ಕೌಲಾಲಂಪುರದಲ್ಲಿರುವ ಭಾರತೀಯ ಅನಿವಾಸಿಗಳ ಆತ್ಮೀಯತೆಗೆ ನಾನು ಕೃತಜ್ಞನಾಗಿದ್ದೇನೆ, ನಮ್ಮ ಅನಿವಾಸಿಗಳು ಭಾರತ ಮತ್ತು ಮಲೇಷ್ಯಾ ನಡುವೆ ಬಲವಾದ ಸೇತುವೆಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದ್ದಾರೆ: ಪ್ರಧಾನಮಂತ್ರಿ
ಮಲೇಷ್ಯಾವು ವಿಶ್ವದ ಎರಡನೇ ಅತಿದೊಡ್ಡ ಭಾರತೀಯ ಮೂಲದ ಸಮುದಾಯವನ್ನು ಹೊಂದಿದೆ, ಭಾರತೀಯ ಮತ್ತು ಮಲೇಷಿಯಾದ ಹೃದಯಗಳನ್ನು ಬೆಸೆಯುವಂತಹ ಅನೇಕ ಸಂಗತಿಗಳಿವೆ: ಪ್ರಧಾನಮಂತ್ರಿ
ನೀವು ಶತಮಾನಗಳಿಂದಲೂ ಸಂಪ್ರದಾಯಗಳನ್ನು ಸಂರಕ್ಷಿಸಿಕೊಂಡು ಬಂದಿರುವ ರೀತಿ ಗಮನಾರ್ಹವಾಗಿದೆ. ಇತ್ತೀಚೆಗೆ, ನನ್ನ ಮಾಸಿಕ ರೇಡಿಯೊ ಸಂಭಾಷಣೆ 'ಮನ್ ಕಿ ಬಾತ್'ನಲ್ಲಿ ನಿಮ್ಮ ಬಗ್ಗೆ ಪ್ರಸ್ತಾಪಿಸಿದ್ದೆ, ಅದರಲ್ಲಿ ಮಲೇಷ್ಯಾದ 500ಕ್ಕೂ ಹೆಚ್ಚು ಶಾಲೆಗಳು ಮಕ್ಕಳಿಗೆ ಭಾರತೀಯ ಭಾಷೆಗಳಲ್ಲಿ ಹೇಗೆ ಶಿಕ್ಷಣ ನೀಡುತ್ತಿವೆ ಎಂಬುದನ್ನು ನಾನು 140 ಕೋಟಿ ಭಾರತೀಯರೊಂದಿಗೆ ಹಂಚಿಕೊಂಡಿದ್ದೇನೆ: ಪ್ರಧಾನಮಂತ್ರಿ
ಮಲೇಷ್ಯಾದಲ್ಲಿರುವ ತಮಿಳು ಸಮುದಾಯದ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ತಮಿಳು ಸಮುದಾಯವು ಇಲ್ಲಿ ಹಲವು ಶತಮಾನಗಳಿಂದ ನೆಲೆಸಿದೆ. ಈ ಇತಿಹಾಸದಿಂದ ಪ್ರೇರಿತರಾಗಿ, ಮಲಯಾ ವಿಶ್ವವಿದ್ಯಾಲಯದಲ್ಲಿ 'ತಿರುವಳ್ಳುವರ್ ಪೀಠ'ವನ್ನು ಸ್ಥಾಪಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ; ನಮ್ಮ ಹಂಚಿಕೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಲು ನಾವು ಈಗ 'ತಿರುವಳ್ಳುವರ್ ಕೇಂದ್ರ'ವನ್ನು ಸ್ಥಾಪಿಸುತ್ತೇವೆ: ಪ್ರಧಾನಮಂತ್ರಿ
ಭಾರತದ ಯಶಸ್ಸು ಮಲೇಷ್ಯಾದ ಯಶಸ್ಸು, ಇದು ಏಷ್ಯಾದ ಯಶಸ್ಸಾಗಿದೆ. ಅದಕ್ಕಾಗಿಯೇ ನಮ್ಮ ಸಂಬಂಧದ ಮಾರ್ಗದರ್ಶಿ ಪದ 'IMPACT' ಎಂದು ನಾನು ಹೇಳುತ್ತೇನೆ, ಅಂದರೆ ಸಾಮೂಹಿಕ ರೂಪಾಂತರವನ್ನು ಮುನ್ನಡೆಸಲು ಭಾರತ-ಮಲೇಷ್ಯಾ ಪಾಲುದಾರಿಕೆ: ಪ್ರಧಾನಮಂತ್ರಿ
ನೀವು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿ ‘ಇನ್ಕ್ರೆಡಿಬಲ್ ಇಂಡಿಯಾ’ವನ್ನು ಅನುಭವಿಸಲು ನಾನು ಪ್ರೋತ್ಸಾಹಿಸುತ್ತೇನೆ. ನಿಮ್ಮ ಮಲಯ ಸ್ನೇಹಿತರನ್ನೂ ನೀವು ಕರೆದುಕೊಂಡು ಬರಬೇಕು, ಏಕೆಂದರೆ ಜನರ ನಡುವಿನ ಸಂಪರ್ಕವೇ ನಮ್ಮ ಸ್ನೇಹದ ಅಡಿಗಲ್ಲು: ಪ್ರಧಾನಮಂತ್ರಿ
ಭಾರತವನ್ನು ಬೆಳವಣಿಗೆಯ ವಿಶ್ವಾಸಾರ್ಹ ಪಾಲುದಾರನಾಗಿ ನೋಡಲಾಗುತ್ತಿದೆ; ಯುಕೆ, ಯುಎಇ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಓಮನ್, ಇಯು ಅಥವಾ ಯು ಎಸ್ ಎ ಯಾವುದೇ ಇರಲಿ, ಈ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಹೊಂದಿವೆ. ‘ವಿಶ್ವಾಸ’ ಎಂಬುದು ಭಾರತದ ಅತ್ಯಂತ ಬಲವಾದ ಕರೆನ್ಸಿಯಾಗಿದೆ: ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಲೇಷ್ಯಾದ ಕೌಲಾಲಂಪುರ್‌ ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಆತ್ಮೀಯ ಸ್ವಾಗತವು ನಮ್ಮ ಹಂಚಿಕೆಯ ಸಂಸ್ಕೃತಿಯ ಸುಂದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಸಮುದಾಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರು ತಮ್ಮ ಆತ್ಮೀಯ ಮಿತ್ರರಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ವಿಮಾನ ನಿಲ್ದಾಣಕ್ಕೆ ಬಂದು ತಮ್ಮನ್ನು ಸ್ವಾಗತಿಸಿ, ತಮ್ಮ ಕಾರಿನಲ್ಲೇ ಈ ಕಾರ್ಯಕ್ರಮಕ್ಕೆ ಕರೆತಂದಿದ್ದನ್ನು ಅವರು ಸ್ಮರಿಸಿದರು. "ಈ ವಿಶೇಷ ಸನ್ನೆಗಳು ಭಾರತದ ಮೇಲೆ ಮತ್ತು ಇಲ್ಲಿ ಉಪಸ್ಥಿತರಿರುವ ಜನರ ಮೇಲೆ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗಿರುವ ಪ್ರೀತಿ ಮತ್ತು ಗೌರವವನ್ನು ಪ್ರತಿಬಿಂಬಿಸುತ್ತವೆ" ಎಂದು ಶ್ರೀ ಮೋದಿ ಸೇರಿಸಿದರು.

 

800ಕ್ಕೂ ಹೆಚ್ಚು ನೃತ್ಯಗಾರರು ಪೂರ್ಣ ಸಾಮರಸ್ಯದೊಂದಿಗೆ ಪ್ರದರ್ಶಿಸಿದ ದಾಖಲೆ ನಿರ್ಮಿಸುವ ಸಾಂಸ್ಕೃತಿಕ ಪ್ರದರ್ಶನವು ಮುಂಬರುವ ಹಲವು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಎಲ್ಲಾ ಕಲಾಕಾರರನ್ನು ಅಭಿನಂದಿಸಿದರು. ತಾವು ಮತ್ತು ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ಪ್ರಧಾನಮಂತ್ರಿಯಾಗುವ ಮೊದಲೇ ಸ್ನೇಹಿತರಾಗಿದ್ದೆವು ಎಂದು ಶ್ರೀ ಮೋದಿ ಹೇಳಿದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರ ಸುಧಾರಣೆಗಳ ಮೇಲಿನ ಗಮನ, ಅವರ ಮಹಾನ್ ಬುದ್ಧಿಶಕ್ತಿ ಮತ್ತು 2025 ರಲ್ಲಿ ಆಸಿಯಾನ್‌ನ (ASEAN) ಸಮರ್ಥ ಅಧ್ಯಕ್ಷತೆಯನ್ನು ಅವರು ಶ್ಲಾಘಿಸಿದರು.

ಕಳೆದ ವರ್ಷ ಆಸಿಯಾನ್ (ASEAN) ಶೃಂಗಸಭೆಗಾಗಿ ತಮಗೆ ಮಲೇಷ್ಯಾಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ ಎಂಬುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಶೀಘ್ರದಲ್ಲೇ ಮಲೇಷ್ಯಾಕ್ಕೆ ಭೇಟಿ ನೀಡುವುದಾಗಿ ತಾನು ನೀಡಿದ್ದ ಭರವಸೆಯನ್ನು ಈಗ ಈಡೇರಿಸಿದ್ದೇನೆ ಎಂದು ಹೇಳಿದರು. ಇದು 2026ರ ತಮ್ಮ ಮೊದಲ ವಿದೇಶಿ ಭೇಟಿಯಾಗಿದೆ ಎಂದು ಅವರು ತಿಳಿಸಿದರು ಮತ್ತು ಈ ಹಬ್ಬದ ಸಂದರ್ಭದಲ್ಲಿ ಸಮುದಾಯದ ಜನರೊಂದಿಗೆ ಇರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಸಂಕ್ರಾಂತಿ, ಪೊಂಗಲ್ ಮತ್ತು ತೈಪುಸಮ್ ಹಬ್ಬಗಳನ್ನು ಬಹಳ ಸಡಗರದಿಂದ ಆಚರಿಸಿದ್ದಾರೆ ಎಂದು ತಾವು ಭಾವಿಸುವುದಾಗಿ ಪ್ರಧಾನಮಂತ್ರಿಯವರು ಹೇಳಿದರು. ಶಿವರಾತ್ರಿ ಹಬ್ಬವು ಹತ್ತಿರದಲ್ಲಿದೆ, ಅದರ ನಂತರ ರಂಜಾನ್ ಆರಂಭ ಮತ್ತು ಹರಿ ರಾಯಾ ಆಚರಣೆಗಳು ಬರಲಿವೆ ಎಂದು ಅವರು ಸ್ಮರಿಸಿದರು ಹಾಗೂ ಎಲ್ಲರಿಗೂ ಸುಖ ಮತ್ತು ಉತ್ತಮ ಆರೋಗ್ಯವನ್ನು ಹಾರೈಸಿದರು.

ಮಲೇಷ್ಯಾವು ವಿಶ್ವದ ಎರಡನೇ ಅತಿದೊಡ್ಡ ಭಾರತೀಯ ಮೂಲದ ಸಮುದಾಯವನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು ಮತ್ತು ಭಾರತೀಯ ಹಾಗೂ ಮಲೇಷಿಯಾದ ಹೃದಯಗಳನ್ನು ಬೆಸೆಯುವಂತಹ ಅನೇಕ ವಿಷಯಗಳಿವೆ ಎಂದು ತಿಳಿಸಿದರು. ತಾವು ಸ್ವಲ್ಪ ಸಮಯದ ಹಿಂದೆ ವೀಕ್ಷಿಸಿದ ಪ್ರದರ್ಶನವನ್ನು ಉಲ್ಲೇಖಿಸಿದ ಅವರು, ಅದು ಈ ಬಾಂಧವ್ಯಗಳನ್ನು ಸುಂದರವಾಗಿ ಚಿತ್ರಿಸಿದೆ ಎಂದು ಹೇಳಿದರು. “ಭಾರತೀಯ ಮೂಲದ ಸಮುದಾಯವು ಉಭಯ ದೇಶಗಳನ್ನು ಸಂಪರ್ಕಿಸುವ ಒಂದು ಜೀವಂತ ಸೇತುವೆಯಾಗಿದೆ. ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೆಯ ಸಂಪ್ರದಾಯಗಳು ಮತ್ತು ರುಚಿಗಳಲ್ಲಿ ಕಾಣಬಹುದು; ಇದು ರೊಟ್ಟಿ ಕೆನಾಯ್ (Roti Canai) ಅನ್ನು ಮಲಬಾರ್ ಪರೋಟಾಕ್ಕೆ ಮತ್ತು ತೆಂಗಿನಕಾಯಿ, ಸಾಂಬಾರ ಪದಾರ್ಥಗಳು ಹಾಗೂ ತೆ ತಾರಿಕ್ (Teh Tarik) ಅನ್ನು ಜೋಡಿಸುತ್ತದೆ, ಇವು ಕೌಲಾಲಂಪುರ್ ಮತ್ತು ಕೊಚ್ಚಿ ಎರಡರಲ್ಲೂ ಪರಿಚಿತವಾಗಿವೆ” ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. ಭಾರತೀಯ ಭಾಷೆಗಳು ಮತ್ತು ಮಲಯ ಭಾಷೆಯ ನಡುವೆ ಹೆಚ್ಚಿನ ಸಂಖ್ಯೆಯ ಸಾಮಾನ್ಯ ಪದಗಳಿರುವುದರಿಂದ ಉಭಯ ದೇಶಗಳ ಜನರು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಮಲೇಷ್ಯಾದಲ್ಲಿ ಭಾರತೀಯ ಚಲನಚಿತ್ರಗಳು ಮತ್ತು ಸಂಗೀತ ಬಹಳ ಜನಪ್ರಿಯವಾಗಿರುವುದನ್ನು ತಾವು ಕೇಳಿರುವುದಾಗಿ ಅವರು ಹೇಳಿದರು. ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ಬಹಳ ಚೆನ್ನಾಗಿ ಹಾಡುತ್ತಾರೆ ಎಂದು ಗಮನಿಸಿದ ಶ್ರೀ ಮೋದಿ ಅವರು, ಅನ್ವರ್ ಇಬ್ರಾಹಿಂ ಅವರಿಗೆ ಪ್ರಸಿದ್ಧ ಎಂ.ಜಿ.ಆರ್ (MGR) ಅವರ ತಮಿಳು ಹಾಡುಗಳೆಂದರೆ ಅತೀವ ಪ್ರೀತಿ ಇರುವುದು ಅದ್ಭುತವಾದ ವಿಷಯ ಎಂದು ತಿಳಿಸಿದರು.

 

ಮಲೇಷ್ಯಾದಲ್ಲಿರುವ ಭಾರತೀಯ ಮೂಲದ ಸಮುದಾಯದ ಹೃದಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. 2001ರ ಒಂದು ಘಟನೆಯನ್ನು ಸ್ಮರಿಸಿದ ಅವರು, ತಮ್ಮ ತವರು ರಾಜ್ಯವಾದ ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದಾಗ, ಸಮುದಾಯದ ಅನೇಕ ಸದಸ್ಯರು ಒಗ್ಗೂಡಿ ಸಹಾಯ ಮಾಡಿದ್ದರು ಎಂದು ತಿಳಿಸಿದರು ಮತ್ತು ಅವರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. "ಮಲೇಷ್ಯಾದಲ್ಲಿರುವ ಸಮುದಾಯದ ಸಾವಿರಾರು ಪೂರ್ವಜರು ಭಾರತವನ್ನು ಸ್ವತಂತ್ರ ದೇಶವನ್ನಾಗಿ ಮಾಡಲು ದೊಡ್ಡ ತ್ಯಾಗ ಮಾಡಿದ್ದಾರೆ. ಅವರಲ್ಲಿ ಅನೇಕರು ಭಾರತವನ್ನು ನೋಡಿರಲಿಲ್ಲ, ಆದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೈನ್ಯಕ್ಕೆ (INA) ಸೇರಿದವರಲ್ಲಿ ಮೊದಲಿಗರಾಗಿದ್ದರು" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥವಾಗಿ, ಮಲೇಷ್ಯಾದಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಮಲೇಷ್ಯಾದಲ್ಲಿರುವ ನೇತಾಜಿ ಸೇವಾ ಕೇಂದ್ರ ಮತ್ತು ನೇತಾಜಿ ಕಲ್ಯಾಣ ಪ್ರತಿಷ್ಠಾನದ (Netaji Welfare Foundation) ಪ್ರಯತ್ನಗಳನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿಯವರು ಮಲೇಷ್ಯಾದಲ್ಲಿರುವ ಭಾರತೀಯ ಮೂಲದ ಸಮುದಾಯವು ಶತಮಾನಗಳಿಂದಲೂ ತನ್ನ ಸಂಪ್ರದಾಯಗಳನ್ನು ಸಂರಕ್ಷಿಸಿಕೊಂಡು ಬಂದಿದೆ ಎಂದು ಪುನರುಚ್ಚರಿಸಿದರು. ಮಲೇಷ್ಯಾದ 500ಕ್ಕೂ ಹೆಚ್ಚು ಶಾಲೆಗಳಲ್ಲಿ ಮಕ್ಕಳಿಗೆ ಭಾರತೀಯ ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದು ತಾವು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದನ್ನು ಅವರು ಸ್ಮರಿಸಿದರು. "ತಿರುವಳ್ಳುವರ್ ಮತ್ತು ಸ್ವಾಮಿ ವಿವೇಕಾನಂದರಂತಹ ಸಂತರ ಪ್ರಭಾವವು ಮಲೇಷ್ಯಾದಲ್ಲಿ ಗೋಚರಿಸುತ್ತದೆ. ಇತ್ತೀಚೆಗೆ ಬಟು ಗುಹೆಗಳಲ್ಲಿ (Batu Caves) ನಡೆದ ತೈಪೂಸಂ ಆಚರಣೆಗಳು ದೈವಿಕವಾಗಿದ್ದು, ಪಳನಿಯಲ್ಲಿ ನಡೆಯುವ ಆಚರಣೆಗಳಿಗೆ ಸಮನಾಗಿವೆ," ಎಂದು ಶ್ರೀ ಮೋದಿ ಹೇಳಿದರು. ಮಲೇಷ್ಯಾದಲ್ಲಿ ಗರ್ಬಾ ನೃತ್ಯವು ಜನಪ್ರಿಯವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಶ್ರೀ ಗುರುನಾನಕ್ ದೇವ್ ಜೀ ಅವರ ಬೋಧನೆಗಳನ್ನು ಪ್ರಚಾರ ಮಾಡುತ್ತಿರುವ ಸಿಖ್ ಸಮುದಾಯದೊಂದಿಗಿನ ಸಾಂಸ್ಕೃತಿಕ ಸಂಬಂಧಗಳನ್ನು ಭಾರತವು ಆಳವಾಗಿ ಗೌರವಿಸುತ್ತದೆ ಎಂದು ತಿಳಿಸಿದರು.

ತಮಿಳು ಭಾಷೆಯು ಜಗತ್ತಿಗೆ ಭಾರತ ನೀಡಿದ ಕೊಡುಗೆಯಾಗಿದೆ ಎಂದು ಶ್ರೀ ಮೋದಿ ತಿಳಿಸಿದರು. ತಮಿಳು ಸಾಹಿತ್ಯವು ಶಾಶ್ವತವಾದುದು, ತಮಿಳು ಸಂಸ್ಕೃತಿಯು ಜಾಗತಿಕವಾದುದು ಮತ್ತು ತಮಿಳು ಜನರು ತಮ್ಮ ಪ್ರತಿಭೆಯ ಮೂಲಕ ಮಾನವಕುಲದ ಸೇವೆ ಮಾಡಿದ್ದಾರೆ ಎಂದು ಅವರು ಹೇಳಿದರು. "ಭಾರತದ ಉಪರಾಷ್ಟ್ರಪತಿ ತಿರು ಸಿ.ಪಿ. ರಾಧಾಕೃಷ್ಣನ್, ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಎಸ್. ಜೈಶಂಕರ್, ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾದ ಡಾ. ಮುರುಗನ್ ಅವರುಗಳೆಲ್ಲರೂ ತಮಿಳುನಾಡಿನವರು" ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಮಲೇಷ್ಯಾದಲ್ಲಿರುವ ತಮಿಳು ಸಮುದಾಯದ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಸೇವೆ ಮಾಡುತ್ತಿದ್ದಾರೆ ಮತ್ತು ತಮಿಳು ಸಮುದಾಯವು ಹಲವು ಶತಮಾನಗಳಿಂದ ಮಲೇಷ್ಯಾದಲ್ಲಿ ನೆಲೆಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಇತಿಹಾಸದಿಂದ ಪ್ರೇರಿತರಾಗಿ, ಭಾರತವು ಮಲಯಾ ವಿಶ್ವವಿದ್ಯಾಲಯದಲ್ಲಿ 'ತಿರುವಳ್ಳುವರ್ ಪೀಠ'ವನ್ನು ಸ್ಥಾಪಿಸಿದೆ ಮತ್ತು ಈಗ ಹಂಚಿಕೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಲು 'ತಿರುವಳ್ಳುವರ್ ಕೇಂದ್ರ'ವನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

 

ಭಾರತ-ಮಲೇಷ್ಯಾ ಸಂಬಂಧಗಳು ಪ್ರತಿ ವರ್ಷ ಹೊಸ ಎತ್ತರಕ್ಕೆ ಏರುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. 2024ರಲ್ಲಿ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ನವದೆಹಲಿಗೆ ನೀಡಿದ ಭೇಟಿಯನ್ನು ಸ್ಮರಿಸಿದ ಅವರು, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಗೆ (Comprehensive Strategic Partnership) ಏರಿಸಲಾಗಿದೆ ಎಂದು ತಿಳಿಸಿದರು. ಈಗ ಎರಡು ದೇಶಗಳು ಪ್ರಗತಿ ಮತ್ತು ಸಮೃದ್ಧಿಯತ್ತ ಪಾಲುದಾರರಾಗಿ ಕೈಜೋಡಿಸಿ ನಡೆಯುತ್ತಿವೆ ಮತ್ತು ಪರಸ್ಪರರ ಯಶಸ್ಸನ್ನು ತಮ್ಮದೇ ಯಶಸ್ಸಿನಂತೆ ಆಚರಿಸುತ್ತಿವೆ ಎಂದು ಅವರು ಹೇಳಿದರು.

ಚಂದ್ರಯಾನ-3ರ ಐತಿಹಾಸಿಕ ಯಶಸ್ಸಿಗೆ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ಶುಭ ಹಾರೈಸಿದ್ದರಿಂದ ತಾವು ಭಾವುಕರಾಗಿದ್ದನ್ನು ಶ್ರೀ ಮೋದಿ ಸ್ಮರಿಸಿದರು ಮತ್ತು ಭಾರತದ ಯಶಸ್ಸು ಮಲೇಷ್ಯಾದ ಯಶಸ್ಸು ಹಾಗೂ ಏಷ್ಯಾದ ಯಶಸ್ಸಾಗಿದೆ ಎಂದು ಒಪ್ಪಿಕೊಂಡರು. ಈ ಬಾಂಧವ್ಯದ ಮಾರ್ಗದರ್ಶಿ ಪದವು 'IMPACT' (ಇಂಪ್ಯಾಕ್ಟ್) - ಅಂದರೆ ಸಾಮೂಹಿಕ ಪರಿವರ್ತನೆಯನ್ನು ಮುನ್ನಡೆಸಲು ಭಾರತ-ಮಲೇಷ್ಯಾ ಪಾಲುದಾರಿಕೆ (India-Malaysia Partnership for Advancing Collective Transformation) ಎಂದು ಅವರು ಹೇಳಿದರು. ಇದು ಬಾಂಧವ್ಯದ ವೇಗ, ಮಹತ್ವಾಕಾಂಕ್ಷೆಗಳ ಪ್ರಮಾಣ ಮತ್ತು ಜನರ ಮೇಲಾಗುವ ಪ್ರಯೋಜನಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಒತ್ತಿ ಹೇಳಿದ ಅವರು, ಉಭಯ ದೇಶಗಳು ಇಡೀ ಮಾನವಕುಲಕ್ಕೆ ಪ್ರಯೋಜನವನ್ನು ನೀಡಬಲ್ಲವು ಎಂದು ತಿಳಿಸಿದರು.

ಮಲೇಷ್ಯಾದೊಂದಿಗೆ ಕೆಲಸ ಮಾಡಲು ಭಾರತೀಯ ಕಂಪನಿಗಳು ಯಾವಾಗಲೂ ಉತ್ಸುಕವಾಗಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಮಲೇಷ್ಯಾದ ಮೊದಲ ಮತ್ತು ಏಷ್ಯಾದ ಅತಿದೊಡ್ಡ ಇನ್ಸುಲಿನ್ ಉತ್ಪಾದನಾ ಘಟಕವನ್ನು ಸ್ಥಾಪಿಸುವಲ್ಲಿ ಭಾರತದ ಪಾತ್ರವನ್ನು ಅವರು ಸ್ಮರಿಸಿದರು. "100ಕ್ಕೂ ಹೆಚ್ಚು ಭಾರತೀಯ ಐಟಿ ಕಂಪನಿಗಳು ಮಲೇಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ" ಎಂದು ಶ್ರೀ ಮೋದಿ ತಿಳಿಸಿದರು ಮತ್ತು ಡಿಜಿಟಲ್ ಸಹಯೋಗಕ್ಕಾಗಿ ಹೊಸ ಹಾದಿಗಳನ್ನು ರೂಪಿಸುತ್ತಿರುವ 'ಮಲೇಷ್ಯಾ-ಭಾರತ ಡಿಜಿಟಲ್ ಕೌನ್ಸಿಲ್' ಬಗ್ಗೆ ಹೈಲೈಟ್ ಮಾಡಿದರು. ಭಾರತದ ಯುಪಿಐ (UPI) ವ್ಯವಸ್ಥೆಯು ಶೀಘ್ರದಲ್ಲೇ ಮಲೇಷ್ಯಾಕ್ಕೆ ಬರಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಭಾರತ ಮತ್ತು ಮಲೇಷ್ಯಾ ಹಿಂದೂ ಮಹಾಸಾಗರದ ಒಂದೇ ನೀರನ್ನು ಹಂಚಿಕೊಳ್ಳುತ್ತವೆ ಎಂದು ಶ್ರೀ ಮೋದಿ ತಿಳಿಸಿದರು ಮತ್ತು ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡುವಂತೆ ಎಲ್ಲರಿಗೂ ಆಹ್ವಾನ ನೀಡಿದರು. ಭಾರತದ ಅಭೂತಪೂರ್ವ ಮೂಲಸೌಕರ್ಯ ಬೆಳವಣಿಗೆಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಒಂದು ದಶಕದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿರುವುದು, ದಾಖಲೆ ವೇಗದಲ್ಲಿ ಹೆದ್ದಾರಿಗಳನ್ನು ನಿರ್ಮಿಸಿರುವುದು ಮತ್ತು ವಂದೇ ಭಾರತ್‌ನಂತಹ ಆಧುನಿಕ ರೈಲುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿರುವುದನ್ನು ಸ್ಮರಿಸಿದರು. ಮಲೇಷಿಯಾದ ಸ್ನೇಹಿತರನ್ನು ಕರೆದುಕೊಂಡು ಬರುವುದು ಸೇರಿದಂತೆ ಹೆಚ್ಚಿನ ಜನರು ಪರಸ್ಪರ ಭೇಟಿ ನೀಡುವಂತೆ ಅವರು ಪ್ರೋತ್ಸಾಹಿಸಿದರು, ಏಕೆಂದರೆ ಇಂತಹ ಸಂಪರ್ಕವು ಉಭಯ ದೇಶಗಳ ನಡುವಿನ ಸ್ನೇಹದ ಅಡಿಗಲ್ಲು ಎಂದು ಅವರು ಅಭಿಪ್ರಾಯಪಟ್ಟರು.

 

ಕಳೆದ ದಶಕದಲ್ಲಿ ಭಾರತವು ಬೃಹತ್ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. “11ನೇ ಅತಿದೊಡ್ಡ ಆರ್ಥಿಕತೆಯಿಂದ ಇಂದು ಭಾರತವು ವಿಶ್ವದ ಅಗ್ರ 3 ಆರ್ಥಿಕತೆಗಳ ಪಟ್ಟಿಗೆ ಸೇರುವ ಹಂತದಲ್ಲಿದೆ ಮತ್ತು ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ” ಎಂದು ಶ್ರೀ ಮೋದಿ ಒತ್ತಿ ಹೇಳಿದರು. 'ಮೇಕ್ ಇನ್ ಇಂಡಿಯಾ' ಅಭಿಯಾನವು ಒಂದು ಸಣ್ಣ ಸಸಿಯಿಂದ ಬೆಳೆದು ಇಂದು ಭಾರತವನ್ನು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವನ್ನಾಗಿ ಮಾಡಿದೆ ಮತ್ತು 2014 ರಿಂದ ರಕ್ಷಣಾ ರಫ್ತು ಸುಮಾರು 30 ಪಟ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದರು. “ಭಾರತವು ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಹಬ್ ಆಗಿ ಹೊರಹೊಮ್ಮಿದೆ ಮತ್ತು ವಿಶ್ವದ ಅತಿದೊಡ್ಡ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹಾಗೂ ಫಿನ್‌ ಟೆಕ್ ವ್ಯವಸ್ಥೆಯನ್ನು ನಿರ್ಮಿಸಿದೆ. ವಿಶ್ವದ ಒಟ್ಟು ನೈಜ-ಸಮಯದ ಡಿಜಿಟಲ್ ವಹಿವಾಟುಗಳಲ್ಲಿ ಸುಮಾರು ಅರ್ಧದಷ್ಟು ಯುಪಿಐ (UPI) ಮೂಲಕವೇ ನಡೆಯುತ್ತಿದೆ. ಒಂದು ದಶಕದಲ್ಲಿ ಸೌರಶಕ್ತಿ ಸಾಮರ್ಥ್ಯವು ಸುಮಾರು 40 ಪಟ್ಟು ಹೆಚ್ಚಾಗಿದ್ದು, ಭಾರತವು ಸ್ವಚ್ಛ ಮತ್ತು ಹಸಿರು ಬೆಳವಣಿಗೆಯತ್ತ ಸಾಗುತ್ತಿದೆ” ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಭಾರತವನ್ನು ಈಗ ಕೇವಲ ಒಂದು ದೊಡ್ಡ ಮಾರುಕಟ್ಟೆಯಾಗಿ ಮಾತ್ರವಲ್ಲದೆ, ಹೂಡಿಕೆ ಮತ್ತು ವ್ಯಾಪಾರದ ಕೇಂದ್ರವಾಗಿ ಹಾಗೂ ಬೆಳವಣಿಗೆಯ ವಿಶ್ವಾಸಾರ್ಹ ಪಾಲುದಾರನಾಗಿ ನೋಡಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಯುಕೆ, ಯುಎಇ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಓಮನ್, ಇಯು (EU) ಮತ್ತು ಯು ಎಸ್ ಎ ಜೊತೆಗೆ ಭಾರತವು ವ್ಯಾಪಾರ ಒಪ್ಪಂದಗಳನ್ನು ಹೊಂದಿದೆ ಮತ್ತು 'ವಿಶ್ವಾಸ' ಎಂಬುದು ಭಾರತದ ಅತ್ಯಂತ ಬಲವಾದ ಕರೆನ್ಸಿಯಾಗಿದೆ ಎಂದು ಅವರು ತಿಳಿಸಿದರು.

 

ಭಾರತವು ತನ್ನ ಅನಿವಾಸಿ ಭಾರತೀಯರನ್ನು ಯಾವಾಗಲೂ ತೆರೆದ ತೋಳುಗಳಿಂದ ಸ್ವಾಗತಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತೀಯ ಮೂಲದ ಮಲೇಷ್ಯಾ ನಾಗರಿಕರಿಗೆ ಒಸಿಐ (OCI) ಕಾರ್ಡ್ ಅರ್ಹತೆಯನ್ನು 6ನೇ ತಲೆಮಾರಿನವರೆಗೆ ವಿಸ್ತರಿಸುವ ಐತಿಹಾಸಿಕ ನಿರ್ಧಾರವನ್ನು ಅವರು ಒತ್ತಿ ಹೇಳಿದರು. 'ಇಂಡಿಯನ್ ಸ್ಕಾಲರ್‌ಶಿಪ್ ಟ್ರಸ್ಟ್ ಫಂಡ್' ಮೂಲಕ ಭಾರತದ ಬೆಂಬಲವನ್ನು ಶ್ರೀ ಮೋದಿ ಪುನರುಚ್ಚರಿಸಿದರು ಮತ್ತು ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಂಗ ಮಾಡಲು ಮುಂಬರುವ 'ತಿರುವಳ್ಳುವರ್ ವಿದ್ಯಾರ್ಥಿವೇತನ'ವನ್ನು ಘೋಷಿಸಿದರು. ಅವರು 'ನೋ ಇಂಡಿಯಾ ಪ್ರೋಗ್ರಾಂ' (Know India Program) ಮತ್ತು ಮಲೇಷ್ಯಾದಲ್ಲಿ ಶೀಘ್ರದಲ್ಲೇ ತೆರೆಯಲಿರುವ ಭಾರತದ ಹೊಸ ದೂತಾವಾಸದ ಬಗ್ಗೆಯೂ ಪ್ರಸ್ತಾಪಿಸಿದರು, ಇದು ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ.

 

ಭಾರತವು ತನ್ನ ಅನಿವಾಸಿ ಭಾರತೀಯರನ್ನು ಯಾವಾಗಲೂ ತೆರೆದ ತೋಳುಗಳಿಂದ ಸ್ವಾಗತಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತೀಯ ಮೂಲದ ಮಲೇಷ್ಯಾ ನಾಗರಿಕರಿಗೆ ಒಸಿಐ (OCI) ಕಾರ್ಡ್ ಅರ್ಹತೆಯನ್ನು 6ನೇ ತಲೆಮಾರಿನವರೆಗೆ ವಿಸ್ತರಿಸುವ ಐತಿಹಾಸಿಕ ನಿರ್ಧಾರವನ್ನು ಅವರು ಒತ್ತಿ ಹೇಳಿದರು. 'ಇಂಡಿಯನ್ ಸ್ಕಾಲರ್‌ಶಿಪ್ ಟ್ರಸ್ಟ್ ಫಂಡ್' ಮೂಲಕ ಭಾರತದ ಬೆಂಬಲವನ್ನು ಶ್ರೀ ಮೋದಿ ಪುನರುಚ್ಚರಿಸಿದರು ಮತ್ತು ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಂಗ ಮಾಡಲು ಮುಂಬರುವ 'ತಿರುವಳ್ಳುವರ್ ವಿದ್ಯಾರ್ಥಿವೇತನ'ವನ್ನು ಘೋಷಿಸಿದರು. ಅವರು 'ನೋ ಇಂಡಿಯಾ ಪ್ರೋಗ್ರಾಂ' (Know India Program) ಮತ್ತು ಮಲೇಷ್ಯಾದಲ್ಲಿ ಶೀಘ್ರದಲ್ಲೇ ತೆರೆಯಲಿರುವ ಭಾರತದ ಹೊಸ ದೂತಾವಾಸದ ಬಗ್ಗೆಯೂ ಪ್ರಸ್ತಾಪಿಸಿದರು, ಇದು ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ.

 

140 ಕೋಟಿ ಭಾರತೀಯರು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ ಮತ್ತು ಈ ಪ್ರಯಾಣದಲ್ಲಿ ಪ್ರವಾಸಿ ಭಾರತೀಯ ಸಮುದಾಯವು ಅಮೂಲ್ಯ ಪಾಲುದಾರನಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. "ಕೌಲಾಲಂಪುರದಲ್ಲೇ ಹುಟ್ಟಲಿ ಅಥವಾ ಕೋಲ್ಕತ್ತಾದಲ್ಲೇ ಹುಟ್ಟಲಿ, ಅನಿವಾಸಿಗಳ ಹೃದಯದಲ್ಲಿ ಭಾರತ ನೆಲೆಸಿದೆ; ಅವರು ಮಲೇಷ್ಯಾ ಮತ್ತು ಭಾರತದ ಪ್ರಗತಿಯ ಸಕ್ರಿಯ ಭಾಗವಾಗಿದ್ದಾರೆ ಮತ್ತು ಸಮೃದ್ಧ ಮಲೇಷ್ಯಾ ಹಾಗೂ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡಲಿದ್ದಾರೆ" ಎಂದು ಶ್ರೀ ಮೋದಿ ಭಾಷಣ ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s economy resilient despite West Asia headwinds

Media Coverage

India’s economy resilient despite West Asia headwinds
NM on the go

Nm on the go

Always be the first to hear from the PM. Get the App Now!
...
PM Modi receives a phone call today from President of Sri Lanka
March 24, 2026
The two leaders discuss disruptions affecting global energy security.
Both leaders reiterate the importance of keeping shipping lines open and secure.
The two leaders review progress on various initiatives aimed at strengthening bilateral energy cooperation and enhancing regional security.
PM reiterates India’s firm commitment to work closely together in addressing shared challenges.

Prime Minister Shri Narendra Modi received a phone call today from the President of Sri Lanka, H.E. Anura Kumara Disanayaka.

The two leaders discussed the evolving situation in West Asia with an emphasis on disruptions affecting global energy security.

Both leaders reiterated the importance of keeping shipping lines open and secure in the interest of the whole world.

The two leaders reviewed progress on various initiatives aimed at strengthening India-Sri Lanka energy cooperation and enhancing regional security.

Prime Minister reiterated India’s firm commitment to work closely together in addressing shared challenges in line with India’s Neighbourhood First policy and MAHASAGAR Vision.

The two leaders agreed to stay in touch.