“100 ಕೋಟಿ ಲಸಿಕೆ ಕೇವಲ ಅಂಕಿ ಅಲ್ಲ, ಆದರೆ ಅದು ದೇಶದ ಶಕ್ತಿಯ ಪ್ರತಿಬಿಂಬ”
“ಭಾರತದ ಯಶಸ್ಸು, ದೇಶದ ಪ್ರತಿಯೊಬ್ಬರ ಯಶಸ್ಸಾಗಿದೆ”
“ರೋಗ ತಾರತಮ್ಯ ಮಾಡುವುದಿಲ್ಲವಾದ್ದರಿಂದ ಲಸಿಕೆ ನೀಡಿಕೆಯಲ್ಲೂ ತಾರತಮ್ಯವಿಲ್ಲ. ಅದಕ್ಕಾಗಿಯೇ ಅರ್ಹತೆಯ ವಿಐಪಿ ಸಂಸ್ಕೃತಿಯು ಲಸಿಕಾ ಅಭಿಯಾನದ ಪ್ರಾಬಲ್ಯ ಸ್ಥಾಪಿಸಲಾಗದು ಎಂಬುದನ್ನು ಖಾತ್ರಿಪಡಿಸಲಾಗಿದೆ”
“ಭಾರತ ಔಷಧಗಳ ಉತ್ಪಾದನಾ ತಾಣವಾಗುತ್ತಿದೆ ಎಂಬುದನ್ನು ಜಗತ್ತು ಸ್ವೀಕರಿಸುತ್ತಿರುವುದು ಇನ್ನಷ್ಟು ಬಲವರ್ಧನೆಗೊಂಡಿದೆ”
“ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಸರ್ಕಾರ ಮೊದಲ ಆದ್ಯತೆ ನೀಡಿತು”
“ಭಾರತದ ಇಡೀ ಲಸಿಕೆ ನೀಡಿಕೆ ಅಭಿಯಾನ ವಿಜ್ಞಾನದಿಂದ ಜನಸಿ, ವಿಜ್ಞಾನವನ್ನೇ ಆಧರಿಸಿದೆ ಮತ್ತು ವೈಜ್ಞಾನಿಕ ಹಿನ್ನೆಲೆ ಒಳಗೊಂಡಿದೆ”
ಭಾರತ 100 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
“ಭಾರತೀಯ ಕಂಪನಿಗಳಿಗೆ ಇಂದು ದಾಖಲೆಯ ಹೂಡಿಕೆಗಳು ಬರುತ್ತಿವೆ, ಆದರ ಜೊತೆಗೆ ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ನವೋದ್ಯಮಗಳಲ್ಲಿ ದಾಖಲೆಯ ಹೂಡಿಕೆಯೊಂದಿಗೆ, ಯೂನಿಕಾರ್ನ್ ಗಳು ಉದಯಿಸುತ್ತಿವೆ”
“ಸ್ವಚ್ಛ ಭಾರತ ಅಭಿಯಾನ ಜನಾಂದೋಲನವಾದ ಮಾದರಿಯಲ್ಲಿಯೇ, ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು, ಭಾರತೀಯರೇ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವುದು, ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ- ವೋಕಲ್ ಫಾರ್ ಲೋಕಲ್ ಅನುಸರಿಸಿ”

ಭಾರತ 100 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ, 100 ಕೋಟಿ ಲಸಿಕೆ ಡೋಸ್ ನೀಡುವ ಕಷ್ಟಕರವಾದ, ಆದರೆ ಗಮನಾರ್ಹ ಸಾಧನೆಯನ್ನು ಮಾಡಲಾಗಿದೆ ಎಂದು ಶ್ಲಾಘಿಸಿದರು. ಈ ಸಾಧನೆಯನ್ನು 130 ಕೋಟಿ ದೇಶವಾಸಿಗಳಿಗೆ ಸಮರ್ಪಿಸುವುದಾಗಿ ಹೇಳಿದ ಅವರು, ಈ ಯಶಸ್ಸು ಭಾರತದ ಯಶಸ್ಸು ಮತ್ತು ದೇಶದ ಪ್ರತಿಯೊಬ್ಬ ಪ್ರಜೆಯ ಯಶಸ್ಸು ಎಂದರು.  100 ಕೋಟಿ ಡೋಸ್‌ ಲಸಿಕೆ ನೀಡಿರುವುದು ಕೇವಲ ಸಂಖ್ಯೆಯಲ್ಲ, ಅದು ದೇಶದ ಸಾಮರ್ಥ್ಯದ ಪ್ರತಿಬಿಂಬ ಮತ್ತು ಅದು ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭ ಎಂದರು. ನವ ಭಾರತದಲ್ಲಿ ಕಷ್ಟಕರ ಗುರಿಗಳನ್ನು ಒಡ್ಡಿಕೊಳ್ಳಲಾಗುತ್ತಿದೆ ಮತ್ತು ಅದನ್ನು ಹೇಗೆ ಸಾಧಿಸಬೇಕೆಂಬುದು ಅದಕ್ಕೆ ತಿಳಿದಿದೆ ಎಂದು ಅವರು ಹೇಳಿದರು.

ಹಲವು ಜನರು ಇಂದು ಭಾರತದ ಲಸಿಕೆ ಕಾರ್ಯಕ್ರಮವನ್ನು ವಿಶ್ವದ ಇತರೆ ರಾಷ್ಟ್ರಗಳೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಭಾರತ 100 ಕೋಟಿ ಗಡಿ, 1 ಬಿಲಿಯನ್ ಅನ್ನು ಅತಿ ವೇಗವಾಗಿ ದಾಟಿದನ್ನೂ ಸಹ ಶ್ಲಾಘಿಸಲಾಗುತ್ತಿದೆ ಎಂದರು. ಈ ವಿಶ್ಲೇಷಣೆಯಲ್ಲಿ ಭಾರತದ ಆರಂಭವು ಹೇಗಾದರೂ ತಪ್ಪಿ ಹೋಗುತ್ತಿದೆ ಎಂದು ಅವರು ಗಮನ ಸೆಳೆದರು. ಅಭಿವೃದ್ಧಿ ಹೊಂದಿದ ದೇಶಗಳು ಸಂಶೋಧನೆ ಮತ್ತು ಲಸಿಕೆ ಅಭಿವೃದ್ಧಿಯಲ್ಲಿ ದಶಕಗಳ ಅನುಭವಗಳನ್ನು ಹೊಂದಿವೆ. ಭಾರತ ಬಹುತೇಕ ಲಸಿಕೆಗಳಿಗೆ ಈ ರಾಷ್ಟ್ರಗಳನ್ನು ಅವಲಂಬಿಸಿತ್ತು ಎಂದರು.  ಇದೇ ಕಾರಣಕ್ಕಾಗಿ ಅವರು ಶತಮಾನದ ಅತಿದೊಡ್ಡ ಸಾಂಕ್ರಾಮಿಕ ರೋಗವು ಬಂದಾಗ, ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡುವ ಭಾರತದ ಸಾಮರ್ಥ್ಯದ ಬಗೆಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು ಎಂದರು. ಇತರೆ ದೇಶಗಳಿಂದ ಸಾಕಷ್ಟು ಲಸಿಕೆಗಳನ್ನು ಖರೀದಿಸಲು ಭಾರತಕ್ಕೆ ಹಣ ಎಲ್ಲಿಂದ ಬರುತ್ತದೆ? ಭಾರತಕ್ಕೆ ಯಾವಾಗ ಲಸಿಕೆ ದೊರಕುತ್ತದೆ? ಭಾರತ ಜನತೆಗೆ ಲಸಿಕೆ ಸಿಗಲಿದೆಯೇ ಅಥವಾ ಇಲ್ಲವೇ? ಸಾಂಕ್ರಾಮಿಕ ಹರಡುವುದನ್ನು ತಪ್ಪಿಸಲು ಭಾರತ ಸಾಕಷ್ಟು ಜನರಿಗೆ ಲಸಿಕೆ ಹಾಕಿಸಲು ಸಾಧ್ಯವೇ ಎಂಬೆಲ್ಲಾ ಪ್ರಶ್ನೆಗಳು ಕೇಳಿ ಬಂದಿದ್ದವು. ಲಸಿಕೀಕರಣದಲ್ಲಿ 100 ಕೋಟಿ ಸಾಧಿಸುವ ಮೂಲಕ ಅವುಗಳಿಗೆ ಉತ್ತರ ನೀಡಲಾಗಿದೆ. ಭಾರತ ತನ್ನ ಪ್ರಜೆಗಳಿಗೆ ಕೇವಲ 100 ಕೋಟಿ ಲಸಿಕೆಗಳನ್ನು ನೀಡಿಲ್ಲ, ಅದನ್ನೂ ಉಚಿತವಾಗಿ ನೀಡಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಇದರಿಂದಾಗಿ ಭಾರತ ಔಷಧ ಉತ್ಪಾದನಾ ತಾಣ ಎಂಬುದನ್ನು ಜಗತ್ತು ಒಪ್ಪಿಕೊಳ್ಳುತ್ತಿರುವುದು ಬಲವರ್ಧನೆಯಾಗಿದೆ ಎಂದು ಅವರು ಹೇಳಿದರು.

ಕೋರೊನಾ ಸಾಂಕ್ರಾಮಿಕದ ಆರಂಭದಲ್ಲಿ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ಕಷ್ಟ ಎಂದು ಜನತೆ ಆತಂಕದಲ್ಲಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಇಲ್ಲಿ ಅಷ್ಟು ಸಂಯಮ ಮತ್ತು ಶಿಸ್ತು ಕೆಲಸ ಮಾಡುತ್ತದೆಯೇ ಎಂದು ಪ್ರಶ್ನೆಗಳನ್ನು ಕೂಡ ಎತ್ತಿದ್ದರು. ಆದರೆ ನಮ್ಮ ಪ್ರಕಾರ ಪ್ರಜಾಪ್ರಭುತ್ವವೆಂದರೆ ಎಲ್ಲರನ್ನೂ ಒಳಗೊಂಡ ಸಬ್ ಕಾ ಸಾಥ್ ಎಂದರ್ಥ. ದೇಶ ‘ಉಚಿತ ಲಸಿಕೆ ಮತ್ತು ಎಲ್ಲರಿಗೂ ಲಸಿಕೆ’ ಅಭಿಯಾನವನ್ನು ಆರಂಭಿಸಿತು. ಲಸಿಕೆಯನ್ನು ಬಡವರು-ಶ್ರೀಮಂತರು, ನಗರ-ಗ್ರಾಮೀಣ ಪ್ರದೇಶದ ಎಲ್ಲರಿಗೂ ನೀಡಲಾಯಿತು. ರೋಗವು ಯಾವುದೇ ತಾರತಮ್ಯ ಮಾಡದಿರುವಾಗ, ಲಸಿಕೆಯಲ್ಲೂ ಯಾವುದೇ ತಾರತಮ್ಯವಿರಬಾರದು ಎಂಬ ಏಕೈಕ ಮಂತ್ರವನ್ನು ದೇಶ ಪಾಲಿಸಿತು ಎಂದು ಅವರು ಹೇಳಿದರು. ಹಾಗಾಗಿ ವಿಐಪಿ ಸಂಸ್ಕೃತಿ ಲಸಿಕೀಕರಣದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂಬುದನ್ನು ನಾವು ಖಾತ್ರಿಪಡಿಸಿದೆವು ಎಂದರು.

ಭಾರತದ ಹೆಚ್ಚಿನ ಜನರು ಲಸಿಕೆಗಳನ್ನು ಪಡೆಯಲು ಲಸಿಕಾ ಕೇಂದ್ರಗಳಿಗೆ ಹೋಗುವುದಿಲ್ಲ ಎಂಬ ಪ್ರಶ್ನೆಗಳನ್ನು ಎತ್ತಲಾಗಿತ್ತು ಎಂದು ಪ್ರಧಾನಿ ಹೇಳಿದರು. ಆದರೆ ಲಸಿಕೆ ಪಡೆಯಲು ಹಿಂಜರಿಯುವುದು ಇಂದಿಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಹುದೊಡ್ಡ ಸವಾಲಾಗಿದೆ. ಆದರೆ ಭಾರತದ ಜನತೆ 100 ಕೋಟಿ ಲಸಿಕೆ ಡೋಸ್ ಪಡೆಯುವ ಮೂಲಕ ಉತ್ತರ ನೀಡಿದ್ದಾರೆ ಎಂದರು. ‘ಅಭಿಯಾನವು ಎಲ್ಲರ ಪ್ರಯತ್ನ’ ಎಂದು ಹೇಳಿದ ಅವರು, ಎಲ್ಲರ ಪ್ರಯತ್ನಗಳು ಒಗ್ಗೂಡಿದರೆ ಫಲಿತಾಂಶ ಖಂಡಿತಾ ಅದ್ಭುತವಾಗಿರುತ್ತದೆ ಎಂದರು. ದೇಶ ಸಾಂಕ್ರಾಮಿಕದ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಸರ್ಕಾರ ಮೊದಲ ಆದ್ಯತೆ ನೀಡಿತು ಎಂದು ಹೇಳಿದರು.

ಭಾರತದ ಸಂಪೂರ್ಣ ಲಸಿಕೀಕರಣ ಕಾರ್ಯಕ್ರಮವು ವಿಜ್ಞಾನದ ಗರ್ಭದಲ್ಲಿ ಹುಟ್ಟಿದೆ, ವೈಜ್ಞಾನಿಕ ಆಧಾರದಲ್ಲಿ ಬೆಳೆದಿದೆ ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ನಾಲ್ಕೂ ದಿಕ್ಕುಗಳನ್ನು ತಲುಪಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಇಡೀ ಲಸಿಕೀಕರಣ ಕಾರ್ಯಕ್ರಮ ವಿಜ್ಞಾನದಿಂದ ಹುಟ್ಟಿದ್ದು, ವಿಜ್ಞಾನದಿಂದ ನಡೆಸಲ್ಪಡುತ್ತಿದೆ ಮತ್ತು ವಿಜ್ಞಾನ ಆಧರಿಸಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು. ಲಸಿಕೆ ಕಂಡು ಹಿಡಿಯುವ ಮುನ್ನದಿಂದ ಹಿಡಿದು ಲಸಿಕೆ ನೀಡುವವರೆಗೆ, ಇಡೀ ಅಭಿಯಾನ ವೈಜ್ಞಾನಿಕ ವಿಧಾನವನ್ನು ಆಧರಿಸಿದೆ ಎಂದು ಅವರು ಹೇಳಿದರು. ಲಸಿಕೆ ಉತ್ಪಾದನೆ ಹೆಚ್ಚಿಸುವುದು ಕೂಡ ಸವಾಲಾಗಿತ್ತು. ಆನಂತರ ನಾನಾ ರಾಜ್ಯಗಳಿಗೆ ವಿತರಿಸುವುದು ಮತ್ತು ದೂರ ದೂರ ಪ್ರದೇಶಗಳಿಗೆ ಸಕಾಲಕ್ಕೆ ಲಸಿಕೆಗಳನ್ನು ಪೂರೈಸುವುದು ಕೂಡ ಸವಾಲಾಗಿತ್ತು. ಆದರೆ ವೈಜ್ಞಾನಿಕ ವಿಧಾನಗಳು ಮತ್ತು ಹೊಸ ಆವಿಷ್ಕಾರಗಳಿಂದ ದೇಶ ಎಲ್ಲ ಸವಾಲುಗಳಿಗೆ ಪರಿಹಾರ ಕಂಡುಕೊಂಡಿತು. ಸಂಪನ್ಮೂಲಗಳನ್ನು ಅಪತ್ರಿಮ ವೇಗದಲ್ಲಿ ವೃದ್ಧಿಸಲಾಯಿತು.  ಭಾರತದಲ್ಲಿಯೇ ತಯಾರಿಸಿದ ಕೋವಿನ್ ವೇದಿಕೆಯು ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡುವುದಲ್ಲದೆ, ನಮ್ಮ ವೈದ್ಯಕೀಯ ಸಿಬ್ಬಂದಿಯ ಕೆಲಸವನ್ನು ಸುಲಭಗೊಳಿಸಿದೆ ಎಂದು ಅವರು ಹೇಳಿದರು.

ದೇಶ ಮತ್ತು ವಿದೇಶಗಳ ಅನೇಕ ತಜ್ಞರು ಮತ್ತು ಹಲವು ಏಜೆನ್ಸಿಗಳು ಭಾರತದ ಆರ್ಥಿಕತೆ ಬಗ್ಗೆ ಬಹಳ ಸಾಕಾರಾತ್ಮಕವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಭಾರತೀಯ ಕಂಪನಿಗಳಿಗೆ ದಾಖಲೆಯ ಪ್ರಮಾಣದ ಹೂಡಿಕೆಗಳು ಮಾತ್ರ ಬರುತ್ತಿಲ್ಲ, ಯುವಕರಿಗೆ ಹೊಸ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದರು. ನವೋದ್ಯಮದಲ್ಲಿ ದಾಖಲೆಯ ಹೂಡಿಕೆಗಳು ಬಂದು, ಯೂನಿಕಾರ್ನ್ ಗಳು ಉದಯಿಸಿವೆ. ವಸತಿ ವಲಯದಲ್ಲೂ ಸಹ ಹೊಸ ಶಕ್ತಿಯು ಗೋಚರಿಸುತ್ತಿದೆ.  ಕಳೆದ ಕೆಲವು ತಿಂಗಳುಗಳಲ್ಲಿ ಕೈಗೊಂಡ ಹಲವು ಸುಧಾರಣೆಗಳು ಮತ್ತು ಉಪಕ್ರಮಗಳು ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲು ದೊಡ್ಡ ಪಾತ್ರವನ್ನು ವಹಿಸುತ್ತಿವೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಕೃಷಿ ನಮ್ಮ ಆರ್ಥಿಕತೆಯನ್ನು ಸದೃಢವಾಗಿರಿಸಿತು ಎಂದರು. ಇಂದು ದಾಖಲೆ ಮಟ್ಟದಲ್ಲಿ ಸರ್ಕಾರದಿಂದ ಆಹಾರ ಧಾನ್ಯಗಳ ಸಂಗ್ರಹಣಾ ಕಾರ್ಯ ನಡೆದಿದೆ. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುತ್ತಿದೆ ಎಂದು ಹೇಳಿದರು.

ಭಾರತದಲ್ಲಿಯೇ ತಯಾರಿಸಿದ ಮತ್ತು ಭಾರತೀಯರ ಪರಿಶ್ರಮದಿಂದಲೇ ತಯಾರಿಸಲ್ಪಟ್ಟ ಪ್ರತಿಯೊಂದು ವಸ್ತುಗಳನ್ನು ಜನರು ಖರೀದಿಸಲು ಮುಂದಾಗಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು. ಇದು ಎಲ್ಲ ಪ್ರಯತ್ನಗಳಿಂದ ಮಾತ್ರ ಸಾಧ್ಯವಾಗಲಿದೆ ಎಂದರು. ಸ್ವಚ್ಛ ಭಾರತ ಅಭಿಯಾನ ಜನಾಂದೋಲನವಾದಂತೆ, ಭಾರತೀಯರೇ ತಯಾರಿಸಿದ ಮತ್ತು ಭಾರತದಲ್ಲೇ ತಯಾರಿಸಲ್ಪಟ್ಟ ವಸ್ತುಗಳನ್ನು ಖರೀದಿಸುವ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ- ವೋಕಲ್ ಫಾರ್ ಲೋಕಲ್ ಪಾಲನೆ ಮಾಡಬೇಕೆಂದರು.

ದೇಶಕ್ಕೆ ದೊಡ್ಡ ಗುರಿಗಳನ್ನು ಹಾಕಿಕೊಳ್ಳುವುದು ಮತ್ತು ಅವುಗಳನ್ನು ಸಾಧಿಸುವುದು ತಿಳಿದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ಅದಕ್ಕೆ ನಾವು ತುಂಬಾ ಜಾಗರೂಕತೆಯಿಂದ ರಿಬೇಕಾಗಿದೆ ಎಂದರು. ಹೊರಗಿನ ಕವಚ ಎಷ್ಟೇ ಉತ್ತಮವಾಗಿದ್ದರೂ, ರಕ್ಷಾ ಕವಚ ಎಷ್ಟೇ ಅಧುನಿಕವಾಗಿದ್ದರೂ ಸಹ ಅದು ಸಂಪೂರ್ಣ ಖಾತ್ರಿಯನ್ನು ನೀಡಿದರೂ ಯುದ್ಧದಲ್ಲಿ ಶಸ್ತ್ರಾಸ್ತ್ರವನ್ನು ತ್ಯಜಿಸುವಂತಿಲ್ಲ ಎಂದರು. ಅಂತೆಯೇ  ಅಸಡ್ಡೆ ತೋರಲು ಯಾವುದೇ ಕಾರಣವಿಲ್ಲ ಎಂದರು.  ಬಹಳಷ್ಟು ಜಾಗರೂಕತೆಯಿಂದ ನಮ್ಮ ಹಬ್ಬಗಳನ್ನು ಆಚರಿಸಿ ಎಂದು ಅವರು ಜನರಲ್ಲಿ ಮನವಿ ಮಾಡಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Over 52,000 Indians return safely from Gulf amid Iran war: MEA

Media Coverage

Over 52,000 Indians return safely from Gulf amid Iran war: MEA
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಮಾರ್ಚ್ 2026
March 10, 2026

Citizens Appreciate India’s Digital Leap and Green Triumphs Under the Leadership of PM Modi