು ವೇಗದಿಂದ ಜಾರಿಗೊಳಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕರೆ ನೀಡಿದರು. COVID-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಪ್ರದರ್ಶಿಸಿದ ಅನುಕರಣೀಯ ಟೀಮ್ ಇಂಡಿಯಾ ಮನೋಭಾವವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಆ ಸಮಯದಲ್ಲಿ ವಿಭಿನ್ನ ರಾಜಕೀಯ ಪಕ್ಷಗಳಿಂದ ಆಡಳಿತ ನಡೆಸಲ್ಪಡುತ್ತಿದ್ದ ಕೇಂದ್ರ ಮತ್ತು ರಾಜ್ಯಗಳು ಪರೀಕ್ಷಣೆ, ಲಸಿಕಾ ಅಭಿಯಾನ ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತಡೆರಹಿತವಾಗಿ ಸಹಕರಿಸಿದ್ದವು ಎಂದರು ಮತ್ತು ಅದೇ ಮನೋಭಾವವು ಈಗ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. "ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಸಂಯೋಜಿತ ಪ್ರಯತ್ನಗಳಿಂದ, ದೇಶವು ಈ ಗಂಭೀರ ಜಾಗತಿಕ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ — ನಾವು ಅದೇ ಟೀಮ್ ಇಂಡಿಯಾ ಮನೋಭಾವವನ್ನು ಮುಂದುವರಿಸಬೇಕು" ಎಂದು ಪ್ರಧಾನಮಂತ್ರಿ ಶ್ರೀ. ಮೋದಿ ಒತ್ತಿ ಹೇಳಿದರು.

ಈಗ ಎದುರಾಗಿರುವ ಸವಾಲಿನ ವಿಶಿಷ್ಟ ಸ್ವರೂಪವನ್ನು ವಿವರಿಸಿದ ಪ್ರಧಾನಮಂತ್ರಿ ಅವರು, ಈ ಬಿಕ್ಕಟ್ಟು ವಿಶಿಷ್ಟ ರೀತಿಯದ್ದಾಗಿದೆ ಮತ್ತು ಅದಕ್ಕೆ ತಕ್ಕಂತಹ ವಿಶಿಷ್ಟ ಬಗೆಯ ಪರಿಹಾರಗಳ ಅಗತ್ಯವಿದೆ ಎಂದು ಹೇಳಿದರು. "ನಾವು ಪ್ರತಿಯೊಂದು ಸವಾಲನ್ನು ತಾಳ್ಮೆ, ಸಂಯಮ ಮತ್ತು ಶಾಂತ ಮನಸ್ಸಿನಿಂದ ಎದುರಿಸಬೇಕು" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

ದೃಢ ಸಂಕಲ್ಪದೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ ಅವರು, ಪ್ರತಿ ಕ್ಷಣವೂ ಪರಿಸ್ಥಿತಿ ಬದಲಾಗುತ್ತಿದೆ ಎಂದು ಒಪ್ಪಿಕೊಂಡರು ಮತ್ತು ಪ್ರತಿಯೊಂದು ಸಾಧ್ಯತೆಗೂ ಭಾರತದ ನಾಗರಿಕರು ಸಿದ್ಧರಾಗಿರಬೇಕೆಂದು ಕರೆ ನೀಡಿದರು. ಈ ಯುದ್ಧದ ಪ್ರತಿಕೂಲ ಪರಿಣಾಮಗಳು ದೀರ್ಘ ಅವಧಿಯವರೆಗೆ ಮುಂದುವರಿಯುವ ಸಾಧ್ಯತೆ ಅಧಿಕ ಎಂದು ಎಚ್ಚರಿಸಿದ ಅವರು, ರಾಷ್ಟ್ರಕ್ಕೆ ದೃಢವಾದ ಭರವಸೆ ನೀಡಿದರು. "ಸರ್ಕಾರವು ಜಾಗರೂಕವಾಗಿದೆ, ಸಿದ್ಧವಾಗಿದೆ, ಮತ್ತು ಅತ್ಯಂತ ಗಂಭೀರತೆಯಿಂದ ತನ್ನ ಕಾರ್ಯತಂತ್ರ ರೂಪಿಸಿ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುತ್ತಿದೆ — ಈ ದೇಶದ ಜನರ ಕಲ್ಯಾಣವೇ ನಮಗೆ ಸರ್ವೋಚ್ಚ ಆದ್ಯತೆ; ಇದು ನಮ್ಮ ಗುರುತು, ಮತ್ತು ಇದು ನಮ್ಮ ಶಕ್ತಿ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೃಢಪಡಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s first satellite-guided chopper approached launched at HAL airport

Media Coverage

India’s first satellite-guided chopper approached launched at HAL airport
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in a mishap in Chamba, Himachal Pradesh
August 08, 2026

The Prime Minister, Shri Narendra Modi, condoled loss of lives due to a mishap in Chamba, Himachal Pradesh. "My thoughts are with the families who have lost their loved ones. May those injured recover at the earliest", Shri Modi stated.

The Prime Minister posted on X:

The loss of lives due to a mishap in Chamba, Himachal Pradesh, is deeply saddening. My thoughts are with the families who have lost their loved ones. May those injured recover at the earliest: PM @narendramodi