ಮಾನ್ಯರೆ, ನನ್ನ ಸ್ನೇಹಿತ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್,
ಎರಡೂ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ!

ಇಂದು ಸ್ವಾಮಿ ವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರನ್ನು ಸ್ವಾಗತಿಸುವುದು ನನಗೆ ಅಪಾರ ಸಂತೋಷದ ವಿಷಯ. ಸ್ವಾಮಿ ವಿವೇಕಾನಂದರು ತಾವೇ ಭಾರತ ಮತ್ತು ಜರ್ಮನಿಯ ನಡುವೆ ತತ್ವಶಾಸ್ತ್ರ, ಜ್ಞಾನ ಮತ್ತು ಆಧ್ಯಾತ್ಮಿಕತೆಯ ಸೇತುವೆಯನ್ನು ನಿರ್ಮಿಸಿದ್ದರು ಎಂಬುದು ಸಂತೋಷದ ಸಂಗತಿ. ಇಂದು ಚಾನ್ಸಲರ್ ಮೆರ್ಜ್ ಅವರ ಭೇಟಿ ಆ ಸಂಬಂಧಕ್ಕೆ ಹೊಸ ಶಕ್ತಿ, ನವೀಕೃತ ನಂಬಿಕೆ ಮತ್ತು ಅವಕಾಶವನ್ನು ನೀಡುತ್ತಿದೆ.

ಜರ್ಮನಿಯ ಚಾನ್ಸಲರ್ ಆಗಿ ಫ್ರೆಡ್ರಿಕ್ ಮೆರ್ಜ್ ಇದು ಅವರ ಮೊದಲ ಭೇಟಿ—ಭಾರತಕ್ಕಷ್ಟೇ ಅಲ್ಲ, ಇಡೀ ಏಷ್ಯಾ ಖಂಡಕ್ಕೆ. ಇದು ಭಾರತ-ಜರ್ಮನಿ ಸಂಬಂಧಗಳಿಗೆ ಅವರು ನೀಡುತ್ತಿರುವ ಮಹತ್ವದ ಬಲವಾದ ಸಾಕ್ಷ್ಯವಾಗಿದೆ. ಅವರ ವೈಯಕ್ತಿಕ ಗಮನ ಮತ್ತು ಬದ್ಧತೆಗೆ ನಾನು ಅವರಿಗೆ ಮನದಾಳದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಜರ್ಮನಿಯೊಂದಿಗೆ ನಮ್ಮ ಸ್ನೇಹ ಮತ್ತು ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಭಾರತ ಸಂಪೂರ್ಣವಾಗಿ ಬದ್ಧವಾಗಿದೆ.

ಗುಜರಾತ್ ಭಾಷೆಯಲ್ಲಿ ನಾವು ‘ಆವಕಾರೋ ಮಿಠೋ ಆಪಜೆ ರೆ’ ಎಂದು ಹೇಳುತ್ತೇವೆ—ಅಂದರೆ ಆತ್ಮೀಯತೆ ಮತ್ತು ಸ್ನೇಹಭಾವದಿಂದ ಸ್ವಾಗತಿಸುವುದು. ಅದೇ ಭಾವನೆ ಮತ್ತು ಆತ್ಮದಿಂದ ಚಾನ್ಸಲರ್ ಮೆರ್ಜ್ ಅವರಿಗೆ ಭಾರತಕ್ಕೆ ಹಾರ್ದಿಕ ಸ್ವಾಗತವನ್ನು ಸಲ್ಲಿಸುತ್ತೇವೆ.

 

ಸ್ನೇಹಿತರೇ,

ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ಮಹತ್ವದ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ನಾವು ನಮ್ಮ ತಂತ್ರಾತ್ಮಕ ಪಾಲುದಾರಿಕೆಯ 25 ವರ್ಷಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಈ ವರ್ಷ ನಮ್ಮ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವವನ್ನೂ ಆಚರಿಸುತ್ತಿದ್ದೇವೆ. ಇವು ಕಾಲದ ಗುರುತುಗಳು ಮಾತ್ರವಲ್ಲ; ನಮ್ಮ ಜಂಟಿ ಆಶಯಗಳು, ಪರಸ್ಪರ ನಂಬಿಕೆ ಮತ್ತು ಕ್ರಮೇಣ ಬಲಗೊಳ್ಳುತ್ತಿರುವ ಸಹಕಾರದ ಪ್ರತೀಕಗಳಾಗಿವೆ.

ಭಾರತ ಮತ್ತು ಜರ್ಮನಿಯಂತಹ ದೇಶಗಳ ಆರ್ಥಿಕತೆಗಳ ನಡುವಿನ ನಿಕಟ ಸಹಕಾರವು ಮಾನವಕುಲದ ಹಿತಕ್ಕೆ  ಅತ್ಯಂತ ಮಹತ್ವದ್ದು. ಹೆಚ್ಚುತ್ತಿರುವ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ನಮ್ಮ ತಂತ್ರಾತ್ಮಕ ಪಾಲುದಾರಿಕೆಗೆ ಹೊಸ ಶಕ್ತಿಯನ್ನು ತುಂಬಿವೆ. ನಮ್ಮ ದ್ವಿಪಕ್ಷೀಯ ವ್ಯಾಪಾರವು ಇದೀಗ ಇತಿಹಾಸದಲ್ಲೇ ಗರಿಷ್ಠ ಮಟ್ಟವನ್ನು ತಲುಪಿ 50 ಬಿಲಿಯನ್ ಅಮೆರಿಕನ್ ಡಾಲರ್ ಗಡಿ ದಾಟಿದೆ.

ಎರಡು ಸಾವಿರಕ್ಕಿಂತ ಹೆಚ್ಚು ಜರ್ಮನ್ ಕಂಪನಿಗಳು ದೀರ್ಘಕಾಲದಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು ಭಾರತದಲ್ಲಿ ಇರುವ ಅಪಾರ ಅವಕಾಶಗಳ ಮೇಲಿನ ಅವರ ಅಚಲ ನಂಬಿಕೆ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಇಂದು ಬೆಳಗ್ಗೆ ನಡೆದ ಭಾರತ–ಜರ್ಮನಿ ಸಿಇಒ ಫೋರಂನಲ್ಲಿ ಇದು ಸ್ಪಷ್ಟವಾಗಿ ಕಂಡುಬಂತು.

ಸ್ನೇಹಿತರೇ,

ಭಾರತ ಮತ್ತು ಜರ್ಮನಿಯ ನಡುವಿನ ತಂತ್ರಜ್ಞಾನ ಸಹಕಾರವು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಬಲಗೊಳ್ಳುತ್ತಿದೆ ಮತ್ತು ಇಂದು ಅದರ ಪರಿಣಾಮಗಳು ತಳಮಟ್ಟದಲ್ಲಿಯೇ ಸ್ಪಷ್ಟವಾಗಿ ಗೋಚರಿಸುತ್ತಿವೆ.

ಪುನರ್ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮತ್ತು ಜರ್ಮನಿ ಒಂದೇ ರೀತಿಯ ಆದ್ಯತೆಗಳನ್ನು ಹಂಚಿಕೊಂಡಿವೆ. ಈ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ನಾವು ಭಾರತ–ಜರ್ಮನಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಿದ್ದೇವೆ. ಇದು ಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಹಂಚಿಕೆ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಹವಾಮಾನ, ಇಂಧನ, ನಗರಾಭಿವೃದ್ಧಿ ಮತ್ತು ನಗರ ಸಂಚಲನತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾವು ಹೊಸ ಯೋಜನೆಗಳನ್ನು ಒಟ್ಟಾಗಿ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಎರಡೂ ದೇಶಗಳ ಕಂಪನಿಗಳನ್ನು ಒಳಗೊಂಡ ಹಸಿರು ಹೈಡ್ರೋಜನ್‌ನ ಹೊಸ ಬೃಹತ್ ಯೋಜನೆ ಭವಿಷ್ಯದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದರಲ್ಲಿ ಸಂಶಯವಿಲ್ಲ.

ಭಾರತ ಮತ್ತು ಜರ್ಮನಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಥೈರ್ಯಶೀಲ ಸರಬರಾಜು ಸರಪಳಿಗಳನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಇಂದು ಸಹಿ ಮಾಡಲಾಗುತ್ತಿರುವ ಈ ಎಲ್ಲಾ ಕ್ಷೇತ್ರಗಳ ಒಪ್ಪಂದಗಳು ನಮ್ಮ ಸಹಕಾರಕ್ಕೆ ಹೊಸ ವೇಗ ಮತ್ತು ಬಲವನ್ನು ನೀಡಲಿವೆ.

ಸ್ನೇಹಿತರೇ,

ರಕ್ಷಣಾ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಸಹಕಾರವು ನಮ್ಮ ಪರಸ್ಪರ ನಂಬಿಕೆ ಮತ್ತು ಹಂಚಿಕೊಂಡ ದೃಷ್ಟಿಕೋನದ ಸಂಕೇತವಾಗಿದೆ. ರಕ್ಷಣಾ ಉದ್ಯಮಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಸರಳಗೊಳಿಸಿದ್ದಕ್ಕಾಗಿ ಚಾನ್ಸಲರ್ ಮೆರ್ಜ್ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ನಮ್ಮ ರಕ್ಷಣಾ ಕೈಗಾರಿಕೆಗಳ ನಡುವಿನ ಸಹಕಾರವನ್ನು ವೃದ್ಧಿಸಲು ನಾವು ಒಂದು ಮಾರ್ಗಸೂಚಿ ಮೇಲೆ ಕೆಲಸ ಮಾಡುತ್ತೇವೆ. ಇದರಿಂದ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.

 

ಸ್ನೇಹಿತರೇ,

ಭಾರತ ಮತ್ತು ಜರ್ಮನಿಯ ನಾಗರಿಕರಿಗೆ ಇರುವ ಸಂಬಂಧಗಳು ಆಳವಾದ ಮತ್ತು ಐತಿಹಾಸಿಕವಾದವು. ರವೀಂದ್ರನಾಥ ಟಾಗೋರ್ ಅವರ ಕೃತಿಗಳು ಜರ್ಮನಿಯ ಬೌದ್ಧಿಕ ಲೋಕಕ್ಕೆ ಹೊಸ ದೃಷ್ಟಿಕೋನವನ್ನು ನೀಡಿವೆ. ಸ್ವಾಮಿ ವಿವೇಕಾನಂದರ ತತ್ವಶಾಸ್ತ್ರವು ಜರ್ಮನಿಯಷ್ಟೇ ಅಲ್ಲ, ಸಂಪೂರ್ಣ ಯುರೋಪನ್ನೇ ಪ್ರೇರೇಪಿಸಿದೆ. ಮತ್ತು ಮೇಡಂ ಭಿಕೈಜಿ ಕಾಮಾ ಅವರು ಜರ್ಮನಿಯಲ್ಲಿ ಮೊದಲ ಬಾರಿಗೆ ಭಾರತದ ಸ್ವಾತಂತ್ರ್ಯ ಧ್ವಜವನ್ನು ಹಾರಿಸುವ ಮೂಲಕ ನಮ್ಮ ಸ್ವಾತಂತ್ರ್ಯದ ಆಶಯಗಳಿಗೆ ಜಾಗತಿಕ ಗುರುತನ್ನು ತಂದರು. ಇಂದು ನಾವು ಈ ಐತಿಹಾಸಿಕ ಸಂಪರ್ಕಕ್ಕೆ ಆಧುನಿಕ ಪಾಲುದಾರಿಕೆಯ ರೂಪವನ್ನು ನೀಡುತ್ತಿದ್ದೇವೆ.

ವಲಸೆ, ಚಲನೆ ಮತ್ತು ಕೌಶಲ್ಯ ವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಭಾರತದ ಪ್ರತಿಭಾವಂತ ಯುವ ಕಾರ್ಯಪಡೆ ಜರ್ಮನಿಯ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ.

ಇಂದು ಹೊರಡಿಸಲಾದ ಜಾಗತಿಕ ಕೌಶಲ್ಯ ಪಾಲುದಾರಿಕೆಗೆ ಸಂಬಂಧಿಸಿದ ಈ ಜಂಟಿ ಉದ್ದೇಶ ಘೋಷಣೆ ಎರಡೂ ದೇಶಗಳ ಮಧ್ಯೆ ನಂಬಿಕೆಯ ಸಂಕೇತವಾಗಿದೆ. ಇದು ವಿಶೇಷವಾಗಿ ಆರೋಗ್ಯ ಕ್ಷೇತ್ರದ ವೃತ್ತಿಪರರ ಚಲನೆಗೆ ಸಹಕಾರಿಯಾಗಲಿದೆ.

ಇಂದು ಕ್ರೀಡಾ ಕ್ಷೇತ್ರದಲ್ಲಿಯೂ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಸ್ಪಷ್ಟ ಕ್ರಮಗಳನ್ನು ಕೈಗೊಂಡಿದ್ದೇವೆ. ಇದು ನಮ್ಮ ಯುವಜನರನ್ನು ಸಂಪರ್ಕಿಸುವ ಪರಿಣಾಮಕಾರಿ ಮಾಧ್ಯಮವಾಗಲಿದೆ.

ಇಂದು ಬಿಡುಗಡೆಗೊಂಡಿರುವ ಉನ್ನತ ಶಿಕ್ಷಣದ ಸಮಗ್ರ ಮಾರ್ಗಸೂಚಿ ನಮ್ಮ ಶಿಕ್ಷಣ ಕ್ಷೇತ್ರದ ಪಾಲುದಾರಿಕೆಗೆ ಹೊಸ ದಿಕ್ಕನ್ನು ನೀಡಲಿದೆ. ಜರ್ಮನಿಯ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ತೆರೆಯುವಂತೆ ನಾನು ಆಹ್ವಾನಿಸುತ್ತೇನೆ.

ಭಾರತೀಯ ನಾಗರಿಕರಿಗೆ ವೀಸಾ-ರಹಿತ ಸಾರಿಗೆ ಘೋಷಿಸಿದಕ್ಕಾಗಿ ಚಾನ್ಸಲರ್ ಮೆರ್ಜ್ ಅವರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇದು ನಮ್ಮ ಎರಡೂ ದೇಶಗಳ ನಡುವಿನ ಜನರಿಂದ ಜನರಿಗೆ ಇರುವ ಸಂಪರ್ಕವನ್ನು ಇನ್ನಷ್ಟು ಬಲಪಡಿಸುತ್ತದೆ.

ಗುಜರಾತಿನ ಲೋಥಲ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ರಾಷ್ಟ್ರೀಯ ಸಾಗರಿಕ ಪರಂಪರೆ ಸಂಕೀರ್ಣಕ್ಕೆ ಜರ್ಮನ್ ಕಡಲವಸ್ತು ಸಂಗ್ರಹಾಲಯ ಸೇರುತ್ತಿರುವುದು ನನಗೆ ಸಂತೋಷ ತಂದಿದೆ. ಇದು ನಮ್ಮ ಎರಡೂ ದೇಶಗಳ ಕಡಲತೀರದ ಇತಿಹಾಸಗಳನ್ನು ಸಂಪರ್ಕಿಸುವ ಐತಿಹಾಸಿಕ ಹೆಜ್ಜೆಯಾಗಿದೆ.

ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯವು ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ಜರ್ಮನಿಯೊಂದಿಗೆ ದೀರ್ಘಕಾಲದ ನಿಕಟ ಸಹಕಾರವನ್ನು ಹೊಂದಿದೆ. ಇಂದು ಸಹಿ ಮಾಡಲಾಗುತ್ತಿರುವ ಒಪ್ಪಂದವು ಈ ಸಹಕಾರವನ್ನು ಇನ್ನಷ್ಟು ಬಲಪಡಿಸಲಿದೆ.

ಸ್ನೇಹಿತರೇ,

ಭಾರತ ಮತ್ತು ಜರ್ಮನಿ ಯಾವಾಗಲೂ ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ. ನಮ್ಮ ಸ್ನೇಹದ ಬಲ ಜಾಗತಿಕ ವೇದಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಘಾನಾ, ಕ್ಯಾಮರೂನ್ ಮತ್ತು ಮಲಾವಿ ಮುಂತಾದ ದೇಶಗಳಲ್ಲಿ ಜಂಟಿ ಯೋಜನೆಗಳ ಮೂಲಕ ನಡೆಯುತ್ತಿರುವ ನಮ್ಮ ತ್ರಿಪಕ್ಷೀಯ ಅಭಿವೃದ್ಧಿ ಪಾಲುದಾರಿಕೆ ಜಗತ್ತಿಗೆ ಮಾದರಿಯಾಗಿದೆ. ಜಾಗತಿಕ ದಕ್ಷಿಣದ ಅಭಿವೃದ್ಧಿಗೆ ಬೆಂಬಲ ನೀಡಲು ನಾವು ಒಟ್ಟಾಗಿ ಕೆಲಸ ಮುಂದುವರಿಸುತ್ತೇವೆ.

ಇಂಡೋ-ಪೆಸಿಫಿಕ್ ಪ್ರದೇಶವು ಎರಡೂ ದೇಶಗಳಿಗೂ ಅತ್ಯಂತ ಪ್ರಾಮುಖ್ಯತೆಯಾಗಿದೆ. ಈ ಪ್ರದೇಶದಲ್ಲಿ ನಮ್ಮ ಸಹಕಾರವನ್ನು ವೃದ್ಧಿಸಲು ನಾವು ಒಂದು ಸಮಾಲೋಚನಾ ವ್ಯವಸ್ಥೆಯನ್ನು ಪ್ರಾರಂಭಿಸಲಿದ್ದೇವೆ.

ಇಂದು ಉಕ್ರೇನ್ ಮತ್ತು ಗಾಜಾ ಸೇರಿದಂತೆ ಹಲವು ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳನ್ನು ನಾವು ವಿವರವಾಗಿ ಚರ್ಚಿಸಿದ್ದೇವೆ. ಎಲ್ಲಾ ಸಮಸ್ಯೆಗಳು ಮತ್ತು ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಬೇಕು ಎಂಬುದನ್ನು ಭಾರತ ಸದಾ ಬೆಂಬಲಿಸಿದೆ ಮತ್ತು ಈ ದಿಕ್ಕಿನಲ್ಲಿ ನಡೆಯುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡುತ್ತದೆ.

ಭಯೋತ್ಪಾದನೆ ಸಂಪೂರ್ಣ ಮಾನವಕುಲಕ್ಕೆ ಗಂಭೀರ ಬೆದರಿಕೆಯಾಗಿದೆ ಎಂಬ ಒಪ್ಪಿಕೊಂಡಿದ್ದೇವೆ. ಭಾರತ ಮತ್ತು ಜರ್ಮನಿ ಇದನ್ನು ಸಂಪೂರ್ಣ ದೃಢಸಂಕಲ್ಪದೊಂದಿಗೆ ಒಟ್ಟಾಗಿ ಎದುರಿಸುತ್ತವೆ.

ಜಾಗತಿಕ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳ ಸುಧಾರಣೆ ಅತ್ಯಂತ ಅಗತ್ಯವೆಂಬುದರಲ್ಲಿ ಭಾರತ ಮತ್ತು ಜರ್ಮನಿ ಒಂದೇ ಅಭಿಪ್ರಾಯ ಹೊಂದಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆಗೆ ಜಿ4 ಗುಂಪಿನ ಮೂಲಕ ನಾವು ಕೈಗೊಂಡಿರುವ ಜಂಟಿ ಪ್ರಯತ್ನಗಳು ಈ ಹಂಚಿಕೊಂಡ ನಂಬಿಕೆಯ ಸಾಕ್ಷ್ಯವಾಗಿವೆ.

ಮಾನ್ಯರೆ,

140 ಕೋಟಿ ಭಾರತೀಯರ ಪರವಾಗಿ, ನಿಮಗೆ ಭಾರತಕ್ಕೆ ಮತ್ತೊಮ್ಮೆ ಹಾರ್ದಿಕ ಸ್ವಾಗತವನ್ನು ಸಲ್ಲಿಸುತ್ತೇನೆ. ಇಂದು ನಡೆದ ಚರ್ಚೆಗಳು ಭಾರತ–ಜರ್ಮನಿ ಪಾಲುದಾರಿಕೆಗೆ ಹೊಸ ಶಕ್ತಿ ಮತ್ತು ಸ್ಪಷ್ಟ ದಿಕ್ಕನ್ನು ನೀಡಲಿವೆ ಎಂಬ ವಿಶ್ವಾಸ ನನಗಿದೆ.

ನಿಮ್ಮ ಈ ಭಾರತ ಭೇಟಿಗೆ, ನಿಮ್ಮ ವೈಯಕ್ತಿಕ ಬೆಂಬಲಕ್ಕೆ ಮತ್ತು ಭಾರತದೊಂದಿಗೆ ಇರುವ ನಿಮ್ಮ ಸ್ನೇಹಕ್ಕೆ ಧನ್ಯವಾದಗಳು.

ತುಂಬಾ ಧನ್ಯವಾದಗಳು

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi becomes first world leader to cross 100 million Instagram followers

Media Coverage

PM Modi becomes first world leader to cross 100 million Instagram followers
NM on the go

Nm on the go

Always be the first to hear from the PM. Get the App Now!
...
PM to address Post Budget Webinar on “Technology, Reforms and Finance for Viksit Bharat” on 27th February
February 26, 2026
It is the first in a series of Post Budget Webinars being organised on key themes emerging from the Union Budget

Prime Minister Shri Narendra Modi will address the Post Budget Webinar on “Technology, Reforms and Finance for Viksit Bharat” on 27th February at around 11:30 AM via video conferencing. The webinar will entail discussions on public capex, infrastructure, banking sector reforms, financial sector architecture, deepening capital markets, and ease of living through tax reforms.

The webinar is the first in a series of Post Budget Webinars being organised on key themes emerging from the Union Budget 2026–27. These webinars aim to draw lessons from past experiences and obtain structured feedback from participants to strengthen and ensure outcome-oriented implementation of the Budget announcements for FY 2026-27, drawing upon the practical experience and insights of diverse stakeholders. They will bring together stakeholders from industry, financial institutions, market participants, Government, industry regulators and academia to deliberate on effective implementation pathways for key Budget announcements.