ವಾರಾಣಸಿ ಕಂಟೋನ್ಮೆಂಟ್ ನಿಲ್ದಾಣದಿಂದ ಗೋಡೋಲಿಯಾಗೆ ಪ್ರಯಾಣಿಕರ ರೋಪ್‌ವೇಗೆ ಅಡಿಪಾಯ ಹಾಕಿದರು
ಜಲ ಜೀವನ್ ಮಿಷನ್ ಅಡಿಯಲ್ಲಿ 19 ಕುಡಿಯುವ ನೀರಿನ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
"ಕಾಶಿಯು ಜನರ ಆತಂಕಗಳನ್ನು ದೂರಮಾಡಿ ನಗರವನ್ನು ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ"
"ಕಳೆದ 9 ವರ್ಷಗಳಲ್ಲಿ ಗಂಗಾ ಘಾಟ್‌ಗಳ ಪರಿವರ್ತನೆಗೆ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ"
"ಕಳೆದ 3 ವರ್ಷಗಳಲ್ಲಿ ದೇಶದ 8 ಕೋಟಿ ಕುಟುಂಬಗಳು ನಲ್ಲಿ ಮೂಲಕ ನೀರು ಪೂರೈಕೆ ಪಡೆದಿವೆ"
"ಅಮೃತ ಕಾಲದಲ್ಲಿ ಭಾರತದ ಅಭಿವೃದ್ಧಿ ಪಯಣದಲ್ಲಿ ಪ್ರತಿಯೊಬ್ಬ ನಾಗರಿಕರು ಕೊಡುಗೆ ನೀಡಲು ಸರ್ಕಾರ ಶ್ರಮಿಸುತ್ತದೆ ಮತ್ತು ಯಾರನ್ನೂ ಹಿಂದುಳಿಯಲು ಬಿಡುವುದಿಲ್ಲ"
"ಉತ್ತರ ಪ್ರದೇಶವು ಅಭಿವೃದ್ಧಿಯ ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೂ ಹೊಸ ಆಯಾಮಗಳನ್ನು ನೀಡುತ್ತಿದೆ"
"ಉತ್ತರ ಪ್ರದೇಶವು ನಿರಾಶೆಯ ನೆರಳಿನಿಂದ ಹೊರಬಂದಿದೆ ಮತ್ತು ಈಗ ತನ್ನ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳ ಹಾದಿಯನ್ನು ತುಳಿಯುತ್ತಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯಲ್ಲಿ 1780 ಕೋಟಿ ರೂ.ಗೂ ಹೆಚ್ಚು ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು. ವಾರಾಣಸಿ ಕಂಟೋನ್ಮೆಂಟ್‌ ನಿಲ್ದಾಣದಿಂದ ಗೋಡೋಲಿಯಾವರೆಗಿನ ಪ್ರಯಾಣಿಕರ ರೋಪ್‌ವೇಗೆ ಶಂಕುಸ್ಥಾಪನೆ, ನಮಾಮಿ ಗಂಗಾ ಯೋಜನೆಯಡಿ ಭಗವಾನ್‌ಪುರದಲ್ಲಿ 55 ಎಂಎಲ್‌ಡಿ ಒಳಚರಂಡಿ ಸಂಸ್ಕರಣಾ ಘಟಕ, ಸೇವಾಪುರಿಯ ಇಸರ್ವಾರ್ ಗ್ರಾಮದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಿಂದ ನಿರ್ಮಾಣಗೊಳ್ಳಲಿರುವ ಎಲ್‌ಪಿಜಿ ಬಾಟ್ಲಿಂಗ್ ಘಟಕ, ಸಿಗ್ರಾ ಸ್ಟೇಡಿಯಂನ 2 ಮತ್ತು 3 ನೇ ಹಂತಗಳ ಪುನರಾಭಿವೃದ್ಧಿ, ಭರ್ತರಾ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳೊಂದಿಗೆ ತೇಲುವ ಜೆಟ್ಟಿ ಈ ಯೋಜನೆಗಳಲ್ಲಿ ಸೇರಿವೆ. ಪ್ರಧಾನಮಂತ್ರಿಯವರು ಜಲ ಜೀವನ್ ಮಿಷನ್ ಅಡಿಯಲ್ಲಿ 19 ಕುಡಿಯುವ ನೀರಿನ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು, ಇದು 63 ಗ್ರಾಮ ಪಂಚಾಯತ್‌ಗಳ 3 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಮಿಷನ್ ಅಡಿಯಲ್ಲಿ 59 ಕುಡಿಯುವ ನೀರಿನ ಯೋಜನೆಗಳ ಶಂಕುಸ್ಥಾಪನೆಯನ್ನೂ ಅವರು ನೆರವೇರಿಸಿದರು. ಹಣ್ಣುಗಳು ಮತ್ತು ತರಕಾರಿಗಳ ಶ್ರೇಣೀಕರಣ, ವಿಂಗಡಣೆ ಮತ್ತು ಸಂಸ್ಕರಣೆಗಾಗಿ ಕಾರ್ಖಿಯಾನ್‌ನಲ್ಲಿ ನಿರ್ಮಿಸಿರುವ ಸಮಗ್ರ ಪ್ಯಾಕ್ ಹೌಸ್ ಅನ್ನು ಅವರು ದೇಶಕ್ಕೆ ಸಮರ್ಪಿಸಿದರು. ವಾರಾಣಸಿ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇದು ನವರಾತ್ರಿಯ ಶುಭ ಸಂದರ್ಭವಾಗಿದೆ ಮತ್ತು ಚಂದ್ರಘಂಟ ಮಾತೆಯನ್ನು ಪೂಜಿಸುವ ದಿನವಾಗಿದೆ ಎಂದು ಹೇಳಿದರು. ಈ ವಿಶೇಷ ಸಂದರ್ಭದಲ್ಲಿ ವಾರಾಣಸಿಯ ನಾಗರಿಕರೊಂದಿಗೆ ಇರುವುದಕ್ಕೆ ಸಂತಸವಾಗುತ್ತಿದೆ ಎಂದ ಅವರು ಹೇಳಿದರು. ವಾರಾಣಸಿಯ ಏಳಿಗೆಗೆ ಹೊಸ ಅಧ್ಯಾಯ ಸೇರ್ಪಡೆಯಾಗುತ್ತಿದೆ. ಪ್ರಯಾಣಿಕರ ರೋಪ್‌ವೇಗೆ ಶಂಕುಸ್ಥಾಪನೆ ಮಾಡಲಾಗಿದೆ, ವಾರಾಣಸಿಯ ಸರ್ವತೋಮುಖ ಅಭಿವೃದ್ಧಿಗಾಗಿ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಗಂಗಾ ನದಿಯ ಸ್ವಚ್ಛತೆ, ಪ್ರವಾಹ ನಿಯಂತ್ರಣ, ಪೊಲೀಸ್ ಮತ್ತು ಕ್ರೀಡಾ ಸೇವೆಯ ಕ್ಷೇತ್ರಗಳನ್ನು ಒಳಗೊಂಡಂತೆ ನೂರಾರು ಕೋಟಿ ರೂ.ವೆಚ್ಚದ ಇತರ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಬಿಎಚ್‌ಯುನಲ್ಲಿ ಯಂತ್ರೋಪಕರಣಗಳ ವಿನ್ಯಾಸದ ಶ್ರೇಷ್ಠತಾ ಕೇಂದ್ರದ ಅಡಿಪಾಯವನ್ನು ಹಾಕಲಾಗಿದೆ, ಇದು ನಗರಕ್ಕೆ ಜಾಗತಿಕ ಗುಣಮಟ್ಟದ ಮತ್ತೊಂದು ಸಂಸ್ಥೆಯನ್ನು ಸೇರಿಸುತ್ತದೆ ಎಂದು ಅವರು ಹೇಳಿದರು. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ವಾರಾಣಸಿ ಮತ್ತು ಪೂರ್ವಾಂಚಲದ ಜನತೆಗೆ ಪ್ರಧಾನಿಯವರು ಅಭಿನಂದನೆ ಸಲ್ಲಿಸಿದರು.

ಕಾಶಿಯ ಅಭಿವೃದ್ಧಿಯ ಬಗ್ಗೆ ಎಲ್ಲೆಡೆ ಮಾತನಾಡಲಾಗುತ್ತಿದೆ ಮತ್ತು ಪ್ರತಿಯೊಬ್ಬ ಪ್ರವಾಸಿಗರು ಹೊಸ ಶಕ್ತಿಯನ್ನು ಪಡೆದು ಹಿಂತಿರುಗುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಕಾಶಿಯು ಜನರ ಆತಂಕಗಳನ್ನು ದೂರಮಾಡಿ ನಗರವನ್ನು ಪರಿವರ್ತಿಸುವಲ್ಲಿ ಯಶಸ್ವಿಯಾಯಿತು ಎಂದು ಹೇಳಿದರು.

ಕಾಶಿಯಲ್ಲಿ ಹಳೆಯ ಮತ್ತು ಹೊಸದನ್ನು ಏಕಕಾಲದಲ್ಲಿ 'ದರ್ಶನ' ಪಡೆಯುವ ಕುರಿತು ಪ್ರಧಾನಿ ಮಾತನಾಡಿದರು. ಅವರು ಕಾಶಿ ವಿಶ್ವನಾಥ ಧಾಮ, ಗಂಗಾ ಘಾಟ್ ಕೆಲಸ ಮತ್ತು ಅತಿ ಉದ್ದದ ನದಿ ವಿಹಾರ ಕ್ರೂಸ್‌ ಕುರಿತ ಜಾಗತಿಕ ಸಂಚಲನವನ್ನು ಪ್ರಸ್ತಾಪಿಸಿದರು. ಕೇವಲ ಒಂದು ವರ್ಷದಲ್ಲಿ 7 ಕೋಟಿಗೂ ಹೆಚ್ಚು ಪ್ರವಾಸಿಗರು ಕಾಶಿಗೆ ಭೇಟಿ ನೀಡಿದ್ದಾರೆ. ಈ ಪ್ರವಾಸಿಗರು ನಗರದಲ್ಲಿ ಹೊಸ ಆರ್ಥಿಕ ಅವಕಾಶಗಳನ್ನು ಮತ್ತು ಉದ್ಯೋಗವನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹೊಸ ಅಭಿವೃದ್ಧಿ ಯೋಜನೆಗಳು ಮತ್ತು ನಗರದ ಸೌಂದರ್ಯೀಕರಣದ ಬಗ್ಗೆಯೂ ಪ್ರಧಾನಮಂತ್ರಿಯವರು ಗಮನ ಸೆಳೆದರು. ರಸ್ತೆಗಳು, ಸೇತುವೆಗಳು, ರೈಲುಗಳು ಅಥವಾ ವಿಮಾನ ನಿಲ್ದಾಣಗಳ ಮೂಲಕ ವಾರಾಣಸಿಗೆ ಸಂಪರ್ಕವು ಸಂಪೂರ್ಣ ಸರಾಗವಾಗಿದೆ, ಹೊಸ ರೋಪ್‌ವೇ ಯೋಜನೆಯು ನಗರದ ಸಂಪರ್ಕವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು. ಇದು ಪ್ರವಾಸಿಗರಿಗೆ ಹೊಸ ಆಕರ್ಷಣೆಯನ್ನು ಸೃಷ್ಟಿಸುವುದರೊಂದಿಗೆ ನಗರದ ಸೌಲಭ್ಯಗಳನ್ನು ಹೆಚ್ಚಿಸುತ್ತದೆ. ರೋಪ್‌ವೇ ಪೂರ್ಣಗೊಂಡ ನಂತರ ಬನಾರಸ್ ಕಂಟೋನ್ಮೆಂಟ್ ರೈಲು ನಿಲ್ದಾಣ ಮತ್ತು ಕಾಶಿ-ವಿಶ್ವನಾಥ ಕಾರಿಡಾರ್ ನಡುವಿನ ಅಂತರವನ್ನು ನಿಮಿಷಗಳಲ್ಲಿಯೇ ಕ್ರಮಿಸಬಹುದು ಮತ್ತು ಇದು ಕಂಟೋನ್ಮೆಂಟ್ ನಿಲ್ದಾಣ ಮತ್ತು ಗೋಡೋಲಿಯಾ ನಡುವಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ಪಕ್ಕದ ನಗರಗಳು ಮತ್ತು ರಾಜ್ಯಗಳಿಂದ ಬರುವ ಜನರು ಅಲ್ಪಾವಧಿಯಲ್ಲಿ ನಗರ ಪ್ರವಾಸ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಉಲ್ಲೇಖಿಸಿದರು. ರೋಪ್‌ವೇಯಿಂದ ನಿರ್ಮಾಣವಾಗುವ ಆಧುನಿಕ ಸೌಲಭ್ಯಗಳು ಆರ್ಥಿಕ ಚಟುವಟಿಕೆಗಳಿಗೆ ಹೊಸ ಕೇಂದ್ರವನ್ನು ಸೃಷ್ಟಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ಕಾಶಿಯೊಂದಿಗೆ ವಿಮಾನ ಸಂಪರ್ಕವನ್ನು ಬಲಪಡಿಸುವ ಒಂದು ಹೆಜ್ಜೆಯಾಗಿರುವ ಬಬತ್‌ಪುರ ವಿಮಾನ ನಿಲ್ದಾಣದಲ್ಲಿ ಹೊಸ ಎಟಿಸಿ ಟವರ್ ಕುರಿತು ಪ್ರಧಾನಮಂತ್ರಿ ಮಾತನಾಡಿದರು. ತೇಲುವ ಜೆಟ್ಟಿಯ ಅಭಿವೃದ್ಧಿಯ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಯಾತ್ರಿಕರು ಮತ್ತು ಪ್ರವಾಸಿಗರ ಅಗತ್ಯಗಳ ಬಗ್ಗೆ ಪ್ರಮುಖ ಗಮನ ಕೇಂದ್ರೀಕರಿಸಲಾಗಿದೆ ಎಂದು ಒತ್ತಿ ಹೇಳಿದರು. ನಮಾಮಿ ಗಂಗಾ ಮಿಷನ್ ಅಡಿಯಲ್ಲಿ, ಗಂಗಾನದಿಯ ದಡದಲ್ಲಿರುವ ಎಲ್ಲಾ ನಗರಗಳಲ್ಲಿ ಒಳಚರಂಡಿ ಸಂಸ್ಕರಣಾ ಜಾಲವನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಕಳೆದ 9 ವರ್ಷಗಳಲ್ಲಿ ಬದಲಾಗಿರುವ ಗಂಗಾ ಘಾಟ್‌ಗಳ ಚಿತ್ರಣವನ್ನು ಎಲ್ಲರೂ ನೋಡಿದ್ದಾರೆ ಎಂದು ಪ್ರಧಾನಿ ಹೇಳಿದರು ಮತ್ತು ಗಂಗಾನದಿಯ ಎರಡೂ ಬದಿಗಳಲ್ಲಿ ಹೊಸ ಪರಿಸರ ಅಭಿಯಾನವು ನಡೆಯುತ್ತಿದೆ, ಅಲ್ಲಿ ಸರ್ಕಾರವು 5 ಕಿಲೋಮೀಟರ್ ಉದ್ದಕ್ಕೂ ಸಹಜ ಕೃಷಿಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದರು. ಇದಕ್ಕಾಗಿ ಈ ವರ್ಷದ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಲಾಗಿದೆ. ಸಹಜ ಕೃಷಿಗೆ ಸಂಬಂಧಿಸಿದಂತೆ ರೈತರಿಗೆ ನೆರವು ನೀಡಲು ಹೊಸ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ವಾರಾಣಸಿ ಜೊತೆಗೆ ಇಡೀ ಪೂರ್ವ ಉತ್ತರ ಪ್ರದೇಶ ಕೃಷಿ ಮತ್ತು ಕೃಷಿ ರಫ್ತಿನ ಕೇಂದ್ರವಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ವಾರಣಾಸಿಯಲ್ಲಿ ಸಂಸ್ಕರಣೆ, ಸಾರಿಗೆ ಮತ್ತು ಶೇಖರಣಾ ಸೌಲಭ್ಯಗಳು, ವಾರಾಣಸಿಯ 'ಲಂಗ್ಡಾ' ಮಾವಿಗೆ ಹೊಸ ಉತ್ತೇಜನ ನೀಡುತ್ತಿವೆ, ಗಾಜಿಪುರದ 'ಭಿಂಡಿ' ಮತ್ತು 'ಹರಿ ಮಿರ್ಚ್', ಜಾನ್‌ಪುರದ 'ಮೂಲಿ ಮತ್ತು ಖಾರ್ಬೂಜೆ' ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುತ್ತಿವೆ ಎಂದು ಅವರು ಹೇಳಿದರು.

ಶುದ್ಧ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರವು ಆಯ್ಕೆ ಮಾಡಿಕೊಂಡಿರುವ ಅಭಿವೃದ್ಧಿಯ ಮಾರ್ಗವು ಸೇವೆಯ ಜೊತೆಗೆ ಸಹಾನುಭೂತಿಯ ಅಂಶಗಳನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ಇಂದು ಶುದ್ಧ ಕುಡಿಯುವ ನೀರಿಗೆ ಸಂಬಂಧಿಸಿದ ಹಲವಾರು ಯೋಜನೆಗಳು ಉದ್ಘಾಟನೆಗೊಂಡಿದ್ದು, ವಿವಿಧ ಯೋಜನೆಗಳ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ‘ಹರ್ ಘರ್ ನಲ್ ಸೇ ಜಲ್’ಅಭಿಯಾನದ ಬಗ್ದಗೆ ವಿವರಿಸಿದ ಅವರು, ಕಳೆದ 3 ವರ್ಷಗಳಲ್ಲಿ ದೇಶದ 8 ಕೋಟಿ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆಯಾಗಿದೆ ಎಂದು ತಿಳಿಸಿದರು. ಅವರು ಉಜ್ವಲ ಯೋಜನೆಯ ಬಗ್ಗೆಯೂ ಮಾತನಾಡಿದರು ಮತ್ತು ಸೇವಾಪುರಿಯಲ್ಲಿರುವ ಎಲ್‌ಪಿಜಿ ಬಾಟ್ಲಿಂಗ್ ಘಟಕವು ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುವುದಲ್ಲದೆ ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಿಹಾರದಲ್ಲಿ ಅನಿಲ ಸಿಲಿಂಡರ್‌ಗಳ ಬೇಡಿಕೆಗಳನ್ನು ಪೂರೈಸುತ್ತದೆ ಎಂದು ಹೇಳಿದರು.

ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳು ಬಡವರ ಸೇವೆಯಲ್ಲಿ ನಂಬಿಕೆ ಇಟ್ಟಿವೆ ಎಂದು ಬಣ್ಣಿಸಿದ ಪ್ರಧಾನಿ, ಜನರು ತಮ್ಮನ್ನ್ನು 'ಪ್ರಧಾನ ಮಂತ್ರಿ' ಎಂದು ಕರೆಯುತ್ತಿದ್ದರೂ, ನಾನು ಜನರ ಸೇವೆ ಮಾಡಲು ಮಾತ್ರ ಇಲ್ಲಿದ್ದೇನೆ ಎಂಬ ನಂಬಿಕೆಯನ್ನು ಹೊಂದಿದ್ದೇನೆ ಎಂದು ಹೇಳಿದರು. ಇಂದು ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ನಡೆಸಿದ ತಮ್ಮ ಸಂವಾದವನ್ನು ನೆನಪಿಸಿಕೊಂಡ ಪ್ರಧಾನಿ, ವಾರಾಣಸಿಯ ಸಾವಿರಾರು ನಾಗರಿಕರು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. 2014ರ ಮೊದಲು ಬ್ಯಾಂಕ್ ಖಾತೆ ತೆರೆಯುವುದೇ ಒಂದು ತ್ರಾಸದಾಯಕ ಕೆಲಸವಾಗಿತ್ತು ಎಂದ ಪ್ರಧಾನಿ, ಇಂದು ದೇಶದ ಬಡವರೂ ಕೂಡ ಜನ್ ಧನ್ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಪ್ರಯೋಜನಗಳು ಅವರ ಖಾತೆಗಳಿಗೆ ನೇರವಾಗಿ ಸರ್ಕಾರದಿಂದ ಜಮಾ ಆಗುತ್ತಿವೆ ಎಂದು ತಿಳಿಸಿದರು. ಸಣ್ಣ ರೈತರು, ಉದ್ಯಮಿಗಳು ಅಥವಾ ಮಹಿಳಾ ಸ್ವಸಹಾಯ ಗುಂಪುಗಳು, ಮುದ್ರಾ ಯೋಜನೆಯ ಮೂಲಕ ಸಾಲ ಪಡೆಯುವುದು ತುಂಬಾ ಸುಲಭವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಾನುವಾರು ಮತ್ತು ಮೀನು ಸಾಕಣೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲಾಗಿದೆ, ಬೀದಿಬದಿ ವ್ಯಾಪಾರಿಗಳು ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಮತ್ತು ವಿಶ್ವಕರ್ಮರು ಪಿಎಂ-ವಿಶ್ವಕರ್ಮ ಯೋಜನೆ ಮೂಲಕ ಸಾಲವನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಅಮೃತ ಕಾಲದಲ್ಲಿ ಭಾರತದ ಅಭಿವೃದ್ಧಿ ಪಯಣದಲ್ಲಿ ಪ್ರತಿಯೊಬ್ಬ ನಾಗರಿಕನೂ ಕೊಡುಗೆ ನೀಡಲು ಸರ್ಕಾರ ಶ್ರಮಿಸುತ್ತದೆ ಮತ್ತು ಯಾರೂ ಹಿಂದುಳಿಯಲು ಬಿಡುವುದಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು.

ಒಂದು ಲಕ್ಷ ಅಥ್ಲೀಟ್‌ಗಳು ಭಾಗವಹಿಸಿದ್ದ ಖೇಲೋ ಬನಾರಸ್ ಸ್ಪರ್ಧೆಯ ವಿಜೇತರೊಂದಿಗಿನ ಸಂವಾದವನ್ನು ಪ್ರಧಾನಿಯವರು ಪ್ರಸ್ತಾಪಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿದವರನ್ನು ಮತ್ತು ವಿಜೇತರನ್ನು ಪ್ರಧಾನಮಂತ್ರಿ ಅಭಿನಂದಿಸಿದರು. ಬನಾರಸ್ ಯುವಕರಿಗೆ ನೀಡಲಾಗುತ್ತಿರುವ ಕ್ರೀಡಾ ಸೌಲಭ್ಯಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ಸಿಗ್ರಾ ಕ್ರೀಡಾಂಗಣದ 2 ಮತ್ತು 3ನೇ ಹಂತದ ವಿಸ್ತರಣೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ವಾರಾಣಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಕೂಡ ಬರಲಿದೆ ಎಂದು ತಿಳಿಸಿದರು.

ಇಂದು ಉತ್ತರ ಪ್ರದೇಶವು ರಾಜ್ಯದ ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರಕ್ಕೂ ಹೊಸ ಆಯಾಮಗಳನ್ನು ಸೇರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ನಾಳೆ ಮಾರ್ಚ್ 25 ರಂದು ಉತ್ತರ ಪ್ರದೇಶದ ಯೋಗಿ ಸರ್ಕಾರವು ತನ್ನ ಎರಡನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸುತ್ತಿದೆ ಎಂದು ಅವರು ಹೇಳಿದರು ಮತ್ತು ಶ್ರೀ ಯೋಗಿ ಅವರು ಅತಿ ಹೆಚ್ಚು ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು. ಉತ್ತರ ಪ್ರದೇಶವು ನಿರಾಶೆಯ ನೆರಳಿನಿಂದ ಹೊರಬಂದಿದೆ ಮತ್ತು ಈಗ ತನ್ನ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು. ಹೆಚ್ಚಿದ ಭದ್ರತೆ ಮತ್ತು ಸೇವೆಗೆ ಉತ್ತರ ಪ್ರದೇಶ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಇಂದಿನ ಹೊಸ ಅಭಿವೃದ್ಧಿ ಯೋಜನೆಗಳು ಸಮೃದ್ಧಿಯ ಹಾದಿಯನ್ನು ಬಲಪಡಿಸುತ್ತವೆ, ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆಗಳು ಎಂದು ಪ್ರಧಾನಿಯವವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 ಈ ಸಂದರ್ಭದಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ ಸರ್ಕಾರದ ಸಚಿವರು ಉಪಸ್ಥಿತರಿದ್ದರು.

ಹಿನ್ನೆಲೆ

ಕಳೆದ ಒಂಬತ್ತು ವರ್ಷಗಳಲ್ಲಿ, ವಾರಾಣಸಿಯ ಚಿತ್ರಣವನ್ನು ಪರಿವರ್ತಿಸಲು ಮತ್ತು ನಗರ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಜೀವನ ಸೌಕರ್ಯವನ್ನು ಹೆಚ್ಚಿಸಲು ಪ್ರಧಾನ ಮಂತ್ರಿಯವರು ವಿಶೇಷ ಗಮನವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿ, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾನಿಲಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 1780 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ವಾರಾಣಸಿ ಕಂಟೋನ್ಮೆಂಟ್ ನಿಲ್ದಾಣದಿಂದ ಗೋಡೋಲಿಯಾವರೆಗೆ ಪ್ರಯಾಣಿಕರ ರೋಪ್‌ವೇಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ಮಾಡಿದರು. ಯೋಜನೆಯ ವೆಚ್ಚ ಸುಮಾರು ರೂ. 645 ಕೋಟಿ. ರೋಪ್‌ವೇ ಐದು ನಿಲ್ದಾಣಗಳೊಂದಿಗೆ 3.75 ಕಿಮೀ ಉದ್ದವಿರುತ್ತದೆ. ಇದು ವಾರಾಣಸಿಯ ಪ್ರವಾಸಿಗರು, ಯಾತ್ರಿಕರು ಮತ್ತು ನಿವಾಸಿಗಳಿಗೆ ಸಂಚಾರವನ್ನು ಸುಲಭಗೊಳಿಸುತ್ತದೆ.

ನಮಾಮಿ ಗಂಗಾ ಯೋಜನೆಯಡಿ ಭಗವಾನ್‌ಪುರದಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಿರುವ 55 ಎಂಎಲ್‌ಡಿ ಒಳಚರಂಡಿ ಸಂಸ್ಕರಣಾ ಘಟಕದ ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿಯವರು ನೆರವೇರಿಸಿದರು. ಖೇಲೋ ಇಂಡಿಯಾ ಯೋಜನೆಯಡಿ, ಸಿಗ್ರಾ ಸ್ಟೇಡಿಯಂನ 2 ಮತ್ತು 3 ನೇ ಹಂತಗಳ ಪುನರಾಭಿವೃದ್ಧಿ ಕಾರ್ಯಕ್ಕೆ ಅಡಿಪಾಯವನ್ನು ಪ್ರಧಾನ ಮಂತ್ರಿಯವರು ಹಾಕಿದರು.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ನಿರ್ಮಿಸಲಿರುವ ಸೇವಾಪುರಿಯ ಇಸರ್ವಾರ್ ಗ್ರಾಮದಲ್ಲಿ ಎಲ್‌ಪಿಜಿ ಬಾಟ್ಲಿಂಗ್ ಘಟಕದ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು. ಪ್ರಧಾನಮಂತ್ರಿಯವರು ಭರ್ತರಾ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಟ್ಟೆ ಬದಲಾಯಿಸುವ ಕೊಠಡಿಗಳೊಂದಿಗೆ ತೇಲುವ ಜೆಟ್ಟಿ  ಸೇರಿದಂತೆ ವಿವಿಧ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು. 

ಜಲ ಜೀವನ್ ಮಿಷನ್ ಅಡಿಯಲ್ಲಿ, ಪ್ರಧಾನಮಂತ್ರಿ ಅವರು 19 ಕುಡಿಯುವ ನೀರಿನ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು, ಇವು 63 ಗ್ರಾಮ ಪಂಚಾಯತ್‌ಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡುತ್ತವೆ. ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ಮಿಷನ್ ಅಡಿಯಲ್ಲಿ 59 ಕುಡಿಯುವ ನೀರಿನ ಯೋಜನೆಗಳಿಗೆ ಅಡಿಗಲ್ಲು ಹಾಕಿದರು.

ವಾರಾಣಸಿ ಮತ್ತು ಸುತ್ತಮುತ್ತಲಿನ ರೈತರು, ರಫ್ತುದಾರರು ಮತ್ತು ವ್ಯಾಪಾರಿಗಳಿಗೆ, ಕಾರ್ಖಿಯಾನ್‌ನಲ್ಲಿ ನಿರ್ಮಿಸಲಾದ ಸಮಗ್ರ ಪ್ಯಾಕ್ ಹೌಸ್‌ನಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಶ್ರೇಣೀಕರಣ, ವಿಂಗಡಣೆ ಮತ್ತು ಸಂಸ್ಕರಣೆ ಸಾಧ್ಯವಾಗುತ್ತದೆ. ಪ್ರಧಾನಿಯವರು ಈ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ವಾರಾಣಸಿ ಮತ್ತು ಸುತ್ತಮುತ್ತಲಿನ ಪ್ರದೇಶದ ಕೃಷಿ ರಫ್ತುಗಳನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ವಾರಾಣಸಿ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ರಾಜ್‌ಘಾಟ್ ಮತ್ತು ಮಹಮೂರ್‌ಗಂಜ್ ಸರ್ಕಾರಿ ಶಾಲೆಗಳ ಪುನರಾಭಿವೃದ್ಧಿ; ನಗರದ ಆಂತರಿಕ ರಸ್ತೆಗಳ ಸುಂದರೀಕರಣ; ನಗರದ ಇತರ 6 ಉದ್ಯಾನವನಗಳು ಮತ್ತು ಕೊಳಗಳ ಪುನರಾಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿ ದೇಶಕ್ಕೆ ಸಮರ್ಪಿಸಿದರು. ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಟಿಸಿ ಟವರ್ ಸೇರಿದಂತೆ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಸಮರ್ಪಿಸಿದರು; ಭೇಲುಪುರದಲ್ಲಿ 2 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ; ಕೋನಿಯಾ ಪಂಪಿಂಗ್ ಸ್ಟೇಷನ್‌ನಲ್ಲಿ 800 ಕಿಲೊವ್ಯಾಟ್ ಸೌರ ವಿದ್ಯುತ್ ಸ್ಥಾವರ; ಸಾರನಾಥದಲ್ಲಿ ಹೊಸ ಸಮುದಾಯ ಆರೋಗ್ಯ ಕೇಂದ್ರ; ಚಾಂದ್‌ಪುರದ ಕೈಗಾರಿಕಾ ಎಸ್ಟೇಟ್‌ನ ಮೂಲಸೌಕರ್ಯ ಸುಧಾರಣೆ; ಕೇದಾರೇಶ್ವರ, ವಿಶ್ವೇಶ್ವರ ಮತ್ತು ಓಂಕಾರೇಶ್ವರ ಖಂಡ ಪರಿಕ್ರಮದ ದೇವಾಲಯಗಳ ಪುನರುಜ್ಜೀವನ ಯೋಜನೆಗಳನ್ನು ಸಹ ಪ್ರಧಾನಿಯವರು ಲೋಕಾರ್ಪಣೆ ಮಾಡಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Vikas Bhi, Virasat Bhi: How JATAN, AI and Digital Archives are revolutionising India’s cultural heritage preservation

Media Coverage

Vikas Bhi, Virasat Bhi: How JATAN, AI and Digital Archives are revolutionising India’s cultural heritage preservation
NM on the go

Nm on the go

Always be the first to hear from the PM. Get the App Now!
...
Prime Minister hosts Commonwealth Games 2026 medal winners
August 09, 2026

The Prime Minister, Shri Narendra Modi today hosted India’s outstanding medal winners from the Commonwealth Games 2026 at 7 Lok Kalyan Marg. Shri Modi interacted with the athletes and heard about their experiences from the Games.

The Prime Minister said that the athletes’ achievements are a source of immense pride for the entire country and will inspire many youngsters to take up sports.

Shri Modi posted on X:

Delighted to host our outstanding medal winners from the Commonwealth Games 2026 at 7, Lok Kalyan Marg. Heard about their experiences from the Games.

Each one of them has made our nation proud through their exceptional performances. Their success will motivate many youngsters.