ಈ ಆಸ್ಪತ್ರೆ ವಾರಣಾಸಿ ಮತ್ತು ಈ ಪ್ರದೇಶದ ಅನೇಕ ಜನರ ಜೀವನದಿಂದ ಕತ್ತಲೆಯನ್ನು ತೆಗೆದುಹಾಕುತ್ತದೆ, ಅವರನ್ನು ಬೆಳಕಿನೆಡೆಗೆ ಕರೆದೊಯ್ಯುತ್ತದೆ: ಪ್ರಧಾನಮಂತ್ರಿ
ಕಾಶಿ ಈಗ ಉತ್ತರ ಪ್ರದೇಶದಲ್ಲಿ ಪೂರ್ವಾಂಚಲದ ದೊಡ್ಡ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ರಕ್ಷಣಾ ತಾಣವಾಗಿ ಪ್ರಖ್ಯಾತವಾಗುತ್ತಿದೆ: ಪ್ರಧಾನಮಂತ್ರಿ
ಇಂದು, ಭಾರತದ ಆರೋಗ್ಯ ಕಾರ್ಯತಂತ್ರವು ಐದು ಸ್ತಂಭಗಳನ್ನು ಅವಲಂಬಿಸಿದೆ – ರೋಗಗಳನ್ನು ತಡೆಗಟ್ಟುವ ಆರೋಗ್ಯ ರಕ್ಷಣೆ, ರೋಗದ ಸಮಯೋಚಿತ ರೋಗನಿರ್ಣಯ, ಉಚಿತ ಮತ್ತು ಕಡಿಮೆ ವೆಚ್ಚದ ಚಿಕಿತ್ಸೆ, ಸಣ್ಣ ಪಟ್ಟಣಗಳಲ್ಲಿ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನದ ವಿಸ್ತರಣೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆರ್.ಜೆ.ಶಂಕರ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದರು. ಆಸ್ಪತ್ರೆಯು ವಿವಿಧ ಕಣ್ಣಿನ ಪರಿಸ್ಥಿತಿಗಳಿಗೆ ಸಮಗ್ರ ಸಮಾಲೋಚನೆಗಳು ಮತ್ತು ಚಿಕಿತ್ಸೆಗಳನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನವನ್ನೂ  ಶ್ರೀ ಮೋದಿ ಅವರು ವೀಕ್ಷಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಶುಭ ಅವಧಿಯಲ್ಲಿ ಕಾಶಿಗೆ ಭೇಟಿ ನೀಡುವುದು ಪುಣ್ಯದ ಒಂದು ಅವಕಾಶವಾಗಿದೆ ಎಂದರು. ಕಾಶಿಯ ಜನರು, ಸಂತರು ಮತ್ತು ಲೋಕೋಪಕಾರಿಗಳ ಆನಂದದಾಯಕ ಉಪಸ್ಥಿತಿಯನ್ನು ಉಲ್ಲೇಖಿಸಿದ ಅವರು, ಪರಮಪೂಜ್ಯ ಶಂಕರಾಚಾರ್ಯರ ದರ್ಶನ ಮತ್ತು ಪ್ರಸಾದ ಹಾಗು ಆಶೀರ್ವಾದವನ್ನು ಪಡೆಯುವುದನ್ನು ಪ್ರಸ್ತಾಪಿಸಿದರು. ಕಾಶಿ ಮತ್ತು ಉತ್ತರಾಂಚಲ ಇಂದು ಮತ್ತೊಂದು ಆಧುನಿಕ ಆಸ್ಪತ್ರೆಯಿಂದ ಆಶೀರ್ವದಿಸಲ್ಪಟ್ಟಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಗವಾನ್ ಶಂಕರರ ಭೂಮಿಯಲ್ಲಿ ಆರ್.ಜೆ.ಶಂಕರ ಕಣ್ಣಿನ ಆಸ್ಪತ್ರೆಯನ್ನು ಸಮರ್ಪಿಸಿರುವುದನ್ನು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ಶ್ರೀ ಮೋದಿ ಅವರು ಕಾಶಿ ಮತ್ತು ಉತ್ತರಾಂಚಲದ ಜನರನ್ನು ಅಭಿನಂದಿಸಿದರು.

ಭಾರತದ ಪ್ರಾಚೀನ ಧರ್ಮಗ್ರಂಥಗಳಲ್ಲಿ ಪ್ರಸ್ತಾಪಿಸಲಾದ ಉಲ್ಲೇಖದ ಹೋಲಿಕೆಯನ್ನು ನೀಡಿದ ಪ್ರಧಾನಮಂತ್ರಿಯವರು, ಆರ್.ಜೆ.ಶಂಕರ ಕಣ್ಣಿನ ಆಸ್ಪತ್ರೆ ಕತ್ತಲೆಯನ್ನು ತೊಡೆದುಹಾಕುತ್ತದೆ ಮತ್ತು ಅನೇಕ ಜನರನ್ನು ಬೆಳಕಿನೆಡೆಗೆ ಕರೆದೊಯ್ಯುತ್ತದೆ ಎಂದರು. ಈಗಷ್ಟೇ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ್ದೆ, ಇದು ಆಧ್ಯಾತ್ಮಿಕತೆ ಮತ್ತು ಆಧುನಿಕತೆಯ ಸಂಯೋಜನೆಯಾಗಿದೆ ಹಾಗು ಈ ಆಸ್ಪತ್ರೆ ವೃದ್ಧರು ಮತ್ತು ಯುವಜನರಿಗೆ ದೃಷ್ಟಿ ನೀಡುವಲ್ಲಿ ಸೇವೆ ಸಲ್ಲಿಸುತ್ತದೆ ಎಂದು ತಾವು ಭಾವಿಸಿರುವುದಾಗಿ ಶ್ರೀ ಮೋದಿ ಹೇಳಿದರು. ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಅವರು ಹೇಳಿದರು. ಕಣ್ಣಿನ ಆಸ್ಪತ್ರೆ ಅನೇಕ ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಇಂಟರ್ನ್ಶಿಪ್ ಅವಕಾಶಗಳನ್ನು ಸೃಷ್ಟಿಸುತ್ತದೆ ಹಾಗು  ಸಹಾಯಕ ಸಿಬ್ಬಂದಿಗೆ ಉದ್ಯೋಗವನ್ನೂ ನೀಡುತ್ತದೆ ಎಂದು ಶ್ರೀ ಮೋದಿ ಬೆಟ್ಟು ಮಾಡಿದರು.

 

ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಂಕರ ನೇತ್ರ ಪ್ರತಿಷ್ಠಾನದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಅವರ ಗುರುಗಳ ಉಪಸ್ಥಿತಿಯಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸುವುದನ್ನು ಉಲ್ಲೇಖಿಸಿದರು. ಶ್ರೀ ಕಂಚಿ ಕಾಮಕೋಟಿ ಪೀಠಾಧಿಪತಿ, ಜಗದ್ಗುರು ಶಂಕರಾಚಾರ್ಯ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳ ಆಶೀರ್ವಾದ ಪಡೆಯುವುದು ಬಹಳ ಸಂತೃಪ್ತಿಯ ವಿಷಯವಾಗಿದೆ ಎಂದ ಅವರು, ಪರಮಪೂಜ್ಯ ಜಗದ್ಗುರು ಶ್ರೀ ಜಯೇಂದ್ರ ಸರಸ್ವತಿ ಅವರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಗಳನ್ನು ಸಾಧಿಸುತ್ತಿರುವುದು ಸಂತಸ ತಂದಿದೆ ಎಂದರು. ಇಂದಿನ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಗುರುಗಳ ಮೂರು ವಿಭಿನ್ನ ಸಂಪ್ರದಾಯಗಳೊಂದಿಗೆ ಸಂಬಂಧ, ಸಂಪರ್ಕ  ಹೊಂದಿರುವುದು ವೈಯಕ್ತಿಕ ತೃಪ್ತಿಯ ವಿಷಯವಾಗಿದೆ ಎಂದರು. ಈ ಸಂದರ್ಭದಲ್ಲಿ ಆಶೀರ್ವದಿಸಿದ್ದಕ್ಕಾಗಿ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಅವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, ವಾರಣಾಸಿಯ ಜನಪ್ರತಿನಿಧಿಯಾಗಿ ಅವರನ್ನು ಸ್ವಾಗತಿಸಿದರು.

ಖ್ಯಾತ ಉದ್ಯಮಿ ದಿವಂಗತ ಶ್ರೀ ರಾಕೇಶ್ ಜುಂಜುನ್ ವಾಲಾ ಅವರ ಸೇವೆ ಮತ್ತು ಕಾರ್ಯವನ್ನು ಶ್ರೀ ಮೋದಿ ಸ್ಮರಿಸಿದರು. ಶ್ರೀ ಜುಂಜುನ್ವಾಲಾ ಅವರ ಪರಂಪರೆಯನ್ನು ಮುಂದುವರಿಸಿದ್ದಕ್ಕಾಗಿ ಅವರ ಪತ್ನಿ ಶ್ರೀಮತಿ ರೇಖಾ ಜುಂಜುನ್ವಾಲಾ ಅವರನ್ನು ಅವರು ಶ್ಲಾಘಿಸಿದರು. ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಚಿತ್ರಕೂಟ್ ಕಣ್ಣಿನ ಆಸ್ಪತ್ರೆಗಳೆರಡೂ ವಾರಣಾಸಿಯಲ್ಲಿ ತಮ್ಮ ಸಂಸ್ಥೆಗಳನ್ನು ಸ್ಥಾಪಿಸುವಂತೆ ತಾವು ವಿನಂತಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕಾಶಿ ಜನತೆಯ ಕೋರಿಕೆಯನ್ನು ಗೌರವಿಸಿದ ಎರಡೂ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಹಿಂದೆ, ತಮ್ಮ ಸಂಸದೀಯ ಕ್ಷೇತ್ರದ ಸಾವಿರಾರು ಜನರು ಚಿತ್ರಕೂಟ್ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಮತ್ತು ಈಗ ವಾರಣಾಸಿಯಲ್ಲಿ ಎರಡು ಹೊಸ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆಗಳಿವೆ ಎಂಬುದರತ್ತ ಅವರು ಬೆಟ್ಟು ಮಾಡಿದರು.

ಅನಾದಿ ಕಾಲದಿಂದಲೂ ವಾರಣಾಸಿಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ರಾಜಧಾನಿ ಎಂದು ಗುರುತಿಸಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಈಗ ವಾರಣಾಸಿಯು  ಉತ್ತರ ಪ್ರದೇಶ ಮತ್ತು ಪೂರ್ವಾಂಚಲದ ಆರೋಗ್ಯ ಕೇಂದ್ರವಾಗಿಯೂ ಪ್ರಸಿದ್ಧಿ ಪಡೆಯುತ್ತಿದೆ ಎಂದರು. ಅದು ಬಿಎಚ್ ಯು ಟ್ರಾಮಾ ಸೆಂಟರ್ ಆಗಿರಲಿ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿರಲಿ ಅಥವಾ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಾಗಿರಲಿ ಅಥವಾ ಕಬೀರ್ ಚೌರಾ ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನು ಬಲಪಡಿಸುವುದಾಗಿರಲಿ ಅಥವಾ ಹಿರಿಯ ನಾಗರಿಕರು ಮತ್ತು ಸರ್ಕಾರಿ ನೌಕರರಿಗಾಗಿ ವಿಶೇಷ ಆಸ್ಪತ್ರೆಯಾಗಿರಲಿ ಅಥವಾ ವೈದ್ಯಕೀಯ ಕಾಲೇಜುಗಳಾಗಿರಲಿ, ಕಳೆದ ದಶಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ವಾರಣಾಸಿಯಲ್ಲಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಆಧುನಿಕ ಆರೋಗ್ಯ ಸೌಲಭ್ಯವಿದೆ ಎಂದು ಅವರು ಹೇಳಿದರು. ಈ ಹಿಂದೆ ದಿಲ್ಲಿ ಅಥವಾ ಮುಂಬೈಗೆ ಭೇಟಿ ನೀಡಿ ಆರೋಗ್ಯ ಚಿಕಿತ್ಸೆ ಪಡೆಯಲಾಗುತ್ತಿದ್ದರೆ ಇಂದು ವಾರಣಾಸಿಯಲ್ಲಿಯೇ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಬಿಹಾರ, ಜಾರ್ಖಂಡ್ ಮತ್ತು ಇತರ ಸ್ಥಳಗಳಿಂದ ಸಾವಿರಾರು ಜನರು ಚಿಕಿತ್ಸೆಗಾಗಿ ವಾರಣಾಸಿಗೆ ಬರುತ್ತಿದ್ದಾರೆ ಎಂದು ಅವರು ಹೇಳಿದರು. ಹಿಂದಿನ "ಮೋಕ್ಷದಾಯಿನಿ" (ಮೋಕ್ಷ ನೀಡುವ) ವಾರಣಾಸಿಯು ಹೊಸ ಶಕ್ತಿ ಮತ್ತು ಸಂಪನ್ಮೂಲಗಳೊಂದಿಗೆ "ನವಜೀವದಾಯಿನಿ" (ಹೊಸ ಜೀವ ನೀಡುವ) ವಾರಣಾಸಿಯಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು. 

 

ಹಿಂದಿನ ಸರ್ಕಾರಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ವಾರಣಾಸಿ ಸೇರಿದಂತೆ ಪೂರ್ವಾಂಚಲದಲ್ಲಿ ಆರೋಗ್ಯ ಸೌಲಭ್ಯಗಳನ್ನು ನಿರ್ಲಕ್ಷಿಸಲಾಗಿತ್ತು ಎಂದರು. ಪರಿಸ್ಥಿತಿ ಹೇಗಿತ್ತೆಂದರೆ, 10 ವರ್ಷಗಳ ಹಿಂದೆ, ಪೂರ್ವಾಂಚಲದಲ್ಲಿ ಮೆದುಳು ಜ್ವರಕ್ಕೆ ಯಾವುದೇ ಬ್ಲಾಕ್ ಮಟ್ಟದ ಚಿಕಿತ್ಸಾ ಕೇಂದ್ರಗಳು ಇರಲಿಲ್ಲ, ಇದು ಮಕ್ಕಳ ಸಾವಿಗೆ ಕಾರಣವಾಯಿತು, ಇದು ಮಾಧ್ಯಮಗಳಲ್ಲಿ ಗದ್ದಲ ಮತ್ತು ಕೂಗಿಗೆ ಕಾರಣವಾಯಿತು ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಕಾಶಿಯಲ್ಲಿ ಮಾತ್ರವಲ್ಲದೆ ಪೂರ್ವಾಂಚಲದ ಇಡೀ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳ ಅಭೂತಪೂರ್ವ ವಿಸ್ತರಣೆಯಾಗಿದೆ ಎಂದು ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು. ಇಂದು ಪೂರ್ವಾಂಚಲದಲ್ಲಿ ಮೆದುಳು ಜ್ವರಕ್ಕೆ ಚಿಕಿತ್ಸೆ ನೀಡಲು ಇಂತಹ 100 ಕ್ಕೂ ಹೆಚ್ಚು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಕಳೆದ ದಶಕದಲ್ಲಿ ಪೂರ್ವಾಂಚಲದ ಪ್ರಾಥಮಿಕ ಮತ್ತು ಸಮುದಾಯ ಕೇಂದ್ರಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹೊಸ ಹಾಸಿಗೆಗಳನ್ನು ಸೇರಿಸಲಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. 10 ವರ್ಷಗಳಲ್ಲಿ ಪೂರ್ವಾಂಚಲದ ಹಳ್ಳಿಗಳಲ್ಲಿ ಐದೂವರೆ ಸಾವಿರಕ್ಕೂ ಹೆಚ್ಚು ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಪೂರ್ವಾಂಚಲದ ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯಗಳಿಲ್ಲದ 10 ವರ್ಷಗಳ ಹಿಂದೆ ಹೋಲಿಸಿದರೆ ಇಂದು 20 ಕ್ಕೂ ಹೆಚ್ಚು ಡಯಾಲಿಸಿಸ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಉಚಿತ ಚಿಕಿತ್ಸೆ ನೀಡುತ್ತಿವೆ ಎಂದು ಪ್ರಧಾನಿ ಹೇಳಿದರು.

21ನೇ ಶತಮಾನದ ಭಾರತವು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಹಳೆಯ ಮನಸ್ಥಿತಿ ಮತ್ತು ವಿಧಾನವನ್ನು ತ್ಯಜಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತದ ಆರೋಗ್ಯ ರಕ್ಷಣಾ ಕಾರ್ಯತಂತ್ರದ ಐದು ಸ್ತಂಭಗಳನ್ನು ಪ್ರಸ್ತಾಪಿಸಿದ ಅವರು ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆ, ಸಮಯೋಚಿತ ರೋಗನಿರ್ಣಯ, ಉಚಿತ ಔಷಧಿಗಳು ಮತ್ತು ಚಿಕಿತ್ಸೆ, ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಸಾಕಷ್ಟು ವೈದ್ಯರು ಮತ್ತು ಕೊನೆಯದಾಗಿ ಆರೋಗ್ಯ ಸೇವೆಗಳಲ್ಲಿ ತಂತ್ರಜ್ಞಾನದ ವ್ಯಾಪಕ ಬಳಕೆಯನ್ನು ಅವರು ಒತ್ತಿ ಹೇಳಿದರು.

ಕಾಯಿಲೆಗಳ ಬಾಧೆಯಿಂದ ಜನರನ್ನು ರಕ್ಷಿಸುವುದು  ಅತ್ಯುನ್ನತ ಆದ್ಯತೆಯಾಗಿದೆ ಮತ್ತು ಇದು ಭಾರತದ ಆರೋಗ್ಯ ನೀತಿಯ ಮೊದಲ ಆಧಾರಸ್ತಂಭವಾಗಿದೆ ಎಂದು ಒತ್ತಿಹೇಳಿದ ಪ್ರಧಾನಿ, ರೋಗಗಳು ಜನರನ್ನು ಬಡವರನ್ನಾಗಿ ಮಾಡುತ್ತವೆ ಎಂಬುದರತ್ತ ಗಮನಸೆಳೆದರು. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಮೇಲಕ್ಕೆ ಬಂದಿದ್ದಾರೆ ಎಂದು ಹೇಳಿದ ಶ್ರೀ ಮೋದಿ, ಒಂದು ಗಂಭೀರ ಕಾಯಿಲೆ ಅವರನ್ನು ಮತ್ತೆ ಬಡತನದತ್ತ ತಳ್ಳಬಹುದು ಎಂದರು. ಆದ್ದರಿಂದ, ಸರ್ಕಾರವು ಸ್ವಚ್ಛತೆ, ಯೋಗ, ಆಯುರ್ವೇದ ಮತ್ತು ಪೌಷ್ಠಿಕಾಂಶದ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ವ್ಯಾಕ್ಸಿನೇಷನ್ ಡ್ರೈವ್ ನ ವಿಸ್ತಾರವಾದ ವ್ಯಾಪ್ತಿಯನ್ನು ಎತ್ತಿ ತೋರಿಸಿದ ಪ್ರಧಾನಿ, ಹತ್ತು ವರ್ಷಗಳ ಹಿಂದೆ ಕೋಟ್ಯಂತರ ಮಕ್ಕಳು ಶಾಲೆಯಿಂದ ಹೊರಗುಳಿದಾಗ ವ್ಯಾಕ್ಸಿನೇಷನ್ ವ್ಯಾಪ್ತಿ ಕೇವಲ 60 ಪ್ರತಿಶತದಷ್ಟಿತ್ತು ಎಂಬುದರತ್ತ ಗಮನಸೆಳೆದರು. ಪ್ರತಿ ವರ್ಷ ಕೇವಲ ಒಂದರಿಂದ ಒಂದೂವರೆ ಪ್ರತಿಶತದಷ್ಟು ದರದಲ್ಲಿ ವ್ಯಾಕ್ಸಿನೇಷನ್ ವ್ಯಾಪ್ತಿ ಹೆಚ್ಚುತ್ತಿದೆ ಎಂದು ವಿಷಾದಿಸಿದ ಅವರು, ಹೀಗಾದರೆ ಪ್ರತಿ ಪ್ರದೇಶ ಮತ್ತು ಪ್ರತಿ ಮಗುವನ್ನು ವ್ಯಾಕ್ಸಿನೇಷನ್ ವ್ಯಾಪ್ತಿಗೆ ತರಲು ಇನ್ನೂ 40-50 ವರ್ಷಗಳು ಬೇಕಾಗುತ್ತವೆ ಎಂದು ಹೇಳಿದರು. ಪ್ರಸ್ತುತ ಸರ್ಕಾರವು ಮಕ್ಕಳಲ್ಲಿ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸಲು ಆದ್ಯತೆ ನೀಡಿದೆ ಎಂದ ಅವರು  ಮಿಷನ್ ಇಂದ್ರಧನುಷ್  ಉಲ್ಲೇಖಿಸಿದರು, ಇದು ಅನೇಕ ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡುವುದನ್ನು ಒಳಗೊಂಡಿದೆ, ಇದರ ಪರಿಣಾಮವಾಗಿ ವ್ಯಾಕ್ಸಿನೇಷನ್ ವ್ಯಾಪ್ತಿಯ ಪ್ರಮಾಣವನ್ನು ಹೆಚ್ಚಿಸಲಾಗಿದೆ ಮತ್ತು ಕೋಟ್ಯಂತರ ಗರ್ಭಿಣಿಯರು ಮತ್ತು ಮಕ್ಕಳಿಗೆ ಸೇವೆಗಳನ್ನು ತಲುಪಿಸಲಾಗಿದೆ ಎಂದು ಅವರು ಹೇಳಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವ್ಯಾಕ್ಸಿನೇಷನ್ ಗೆ  ಸರ್ಕಾರ ಒತ್ತು ನೀಡುವುದರ ಪ್ರಯೋಜನಗಳು ಗೋಚರಿಸುತ್ತಿವೆ, ಇಂದು, ಈ ವ್ಯಾಕ್ಸಿನೇಷನ್ ಅಭಿಯಾನವು ದೇಶಾದ್ಯಂತ ತ್ವರಿತಗತಿಯಿಂದ  ನಡೆಯುತ್ತಿದೆ ಎಂದು ಅವರು ಹೇಳಿದರು.

 

ರೋಗವನ್ನು ಮುಂಚಿತವಾಗಿ ಪತ್ತೆಹಚ್ಚುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕ್ಯಾನ್ಸರ್ ಮತ್ತು ಮಧುಮೇಹದಂತಹ ಅನೇಕ ರೋಗಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಲು ದೇಶಾದ್ಯಂತ ಲಕ್ಷಾಂತರ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಸ್ಥಾಪಿಸಲಾಗಿದೆ ಎಂದರು. ಇಂದು ದೇಶದಲ್ಲಿ ನಿರ್ಣಾಯಕ ಆರೈಕೆ ಬ್ಲಾಕ್ ಗಳು ಮತ್ತು ಆಧುನಿಕ ಪ್ರಯೋಗಾಲಯಗಳ ಜಾಲವನ್ನು ಸಹ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು. "ಆರೋಗ್ಯ ಕ್ಷೇತ್ರದ ಈ ಎರಡನೇ ಸ್ತಂಭವು ಲಕ್ಷಾಂತರ ಜನರ ಜೀವವನ್ನು ಉಳಿಸುತ್ತಿದೆ" ಎಂದು ಅವರು ವಿವರಿಸಿದರು.

ಕಡಿಮೆ ವೆಚ್ಚದ ಚಿಕಿತ್ಸೆ ಮತ್ತು ಅಗ್ಗದ ಔಷಧಿಗಳು ಆರೋಗ್ಯದ ಮೂರನೇ ಆಧಾರಸ್ತಂಭವಾಗಿದೆ ಎಂದು ವಿವರಿಸಿದ ಪ್ರಧಾನಮಂತ್ರಿಯವರು, ರೋಗಗಳ ಚಿಕಿತ್ಸೆಯ ಮೇಲಿನ ಸರಾಸರಿ ವೆಚ್ಚವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಲಾಗಿದೆ ಎಂದು ಒತ್ತಿಹೇಳಿದರು ಮತ್ತು ಔಷಧಿಗಳು ಶೇಕಡಾ 80 ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುವ ಪಿಎಂ ಜನೌಷಧಿ ಕೇಂದ್ರಗಳನ್ನು ಉಲ್ಲೇಖಿಸಿದರು. ಹೃದಯದ ಸ್ಟೆಂಟ್ಗಳು, ಮೊಣಕಾಲು ಅಳವಡಿಕೆಗಳು ಮತ್ತು ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು, ಆಯುಷ್ಮಾನ್ ಯೋಜನೆ ಬಡವರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸುತ್ತದೆ. ಆಯುಷ್ಮಾನ್ ಯೋಜನೆಯಡಿ ಈವರೆಗೆ 7.5 ಕೋಟಿಗೂ ಹೆಚ್ಚು ರೋಗಿಗಳು ಉಚಿತ ಚಿಕಿತ್ಸೆಯ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

 

ಆರೋಗ್ಯ ಕ್ಷೇತ್ರದ ನಾಲ್ಕನೇ ಸ್ತಂಭವನ್ನು ವಿವರಿಸಿದ ಅವರು,  ಇದು ಚಿಕಿತ್ಸೆಗಾಗಿ ದೆಹಲಿ-ಮುಂಬೈನಂತಹ ದೊಡ್ಡ ನಗರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿರುವುದರತ್ತ  ಗಮನ ಸೆಳೆದರು. ಕಳೆದ ದಶಕದಲ್ಲಿ ಸರ್ಕಾರವು ಸಣ್ಣ ನಗರಗಳಲ್ಲಿ ಏಮ್ಸ್, ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಂತಹ ಆಸ್ಪತ್ರೆಗಳನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು. ದೇಶದಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಕಳೆದ ದಶಕದಲ್ಲಿ ಸಾವಿರಾರು ಹೊಸ ವೈದ್ಯಕೀಯ ಸೀಟುಗಳನ್ನು ಸೇರಿಸಲಾಗಿದೆ ಎಂಬುದರತ್ತಲೂ  ಪ್ರಧಾನಿ ಗಮನ ಸೆಳೆದರು. ಮುಂದಿನ 5 ವರ್ಷಗಳಲ್ಲಿ ಇನ್ನೂ 75 ಸಾವಿರ ಸೀಟುಗಳನ್ನು ಸೇರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.

ತಂತ್ರಜ್ಞಾನದ ಮೂಲಕ ಆರೋಗ್ಯ ಸೌಲಭ್ಯಗಳನ್ನು ಹೆಚ್ಚು ಲಭ್ಯವಾಗುವಂತೆ ಮಾಡುವುದು ಆರೋಗ್ಯ ಕ್ಷೇತ್ರದ ಐದನೇ ಆಧಾರಸ್ತಂಭವಾಗಿದೆ ಎಂದು ಪ್ರಧಾನಿ ವಿವರಿಸಿದರು. ಇಂದು ಡಿಜಿಟಲ್ ಆರೋಗ್ಯ ಐಡಿಗಳನ್ನು ರಚಿಸಲಾಗುತ್ತಿದೆ ಮತ್ತು ಇ-ಸಂಜೀವನಿ ಅಪ್ಲಿಕೇಶನ್ ನಂತಹ ವಿಧಾನಗಳ ಮೂಲಕ ರೋಗಿಗಳಿಗೆ ಮನೆಯಲ್ಲಿ ಸಮಾಲೋಚನೆಯ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ಇ-ಸಂಜೀವನಿ ಆ್ಯಪ್ ಮೂಲಕ ಈವರೆಗೆ 30 ಕೋಟಿಗೂ ಹೆಚ್ಚು ಜನರಿಗೆ ಸಲಹೆ ನೀಡಲಾಗಿದೆ ಎಂದು ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು. ಭಾರತವು ಆರೋಗ್ಯ ಸೇವೆಗಳನ್ನು ಡ್ರೋನ್ ತಂತ್ರಜ್ಞಾನದೊಂದಿಗೆ ಸಂಪರ್ಕಿಸುವತ್ತ ಸಾಗುತ್ತಿದೆ ಎಂದು ಅವರು ಹೇಳಿದರು.

 

ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಆರೋಗ್ಯವಂತ ಮತ್ತು ಸಮರ್ಥ ಯುವ ಪೀಳಿಗೆಯು ವಿಕ್ಷಿತ ಭಾರತದ ಸಂಕಲ್ಪವನ್ನು ಈಡೇರಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ವಿಶೇಷವಾಗಿ ಭಾರತದ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗೆ  ಪ್ರಧಾನ ಮಂತ್ರಿ ಅವರು ಶುಭ ಕೋರಿದರು.

ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿಬೆನ್ ಪಟೇಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಕಾಂಚೀಪುರಂನ ಕಂಚಿ ಕಾಮಕೋಟಿ ಪೀಠದ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Click here to read full text speech

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian scientists break a century-old limit on turning heat into electricity

Media Coverage

Indian scientists break a century-old limit on turning heat into electricity
NM on the go

Nm on the go

Always be the first to hear from the PM. Get the App Now!
...
Prime Minister congratulates Italian PM Giorgia Meloni on becoming the longest continuously serving Prime Minister in Italy's postwar history
September 04, 2026

Prime Minister Shri Narendra Modi today congratulated Italian Prime Minister Giorgia Meloni on becoming the longest continuously serving Prime Minister in Italy's postwar history.

The Prime Minister stated that this milestone is a reflection of the trust and confidence of the Italian people in her leadership. He further noted that her friendship has been instrumental in strengthening the India-Italy Special Strategic Partnership, adding that he looks forward to continuing their close cooperation to build a prosperous future for the people of both countries. He extended his best wishes for her continued success in the years ahead.

In a post on X, the Prime Minister shared:

"Congratulations to my friend Prime Minister Meloni on becoming the longest continuously serving Prime Minister in Italy's postwar history. This milestone is a reflection of the trust and confidence of the Italian people in her leadership.

Her friendship has also been instrumental in strengthening the India-Italy Special Strategic
Partnership and I look forward to continuing our close cooperation to build a prosperous future for the people of our countries.

My best wishes for her continued success in the years ahead.

@GiorgiaMeloni"