ಆಹಾರ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಆಂದೋಲನವನ್ನು ಡಾ. ಸ್ವಾಮಿನಾಥನ್ ಮುನ್ನಡೆಸಿದರು: ಪ್ರಧಾನಮಂತ್ರಿ
ಡಾ. ಸ್ವಾಮಿನಾಥನ್ ಅವರು ಜೀವವೈವಿಧ್ಯತೆಯನ್ನು ಮೀರಿ ʻಜೈವಿಕ ಸಂತೋಷʼದ ದೂರದೃಷ್ಟಿಯ ಪರಿಕಲ್ಪನೆಯನ್ನು ನೀಡಿದರು: ಪ್ರಧಾನಮಂತ್ರಿ
ರೈತರ ಹಿತಾಸಕ್ತಿ ವಿಚಾರದಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ: ಪ್ರಧಾನಮಂತ್ರಿ
ನಮ್ಮ ಸರ್ಕಾರವು ರೈತರ ಶಕ್ತಿಯನ್ನು ರಾಷ್ಟ್ರದ ಪ್ರಗತಿಯ ಅಡಿಪಾಯವೆಂದು ಗುರುತಿಸಿದೆ: ಪ್ರಧಾನಮಂತ್ರಿ
ಆಹಾರ ಭದ್ರತೆಯ ಪರಂಪರೆಯನ್ನು ಮುಂದುವರಿಸುತ್ತಾ, ಎಲ್ಲರಿಗೂ ಪೌಷ್ಠಿಕಾಂಶದ ಭದ್ರತೆಯನ್ನು ಖಾತ್ರಿಪಡಿಸುವುದು ನಮ್ಮ ಕೃಷಿ ವಿಜ್ಞಾನಿಗಳ ಮುಂದಿನ ಸವಾಲಾಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತೀಯ ಕೃಷಿ ಅಭಿವೃದ್ಧಿ ಸಂಸ್ಥೆಯಲ್ಲಿ(ಐಸಿಎಆರ್-ಪೂಸಾ) ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಪ್ರೊ. ಎಂ.ಎಸ್. ಸ್ವಾಮಿನಾಥನ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿಯವರು, ಸ್ವಾಮಿನಾಥನ್ ಅವರು ಒಂದು ಯುಗಕ್ಕೂ ಮೀರಿದ ಕೊಡುಗೆಗಳನ್ನು ನೀಡಿದ ದೂರದೃಷ್ಟಿಯ ವ್ಯಕ್ತಿ ಎಂದು ಬಣ್ಣಿಸಿದರು. ಪ್ರೊಫೆಸರ್ ಸ್ವಾಮಿನಾಥನ್ ಅವರು ವಿಜ್ಞಾನವನ್ನು ಸಾರ್ವಜನಿಕ ಸೇವೆಯ ಮಾಧ್ಯಮವಾಗಿ ಪರಿವರ್ತಿಸಿದ ಮಹಾನ್ ವಿಜ್ಞಾನಿ ಎಂದು ಅವರು ಹೇಳಿದರು. ಪ್ರೊ. ಸ್ವಾಮಿನಾಥನ್ ಅವರು ರಾಷ್ಟ್ರದ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಪ್ರೊ. ಸ್ವಾಮಿನಾಥನ್ ಅವರು ಜಾಗೃತಗೊಳಿಸಿದ ಪ್ರಜ್ಞೆಯು ಮುಂಬರುವ ಶತಮಾನಗಳವರೆಗೆ ಭಾರತದ ನೀತಿಗಳು ಮತ್ತು ಆಧ್ಯತೆಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಸ್ವಾಮಿನಾಥನ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರು ಎಲ್ಲರಿಗೂ ಶುಭ ಕೋರಿದರು.

ʻರಾಷ್ಟ್ರೀಯ ಕೈಮಗ್ಗ ದಿನʼದ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕಳೆದ ಹತ್ತು ವರ್ಷಗಳಲ್ಲಿ ಕೈಮಗ್ಗ ಕ್ಷೇತ್ರವು ದೇಶಾದ್ಯಂತ ಹೊಸ ಮಾನ್ಯತೆ ಮತ್ತು ಶಕ್ತಿಯನ್ನು ಪಡೆದುಕೊಂಡಿದೆ ಎಂದರು. ರಾಷ್ಟ್ರೀಯ ಕೈಮಗ್ಗ ದಿನದಂದು ಎಲ್ಲರಿಗೂ, ವಿಶೇಷವಾಗಿ ಕೈಮಗ್ಗ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಅವರು ಶುಭಾಶಯಗಳನ್ನು ತಿಳಿಸಿದರು.

 

ಡಾ. ಎಂ.ಎಸ್. ಸ್ವಾಮಿನಾಥನ್ ಅವರೊಂದಿಗಿನ ತಮ್ಮ ಹಲವು ವರ್ಷಗಳ ಒಡನಾಟವನ್ನು ಹಂಚಿಕೊಂಡ ಶ್ರೀ ಮೋದಿ ಅವರು, ಬರ ಮತ್ತು ಚಂಡಮಾರುತಗಳಿಂದಾಗಿ ಕೃಷಿಯು ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದ ಗುಜರಾತಿನ ಹಿಂದಿನ ಪರಿಸ್ಥಿತಿಗಳನ್ನು ಸ್ಮರಿಸಿದರು. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಣ್ಣಿನ ಆರೋಗ್ಯ ಕಾರ್ಡ್ ಉಪಕ್ರಮದ ಕೆಲಸ ಪ್ರಾರಂಭವಾಯಿತು ಎಂದು ಹೇಳಿದ ಅವರು, ಪ್ರೊ.ಸ್ವಾಮಿನಾಥನ್ ಅವರು ಈ ಉಪಕ್ರಮದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದನ್ನು ನೆನಪಿಸಿಕೊಂಡರು. ಅವರು ಮುಕ್ತ ಹೃದಯದಿಂದ ಸಲಹೆಗಳನ್ನು ನೀಡಿದರು, ಅದು ಕೃಷಿಯ ಯಶಸ್ಸಿಗೆ ಗಮನಾರ್ಹವಾಗಿ ಕೊಡುಗೆ ನೀಡಿತು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ತಮಿಳುನಾಡಿನ ʻಪ್ರೊ. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ ಕೇಂದ್ರʼಕ್ಕೆ ಭೇಟಿ ನೀಡಿದ್ದನ್ನು ಶ್ರೀ ಮೋದಿ ಉಲ್ಲೇಖಿಸಿದರು. 2017ರಲ್ಲಿ ಪ್ರೊ. ಸ್ವಾಮಿನಾಥನ್ ಅವರ 'ಹಸಿವು ಮುಕ್ತ ವಿಶ್ವಕ್ಕಾಗಿ ಅನ್ವೇಷಣೆʼ ಪುಸ್ತಕವನ್ನು ಬಿಡುಗಡೆ ಮಾಡುವ ಅವಕಾಶ ಸಿಕ್ಕಿತ್ತು. 2018ರಲ್ಲಿ, ವಾರಣಾಸಿಯಲ್ಲಿ ʻಅಂತರರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆʼಯ ಪ್ರಾದೇಶಿಕ ಕೇಂದ್ರವನ್ನು ಉದ್ಘಾಟಿಸುವಾಗ, ಪ್ರೊ.ಸ್ವಾಮಿನಾಥನ್ ಅವರು ನೀಡಿದ ಮಾರ್ಗದರ್ಶನ ಅಮೂಲ್ಯವಾದುದು ಎಂದು ಶ್ರೀ ಮೋದಿ ಹೇಳಿದರು. ಪ್ರೊ. ಸ್ವಾಮಿನಾಥನ್ ಅವರೊಂದಿಗಿನ ಪ್ರತಿಯೊಂದು ಸಂವಾದವೂ ಕಲಿಕೆಯ ಅನುಭವವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರೊ. ಸ್ವಾಮಿನಾಥನ್ ಒಮ್ಮೆ ಹೇಳಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, "ವಿಜ್ಞಾನವು ಕೇವಲ ಆವಿಷ್ಕಾರವಲ್ಲ, ಬದಲಿಗೆ ಅದೊಂದು ವಿತರಣೆ" ಎಂದು ಹೇಳಿದರು ಮತ್ತು ಸ್ವಾಮಿನಾಥನ್ ಅವರು ತಮ್ಮ ಕೆಲಸದ ಮೂಲಕ ಇದನ್ನು ಸಾಬೀತುಪಡಿಸಿದ್ದಾರೆ ಎಂದರು. ಪ್ರೊ. ಸ್ವಾಮಿನಾಥನ್ ಅವರು ಸಂಶೋಧನೆ ನಡೆಸಿದ್ದಲ್ಲದೆ, ಕೃಷಿ ಪದ್ಧತಿಗಳನ್ನು ಪರಿವರ್ತಿಸಲು ರೈತರಿಗೆ ಸ್ಫೂರ್ತಿ ನೀಡಿದರು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇಂದಿಗೂ ಪ್ರೊ. ಸ್ವಾಮಿನಾಥನ್ ಅವರ ದೃಷ್ಟಿಕೋನ ಮತ್ತು ವಿಚಾರಗಳು ಭಾರತದ ಕೃಷಿ ಕ್ಷೇತ್ರದಾದ್ಯಂತ ಗೋಚರಿಸುತ್ತವೆ ಎಂದು ಅವರು ಹೇಳಿದರು. ಅವರನ್ನು ಭಾರತ ಮಾತೆಯ ನಿಜವಾದ ರತ್ನ ಎಂದು ಬಣ್ಣಿಸಿದ ಶ್ರೀ ಮೋದಿ, ಪ್ರೊ. ಸ್ವಾಮಿನಾಥನ್ ಅವರಿಗೆ ತಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ʻಭಾರತ ರತ್ನʼ ನೀಡಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.

"ಡಾ. ಎಂ.ಎಸ್. ಸ್ವಾಮಿನಾಥನ್ ಅವರು ಆಹಾರ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಅಭಿಯಾನದ ನೇತೃತ್ವ ವಹಿಸಿದ್ದರು" ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಪ್ರೊ. ಸ್ವಾಮಿನಾಥನ್ ಅವರ ಗುರುತು ಹಸಿರು ಕ್ರಾಂತಿಯನ್ನು ಮೀರಿ ವಿಸ್ತರಿಸಿದೆ ಎಂದು ಹೇಳಿದರು. ಸ್ವಾಮಿನಾಥನ್ ಅವರು ಹೆಚ್ಚುತ್ತಿರುವ ರಾಸಾಯನಿಕ ಬಳಕೆ ಮತ್ತು ಒಂದೇ ಬಗೆಯ ಕೃಷಿಯ ಅಪಾಯಗಳ ಬಗ್ಗೆ ರೈತರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಸ್ವಾಮಿನಾಥನ್ ಅವರು ಧಾನ್ಯ ಉತ್ಪಾದನೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದರು, ಅವರು ಪರಿಸರ ಮತ್ತು ಭೂಮಿ ತಾಯಿಯ ಬಗ್ಗೆ ಸಮಾನವಾಗಿ ಕಾಳಜಿ ವಹಿಸಿದ್ದಾರೆ ಎಂದು ಶ್ರೀ ಮೋದಿ ಗಮನ ಸೆಳೆದರು. ಎರಡೂ ಉದ್ದೇಶಗಳನ್ನು ಸಮತೋಲನಗೊಳಿಸಲು ಮತ್ತು ಉದಯೋನ್ಮುಖ ಸವಾಲುಗಳನ್ನು ಎದುರಿಸಲು, ಪ್ರೊಫೆಸರ್ ಸ್ವಾಮಿನಾಥನ್ ಅವರು ನಿತ್ಯಹರಿದ್ವರ್ಣ ಕ್ರಾಂತಿಯ ಪರಿಕಲ್ಪನೆಯನ್ನು ಪರಿಚಯಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು. ಪ್ರೊಫೆಸರ್ ಸ್ವಾಮಿನಾಥನ್ ಅವರು ಗ್ರಾಮೀಣ ಸಮುದಾಯಗಳು ಮತ್ತು ರೈತರನ್ನು ಸಬಲೀಕರಣಗೊಳಿಸಲು ʻಜೈವಿಕ ಗ್ರಾಮʼಗಳ ಕಲ್ಪನೆಯನ್ನು ಪ್ರಸ್ತಾಪಿಸಿದರು ಎಂದು ಮೋದಿ ಹೇಳಿದರು. ಪ್ರೊ.ಸ್ವಾಮಿನಾಥನ್ ಅವರು ʻಸಮುದಾಯ ಬೀಜ ಬ್ಯಾಂಕುʼಗಳು ಮತ್ತು ʻಅವಕಾಶ ಬೆಳೆʼಗಳಂತಹ ನವೀನ ಆಲೋಚನೆಗಳನ್ನು ಉತ್ತೇಜಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು.

 

"ಹವಾಮಾನ ಬದಲಾವಣೆ ಮತ್ತು ಪೌಷ್ಠಿಕಾಂಶದ ಸವಾಲುಗಳಿಗೆ ಪರಿಹಾರಗಳು ಮರೆತುಹೋದ ಬೆಳೆಗಳಲ್ಲಿವೆ ಎಂದು ಡಾ. ಎಂ.ಎಸ್. ಸ್ವಾಮಿನಾಥನ್ ನಂಬಿದ್ದರು" ಎಂದು ಪ್ರಧಾನಮಂತ್ರಿ ಹೇಳಿದರು. ಪ್ರೊ. ಸ್ವಾಮಿನಾಥನ್ ಅವರು ಸಿರಿಧಾನ್ಯಗಳು ಅಥವಾ ʻಶ್ರೀಅನ್ನʼ ಕುರಿತಾಗಿ ಕೆಲಸ ಮಾಡುತ್ತಿದ್ದರು, ಆ ಸಮಯದಲ್ಲಿ ಅವುಗಳನ್ನು ಹೆಚ್ಚಾಗಿ ಕಡೆಗಣಿಸಲಾಯಿತು ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಹಲವು ವರ್ಷಗಳ ಹಿಂದೆ ಪ್ರೊ.  ಸ್ವಾಮಿನಾಥನ್ ಅವರು ಮ್ಯಾಂಗ್ರೋವ್ ಸಸ್ಯಗಳ ಆನುವಂಶಿಕ ಗುಣಗಳನ್ನು ಅಕ್ಕಿಗೆ ವರ್ಗಾಯಿಸಲು ಸಲಹೆ ನೀಡಿದ್ದರು, ಇದು ಬೆಳೆಗಳನ್ನು ಹೆಚ್ಚು ಹವಾಮಾನ-ಸ್ಥಿತಿಸ್ಥಾಪಕವಾಗಿಸಲು ಸಹಾಯ ಮಾಡುತ್ತದೆ ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಇಂದು, ಹವಾಮಾನ ಸಮತೋಲನವು ಜಾಗತಿಕ ಆದ್ಯತೆಯಾಗುತ್ತಿರುವ ಸಮಯದಲ್ಲಿ, ಪ್ರೊ. ಸ್ವಾಮಿನಾಥನ್ ಅವರ ಚಿಂತನೆ ನಿಜವಾಗಿಯೂ ಎಷ್ಟು ದೂರದೃಷ್ಟಿಯಿಂದ ಕೂಡಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಜೀವವೈವಿಧ್ಯತೆಯು ಇಂದು ಜಾಗತಿಕ ಚರ್ಚೆಯ ವಿಷಯವಾಗಿದೆ ಮತ್ತು ಅದನ್ನು ಸಂರಕ್ಷಿಸಲು ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಡಾ. ಎಂ.ಎಸ್. ಸ್ವಾಮಿನಾಥನ್ ಅವರು ʻಜೈವಿಕ ಸಂತೋಷʼದ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಇದ್ದರು ಎಂದು ಸ್ಮರಿಸಿದರು. ಇಂದು ನೆರೆದಿರುವ ಸಭೆ ಅದೇ ಪರಿಕಲ್ಪನೆಯ ಆಚರಣೆಯಾಗಿದೆ ಎಂದು ಅವರು ಹೇಳಿದರು. ಜೀವವೈವಿಧ್ಯತೆಯ ಶಕ್ತಿಯು ಸ್ಥಳೀಯ ಸಮುದಾಯಗಳ ಜೀವನದಲ್ಲಿ ಪರಿವರ್ತನಾತ್ಮಕ ಬದಲಾವಣೆಯನ್ನು ತರಬಲ್ಲದು ಎಂದು ನಂಬಿದ್ದ ಡಾ. ಸ್ವಾಮಿನಾಥನ್ ಅವರನ್ನು ಉಲ್ಲೇಖಿಸಿದ ಶ್ರೀ ಮೋದಿ, ಸ್ಥಳೀಯ ಸಂಪನ್ಮೂಲಗಳ ಬಳಕೆಯ ಮೂಲಕ ಜನರಿಗೆ ಹೊಸ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಒತ್ತಿ ಹೇಳಿದರು. ಡಾ. ಸ್ವಾಮಿನಾಥನ್ ಅವರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ, ವಿಚಾರಗಳನ್ನು ತಳಮಟ್ಟದಲ್ಲಿ ಕ್ರಿಯೆಯಾಗಿ ಪರಿವರ್ತಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದರು ಎಂದು ಮೋದಿ ಗಮನ ಸೆಳೆದರು. ಡಾ. ಸ್ವಾಮಿನಾಥನ್ ಅವರು ತಮ್ಮ ಸಂಶೋಧನಾ ಪ್ರತಿಷ್ಠಾನದ ಮೂಲಕ ಹೊಸ ಆವಿಷ್ಕಾರಗಳ ಪ್ರಯೋಜನಗಳು ರೈತರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಡಾ. ಸ್ವಾಮಿನಾಥನ್ ಅವರ ಪ್ರಯತ್ನಗಳಿಂದ ಸಣ್ಣ ರೈತರು, ಮೀನುಗಾರರು ಮತ್ತು ಬುಡಕಟ್ಟು ಸಮುದಾಯಗಳು ಹೆಚ್ಚಿನ ಪ್ರಯೋಜನ ಪಡೆದಿವೆ ಎಂದು ಅವರು ಹೇಳಿದರು.

ಪ್ರೊಫೆಸರ್ ಸ್ವಾಮಿನಾಥನ್ ಅವರ ಪರಂಪರೆಯನ್ನು ಗೌರವಿಸಲು ʻಆಹಾರ ಮತ್ತು ಶಾಂತಿಗಾಗಿ ಎಂ.ಎಸ್.ಸ್ವಾಮಿನಾಥನ್ ಪ್ರಶಸ್ತಿʼಯನ್ನು ಪ್ರಾರಂಭಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಈ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಆಹಾರ ಭದ್ರತೆ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ ಅಭಿವೃದ್ಧಿಶೀಲ ರಾಷ್ಟ್ರಗಳ ವ್ಯಕ್ತಿಗಳಿಗೆ ನೀಡಲಾಗುವುದು ಎಂದು ಹೇಳಿದರು. ಆಹಾರ ಮತ್ತು ಶಾಂತಿಯ ನಡುವಿನ ಸಂಬಂಧವು ತಾತ್ವಿಕ ಮಾತ್ರವಲ್ಲದೆ ಆಳವಾದ ಪ್ರಾಯೋಗಿಕವಾಗಿದೆ ಎಂದು ಅವರು ಒತ್ತಿ ಹೇಳಿದರು. ಉಪನಿಷತ್ತುಗಳ ಒಂದು ಶ್ಲೋಕವನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು ಆಹಾರದ ಪಾವಿತ್ರ್ಯವನ್ನು ಒತ್ತಿಹೇಳಿದರು. ಆಹಾರವೇ ಜೀವನವಾಗಿದೆ ಮತ್ತು ಅದನ್ನು ಎಂದಿಗೂ ಅಗೌರವಗೊಳಿಸಬಾರದು ಅಥವಾ ನಿರ್ಲಕ್ಷಿಸಬಾರದು ಎಂದು ಪ್ರತಿಪಾದಿಸಿದರು. ಆಹಾರದ ಯಾವುದೇ ಬಿಕ್ಕಟ್ಟು ತಪ್ಪದೆ ಜೀವನದ ಬಿಕ್ಕಟ್ಟಿಗೂ ಕಾರಣವಾಗುತ್ತದೆ ಮತ್ತು ಲಕ್ಷಾಂತರ ಜನರ ಜೀವಕ್ಕೆ ಅಪಾಯವಾದಾಗ, ಜಾಗತಿಕ ಅಶಾಂತಿ ಅನಿವಾರ್ಯವಾಗುತ್ತದೆ ಎಂದು ಶ್ರೀ ಮೋದಿ ಎಚ್ಚರಿಸಿದರು. ಇಂದಿನ ಜಗತ್ತಿನಲ್ಲಿ ಆಹಾರ ಮತ್ತು ಶಾಂತಿಗಾಗಿ ಎಂ.ಎಸ್.ಸ್ವಾಮಿನಾಥನ್ ಪ್ರಶಸ್ತಿಯ ಮಹತ್ವವನ್ನು ಒತ್ತಿ ಹೇಳಿದರು. ಪ್ರಶಸ್ತಿ ಪಡೆದ ನೈಜೀರಿಯಾದ ಪ್ರೊಫೆಸರ್ ಅಡೆನ್ಲೆ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಅವರನ್ನು ಪ್ರತಿಭಾವಂತ ವಿಜ್ಞಾನಿ ಎಂದು ಬಣ್ಣಿಸಿದರು.

 

"ಡಾ. ಎಂ.ಎಸ್. ಸ್ವಾಮಿನಾಥನ್ ಅವರು ಎಲ್ಲೇ ಇದ್ದರೂ ಭಾರತೀಯ ಕೃಷಿಯ ಪ್ರಸ್ತುತ ಎತ್ತರವನ್ನು ನೋಡಿ ಖಂಡಿತವಾಗಿಯೂ ಹೆಮ್ಮೆ ಪಡುತ್ತಾರೆ" ಎಂದು ಶ್ರೀ ಮೋದಿ ಹೇಳಿದರು. ಹಾಲು, ಬೇಳೆಕಾಳುಗಳು ಮತ್ತು ಸೆಣಬಿನ ಉತ್ಪಾದನೆಯಲ್ಲಿ ಭಾರತ ಇಂದು ಮೊದಲ ಸ್ಥಾನದಲ್ಲಿದೆ ಎಂದು ಒತ್ತಿ ಹೇಳಿದರು. ಅಕ್ಕಿ, ಗೋಧಿ, ಹತ್ತಿ, ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ; ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಭಾರತವು ಅತ್ಯಧಿಕ ಆಹಾರ ಧಾನ್ಯ ಉತ್ಪಾದನೆಯನ್ನು ಸಾಧಿಸಿದೆ ಎಂದು ಪ್ರಧಾನಮಂತ್ರಿ ಮಾಹಿತಿ ಹಂಚಿಕೊಂಡರು. ಸೋಯಾಬೀನ್, ಸಾಸಿವೆ ಮತ್ತು ನೆಲಗಡಲೆ ಉತ್ಪಾದನೆ ದಾಖಲೆಯ ಮಟ್ಟವನ್ನು ತಲುಪುವುದರೊಂದಿಗೆ ಭಾರತವು ಎಣ್ಣೆಕಾಳುಗಳಲ್ಲಿಯೂ ದಾಖಲೆಗಳನ್ನು ನಿರ್ಮಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

"ರೈತರ ಕಲ್ಯಾಣವು ರಾಷ್ಟ್ರದ ಅತ್ಯುನ್ನತ ಆದ್ಯತೆಯಾಗಿದೆ," ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು ಭಾರತವು ತನ್ನ ರೈತರು, ಹೈನುಗಾರರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದರು. ರೈತರ ಆದಾಯವನ್ನು ಹೆಚ್ಚಿಸಲು, ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಲು ಸರ್ಕಾರದ ನಿರಂತರ ಪ್ರಯತ್ನಗಳನ್ನು ಅವರು ಪುನರುಚ್ಚರಿಸಿದರು.

"ಸರ್ಕಾರವು ಸದಾ  ರೈತರ ಶಕ್ತಿಯನ್ನು ರಾಷ್ಟ್ರೀಯ ಪ್ರಗತಿಯ ಅಡಿಪಾಯವೆಂದು ಪರಿಗಣಿಸಿದೆ" ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿ, ಇತ್ತೀಚಿನ ವರ್ಷಗಳಲ್ಲಿ ರೂಪಿಸಲಾದ ನೀತಿಗಳು ಕೇವಲ ರೈತರ ಸಹಾಯಕ್ಕಷ್ಟೇ ಸೀಮಿತವಾಗದೆ, ರೈತರಲ್ಲಿ ವಿಶ್ವಾಸವನ್ನು ತುಂಬುವುದಕ್ಕೆ ನೆರವಾಗಿದೆ ಎಂದು ಹೇಳಿದರು. ʻಪಿಎಂ-ಕಿಸಾನ್ ಸಮ್ಮಾನ್ ನಿಧಿʼಯು ನೇರ ಆರ್ಥಿಕ ಬೆಂಬಲದ ಮೂಲಕ ಸಣ್ಣ ರೈತರನ್ನು ಸಬಲೀಕರಣಗೊಳಿಸಿದೆ, ಜೊತೆಗೆ ʻಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆʼಯು ರೈತರಿಗೆ ಕೃಷಿ ಬೆಳೆ ಹಾನಿ ವಿರುದ್ಧ ರಕ್ಷಣೆ ಒದಗಿಸಿದೆ. ʻಪಿಎಂ ಕೃಷಿ ಸಿಂಚಾಯಿ ಯೋಜನೆʼ ಮೂಲಕ ನೀರಾವರಿ ಸವಾಲುಗಳನ್ನು ಪರಿಹರಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. 10,000 ʻರೈತ ಉತ್ಪಾದಕ ಸಂಸ್ಥೆಗಳʼ(ಎಫ್ಪಿಒ) ರಚನೆಯು ಸಣ್ಣ ರೈತರ ಸಾಮೂಹಿಕ ಶಕ್ತಿಯನ್ನು ಬಲಪಡಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಸಹಕಾರಿ ಸಂಸ್ಥೆಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡಿರುವುದು ಗ್ರಾಮೀಣ ಆರ್ಥಿಕತೆಗೆ ಹೊಸ ವೇಗವನ್ನು ನೀಡಿದೆ ಎಂದು ಅವರು ಹೇಳಿದರು. ʻಇ-ನ್ಯಾಮ್ʼ ವೇದಿಕೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಸುಲಭವಾಗಿದೆ. ಇದೇ ವೇಳೆ, ʻಪಿಎಂ ಕಿಸಾನ್ ಸಂಪದ ಯೋಜನೆʼಯು ಹೊಸ ಆಹಾರ ಸಂಸ್ಕರಣಾ ಘಟಕಗಳು ಮತ್ತು ಶೇಖರಣಾ ಮೂಲಸೌಕರ್ಯಗಳ ಅಭಿವೃದ್ಧಿಗೆ ವೇಗ ನೀಡಿದೆ ಎಂದರು. ಇತ್ತೀಚೆಗೆ ಅನುಮೋದಿಸಲಾದ ʻಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆʼಯು ಕೃಷಿಯಲ್ಲಿ ಹಿಂದುಳಿದಿರುವ 100 ಜಿಲ್ಲೆಗಳನ್ನು ಮೇಲೆತ್ತುವ ಗುರಿಯನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. "ಈ ಜಿಲ್ಲೆಗಳಲ್ಲಿ ಸೌಲಭ್ಯಗಳು ಮತ್ತು ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ, ಸರ್ಕಾರವು ಕೃಷಿಯಲ್ಲಿ ಹೊಸ ವಿಶ್ವಾಸವನ್ನು ತುಂಬುತ್ತಿದೆ," ಎಂದು ಪ್ರಧಾನಮಂತ್ರಿ ಹೇಳಿದರು.

 

"21ನೇ ಶತಮಾನದ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ಸಮಾಜದ ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ವೃತ್ತಿಯ ಕೊಡುಗೆಯ ಮೂಲಕ ಈ ಗುರಿಯನ್ನು ಸಾಧಿಸಲಾಗುವುದು," ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಸ್ಫೂರ್ತಿಯೊಂದಿಗೆ ಭಾರತದ ವಿಜ್ಞಾನಿಗಳಿಗೆ ಈಗ ಇತಿಹಾಸ ಸೃಷ್ಟಿಸಲು ಮತ್ತೊಂದು ಅವಕಾಶ ಸಿಕ್ಕಿದೆ ಎಂದು ಪ್ರಧಾನಮಂತ್ರಿಯವರು ಕರೆ ನೀಡಿದರು. ಹಿಂದಿನ ತಲೆಮಾರಿನ ವಿಜ್ಞಾನಿಗಳು ಆಹಾರ ಭದ್ರತೆಯನ್ನು ಖಾತ್ರಿಪಡಿಸಿದ್ದಾರೆ ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ಪ್ರಸ್ತುತ ವಿಜ್ಞಾನಿಗಳ ಗಮನವು ಪೌಷ್ಠಿಕಾಂಶದ ಭದ್ರತೆಯತ್ತ ಸಾಗಬೇಕು ಎಂದು ಒತ್ತಿ ಹೇಳಿದರು. ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಜೈವಿಕ ಬಲವರ್ಧಿತ ಮತ್ತು ಪೌಷ್ಠಿಕಾಂಶ ಭರಿತ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ಕರೆ ನೀಡಿದ ಶ್ರೀ ಮೋದಿ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಬೇಕೆಂದು ಪ್ರತಿಪಾದಿಸಿದರು. ನೈಸರ್ಗಿಕ ಕೃಷಿಯನ್ನು ಹೆಚ್ಚಿನ ಉತ್ತೇಜಿಸುವಂತೆ ಅವರು ಒತ್ತಾಯಿಸಿದರು, ಈ ದಿಕ್ಕಿನಲ್ಲಿ ಹೆಚ್ಚಿನ ತುರ್ತು ಮತ್ತು ಸಕ್ರಿಯ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು.

ಹವಾಮಾನ ಬದಲಾವಣೆಯಿಂದ ಎದುರಾಗುವ ಸವಾಲುಗಳ ಬಗ್ಗೆ ಎಲ್ಲರಿಗೂ ಅರಿವಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಹೆಚ್ಚಿನ ಸಂಖ್ಯೆಯ ಹವಾಮಾನ-ಸ್ಥಿತಿಸ್ಥಾಪಕ ಬೆಳೆ ಪ್ರಭೇದಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಬರ ಸಹಿಷ್ಣು, ಶಾಖ ನಿರೋಧಕ ಮತ್ತು ಪ್ರವಾಹ-ಹೊಂದಾಣಿಕೆಯ ಬೆಳೆಗಳತ್ತ ಗಮನ ಹರಿಸುವ ಮಹತ್ವವನ್ನು ಅವರು ಎತ್ತಿ ತೋರಿದರು. ಬೆಳೆ ಬದಲಾವಣೆ (ಒಂದೇ ಬೆಳೆಯನ್ನು ಬೆಳೆಯದಿರುವುದು) ಮತ್ತು ಮಣ್ಣಿನ ಸೂಕ್ತತೆಯ ಬಗ್ಗೆ ಹೆಚ್ಚಿನ ಸಂಶೋಧನೆಗೆ ಶ್ರೀ ಮೋದಿ ಅವರು ಕರೆ ನೀಡಿದರು. ಕೈಗೆಟುಕುವ ಮಣ್ಣಿನ ಪರೀಕ್ಷಾ ಸಾಧನಗಳು ಮತ್ತು ಪರಿಣಾಮಕಾರಿ ಪೋಷಕಾಂಶ ನಿರ್ವಹಣಾ ತಂತ್ರಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಸೌರಶಕ್ತಿ ಚಾಲಿತ ಸೂಕ್ಷ್ಮ ನೀರಾವರಿಯತ್ತ ಪ್ರಯತ್ನಗಳನ್ನು ತೀವ್ರಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹನಿ ನೀರಾವರಿ ವ್ಯವಸ್ಥೆಗಳು ಮತ್ತು ನಿಖರವಾಗಿ ಗಿಡಕ್ಕಷ್ಟೇ ನೀರು ತಲುಪಿಸುವ ನೀರಾವರಿಯನ್ನು ಹೆಚ್ಚು ವಿಸ್ತರಿಸಬೇಕು ಮತ್ತು ಪರಿಣಾಮಕಾರಿಯಾಗಿಸಬೇಕು ಎಂದು ಕರೆ ನೀಡಿದರು. ಉಪಗ್ರಹ ದತ್ತಾಂಶ, ಕೃತಕ ಬುದ್ಧಿಮತ್ತೆ ಮತ್ತು ʻಮಷಿನ್ ಲರ್ನಿಂಗ್ʼ ಅನ್ನು ಕೃಷಿ ವ್ಯವಸ್ಥೆಗಳಲ್ಲಿ ಸಂಯೋಜಿಸುವ ಪ್ರಶ್ನೆಯನ್ನು ಶ್ರೀ ಮೋದಿ ಅವರು ಮುಂದಿಟ್ಟರು. ಬೆಳೆ ಇಳುವರಿಯ ಬಗ್ಗೆ ಮುನ್ಸೂಚನೆ ನೀಡುವ, ಕೀಟಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ಬಿತ್ತನೆ ಪದ್ಧತಿಗಳಿಗೆ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದೇ ಮತ್ತು ಅಂತಹ ನೈಜ-ಸಮಯದ ನಿರ್ಧಾರ ಬೆಂಬಲ ವ್ಯವಸ್ಥೆಯನ್ನು ಪ್ರತಿ ಜಿಲ್ಲೆಯಲ್ಲೂ ಲಭ್ಯವಾಗುವಂತೆ ಮಾಡಬಹುದೇ ಎಂದು ಪ್ರಶ್ನಿಸಿದರು. ಕೃಷಿ-ತಂತ್ರಜ್ಞಾನದ ನವೋದ್ಯಮಗಳಿಗೆ ನಿರಂತರವಾಗಿ ಮಾರ್ಗದರ್ಶನ ನೀಡುವಂತೆ ಪ್ರಧಾನಮಂತ್ರಿ ತಜ್ಞರನ್ನು ಒತ್ತಾಯಿಸಿದರು. ಕೃಷಿ ಸವಾಲುಗಳನ್ನು ಪರಿಹರಿಸಲು ಹೆಚ್ಚಿನ ಸಂಖ್ಯೆಯಲ್ಲಿ ನಾವಿನ್ಯಕಾರ ಯುವಕರು ಕೆಲಸ ಮಾಡುತ್ತಿದ್ದಾರೆ ಮತ್ತು ಅನುಭವಿ ವೃತ್ತಿಪರರ ಮಾರ್ಗದರ್ಶನದೊಂದಿಗೆ, ಈ ಯುವಕರು ಅಭಿವೃದ್ಧಿಪಡಿಸಿದ ಉತ್ಪನ್ನಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ ಎಂದು ಅವರು ಹೇಳಿದರು.

 

"ಭಾರತದ ಕೃಷಿ ಸಮುದಾಯವು ಸಾಂಪ್ರದಾಯಿಕ ಜ್ಞಾನದ ಶ್ರೀಮಂತ ಭಂಡಾರವನ್ನು ಹೊಂದಿವೆ. ಸಾಂಪ್ರದಾಯಿಕ ಭಾರತೀಯ ಕೃಷಿ ಪದ್ಧತಿಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುವ ಮೂಲಕ, ಸಮಗ್ರ ಜ್ಞಾನದ ನೆಲೆಯನ್ನು ಸೃಷ್ಟಿಸಬಹುದು", ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಬೆಳೆ ವೈವಿಧ್ಯೀಕರಣವು ರಾಷ್ಟ್ರೀಯ ಆದ್ಯತೆಯಾಗಿದೆ ಎಂದು ಒತ್ತಿಹೇಳಿದ ಶ್ರೀ ಮೋದಿ, ಅದರ ಪ್ರಾಮುಖ್ಯತೆಯ ಬಗ್ಗೆ ರೈತರಿಗೆ ತಿಳಿಸುವ ಅಗತ್ಯವನ್ನೂ ಬಲವಾಗಿ ಪ್ರತಿಪಾದಿಸಿದರು. ಬೆಳೆ ವೈವಿಧ್ಯೀಕರಣದ ಪ್ರಯೋಜನಗಳ ಬಗ್ಗೆ ಮತ್ತು ಅದನ್ನು ಅಳವಡಿಸಿಕೊಳ್ಳದೆ ಇರುವುದಿರಂದ ಆಗುವ ಪರಿಣಾಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು. ಈ ಪ್ರಯತ್ನದಲ್ಲಿ ತಜ್ಞರು ಅತ್ಯಂತ ಪರಿಣಾಮಕಾರಿ ಪಾತ್ರ ವಹಿಸಬಹುದು ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು.

2024ರ ಆಗಸ್ಟ್ 11ರಂದು ʻಪೂಸಾʼ ಕ್ಯಾಂಪಸ್ಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಶ್ರೀ ಮೋದಿ, ಅಲ್ಲಿ ಕೃಷಿ ತಂತ್ರಜ್ಞಾನವನ್ನು ಪ್ರಯೋಗಾಲಯದಿಂದ ಹೊಲಕ್ಕೆ ಕೊಂಡೊಯ್ಯುವ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಒತ್ತಾಯಿಸಿದ್ದನ್ನು ಸ್ಮರಿಸಿದರು. 2025ರ ಮೇ ಮತ್ತು ಜೂನ್ ತಿಂಗಳಲ್ಲಿ "ವಿಕಸಿತ ಕೃಷಿ ಸಂಕಲ್ಪ ಅಭಿಯಾನ"ವನ್ನು ಪ್ರಾರಂಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 2,200ಕ್ಕೂ ಹೆಚ್ಚು ವಿಜ್ಞಾನಿಗಳ ತಂಡಗಳು ಭಾಗವಹಿಸಿದ್ದವು. 60,000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಈ ಪ್ರಯತ್ನಗಳು ವಿಜ್ಞಾನಿಗಳನ್ನು ಸುಮಾರು 1.25 ಕೋಟಿ ರೈತರೊಂದಿಗೆ ನೇರವಾಗಿ ಸಂಪರ್ಕಿಸಿವೆ ಎಂದು ಹೇಳಿದರು. ಈ ಉಪಕ್ರಮವು ರೈತರಿಗೆ ವೈಜ್ಞಾನಿಕ ವ್ಯಾಪ್ತಿಯನ್ನು ವಿಸ್ತರಿಸುವ ಅತ್ಯಂತ ಶ್ಲಾಘನೀಯ ಪ್ರಯತ್ನವಾಗಿದೆ ಎಂದು ಅವರು ಶ್ಲಾಘಿಸಿದರು.

 

"ಡಾ. ಎಂ.ಎಸ್. ಸ್ವಾಮಿನಾಥನ್ ಅವರು ಕೃಷಿಯು ಕೇವಲ ಬೆಳೆಗಳಿಗೆ ಸಂಬಂಧಿಸಿದ್ದಲ್ಲ, ಅದು ಜೀವನಕ್ಕೆ ಸಂಬಂಧಿಸಿದೆ ಎಂದು ನಮಗೆ ಕಲಿಸಿದ್ದಾರೆ," ಎಂದು ಶ್ರೀ ಮೋದಿ ಹೇಳಿದರು. ಕೃಷಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯ ಘನತೆ ಕಾಪಾಡುವುದು, ಪ್ರತಿ ಸಮುದಾಯದ ಸಮೃದ್ಧಿ ಕಾಯ್ದುಕೊಳ್ಳುವುದು ಮತ್ತು ಪ್ರಕೃತಿಯ ರಕ್ಷಣೆಯು ಸರ್ಕಾರದ ಕೃಷಿ ನೀತಿಯ ಶಕ್ತಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ವಿಜ್ಞಾನ ಮತ್ತು ಸಮಾಜವನ್ನು ಸಾಮಾನ್ಯ ಎಳೆಯ ಮೂಲಕ ಸಂಪರ್ಕಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಸಣ್ಣ ರೈತರ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಕೃಷಿಯಲ್ಲಿ ತೊಡಗಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ರಾಷ್ಟ್ರವು ಇದೇ ದೃಷ್ಟಿಕೋನದೊಂದಿಗೆ ಮುಂದುವರಿಯಬೇಕು ಎಂದು ಪುನರುಚ್ಚರಿಸಿದ  ಪ್ರಧಾನಮಂತ್ರಿಯವರು ಡಾ. ಸ್ವಾಮಿನಾಥನ್ ಅವರ ಸ್ಫೂರ್ತಿ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ ಎಂದು ಹೇಳುವ ಮೂಲಕ ತಮ್ಮ ಮಾತು ಮುಗಿಸಿದರು. 

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ನೀತಿ ಆಯೋಗದ ಸದಸ್ಯ ರಮೇಶ್ ಚಂದ್, ಡಾ. ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಸೌಮ್ಯಾ ಸ್ವಾಮಿನಾಥನ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ʻಭಾರತೀಯ ಕೃಷಿ ಸಂಶೋಧನಾ ಸಂಸ್ಥೆʼಯಲ್ಲಿ(ಐ ಸಿ ಎ ಆರ್ ಪೂಸಾ) ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು.

"ನಿತ್ಯಹರಿದ್ವರ್ಣ ಕ್ರಾಂತಿ, ಜೈವಿಕ ಸಂತೋಷಕ್ಕೆ ಹಾದಿ" ಎಂಬ ಸಮ್ಮೇಳನದ ವಿಷಯವು ಸರ್ವರಿಗೂ ಆಹಾರವನ್ನು ಖಾತ್ರಿಪಡಿಸುವಲ್ಲಿ ಪ್ರೊ. ಸ್ವಾಮಿನಾಥನ್ ಅವರ ಜೀವಮಾನದ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಈ ಸಮ್ಮೇಳನವು ವಿಜ್ಞಾನಿಗಳು, ನೀತಿ ನಿರೂಪಕರು, ಅಭಿವೃದ್ಧಿ ವೃತ್ತಿಪರರು ಮತ್ತು ಇತರ ಮಧ್ಯಸ್ಥಗಾರರಿಗೆ 'ನಿತ್ಯಹರಿದ್ವರ್ಣ ಕ್ರಾಂತಿ'ಯ ತತ್ವಗಳನ್ನು ಮುಂದುವರಿಸುವ ಬಗ್ಗೆ ಚರ್ಚಿಸಲು ಮತ್ತು ಸಮಾಲೋಚಿಸಲು ಅವಕಾಶ ಒದಗಿಸುತ್ತದೆ. ಸಮ್ಮೇಳನದ ಪ್ರಮುಖ ವಿಷಯಗಳಲ್ಲಿ - ಜೀವವೈವಿಧ್ಯತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ; ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಗಾಗಿ ಸುಸ್ಥಿರ ಕೃಷಿ; ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಮೂಲಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು; ಸುಸ್ಥಿರ ಮತ್ತು ಸಮಾನ ಜೀವನೋಪಾಯಕ್ಕಾಗಿ ಸೂಕ್ತ ತಂತ್ರಜ್ಞಾನಗಳನ್ನು ಬಳಸುವುದು; ಮತ್ತು ಅಭಿವೃದ್ಧಿಯ ಚರ್ಚೆಗಳಲ್ಲಿ ಯುವಕರು, ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ತೊಡಗಿಸಿಕೊಳ್ಳುವುದು ಮುಂತಾದವು ಸೇರಿವೆ.

 

ಡಾ. ಎಂ.ಎಸ್.ಸ್ವಾಮಿನಾಥನ್ ಅವರ ಪರಂಪರೆಯನ್ನು ಗೌರವಿಸಲು, ʻಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ (ಎಂಎಸ್ಎಸ್ಆರ್ಎಫ್) ಮತ್ತು ʻದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ʼ(ಟಿಡಬ್ಲ್ಯೂಎಎಸ್) ಜಂಟಿಯಾಗಿ ʻಆಹಾರ ಮತ್ತು ಶಾಂತಿಗಾಗಿ ಎಂ.ಎಸ್.ಸ್ವಾಮಿನಾಥನ್ ಪ್ರಶಸ್ತಿʼಯನ್ನು ಪ್ರಾರಂಭಿಸಿವೆ. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಮೊದಲ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವೈಜ್ಞಾನಿಕ ಸಂಶೋಧನೆ, ನೀತಿ ಅಭಿವೃದ್ಧಿ, ತಳಮಟ್ಟದ ತೊಡಗಿಸಿಕೊಳ್ಳುವಿಕೆ ಅಥವಾ ಸ್ಥಳೀಯ ಸಾಮರ್ಥ್ಯ ವರ್ಧನೆಯ ಮೂಲಕ ಆಹಾರ ಭದ್ರತೆಯನ್ನು ಸುಧಾರಿಸಲು ಹಾಗೂ ದುರ್ಬಲ ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ ಹವಾಮಾನ ನ್ಯಾಯ, ಸಮಾನತೆ ಮತ್ತು ಶಾಂತಿಯನ್ನು ಒದಗಿಸಲು ಅತ್ಯುತ್ತಮ ಕೊಡುಗೆಗಳನ್ನು ನೀಡಿದ ಅಭಿವೃದ್ಧಿಶೀಲ ರಾಷ್ಟ್ರಗಳ ವ್ಯಕ್ತಿಗಳನ್ನು ಈ ಅಂತಾರಾಷ್ಟ್ರೀಯ ಪ್ರಶಸ್ತಿ ಗುರುತಿಸುತ್ತದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Bank credit recorded robust growth during H2FY26

Media Coverage

Bank credit recorded robust growth during H2FY26
NM on the go

Nm on the go

Always be the first to hear from the PM. Get the App Now!
...
PM greets public representatives across the country on the occasion of Panchayati Raj Day
April 24, 2026

The Prime Minister, Shri Narendra Modi, shared a Sanskrit Subhashitam highlighting the the essence of people’s representative:

“प्रजासुखे सुखं राज्ञः प्रजानां च हिते हितम्।

नात्मप्रियं प्रियं राज्ञः प्रजानां तु प्रियं प्रियम्॥"

The Subhashitam conveys, "The happiness of the people’s representative lies in the happiness of the people; his welfare lies in the welfare of the people. People’s representative has no personal favourites. Whatever is dear to the people is what is dear to him."

Shri Modi also greeted public representatives across the country on the occasion of Panchayati Raj Day,today. "Your dedication to public service and service to the nation is truly inspiring for everyone" Shri Modi remarked.

The Prime Minister wrote on X;

“पंचायती राज दिवस के अवसर पर देशभर के जनप्रतिनिधियों का हार्दिक अभिनंदन! जनसेवा के साथ राष्ट्रसेवा के प्रति आप सभी का समर्पण हर किसी को प्रेरित करने वाला है।

प्रजासुखे सुखं राज्ञः प्रजानां च हिते हितम्।

नात्मप्रियं प्रियं राज्ञः प्रजानां तु प्रियं प्रियम्॥"