ಹೊಸದಾಗಿ ವಿದ್ಯುದ್ದೀಕರಣಗೊಂಡ ವಿಭಾಗಗಳು ಮತ್ತು ಹೊಸದಾಗಿ ನಿರ್ಮಿಸಲಾದ ಡೆಮು / ಮೆಮು ಶೆಡ್ ಅನ್ನು ಸೇವೆಗೆ ಸಮರ್ಪಿಸಿದರು
"ಈಶಾನ್ಯದ ಚೊಚ್ಚಲ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತದೆ"
"ನವ ಭಾರತ ನಿರ್ಮಾಣದಲ್ಲಿ ಅಭೂತಪೂರ್ವ ಸಾಧನೆಗೆ ಕಳೆದ 9 ವರ್ಷಗಳು ಸಾಕ್ಷಿಯಾಗಿವೆ"
"ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕೆ ಆದ್ಯತೆ ನೀಡಿದೆ"
"ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಮೂಲಸೌಕರ್ಯವು ಕಲ್ಪಿಸಲಾಗಿದೆ, ಮೂಲಸೌಕರ್ಯ ಅಭಿವೃದ್ಧಿಯೇ ನಿಜವಾದ ಸಾಮಾಜಿಕ ನ್ಯಾಯ ಮತ್ತು ನಿಜವಾದ ಜಾತ್ಯತೀತತೆ"
" ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯಗಳು ಮೂಲಸೌಕರ್ಯ ಉತ್ತೇಜನದ ಅತಿದೊಡ್ಡ ಫಲಾನುಭವಿಗಳು "
"ಭಾರತೀಯ ರೈಲ್ವೆಯು ವೇಗದ ಜೊತೆಗೆ ಹೃದಯಗಳು, ಸಮಾಜಗಳು ಮತ್ತು ಅವಕಾಶಗಳನ್ನು ಜನರಿಗೆ ಸಂಪರ್ಕಿಸುವ ಮಾಧ್ಯಮವಾಗಿ ಮಾರ್ಪಟ್ಟಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಸ್ಸಾಂನ ಚೊಚ್ಚಲ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಹಸಿರು ನಿಶಾನೆ ತೋರಿದರು. ಈ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲು ಗುವಾಹಟಿಯನ್ನು ʻನ್ಯೂ ಜಲ್‌ಪಾಯಿಗುರಿʼಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಪ್ರಯಾಣವು ಕೇವಲ 5 ಗಂಟೆ 30 ನಿಮಿಷ ಹಿಡಿಯುತ್ತದೆ. ಪ್ರಧಾನಮಂತ್ರಿಯವರು 182 ರೂಟ್ ಕಿಲೋಮೀಟರ್‌ಗಳ ಹೊಸ ವಿದ್ಯುದ್ದೀಕರಣಗೊಂಡ ವಿಭಾಗಗಳನ್ನು ಸೇವೆಗೆ ಸಮರ್ಪಿಸಿದರು ಜೊತೆಗೆ, ಅಸ್ಸಾಂನ ʻಲುಮ್‌ಡಿಂಗ್‌ʼನಲ್ಲಿ ಹೊಸದಾಗಿ ನಿರ್ಮಿಸಲಾದ ʻಡೆಮುʼ/ ʻಮೆಮುʼ ಶೆಡ್ ಅನ್ನು ಉದ್ಘಾಟಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈಶಾನ್ಯದ ಸಂಪರ್ಕಕ್ಕೆ ಸಂಬಂಧಿಸಿದಂತೆ ಇದೊಂದು ಮಹತ್ವದ ದಿನವಾಗಿದೆ. ಏಕೆಂದರೆ, ಮೂರು ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟಿಗೆ ಸಾಧಿಸಲಾಗಿದೆ ಎಂದರು. ಮೊದಲನೆಯದಾಗಿ, ಈಶಾನ್ಯ ರಾಜ್ಯಗಳು ಇಂದು ತಮ್ಮ ಚೊಚ್ಚಲ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲನ್ನು ಪಡೆಯುತ್ತಿವೆ. ಇದು ಪಶ್ಚಿಮ ಬಂಗಾಳವನ್ನು ಸಂಪರ್ಕಿಸುವ ಮೂರನೇ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲಾಗಿದೆ ಎಂದು ಪ್ರಧಾನಿ ವಿವರಿಸಿದರು. ಎರಡನೆಯದಾಗಿ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಸರಿಸುಮಾರು 425 ಕಿಲೋಮೀಟರ್ ರೈಲ್ವೆ ಹಳಿಗಳನ್ನು ವಿದ್ಯುದ್ದೀಕರಿಸಲಾಗಿದೆ. ಮತ್ತು, ಮೂರನೆಯದಾಗಿ, ಅಸ್ಸಾಂನ ಲುಮ್‌ಡಿಂಗ್‌ನಲ್ಲಿ ಹೊಸ ʻಡೆಮುʼ / ʻಮೆಮುʼ ಶೆಡ್ ಅನ್ನು ಉದ್ಘಾಟಿಸಲಾಗಿದೆ ಎಂದರು. ಈ ಮಹತ್ವದ ಸಂದರ್ಭದಲ್ಲಿ ಅಸ್ಸಾಂ, ಮೇಘಾಲಯ ಮತ್ತು ಪಶ್ಚಿಮ ಬಂಗಾಳದ ಜೊತೆಗೆ ಇಡೀ ಈಶಾನ್ಯದ ನಾಗರಿಕರನ್ನು ಪ್ರಧಾನಿ ಅಭಿನಂದಿಸಿದರು.

ಗುವಾಹಟಿ-ನ್ಯೂ ಜಲ್‌ಪಾಯಿಗುರಿ ಮಾರ್ಗದ ʻವಂದೇ ಭಾರತ್ʼ ರೈಲು ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ನಡುವಿನ ಶತಮಾನಗಳಷ್ಟು ಹಳೆಯ ಬಾಂಧವ್ಯವನ್ನು ಬಲಪಡಿಸಲಿದೆ ಎಂದು ಪ್ರಧಾನಿ ಹೇಳಿದರು. ಇದು ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಭಾರಿ ಪ್ರಯೋಜನಕಾರಿಯಾಗಿದೆ. ಜೊತೆಗೆ ಪ್ರವಾಸೋದ್ಯಮ ಮತ್ತು ವ್ಯವಹಾರದಿಂದ ಉದ್ಭವಿಸುವ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಈ ʻವಂದೇ ಭಾರತ್ʼ ಮಾತೆ ಕಾಮಾಕ್ಯ ದೇವಸ್ಥಾನ, ಕಜಿರಂಗ, ʻಮನಸ್ ರಾಷ್ಟ್ರೀಯ ಉದ್ಯಾನʼ ಮತ್ತು ʻಪೊಬಿಟೋರಾ ವನ್ಯಜೀವಿ ಅಭಯಾರಣ್ಯʼಕ್ಕೆ ಸಂಪರ್ಕ ಕಲ್ಪಿಸಲಿದೆ ಎಂದರು. ಇದಲ್ಲದೆ, ಇದು ಶಿಲ್ಲಾಂಗ್, ಮೇಘಾಲಯದ ಚಿರಾಪುಂಜಿ ಮತ್ತು ಅರುಣಾಚಲ ಪ್ರದೇಶದ ತವಾಂಗ್ ಮತ್ತು ಪಾಸಿಘಾಟ್‌ನಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ವಿವರಿಸಿದರು.

ʻಎನ್.ಡಿ.ಎ.ʼ ಸರ್ಕಾರದ 9 ವರ್ಷಗಳ ಅಧಿಕಾರದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಈ ವರ್ಷಗಳಲ್ಲಿ ನವ ಭಾರತದತ್ತ ರಾಷ್ಟ್ರವು ಹಲವಾರು ಸಾಧನೆಗಳು ಮತ್ತು ಅಭೂತಪೂರ್ವ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದರು. ಸ್ವತಂತ್ರ ಭಾರತದ, ನೂತನವಾಗಿ ಉದ್ಘಾಟಿಸಲಾದ ಭವ್ಯ ಸಂಸತ್ ಭವನದ ಬಗ್ಗೆ ಮಾತನಾಡಿದ ಅವರು, “ಇದು ಭಾರತದ ಸಾವಿರ ವರ್ಷಗಳ ಪ್ರಜಾಪ್ರಭುತ್ವ ಇತಿಹಾಸವನ್ನು ಭವಿಷ್ಯದ ಸಮೃದ್ಧ ಪ್ರಜಾಪ್ರಭುತ್ವದೊಂದಿಗೆ ಸಂಪರ್ಕಿಸುತ್ತದೆ,ʼʼ ಎಂದರು. ಹಿಂದಿನ ಸರ್ಕಾರಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 2014ಕ್ಕೆ ಮುಂಚಿನ ಹಗರಣಗಳು ಎಲ್ಲ ದಾಖಲೆಗಳನ್ನು ಮುರಿದಿವೆ. ಬಡವರು ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಜ್ಯಗಳು ಇದರ ಗರಿಷ್ಠ ಪರಿಣಾಮವನ್ನು ಅನುಭವಿಸಿವೆ ಎಂದರು. "ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕೆ ಆದ್ಯತೆ ನೀಡಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು ಮನೆಗಳು, ಶೌಚಾಲಯಗಳು, ಕೊಳಾಯಿ ನೀರಿನ ಸಂಪರ್ಕಗಳು, ವಿದ್ಯುತ್, ಅನಿಲ ಕೊಳವೆ ಮಾರ್ಗಗಳು, ಏಮ್ಸ್ ಅಭಿವೃದ್ಧಿ, ರಸ್ತೆಗಳು, ರೈಲ್ವೆ, ವಾಯುಮಾರ್ಗಗಳು, ಜಲಮಾರ್ಗಗಳು, ಬಂದರುಗಳು ಮತ್ತು ಮೊಬೈಲ್ ಸಂಪರ್ಕಗಳಿಗೆ ಮೂಲಸೌಕರ್ಯ ಉತ್ತೇಜನದ ಉದಾಹರಣೆಗಳನ್ನು ನೀಡಿದರು. ಈ ಗುರಿಗಳನ್ನು ಸಾಧಿಸಲು ಸರ್ಕಾರ ಸಂಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡಿದೆ ಎಂದು ಅವರು ಒತ್ತಿ ಹೇಳಿದರು. ಮೂಲಸೌಕರ್ಯವು ಜನರ ಜೀವನವನ್ನು ಸುಲಭಗೊಳಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಅಭಿವೃದ್ಧಿಗೆ ಆಧಾರವಾಗುತ್ತದೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ವೇಗದ ಬಗ್ಗೆ ಜಗತ್ತಿನಾದ್ಯಂತ ಚರ್ಚಿಸಲಾಗುತ್ತಿದೆ ಎಂದರು. ಈ ಮೂಲಸೌಕರ್ಯವು ಬಡವರು, ಹಿಂದುಳಿದವರು, ದಲಿತರು, ಆದಿವಾಸಿಗಳು ಮತ್ತು ಸಮಾಜದ ಇತರ ಅವಕಾಶ ವಂಚಿತ ವರ್ಗಗಳನ್ನು ಬಲಪಡಿಸುತ್ತದೆ, ಅವರನ್ನು ಸಬಲೀಕರಣಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು. "ಮೂಲಸೌಕರ್ಯವು ಎಲ್ಲರಿಗೂ ಲಭ್ಯವಿದೆ, ಅದರಲ್ಲಿ ಯಾವುದೇ ತಾರತಮ್ಯವಿಲ್ಲ" ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ರೀತಿಯ ಅಭಿವೃದ್ಧಿಯೇ ನಿಜವಾದ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆ ಎಂದು ಒತ್ತಿ ಹೇಳಿದರು.

ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯಗಳು ಮೂಲಸೌಲಭ್ಯಗಳ ಉತ್ತೇಜನದ ಅತಿ ದೊಡ್ಡ ಫಲಾನುಭವಿಗಳು ಎಂದು ಪ್ರಧಾನಿ ಹೇಳಿದರು. ಈ ಮೊದಲು ಈಶಾನ್ಯದ ಜನರು ದಶಕಗಳ ಕಾಲ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು. 9 ವರ್ಷಗಳ ಹಿಂದಿನವರೆಗೂ ವಿದ್ಯುತ್, ದೂರವಾಣಿ ಅಥವಾ ಉತ್ತಮ ರೈಲು-ರಸ್ತೆ-ವಾಯು ಸಂಪರ್ಕವಿಲ್ಲದ ಹೆಚ್ಚಿನ ಸಂಖ್ಯೆಯ ಗ್ರಾಮಗಳು ಮತ್ತು ಕುಟುಂಬಗಳು ಈಶಾನ್ಯ ರಾಜ್ಯಗಳಲ್ಲೇ ಇದ್ದವು ಎಂದು ಅವರು ಮಾಹಿತಿ ನೀಡಿದರು.

ಈ ಪ್ರದೇಶದಲ್ಲಿನ ರೈಲು ಸಂಪರ್ಕವನ್ನು ಸೇವಾ ಮನೋಭಾವದ ಕೆಲಸವನ್ನಾಗಿ ಪ್ರಧಾನಿ ಉದಾಹರಿಸಿದರು. ಈಶಾನ್ಯದಲ್ಲಿ ರೈಲು ಸಂಪರ್ಕವು ಸರ್ಕಾರದ ವೇಗ, ಪ್ರಮಾಣ ಮತ್ತು ಉದ್ದೇಶಕ್ಕೆ ಪುರಾವೆಯಾಗಿದೆ ಎಂದು ಅವರು ಹೇಳಿದರು. ವಸಾಹತುಶಾಹಿ ಕಾಲದಲ್ಲಿಯೂ ಅಸ್ಸಾಂ, ತ್ರಿಪುರಾ ಮತ್ತು ಬಂಗಾಳಗಳು ರೈಲ್ವೆ ಸಂಪರ್ಕ ಹೊಂದಿದ್ದವು, ಆದರೆ ಅದರ ಉದ್ದೇಶ ಈ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವುದೊಂದೇ ಆಗಿತ್ತು ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯದ ನಂತರವೂ, ಈ ಪ್ರದೇಶದಲ್ಲಿ ರೈಲ್ವೆ ವಿಸ್ತರಣೆಯನ್ನು ನಿರ್ಲಕ್ಷಿಸಲಾಯಿತು. ಅಂತಿಮವಾಗಿ 2014ರ ನಂತರ ಹಾಲಿ ಸರ್ಕಾರವೇ ಇದರ ಹೊಣೆಗಾರಿಕೆ ಕೈಗೆತ್ತಿಕೊಳ್ಳಬೇಕಾಯಿತು ಎಂದರು.

ಈಶಾನ್ಯ ಜನರ ಸಂವೇದನೆಗಳು ಮತ್ತು ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದಾಗಿ ಶ್ರೀ ಮೋದಿ ಹೇಳಿದರು. ಈ ಬದಲಾವಣೆಯು ವ್ಯಾಪಕವಾಗಿ ಜನರ ಅನುಭವಕ್ಕೆ ಬಂದಿದೆ ಎಂದು ಅವರು ಹೇಳಿದರು. 2014ಕ್ಕೆ ಮೊದಲು, ಈಶಾನ್ಯದ ಸರಾಸರಿ ರೈಲ್ವೆ ಬಜೆಟ್ ಸುಮಾರು 2500 ಕೋಟಿ ರೂಪಾಯಿಗಳಾಗಿತ್ತು, ಇದು ಈ ವರ್ಷ 10 ಸಾವಿರ ಕೋಟಿಗಿಂತ ಅಧಿಕವಾಗಿದ್ದು, ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. ಈಗ ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ ಮತ್ತು ಸಿಕ್ಕಿಂನ ರಾಜಧಾನಿಗಳನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸಲಾಗುತ್ತಿದೆ, "ಶೀಘ್ರದಲ್ಲೇ ಈಶಾನ್ಯದ ಎಲ್ಲಾ ರಾಜಧಾನಿ ನಗರಗಳನ್ನು ʻಬ್ರಾಡ್ ಗೇಜ್ʼ ಜಾಲದೊಂದಿಗೆ ಸಂಪರ್ಕಿಸಲಾಗುವುದು," ಎಂದು ಅವರು ಹೇಳಿದರು.

"ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪ್ರಮಾಣ ಮತ್ತು ವೇಗವು ಅಭೂತಪೂರ್ವವಾಗಿದೆ. ಈಶಾನ್ಯದಲ್ಲಿ ಹೊಸ ರೈಲು ಮಾರ್ಗಗಳನ್ನು ಮೊದಲಿಗಿಂತ ಮೂರು ಪಟ್ಟು ವೇಗದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ರೈಲು ಮಾರ್ಗಗಳ ಡಬ್ಲಿಂಗ್‌ ಕಾರ್ಯವೂ ಮೊದಲಿಗಿಂತ 9 ಪಟ್ಟು ವೇಗವಾಗಿ ನಡೆಯುತ್ತಿದೆ,ʼʼ ಎಂದು ಪ್ರಧಾನಿ ಹೇಳಿದರು. ಕಳೆದ 9 ವರ್ಷಗಳಲ್ಲಿ ರೈಲು ಮಾರ್ಗಗಳ ಡಬ್ಲಿಂಗ್‌ ಕೆಲಸ ಪ್ರಾರಂಭವಾಗಿದ್ದು,  ಸರ್ಕಾರವು ಅತ್ಯಂತ ವೇಗವಾಗಿ ಇವುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಈಶಾನ್ಯದ ಅನೇಕ ದೂರದ ಪ್ರದೇಶಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಅಭಿವೃದ್ಧಿಯ ವೇಗವೇ ಕಾರಣ ಎಂದು ಪ್ರಧಾನಿ ಶ್ಲಾಘಿಸಿದರು. ನಾಗಾಲ್ಯಾಂಡ್ ಸುಮಾರು 100 ವರ್ಷಗಳ ನಂತರ ತನ್ನ ಎರಡನೇ ರೈಲ್ವೆ ನಿಲ್ದಾಣವನ್ನು ಕಂಡಿದೆ ಎಂದು ಅವರು ಮಾಹಿತಿ ನೀಡಿದರು. ಈಗ ʻವಂದೇ ಭಾರತ್ʼ ಸೆಮಿ ಹೈಸ್ಪೀಡ್ ರೈಲುಗಳು ಮತ್ತು ʻತೇಜಸ್ ಎಕ್ಸ್‌ಪ್ರೆಸ್ʼ ಒಂದು ಕಾಲದಲ್ಲಿ ಕಡಿಮೆ ವೇಗದ ʻನ್ಯಾರೋ ಗೇಜ್ʼ ಮಾರ್ಗ ಇದ್ದ ಅದೇ ಹಾದಿಯಲ್ಲಿ ಚಲಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ಭಾರತೀಯ ರೈಲ್ವೆಯ ʻವಿಸ್ಟಾ ಡೋಮ್ʼ ಬೋಗಿಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಮಾರ್ಪಟ್ಟಿವೆ ಎಂದು ಅವರು ಉಲ್ಲೇಖಿಸಿದರು.

ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಮೊಟ್ಟಮೊದಲ ತೃತೀಯ ಲಿಂಗಿಗಳ ಚಹಾ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಮಂತ್ರಿಯವರು, "ಭಾರತೀಯ ರೈಲ್ವೆಯು ತನ್ನ ವೇಗದ ಜೊತೆಗೆ ಹೃದಯಗಳು, ಸಮಾಜಗಳು ಮತ್ತು ಅವಕಾಶಗಳನ್ನು ಜನರೊಂದಿಗೆ ಬೆಸೆಯುವ ಮಾಧ್ಯಮವಾಗಿ ಮಾರ್ಪಟ್ಟಿದೆ," ಎಂದರು. ಇದು ಸಮಾಜದಿಂದ ಉತ್ತಮ ನಡವಳಿಕೆಯನ್ನು ನಿರೀಕ್ಷಿಸುವವರಿಗೆ ಗೌರವದ ಜೀವನವನ್ನು ನೀಡುವ ಒಂದು ಪ್ರಯತ್ನವಾಗಿದೆ ಎಂದು ಅವರು ಹೇಳಿದರು. 'ಒಂದು ನಿಲ್ದಾಣ, ಒಂದು ಉತ್ಪನ್ನ' ಯೋಜನೆಯಡಿ, ಈಶಾನ್ಯದ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ, ಇದು ʻವೋಕಲ್ ಫಾರ್ ಲೋಕಲ್ʼಗೆ ಒತ್ತು ನೀಡುತ್ತದೆ. ಆ ಮೂಲಕ ಸ್ಥಳೀಯ ಕುಶಲಕರ್ಮಿಗಳು, ಕಲಾವಿದರರಿಗೆ ಹೊಸ ಮಾರುಕಟ್ಟೆಯನ್ನು ಒದಗಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈಶಾನ್ಯದ ನೂರಾರು ನಿಲ್ದಾಣಗಳಲ್ಲಿ ಒದಗಿಸಲಾದ ʻವೈ-ಫೈʼ ಸೌಲಭ್ಯಗಳ ಉದಾಹರಣೆಯನ್ನೂ ಅವರು ನೀಡಿದರು. "ಸಂವೇದನೆ ಮತ್ತು ವೇಗದ ಈ ಸಂಯೋಜನೆಯಿಂದ ಮಾತ್ರ ಈಶಾನ್ಯವು ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತದೆ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಿ ಹೇಳಿದರು.

ಹಿನ್ನೆಲೆ

ಅತ್ಯಾಧುನಿಕ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲು ಈ ಪ್ರದೇಶದ ಜನರಿಗೆ ವೇಗದ ಜೊತೆಗೆ ಆರಾಮವಾಗಿ ಪ್ರಯಾಣಿಸಲು ಸಾಧನಗಳನ್ನು ಒದಗಿಸುತ್ತದೆ. ಇದು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಗುವಾಹಟಿಯನ್ನು ʻನ್ಯೂ ಜಲ್‌ಪಾಯಿಗುರಿʼ ಜೊತೆಗೆ ಸಂಪರ್ಕಿಸುವ ಈ ರೈಲು, ಪ್ರಸ್ತುತ ಈ ಎರಡು ಸ್ಥಳಗಳನ್ನು ಸಂಪರ್ಕಿಸುವ ವೇಗದ ರೈಲಿಗೆ ಹೋಲಿಸಿದರೆ ಸುಮಾರು ಒಂದು ಗಂಟೆಯ ಪ್ರಯಾಣದ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ʻವಂದೇ ಭಾರತ್ʼ ರೈಲು 5 ಗಂಟೆ 30 ನಿಮಿಷಗಳಲ್ಲಿ ಪ್ರಯಾಣವನ್ನು ಕ್ರಮಿಸಿದರೆ, ಪ್ರಸ್ತುತ ವೇಗದ ರೈಲು ಅದೇ ಪ್ರಯಾಣವನ್ನು ಕ್ರಮಿಸಲು 6 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಪ್ರಧಾನಮಂತ್ರಿಯವರು 182 ರೂಟ್ ಕಿಲೋಮೀಟರ್ ಹೊಸ ವಿದ್ಯುದ್ದೀಕರಣಗೊಂಡ ವಿಭಾಗಗಳನ್ನು ದೇಶಕ್ಕೆ ಸಮರ್ಪಿಸಿದರು. ಇದು ರೈಲುಗಳ ವೇಗವನ್ನು ಹೆಚ್ಚಿಸುವ ಮೂಲಕ ಮತ್ತು ರೈಲುಗಳ ಪ್ರಯಾಣ ಅವಧಿಯನ್ನು ಕಡಿಮೆ ಮಾಡುವ ಮೂಲಕ ಮಾಲಿನ್ಯ ಮುಕ್ತ ಸಾರಿಗೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಮೇಘಾಲಯಕ್ಕೆ ವಿದ್ಯುತ್ ಶಕ್ತಿಯಿಂದ ಚಲಿಸುವ ರೈಲುಗಳು ಪ್ರವೇಶಕ್ಕೆ ಇದರಿಂದ ಬಾಗಿಲು ತೆರೆದಂತಾಗಲಿದೆ.

ಪ್ರಧಾನಮಂತ್ರಿಯವರು ಅಸ್ಸಾಂನ ಲುಮ್‌ಡಿಂಗ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ʻಡೆಮುʼ/ʻಮೆಮುʼ ಶೆಡ್ ಅನ್ನು ಉದ್ಘಾಟಿಸಿದರು. ಈ ಪ್ರದೇಶದಲ್ಲಿ ಸಂಚರಿಸುತ್ತಿರುವ ʻಡೆಮುʼ ರೇಕ್‌ಗಳನ್ನು ನಿರ್ವಹಿಸಲು ಹಾಗೂ ಉತ್ತಮ ಕಾರ್ಯಾಚರಣೆಯ ಕಾರ್ಯಕ್ಷಮತೆ ಕಾಯ್ದುಕೊಳ್ಳಲು ಈ ಹೊಸ ಸೌಲಭ್ಯವು ಸಹಾಯಕವಾಗಲಿದೆ. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi becomes first world leader to cross 100 million Instagram followers

Media Coverage

PM Modi becomes first world leader to cross 100 million Instagram followers
NM on the go

Nm on the go

Always be the first to hear from the PM. Get the App Now!
...
Prime Minister Condoles the Passing of Shri Maroof Raza Ji
February 26, 2026

Prime Minister Narendra Modi has expressed grief over the passing of Shri Maroof Raza Ji, honoring his legacy in the fields of journalism.

The Prime Minister stated that Shri Maroof Raza Ji made a rich contribution to the world of journalism. He noted that Shri Raza enriched public discourse through his nuanced understanding of defence, national security, and strategic affairs.

Expressing his sorrow, the Prime Minister said he is pained by his passing and extended his condolences to his family and friends.
The Prime Minister shared on X:

“Shri Maroof Raza Ji made a rich contribution to the world of journalism. He enriched public discourse with his nuanced understanding of defence, national security as well as strategic affairs. Pained by his passing. Condolences to his family and friends”