ವಿಕಸಿತ ಭಾರತಕ್ಕಾಗಿ ವಿಕಸಿತ ಹರಿಯಾಣ, ಇದು ನಮ್ಮ ಸಂಕಲ್ಪ: ಪ್ರಧಾನಮಂತ್ರಿ
ದೇಶದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವುದು ನಮ್ಮ ಪ್ರಯತ್ನವಾಗಿದೆ, ವಿದ್ಯುತ್ ಕೊರತೆ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಬಾರದು: ಪ್ರಧಾನಮಂತ್ರಿ
ನಾವು ಪ್ರಾರಂಭಿಸಿದ ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಿಂದ ಸೌರ ಫಲಕಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಬಿಲ್ ಶೂನ್ಯಕ್ಕೆ ಇಳಿಸಬಹುದು: ಪ್ರಧಾನಮಂತ್ರಿ
ನಮ್ಮ ಪ್ರಯತ್ನ ಹರಿಯಾಣದ ರೈತರ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಯಮುನಾ ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಹರಿಯಾಣದ ಜನತೆಗೆ ಶುಭಾಶಯಗಳನ್ನು ತಿಳಿಸಿದ ಅವರು, ಹರಿಯಾಣದ ಪವಿತ್ರ ಭೂಮಿಗೆ ಗೌರವ ನಮನ ಸಲ್ಲಿಸಿದರು, ಇದು ತಾಯಿ ಸರಸ್ವತಿಯ ಮೂಲ, ಮಂತ್ರ ದೇವಿಯ ವಾಸಸ್ಥಾನ, ಪಂಚಮುಖಿ ಹನುಮಾನ್ ಅವರ ನೆಲೆ ಮತ್ತು ಪವಿತ್ರ ಕಪಾಲ್ಮೋಚನ್ ಸಾಹಿಬ್ ಆಶೀರ್ವಾದ ಇರುವ ಭೂಮಿ ಎಂದು ಅವರು ಬಣ್ಣಿಸಿದರು. "ಹರಿಯಾಣವು ಸಂಸ್ಕೃತಿ, ಭಕ್ತಿ ಮತ್ತು ಸಮರ್ಪಣೆಯ ಸಂಗಮವಾಗಿದೆ" ಎಂದು ಅವರು ವಿವರಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯಂದು ಅವರು ಎಲ್ಲಾ ನಾಗರಿಕರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು, ಬಾಬಾ ಸಾಹೇಬ್ ಅವರ ಚಿಂತನೆ ಮತ್ತು ಸ್ಫೂರ್ತಿಯನ್ನು ಎತ್ತಿ ತೋರಿಸಿದರು, ಇದು ಭಾರತದ ಅಭಿವೃದ್ಧಿಯ ಪ್ರಯಾಣಕ್ಕೆ ಮಾರ್ಗದರ್ಶನ ನೀಡುತ್ತಲೇ ಇದೆ ಎಂದರು.

"ಯಮುನಾ ನಗರವು ಕೇವಲ ಒಂದು ನಗರವಲ್ಲ, ಅದು ಭಾರತದ ಕೈಗಾರಿಕಾ ಭೂದೃಶ್ಯದ ಪ್ರಮುಖ ಭಾಗವಾಗಿದೆ, ಪ್ಲೈವುಡ್ ನಿಂದ ಹಿತ್ತಾಳೆ ಮತ್ತು ಉಕ್ಕಿನವರೆಗಿನ ಕೈಗಾರಿಕೆಗಳೊಂದಿಗೆ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತಿದೆ" ಎಂದು ಶ್ರೀ ಮೋದಿ ಹೇಳಿದರು, ಈ ಪ್ರದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸಿದ ಅವರು, ಋಷಿ ವೇದ ವ್ಯಾಸರ ಪವಿತ್ರ ಭೂಮಿಯಾದ ಕಪಾಲ್ ಮೋಚನ್ ಮೇಳ ಮತ್ತು ಗುರು ಗೋವಿಂದ್ ಸಿಂಗ್ ಅವರ ಶಸ್ತ್ರಾಸ್ತ್ರಗಳ ಸ್ಥಳವನ್ನು ಉಲ್ಲೇಖಿಸಿದರು. ಯಮುನಾನಗರದೊಂದಿಗಿನ ತಮ್ಮ ವೈಯಕ್ತಿಕ ಸಂಪರ್ಕವನ್ನು ಹಂಚಿಕೊಂಡ ಅವರು, ಹರಿಯಾಣದ ಉಸ್ತುವಾರಿಯಾಗಿದ್ದ ಅವಧಿಯಲ್ಲಿ ಪಂಚಕುಲಕ್ಕೆ ಆಗಾಗ್ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ಅವರು ಸಹಕರಿಸಿದ ಸಮರ್ಪಿತ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಈ ಪ್ರದೇಶದಲ್ಲಿ ಕಠಿಣ ಪರಿಶ್ರಮ ಹಾಗು  ಬದ್ಧತೆಯ ನಿರಂತರ ಸಂಪ್ರದಾಯ ಇರುವುದನ್ನು ಉಲ್ಲೇಖಿಸಿದರು.

 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಹರಿಯಾಣವು ಸತತ ಮೂರನೇ ಅವಧಿಗೆ ಅಭಿವೃದ್ಧಿಯ ದ್ವಿಗುಣ ವೇಗಕ್ಕೆ ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅಭಿವೃದ್ಧಿ ಹೊಂದಿದ ಭಾರತದ ಚಿಂತನೆಯ ಭಾಗವಾಗಿ ಅಭಿವೃದ್ಧಿ ಹೊಂದಿದ ಹರಿಯಾಣದ ಬದ್ಧತೆಯನ್ನು ಒತ್ತಿ ಹೇಳಿದರು. ಹರಿಯಾಣದ ಜನರಿಗೆ ಸೇವೆ ಸಲ್ಲಿಸಲು ಮತ್ತು ಹೆಚ್ಚಿನ ವೇಗ ಹಾಗು ಪ್ರಮಾಣದಲ್ಲಿ ಕೆಲಸ ಮಾಡುವ ಮೂಲಕ ಯುವಜನರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಸರ್ಕಾರದ ಸಮರ್ಪಣೆಯನ್ನು ಅವರು ಎತ್ತಿ ತೋರಿಸಿದರು. ಈ ಬದ್ಧತೆಗೆ ಸಾಕ್ಷಿಯಾಗಿ ಇಂದು ಚಾಲನೆ ನೀಡಲಾದ ಅಭಿವೃದ್ಧಿ ಯೋಜನೆಗಳನ್ನು ಅವರು ಉಲ್ಲೇಖಿಸಿದರು ಮತ್ತು ಈ ಹೊಸ ಅಭಿವೃದ್ಧಿ ಉಪಕ್ರಮಗಳಿಗಾಗಿ ಹರಿಯಾಣದ ಜನರಿಗೆ ಅಭಿನಂದನೆ ಸಲ್ಲಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ತಮ್ಮ ಸರ್ಕಾರದ ಬದ್ಧತೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಶ್ರೀ ಮೋದಿ, ಕೈಗಾರಿಕಾ ಅಭಿವೃದ್ಧಿಯು ಸಾಮಾಜಿಕ ನ್ಯಾಯದ ಮಾರ್ಗವಾಗಿದೆ ಎಂಬ ಬಾಬಾ ಸಾಹೇಬ್ ಅವರ ನಂಬಿಕೆಯನ್ನು ಎತ್ತಿ ತೋರಿಸಿದರು. ಬಾಬಾ ಸಾಹೇಬ್ ಅವರು ಭಾರತದಲ್ಲಿ ಸಣ್ಣ ಭೂ ಹಿಡುವಳಿಗಳ ಸಮಸ್ಯೆಯನ್ನು ಗುರುತಿಸಿದರು ಮತ್ತು ಸಾಕಷ್ಟು ಕೃಷಿ ಭೂಮಿಯ ಕೊರತೆಯಿರುವ ದಲಿತರು ಕೈಗಾರಿಕೀಕರಣದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದಿರುವುದರತ್ತ ಪ್ರಧಾನಮಂತ್ರಿ ಅವರು ಗಮನ ಸೆಳೆದರು. ಕೈಗಾರಿಕೆಗಳು ದಲಿತರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ, ಅವರ ಜೀವನ ಮಟ್ಟವನ್ನು ಸುಧಾರಿಸುತ್ತವೆ ಎಂಬ ಬಾಬಾ ಸಾಹೇಬ್ ಅವರ ದೃಷ್ಟಿಕೋನವನ್ನು ಅವರು ಹಂಚಿಕೊಂಡರು. ಭಾರತದ ಕೈಗಾರಿಕೀಕರಣ ಪ್ರಯತ್ನಗಳಲ್ಲಿ ಬಾಬಾ ಸಾಹೇಬ್ ಅವರ ಮಹತ್ವದ ಪಾತ್ರವನ್ನು ಅವರು ಒಪ್ಪಿಕೊಂಡರು, ಈ ದಿಕ್ಕಿನಲ್ಲಿ ಪ್ರಗತಿಯನ್ನು ಹೆಚ್ಚಿಸಲು ದೇಶದ ಮೊದಲ ಕೈಗಾರಿಕಾ ಸಚಿವರಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರೊಂದಿಗೆ ಕೆಲಸ ಮಾಡಿದ್ದನ್ನೂ ಪ್ರಸ್ತಾಪಿಸಿದರು.

ಕೈಗಾರಿಕೀಕರಣ ಮತ್ತು ಉತ್ಪಾದನೆಯ ನಡುವಿನ ಸಂಯೋಜನೆಯನ್ನು ದೀನಬಂಧು ಚೌಧರಿ ಛೋಟು ರಾಮ್ ಜೀ ಅವರು ಗ್ರಾಮೀಣ ಸಮೃದ್ಧಿಯ ಅಡಿಪಾಯವೆಂದು ಗುರುತಿಸಿದ್ದಾರೆ ಎಂದು ಹೇಳಿದ ಪ್ರಧಾನಿ, ರೈತರು ಕೃಷಿಯ ಜೊತೆಗೆ ಸಣ್ಣ ಕೈಗಾರಿಕೆಗಳ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಾಗ ಹಳ್ಳಿಗಳಲ್ಲಿ ನಿಜವಾದ ಸಮೃದ್ಧಿ ಬರುತ್ತದೆ ಎಂಬ ಛೋಟು ರಾಮ್ ಅವರ ನಂಬಿಕೆಯನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಹಳ್ಳಿಗಳು ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಚೌಧರಿ ಚರಣ್ ಸಿಂಗ್ ಅವರು ಇದೇ ರೀತಿಯ ದೃಷ್ಟಿಕೋನವನ್ನು ಹಂಚಿಕೊಂಡಿದ್ದರು, ಕೈಗಾರಿಕಾ ಅಭಿವೃದ್ಧಿಯು ಕೃಷಿಗೆ ಪೂರಕವಾಗಿರಬೇಕು ಎಂಬ ಚರಣ್ ಸಿಂಗ್ ಅವರ ಚಿಂತನೆಯು  ಬಹಳ ಮಹತ್ವದ್ದು, ಏಕೆಂದರೆ ಎರಡೂ ಆರ್ಥಿಕತೆಯ ಆಧಾರಸ್ತಂಭಗಳಾಗಿವೆ ಎಂದು ಪ್ರಧಾನ ಮಂತ್ರಿ ನುಡಿದರು.

 

'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ'ದ ಸಾರವು ಉತ್ಪಾದನೆಯನ್ನು ಉತ್ತೇಜಿಸುವುದರಲ್ಲಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ವರ್ಷದ 'ಮಿಷನ್ ಮ್ಯಾನುಫ್ಯಾಕ್ಚರಿಂಗ್' ಬಜೆಟ್ ಘೋಷಣೆಯಲ್ಲಿ ಪ್ರತಿಬಿಂಬಿತವಾದಂತೆ ಉತ್ಪಾದನೆಯ ಮೇಲೆ ಸರ್ಕಾರದ ಗಮನವನ್ನು ಒತ್ತಿ ಹೇಳಿದರು. ದಲಿತ, ಹಿಂದುಳಿದ, ದೀನದಲಿತ ಮತ್ತು ಅಂಚಿನಲ್ಲಿರುವ ಯುವಜನರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಅವರಿಗೆ ಅಗತ್ಯ ತರಬೇತಿ ನೀಡುವುದು, ವ್ಯವಹಾರ ವೆಚ್ಚವನ್ನು ಕಡಿಮೆ ಮಾಡುವುದು, ಎಂಎಸ್ಎಂಇ ವಲಯವನ್ನು ಬಲಪಡಿಸುವುದು, ಕೈಗಾರಿಕೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸುವುದು ಮತ್ತು ಭಾರತೀಯ ಉತ್ಪನ್ನಗಳು ವಿಶ್ವ ದರ್ಜೆಯದ್ದಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಈ ಗುರಿಗಳನ್ನು ಸಾಧಿಸಲು ನಿರಂತರ ವಿದ್ಯುತ್ ಪೂರೈಕೆಯ ಮಹತ್ವವನ್ನು ಒತ್ತಿಹೇಳಿದ ಮತ್ತು ಇಂದಿನ ಕಾರ್ಯಕ್ರಮದ ಮಹತ್ವವನ್ನು ಎತ್ತಿ ತೋರಿಸಿದ ಅವರು, ದೀನಬಂಧು ಚೌಧರಿ ಛೋಟು ರಾಮ್ ಉಷ್ಣ ವಿದ್ಯುತ್ ಸ್ಥಾವರದ ಮೂರನೇ ಘಟಕದ ಕೆಲಸವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು, ಇದು ಯಮುನಾನಗರ ಮತ್ತು ಹರಿಯಾಣಕ್ಕೆ ಪ್ರಯೋಜನವನ್ನು ನೀಡುತ್ತದೆ. ಯಮುನಾನಗರವು ಭಾರತದಲ್ಲಿ ತಯಾರಾಗುವ ಪ್ಲೈವುಡ್ ನಲ್ಲಿ ಅರ್ಧದಷ್ಟು ಪ್ಲೈವುಡ್ ಉತ್ಪಾದಿಸುತ್ತದೆ ಮತ್ತು ಅಲ್ಯೂಮಿನಿಯಂ, ತಾಮ್ರ ಹಾಗು ಹಿತ್ತಾಳೆ ಪಾತ್ರೆಗಳನ್ನು ತಯಾರಿಸುವ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದರು. ಯಮುನಾನಗರದಿಂದ ಪೆಟ್ರೋಕೆಮಿಕಲ್ ಸ್ಥಾವರ ಸಲಕರಣೆಗಳನ್ನು ಹಲವಾರು ದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂಬುದರತ್ತ ಅವರು ಗಮನ ಸೆಳೆದರು. ವಿದ್ಯುತ್ ಉತ್ಪಾದನೆಯಲ್ಲಾಗುವ ಹೆಚ್ಚಳ ಈ ಕೈಗಾರಿಕೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು 'ಮಿಷನ್ ಮ್ಯಾನುಫ್ಯಾಕ್ಚರಿಂಗ್' ಅನ್ನು ಬೆಂಬಲಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ವಿದ್ಯುಚ್ಛಕ್ತಿಯ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಒಂದು ರಾಷ್ಟ್ರ-ಒಂದು ಗ್ರಿಡ್, ಹೊಸ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು, ಸೌರ ಶಕ್ತಿ ಯೋಜನೆಗಳು ಮತ್ತು ಪರಮಾಣು ವಲಯದ ವಿಸ್ತರಣೆಯಂತಹ ಉಪಕ್ರಮಗಳು ಸೇರಿದಂತೆ ವಿದ್ಯುತ್ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರದ ಬಹುಮುಖಿ ಪ್ರಯತ್ನಗಳನ್ನು ಎತ್ತಿ ತೋರಿಸಿದರು. "ವಿದ್ಯುತ್ ಕೊರತೆಯು ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವುದು ಅತ್ಯಗತ್ಯ" ಎಂದ ಅವರು ಹಿಂದಿನ ಸರ್ಕಾರದ ಆಡಳಿತದಲ್ಲಿ 2014ಕ್ಕಿಂತ ಮೊದಲು ಆಗಾಗ್ಗೆ ಆಗುತ್ತಿದ್ದ ವಿದ್ಯುತ್ ಕಡಿತವನ್ನು ನೆನಪಿಸಿಕೊಂಡರು, ಕಾಂಗ್ರೆಸ್ ಅಧಿಕಾರದಲ್ಲಿ ಉಳಿದಿದ್ದರೆ ಇಂತಹ ಬಿಕ್ಕಟ್ಟುಗಳು ಮುಂದುವರಿಯುತ್ತಿದ್ದವು ಎಂದು ಹೇಳಿದರು. ಆ ಸಮಯದಲ್ಲಿ, ಕಾರ್ಖಾನೆಗಳು, ರೈಲ್ವೆ ಮತ್ತು ನೀರಾವರಿ ವ್ಯವಸ್ಥೆಗಳು ತೀವ್ರವಾಗಿ ತೊಂದರೆ ಅನುಭವಿಸಿದವು ಎಂಬುದರತ್ತ ಅವರು ಗಮನ ಸೆಳೆದರು. ಕಳೆದ ದಶಕದಲ್ಲಿ, ಭಾರತವು ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸುಮಾರು ದ್ವಿಗುಣಗೊಳಿಸಿದೆ ಮತ್ತು ಈಗ ನೆರೆಯ ದೇಶಗಳಿಗೆ ವಿದ್ಯುತ್ ರಫ್ತು ಮಾಡುತ್ತಿದೆ ಎಂಬ ವಿಷಯವನ್ನು ಅವರು ಹಂಚಿಕೊಂಡರು. ಪ್ರಸ್ತುತ 16,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಹರಿಯಾಣಕ್ಕೆ ವಿದ್ಯುತ್ ಉತ್ಪಾದನೆಯ ಮೇಲೆ ಸರ್ಕಾರದ ಗಮನದಿಂದಾಗುವ ಪ್ರಯೋಜನಗಳನ್ನು ಎತ್ತಿ ತೋರಿಸಿದರು. ಮುಂಬರುವ ವರ್ಷಗಳಲ್ಲಿ ಈ ಸಾಮರ್ಥ್ಯವನ್ನು 24,000 ಮೆಗಾವ್ಯಾಟ್ ಗೆ ಹೆಚ್ಚಿಸುವ ಗುರಿಯನ್ನು ಅವರು ಘೋಷಿಸಿದರು.

ಥರ್ಮಲ್ ವಿದ್ಯುತ್ ಸ್ಥಾವರಗಳಲ್ಲಿ ಹೂಡಿಕೆ ಮಾಡುವ ಮತ್ತು ನಾಗರಿಕರನ್ನು ಸ್ವತಃ ವಿದ್ಯುತ್ ಉತ್ಪಾದಕರಾಗಲು ಸಶಕ್ತಗೊಳಿಸುವ ಸರ್ಕಾರದ ಉಭಯ ವಿಧಾನವನ್ನು ಎತ್ತಿ ತೋರಿಸಿದ ಶ್ರೀ ಮೋದಿ ಅವರು, ನಾಗರಿಕರು ತಮ್ಮ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು, ವಿದ್ಯುತ್ ಬಿಲ್ ಗಳನ್ನು ತೊಡೆದುಹಾಕಲು ಮತ್ತು ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುವ ಮೂಲಕ ಗಳಿಸಲು ಅನುವು ಮಾಡಿಕೊಡುವ ಪಿಎಂ ಸೂರ್ಯಘರ್ ಮುಫ್ಟ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸಿರುವುದನ್ನು ಉಲ್ಲೇಖಿಸಿದರು. ದೇಶಾದ್ಯಂತ 1.25 ಕೋಟಿಗೂ ಹೆಚ್ಚು ಜನರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಹರಿಯಾಣದಿಂದ ಲಕ್ಷಾಂತರ ಜನರು ಸೇರಲು ಅರ್ಜಿ ಸಲ್ಲಿಸುತ್ತಿದ್ದಾರೆ ಎಂಬುದರತ್ತ ಅವರು ಗಮನ ಸೆಳೆದರು. ಬೆಳೆಯುತ್ತಿರುವ ಸೇವಾ ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತಿರುವ ಯೋಜನೆಯ ವಿಸ್ತರಣೆಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಸೌರ ವಲಯವು ಹೊಸ ಕೌಶಲ್ಯಗಳನ್ನು ಸೃಷ್ಟಿಸುತ್ತಿದೆ, ಎಂಎಸ್ಎಂಇಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಯುವ ಉದ್ಯೋಗಕ್ಕೆ ಹಲವಾರು ಮಾರ್ಗಗಳನ್ನು ತೆರೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು.

 

ಸಣ್ಣ ಪಟ್ಟಣಗಳಲ್ಲಿನ ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ವಿದ್ಯುತ್ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಖಾತ್ರಿಪಡಿಸುವತ್ತ ಸರ್ಕಾರ ಗಮನ ಹರಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಎಂಎಸ್ಎಂಇಗಳನ್ನು ಬೆಂಬಲಿಸಲು ಸರ್ಕಾರ ಲಕ್ಷಾಂತರ ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸಿದೆ ಎಂದೂ ಅವರು ಉಲ್ಲೇಖಿಸಿದರು. ಸಣ್ಣ ಕೈಗಾರಿಕೆಗಳು ಬೆಳೆದಂತೆ ಅವುಗಳು ಸರ್ಕಾರದ ಬೆಂಬಲವನ್ನು ಕಳೆದುಕೊಳ್ಳುವ ಭಯವಿಲ್ಲದೆ ವಿಸ್ತರಿಸಲು ಅನುವು ಮಾಡಿಕೊಡಲು ಎಂಎಸ್ಎಂಇಗಳ ವ್ಯಾಖ್ಯಾನವನ್ನು ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದರು, ಸಣ್ಣ ಕೈಗಾರಿಕೆಗಳಿಗೆ ವಿಶೇಷ ಕ್ರೆಡಿಟ್ ಕಾರ್ಡ್ ಗಳನ್ನು ಪರಿಚಯಿಸುವುದು ಮತ್ತು ಕ್ರೆಡಿಟ್ ಗ್ಯಾರಂಟಿ ವ್ಯಾಪ್ತಿಯ ಹೆಚ್ಚಳವನ್ನು ಉಲ್ಲೇಖಿಸಿದರು. ಮುದ್ರಾ ಯೋಜನೆಯ ಇತ್ತೀಚಿನ 10 ವರ್ಷಗಳ ಮೈಲಿಗಲ್ಲನ್ನು ಉಲ್ಲೇಖಿಸಿದ ಅವರು, ಇದರ ಅಡಿಯಲ್ಲಿ 33 ಲಕ್ಷ ಕೋಟಿ ರೂ.ಗಳ ಮೇಲಾಧಾರ ರಹಿತ ಸಾಲಗಳನ್ನು ವಿತರಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳಲ್ಲಿ 50% ಕ್ಕೂ ಹೆಚ್ಚು ಎಸ್ಸಿ, ಎಸ್ಟಿ ಮತ್ತು ಒಬಿಸಿ ಕುಟುಂಬಗಳಿಗೆ ಸೇರಿದವರು ಎಂದು ಅವರು ಒತ್ತಿ ಹೇಳಿದರು. ಭಾರತದ ಯುವಜನರ ದೊಡ್ಡ ಕನಸುಗಳನ್ನು ಈಡೇರಿಸಲು ಸಣ್ಣ ಕೈಗಾರಿಕೆಗಳಿಗೆ ಅನುವು ಮಾಡಿಕೊಡುವ ಸರ್ಕಾರದ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಭಾರತೀಯನ ಊಟದ ತಟ್ಟೆಗೆ ಕೊಡುಗೆ ನೀಡುವ ಹರಿಯಾಣದ ರೈತರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ ಪ್ರಧಾನಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂತೋಷ ಮತ್ತು ಸವಾಲುಗಳಲ್ಲಿ ಸ್ಥಿರ ಪಾಲುದಾರರಾಗಿ ನಿಂತಿವೆ ಎಂದು ಒತ್ತಿ ಹೇಳಿದರು. ಹರಿಯಾಣದ ರೈತರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು, ರಾಜ್ಯ ಸರ್ಕಾರವು ಈಗ ಎಂಎಸ್ಪಿಯಲ್ಲಿ 24 ಬೆಳೆಗಳನ್ನು ಖರೀದಿಸುತ್ತದೆ ಎಂದು ಹೇಳಿದರು. ಹರಿಯಾಣದ ಲಕ್ಷಾಂತರ ರೈತರು ಪಿಎಂ ಫಸಲ್ ಬಿಮಾ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ, ಈ ಯೋಜನೆಯಡಿ 9,000 ಕೋಟಿ ರೂ.ಗಿಂತ ಹೆಚ್ಚಿನ ಕ್ಲೈಮ್ ಗಳು ಬಂದಿವೆ ಎಂದು ಅವರು ಹಂಚಿಕೊಂಡರು. ಇದಲ್ಲದೆ, ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ಹರಿಯಾಣದ ರೈತರಿಗೆ 6,500 ಕೋಟಿ ರೂ.ಗಳನ್ನು ವಿತರಿಸಲಾಗಿದೆ, ಇದು ಅವರ ಜೀವನೋಪಾಯ ಮತ್ತು ಬೆಳವಣಿಗೆಯನ್ನು ಮತ್ತಷ್ಟು ಬೆಂಬಲಿಸುತ್ತದೆ ಎಂದೂ ಅವರು ಉಲ್ಲೇಖಿಸಿದರು.

ವಸಾಹತುಶಾಹಿ ಯುಗದ ನೀರಿನ ತೆರಿಗೆಯನ್ನು ರದ್ದುಗೊಳಿಸುವ ಹರಿಯಾಣ ಸರ್ಕಾರದ ನಿರ್ಧಾರವನ್ನು ಒತ್ತಿಹೇಳಿದ ಪ್ರಧಾನ ಮಂತ್ರಿ ಅವರು, ಕಾಲುವೆ ನೀರಿನ ಮೇಲಿನ ತೆರಿಗೆ ಪಾವತಿಸುವುದರಿಂದ ರೈತರನ್ನು ಮುಕ್ತಗೊಳಿಸುವ ನಿರ್ಧಾರದಿಂದ, ಈ ತೆರಿಗೆಯಡಿ ಬಾಕಿ ಇರುವ 130 ಕೋಟಿ ರೂ.ಗಳನ್ನು ಸಹ ಮನ್ನಾ ಮಾಡಲಾಗಿರುವುದರತ್ತಲೂ ಗಮನ ಸೆಳೆದರು.  ರೈತರು ಮತ್ತು ಜಾನುವಾರು ಮಾಲೀಕರಿಗೆ ಹೊಸ ಆದಾಯದ ಅವಕಾಶಗಳನ್ನು ಒದಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು. ಹಸುವಿನ ಸಗಣಿ, ಕೃಷಿ ತ್ಯಾಜ್ಯಗಳು ಮತ್ತು ಇತರ ಸಾವಯವ ತ್ಯಾಜ್ಯಗಳಿಂದ ಜೈವಿಕ ಅನಿಲವನ್ನು ಉತ್ಪಾದಿಸುವ ಮೂಲಕ ರೈತರಿಗೆ ತ್ಯಾಜ್ಯವನ್ನು ನಿರ್ವಹಿಸಲು ಮತ್ತು ಆದಾಯವನ್ನು ಗಳಿಸಲು ಅನುವು ಮಾಡಿಕೊಡುವ ಗೋಬರ್ಧನ್ ಯೋಜನೆಯನ್ನು ಅವರು ಉಲ್ಲೇಖಿಸಿದರು. ಈ ವರ್ಷದ ಬಜೆಟ್ ನಲ್ಲಿ ದೇಶಾದ್ಯಂತ 500 ಗೋಬರ್ಧನ್ ಸ್ಥಾವರಗಳ ಘೋಷಣೆಯೂ ಸೇರಿದೆ ಎಂದು ಅವರು ಹಂಚಿಕೊಂಡರು. ಯಮುನಾ ನಗರದಲ್ಲಿ ಹೊಸ ಗೋಬರ್ಧನ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಇದರಿಂದ ಮಹಾನಗರ ಪಾಲಿಕೆಗೆ ವಾರ್ಷಿಕ 3 ಕೋಟಿ ರೂ. ಉಳಿತಾಯವಾಗಲಿದೆ. "ಗೋಬರ್ಧನ್ ಯೋಜನೆ ಸ್ವಚ್ಛ ಭಾರತ ಅಭಿಯಾನಕ್ಕೂ ಕೊಡುಗೆ ನೀಡುತ್ತಿದೆ, ಸ್ವಚ್ಛತೆ ಮತ್ತು ಸುಸ್ಥಿರತೆಯ ಧ್ಯೇಯವನ್ನು ಹೆಚ್ಚಿಸುತ್ತದೆ" ಎಂದು  ಅವರು ಹೇಳಿದರು.

ಅಭಿವೃದ್ಧಿಯ ಪಥದಲ್ಲಿ ಹರಿಯಾಣದ ತ್ವರಿತ ಪ್ರಗತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಹಿಂದೆ ಹಿಸಾರ್ ಗೆ ತಾವು ನೀಡಿದ್ದ ಭೇಟಿಯನ್ನು ಉಲ್ಲೇಖಿಸಿದರು, ಅಲ್ಲಿ ಅಯೋಧ್ಯೆ ಧಾಮಕ್ಕೆ ನೇರ ವಿಮಾನ ಸೇವೆಗಳನ್ನು ಉದ್ಘಾಟಿಸಲಾಯಿತು. ರೇವಾರಿಗೆ ಹೊಸ ಬೈಪಾಸ್ ಅನ್ನು ಅವರು ಘೋಷಿಸಿದರು, ಇದು ಮಾರುಕಟ್ಟೆಗಳು, ಜಂಕ್ಷನ್ ಗಳು ಮತ್ತು ರೈಲ್ವೆ ಕ್ರಾಸಿಂಗ್ ಗಳಲ್ಲಿನ ಸಂಚಾರ ದಟ್ಟಣೆಯನ್ನು ನಿವಾರಿಸಿ ಸಂಚಾರವನ್ನು ಸರಾಗಗೊಳಿಸುತ್ತದೆ, ವಾಹನಗಳು ನಗರವನ್ನು ಸುಗಮವಾಗಿ ಬೈಪಾಸ್ ಮಾಡಲು ಅನುವು ಮಾಡಿಕೊಡುತ್ತದೆ. ಚತುಷ್ಪಥ ಬೈಪಾಸ್ ದಿಲ್ಲಿ ಮತ್ತು ನಾರ್ನಲ್ ನಡುವಿನ ಪ್ರಯಾಣದ ಸಮಯವನ್ನು ಒಂದು ಗಂಟೆ ಕಡಿಮೆ ಮಾಡುತ್ತದೆ ಎಂಬುದರತ್ತ ಗಮನ ಸೆಳೆದ ಅವರು ಈ ಸಾಧನೆಗಾಗಿ ಜನರನ್ನು ಅಭಿನಂದಿಸಿದರು.

 

ಅವರಿಗೆ ರಾಜಕೀಯವು ಸೇವೆಯ ಮಾಧ್ಯಮವಾಗಿದೆ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ, "ಹರಿಯಾಣದಲ್ಲಿ ಸ್ಪಷ್ಟವಾಗಿರುವಂತೆ ನಮ್ಮ ಪಕ್ಷವು ತನ್ನ ಭರವಸೆಗಳನ್ನು ಈಡೇರಿಸುತ್ತದೆ" ಎಂದು ಹೇಳಿದರು, ಅಲ್ಲಿ ಸರ್ಕಾರವು ಮೂರನೇ ಅವಧಿಗೆ ಆಯ್ಕೆಯಾದ ನಂತರ ನೀಡಿದ ಭರವಸೆಗಳನ್ನು ಪೂರೈಸುತ್ತಿದೆ ಎಂದರು. ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳನ್ನು ತುಲನೆ ಮಾಡಿದ ಅವರು ಅಲ್ಲಿ ಸಾರ್ವಜನಿಕ ನಂಬಿಕೆಗೆ ದ್ರೋಹ ಬಗೆದಿರುವುದನ್ನು ಉಲ್ಲೇಖಿಸಿದರು. ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳು ಸ್ಥಗಿತಗೊಂಡಿರುವ ಹಿಮಾಚಲ ಪ್ರದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳತ್ತ ಅವರು ಗಮನಸೆಳೆದರು. ಕರ್ನಾಟಕದಲ್ಲಿ, ಪ್ರಸ್ತುತ ಸರ್ಕಾರದ ಆಡಳಿತದಲ್ಲಿ ವಿದ್ಯುತ್, ಹಾಲು, ಬಸ್ ದರಗಳು ಮತ್ತು ಬೀಜಗಳಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಅವರು ಎತ್ತಿ ತೋರಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕದ ಪ್ರಸ್ತುತ ಸರ್ಕಾರದ ಬಗ್ಗೆ ಸಾರ್ವಜನಿಕ ಅಸಮಾಧಾನ ವ್ಯಕ್ತಗೊಳ್ಳುತ್ತಿರುವುದನ್ನು ಅವರು ಉಲ್ಲೇಖಿಸಿದರು ಮತ್ತು ಭ್ರಷ್ಟಾಚಾರದ ಆರೋಪಗಳತ್ತಲೂ ಗಮನ ಸೆಳೆದರು.  ಮುಖ್ಯಮಂತ್ರಿಯ ಆಪ್ತರು ಸಹ ಭ್ರಷ್ಟಾಚಾರದಲ್ಲಿ ಕರ್ನಾಟಕವು ನಂಬರ್ ಒನ್ ಸ್ಥಾನದಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ ಎಂಬುದನ್ನೂ ಪ್ರಧಾನಿಯವರು ಪ್ರಸ್ತಾಪಿಸಿದರು. 

ತೆಲಂಗಾಣದ ಪ್ರಸ್ತುತ ಸರ್ಕಾರವು ಜನರಿಗೆ ನೀಡಿದ ಭರವಸೆಗಳನ್ನು ನಿರ್ಲಕ್ಷಿಸಿದೆ ಮತ್ತು ಕಾಡುಗಳನ್ನು ನೆಲಸಮಗೊಳಿಸುವತ್ತ ಗಮನ ಹರಿಸಿದೆ, ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಹಾನಿಯನ್ನುಂಟುಮಾಡುತ್ತಿದೆ ಎಂದು ಶ್ರೀ ಮೋದಿ ಟೀಕಿಸಿದರು. ಅವರು ಆಡಳಿತದ ಎರಡು ಮಾದರಿಗಳನ್ನು ಹೋಲಿಸಿದರು ಮತ್ತು ತಮ್ಮ ಪಕ್ಷದ ಮಾದರಿಯು ನೈಜ ಹಾಗು  ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಮರ್ಪಿತವಾಗಿದೆ ಎಂದು ಬಣ್ಣಿಸಿದರು, ಆದರೆ ಪ್ರತಿಪಕ್ಷಗಳು ಕಪಟ ಮನೋಸ್ಥಿತಿಯವು ಮತ್ತು ಅಧಿಕಾರದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿವೆ ಎಂದರು.  ಯಮುನಾನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಪ್ರಯತ್ನಗಳನ್ನು ಅವರು ತಮ್ಮ ಪಕ್ಷದ ಪ್ರಗತಿಯ ಬದ್ಧತೆಗೆ ಉದಾಹರಣೆಯಾಗಿ ಉಲ್ಲೇಖಿಸಿದರು.

ಬೈಸಾಖಿಯ ಮಹತ್ವ ಮತ್ತು ಜಲಿಯನ್ ವಾಲಾಬಾಗ್ ಹತ್ಯಾಕಾಂಡದ 106ನೇ ವಾರ್ಷಿಕೋತ್ಸವದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದೇಶಭಕ್ತರ ಸ್ಮರಣೆಯನ್ನು ಮಾಡಿ ಗೌರವಾರ್ಪಿಸಿದರು ಮತ್ತು ಬ್ರಿಟಿಷ್ ಆಡಳಿತದ ಕ್ರೌರ್ಯವನ್ನು ಎತ್ತಿ ತೋರಿಸಿದರು. ಹತ್ಯಾಕಾಂಡದ ಮತ್ತೊಂದು ಅಂಶವನ್ನು ಅವರು ಒತ್ತಿ ಹೇಳಿದರು- ಮಾನವೀಯತೆ ಮತ್ತು ರಾಷ್ಟ್ರಕ್ಕಾಗಿ ನಿಲ್ಲುವ ಅಚಲ ಮನೋಭಾವ, ಮತ್ತು ಇದನ್ನು ಶ್ರೀ ಶಂಕರನ್ ನಾಯರ್ ಮಾಡಿದ್ದನ್ನು ಉದಾಹರಣೆಯಾಗಿ ನೀಡಿದರು. ಖ್ಯಾತ ವಕೀಲ ಮತ್ತು ಬ್ರಿಟಿಷ್ ಸರ್ಕಾರದ ಉನ್ನತ ಅಧಿಕಾರಿ ಶಂಕರನ್ ನಾಯರ್ ಅವರು ರಾಜೀನಾಮೆ ನೀಡಲು ಮತ್ತು ವಿದೇಶಿ ಆಡಳಿತದ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಿದ್ದನ್ನು ಅವರು ಉಲ್ಲೇಖಿಸಿದರು. ಅವರು, ಜಲಿಯನ್ ವಾಲಾಬಾಗ್ ಪ್ರಕರಣದ ವಿರುದ್ಧ ಏಕಾಂಗಿಯಾಗಿ ಹೋರಾಡಿದರು, ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನು ಅಲುಗಾಡಿಸಿದರು ಮತ್ತು ಅದನ್ನು ನ್ಯಾಯಾಲಯದಲ್ಲಿ ಉತ್ತರದಾಯಿಯನ್ನಾಗಿ ಮಾಡಿದರು. ಶಂಕರನ್ ನಾಯರ್ ಅವರ ಕ್ರಮಗಳು "ಏಕ್ ಭಾರತ್, ಶ್ರೇಷ್ಠ ಭಾರತ್" ನ ಗಮನಾರ್ಹ ಉದಾಹರಣೆ ಎಂದು ಬಣ್ಣಿಸಿದ ಪ್ರಧಾನ ಮಂತ್ರಿ, ಪಂಜಾಬಿನ ಹತ್ಯಾಕಾಂಡಕ್ಕಾಗಿ ಕೇರಳದ ವ್ಯಕ್ತಿಯೊಬ್ಬರು ಬ್ರಿಟಿಷ್ ಶಕ್ತಿಯ ವಿರುದ್ಧ ಹೇಗೆ ನಿಂತರು ಎಂಬುದನ್ನು ತೋರಿಸುತ್ತದೆ,  ಈ ಏಕತೆ ಮತ್ತು ಪ್ರತಿರೋಧದ ಮನೋಭಾವವು ಭಾರತದ ಸ್ವಾತಂತ್ರ್ಯ ಹೋರಾಟದ ಹಿಂದಿನ ನಿಜವಾದ ಸ್ಫೂರ್ತಿಯಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದೆಡೆಗಿನ ಪ್ರಯಾಣದಲ್ಲಿ ಪ್ರೇರಕ ಶಕ್ತಿಯಾಗಿ ಉಳಿದಿದೆ ಎಂದೂ ಹೇಳಿದರು.

 

ಶಂಕರನ್ ನಾಯರ್ ಅವರ ಕೊಡುಗೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಮನವಿ ಮಾಡುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು ಮತ್ತು ಸಮಾಜದ ಆಧಾರ ಸ್ತಂಭಗಳಾದ ಬಡವರು, ರೈತರು, ಯುವಜನರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರ ಪ್ರಯತ್ನಗಳನ್ನು ಒತ್ತಿ ಹೇಳಿದರು. ಈ ಸಾಮೂಹಿಕ ಪ್ರಯತ್ನಗಳು ಹರಿಯಾಣವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಹರಿಯಾಣದ ಮುಖ್ಯಮಂತ್ರಿ ಶ್ರೀ ನಯಾಬ್ ಸಿಂಗ್ ಸೈನಿ, ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್, ಶ್ರೀ ರಾವ್ ಇಂದ್ರಜಿತ್ ಸಿಂಗ್, ಶ್ರೀ ಕೃಷ್ಣ ಪಾಲ್ ಗುರ್ಜರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ವಿದ್ಯುತ್ ಕಟ್ಟಕಡೆಯ ಫಲಾನುಭವಿಯನ್ನು (ಮೈಲಿಯನ್ನು) ತಲುಪುವ ದೃಷ್ಟಿಕೋನದೊಂದಿಗೆ ಈ ಪ್ರದೇಶದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಹೆಚ್ಚಿಸಲು, ಯಮುನಾನಗರದಲ್ಲಿ ದೀನಬಂಧು ಛೋಟು ರಾಮ್ ಉಷ್ಣ ವಿದ್ಯುತ್ ಸ್ಥಾವರದ 800 ಮೆಗಾವ್ಯಾಟ್ ಆಧುನಿಕ ಉಷ್ಣ ವಿದ್ಯುತ್ ಘಟಕಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 8,470 ಕೋಟಿ ರೂ.ಗಳ ಮೌಲ್ಯದ 233 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಘಟಕವು ಹರಿಯಾಣದ ಇಂಧನ ಸ್ವಾವಲಂಬನೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ರಾಜ್ಯಾದ್ಯಂತ ನಿರಂತರ ವಿದ್ಯುತ್ ಪೂರೈಕೆಯನ್ನು ಒದಗಿಸುತ್ತದೆ.

 

ಗೋಬರ್ಧನ್ ಅಂದರೆ ಸಾವಯವ ಜೈವಿಕ ಕೃಷಿ ಸಂಪನ್ಮೂಲಗಳ ಬಳಕೆಯ ಚಿಂತನೆಯನ್ನು ಮುಂದುವರಿಸಿಕೊಂಡು ಪ್ರಧಾನಮಂತ್ರಿಯವರು, ಯಮುನಾ ನಗರದ ಮುಕರಾಬ್ ಪುರದಲ್ಲಿ ಜೈವಿಕ ಅನಿಲ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸ್ಥಾವರವು ವಾರ್ಷಿಕ 2,600 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಪರಿಣಾಮಕಾರಿ ಸಾವಯವ ತ್ಯಾಜ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ, ಜೊತೆಗೆ ಶುದ್ಧ ಇಂಧನ ಉತ್ಪಾದನೆ ಮತ್ತು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುತ್ತದೆ.

ಭಾರತ್ ಮಾಲಾ ಪರಿಯೋಜನಾ ಅಡಿಯಲ್ಲಿ ಸುಮಾರು 1,070 ಕೋಟಿ ರೂಪಾಯಿ ಮೌಲ್ಯದ 14.4 ಕಿ.ಮೀ ಉದ್ದದ ರೇವಾರಿ ಬೈಪಾಸ್ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಿದರು. ಇದು ರೇವಾರಿ ನಗರದ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ದಿಲ್ಲಿ-ನಾರ್ನಲ್ ಪ್ರಯಾಣದ ಸಮಯವನ್ನು ಸುಮಾರು ಒಂದು ಗಂಟೆ ಕಡಿಮೆ ಮಾಡುತ್ತದೆ ಹಾಗು ಈ ಪ್ರದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How Jodhpur’s new Airport terminal blends Rajasthan heritage with 50% lower energy consumption

Media Coverage

How Jodhpur’s new Airport terminal blends Rajasthan heritage with 50% lower energy consumption
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting significance of mutual dependence
July 14, 2026

The Prime Minister, Shri Narendra Modi shared a Sanskrit Subhashitam-

“प्रभया हि विना यद्वद् भानुरेष न विद्यते।

प्रभा च भानुना तेन सुतरां तदुपाश्रया॥”

The Subhashitam conveys that just as the Sun cannot be perceived without its light, so too light cannot exist without the Sun. Thus, the entire existence and power of the Sun and its light are entirely dependent upon each other.

The Prime Minister wrote on X;

प्रभया हि विना यद्वद् भानुरेष न विद्यते।

प्रभा च भानुना तेन सुतरां तदुपाश्रया॥