"ಭಾರತವು ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲಿ ತನ್ನ ಲಸಿಕೆಯ 1.5 ಶತಕೋಟಿ ಲಸಿಕೆ ಡೋಸ್ ಗಳ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸುತ್ತಿದೆ"
"ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 150 ಕೋಟಿ ಡೋಸ್ ಗಳ ಲಸಿಕೆ, ದೇಶದ ಹೊಸ ಇಚ್ಛಾಶಕ್ತಿಯ ಮಹತ್ವದ ಸಾಧನೆ ಮತ್ತು ಸಂಕೇತವಾಗಿದೆ"
"ಆಯುಷ್ಮಾನ್ ಭಾರತ್ ಯೋಜನೆ ಅಗ್ಗದ ಮತ್ತು ಅಂತರ್ಗತ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಜಾಗತಿಕ ಮಾನದಂಡವಾಗುತ್ತಿದೆ"
"ಪಿಎಂ-ಜೆಎವೈ ಅಡಿಯಲ್ಲಿ, ದೇಶಾದ್ಯಂತದ ಆಸ್ಪತ್ರೆಗಳಲ್ಲಿ 2 ಕೋಟಿ 60 ಲಕ್ಷಕ್ಕೂ ಹೆಚ್ಚು ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೋಲ್ಕತ್ತಾದ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಎರಡನೇ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಕುಮಾರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸಚಿವರಾದ ಡಾ. ಮನ್ಸುಖ್  ಮಾಂಡವಿಯಾ, ಡಾ. ಸುಭಾಷ್ ಸರ್ಕಾರ್, ಶ್ರೀ ಶಂತನು ಠಾಕೂರ್, ಶ್ರೀ ಜಾನ್  ಬಾರ್ಲಾ ಮತ್ತು ಶ್ರೀ  ನಿಸಿತ್  ಪ್ರಮಾಣಿಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಪಶ್ಚಿಮ ಬಂಗಾಳದ ಜನರಿಗೆ ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅಗ್ಗದ ಮತ್ತು ಅತ್ಯಾಧುನಿಕ ಆರೋಗ್ಯ ಆರೈಕೆಯನ್ನು ಒದಗಿಸುವಲ್ಲಿ ಹೊಸ ಕ್ಯಾಂಪಸ್ ಬಹಳ ದೂರ ಸಾಗಲಿದೆ ಎಂದರು. "ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯುತ್ತಮ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡುವ ಪ್ರತಿಜ್ಞೆಯ ಪಯಣದಲ್ಲಿ, ನಾವು ಮತ್ತೊಂದು ಬಲವಾದ ಹೆಜ್ಜೆಯನ್ನು ಇಟ್ಟಿದ್ದೇವೆ", ಎಂದು ಪ್ರಧಾನಮಂತ್ರಿ ಹೇಳಿದರು.

15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ದೇಶವು ಹೊಸ ವರ್ಷವನ್ನು ಆರಂಭಿಸಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಅದೇ ಸಮಯದಲ್ಲಿ, ಭಾರತವು ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲಿಯೇ 150 ಕೋಟಿ - 1.5 ಶತಕೋಟಿ ಲಸಿಕೆ ಡೋಸ್ ಗಳ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸುತ್ತಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 150  ಕೋಟಿ ಡೋಸ್ ಗಳು ದೇಶದ ಇಚ್ಛಾಶಕ್ತಿಯ ಮಹತ್ವದ ಸಾಧನೆ ಮತ್ತು ಸಂಕೇತವಾಗಿದೆ. ಇದು ದೇಶದ ಹೊಸ ವಿಶ್ವಾಸ,  ಆತ್ಮನಿರ್ಭರತೆ ಮತ್ತು ಹೆಮ್ಮೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.  ಓಮಿಕ್ರಾನ್ ರೂಪಾಂತರಿಯಿಂದಾಗಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ, 150 ಕೋಟಿ ಲಸಿಕೆಗಳ ಡೋಸ್ ಗಳ ಈ ರಕ್ಷಣೆಯು ಹೆಚ್ಚು  ಮುಖ್ಯವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇಂದು ಭಾರತದ ವಯಸ್ಕ ಜನಸಂಖ್ಯೆಯ 90 ಪ್ರತಿಶತಕ್ಕೂ ಹೆಚ್ಚು ಜನರು ಲಸಿಕೆಯ ಒಂದು ಡೋಸ್ ಪಡೆದಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಕೇವಲ 5 ದಿನಗಳಲ್ಲಿ, 1.5 ಕೋಟಿಗೂ ಹೆಚ್ಚು ಮಕ್ಕಳಿಗೆ ಲಸಿಕೆಯ ಡೋಸ್ ಅನ್ನು ಸಹ ನೀಡಲಾಗಿದೆ. ಈ ಸಾಧನೆಯನ್ನು ಅವರು ಇಡೀ ದೇಶಕ್ಕೆ ಮತ್ತು ಪ್ರತಿಯೊಂದು ಸರ್ಕಾರಕ್ಕೂ ಸಮರ್ಪಿಸಿದರು. ಈ ಸಾಧನೆಗಾಗಿ ಅವರು ವಿಶೇಷವಾಗಿ ದೇಶದ ವಿಜ್ಞಾನಿಗಳು, ಲಸಿಕೆ ತಯಾರಕರು ಮತ್ತು ಆರೋಗ್ಯ ವಲಯದ ಜನರಿಗೆ ಧನ್ಯವಾದ ಅರ್ಪಿಸಿದರು.

ಇಲ್ಲಿಯವರೆಗೆ ಸುಮಾರು 11 ಕೋಟಿ ಡೋಸ್ ಕೊರೊನಾ ಲಸಿಕೆಯನ್ನು ಸರ್ಕಾರ ಪಶ್ಚಿಮ ಬಂಗಾಳಕ್ಕೆ ಉಚಿತವಾಗಿ ಒದಗಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬಂಗಾಳಕ್ಕೆ ಒಂದೂವರೆ ಸಾವಿರಕ್ಕೂ ಹೆಚ್ಚು ವೆಂಟಿಲೇಟರ್ ಗಳು, 9 ಸಾವಿರಕ್ಕೂ ಹೆಚ್ಚು ಹೊಸ ಆಮ್ಲಜನಕ ಸಿಲಿಂಡರ್ ಗಳನ್ನು ಸಹ ಪೂರೈಸಲಾಗಿದೆ. ರಾಜ್ಯದಲ್ಲಿ 49 ಪಿಎಸ್ಎ ಹೊಸ ಆಮ್ಲಜನಕ ಘಟಕಗಳು ಸಹ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

ದೇಶದ ಆರೋಗ್ಯ ಕ್ಷೇತ್ರವನ್ನು   ಪರಿವರ್ತಿಸುವ ಸಲುವಾಗಿ, ಮುನ್ನೆಚ್ಚರಿಕೆ ಆರೋಗ್ಯ ಆರೈಕೆ, ಕೈಗೆಟಕುವ ದರದ ಆರೋಗ್ಯ ಆರೈಕೆ, ಪೂರೈಕೆಯ ಕಡೆಯ ಮಧ್ಯಸ್ಥಿಕೆಗಾಗಿ ಅಭಿಯಾನದೋಪಾದಿಯಲ್ಲಿ ಅಭಿಯಾನಗಳನ್ನು ತ್ವರಿತಗೊಳಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯೋಗ, ಆಯುರ್ವೇದ, ಸದೃಢ ಭಾರತ ಆಂದೋಲನ, ಸಾರ್ವತ್ರಿಕ ಲಸಿಕೀಕರಣ, ಆರೋಗ್ಯ ರಕ್ಷಣೆಯನ್ನು ಬಲಪಡಿಸುತ್ತಿವೆ. ಅದೇ ರೀತಿ, ಸ್ವಚ್ಛ ಭಾರತ ಅಭಿಯಾನ ಮತ್ತು ಹರ್  ಘರ್ (ಪ್ರತಿಮನೆಗೂ) ಜಲ ಯೋಜನೆಗಳು ಉತ್ತಮ ಆರೋಗ್ಯ ಫಲಶ್ರುತಿಗಳಿಗೆ ಕೊಡುಗೆ ನೀಡುತ್ತಿವೆ ಎಂದರು.

ಬಡ ಮತ್ತು ಮಧ್ಯಮ ವರ್ಗದಲ್ಲಿ ಕ್ಯಾನ್ಸರ್ ಆರ್ಥಿಕ ಪರಿಣಾಮ ಉಂಟು ಮಾಡುತ್ತದೆ ಎಂಬ ಭೀತಿಯ ಬಗ್ಗೆಯೂ ಪ್ರಧಾನಮಂತ್ರಿ ಮಾತನಾಡಿದರು. ರೋಗವು ಉಂಟುಮಾಡುವ ವಿಷವರ್ತುಲದಿಂದ ಬಡವರನ್ನು ಹೊರತರಲು, ದೇಶವು ಅಗ್ಗದ ಮತ್ತು ಲಭ್ಯವಾಗುವಂತಹ ಚಿಕಿತ್ಸೆಗಾಗಿ ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಬೆಲೆಗಳು ಕಳೆದ ಕೆಲವು ವರ್ಷಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿವೆ ಎಂದು ಅವರು ಹೇಳಿದರು. 8 ಸಾವಿರಕ್ಕೂ ಹೆಚ್ಚು ಜನೌಷಧಿ  ಕೇಂದ್ರಗಳು ಅತ್ಯಂತ ಕೈಗೆಟುಕುವ ದರದಲ್ಲಿ ಔಷಧಗಳು ಮತ್ತು ಶಸ್ತ್ರ ಚಿಕಿತ್ಸೆಗಳನ್ನು  ಒದಗಿಸುತ್ತಿವೆ.  ಈ ಮಳಿಗೆಗಳಲ್ಲಿ 50 ಕ್ಕೂ ಹೆಚ್ಚು ಕ್ಯಾನ್ಸರ್ ಔಷಧಗಳು ಕಡಿಮೆ ದರದಲ್ಲಿ ಲಭ್ಯವಿದೆ ಎಂದರು.

ರೋಗಿಗಳ ಅಗತ್ಯಗಳಿಗೆ ಸರ್ಕಾರ ಸಂವೇದನಾತ್ಮಕವಾಗಿದೆ ಮತ್ತು 500ಕ್ಕೂ ಹೆಚ್ಚು ಔಷಧಗಳ ಬೆಲೆ ನಿಯಂತ್ರಣವು ವಾರ್ಷಿಕವಾಗಿ 3000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಉಳಿತಾಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೃದ್ರೋಗಿಗಳು ಪ್ರತಿ ವರ್ಷ 4500 ಕೋಟಿ ಗಿಂತ ಹೆಚ್ಚು ಉಳಿತಾಯ ಮಾಡುತ್ತಿದ್ದಾರೆ, ಪರಿಧಮನಿಯ ಸ್ಟೆಂಟ್ ಗಳ ನಿಯಂತ್ರಿತ ಬೆಲೆಗಳಿಂದಾಗಿ, ಮೊಣಕಾಲು ಅಳವಡಿಕೆಯ ಕಡಿಮೆ ವೆಚ್ಚಗಳಿಂದಾಗ ಹಿರಿಯ ನಾಗರಿಕರಿಗೆ ಪ್ರತಿ ವರ್ಷ 1500 ಕೋಟಿ ರೂಪಾಯಿಗಳನ್ನು ಉಳಿಸುವ ಮೂಲಕ ಸಹಾಯ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿ 12 ಲಕ್ಷ ಬಡ ರೋಗಿಗಳು ಉಚಿತ ಡಯಾಲಿಸಿಸ್ ಸೌಲಭ್ಯಗಳನ್ನು ಪಡೆದಿದ್ದಾರೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

ಇಂದು ಆಯುಷ್ಮಾನ್ ಭಾರತ್ ಯೋಜನೆ ಕೈಗೆಟುಕುವ ಮತ್ತು ಸಮಗ್ರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಜಾಗತಿಕ ಮಾನದಂಡವಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪಿಎಂ-ಜೆಎವೈ ಅಡಿಯಲ್ಲಿ, ದೇಶಾದ್ಯಂತ 2 ಕೋಟಿ 60 ಲಕ್ಷಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಯೋಜನೆಯ ಇಲ್ಲದಿದ್ದಾಗ, ರೋಗಿಗಳು 5೦ ರಿಂದ 6೦ ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರು ಎಂದು ಅಂದಾಜುಗಳು ಹೇಳುತ್ತವೆ. ಆಯುಷ್ಮಾನ್ ಭಾರತ್ ಯೋಜನೆಯಡಿ 17 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಸಹ ಪ್ರಯೋಜನ ಪಡೆದಿದ್ದಾರೆ. ಈ ಯೋಜನೆಯು ಕ್ಯಾನ್ಸರ್, ಮಧುಮೇಹ ಮತ್ತು ಹೈಪರ್-ಟೆನ್ಷನ್ ನಂತಹ ರೋಗಗಳ ನಿಯಮಿತ ತಪಾಸಣೆಯ ಮೂಲಕ ಗಂಭೀರ ರೋಗಗಳ ಆರಂಭಿಕ ಪತ್ತೆ ಮತ್ತು ಆರಂಭಿಕ ಚಿಕಿತ್ಸೆಯನ್ನು ಉತ್ತೇಜಿಸುತ್ತಿದೆ. ಕಾರ್ಯಾರಂಭ ಮಾಡುತ್ತಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಈ ಅಭಿಯಾನಕ್ಕೆ ಸಹಾಯ ಮಾಡುತ್ತಿವೆ. ಪಶ್ಚಿಮ ಬಂಗಾಳದಲ್ಲೂ ಇಂತಹ 5 ಸಾವಿರಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇಶದಲ್ಲಿ 15 ಕೋಟಿಗೂ ಹೆಚ್ಚು ಜನರನ್ನು ಬಾಯಿ, ಗರ್ಭಕಂಠ ಮತ್ತು ಸ್ತನ  ಕ್ಯಾನ್ಸರ್ ಗಾಗಿ ತಪಾಸಣೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

2014ರವರೆಗೆ ದೇಶದಲ್ಲಿ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆ ಸುಮಾರು 90,000 ಇತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ 7 ವರ್ಷಗಳಲ್ಲಿ, 60,000 ಹೊಸ ಸೀಟುಗಳನ್ನು ಸೇರಿಸಲಾಗಿದೆ. 2014 ರಲ್ಲಿ, ನಾವು ಕೇವಲ 6 ಏಮ್ಸ್ ಗಳನ್ನು ಹೊಂದಿದ್ದೇವು  ಆದರೆ ಇಂದು ದೇಶವು 22 ಏಮ್ಸ್ ಗಳ ಬಲವಾದ ಜಾಲದತ್ತ ಸಾಗುತ್ತಿದೆ. ಭಾರತದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಖಾತ್ರಿಪಡಿಸುವ ಕೆಲಸ ನಡೆಯುತ್ತಿದೆ. ಕ್ಯಾನ್ಸರ್ ಆರೈಕೆ ಮೂಲಸೌಕರ್ಯವು 19 ರಾಜ್ಯ ಕ್ಯಾನ್ಸರ್ ಸಂಸ್ಥೆಗಳಿಂದ ಉತ್ತೇಜನ ಪಡೆಯಲಿದೆ, 20 ತೃತೀಯ ಆರೈಕೆ ಕ್ಯಾನ್ಸರ್ ಸಂಸ್ಥೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 30 ಕ್ಕೂ ಹೆಚ್ಚು ಸಂಸ್ಥೆಗಳಿಗೆ ಕೆಲಸ ನಡೆಯುತ್ತಿದೆ. ಅದೇ ರೀತಿ ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಅಭಿಯಾನ ಮತ್ತು ಆಯುಷ್ಮಾನ್ ಭಾರತ್ ಮೂಲಸೌಕರ್ಯ ಅಭಿಯಾನ ದೇಶದ ಆರೋಗ್ಯ ವಲಯಕ್ಕೆ ಆಧುನಿಕ ರೂಪ ನೀಡಲಿವೆ ಎಂದು ಅವರು ಹೇಳಿದರು.

ಕೊರೊನಾ ವಿರುದ್ಧದ ಸಮರದಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳುವಂತೆ ಪುನರ್ ಮನವಿ ಮಾಡುವ ಮೂಲಕ ಪ್ರಧಾನಮಂತ್ರಿಯವರು ಭಾಷಣ ಸಮಾಪ್ತಿಗೊಳಿಸಿದರು.

ದೇಶದ ಎಲ್ಲಾ ಭಾಗಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು ಮತ್ತು ನವೀಕರಿಸಲು ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ ಸಿಎನ್.ಸಿಐನ ಎರಡನೇ ಕ್ಯಾಂಪಸ್ ಅನ್ನು ನಿರ್ಮಿಸಲಾಗಿದೆ. ಸಿಎನ್.ಸಿಐ ಕ್ಯಾನ್ಸರ್ ರೋಗಿಗಳ ಹೆಚ್ಚಳದ ಸಮಸ್ಯೆ ಎದುರಿಸುತ್ತಿತ್ತು ಹೀಗಾಗಿ ಕೆಲ ಕಾಲದಿಂದ ವಿಸ್ತರಣೆಯ ಅಗತ್ಯ ಕಂಡು ಬಂದಿತ್ತು. ಈ ಅಗತ್ಯವನ್ನು ಎರಡನೇ ಕ್ಯಾಂಪಸ್ ಮೂಲಕ ಪೂರೈಸಲಾಗಿದೆ.

ಸಿಎನ್.ಸಿಐನ ಎರಡನೇ ಕ್ಯಾಂಪಸ್ ಅನ್ನು 540 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ, ಇದರಲ್ಲಿ ಸುಮಾರು 4೦೦ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ ಉಳಿದಿದ್ದನ್ನು ಪಶ್ಚಿಮ ಬಂಗಾಳ ಸರ್ಕಾರವು 75:25 ರ ಅನುಪಾತದಲ್ಲಿ ಒದಗಿಸಿದೆ. ಕ್ಯಾಂಪಸ್ ಕ್ಯಾನ್ಸರ್ ರೋಗನಿರ್ಣಯ, ಸ್ಟೇಜಿಂಗ್, ಚಿಕಿತ್ಸೆ ಮತ್ತು ಆರೈಕೆಗಾಗಿ ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿರುವ 460 ಹಾಸಿಗೆಗಳ ಸಮಗ್ರ ಕ್ಯಾನ್ಸರ್ ಕೇಂದ್ರ ಘಟಕವಾಗಿದೆ. ಕ್ಯಾಂಪಸ್ ನ್ಯೂಕ್ಲಿಯರ್ ಮೆಡಿಸಿನ್ (ಪಿಇಟಿ), 3.0 ಟೆಸ್ಲಾ ಎಂ.ಆರ್.ಐ 128 ಸ್ಲೈಸ್ ಸಿಟಿ ಸ್ಕ್ಯಾನರ್, ರೇಡಿಯೋನ್ಯೂಕ್ಲೈಡ್ ಥೆರಪಿ ಘಟಕ, ಎಂಡೋಸ್ಕೋಪಿ ಸೂಟ್, ಆಧುನಿಕ ಬ್ರಾಕಿಥೆರಪಿ ಘಟಕಗಳು ಮುಂತಾದ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಕ್ಯಾಂಪಸ್ ಸುಧಾರಿತ ಕ್ಯಾನ್ಸರ್ ಸಂಶೋಧನಾ ಸೌಲಭ್ಯವಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ಕ್ಯಾನ್ಸರ್  ರೋಗಿಗಳಿಗೆ ವಿಶೇಷವಾಗಿ ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳಿಂದ ಬಂದವರಿಗೆ ಸಮಗ್ರ ಆರೈಕೆ ಯನ್ನು ಒದಗಿಸುತ್ತದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India records highest-ever startup surge with 55,200 recognised in FY26

Media Coverage

India records highest-ever startup surge with 55,200 recognised in FY26
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 18 ಎಪ್ರಿಲ್ 2026
April 18, 2026

From Tap Water to 40,000 Manuscripts: Modi’s Vision Delivers Jobs, Clean Energy & Civilisational Pride