ಸ್ಮಾರಕದಲ್ಲಿ ವಸ್ತು ಪ್ರದರ್ಶನ ಗ್ಯಾಲರಿಗಳನ್ನೂ ಪ್ರಧಾನಿ ಉದ್ಘಾಟಿಸಿದರು
ಜಲಿಯನ್‌ವಾಲಾ ಬಾಗ್‌ನ ಗೋಡೆಗಳ ಮೇಲಿರುವ ಗುಂಡಿನ ಗುರುತುಗಳಲ್ಲಿ ಮುಗ್ಧ ಹುಡುಗರು ಮತ್ತು ಹುಡುಗಿಯರ ಕನಸುಗಳು ಇನ್ನೂ ಗೋಚರಿಸುತ್ತವೆ: ಪ್ರಧಾನಿ
ಏಪ್ರಿಲ್ 13, 1919ರ ಆ 10 ನಿಮಿಷಗಳು ನಮ್ಮ ಸ್ವಾತಂತ್ರ್ಯ ಹೋರಾಟದ ಅಮರಗಾಥೆಯಾಯಿತು, ಇದರಿಂದಾಗಿ ನಾವು ಇಂದು ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸಲು ಸಾಧ್ಯವಾಗಿದೆ: ಪ್ರಧಾನಿ
ಯಾವುದೇ ದೇಶವು ತನ್ನ ಇತಿಹಾಸದ ಕರಾಳ ಘಟನೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಆದ್ದರಿಂದಲೇ, ಭಾರತ ಪ್ರತಿ ವರ್ಷ ಆಗಸ್ಟ್ 14 ಅನ್ನು 'ವಿಭಜನೆಯ ಕರಾಳ ನೆನಪಿನ ದಿನ'ವಾಗಿ ಆಚರಿಸಲು ನಿರ್ಧರಿಸಿದೆ: ಪ್ರಧಾನಿ
ನಮ್ಮ ಬುಡಕಟ್ಟು ಸಮುದಾಯವು ಸ್ವಾತಂತ್ರ್ಯಕ್ಕಾಗಿ ದೊಡ್ಡ ಕೊಡುಗೆ ನೀಡಿದೆ ಮತ್ತು ದೊಡ್ಡ ಮಟ್ಟದ ತ್ಯಾಗಗಳನ್ನು ಮಾಡಿದೆ, ಅವರ ಕೊಡುಗೆಗೆ ಇತಿಹಾಸದ ಪುಸ್ತಕಗಳಲ್ಲಿ ತಕ್ಕ ಸ್ಥಾನ ಸಿಕ್ಕಿಲ್ಲ: ಪ್ರಧಾನಿ
ಕೊರೊನಾ ವಿಚಾರವಿರಲಿ ಅಥವಾ ಅಫ್ಘಾನಿಸ್ತಾನದ ವಿಚಾರವಿರಲಿ ಸದಾ ಭಾರತೀಯರ ಪರವಾಗಿ ಭಾರತ ನಿಂತಿದೆ: ಪ್ರಧಾನಿ
ಅಮೃತ ಮಹೋತ್ಸವದ ಸಂದರ್ಭದಲ್ಲಿ, ದೇಶದ ಪ್ರತಿಯೊಂದು ಹಳ್ಳಿ ಮತ್ತು ಮೂಲೆ ಮೂಲೆಯಲ್ಲೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲಾಗುತ್ತಿದೆ: ಪ್ರಧಾನಮಂತ್ರಿ
ಸ್ವಾತಂತ್ರ್ಯ ಹೋರಾಟದ ಪ್ರಮುಖ ಹಂತಗಳಿಗೆ ಮತ್ತು ದೇಶದ ಸ್ವಾತಂತ್ರ್ಯ ವೀರರಿಗೆ ಸಂಬಂಧ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಲಿಯನ್‌ವಾಲಾ ಬಾಗ್ ಸ್ಮಾರಕದ ನವೀಕರಿಸಿದ ಸಂಕೀರ್ಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರು ಸ್ಮಾರಾಕದಲ್ಲಿ ವಸ್ತು ಪ್ರದರ್ಶನ ಗ್ಯಾಲರಿಗಳನ್ನೂ  ಉದ್ಘಾಟಿಸಿದರು. ಸಂಕೀರ್ಣವನ್ನು ನವೀಕರಿಸಲು ಸರಕಾರ ಕೈಗೊಂಡ ಅನೇಕ ಅಭಿವೃದ್ಧಿ ಉಪಕ್ರಮಗಳನ್ನು ಈ ಕಾರ್ಯಕ್ರಮದಲ್ಲಿ  ಪ್ರದರ್ಶಿಸಲಾಯಿತು.

ಪ್ರಧಾನ ಮಂತ್ರಿಯವರು ಪಂಜಾಬಿನ ಕೆಚ್ಚೆದೆಯ ಭೂಮಿಗೆ ಮತ್ತು ಜಲಿಯನ್ ವಾಲಾಬಾಗ್‌ನ ಪವಿತ್ರ ಮಣ್ಣಿಗೆ ನಮಿಸಿದರು. ಸ್ವಾತಂತ್ರ್ಯದ ಜ್ವಾಲೆಯನ್ನು ನಂದಿಸಲು ಹಿಂದೆಂದೂ ಕಾಣದಂತಹ ಅಮಾನುಷತೆಗೆ ದೂಡಲ್ಪಟ್ಟ ಭಾರತ ಮಾತೆಯ ಮಕ್ಕಳಿಗೆ ಅವರು ನಮಸ್ಕರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ಜಲಿಯನ್‌ವಾಲಾ ಬಾಗ್ ನ ಗೋಡೆಗಳ ಮೇಲಿರುವ ಗುಂಡಿನ ಗುರುತುಗಳಲ್ಲಿ ಮುಗ್ಧ ಹುಡುಗರು ಮತ್ತು ಹುಡುಗಿಯರು, ಸಹೋದರಿಯರು ಮತ್ತು ಸಹೋದರರ ಕನಸುಗಳು ಇನ್ನೂ ಗೋಚರಿಸುತ್ತಿವೆ ಎಂದರು. ಆ ʻಶಾಹೀದಿ ಬಾವಿʼ (ತ್ಯಾಗದ ಬಾವಿ)ಯಲ್ಲಿ ಕಸಿದುಕೊಳ್ಳಲಾದ ಅಸಂಖ್ಯಾತ ತಾಯಂದಿರು ಮತ್ತು ಸಹೋದರಿಯರ ಪ್ರೀತಿ ಮತ್ತು ಜೀವನವನ್ನು ನಾವು ಇಂದು ಸ್ಮರಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಸರ್ದಾರ್ ಉಧಮ್ ಸಿಂಗ್, ಸರ್ದಾರ್ ಭಗತ್ ಸಿಂಗ್ ಅವರಂತಹ ಅಸಂಖ್ಯಾತ ಕ್ರಾಂತಿಕಾರಿಗಳು ಮತ್ತು ಹೋರಾಟಗಾರರನ್ನು ಪ್ರಾಣತ್ಯಾಗಕ್ಕೆ ಪ್ರೇರೇಪಿಸಿದ ಸ್ಥಳ ಜಲಿಯನ್‌ವಾಲಾ ಬಾಗ್ ಎಂದು ಪ್ರಧಾನಿ ಹೇಳಿದರು. 1919ರ ಏಪ್ರಿಲ್ 13ರ ಆ 10 ನಿಮಿಷಗಳು ನಮ್ಮ ಸ್ವಾತಂತ್ರ್ಯ ಹೋರಾಟದ ಅಮರಗಾಥೆಯಾಯಿತು. ಇದರಿಂದಾಗಿ ನಾವು ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಇಂತಹ ಸಂದರ್ಭದಲ್ಲಿ, ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಆಧುನಿಕ ಆವೃತ್ತಿಯಲ್ಲಿ ಜಲಿಯನ್‌ವಾಲಾ  ಬಾಗ್  ಸ್ಮಾರಕವನ್ನು ಸಮರ್ಪಿಸುವುದು ನಮ್ಮೆಲ್ಲರ ಪಾಲಿಗೆ ದೊಡ್ಡ ಸ್ಫೂರ್ತಿ ನೀಡುವಂತಹ ಸದವಕಾಶವಾಗಿದೆ ಎಂದು ಅವರು ಹೇಳಿದರು.

ಜಲಿಯನ್‌ವಾಲಾ  ಬಾಗ್ ಹತ್ಯಾಕಾಂಡಕ್ಕೆ ಮೊದಲು ಪವಿತ್ರ ಬೈಸಾಖಿಯ ಜಾತ್ರೆಗಳು ಈ ಸ್ಥಳದಲ್ಲಿ ನಡೆಯುತ್ತಿದ್ದವು ಎಂದು ಪ್ರಧಾನಿ ನೆನಪಿಸಿಕೊಂಡರು. 'ಸರ್ಬತ್ ದಾ ಭಾಲಾ' ಸ್ಫೂರ್ತಿಯೊಂದಿಗೆ ಗುರು ಗೋವಿಂದ ಸಿಂಗ್ ಜೀ ಖಾಲ್ಸಾ ಪಂಥ್ ಅನ್ನು ಸಹ ಅದೇ ದಿನ ಸ್ಥಾಪಿಸಲಾಯಿತು. ನಮ್ಮ ಸ್ವಾತಂತ್ರ್ಯದ 75ನೇ ವರ್ಷದಲ್ಲಿ, ನವೀಕರಣಗೊಂಡ ಜಲಿಯನ್‌ವಾಲಾ ಬಾಗ್ ಈ ಪವಿತ್ರ ಸ್ಥಳದ ಇತಿಹಾಸದ ಬಗ್ಗೆ ಹೊಸ ಪೀಳಿಗೆಗೆ ನೆನಪು ಮಾಡುತ್ತದೆ, ಜೊತೆಗೆ ಅದರ ಇತಿಹಾಸದ ಬಗ್ಗೆ ಸಾಕಷ್ಟು ಕಲಿಯಲು ಪ್ರೇರೇಪಣೆ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.

ಇತಿಹಾಸವು ನಮಗೆ ಪಾಠ ಕಲಿಸುತ್ತದೆ ಮತ್ತು ಮುಂದೆ ಸಾಗಲು ಮಾರ್ಗದರ್ಶನ ನೀಡುತ್ತದೆ. ಆದ್ದರಿಂದ ತನ್ನ ಇತಿಹಾಸವನ್ನು ರಕ್ಷಿಸುವುದು ಪ್ರತಿಯೊಂದು ದೇಶದ ಜವಾಬ್ದಾರಿ  ಎಂದು ಪ್ರಧಾನಿ ಒತ್ತಿ ಹೇಳಿದರು. ಯಾವುದೇ ದೇಶವು ತನ್ನ ಇತಿಹಾಸದ ಇಂತಹ ಕರಾಳ ಘಟನೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಆದ್ದರಿಂದ, ಭಾರತವು ಪ್ರತಿ ವರ್ಷ ಆಗಸ್ಟ್ 14 ಅನ್ನು 'ವಿಭಜನೆಯ ಕರಾಳ ನೆನಪಿನ ದಿನ'ವಾಗಿ ಆಚರಿಸಲು ನಿರ್ಧರಿಸಿದೆ ಎಂದು ಅವರು ವಿವರಿಸಿದರು. ಭಾರತ ವಿಭಜನೆಯ ಸಮಯದಲ್ಲಿ ಜಲಿಯನ್‌ವಾಲಾ  ಬಾಗ್‌ ನಂತಹ ಭೀಕರ ಕ್ಷಣಗಳಿಗೆ ಭಾರತ ಸಾಕ್ಷಿಯಾಯಿತು. ವಿಭಜನೆ ವೇಳೆ ಪಂಜಾಬ್‌ನ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ಬಲಿಯಾದರು. ವಿಭಜನೆಯ ಸಮಯದಲ್ಲಿ ಭಾರತದ ಮೂಲೆ ಮೂಲೆಗಳಲ್ಲಿ ಮತ್ತು ವಿಶೇಷವಾಗಿ ಪಂಜಾಬ್ ಕುಟುಂಬಗಳಲ್ಲಿ ಏನಾಯಿತು ಎಂಬುದರ ನೋವನ್ನು ನಾವು ಇನ್ನೂ ಅನುಭವಿಸುತ್ತೇವೆ ಎಂದು ಅವರು ಹೇಳಿದರು.

ಭಾರತೀಯರು  ವಿಶ್ವದ ಯಾವುದೇ ಭಾಗದಲ್ಲಿ ತೊಂದರೆಯಲ್ಲಿದ್ದರೆ, ಭಾರತವು ತನ್ನ ಎಲ್ಲಾ ಶಕ್ತಿಯನ್ನು ಮೀರಿ ಅವರಿಗೆ ಸಹಾಯ ಮಾಡಲು ಎದ್ದು ನಿಲ್ಲುತ್ತದೆ ಎಂದು ಪ್ರಧಾನಿ ಇಂದು ಹೇಳಿದರು. ಅದು ಕೊರೊನಾ ಕಾಲವೇ ಆಗಿರಬಹುದು ಅಥವಾ ಅಫ್ಘಾನಿಸ್ತಾನದ ಬಿಕ್ಕಟ್ಟೇ ಆಗಿರಬಹುದು, ಜಗತ್ತಿಗೆ ನಿರಂತರವಾಗಿ ಇದರ ಅನುಭವವಾಗಿದೆ. ಅಫ್ಘಾನಿಸ್ತಾನದಿಂದ ನೂರಾರು ಸ್ನೇಹಿತರನ್ನು

ʻಆಪರೇಶನ್ ದೇವಿ ಶಕ್ತಿʼ ಅಡಿಯಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ.  'ಗುರು ಕೃಪಾ' ಕಾರಣದಿಂದಾಗಿ ಸರಕಾರವು ಪವಿತ್ರ ಗುರು ಗ್ರಂಥ ಸಾಹಿಬ್‌ನ 'ಸ್ವರೂಪ್' ಅನ್ನು ಜನರೊಂದಿಗೆ ಭಾರತಕ್ಕೆ ತರಲು ಸಾಧ್ಯವಾಯಿತು ಎಂದು ಪ್ರಧಾನಿ ಹೇಳಿದರು. ಇಂತಹ ಪರಿಸ್ಥಿತಿಗಳಿಂದ  ಬಳಲುತ್ತಿರುವ ಜನರಿಗಾಗಿ ನೀತಿಗಳನ್ನು ತಯಾರಿಸಲು ಗುರುಗಳ ಬೋಧನೆಗಳು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.

ಪ್ರಸ್ತುತ ಜಾಗತಿಕ ಪರಿಸ್ಥಿತಿಗಳು 'ಏಕ ಭಾರತ ಶ್ರೇಷ್ಠ ಭಾರತ'ದ ಮಹತ್ವವನ್ನು ಒತ್ತಿ ಹೇಳುತ್ತವೆ ಮತ್ತು ʻಆತ್ಮ ನಿರ್ಭರತೆʼ (ಸ್ವಾವಲಂಬನೆ) ಮತ್ತು ʻಆತ್ಮವಿಶ್ವಾಸʼಗಳ ಅಗತ್ಯವನ್ನು ಒತ್ತಿ ಹೇಳುತ್ತವೆ ಎಂದು ಪ್ರಧಾನಿ ಹೇಳಿದರು. ಈ ಘಟನೆಗಳು ದೇಶದ  ಅಡಿಪಾಯ ವನ್ನು ಬಲಪಡಿಸಲು ನಮ್ಮನ್ನು ಪ್ರೇರೇಪಿಸಿವೆ ಎಂದು ಅವರು ಹೇಳಿದರು.

ಇಂದು ಅಮೃತ ಮಹೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತಿ ಹಳ್ಳಿಯಲ್ಲೂ ಸ್ಮರಿಸಲಾಗುತ್ತಿದೆ ಮತ್ತು ಅವರನ್ನು ಗೌರವಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದ ಪ್ರಮುಖ ಹಂತಗಳಿಗೆ ಸಂಬಂಧಿಸಿದ ಮತ್ತು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸಂಬಂಧ ಹೊಂದಿರುವ ಸ್ಥಳಗಳನ್ನು ಸಂರಕ್ಷಿಸಲು ಹಾಗೂ ಅವುಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸಲಾಗುತ್ತದೆ ಎಂದು ಅವರು ಹೇಳಿದರು. ಜಲಿಯನ್‌ವಾಲಾ   ಬಾಗ್‌ನಂತೆಯೇ ದೇಶಾದ್ಯಂತ ರಾಷ್ಟ್ರೀಯ ಸ್ಮಾರಕಗಳನ್ನು ನವೀಕರಣ ಮಾಡಲಾಗುತ್ತಿದೆ. ಅಲಹಾಬಾದ್ ವಸ್ತು ಪ್ರದರ್ಶನಾಲಯದಲ್ಲಿ ಪರಸ್ಪರ ಸಂವಹನಕಾರಿ ಗ್ಯಾಲರಿ, ಕೋಲ್ಕತ್ತಾದ ಬಿಪ್ಲೋಬಿ ಭಾರತ್ ಗ್ಯಾಲರಿ ಮುಂತಾದೆಡೆಯೂ ನವೀಕರಣ ನಡೆದಿದೆ ಎಂದು ಅವರು ಉಲ್ಲೇಖಿಸಿದರು. ನೇತಾಜಿ ಮೊದಲ ಬಾರಿಗೆ

ರಾಷ್ಟ್ರಧ್ವಜವನ್ನು ಹಾರಿಸಿದ ಅಂಡಮಾನ್‌ನಲ್ಲಿನ ಸ್ಥಳಕ್ಕೆ ಹೊಸ ಗುರುತನ್ನು ನೀಡುವ ಮೂಲಕ ʻಆಜಾದ್ ಹಿಂದ್ ಫೌಜ್‌ʼನ(ಐಎನ್ಎ) ಕೊಡುಗೆಗಳನ್ನು ಮುನ್ನೆಲೆಗೆ ತರಲಾಗಿದೆ. ಅಂಡಮಾನ್ ದ್ವೀಪಗಳ ಹೆಸರುಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಮರ್ಪಿಸಲಾಗಿದೆ ಎಂದರು.

ನಮ್ಮ ಬುಡಕಟ್ಟು ಸಮುದಾಯವು ಸ್ವಾತಂತ್ರ್ಯಕ್ಕಾಗಿ ದೊಡ್ಡ ಕೊಡುಗೆ ನೀಡಿದೆ ಮತ್ತು ದೊಡ್ಡ ಮಟ್ಟದ ತ್ಯಾಗ ಮಾಡಿದೆ ಎಂದು ಪ್ರಧಾನಿ ಹೇಳಿದರು. ಅವರ ಕೊಡುಗೆಗೆ ಇತಿಹಾಸ ಪುಸ್ತಕಗಳಲ್ಲಿ ತಕ್ಕನಾದ ಸ್ಥಾನ ದೊರೆತಿಲ್ಲ ಎಂದು ಪ್ರಧಾನಿ ವಿಷಾದಿಸಿದರು. ಪ್ರಸ್ತುತ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಹೋರಾಟವನ್ನು ತೋರಿಸುವ ವಸ್ತುಸಂಗ್ರಹಾಲಯಗಳ ಕೆಲಸ ದೇಶದ 9 ರಾಜ್ಯಗಳಲ್ಲಿ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸರ್ವೋಚ್ಚ ತ್ಯಾಗ ಮಾಡಿದ ನಮ್ಮ ಸೈನಿಕರಿಗಾಗಿ ರಾಷ್ಟ್ರೀಯ ಸ್ಮಾರಕವನ್ನು  ದೇಶದ ಜನರು ಆಶಿಸಿದ್ದರು. ಇಂದು ರಾಷ್ಟ್ರೀಯ ಯುದ್ಧ ಸ್ಮಾರಕವು ಇಂದಿನ ಯುವಜನರಲ್ಲಿ ರಾಷ್ಟ್ರವನ್ನು ರಕ್ಷಿಸುವ ಮತ್ತು ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಮನೋಭಾವವನ್ನು ತುಂಬುತ್ತಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು.

ಪಂಜಾಬಿನ ಧೈರ್ಯಶಾಲಿ ಸಂಪ್ರದಾಯವನ್ನು ಒತ್ತಿ ಹೇಳಿದ ಪ್ರಧಾನಿಯವರು, ಗುರುಗಳ ಮಾರ್ಗವನ್ನು ಅನುಸರಿಸಿ, ಪಂಜಾಬ್‌ನ ಪುತ್ರರು ಮತ್ತು ಹೆಣ್ಣುಮಕ್ಕಳು ದೇಶ ಎದುರಿಸುತ್ತಿರುವ ಎಲ್ಲಾ ಅಪಾಯಗಳ ವಿರುದ್ಧ ನಿರ್ಭಯವಾಗಿ ನಿಂತಿದ್ದಾರೆ ಎಂದು ಹೇಳಿದರು. ಈ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಅದೃಷ್ಟವಶಾತ್ ಗುರುನಾನಕ್ ದೇವ್ ಜೀ ಅವರ 550ನೇ ʻಪ್ರಕಾಶೋತ್ಸವ,ʼ ಗುರು ಗೋವಿಂದ ಸಿಂಗ್ ಜೀ ಅವರ 350ನೇ ʻಪ್ರಕಾಶೋತ್ಸವʼ, ಗುರು ತೆಗ್ ಬಹದ್ದೂರ್ ಜೀ ಅವರ 400ನೇ ʼಪ್ರಕಾಶೋತ್ಸವʼದಂತಹ ಶುಭ ಸಂದರ್ಭಗಳು ಕಳೆದ ಏಳು ವರ್ಷಗಳಲ್ಲಿ ನಡೆದಿವೆ ಮತ್ತು ಕೇಂದ್ರ ಸರಕಾರ ಈ ಪವಿತ್ರ ಸಂದರ್ಭಗಳ ಮೂಲಕ ಗುರುಗಳ ಬೋಧನೆಗಳನ್ನು ಪ್ರಚಾರ ಮಾಡಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು. ಈ ಶ್ರೀಮಂತ ಪರಂಪರೆಯನ್ನು ಯುವಜನತೆಯೆಡೆಗೆ ಕೊಂಡೊಯ್ಯುವ ಪ್ರಯತ್ನಗಳನ್ನು ಅವರು ವಿವರಿಸಿದರು.   ಸುಲ್ತಾನ್‌ಪುರ್‌ ಲೋಧಿಯನ್ನು ಪಾರಂಪರಿಕ ಪಟ್ಟಣವಾಗಿ ಪರಿವರ್ತಿಸುವುದು, ಕರ್ತಾರ್‌ಪುರ್ ಕಾರಿಡಾರ್, ವಿವಿಧ ದೇಶಗಳೊಂದಿಗೆ ಪಂಜಾಬ್‌ನ ವಾಯು ಸಂಪರ್ಕ, ಗುರು ತಾಣಗಳೊಂದಿಗೆ ಸಂಪರ್ಕ ಮತ್ತು ಆನಂದಪುರ ಸಾಹಿಬ್ - ಫತೇಘರ್ ಸಾಹಿಬ್ - ಚಮ್ಕೌರ್ ಸಾಹಿಬ್ - ಫಿರೋಜ್ ಪುರ್ -ಅಮೃತಸರ - ಖಟ್ಕರ್ ಕಲಾನ್ - ಕಲನೌರ್ - ಪಟಿಯಾಲಾ ಪಾರಂಪರಿಕ ಸರ್ಕ್ಯೂಟ್ ನಂತಹ ಉಪಕ್ರಮಗಳ ಬಗ್ಗೆ ವಿವರಿಸಿದರು.

ನಮ್ಮ ಸ್ವಾತಂತ್ರ್ಯದ ಈ ಅಮೃತ ಕಾಲವು ಇಡೀ ದೇಶಕ್ಕೆ ಬಹಳ ಮುಖ್ಯ ಎಂದು ಪ್ರಧಾನಿ ಹೇಳಿದರು. ಈ ಅಮೃತ ಕಾಲದಲ್ಲಿ, ಪ್ರತಿಯೊಬ್ಬರೂ ಪರಂಪರೆ ಮತ್ತು ಅಭಿವೃದ್ಧಿ ಎರಡನ್ನೂ ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು. ಪಂಜಾಬ್‌ನ ಭೂಮಿ ಸದಾ ನಮಗೆ ಸ್ಫೂರ್ತಿ ನೀಡಿದೆ ಮತ್ತು ಇಂದು ಪಂಜಾಬ್ ಪ್ರತಿಯೊಂದು ಹಂತದಲ್ಲೂ ಮತ್ತು ಪ್ರತಿಯೊಂದು ದಿಕ್ಕಿನಲ್ಲಿಯೂ ಪ್ರಗತಿ ಸಾಧಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಇದಕ್ಕಾಗಿ ಎಲ್ಲರೂ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮನೋಭಾವದಿಂದ ಒಟ್ಟಾಗಿ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದರು. ಜಲಿಯನ್ ವಾಲಾಬಾಗ್‌ನ ಈ ಪವಿತ್ರ ಭೂಮಿಯು ದೇಶದ ಗುರಿಗಳ ಶೀಘ್ರ ಸಾಧನೆ ನಿರ್ಣಯಗಳಿಗೆ ನಿರಂತರವಾಗಿ ಶಕ್ತಿ ತುಂಬುವುದನ್ನು ಮುಂದುವರಿಸಬೇಕೆಂದು ಅವರು ಹಾರೈಸಿದರು.

ಕೇಂದ್ರ ಸಂಸ್ಕೃತಿ ಸಚಿವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು, ಸಂಸ್ಕೃತಿ ಖಾತೆ ರಾಜ್ಯ ಸಚಿವರು, ಪಂಜಾಬ್ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು; ಹರಿಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು; ಪಂಜಾಬ್‌ನ ಲೋಕಸಭಾ ಮತ್ತು ರಾಜ್ಯಸಭಾ ಸಂಸದರು, ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೆಚ್ಚಿನ ವಿವರಗಳಿಗಾಗಿ ಪೂರ್ವ ವರದಿಯನ್ನು ಇಲ್ಲಿ ಓದಿ

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Second consignment of 37.5 tonnes HADR aid reaches flood-hit Nepal; India sends 47.5 tonnes of relief material in total

Media Coverage

Second consignment of 37.5 tonnes HADR aid reaches flood-hit Nepal; India sends 47.5 tonnes of relief material in total
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 28 ಆಗಸ್ಟ್ 2026
August 28, 2026

India’s Growth Story, Grounded: Inclusion, Exports, and Infrastructure Under One Vision of PM Modi