ಗೌರವಾನ್ವಿತ ಡಾ. ಪ್ಯಾಟ್ರಿಕ್ ಹರ್ಮಿನಿ,

ಉಭಯ ದೇಶಗಳ ಗಣ್ಯ ಪ್ರತಿನಿಧಿಗಳೇ,

ಮಾಧ್ಯಮ ಮಿತ್ರರೇ,

ನಮಸ್ಕಾರ,

ಅಧ್ಯಕ್ಷರಾದ ಹರ್ಮಿನಿ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ನನಗೆ ಅಪಾರ ಸಂತೋಷವಾಗುತ್ತದೆ.

ಸೆಶೆಲ್ಸ್ ಅಧ್ಯಕ್ಷರಾಗಿ ಅವರು ಆಯ್ಕೆಯಾದ ಮೇಲೆ, ಭಾರತದ 1.4 ಶತಕೋಟಿ ಜನರ ಪರವಾಗಿ ನಾನು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಅಧ್ಯಕ್ಷರಾಗಿ ಭಾರತಕ್ಕೆ ಅವರ ಮೊದಲ ಭೇಟಿ ಇದು. ಸೆಶೆಲ್ಸ್ ತನ್ನ 50ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವಾಗ ಮತ್ತು ನಮ್ಮ ರಾಜತಾಂತ್ರಿಕ ಸಂಬಂಧಗಳ 50 ನೇ ವಾರ್ಷಿಕೋತ್ಸವವನ್ನು ನಾವು ಸ್ಮರಿಸುತ್ತಿರುವಾಗ, ಅವರ ಭೇಟಿ ಈ ಶುಭ ವರ್ಷದಲ್ಲಿ ನಡೆಯುತ್ತಿದೆ. ಈ ಮೈಲಿಗಲ್ಲುಗಳು ಒಟ್ಟಾಗಿ ಹೊಸ ಎತ್ತರವನ್ನು ತಲುಪಲು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೇ,

ಭಾರತ ಮತ್ತು ಸೆಶೆಲ್ಸ್ ರಾಜತಾಂತ್ರಿಕ ಬಾಂಧವ್ಯವನ್ನು ಮೀರಿದ ಸಂಬಂಧವನ್ನು ಹಂಚಿಕೊಂಡಿವೆ. ಹಿಂದೂ ಮಹಾಸಾಗರದ ಅಲೆಗಳು ಶತಮಾನಗಳಿಂದ ನಮ್ಮ ಜನರನ್ನು ಸಂಪರ್ಕಿಸಿವೆ. ಅದರ ತೀರದಲ್ಲಿ, ನಮ್ಮ ರಾಷ್ಟ್ರಗಳ ನಡುವಿನ ವ್ಯಾಪಾರವು ಬೆಳೆದಿದೆ, ಸಂಸ್ಕೃತಿಗಳು ಒಮ್ಮುಖವಾಗಿವೆ ಮತ್ತು ವಿಶ್ವಾಸದ ಸಂಪ್ರದಾಯಗಳು ಬಲಗೊಳ್ಳುತ್ತಲೇ ಇವೆ.

ಭಾರತ ಮತ್ತು ಸೆಶೆಲ್ಸ್ ಭೌಗೋಳಿಕತೆಯಿಂದ ಮಾತ್ರವಲ್ಲ, ಇತಿಹಾಸ, ವಿಶ್ವಾಸ ಮತ್ತು ಭವಿಷ್ಯದ ಹಂಚಿಕೆಯ ದೃಷ್ಟಿಕೋನದಿಂದಲೂ ಪರಸ್ಪರ  ಸಂಪರ್ಕ ಹೊಂದಿವೆ.

ನಮ್ಮ ಬಾಂಧವ್ಯವು ಭೂತ, ವರ್ತಮಾನ ಮತ್ತು ಭವಿಷ್ಯವನ್ನು ವ್ಯಾಪಿಸಿದೆ. ಸಾಗರದ  ನೆರೆಯ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿ, ಸೀಶೆಲ್ಸ್ ಭಾರತದ ಮಹಾಸಾಗರ್ ದೃಷ್ಟಿಕೋನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಸಹಕಾರವು ಸಮುದ್ರ, ಭೂಮಿ ಮತ್ತು ವಾಯು ಕ್ಷೇತ್ರಗಳನ್ನು ಒಳಗೊಂಡಿದೆ.

ಇಂದಿನ ಚರ್ಚೆಗಳಲ್ಲಿ, ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗವನ್ನು ನಾವು ರೂಪಿಸಿದ್ದೇವೆ. ನಮ್ಮ ಆರ್ಥಿಕ ಸಹಕಾರವನ್ನು ಗಾಢವಾಗಿಸಲು ಹೊಸ ಅವಕಾಶಗಳನ್ನು ಅನ್ವೇಷಿಸುವುದನ್ನು ಮುಂದುವರಿಸಲು ನಾವು ಒಪ್ಪಿಕೊಂಡಿದ್ದೇವೆ.

ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರವನ್ನು ವಿಸ್ತರಿಸುವುದರ ಜೊತೆಗೆ, ನಾವು ಫಿನ್‌ಟೆಕ್ ಮತ್ತು ಡಿಜಿಟಲ್ ಪರಿಹಾರಗಳಲ್ಲಿ ನಮ್ಮ ಸಹಯೋಗವನ್ನು ಸಹ ಮುಂದುವರಿಸುತ್ತೇವೆ.

ಅಭಿವೃದ್ಧಿ ಪಾಲುದಾರಿಕೆಯು ಭಾರತ- ಸೆಶೆಲ್ಸ್ ಸಂಬಂಧಗಳ ಬಲವಾದ ಆಧಾರಸ್ತಂಭವಾಗಿದೆ. ನಮ್ಮ ಎಲ್ಲಾ ಪ್ರಯತ್ನಗಳು ಸೆಶೆಲ್ಸ್ ನ ಆದ್ಯತೆಗಳು ಮತ್ತು ಅವಶ್ಯಕತೆಗಳಿಂದ ಮಾರ್ಗದರ್ಶಿಸಲ್ಪಟ್ಟಿವೆ.

ಈ ದಿಕ್ಕಿನಲ್ಲಿ, ಇಂದು ನಾವು 175 ಮಿಲಿಯನ್ ಡಾಲರ್‌ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುತ್ತಿದ್ದೇವೆ. ಈ ಪ್ಯಾಕೇಜ್ ಸಾಮಾಜಿಕ ವಸತಿ, ಇ-ಮೊಬಿಲಿಟಿ, ವೃತ್ತಿಪರ ತರಬೇತಿ, ಆರೋಗ್ಯ, ರಕ್ಷಣೆ ಮತ್ತು ಕಡಲ ಭದ್ರತೆಯಂತಹ ಕ್ಷೇತ್ರಗಳಲ್ಲಿ  ದೃಢವಾದ ಯೋಜನೆಗಳನ್ನು ಬೆಂಬಲಿಸುತ್ತದೆ. ಈ ಉಪಕ್ರಮಗಳು ಸೆಶೆಲ್ಸ್ ನ ಜನರಿಗೆ, ವಿಶೇಷವಾಗಿ ಯುವಜನರಿಗೆ ಹೊಸ ಉದ್ಯೋಗ ಮತ್ತು ಕೌಶಲ್ಯ ಅವಕಾಶಗಳನ್ನು ಸೃಷ್ಟಿಸುತ್ತವೆ.

ಸೆಶೆಲ್ಸ್ ನ ಸಾಮರ್ಥ್ಯ ವೃದ್ಧಿಯಲ್ಲಿ ಭಾರತದ ಐಟಿಇಸಿ ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸಿದೆ. ಸೆಶೆಲ್ಸ್ ನ ನಾಗರಿಕ ಸೇವಾ ಸಿಬ್ಬಂದಿಗಳಿಗೆ ಭಾರತದಲ್ಲಿ ತರಬೇತಿ ನೀಡಲು ಇಂದು ತಿಳುವಳಿಕಾ ಒಡಂಬಡಿಕೆಗೆ  ಸಹಿ ಹಾಕಲಾಗುತ್ತಿದೆ ಎಂಬುದು  ನನಗೆ ಸಂತೋಷ ತಂದಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ನಿಕಟ ಸಹಕಾರದ ಮೂಲಕ, ನಾವು ನಮ್ಮ ಪಾಲುದಾರಿಕೆಗೆ ಭವಿಷ್ಯದ ನಿರ್ದೇಶನವನ್ನು ನೀಡುತ್ತಿದ್ದೇವೆ. ಡಿಜಿಟಲ್ ರೂಪಾಂತರದ ಕುರಿತಾದ ತಿಳುವಳಿಕಾ ಒಡಂಬಡಿಕೆಗೂ  ಇಂದು ಸಹಿ ಹಾಕಲಾಗುತ್ತಿದೆ, ಇದರ ಅಡಿಯಲ್ಲಿ ನಾವು ಸೆಶೆಲ್ಸ್ ನ ನೊಂದಿಗೆ ಭಾರತದ ಯಶಸ್ವಿ ಅನುಭವವನ್ನು ಹಂಚಿಕೊಳ್ಳುತ್ತೇವೆ.

ಆರೋಗ್ಯ ಕ್ಷೇತ್ರದಲ್ಲಿ, ಭಾರತವು ಸೆಶೆಲ್ಸ್ ನ ಸ್ಥಿರ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿದೆ. ಕೈಗೆಟುಕುವ, ಗುಣಮಟ್ಟದ ಔಷಧಿಗಳ ಪೂರೈಕೆ, ವೈದ್ಯಕೀಯ ಪ್ರವಾಸೋದ್ಯಮ ಮತ್ತು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಾವು ಸೆಶೆಲ್ಸ್ ನೊಂದಿಗೆ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.

ಇಂಧನ ಮತ್ತು ಹವಾಮಾನ ಕ್ಷೇತ್ರಗಳಲ್ಲಿ, ನಮ್ಮ ಸಹಕಾರವು ಸುಸ್ಥಿರ ಅಭಿವೃದ್ಧಿಗೆ ಹಂಚಿಕೆಯ ಬದ್ಧತೆಯಿಂದ ಮಾರ್ಗದರ್ಶಿಸಲ್ಪಡುತ್ತದೆ. ನವೀಕರಿಸಬಹುದಾದ ಇಂಧನ, ಸ್ಥಿತಿಸ್ಥಾಪಕತ್ವ ಮತ್ತು ಹವಾಮಾನ-ಹೊಂದಾಣಿಕೆಯ ಪರಿಹಾರಗಳಲ್ಲಿ ನಾವು ನಮ್ಮ ಸಹಯೋಗವನ್ನು ಮತ್ತಷ್ಟು ವಿಸ್ತರಿಸುತ್ತೇವೆ.

ಸ್ನೇಹಿತರೇ,

ಕಡಲ ಪರಿಸರದ ನೆರೆಯವರಾಗಿ, ನೀಲಿ ಆರ್ಥಿಕತೆಯು ನಮಗೆ ಸಹಕಾರದ ನೈಸರ್ಗಿಕ ಕ್ಷೇತ್ರವಾಗಿದೆ. ಸಮುದ್ರ ಸಂಶೋಧನೆ, ಸಾಮರ್ಥ್ಯ ವೃದ್ಧಿ ಮತ್ತು ದತ್ತಾಂಶ ಹಂಚಿಕೆಯಂತಹ ಕ್ಷೇತ್ರಗಳಲ್ಲಿ ನಾವು ಸೆಶೆಲ್ಸ್ ನೊಂದಿಗೆ ಭಾರತದ ಪರಿಣತಿಯನ್ನು ಹಂಚಿಕೊಳ್ಳುತ್ತೇವೆ.

ರಕ್ಷಣಾ ಸಹಕಾರ ಮತ್ತು ಕಡಲ ಭದ್ರತೆ ನಮ್ಮ ಪಾಲುದಾರಿಕೆಯ ಪ್ರಮುಖ ಸ್ತಂಭಗಳಾಗಿವೆ. ಕೊಲಂಬೊ ಭದ್ರತಾ ಸಮಾವೇಶದ ಪೂರ್ಣ ಸದಸ್ಯರಾಗಿ ಸೆಶೆಲ್ಸ್ ಅನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಪರಸ್ಪರ ಸಮನ್ವಯವನ್ನು ಬಲಪಡಿಸುತ್ತದೆ ಮತ್ತು ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಬಲಪಡಿಸುತ್ತದೆ.

ಒಟ್ಟಾಗಿ, ನಾವು ಕೇವಲ ದ್ವಿಪಕ್ಷೀಯ ಸಹಕಾರವನ್ನು ಮಾತ್ರವಲ್ಲದೆ, ಹಿಂದೂ ಮಹಾಸಾಗರದ ಹಂಚಿಕೆಯ ಭವಿಷ್ಯವನ್ನು ರೂಪಿಸುತ್ತೇವೆ.

ಭಾರತ- ಸೆಶೆಲ್ಸ್ ಸಂಬಂಧಗಳ ಬಹುದೊಡ್ಡ ಬಲ ನಮ್ಮ ಜನರ ನಡುವಿನ ಸಂಬಂಧಗಳಲ್ಲಿದೆ. ಸೆಶೆಲ್ಸ್ ನಲ್ಲಿರುವ ಭಾರತೀಯ ಸಮುದಾಯವು ದೇಶದ ಸಾಮಾಜಿಕ ಮತ್ತು ಆರ್ಥಿಕ ಜೀವನಕ್ಕೆ ಗಮನಾರ್ಹ ಕೊಡುಗೆ ನೀಡಿದೆ. ಅದೇ ಸಮಯದಲ್ಲಿ, ಅವರು ತಲೆಮಾರುಗಳಾದ್ಯಂತ ನಮ್ಮ ಸ್ನೇಹವನ್ನು ಬಲಪಡಿಸಿದ್ದಾರೆ.

ಇಂದು, ಪ್ರವಾಸೋದ್ಯಮ, ಶಿಕ್ಷಣ, ಸಂಸ್ಕೃತಿ ಮತ್ತು ಕ್ರೀಡೆಗಳ ಮೂಲಕ ಈ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ನಾವು ಚರ್ಚಿಸಿದ್ದೇವೆ. ಎರಡೂ ದೇಶಗಳ ಯುವಜನರ ನಡುವೆ ಹೆಚ್ಚುತ್ತಿರುವ ವಿನಿಮಯಕ್ಕೆ ನಾವು ವಿಶೇಷ ಒತ್ತು ನೀಡುತ್ತೇವೆ.

ಸ್ನೇಹಿತರೇ,

ಇಂದಿನ ಸಭೆಯು ಭಾರತ- ಸೆಶೆಲ್ಸ್ ಪಾಲುದಾರಿಕೆ ಹೊಸ ಹಂತವನ್ನು ಪ್ರವೇಶಿಸುತ್ತಿದೆ ಎಂದು ಸ್ಪಷ್ಟಪಡಿಸುತ್ತದೆ. ಎಲ್ಲಾ ವಲಯಗಳಲ್ಲಿ ಸಹಕಾರವನ್ನು ಮುನ್ನಡೆಸಲು, ನಾವು ಇಂದು ಭಾರತ- ಸೆಶೆಲ್ಸ್ ಜಂಟಿ ಚಿಂತನಾ ದೃಷ್ಟಿಕೋನವನ್ನು ಹೊರಡಿಸುತ್ತಿದ್ದೇವೆ. ಈ ದೃಷ್ಟಿಕೋನವು ಮುಂದಿನ ವರ್ಷಗಳಲ್ಲಿ ನಮ್ಮ ಸಹಯೋಗಕ್ಕೆ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ.

ಘನತೆವೆತ್ತರೇ,

ಮತ್ತೊಮ್ಮೆ, ನಿಮ್ಮ ಭಾರತ ಭೇಟಿಗಾಗಿ ಮತ್ತು ಭಾರತದ ಬಗೆಗಿನ ನಿಮ್ಮ ಅಚಲ ಸ್ನೇಹ ಮತ್ತು ಬದ್ಧತೆಗಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ತುಂಬಾ ಧನ್ಯವಾದಗಳು.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Spirituality remains key driver for travel in Asia, India ranks top: Report

Media Coverage

Spirituality remains key driver for travel in Asia, India ranks top: Report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಮಾರ್ಚ್ 2026
March 26, 2026

India’s Economy, Innovative Spirit and Global Standing Continue to Thrive with the Modi Government