ಆರೋಗ್ಯ ಮೂಲಸೌಕರ್ಯವನ್ನು ವಿಸ್ತರಿಸುವುದು ನಮ್ಮ ಆದ್ಯತೆಯಾಗಿದೆ, ಇಂದು ಪ್ರಾರಂಭಿಸಲಾದ ಉಪಕ್ರಮಗಳು ನಾಗರಿಕರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಸೇವೆಗಳನ್ನು ಒದಗಿಸುತ್ತವೆ: ಪ್ರಧಾನಮಂತ್ರಿ
ಇಂದು 150ಕ್ಕೂ ಹೆಚ್ಚು ದೇಶಗಳಲ್ಲಿ ಆಯುರ್ವೇದ ದಿನವನ್ನು ಆಚರಿಸುತ್ತಿರುವುದು ನಮಗೆಲ್ಲ ಸಂತಸದ ವಿಷಯವಾಗಿದೆ: ಪ್ರಧಾನಮಂತ್ರಿ
ಆರೋಗ್ಯ ನೀತಿಯ ಐದು ಆಧಾರ ಸ್ತಂಭಗಳನ್ನು ಸರ್ಕಾರ ಹಾಕಿಕೊಂಡಿದೆ: ಪ್ರಧಾನಮಂತ್ರಿ
ಪ್ರತಿಯೊಬ್ಬ
ಮಾರಣಾಂತಿಕ ರೋಗಗಳನ್ನು ತಡೆಗಟ್ಟಲು ಮಿಷನ್ ಇಂದ್ರಧನುಷ್ ಅಭಿಯಾನವನ್ನು ಸರ್ಕಾರ ನಡೆಸುತ್ತಿದೆ: ಪ್ರಧಾನಮಂತ್ರಿ
ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಗರಿಷ್ಠವಾಗಿ ಬಳಸಿಕೊಳ್ಳುವ ಮೂಲಕ ನಮ್ಮ ಸರ್ಕಾರ ದೇಶದ ಜನರ ಹಣವನ್ನು ಉಳಿಸುತ್ತಿದೆ: ಪ್ರಧಾನಮಂತ್ರಿ

ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ (ಎಐಐಎ) ಸುಮಾರು 12,850 ಕೋಟಿ ರೂಪಾಯಿ ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಧನ್ವಂತರಿ ಜಯಂತಿ ಮತ್ತು ಧನ್ತೇರಸ್ ಸಂದರ್ಭಕ್ಕಾಗಿ ಶುಭ ಹಾರೈಸಿದರು. ಬಹುತೇಕ ಮಂದಿ ತಮ್ಮ ಮನೆಗಳಿಗೆ ಹೊಸದನ್ನು ಖರೀದಿಸಲು ಒಲವು ತೋರುತ್ತಿರುವುದರಿಂದ ಅವರು ದೇಶದ ಎಲ್ಲಾ ವ್ಯಾಪಾರ ಮಾಲೀಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ದೀಪಾವಳಿಯ ಮುಂಗಡ ಶುಭಾಶಯಗಳನ್ನು ಸಹ ತಿಳಿಸಿದರು.

ಅಯೋಧ್ಯೆಯಲ್ಲಿರುವ ಶ್ರೀರಾಮನ ದೇವಾಲಯವು ಸಾವಿರಾರು ದೀಪಗಳಿಂದ ಬೆಳಗುವುದರಿಂದ ಈ ದೀಪಾವಳಿಯು ಐತಿಹಾಸಿಕವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು, ಈ ವರ್ಷದ ದೀಪಾವಳಿಯಲ್ಲಿ, ಭಗವಾನ್ ರಾಮನು ಮತ್ತೊಮ್ಮೆ ತನ್ನ ನಿವಾಸಕ್ಕೆ ಮರಳಿದ್ದಾನೆ, ಈ ಕಾಯುವಿಕೆಯು ಅಂತಿಮವಾಗಿ 14 ರ ನಂತರ ಅಲ್ಲ, 500 ವರ್ಷಗಳ ನಂತರ ಕೊನೆಗೊಂಡಿದೆ ಎಂದು ಪ್ರಧಾನಿ ಹೇಳಿದರು.

 

ಈ ವರ್ಷ ಧನ್ತೇರಸ್ ಹಬ್ಬವು ಸಮೃದ್ಧಿ ಮತ್ತು ಆರೋಗ್ಯದ ಸಂಗಮವಾಗಿರುವುದು ಕಾಕತಾಳೀಯವಲ್ಲ, ಇದು ಭಾರತದ ಸಂಸ್ಕೃತಿ ಮತ್ತು ಜೀವನ ತತ್ವದ ಸಂಕೇತವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಋಷಿಮುನಿಗಳು ಮತ್ತು ಸಂತರನ್ನು ಉಲ್ಲೇಖಿಸಿದ ಪ್ರಧಾನಿ, ಆರೋಗ್ಯವನ್ನು ಸರ್ವೋಚ್ಚ ಸಂಪತ್ತು ಎಂದು ಪರಿಗಣಿಸಲಾಗಿದೆ ಮತ್ತು ಈ ಪುರಾತನ ಪರಿಕಲ್ಪನೆಯು ಯೋಗದ ರೂಪದಲ್ಲಿ ಪ್ರಪಂಚದಾದ್ಯಂತ ಸ್ವೀಕಾರವನ್ನು ಪಡೆಯುತ್ತಿದೆ ಎಂದು ಹೇಳಿದರು. ಇಂದು 150ಕ್ಕೂ ಹೆಚ್ಚು ದೇಶಗಳಲ್ಲಿ ಆಯುರ್ವೇದ ದಿನವನ್ನು ಆಚರಿಸಲಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶ್ರೀ ಮೋದಿ, ಇದು ಆಯುರ್ವೇದದ ಬಗ್ಗೆ ಹೆಚ್ಚುತ್ತಿರುವ ಆಕರ್ಷಣೆ ಮತ್ತು ಪ್ರಾಚೀನ ಕಾಲದಿಂದಲೂ ಜಗತ್ತಿಗೆ ಭಾರತ ನೀಡಿದ ಕೊಡುಗೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಳೆದ ದಶಕವು ದೇಶದಲ್ಲಿ ಆಯುರ್ವೇದದ ಜ್ಞಾನವನ್ನು ಆಧುನಿಕ ಔಷಧದೊಂದಿಗೆ ಸಂಯೋಜಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅಖಿಲ ಭಾರತ ಆಯುರ್ವೇದ ಸಂಸ್ಥೆ ಈ ಅಧ್ಯಾಯದ ಕೇಂದ್ರ ಬಿಂದುವಾಗಿದೆ ಎಂದರು. ಏಳು ವರ್ಷಗಳ ಹಿಂದೆ ಆಯುರ್ವೇದ ದಿನದಂದು ಸಂಸ್ಥೆಯ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಸೌಭಾಗ್ಯ ದೊರೆತಿತ್ತು, ಇಂದು ಭಗವಾನ್ ಧನ್ವಂತರಿಯವರ ಆಶೀರ್ವಾದದೊಂದಿಗೆ ಸಂಸ್ಥೆಯ ಎರಡನೇ ಹಂತವನ್ನು ಉದ್ಘಾಟಿಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು. ಈ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಪಂಚಕರ್ಮದಂತಹ ಪುರಾತನ ತಂತ್ರಗಳನ್ನು ಸಂಯೋಜಿಸಿ ಆಯುರ್ವೇದ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲೂ ಮುಂದುವರಿದ ಸಂಶೋಧನಾ ಅಧ್ಯಯನ ನಡೆಸಬಹುದಾಗಿದೆ ಎಂದರು. ಈ ಪ್ರಗತಿಗಾಗಿ ದೇಶವಾಸಿಗಳನ್ನು ಶ್ರೀ ಮೋದಿ ಅಭಿನಂದಿಸಿದರು.

ರಾಷ್ಟ್ರದ ಪ್ರಗತಿಯು ಅದರ ನಾಗರಿಕರ ಆರೋಗ್ಯಕ್ಕೆ ನೇರವಾಗಿ ಅನುಪಾತದಲ್ಲಿರುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು ನಾಗರಿಕರ ಆರೋಗ್ಯದ ಬಗ್ಗೆ ಸರ್ಕಾರದ ಆದ್ಯತೆಯನ್ನು ಎತ್ತಿ ತೋರಿಸಿದರು ಮತ್ತು ಆರೋಗ್ಯ ನೀತಿಯ ಐದು ಸ್ತಂಭಗಳನ್ನು ಪಟ್ಟಿ ಮಾಡಿದರು. ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆ, ರೋಗಗಳ ಆರಂಭಿಕ ಪತ್ತೆ, ಉಚಿತ ಮತ್ತು ಕಡಿಮೆ ವೆಚ್ಚದ ಚಿಕಿತ್ಸೆ ಮತ್ತು ಔಷಧಗಳು, ಸಣ್ಣ ಪಟ್ಟಣಗಳಲ್ಲಿ ವೈದ್ಯರ ಲಭ್ಯತೆ ಮತ್ತು ಅಂತಿಮವಾಗಿ ಆರೋಗ್ಯ ಸೇವೆಗಳಲ್ಲಿ ತಂತ್ರಜ್ಞಾನದ ವಿಸ್ತರಣೆ ಎಂದು ಅವರು ಐದು ಆಧಾರಸ್ತಂಭಗಳನ್ನು ವಿವರಿಸಿದರು. "ಭಾರತವು ಆರೋಗ್ಯ ಕ್ಷೇತ್ರವನ್ನು ಸಮಗ್ರ ಆರೋಗ್ಯವಾಗಿ ನೋಡುತ್ತಿದೆ" ಎಂದು ಹೇಳಿದ ಶ್ರೀ ಮೋದಿ, ಇಂದಿನ ಯೋಜನೆಗಳು ಈ ಐದು ಸ್ತಂಭಗಳ ಒಂದು ನೋಟವನ್ನು ನೀಡುತ್ತವೆ ಎಂದು ಹೇಳಿದರು. 13,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಆಯುಷ್ ಆರೋಗ್ಯ ಯೋಜನೆಯಡಿ 4 ಶ್ರೇಷ್ಠತಾ ಕೇಂದ್ರಗಳ ನಿರ್ಮಾಣ, ಡ್ರೋನ್‌ ಗಳ ಬಳಕೆಯ ಮೂಲಕ ಆರೋಗ್ಯ ಸೇವೆಗಳ ವಿಸ್ತರಣೆ, ಋಷಿಕೇಶದ ಏಮ್ಸ್‌ ನಲ್ಲಿ ಹೆಲಿಕಾಪ್ಟರ್ ಸೇವೆ, ಏಮ್ಸ್ ನವದೆಹಲಿ ಮತ್ತು ಏಮ್ಸ್ ಬಿಲಾಸಪುರದಲ್ಲಿ ಹೊಸ ಮೂಲಸೌಕರ್ಯ, ದೇಶದ ಇತರ ಐದು ಏಮ್ಸ್‌ ಗಳಲ್ಲಿ ಸೇವೆಗಳ ವಿಸ್ತರಣೆ, ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ನರ್ಸಿಂಗ್ ಕಾಲೇಜುಗಳಿಗೆ ಶಿಲಾನ್ಯಾಸ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಯೋಜನೆಗಳನ್ನು ಉಲ್ಲೇಖಿಸಿದರು. ಕಾರ್ಮಿಕರ ಚಿಕಿತ್ಸೆಗಾಗಿ ಹಲವಾರು ಆಸ್ಪತ್ರೆಗಳನ್ನು ಸ್ಥಾಪಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ, ಇವು ಕಾರ್ಮಿಕರಿಗೆ ಚಿಕಿತ್ಸಾ ಕೇಂದ್ರಗಳಾಗಲಿವೆ ಎಂದರು. ಸುಧಾರಿತ ಔಷಧಿಗಳು ಮತ್ತು ಉತ್ತಮ ಗುಣಮಟ್ಟದ ಸ್ಟೆಂಟ್‌ ಗಳು ಮತ್ತು ಇಂಪ್ಲಾಂಟ್‌ ಗಳನ್ನು ತಯಾರಿಸಲು ಮತ್ತು ಭಾರತದ ಬೆಳವಣಿಗೆಗೆ ಚಾಲನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಫಾರ್ಮಾ ಘಟಕಗಳ ಉದ್ಘಾಟನೆಯನ್ನು ಅವರು ಪ್ರಸ್ತಾಪಿಸಿದರು.

 

ನಮ್ಮಲ್ಲಿ ಹೆಚ್ಚಿನವರು ಅನಾರೋಗ್ಯ ಎಂದರೆ ಇಡೀ ಕುಟುಂಬದ ಮೇಲೆ ಸಿಡಿಲಿನ ಆಘಾತದಂತಹ ವಾತಾವರಣದಿಂದ ಬಂದವರು ಮತ್ತು ವಿಶೇಷವಾಗಿ ಬಡ ಕುಟುಂಬದಲ್ಲಿ ಯಾರಾದರೂ ಗಂಭೀರ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಅದು ಕುಟುಂಬದ ಪ್ರತಿಯೊಬ್ಬ ಸದಸ್ಯನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಹೇಳಿದರು. ಜನರು ತಮ್ಮ ಮನೆ, ಜಮೀನು, ಆಭರಣ ಎಲ್ಲವನ್ನೂ ಚಿಕಿತ್ಸೆಗಾಗಿ ಮಾರುವ ಮತ್ತು ಅವರ ಜೇಬಿನಿಂದ ಅಷ್ಟು ದೊಡ್ಡ ವೆಚ್ಚವನ್ನು ಭರಿಸಲಾಗದ ಸಮಯವಿತ್ತು, ಬಡ ಜನರು ಆರೋಗ್ಯ ಮತ್ತು ಕುಟುಂಬದ ಇತರ ಆದ್ಯತೆಗಳ ನಡುವೆ ಆಯ್ಕೆ ಮಾಡಬೇಕಾಗಿತ್ತು. ಬಡವರ ಹತಾಶೆಯನ್ನು ಹೋಗಲಾಡಿಸಲು ನಮ್ಮ ಸರ್ಕಾರ ಆಯುಷ್ಮಾನ್  ಭಾರತ್ ಯೋಜನೆಯನ್ನು ಆರಂಭಿಸಿದ್ದು, ಇದರ ಅಡಿಯಲ್ಲಿ ಬಡವರ 5 ಲಕ್ಷ ರೂ.ವರೆಗಿನ ಆಸ್ಪತ್ರೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ದೇಶದ ಸುಮಾರು 4 ಕೋಟಿ ಬಡವರು ಆಯುಷ್ಮಾನ್ ಯೋಜನೆಯ ಪ್ರಯೋಜನ ಪಡೆದಿದ್ದು, ಒಂದು ರೂಪಾಯಿ ಖರ್ಚಿಲ್ಲದೆ ಚಿಕಿತ್ಸೆ ಪಡೆದಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ದೇಶದ ವಿವಿಧ ರಾಜ್ಯಗಳಲ್ಲಿರುವ ಆಯುಷ್ಮಾನ್ ಯೋಜನೆಯ ಫಲಾನುಭವಿಗಳನ್ನು ಭೇಟಿಯಾದಾಗ, ಈ ಯೋಜನೆಯು ವೈದ್ಯರಾಗಿರಲಿ ಅಥವಾ ಅರೆವೈದ್ಯಕೀಯ ಸಿಬ್ಬಂದಿಯಾಗಿರಲಿ, ಅದಕ್ಕೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ವರದಾನವಾಗಿದೆ ಎಂಬ ತೃಪ್ತಿ ಇದೆ ಎಂದು ಶ್ರೀ ಮೋದಿ ಹೇಳಿದರು.

ಆಯುಷ್ಮಾನ್ ಯೋಜನೆಯ ವಿಸ್ತರಣೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀ ಮೋದಿ, ಪ್ರತಿಯೊಬ್ಬ ವಯೋವೃದ್ಧರು ಅದಕ್ಕಾಗಿ ಕಾಯುತ್ತಿದ್ದರು. ಮೂರನೇ ಬಾರಿಗೆ ಆಯ್ಕೆಯಾದರೆ 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯೋವೃದ್ಧರನ್ನು ಆಯುಷ್ಮಾನ್ ಯೋಜನೆಯ ವ್ಯಾಪ್ತಿಗೆ ತರುವ ಚುನಾವಣಾ ಗ್ಯಾರಂಟಿಯು ಈಡೇರಿದೆ ಎಂದು ಹೇಳಿದರು. ದೇಶದಲ್ಲಿ 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವೃದ್ಧರಿಗೂ ಆಯುಷ್ಮಾನ್ ವಯ ವಂದನಾ ಕಾರ್ಡ್ ಮೂಲಕ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ದೊರೆಯಲಿದೆ ಎಂದರು. ಈ ಕಾರ್ಡ್ ಸಾರ್ವತ್ರಿಕವಾಗಿದೆ ಮತ್ತು ಬಡವರಾಗಿರಲಿ, ಮಧ್ಯಮ ವರ್ಗದವರಾಗಿರಲಿ ಅಥವಾ ಮೇಲ್ವರ್ಗದವರಾಗಿರಲಿ ಆದಾಯದ ಮೇಲೆ ಯಾವುದೇ ಮಿತಿಯಿಲ್ಲ ಎಂದು ಶ್ರೀ ಮೋದಿ ಹೇಳಿದರು. ಈ ಯೋಜನೆಯ ಸಾರ್ವತ್ರಿಕ ಅನ್ವಯವು ಒಂದು ಮೈಲಿಗಲ್ಲಾಗಿದೆ ಎಂದ ಶ್ರೀ ಮೋದಿಯವರು, ಮನೆಯ ಹಿರಿಯರಿಗೆ ಆಯುಷ್ಮಾನ್ ವಯ ವಂದನಾ ಕಾರ್ಡ್ ಅನ್ನು ಹೊಂದುವ ಮೂಲಕ, ಜೇಬಿನ ವೆಚ್ಚಗಳು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ ಎಂದು ಹೇಳಿದರು. ಈ ಯೋಜನೆಗಾಗಿ ಎಲ್ಲಾ ದೇಶವಾಸಿಗಳನ್ನು ಅವರು ಅಭಿನಂದಿಸಿದರು ಮತ್ತು ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿಲ್ಲ ಎಂದು ಹೇಳಿದರು.

ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಸರ್ಕಾರದ ಆದ್ಯತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಅದು ಬಡವರಾಗಿರಲಿ ಅಥವಾ ಮಧ್ಯಮ ವರ್ಗದವರಾಗಿರಲಿ, ದೇಶಾದ್ಯಂತ 14,000 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಪ್ರಾರಂಭದ ಬಗ್ಗೆ ಪ್ರಸ್ತಾಪಿಸಿದರು. ಅಲ್ಲಿ ಔಷಧಗಳು ಶೇಕಡಾ 80 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಕೈಗೆಟಕುವ ದರದಲ್ಲಿ ಔಷಧಿಗಳು ಲಭ್ಯವಿರುವುದರಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ 30 ಸಾವಿರ ಕೋಟಿ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಿವೆ ಎಂದರು. ಸ್ಟೆಂಟ್‌ ಗಳು ಮತ್ತು ಮಂಡಿಚಿಪ್ಪು ಅಳವಡಿಕೆಯಂತಹ ಸಾಧನಗಳ ಬೆಲೆ ಇಳಿಕೆಯಿಂದಾಗಿ ಸಾಮಾನ್ಯ ನಾಗರಿಕರು 80,000 ಕೋಟಿ ರೂ.ಗೂ ಹೆಚ್ಚು ನಷ್ಟದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು. ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಜೀವ ಉಳಿಸುವ ಉಚಿತ ಡಯಾಲಿಸಿಸ್ ಯೋಜನೆ ಮತ್ತು ಮಿಷನ್ ಇಂದ್ರಧನುಷ್ ಅಭಿಯಾನವನ್ನು ಅವರು ಪ್ರಸ್ತಾಪಿಸಿದರು. ದೇಶದ ಬಡ ಮತ್ತು ಮಧ್ಯಮ ವರ್ಗದ ಜನರು ದುಬಾರಿ ಚಿಕಿತ್ಸೆಯ ಹೊರೆಯಿಂದ ಮುಕ್ತರಾಗುವವರೆಗೂ ತಾವು ವಿಶ್ರಮಿಸುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಿದರು.

 

ರೋಗಗಳಿಗೆ ಸಂಬಂಧಿಸಿದ ಅಪಾಯಗಳು ಮತ್ತು ಅನಾನುಕೂಲತೆಗಳನ್ನು ಕಡಿಮೆ ಮಾಡುವಲ್ಲಿ ಸಕಾಲಿಕ ರೋಗನಿರ್ಣಯದ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ದೇಶಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಈ ಆರೋಗ್ಯ ಮಂದಿರಗಳು ಕೋಟ್ಯಂತರ ನಾಗರಿಕರಿಗೆ ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಸುಲಭವಾಗಿ ತಪಾಸಣೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತವೆ ಎಂದು ಅವರು ಹೇಳಿದರು. ಸಕಾಲಿಕ ರೋಗನಿರ್ಣಯವು ತ್ವರಿತ ಚಿಕಿತ್ಸೆಗೆ ಕಾರಣವಾಗುತ್ತದೆ, ಇದು ಅಂತಿಮವಾಗಿ ರೋಗಿಗಳ ವೆಚ್ಚವನ್ನು ಉಳಿಸುತ್ತದೆ ಎಂದು ಅವರು ಹೇಳಿದರು. ಇ-ಸಂಜೀವಿನಿ ಯೋಜನೆಯಡಿಯಲ್ಲಿ ಆರೋಗ್ಯವನ್ನು ಸುಧಾರಿಸಲು ಮತ್ತು ನಾಗರಿಕರ ಹಣವನ್ನು ಉಳಿಸಲು ಸರ್ಕಾರವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು, ಇದರ ಅಡಿಯಲ್ಲಿ 30 ಕೋಟಿಗೂ ಹೆಚ್ಚು ಜನರು ಆನ್‌ಲೈನ್‌ ನಲ್ಲಿ ವೈದ್ಯರನ್ನು ಸಂಪರ್ಕಿಸಿದ್ದಾರೆ. ವೈದ್ಯರೊಂದಿಗೆ ಉಚಿತ ಮತ್ತು ನಿಖರವಾದ ಸಮಾಲೋಚನೆಯು ಆರೋಗ್ಯ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ತಾಂತ್ರಿಕವಾಗಿ ಸುಧಾರಿತ ಇಂಟರ್ಫೇಸ್ ಅನ್ನು ಭಾರತಕ್ಕೆ ಒದಗಿಸುವ ಯು-ವಿನ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದಾಗಿ ಶ್ರೀ ಮೋದಿ ಘೋಷಿಸಿದರು. ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಕೋ-ವಿನ್ ಪ್ಲಾಟ್‌ಫಾರ್ಮ್‌ ನ ಯಶಸ್ಸನ್ನು ಜಗತ್ತು ನೋಡಿದೆ ಮತ್ತು ಯುಪಿಐ ಪಾವತಿ ವ್ಯವಸ್ಥೆಯ ಯಶಸ್ಸು ಜಾಗತಿಕ ಕಥೆಯಾಗಿದೆ ಎಂದು ಅವರು ಹೇಳಿದರು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಈ ಯಶಸ್ಸನ್ನು ಪುನರಾವರ್ತಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಅವರು ಹೇಳಿದರು.

ಕಳೆದ ಆರರಿಂದ ಏಳು ದಶಕಗಳಲ್ಲಿನ ಸೀಮಿತ ಸಾಧನೆಗಳೊಂದಿಗೆ ಹೋಲಿಸಿ, ಕಳೆದ ದಶಕದಲ್ಲಿ ಭಾರತದ ಆರೋಗ್ಯ ಕ್ಷೇತ್ರದಲ್ಲಿನ ಅಭೂತಪೂರ್ವ ಪ್ರಗತಿಯನ್ನು ಎತ್ತಿ ಹಿಡಿದ ಪ್ರಧಾನಮಂತ್ರಿಯವರು, “ಕಳೆದ 10 ವರ್ಷಗಳಲ್ಲಿ ನಾವು ದಾಖಲೆ ಸಂಖ್ಯೆಯ ಹೊಸ ಏಮ್ಸ್‌ ಮತ್ತು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದೇವೆ ಎಂದರು. ಇಂದಿನ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಿ, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಆಸ್ಪತ್ರೆಗಳನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು. ಕರ್ನಾಟಕದ ನರಸಾಪುರ ಮತ್ತು ಬೊಮ್ಮಸಂದ್ರ, ಮಧ್ಯಪ್ರದೇಶದ ಪಿತಂಪುರ, ಆಂಧ್ರಪ್ರದೇಶದ ಅಚಿತ್ಪುರಂ ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಶಂಕುಸ್ಥಾಪನೆಯನ್ನು ಅವರು ಪ್ರಸ್ತಾಪಿಸಿದರು. ಇದಲ್ಲದೆ, ಉತ್ತರ ಪ್ರದೇಶದ ಮೀರತ್‌ ನಲ್ಲಿ ಹೊಸ ಇ ಎಸ್‌ ಐ ಸಿ ಆಸ್ಪತ್ರೆಯ ಕೆಲಸ ಪ್ರಾರಂಭವಾಗಿದೆ ಮತ್ತು ಇಂದೋರ್‌ ನಲ್ಲಿ ಹೊಸ ಆಸ್ಪತ್ರೆಯನ್ನು ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು. ಹೆಚ್ಚುತ್ತಿರುವ ಆಸ್ಪತ್ರೆಗಳ ಸಂಖ್ಯೆಯು ವೈದ್ಯಕೀಯ ಸೀಟುಗಳ ಪ್ರಮಾಣಾನುಗುಣ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಯಾವುದೇ ಬಡ ಮಕ್ಕಳ ವೈದ್ಯನಾಗುವ ಕನಸು ಭಗ್ನವಾಗುವುದಿಲ್ಲ ಮತ್ತು ಭಾರತದಲ್ಲಿ ಆಯ್ಕೆಗಳ ಕೊರತೆಯಿಂದ ಯಾವುದೇ ಮಧ್ಯಮ ವರ್ಗದ ವಿದ್ಯಾರ್ಥಿಗಳು ವಿದೇಶದಲ್ಲಿ ಓದುವುದು ಅನಿವಾರ್ಯವಾಗುವುದಿಲ್ಲ ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ ಸುಮಾರು 1 ಲಕ್ಷ ಹೊಸ ಎಂಬಿಬಿಎಸ್ ಮತ್ತು ಎಂಡಿ ಸೀಟುಗಳನ್ನು ಸೇರಿಸಲಾಗಿದೆ ಎಂದ ಅವರು ಮುಂದಿನ ಐದು ವರ್ಷಗಳಲ್ಲಿ 75,000 ಹೆಚ್ಚುವರಿ ಸೀಟುಗಳನ್ನು ಸೇರಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.

7.5 ಲಕ್ಷ ನೋಂದಾಯಿತ ಆಯುಷ್ ವೈದ್ಯರು ಈಗಾಗಲೇ ದೇಶದ ಆರೋಗ್ಯ ರಕ್ಷಣೆಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಅವರು ಒತ್ತಿ ಹೇಳಿದರು ಮತ್ತು ಭಾರತದಲ್ಲಿ ವೈದ್ಯಕೀಯ ಮತ್ತು ಕ್ಷೇಮ ಪ್ರವಾಸೋದ್ಯಮಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸಿದರು. ತಡೆಗಟ್ಟುವ ಹೃದ್ರೋಗ, ಆಯುರ್ವೇದ ಮೂಳೆಚಿಕಿತ್ಸೆ ಮತ್ತು ಭಾರತ ಮತ್ತು ವಿದೇಶಗಳಲ್ಲಿ ಆಯುರ್ವೇದ ಪುನರ್ವಸತಿ ಕೇಂದ್ರಗಳಂತಹ ಕ್ಷೇತ್ರಗಳ ವಿಸ್ತರಣೆಗೆ ಯುವಕರು ಮತ್ತು ಆಯುಷ್ ವೈದ್ಯರು ಸಿದ್ಧರಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಆಯುಷ್ ವೈದ್ಯರಿಗೆ ಅಪಾರ ಅವಕಾಶಗಳು ಸೃಷ್ಟಿಯಾಗುತ್ತಿದ್ದು, ನಮ್ಮ ಯುವಜನರು ಈ ಅವಕಾಶಗಳ ಮೂಲಕ ಮುನ್ನಡೆಯುವುದಲ್ಲದೆ ಮನುಕುಲಕ್ಕೆ ಮಹತ್ತರವಾದ ಸೇವೆಯನ್ನು ಸಲ್ಲಿಸುತ್ತಾರೆ ಎಂದರು.

21ನೇ ಶತಮಾನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಕ್ಷಿಪ್ರ ಪ್ರಗತಿಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಈ ಹಿಂದೆ ಗುಣಪಡಿಸಲಾಗದ ಕಾಯಿಲೆಗಳ ಚಿಕಿತ್ಸೆಯಲ್ಲಿ ಪ್ರಗತಿಗಳು ಕಂಡುಬಂದಿವೆ ಎಂದರು. ಜಗತ್ತು ಆರೋಗ್ಯ ಮತ್ತು ಚಿಕಿತ್ಸೆಗೆ ಪ್ರಾಮುಖ್ಯತೆ ನೀಡುವಂತೆ, ಭಾರತವು ಈ ಕ್ಷೇತ್ರದಲ್ಲಿ ಸಾವಿರಾರು ವರ್ಷಗಳ ಜ್ಞಾನವನ್ನು ಹೊಂದಿದೆ ಎಂದು ಅವರು ಹೇಳಿದರು. ಆಯುರ್ವೇದ ತತ್ವಗಳನ್ನು ಬಳಸುವ ವ್ಯಕ್ತಿಗಳಿಗೆ ಆದರ್ಶ ಜೀವನಶೈಲಿ ಮತ್ತು ಅಪಾಯದ ವಿಶ್ಲೇಷಣೆಯನ್ನು ರಚಿಸುವ ಗುರಿಯನ್ನು ಹೊಂದಿರುವ ಪ್ರಕೃತಿ ಪರೀಕ್ಷಣ್ ಅಭಿಯಾನವನ್ನು ಪ್ರಾರಂಭಿಸುವುದಾಗಿ ಪ್ರಧಾನಿ ಘೋಷಿಸಿದರು. ಈ ಉಪಕ್ರಮವು ಜಾಗತಿಕವಾಗಿ ಆರೋಗ್ಯ ಕ್ಷೇತ್ರವನ್ನು ಪುನರ್ ವ್ಯಾಖ್ಯಾನಿಸಬಹುದು ಮತ್ತು ಇಡೀ ಜಗತ್ತಿಗೆ ಹೊಸ ವಿಧಾನವನ್ನು ಒದಗಿಸಬಹುದು ಎಂದು ಅವರು ಒತ್ತಿ ಹೇಳಿದರು.‌

 

ಅಶ್ವಗಂಧ, ಅರಿಶಿನ ಮತ್ತು ಕರಿಮೆಣಸಿನಂಥ ಸಾಂಪ್ರದಾಯಿಕ ಗಿಡಮೂಲಿಕೆಗಳನ್ನು ಹೆಚ್ಚಿನ ಪ್ರಭಾವದ ವೈಜ್ಞಾನಿಕ ಅಧ್ಯಯನಗಳ ಮೂಲಕ ಮೌಲ್ಯೀಕರಿಸುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. "ನಮ್ಮ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳ ಪ್ರಯೋಗಾಲಯ ಮೌಲ್ಯೀಕರಣವು ಈ ಗಿಡಮೂಲಿಕೆಗಳ ಮೌಲ್ಯವನ್ನು ಹೆಚ್ಚಿಸುವುದಲ್ಲದೆ ಗಮನಾರ್ಹ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ" ಎಂದು ಅವರು ಹೇಳಿದರು, ಈ ದಶಕದ ಅಂತ್ಯದ ವೇಳೆಗೆ 2.5 ಬಿಲಿಯನ್ ಡಾಲರ್‌ ಗೆ ತಲುಪುವ ನಿರೀಕ್ಷೆಯಿರುವ ಅಶ್ವಗಂಧದ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಅವರು ಉಲ್ಲೇಖಿಸಿದರು.

ಆಯುಷ್‌ ನ ಯಶಸ್ಸು ಆರೋಗ್ಯ ಕ್ಷೇತ್ರವನ್ನು ಮಾತ್ರವಲ್ಲದೆ ಆರ್ಥಿಕತೆಯನ್ನೂ ಪರಿವರ್ತಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಆಯುಷ್ ಉತ್ಪಾದನಾ ವಲಯವು 2014 ರಲ್ಲಿದ್ದ $ 3 ಬಿಲಿಯನ್‌ ನಿಂದ ಇಂದು ಸುಮಾರು $ 24 ಬಿಲಿಯನ್‌ ಗೆ ಬೆಳೆದಿದೆ, ಕೇವಲ 10 ವರ್ಷಗಳಲ್ಲಿ 8 ಪಟ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಈಗ 900ಕ್ಕೂ ಹೆಚ್ಚು ಆಯುಷ್ ಸ್ಟಾರ್ಟ್ ಅಪ್ ಗಳು ಕಾರ್ಯಾನಿರ್ವಹಿಸುತ್ತಿವೆ, ಇದರಿಂದ ಯುವಜನತೆಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಹೇಳಿದರು. 150 ದೇಶಗಳಿಗೆ ಆಯುಷ್ ಉತ್ಪನ್ನಗಳ ಜಾಗತಿಕ ರಫ್ತು, ಸ್ಥಳೀಯ ಗಿಡಮೂಲಿಕೆಗಳು ಮತ್ತು ಸೂಪರ್‌ ಫುಡ್‌ ಗಳನ್ನು ಜಾಗತಿಕ ಸರಕುಗಳಾಗಿ ಪರಿವರ್ತಿಸುವ ಮೂಲಕ ಭಾರತೀಯ ರೈತರಿಗೆ ಪ್ರಯೋಜನ ನೀಡುತ್ತಿರುವುದನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಗಂಗಾ ನದಿಯ ದಡದಲ್ಲಿ ಸಹಜ ಕೃಷಿ ಮತ್ತು ಗಿಡಮೂಲಿಕೆ ಕೃಷಿಯನ್ನು ಉತ್ತೇಜಿಸುವ ನಮಾಮಿ ಗಂಗೆ ಯೋಜನೆಯಂತಹ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು.

ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಭಾರತದ ಬದ್ಧತೆಯನ್ನು ಪ್ರಸ್ತಾಪಿಸಿದ ಮೋದಿ, ಇದು ಭಾರತದ ರಾಷ್ಟ್ರೀಯ ಪಾತ್ರ ಮತ್ತು ಸಾಮಾಜಿಕ ರಚನೆಯ ಆತ್ಮ ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ ಸರ್ಕಾರವು ರಾಷ್ಟ್ರದ ನೀತಿಗಳನ್ನು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ತತ್ವದೊಂದಿಗೆ ಜೋಡಿಸಿದೆ ಎಂದು ಅವರು ಒತ್ತಿ ಹೇಳಿದರು. "ಮುಂದಿನ 25 ವರ್ಷಗಳಲ್ಲಿ, ಈ ಪ್ರಯತ್ನಗಳು ಅಭಿವೃದ್ಧಿ ಹೊಂದಿದ ಮತ್ತು ಆರೋಗ್ಯಕರ ಭಾರತಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತವೆ" ಎಂದು ಶ್ರೀ ಮೋದಿ ತಮ್ಮ ಮಾತು ಮುಗಿಸಿದರು.

 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜೆ ಪಿ ನಡ್ಡಾ ಮತ್ತು ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ ಮನ್ಸುಖ್ ಮಾಂಡವಿಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಮಹತ್ವದ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಗೆ ಪ್ರಮುಖ ಸೇರ್ಪಡೆಯಾಗಿ, 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆಯ ವಿಸ್ತರಣೆಯನ್ನು ಪ್ರಧಾನಮಂತ್ರಿಯವರು ಪ್ರಾರಂಭಿಸಿದರು. ಇದು ಎಲ್ಲಾ ಹಿರಿಯ ನಾಗರಿಕರಿಗೆ ಅವರ ಆದಾಯವನ್ನು ಲೆಕ್ಕಿಸದೆ ಆರೋಗ್ಯ ರಕ್ಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ.

ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರಧಾನಿಯವರ ನಿರಂತರ ಪ್ರಯತ್ನವಾಗಿದೆ. ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಪ್ರಧಾನ ಮಂತ್ರಿಯವರು ಹಲವಾರು ಆರೋಗ್ಯ ಸಂಸ್ಥೆಗಳ ಉದ್ಘಾಟನೆ ಮತ್ತು ಅಡಿಪಾಯ ನೆರವೇರಿಸಿದರು.

ಪ್ರಧಾನಮಂತ್ರಿಯವರು ಭಾರತದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ II ನೇ ಹಂತವನ್ನು ಉದ್ಘಾಟಿಸಿದರು. ಇದು ಪಂಚಕರ್ಮ ಆಸ್ಪತ್ರೆ, ಔಷಧ ತಯಾರಿಕೆಗೆ ಆಯುರ್ವೇದ ಔಷಧಾಲಯ, ಕ್ರೀಡಾ ಔಷಧ ಘಟಕ, ಕೇಂದ್ರ ಗ್ರಂಥಾಲಯ, ಐಟಿ ಮತ್ತು ಸ್ಟಾರ್ಟ್‌ಅಪ್‌ ಗಳ ಇನ್ಕುಬೇಷನ್‌ ಕೇಂದ್ರ ಮತ್ತು 500 ಆಸನಗಳ ಸಭಾಂಗಣವನ್ನು ಒಳಗೊಂಡಿದೆ. ಅವರು ಮಧ್ಯಪ್ರದೇಶದ ಮಂದಸೌರ್, ನೀಮುಚ್ ಮತ್ತು ಸಿಯೋನಿಯಲ್ಲಿ ಮೂರು ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು. ಇದಲ್ಲದೆ, ಅವರು ಹಿಮಾಚಲ ಪ್ರದೇಶದ ಬಿಲಾಸಪುರ, ಪಶ್ಚಿಮ ಬಂಗಾಳದ ಕಲ್ಯಾಣಿ, ಬಿಹಾರದ ಪಾಟ್ನಾ, ಉತ್ತರ ಪ್ರದೇಶದ ಗೋರಖಪುರ, ಮಧ್ಯಪ್ರದೇಶದ ಭೋಪಾಲ್, ಅಸ್ಸಾಂನ ಗುವಾಹಟಿ ಮತ್ತು ನವದೆಹಲಿಯ ಏಮ್ಸ್‌ಗಳಲ್ಲಿ ಜನೌಷಧಿ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯ ಮತ್ತು ಸೇವಾ ವಿಸ್ತರಣೆಗಳನ್ನು ಉದ್ಘಾಟಿಸಿದರು. ಛತ್ತೀಸಗಢದ ಬಿಲಾಸಪುರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಮತ್ತು ಒಡಿಶಾದ ಬರ್ಗಢ್‌ ನಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಅನ್ನು ಪ್ರಧಾನಿಯವರು ಉದ್ಘಾಟಿಸಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ-ಎ ಬಿ ಎಚ್‌ ಐ ಎಂ) ಅಡಿಯಲ್ಲಿ ಮಧ್ಯಪ್ರದೇಶದ ಶಿವಪುರಿ, ರತ್ಲಾಮ್, ಖಾಂಡ್ವಾ, ರಾಜಗಡ್ ಮತ್ತು ಮಂದಸೌರ್‌ ನಲ್ಲಿ ಐದು ನರ್ಸಿಂಗ್ ಕಾಲೇಜುಗಳನ್ನು, ಹಿಮಾಚಲ ಪ್ರದೇಶ, ಕರ್ನಾಟಕ, ಮಣಿಪುರ, ತಮಿಳುನಾಡು ಮತ್ತು ರಾಜಸ್ಥಾನದಲ್ಲಿ 21 ಕ್ರಿಟಿಕಲ್ ಕೇರ್ ಬ್ಲಾಕ್‌ ಗಳನ್ನು ಪ್ರಧಾನಿ ಉದ್ಘಾಟಿಸಿದರು ಮತ್ತು ನವದೆಹಲಿಯ ಏಮ್ಸ್‌ ಮತ್ತ ಹಿಮಾಚಲ ಪ್ರದೇಶದ ಬಿಲಾಸಪುರದಲ್ಲಿ ಅನೇಕ ಸೌಲಭ್ಯಗಳು ಮತ್ತು ಸೇವಾ ವಿಸ್ತರಣೆಗಳಿಗೆ ಅಡಿಪಾಯ ಹಾಕಿದರು.

 

ಪ್ರಧಾನಿಯವರು ಮಧ್ಯಪ್ರದೇಶದ ಇಂದೋರ್‌ನಲ್ಲಿ ಇ ಎಸ್‌ ಐ ಸಿ ಆಸ್ಪತ್ರೆಯನ್ನು ಉದ್ಘಾಟಿಸಿದರು ಮತ್ತು ಹರಿಯಾಣದ ಫರಿದಾಬಾದ್, ಕರ್ನಾಟಕದ ಬೊಮ್ಮಸಂದ್ರ ಮತ್ತು ನರಸಾಪುರ, ಮಧ್ಯಪ್ರದೇಶದ ಇಂದೋರ್, ಉತ್ತರ ಪ್ರದೇಶದ ಮೀರತ್ ಮತ್ತು ಆಂಧ್ರಪ್ರದೇಶದ ಅಚ್ಯುತಪುರಂನಲ್ಲಿ ಇ ಎಸ್‌ ಐ ಸಿ ಆಸ್ಪತ್ರೆಗಳಿಗೆ ಶಂಕುಸ್ಥಾಪನೆ ಮಾಡಿದರು. ಈ ಯೋಜನೆಗಳಿಂದ ಸುಮಾರು 55 ಲಕ್ಷ ಇ ಎಸ್‌ ಐ ಫಲಾನುಭವಿಗಳು ಆರೋಗ್ಯ ರಕ್ಷಣೆಯ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಪ್ರಧಾನಮಂತ್ರಿಯವರು ವಿವಿಧ ಕ್ಷೇತ್ರಗಳಲ್ಲಿ ಸೇವೆಯ ವಿತರಣೆಯನ್ನು ಹೆಚ್ಚಿಸಲು ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವ ಪ್ರಬಲ ಪ್ರತಿಪಾದಕರಾಗಿದ್ದಾರೆ. ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿಸಲು ಸೇವಾ ವಿತರಣೆಯನ್ನು ಹೆಚ್ಚಿಸಲು ಡ್ರೋನ್ ತಂತ್ರಜ್ಞಾನದ ನವೀನ ಬಳಕೆಯಲ್ಲಿ, 11 ತೃತೀಯ ಆರೋಗ್ಯ ಸಂಸ್ಥೆಗಳಲ್ಲಿ ಡ್ರೋನ್ ಸೇವೆಗಳನ್ನು ಪ್ರಧಾನಮಂತ್ರಿಯವರು ಪ್ರಾರಂಭಿಸಿದರು. ಅವುಗಳೆಂದರೆ ಉತ್ತರಾಖಂಡದ ಏಮ್ಸ್‌ ಋಷಿಕೇಶ್, ತೆಲಂಗಾಣದ ಏಮ್ಸ್‌ಬೀಬಿನಗರ, ಅಸ್ಸಾಂನ ಏಮ್ಸ್‌ ಗುವಾಹಟಿ, ಮಧ್ಯಪ್ರದೇಶದ ಏಮ್ಸ್‌ ಭೋಪಾಲ್, ರಾಜಸ್ಥಾನದ ಏಮ್ಸ್‌ ಜೋಧ್‌ಪುರ, ಬಿಹಾರದ ಏಮ್ಸ್‌ ಪಾಟ್ನಾ, ಹಿಮಾಚಲ ಪ್ರದೇಶದ ಏಮ್ಸ್‌ ಬಿಲಾಸ್‌ಪುರ್, ಉತ್ತರಪ್ರದೇಶದ ಏಮ್ಸ್‌ ರಾಯ್ ಬರೇಲಿ, ಆಂಧ್ರಪ್ರದೇಶದ ಏಮ್ಸ್‌ ಮಂಗಳಗಿರಿ ಮತ್ತು ಮಣಿಪುರದ ರಿಮ್ಸ್ ಇಂಫಾಲ್.  ಅವರು ಏಮ್ಸ್‌ ಋಷಿಕೇಶದಿಂದ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಗಳನ್ನು ಪ್ರಾರಂಭಿಸಿದರು. ಇದು ತ್ವರಿತ ವೈದ್ಯಕೀಯ ಸೇವೆಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ಯು-ವಿನ್‌ ಪೋರ್ಟಲ್ ಗೆ ಚಾಲನೆ ನೀಡಿದರು. ಲಸಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡುವ ಮೂಲಕ ಗರ್ಭಿಣಿಯರು ಮತ್ತು ಶಿಶುಗಳಿಗೆ ಇದು ಪ್ರಯೋಜನವನ್ನು ನೀಡುತ್ತದೆ. ಲಸಿಕೆಯಿಂದ ತಡೆಗಟ್ಟಬಹುದಾದ 12 ರೋಗಗಳ ವಿರುದ್ಧ ಗರ್ಭಿಣಿಯರು ಮತ್ತು ಮಕ್ಕಳಿಗೆ (ಹುಟ್ಟಿನಿಂದ 16 ವರ್ಷಗಳವರೆಗೆ) ಜೀವ ಉಳಿಸುವ ಲಸಿಕೆಗಳ ಸಮಯೋಚಿತ ನೀಡಿಕೆಯನ್ನು ಇದು ಖಚಿತಪಡಿಸುತ್ತದೆ. ಇದಲ್ಲದೆ, ಪ್ರಧಾನಮಂತ್ರಿಯವರು ಆರೋಗ್ಯ ವೃತ್ತಿಪರರು ಮತ್ತು ಸಂಸ್ಥೆಗಳಿಗಾಗಿ ಪೋರ್ಟಲ್ ಅನ್ನು ಸಹ ಪ್ರಾರಂಭಿಸಿದರು. ಇದು ಅಸ್ತಿತ್ವದಲ್ಲಿರುವ ಆರೋಗ್ಯ ವೃತ್ತಿಪರರು ಮತ್ತು ಸಂಸ್ಥೆಗಳ ಕೇಂದ್ರೀಕೃತ ಡೇಟಾಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ.

ದೇಶದಲ್ಲಿ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಸುಧಾರಿಸಲು ಆರ್ & ಡಿ ಮತ್ತು ಪರೀಕ್ಷಾ ಮೂಲಸೌಕರ್ಯವನ್ನು ಬಲಪಡಿಸಲು ಪ್ರಧಾನ ಮಂತ್ರಿ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದರು. ಒಡಿಶಾದ ಭುವನೇಶ್ವರದ ಗೋತಪಟ್ನಾದಲ್ಲಿ ಕೇಂದ್ರೀಯ ಔಷಧ ಪರೀಕ್ಷಾ ಪ್ರಯೋಗಾಲಯವನ್ನು ಪ್ರಧಾನಿ ಉದ್ಘಾಟಿಸಿದರು.

 

ಅವರು ಒಡಿಶಾದ ಖೋರ್ಧಾ ಮತ್ತು ಛತ್ತೀಸಗಢದ ರಾಯಪುರದಲ್ಲಿ ಯೋಗ ಮತ್ತು ಪ್ರಕೃತಿಚಿಕಿತ್ಸೆಯ ಎರಡು ಕೇಂದ್ರೀಯ ಸಂಶೋಧನಾ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ವೈದ್ಯಕೀಯ ಸಾಧನಗಳಿಗಾಗಿ ಗುಜರಾತಿನ NIPER ಅಹಮದಾಬಾದ್‌, ಬೃಹತ್ ಔಷಧಗಳಿಗಾಗಿ ತೆಲಂಗಾಣದ NIPER ಹೈದರಾಬಾದ್, ಫೈಟೊಫಾರ್ಮಾಸ್ಯುಟಿಕಲ್ಸ್‌ ಗಾಗಿ ಅಸ್ಸಾಂನ NIPER ಗುವಾಹಟಿ ಮತ್ತು ಆಂಟಿ-ಬ್ಯಾಕ್ಟೀರಿಯಲ್ ಆಂಟಿ-ವೈರಲ್ ಡ್ರಗ್ ಆವಿಷ್ಕಾರ ಮತ್ತು ಅಭಿವೃದ್ಧಿಗಾಗಿ ಪಂಜಾಬಿನ NIPER ಮೊಹಾಲಿಯಲ್ಲಿ ನಾಲ್ಕು ಶ್ರೇಷ್ಠತಾ ಕೇಂದ್ರಗಳಿಗೆ ಅಡಿಪಾಯವನ್ನು ಹಾಕಿದರು. .‌

ಪ್ರಧಾನಮಂತ್ರಿಯವರು ನಾಲ್ಕು ಆಯುಷ್ ಉತ್ಕೃಷ್ಟತಾ ಕೇಂದ್ರಗಳನ್ನು ಉದ್ಘಾಟಿಸಿದರು. ಅವುಗಳೆಂದರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಧುಮೇಹ ಮತ್ತು ಚಯಾಪಚಯ ಅಸ್ವಸ್ಥತೆಗಳ ಉತ್ಕೃಷ್ಟತಾ ಕೇಂದ್ರ; ಐಐಟಿ ದೆಹಲಿಯಲ್ಲಿ ರಸೌಷಧಿಗಳಿಗೆ ಸುಧಾರಿತ ತಾಂತ್ರಿಕ ಪರಿಹಾರಗಳು, ಸ್ಟಾರ್ಟ್-ಅಪ್ ಬೆಂಬಲ ಮತ್ತು ನಿವ್ವಳ ಶೂನ್ಯ ಸಮರ್ಥನೀಯ ಪರಿಹಾರಗಳಿಗಾಗಿ ಸುಸ್ಥಿರ ಆಯುಷ್‌ ಶ್ರೇಷ್ಠತಾ ಕೇಂದ್ರ; ಸೆಂಟ್ರಲ್ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್, ಲಕ್ನೋದಲ್ಲಿ ಆಯುರ್ವೇದದಲ್ಲಿ ಮೂಲಭೂತ ಸಂಶೋಧನೆಗಾಗಿ ಶ್ರೇಷ್ಠತಾ ಕೇಂದ್ರ; ಮತ್ತು ಜೆ ಎನ್‌ ಯು, ನವದೆಹಲಿಯಲ್ಲಿ ಆಯುರ್ವೇದ ಮತ್ತು ಸಿಸ್ಟಮ್ಸ್ ಮೆಡಿಸಿನ್‌ ನ ಶ್ರೇಷ್ಠತಾ ಕೇಂದ್ರ.

ಆರೋಗ್ಯ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಉತ್ತೇಜನ ನೀಡಿದ ಪ್ರಧಾನಮಂತ್ರಿಯವರು ಗುಜರಾತಿನ ವಾಪಿ, ತೆಲಂಗಾಣದ ಹೈದರಾಬಾದ್, ಕರ್ನಾಟಕದ ಬೆಂಗಳೂರು, ಆಂಧ್ರಪ್ರದೇಶದ ಕಾಕಿನಾಡ ಮತ್ತು ಹಿಮಾಚಲ ಪ್ರದೇಶದ ನಲಗಢದಲ್ಲಿ ವೈದ್ಯಕೀಯ ಸಾಧನಗಳು ಮತ್ತು ಬಲ್ಕ್ ಡ್ರಗ್ಸ್ ಗಳಿಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿ ಎಲ್‌ ಐ) ಯೋಜನೆಯಡಿಯಲ್ಲಿ ಐದು ಯೋಜನೆಗಳನ್ನು ಉದ್ಘಾಟಿಸಿದರು.. ಈ ಘಟಕಗಳು ಕ್ರಿಟಿಕಲ್ ಬಲ್ಕ್ ಡ್ರಗ್ಸ್ ಹಾಗೂ ಬಾಡಿ ಇಂಪ್ಲಾಂಟ್ಸ್ ಮತ್ತು ಕ್ರಿಟಿಕಲ್ ಕೇರ್ ಉಪಕರಣಗಳಂತಹ ಉನ್ನತ ಮಟ್ಟದ ವೈದ್ಯಕೀಯ ಸಾಧನಗಳನ್ನು ತಯಾರಿಸುತ್ತವೆ.

ನಾಗರಿಕರಲ್ಲಿ ಆರೋಗ್ಯ ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ “ದೇಶ್ ಕಾ ಪ್ರಕೃತಿ ಪರೀಕ್ಷಣ್ ಅಭಿಯಾನ್”ಎಂಬ ರಾಷ್ಟ್ರವ್ಯಾಪಿ ಅಭಿಯಾನಕ್ಕೂ ಪ್ರಧಾನಿಯವರು ಚಾಲನೆ ನೀಡಿದರು. ಅವರು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ಕುರಿತು ರಾಜ್ಯ-ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಉದ್ಘಾಟಿಸಿದರು, ಇದು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸಲು ಹೊಂದಾಣಿಕೆಯ ಕಾರ್ಯತಂತ್ರಗಳನ್ನು ರೂಪಿಸುತ್ತದೆ.

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Moving beyond Western paradigms: The geopolitical lesson of India’s multi-alignment

Media Coverage

Moving beyond Western paradigms: The geopolitical lesson of India’s multi-alignment
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in a mishap in Surat, Gujarat
June 02, 2026
PM announces ex-gratia from PMNRF

Prime Minister Shri Narendra Modi today expressed deep pain over the tragic mishap in Surat district, Gujarat. He extended his heartfelt condolences to those who have lost their loved ones and prayed for the earliest recovery of the injured. The Prime Minister noted that rescue operations are underway and authorities are providing all possible assistance at the accident site.

The Prime Minister has announced an ex-gratia of Rs. 2 lakh from the Prime Minister’s National Relief Fund (PMNRF) for the next of kin of each deceased. Shri Modi also noted that Rs. 50,000 would be provided to those who sustained injuries in the incident.

The Prime Minister posted on X:

"Deeply pained to hear about a mishap in Surat district, Gujarat. My condolences to those who have lost their loved ones. May the injured recover at the earliest. Rescue operations are underway and authorities are providing all possible assistance at the accident site.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM"