ಇಂದು ನಾವು ಮಾಡುತ್ತಿರುವ ನೀತಿಗಳು, ನಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮುಂದಿನ ಸಾವಿರ ವರ್ಷಗಳ ಭವಿಷ್ಯವನ್ನು ರೂಪಿಸಲಿವೆ: ಪ್ರಧಾನಮಂತ್ರಿ
ಭಾರತದ ಮಹತ್ವಾಕಾಂಕ್ಷೆಯ ಸಮಾಜ - ಯುವಜನರು, ರೈತರು, ಮಹಿಳೆಯರು - ಅವರ ಕನಸುಗಳು ಅಭೂತಪೂರ್ವ ಎತ್ತರಕ್ಕೆ ತಲುಪುತ್ತಿವೆ, ಈ ಅಸಾಧಾರಣ ಆಕಾಂಕ್ಷೆಗಳನ್ನು ಈಡೇರಿಸಲು, ಅಸಾಧಾರಣ ವೇಗದ ಅಗತ್ಯವಿದೆ: ಪ್ರಧಾನಮಂತ್ರಿ
ನಿಜವಾದ ಪ್ರಗತಿ ಎಂದರೆ ಸಣ್ಣ ಬದಲಾವಣೆಗಳಲ್ಲ, ಪೂರ್ಣ ಪ್ರಮಾಣದ ಪರಿಣಾಮ; ಪ್ರತಿ ಮನೆಯಲ್ಲೂ ಶುದ್ಧ ನೀರು, ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ, ಪ್ರತಿ ಉದ್ಯಮಿಗೆ ಆರ್ಥಿಕ ಪ್ರವೇಶ ಮತ್ತು ಪ್ರತಿ ಹಳ್ಳಿಗೆ ಡಿಜಿಟಲ್ ಆರ್ಥಿಕತೆಯ ಪ್ರಯೋಜನಗಳು, ಇದು ಸಮಗ್ರ ಅಭಿವೃದ್ಧಿ: ಪ್ರಧಾನಮಂತ್ರಿ
ಯೋಜನೆಗಳು ಜನರನ್ನು ಎಷ್ಟು ಆಳವಾಗಿ ತಲುಪುತ್ತವೆ ಮತ್ತು ವಾಸ್ತವದಲ್ಲಿ ನಿಜವಾದ ಪ್ರಭಾವ ಬೀರುತ್ತವೆ ಎಂಬುದರ ಮೇಲೆ ಆಡಳಿತದ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ: ಪ್ರಧಾನಮಂತ್ರಿ
ಕಳೆದ 10 ವರ್ಷಗಳಲ್ಲಿ, ಭಾರತವು ಕ್ರಮೇಣ ಬದಲಾವಣೆಯನ್ನು ಮೀರಿ ಪರಿಣಾಮಕಾರಿ ಪರಿವರ್ತನೆಗೆ ಸಾಕ್ಷಿಯಾಗಿದೆ: ಪ್ರಧಾನಮಂತ್ರಿ
ಭಾರತವು ಆಡಳಿತ, ಪಾರದರ್ಶಕತೆ ಮತ್ತು ನಾವೀನ್ಯತೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ: ಪ್ರಧಾನಮಂತ್ರಿ
'ಜನಭಾಗೀದಾರಿ' ವಿಧಾನವು ಜಿ 20 ಸಂಘಟನೆಯನ್ನು ಜನಾಂದೋಲನವನ್ನಾಗಿ ಪರಿವರ್ತಿಸಿತು ಮತ್ತು ಭಾರತವು ಕೇವಲ ಭಾಗವಹಿಸುತ್ತಿಲ್ಲ, ಅದು ಮುನ್ನಡೆಸುತ್ತಿದೆ ಎಂದು ಜಗತ್ತು ಒಪ್ಪಿಕೊಂಡಿತು: ಪ್ರಧಾನಮಂತ್ರಿ
ತಂತ್ರಜ್ಞಾನದ ಯುಗದಲ್ಲಿ, ಆಡಳಿತವು ವ್ಯವಸ್ಥೆಗಳನ್ನು ನಿರ್ವಹಿಸುವುದಲ್ಲ, ಅದು ಸಾಧ್ಯತೆಗಳನ್ನು ಹೆಚ್ಚಿಸುವುದಾಗಿದೆ: ಪ್ರಧಾನಮಂತ್ರಿ
ಭವಿಷ್ಯಕ್ಕೆ ಸಿದ್ಧವಾಗಿರುವ ನಾಗರಿಕ ಸೇವೆಯನ್ನು ಸಿದ್ಧಪಡಿಸಲು ನಾವು ನಾಗರಿಕ ಸೇವಕರ ಸಾಮರ್ಥ್ಯವನ್ನು ಹೆಚ್ಚಿಸಬೇಕು; ಅದಕ್ಕಾಗಿಯೇ ನಾನು ಮಿಷನ್ ಕರ್ಮಯೋಗಿ ಮತ್ತು ನಾಗರಿಕ ಸೇವೆಗಳ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಎರಡನ್ನೂ ಬಹಳ ಮುಖ್ಯವೆಂದು ಪರಿಗಣಿಸುತ್ತೇನೆ: ಪ್ರಧಾನಮಂತ್ರಿ

ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ 17ನೇ ನಾಗರಿಕ ಸೇವಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕ ಸೇವೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನಮಂತ್ರಿಯವರ ಪ್ರಶಸ್ತಿಗಳನ್ನು ಸಹ ಅವರು ಪ್ರದಾನ ಮಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ನಾಗರಿಕ ಸೇವಾ ದಿನದ ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು ಮತ್ತು ಸಂವಿಧಾನದ 75ನೇ ವರ್ಷ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿಯಾದ ಈ ವರ್ಷದ ಆಚರಣೆಯ ಮಹತ್ವವನ್ನು ಎತ್ತಿ ತೋರಿಸಿದರು. ಏಪ್ರಿಲ್ 21, 1947 ರಂದು ಸರ್ದಾರ್ ಪಟೇಲ್ ಅವರು 'ಭಾರತದ ಉಕ್ಕಿನ ಚೌಕಟ್ಟು' ಎಂದು ನಾಗರಿಕ ಸೇವಕರನ್ನು ಬಣ್ಣಿಸಿದ ಐತಿಹಾಸಿಕ ಹೇಳಿಕೆಯನ್ನು ಸ್ಮರಿಸಿದ ಶ್ರೀ ಮೋದಿ, ಶಿಸ್ತು, ಪ್ರಾಮಾಣಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ, ಅತ್ಯಂತ ಸಮರ್ಪಣಾಬಾವದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅಧಿಕಾರಶಾಹಿಯನ್ನು ಕುರಿತ ಪಟೇಲ್‌ ಅವರ ದೃಷ್ಟಿಕೋನವನ್ನು ಒತ್ತಿ ಹೇಳಿದರು. ಭಾರತವು ವಿಕಸಿತ ಭಾರತವಾಗುವ ಸಂಕಲ್ಪದ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಅವರ ಆದರ್ಶಗಳ ಪ್ರಸ್ತುತತೆಯನ್ನು ಅವರು ಒತ್ತಿ ಹೇಳಿದರು ಮತ್ತು ಸರ್ದಾರ್ ಪಟೇಲ್ ಅವರ ದೃಷ್ಟಿಕೋನ ಮತ್ತು ಪರಂಪರೆಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು.

ಮುಂದಿನ ಸಾವಿರ ವರ್ಷಗಳಿಗೆ ಭಾರತದ ಅಡಿಪಾಯವನ್ನು ಬಲಪಡಿಸುವ ಅಗತ್ಯದ ಬಗ್ಗೆ ಕೆಂಪು ಕೋಟೆಯಿಂದ ತಾವು ನೀಡಿದ ಹಿಂದಿನ ಹೇಳಿಕೆಯನ್ನು ನೆನಪಿಸಿಕೊಂಡ ಶ್ರೀ ಮೋದಿ, ಹೊಸ ಶತಮಾನದ 25 ನೇ ವರ್ಷ ಮತ್ತು ಹೊಸ ಸಹಸ್ರಮಾನವನ್ನು ಗುರುತಿಸುವ ಈ ಸಹಸ್ರಮಾನದಲ್ಲಿ ಈಗಾಗಲೇ 25 ವರ್ಷಗಳು ಕಳೆದಿವೆ ಎಂದು ಹೇಳಿದರು. "ಇಂದು ನಾವು ಕೆಲಸ ಮಾಡುತ್ತಿರುವ ನೀತಿಗಳು, ನಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮುಂದಿನ ಸಾವಿರ ವರ್ಷಗಳ ಭವಿಷ್ಯವನ್ನು ರೂಪಿಸಲಿವೆ" ಎಂದು ಅವರು ಒತ್ತಿ ಹೇಳಿದರು. ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸಿ, ರಥವು ಒಂದೇ ಚಕ್ರದಿಂದ ಚಲಿಸಲು ಸಾಧ್ಯವಿಲ್ಲ, ಹಾಗೆಯೇ ಪ್ರಯತ್ನವಿಲ್ಲದೆ ವಿಧಿಯನ್ನು ಮಾತ್ರ ಅವಲಂಬಿಸಿ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುವಲ್ಲಿ ಸಾಮೂಹಿಕ ಪ್ರಯತ್ನ ಮತ್ತು ದೃಢಸಂಕಲ್ಪದ ಮಹತ್ವವನ್ನು ಒತ್ತಿ ಹೇಳಿದ ಅವರು, ಈ ಹಂಚಿಕೆಯ ದೃಷ್ಟಿಕೋನದ ಕಡೆಗೆ ಪ್ರತಿಯೊಬ್ಬರೂ ಪ್ರತಿದಿನ ಮತ್ತು ಪ್ರತಿ ಕ್ಷಣವೂ ಅವಿಶ್ರಾಂತವಾಗಿ ಕೆಲಸ ಮಾಡುವಂತೆ ಕರೆ ನೀಡಿದರು.

 

ಜಾಗತಿಕವಾಗಿ ನಡೆಯುತ್ತಿರುವ ಕ್ಷಿಪ್ರ ಬದಲಾವಣೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಕುಟುಂಬಗಳಲ್ಲಿಯೂ ಸಹ, ಯುವ ಪೀಳಿಗೆಯೊಂದಿಗೆ ಸಂವಹನ ನಡೆಸುವುದರಿಂದ ಬದಲಾವಣೆಯ ವೇಗದಿಂದಾಗಿ ಒಬ್ಬ ವ್ಯಕ್ತಿಗೆ ತಾನು ಹಳೆಯವನಾಗಿರುವ ಭಾವನೆ ಮೂಡುತ್ತದೆ ಎಂದು ಹೇಳಿದರು. ಪ್ರತಿ ಎರಡರಿಂದ ಮೂರು ವರ್ಷಗಳಿಗೊಮ್ಮೆ ಗ್ಯಾಜೆಟ್‌ ಗಳ ತ್ವರಿತ ವಿಕಸನ ಮತ್ತು ಈ ಬದಲಾವಣೆಗಳ ನಡುವೆ ಬೆಳೆಯುತ್ತಿರುವ ಮಕ್ಕಳ ಬಗ್ಗೆ ಅವರು ಗಮನಸೆಳೆದರು. ಭಾರತದ ಅಧಿಕಾರಶಾಹಿ, ಕೆಲಸದ ಪ್ರಕ್ರಿಯೆಗಳು ಮತ್ತು ನೀತಿ ನಿರೂಪಣೆಗಳು ಹಳೆಯ ಚೌಕಟ್ಟಿನ ಮೇಲೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. 2014 ರಲ್ಲಿ ಪ್ರಾರಂಭವಾದ ಮಹತ್ವದ ಪರಿವರ್ತನೆಯ ಬಗ್ಗೆ ಮಾತನಾಡಿದ ಅವರು, ಅದು ವೇಗದ ಬದಲಾವಣೆಗಳಿಗೆ ಹೊಂದಿಕೊಳ್ಳುವ ಒಂದು ದೊಡ್ಡ ಪ್ರಯತ್ನ ಎಂದು ಬಣ್ಣಿಸಿದರು. ಭಾರತದ ಸಮಾಜ, ಯುವಜನರು, ರೈತರು ಮತ್ತು ಮಹಿಳೆಯರ ಆಕಾಂಕ್ಷೆಗಳನ್ನು ಎತ್ತಿ ತೋರಿಸಿ, ಅವರ ಕನಸುಗಳು ಅಭೂತಪೂರ್ವ ಎತ್ತರವನ್ನು ತಲುಪಿವೆ ಎಂದು ಹೇಳಿದರು ಮತ್ತು ಈ ಅಸಾಧಾರಣ ಆಕಾಂಕ್ಷೆಗಳನ್ನು ಈಡೇರಿಸಲು ಅಸಾಧಾರಣ ವೇಗದ ಅಗತ್ಯವನ್ನು ಒತ್ತಿ ಹೇಳಿದರು. ಇಂಧನ ಸುರಕ್ಷತೆ, ಶುದ್ಧ ಇಂಧನ, ಕ್ರೀಡೆಯಲ್ಲಿನ ಪ್ರಗತಿಗಳು ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿನ ಸಾಧನೆಗಳು ಸೇರಿದಂತೆ ಮುಂಬರುವ ವರ್ಷಗಳಲ್ಲಿ ಭಾರತದ ಮಹತ್ವಾಕಾಂಕ್ಷೆಯ ಗುರಿಗಳನ್ನು ಪ್ರಧಾನಿ ವಿವರಿಸಿದರು, ಪ್ರತಿಯೊಂದು ವಲಯದಲ್ಲೂ ಭಾರತದ ಧ್ವಜವನ್ನು ಎತ್ತರಕ್ಕೆ ಏರಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದನ್ನು ಖಚಿತಪಡಿಸಿಕೊಳ್ಳಲು ನಾಗರಿಕ ಸೇವಕರ ಮೇಲೆ ಅಗಾಧ ಜವಾಬ್ದಾರಿ ಇದೆ ಎಂದು ಒತ್ತಿ ಹೇಳಿದ ಅವರು, ಈ ನಿರ್ಣಾಯಕ ಉದ್ದೇಶವನ್ನು ಸಾಧಿಸುವಲ್ಲಿ ಯಾವುದೇ ವಿಳಂಬವನ್ನು ತಪ್ಪಿಸುವಂತೆ ಕರೆ ನೀಡಿದರು.

ಈ ವರ್ಷದ ನಾಗರಿಕ ಸೇವಾ ದಿನದ ಧ್ಯೇಯವಾಕ್ಯವಾದ 'ಭಾರತದ ಸಮಗ್ರ ಅಭಿವೃದ್ಧಿ' ಬಗ್ಗೆ ಸಂತೋಷ ವ್ಯಕ್ತಪಡಿಸಿದ ಶ್ರೀ ಮೋದಿ, ಇದು ಕೇವಲ ಒಂದು ಧ್ಯೇಯವಾಕ್ಯವಲ್ಲ, ಬದಲಾಗಿ ದೇಶದ ಜನರಿಗೆ ಬದ್ಧತೆ ಮತ್ತು ಭರವಸೆಯಾಗಿದೆ ಎಂದು ಒತ್ತಿ ಹೇಳಿದರು. "ಭಾರತದ ಸಮಗ್ರ ಅಭಿವೃದ್ಧಿ ಎಂದರೆ ಯಾವುದೇ ಹಳ್ಳಿ, ಯಾವುದೇ ಕುಟುಂಬ ಮತ್ತು ಯಾವುದೇ ನಾಗರಿಕರು ಹಿಂದೆ ಉಳಿಯದಂತೆ ನೋಡಿಕೊಳ್ಳುವುದು" ಎಂದು ಅವರು ಒತ್ತಿ ಹೇಳಿದರು. ನಿಜವಾದ ಪ್ರಗತಿಯೆಂದರೆ ಸಣ್ಣ ಬದಲಾವಣೆಗಳಲ್ಲ, ಪೂರ್ಣ ಪ್ರಮಾಣದ ಪರಿಣಾಮವನ್ನು ಸಾಧಿಸುವುದಾಗಿದೆ ಎಂದು ಅವರು ಹೇಳಿದರು. ಪ್ರತಿ ಮನೆಗೆ ಶುದ್ಧ ನೀರು, ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ, ಪ್ರತಿ ಉದ್ಯಮಿಗೆ ಆರ್ಥಿಕ ಪ್ರವೇಶ ಮತ್ತು ಪ್ರತಿ ಹಳ್ಳಿಗೆ ಡಿಜಿಟಲ್ ಆರ್ಥಿಕತೆಯ ಪ್ರಯೋಜನಗಳನ್ನು ಒಳಗೊಂಡಿರುವ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನು ಅವರು ವಿವರಿಸಿದರು. ಆಡಳಿತದಲ್ಲಿನ ಗುಣಮಟ್ಟವು ಕೇವಲ ಯೋಜನೆಗಳನ್ನು ಪ್ರಾರಂಭಿಸುವುದರಿಂದಲ್ಲ, ಈ ಯೋಜನೆಗಳು ಜನರನ್ನು ಎಷ್ಟು ಆಳವಾಗಿ ತಲುಪುತ್ತವೆ ಮತ್ತು ಅವುಗಳ ನಿಜವಾದ ಪರಿಣಾಮ ಏನು ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ ಎಂದು ಅವರು ಹೇಳಿದರು. ಶಾಲಾ ಹಾಜರಾತಿಯನ್ನು ಹೆಚ್ಚಿಸುವುದರಿಂದ ಹಿಡಿದು ಸೌರಶಕ್ತಿಯನ್ನು ಅಳವಡಿಸಿಕೊಳ್ಳುವವರೆಗೆ ಗಮನಾರ್ಹ ಪ್ರಗತಿ ಸಾಧಿಸಿರುವ ರಾಜಕೋಟ್, ಗೋಮತಿ, ತಿನ್ಸುಕಿಯಾ, ಕೊರಾಪುಟ್ ಮತ್ತು ಕುಪ್ವಾರದಂತಹ ಜಿಲ್ಲೆಗಳಲ್ಲಿ ಪರಿಣಾಮ ಗೋಚರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಉಪಕ್ರಮಗಳಲ್ಲಿ ಭಾಗಿಯಾಗಿರುವ ಜಿಲ್ಲೆಗಳು ಮತ್ತು ವ್ಯಕ್ತಿಗಳನ್ನು ಅವರು ಅಭಿನಂದಿಸಿದರು, ಅವರ ಅತ್ಯುತ್ತಮ ಕೆಲಸ ಮತ್ತು ಹಲವಾರು ಜಿಲ್ಲೆಗಳು ಪಡೆದ ಪ್ರಶಸ್ತಿಗಳನ್ನು ಶ್ಲಾಘಿಸಿದರು.

 

ಕಳೆದ 10 ವರ್ಷಗಳಲ್ಲಿ ಭಾರತವು ಕ್ರಮೇಣ ಬದಲಾವಣೆಯಿಂದ ಪರಿಣಾಮಕಾರಿ ಪರಿವರ್ತನೆಯತ್ತ ಸಾಗಿದೆ ಎಂಬುದನ್ನು ಎತ್ತಿ ತೋರಿಸಿದ ಪ್ರಧಾನಿ, ದೇಶದ ಆಡಳಿತ ಮಾದರಿಯು ಈಗ ಮುಂದಿನ ಪೀಳಿಗೆಯ ಸುಧಾರಣೆಗಳು, ತಂತ್ರಜ್ಞಾನ ಮತ್ತು ನವೀನ ಅಭ್ಯಾಸಗಳನ್ನು ಬಳಸಿಕೊಂಡು ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಒತ್ತಿ ಹೇಳಿದರು. ಈ ಸುಧಾರಣೆಗಳ ಪರಿಣಾಮವು ಗ್ರಾಮೀಣ, ನಗರ ಮತ್ತು ದೂರದ ಪ್ರದೇಶಗಳಲ್ಲಿ ಸಮಾನವಾಗಿ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ಅವರು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದರು ಮತ್ತು ಮಹತ್ವಾಕಾಂಕ್ಷೆಯ ಬ್ಲಾಕ್‌ ಗಳ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸಿದರು. ಈ ಕಾರ್ಯಕ್ರಮವನ್ನು ಜನವರಿ 2023 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಕೇವಲ ಎರಡು ವರ್ಷಗಳಲ್ಲಿ ಅಭೂತಪೂರ್ವ ಫಲಿತಾಂಶಗಳನ್ನು ತೋರಿಸಿದೆ, ಈ ಬ್ಲಾಕ್‌ ಗಳಲ್ಲಿ ಆರೋಗ್ಯ, ಪೋಷಣೆ, ಸಾಮಾಜಿಕ ಅಭಿವೃದ್ಧಿ ಮತ್ತು ಮೂಲಭೂತ ಮೂಲಸೌಕರ್ಯದಂತಹ ಸೂಚಕಗಳಲ್ಲಿ ಗಮನಾರ್ಹ ಪ್ರಗತಿ ಕಂಡಿದೆ ಎಂದು ಅವರು ಹೇಳಿದರು. ಪರಿವರ್ತನೆಯ ಬದಲಾವಣೆಗಳ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ರಾಜಸ್ಥಾನದ ಟೋಂಕ್ ಜಿಲ್ಲೆಯ ಪೀಪ್ಲು ಬ್ಲಾಕ್‌ ನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಮಾಪನ ದಕ್ಷತೆಯು ಶೇ.20 ರಿಂದ ಶೇ.99 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದರು, ಹಾಗೆಯೇ ಬಿಹಾರದ ಭಾಗಲ್ಪುರದ ಜಗದೀಶಪುರ ಬ್ಲಾಕ್‌ ನಲ್ಲಿ, ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಯರ ನೋಂದಣಿ ಶೇ.25 ರಿಂದ ಶೇ.90 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಮಾರ್ವಾ ಬ್ಲಾಕ್‌ ನಲ್ಲಿ ಆಸ್ಪತ್ರೆ ಹೆರಿಗೆಗಳು ಶೇ.30 ರಿಂದ ಶೇ.100 ಕ್ಕೆ ಏರಿವೆ ಮತ್ತು ಜಾರ್ಖಂಡ್‌ ನ ಗುರ್ದಿಹ್ ಬ್ಲಾಕ್‌ ನಲ್ಲಿ ನಲ್ಲಿ ನೀರಿನ ಸಂಪರ್ಕಗಳು ಶೇ.18 ರಿಂದ ಶೇ.100 ಕ್ಕೆ ಏರಿಕೆಯಾಗಿವೆ ಎಂದು ಅವರು ಹೇಳಿದರು. ಇವು ಕೇವಲ ಅಂಕಿಅಂಶಗಳಲ್ಲ, ಕೊನೆಯ ಮೈಲಿ ವಿತರಣೆಗಾಗಿ ಸರ್ಕಾರದ ಸಂಕಲ್ಪದ ಪುರಾವೆಗಳಾಗಿವೆ ಎಂದು ಅವರು ಒತ್ತಿ ಹೇಳಿದರು. "ಸರಿಯಾದ ಉದ್ದೇಶ, ಯೋಜನೆ ಮತ್ತು ಅನುಷ್ಠಾನದಿಂದ, ದೂರದ ಪ್ರದೇಶಗಳಲ್ಲಿಯೂ ಸಹ ಪರಿವರ್ತನೆ ಸಾಧ್ಯ" ಎಂದು ಅವರು ಹೇಳಿದರು.

ಕಳೆದ ದಶಕದಲ್ಲಿ ಭಾರತದ ಸಾಧನೆಗಳನ್ನು ವಿವರಿಸುತ್ತಾ, ಪರಿವರ್ತನಾತ್ಮಕ ಬದಲಾವಣೆಗಳು ಮತ್ತು ರಾಷ್ಟ್ರದ ಹೊಸ ಎತ್ತರಗಳ ಸಾಧನೆಯನ್ನು ಒತ್ತಿಹೇಳಿದರು. "ಭಾರತವು ಈಗ ತನ್ನ ಬೆಳವಣಿಗೆಗೆ ಮಾತ್ರವಲ್ಲದೆ ಆಡಳಿತ, ಪಾರದರ್ಶಕತೆ ಮತ್ತು ನಾವೀನ್ಯತೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದಕ್ಕಾಗಿಯೂ ಗುರುತಿಸಲ್ಪಟ್ಟಿದೆ" ಎಂದು ಹೇಳಿದರು. ಭಾರತದ ಜಿ 20 ಅಧ್ಯಕ್ಷತೆಯನ್ನು ಈ ಪ್ರಗತಿಗಳಿಗೆ ಮಹತ್ವದ ಉದಾಹರಣೆ ಎಂದು ಅವರು ಬಣ್ಣಿಸಿದರು. ಜಿ 20 ಇತಿಹಾಸದಲ್ಲಿ ಮೊದಲ ಬಾರಿಗೆ 60 ಕ್ಕೂ ಹೆಚ್ಚು ನಗರಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದ್ದು, ವಿಶಾಲ ಮತ್ತು ಎಲ್ಲರನ್ನೂ ಒಳಗೊಂಡ ಹೆಜ್ಜೆಗುರುತನ್ನು ಸೃಷ್ಟಿಸಿತು ಎಂದು ಅವರು ಒತ್ತಿ ಹೇಳಿದರು. ಸಾರ್ವಜನಿಕ ಭಾಗವಹಿಸುವಿಕೆಯ ವಿಧಾನವು ಜಿ 20 ಸಂಘಟನೆಯನ್ನು ಜನಾಂದೋಲನವಾಗಿ ಹೇಗೆ ಪರಿವರ್ತಿಸಿತು ಎಂಬುದನ್ನು ಅವರು ಒತ್ತಿ ಹೇಳಿದರು. "ಭಾರತ ಕೇವಲ ಭಾಗವಹಿಸುತ್ತಿಲ್ಲ, ಅದು ಮುನ್ನಡೆಸುತ್ತಿದೆ ಎಂದು ಜಗತ್ತು ಭಾರತದ ನಾಯಕತ್ವವನ್ನು ಗುರುತಿಸಿದೆ " ಎಂದು ಅವರು ಹೇಳಿದರು.

ಸರ್ಕಾರದ ದಕ್ಷತೆಯ ಕುರಿತು ಹೆಚ್ಚುತ್ತಿರುವ ಚರ್ಚೆಗಳನ್ನು ಪ್ರಧಾನಿ ಎತ್ತಿ ತೋರಿಸಿದರು, ಈ ವಿಷಯದಲ್ಲಿ ಭಾರತವು ಇತರ ರಾಷ್ಟ್ರಗಳಿಗಿಂತ 10-11 ವರ್ಷಗಳಷ್ಟು ಮುಂದಿದೆ ಎಂದು ಒತ್ತಿ ಹೇಳಿದರು. ತಂತ್ರಜ್ಞಾನದ ಮೂಲಕ ವಿಳಂಬವನ್ನು ನಿವಾರಿಸಲು, ಹೊಸ ಪ್ರಕ್ರಿಯೆಗಳನ್ನು ಪರಿಚಯಿಸಲು ಮತ್ತು ವಹಿವಾಟಿನ ಸಮಯವನ್ನು ಕಡಿಮೆ ಮಾಡಲು ಕಳೆದ 11 ವರ್ಷಗಳಲ್ಲಿ ಮಾಡಲಾದ ಪ್ರಯತ್ನಗಳ ಬಗ್ಗೆ ಅವರು ಮಾತನಾಡಿದರು. ವ್ಯವಹಾರದ ಸುಲಭತೆಯನ್ನು ಉತ್ತೇಜಿಸಲು 40,000 ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಲಾಗಿದೆ ಮತ್ತು 3,400 ಕ್ಕೂ ಹೆಚ್ಚು ಕಾನೂನು ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಗಿದೆ ಎಂದು ಅವರು ಹೇಳಿದರು. ಈ ಸುಧಾರಣೆಗಳ ಸಮಯದಲ್ಲಿ ಎದುರಿಸಿದ ಪ್ರತಿರೋಧವನ್ನು ಅವರು ನೆನಪಿಸಿಕೊಂಡರು, ಅಂತಹ ಬದಲಾವಣೆಗಳ ಅಗತ್ಯವನ್ನು ವಿಮರ್ಶಕರು ಪ್ರಶ್ನಿಸಿದರು. ಆದಾಗ್ಯೂ, ಸರ್ಕಾರವು ಒತ್ತಡಕ್ಕೆ ಮಣಿಯಲಿಲ್ಲ ಎಂದು ಅವರು ಒತ್ತಿ ಹೇಳಿದರು, ಹೊಸ ಫಲಿತಾಂಶಗಳನ್ನು ಸಾಧಿಸಲು ಹೊಸ ವಿಧಾನಗಳು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಈ ಪ್ರಯತ್ನಗಳ ಫಲವಾಗಿ ಭಾರತದ ಸುಗಮ ವ್ಯವಹಾರ ಶ್ರೇಯಾಂಕದಲ್ಲಿನ ಸುಧಾರಣೆಯನ್ನು ಅವರು ಎತ್ತಿ ತೋರಿಸಿದರು ಮತ್ತು ಭಾರತದಲ್ಲಿ ಹೂಡಿಕೆ ಮಾಡಲು ಜಾಗತಿಕ ಉತ್ಸಾಹದ ಬಗ್ಗೆ ವಿವರಿಸಿದರು. ನಿಗದಿತ ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸಲು ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಕೆಂಪು ಪಟ್ಟಿಯನ್ನು ತೆಗೆದುಹಾಕಿ ಈ ಅವಕಾಶವನ್ನು ಬಳಸಿಕೊಳ್ಳುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು.

 

"ಕಳೆದ 10-11 ವರ್ಷಗಳ ಯಶಸ್ಸು ಅಭಿವೃದ್ಧಿ ಹೊಂದಿದ ಭಾರತಕ್ಕೆ ಬಲವಾದ ಅಡಿಪಾಯ ಹಾಕಿದೆ" ಎಂದು ಶ್ರೀ ಮೋದಿ ಹೇಳಿದರು, ರಾಷ್ಟ್ರವು ಈಗ ಅಭಿವೃದ್ಧಿ ಹೊಂದಿದ ಭಾರತದ ಭವ್ಯ ಕಟ್ಟಡವನ್ನು ಈ ಘನ ಅಡಿಪಾಯದ ಮೇಲೆ ನಿರ್ಮಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಆದರೆ ಮುಂದಿರುವ ಮಹತ್ವದ ಸವಾಲುಗಳನ್ನು ಸಹ ಅವರು ಒಪ್ಪಿಕೊಂಡರು. ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಎಂದು ಹೇಳಿದ ಅವರು, ಮೂಲಭೂತ ಸೌಕರ್ಯಗಳಲ್ಲಿ ಸಂಪೂರ್ಣತೆಯ ಆದ್ಯತೆಯನ್ನು ಒತ್ತಿ ಹೇಳಿದರು. ಅಭಿವೃದ್ಧಿಯಲ್ಲಿ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಕೊನೆಯ ಮೈಲಿ ವಿತರಣೆಯ ಮೇಲೆ ಬಲವಾದ ಗಮನ ಹರಿಸಬೇಕೆಂದು ಅವರು ಕರೆ ನೀಡಿದರು. ನಾಗರಿಕರ ವಿಕಸನಗೊಳ್ಳುತ್ತಿರುವ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಎತ್ತಿ ತೋರಿಸಿದ ಅವರು, ನಾಗರಿಕ ಸೇವೆಯು ಪ್ರಸ್ತುತವಾಗಿರಲು ಸಮಕಾಲೀನ ಸವಾಲುಗಳಿಗೆ ಹೊಂದಿಕೊಳ್ಳಬೇಕು ಎಂದು ಹೇಳಿದರು. ಹಿಂದಿನ ಮಾನದಂಡಗಳೊಂದಿಗೆ ಹೋಲಿಕೆಗಳನ್ನು ಮೀರಿ ಹೊಸ ಮಾನದಂಡಗಳನ್ನು ನಿಗದಿಪಡಿಸುವ ಅಗತ್ಯವನ್ನು ಶ್ರೀ ಮೋದಿ ಒತ್ತಿ ಹೇಳಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಗತಿಯನ್ನು ಅಳೆಯುವುದು, ಪ್ರತಿಯೊಂದು ವಲಯದಲ್ಲಿ ಗುರಿಗಳನ್ನು ಸಾಧಿಸುವ ಪ್ರಸ್ತುತ ವೇಗವು ಸಮರ್ಪಕವಾಗಿದೆಯೇ ಎಂದು ಪರಿಶೀಲಿಸುವುದು ಮತ್ತು ಅಗತ್ಯವಿರುವಲ್ಲೆಲ್ಲಾ ಪ್ರಯತ್ನಗಳನ್ನು ವೇಗಗೊಳಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಇಂದು ಲಭ್ಯವಿರುವ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಅವರು ಒತ್ತಿ ಹೇಳಿದರು ಮತ್ತು ಅದರ ಶಕ್ತಿಯನ್ನು ಬಳಸಿಕೊಳ್ಳಲು ಕರೆ ನೀಡಿದರು. ಕಳೆದ ದಶಕದ ಸಾಧನೆಗಳನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಬಡವರಿಗೆ 4 ಕೋಟಿ ಮನೆಗಳ ನಿರ್ಮಾಣವನ್ನು ಉಲ್ಲೇಖಿಸಿದರು, ಇನ್ನೂ 3 ಕೋಟಿ ಮನೆ ನಿರ್ಮಿಸುವ ಗುರಿಯನ್ನು ಹೊಂದಿರುವುದಾಗಿ ಅವರು ಹೇಳಿದರು. 5-6 ವರ್ಷಗಳಲ್ಲಿ 12 ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು, ಪ್ರತಿ ಹಳ್ಳಿಯ ಮನೆಗೂ ಶೀಘ್ರದಲ್ಲೇ ನಲ್ಲಿ ಸಂಪರ್ಕವಿರುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ ಸೌಲಭ್ಯ ವಂಚಿತರಿಗಾಗಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ, ತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ಗುರಿಗಳನ್ನು ನಿಗದಿಪಡಿಸಲಾಗಿದೆ ಮತ್ತು ಲಕ್ಷಾಂತರ ಸೌಲಭ್ಯ ವಂಚಿತ ವ್ಯಕ್ತಿಗಳಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ನಾಗರಿಕರಿಗೆ ಪೌಷ್ಟಿಕಾಂಶವನ್ನು ಸುಧಾರಿಸಲು ನವೀಕೃತ ಬದ್ಧತೆಗಳ ಅಗತ್ಯವನ್ನು ಶ್ರೀ ಮೋದಿ ಒತ್ತಿ ಹೇಳಿದರು ಮತ್ತು ಅಂತಿಮ ಗುರಿ ಶೇ.100 ರಷ್ಟು ವ್ಯಾಪ್ತಿ ಮತ್ತು ಶೇ.100 ಪರಿಣಾಮಕಾರಿಯಾಗಿರಬೇಕು ಎಂದು ಘೋಷಿಸಿದರು. ಈ ವಿಧಾನವು ಕಳೆದ ದಶಕದಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಇದು ಬಡತನ ಮುಕ್ತ ಭಾರತಕ್ಕೆ ಕಾರಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೈಗಾರಿಕೀಕರಣ ಮತ್ತು ಉದ್ಯಮಶೀಲತೆಯ ವೇಗವನ್ನು ನಿಯಂತ್ರಿಸುವ ನಿಯಂತ್ರಕವಾಗಿ ಅಧಿಕಾರಶಾಹಿಯ ಹಿಂದಿನ ಪಾತ್ರದ ಬಗ್ಗೆ ಹೇಳಿದ ಪ್ರಧಾನಿ, ರಾಷ್ಟ್ರವು ಈ ಮನಸ್ಥಿತಿಯನ್ನು ಮೀರಿ ಸಾಗಿದೆ ಮತ್ತು ಈಗ ನಾಗರಿಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುವ ವಾತಾವರಣವನ್ನು ಉತ್ತೇಜಿಸುತ್ತಿದೆ ಎಂದು ಒತ್ತಿ ಹೇಳಿದರು. "ನಾಗರಿಕ ಸೇವೆಗಳನ್ನು ಕೇವಲ ನಿಯಮಗಳ ಪಾಲಕತ್ವದಿಂದ ಅಭಿವೃದ್ಧಿಯ ಸುಗಮಕಾರಕವಾಗುವ ಪಾತ್ರವಾಗಿ ಹೆಚ್ಚಿಸುವ ಮೂಲಕ ಸಕ್ರಿಯಗೊಳಿಸುವ ಸಾಧನವಾಗಿ ಪರಿವರ್ತಿಸಬೇಕು" ಎಂದು ಅವರು ಹೇಳಿದರು. ಎಂ ಎಸ್‌ ಎಂ ಇ ವಲಯದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಮಿಷನ್ ಮ್ಯಾನುಫ್ಯಾಕ್ಚರಿಂಗ್‌ ಮಹತ್ವವನ್ನು ಮತ್ತು ಈ ಮಿಷನ್‌ ನ ಯಶಸ್ಸು ಎಂ ಎಸ್‌ ಎಂ ಇ ಗಳ ಮೇಲೆ ಹೇಗೆ ಹೆಚ್ಚು ಅವಲಂಬಿತವಾಗಿದೆ ಎಂದು ಎತ್ತಿ ತೋರಿಸಿದರು. ಜಾಗತಿಕ ಬದಲಾವಣೆಗಳ ನಡುವೆಯೂ, ಭಾರತದಲ್ಲಿ ಎಂ ಎಸ್‌ ಎಂ ಇ ಗಳು, ನವೋದ್ಯಮಗಳು ಮತ್ತು ಯುವ ಉದ್ಯಮಿಗಳು ಅಭೂತಪೂರ್ವ ಅವಕಾಶಗಳನ್ನು ಹೊಂದಿದ್ದಾರೆ ಎಂದು ಪ್ರಧಾನಿ ಗಮನಸೆಳೆದರು. ಜಾಗತಿಕ ಪೂರೈಕೆ ಸರಪಳಿಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಎಂ ಎಸ್‌ ಎಂ ಇ ಗಳು ಸಣ್ಣ ಉದ್ಯಮಿಗಳಿಂದ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಸ್ಪರ್ಧೆಯನ್ನು ಎದುರಿಸುತ್ತವೆ ಎಂದು ಹೇಳಿದರು. ಒಂದು ಸಣ್ಣ ದೇಶವು  ತನ್ನ ಕೈಗಾರಿಕೆಗಳಿಗೆ ಉತ್ತಮ ಅನುಸರಣೆಯನ್ನು ಒದಗಿಸಿದರೆ, ಅದು ಭಾರತೀಯ ನವೋದ್ಯಮಗಳನ್ನು ಹಿಂದಿಕ್ಕಬಹುದು ಎಂದು ಅವರು ಹೇಳಿದರು. ಹೀಗಾಗಿ, ಜಾಗತಿಕ ಅತ್ಯುತ್ತಮ ಅಭ್ಯಾಸಗಳಲ್ಲಿ ಭಾರತವು ತನ್ನ ಸ್ಥಾನವನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಭಾರತೀಯ ಕೈಗಾರಿಕೆಗಳ ಗುರಿ ಜಾಗತಿಕವಾಗಿ ಗುರುತಿಸಲ್ಪಟ್ಟ ಉತ್ಪನ್ನಗಳನ್ನು ತಯಾರಿಸುವುದಾಗಿದ್ದರೆ, ಭಾರತದ ಅಧಿಕಾರಶಾಹಿಯ ಗುರಿ ವಿಶ್ವದಲ್ಲೇ ಅತ್ಯುತ್ತಮ ಸುಲಭ ಅನುಸರಣಾ ವಾತಾವರಣವನ್ನು ಒದಗಿಸುವುದು ಆಗಿರಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು.

 

ನಾಗರಿಕ ಸೇವಕರು ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವುದಲ್ಲದೆ, ಬುದ್ಧಿವಂತ ಮತ್ತು ಸಮಗ್ರ  ಆಡಳಿತಕ್ಕಾಗಿ ಅದರ ಬಳಕೆಯನ್ನು ಸಕ್ರಿಯಗೊಳಿಸುವ ಕೌಶಲ್ಯಗಳನ್ನು ಪಡೆದುಕೊಳ್ಳುವ ಅಗತ್ಯವನ್ನು ಶ್ರೀ ಮೋದಿ ಒತ್ತಿ ಹೇಳಿದರು. "ತಂತ್ರಜ್ಞಾನದ ಯುಗದಲ್ಲಿ, ಆಡಳಿತವು ವ್ಯವಸ್ಥೆಗಳನ್ನು ನಿರ್ವಹಿಸುವುದಷ್ಟೇ ಅಲ್ಲ; ಅದು ಸಾಧ್ಯತೆಗಳನ್ನು ಹೆಚ್ಚಿಸುವುದಾಗಿರುತ್ತದೆ" ಎಂದು ಅವರು ಹೇಳಿದರು. ನೀತಿಗಳು ಮತ್ತು ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ತಂತ್ರಜ್ಞಾನದ ಮೂಲಕ ಪ್ರವೇಶಿಸುವಂತೆ ಮಾಡಲು ತಂತ್ರಜ್ಞಾನ-ತಿಳುವಳಿಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರು. ನಿಖರವಾದ ನೀತಿ ವಿನ್ಯಾಸ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ದತ್ತಾಂಶ ಆಧಾರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ಪರಿಣತಿಯ ಅಗತ್ಯವನ್ನು ಅವರು ಎತ್ತಿ ತೋರಿಸಿದರು. ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಭೌತಶಾಸ್ತ್ರದಲ್ಲಿ ಆಗುತ್ತಿರುವ ತ್ವರಿತ ಪ್ರಗತಿಯನ್ನು ಗಮನಿಸಿ, ಡಿಜಿಟಲ್ ಮತ್ತು ಮಾಹಿತಿ ಯುಗವನ್ನು ಮೀರಿಸುವಂತಹ ತಂತ್ರಜ್ಞಾನದಲ್ಲಿ ಮುಂಬರುವ ಕ್ರಾಂತಿಯನ್ನು ಊಹಿಸಿದ ಶ್ರೀ ಮೋದಿ, ನಾಗರಿಕ ಸೇವಕರು ಈ ತಾಂತ್ರಿಕ ಕ್ರಾಂತಿಗೆ ಸಿದ್ಧರಾಗಿರಬೇಕು ಎಂದು ಕರೆ ನೀಡಿದರು. ಇದರಿಂದ ಅವರು ಉತ್ತಮ ಸೇವೆಗಳನ್ನು ಒದಗಿಸಬಹುದು ಮತ್ತು ನಾಗರಿಕರ ಆಕಾಂಕ್ಷೆಗಳನ್ನು ಪೂರೈಸಬಹುದು. ಭವಿಷ್ಯಕ್ಕೆ ಸಿದ್ಧವಾಗಿರುವ ನಾಗರಿಕ ಸೇವೆಯನ್ನು ನಿರ್ಮಿಸಲು ನಾಗರಿಕ ಸೇವಕರ ಸಾಮರ್ಥ್ಯಗಳನ್ನು ಹೆಚ್ಚಿಸುವ ಮಹತ್ವವನ್ನು ಒತ್ತಿ ಹೇಳಿದ ಅವರು, ಈ ಗುರಿಯನ್ನು ಸಾಧಿಸುವಲ್ಲಿ ಮಿಷನ್ ಕರ್ಮಯೋಗಿ ಮತ್ತು ನಾಗರಿಕ ಸೇವೆಗಳ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದ ಮಹತ್ವವನ್ನು ಎತ್ತಿ ತೋರಿಸಿದರು.

ವೇಗವಾಗಿ ಬದಲಾಗುತ್ತಿರುವ ಕಾಲದಲ್ಲಿ ಜಾಗತಿಕ ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು, ಆಹಾರ, ನೀರು ಮತ್ತು ಇಂಧನ ಸುರಕ್ಷತೆಯು ಪ್ರಮುಖ ಸಮಸ್ಯೆಗಳಾಗಿ ಉಳಿದಿವೆ, ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ, ಅಲ್ಲಿ ನಡೆಯುತ್ತಿರುವ ಸಂಘರ್ಷಗಳು ದೈನಂದಿನ ಜೀವನ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದ್ದು, ಸಂಕಷ್ಟಗಳನ್ನು ಹೆಚ್ಚಿಸುತ್ತಿವೆ ಎಂದು ಒತ್ತಿ ಹೇಳಿದರು. ದೇಶೀಯ ಮತ್ತು ಬಾಹ್ಯ ಅಂಶಗಳ ನಡುವೆ ಬೆಳೆಯುತ್ತಿರುವ ಪರಸ್ಪರ ಸಂಪರ್ಕವನ್ನು ಅರ್ಥಮಾಡಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ರೋಗಗಳು ಮತ್ತು ಸೈಬರ್ ಅಪರಾಧ ಬೆದರಿಕೆಗಳನ್ನು ಸಕ್ರಿಯ ಕ್ರಮದ ಅಗತ್ಯವಿರುವ ನಿರ್ಣಾಯಕ ಕ್ಷೇತ್ರಗಳಾಗಿ ಗುರುತಿಸಿದ ಅವರು, ಈ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಹತ್ತು ಹೆಜ್ಜೆ ಮುಂದೆ ಇರಬೇಕೆಂದು ಕರೆ ನೀಡಿದರು. ಈ ಉದಯೋನ್ಮುಖ ಜಾಗತಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸ್ಥಳೀಯ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

 

ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸಂಕಲ್ಪ, ಗುಲಾಮಗಿರಿಯ ಮನಸ್ಥಿತಿಯಿಂದ ವಿಮೋಚನೆ, ಪರಂಪರೆಯ ಬಗ್ಗೆ ಹೆಮ್ಮೆ, ಏಕತೆಯ ಶಕ್ತಿ ಮತ್ತು ಕರ್ತವ್ಯಗಳ ಪ್ರಾಮಾಣಿಕ ನೆರವೇರಿಕೆಯನ್ನು ಒತ್ತಿಹೇಳುವ "ಪಂಚ ಪ್ರಾಣ" ಪರಿಕಲ್ಪನೆಯನ್ನು ಕೆಂಪು ಕೋಟೆಯಿಂದ ಪರಿಚಯಿಸಲಾಯಿತು ಎಂದ ಶ್ರೀ ಮೋದಿ, ನಾಗರಿಕ ಸೇವಕರು ಈ ತತ್ವಗಳ ಪ್ರಮುಖ ವಾಹಕರು ಎಂದು ಹೇಳಿದರು. "ನೀವು ಅನುಕೂಲಕ್ಕಿಂತ ಸಮಗ್ರತೆಗೆ, ಜಡತ್ವಕ್ಕಿಂತ ನಾವೀನ್ಯತೆಗೆ ಅಥವಾ ಸ್ಥಾನಮಾನಕ್ಕಿಂತ ಸೇವೆಗೆ ಆದ್ಯತೆ ನೀಡಿದಾಗಲೆಲ್ಲಾ, ನೀವು ರಾಷ್ಟ್ರವನ್ನು ಮುನ್ನಡೆಸುತ್ತೀರಿ" ಎಂದು ಅವರು ಹೇಳಿದರು. ನಾಗರಿಕ ಸೇವಕರ ಮೇಲೆ ಅವರು ತಮ್ಮ ಸಂಪೂರ್ಣ ನಂಬಿಕೆಯನ್ನು ವ್ಯಕ್ತಪಡಿಸಿದರು. ವೃತ್ತಿಪರ ಪ್ರಯಾಣ ಆರಂಭಿಸುತ್ತಿರುವ ಯುವ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವೈಯಕ್ತಿಕ ಯಶಸ್ಸಿಗೆ ಸಾಮಾಜಿಕ ಕೊಡುಗೆಗಳನ್ನು ಎತ್ತಿ ತೋರಿಸಿದರು. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಸಮಾಜಕ್ಕೆ ಕೊಡುಗೆ ನೀಡಲು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದರು. ಸಮಾಜಕ್ಕೆ ಗಣನೀಯವಾಗಿ ಕೊಡುಗೆ ನೀಡುವಲ್ಲಿ ನಾಗರಿಕ ಸೇವಕರು ಹೊಂದಿರುವ ಸವಲತ್ತನ್ನು ಅವರು ಒತ್ತಿ ಹೇಳಿದರು, ರಾಷ್ಟ್ರ ಮತ್ತು ಅದರ ಜನರು ಒದಗಿಸಿದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ನಾಗರಿಕ ಸೇವಕರಿಗೆ ಸುಧಾರಣೆಗಳನ್ನು ಪುನರ್ ಕಲ್ಪಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು ಮತ್ತು ಎಲ್ಲಾ ವಲಯಗಳಲ್ಲಿ ಸುಧಾರಣೆಗಳ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು. ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಗುರಿಗಳು, ಆಂತರಿಕ ಭದ್ರತೆ, ಭ್ರಷ್ಟಾಚಾರ ನಿರ್ಮೂಲನೆ, ಸಮಾಜ ಕಲ್ಯಾಣ ಯೋಜನೆಗಳು ಮತ್ತು ಕ್ರೀಡೆ ಮತ್ತು ಒಲಿಂಪಿಕ್ಸ್‌ ಗೆ ಸಂಬಂಧಿಸಿದ ಗುರಿಗಳಂತಹ ಪ್ರಮುಖ ಕ್ಷೇತ್ರಗಳನ್ನು ಅವರು ಎತ್ತಿ ತೋರಿಸಿದರು ಮತ್ತು ಪ್ರತಿಯೊಂದು ವಲಯದಲ್ಲೂ ಹೊಸ ಸುಧಾರಣೆಗಳ ಅನುಷ್ಠಾನಕ್ಕೆ ಕರೆ ನೀಡಿದರು. ಇಲ್ಲಿಯವರೆಗಿನ ಸಾಧನೆಗಳನ್ನು ಹಲವು ಪಟ್ಟು ಮೀರಬೇಕು ಮತ್ತು ಪ್ರಗತಿಗೆ ಉನ್ನತ ಮಾನದಂಡಗಳನ್ನು ನಿಗದಿಪಡಿಸಬೇಕು ಎಂದು ಅವರು ಹೇಳಿದರು. ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ಮಾನವ ತೀರ್ಪಿನ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು ಮತ್ತು ನಾಗರಿಕ ಸೇವಕರು ಸಂವೇದನಾಶೀಲರಾಗಿರಬೇಕು, ದೀನದಲಿತರ ಧ್ವನಿಯನ್ನು ಆಲಿಸಬೇಕು, ಅವರ ಹೋರಾಟಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. "ನಾಗರಿಕ ದೇವೋ ಭವ" ತತ್ವವನ್ನು ಪ್ರಸ್ತಾಪಿಸಿದ ಅವರು, ಅದನ್ನು "ಅತಿಥಿ ದೇವೋ ಭವ" ಎಂಬ ನೀತಿಯೊಂದಿಗೆ ಹೋಲಿಸಿದರು. ನಾಗರಿಕ ಸೇವಕರು ತಮ್ಮನ್ನು ಕೇವಲ ಆಡಳಿತಗಾರರಾಗಿ ಮಾತ್ರವಲ್ಲದೆ, ಅಭಿವೃದ್ಧಿ ಹೊಂದಿದ ಭಾರತದ ವಾಸ್ತುಶಿಲ್ಪಿಗಳಾಗಿಯೂ ನೋಡಬೇಕು ಮತ್ತು ತಮ್ಮ ಜವಾಬ್ದಾರಿಗಳನ್ನು ಸಮರ್ಪಣೆ ಮತ್ತು ಸಹಾನುಭೂತಿಯಿಂದ ನಿರ್ವಹಿಸಬೇಕು ಎಂದು ಕರೆ ನೀಡಿ ತಮ್ಮ ಮಾತು ಮುಕ್ತಾಯ ಮಾಡಿದರು.

 

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ – 2 ಶ್ರೀ ಶಕ್ತಿಕಾಂತ ದಾಸ್, ಸಂಪುಟ ಕಾರ್ಯದರ್ಶಿ ಶ್ರೀ ಟಿ. ವಿ. ಸೋಮನಾಥನ್ ಮತ್ತು ಆಡಳಿತ ಸುಧಾರಣಾ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆಯ ಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ಭಾರತದಾದ್ಯಂತ ನಾಗರಿಕ ಸೇವಕರು ನಾಗರಿಕರ ಹಿತದೃಷ್ಟಿಯಿಂದ ಸಮರ್ಪಿತರಾಗಲು, ಸಾರ್ವಜನಿಕ ಸೇವೆಗೆ ಬದ್ಧರಾಗಲು ಮತ್ತು ತಮ್ಮ ಕೆಲಸದಲ್ಲಿ ಶ್ರೇಷ್ಠತೆಯತ್ತ ಶ್ರಮಿಸಲು ಯಾವಾಗಲೂ ಪ್ರೋತ್ಸಾಹಿಸಿದ್ದಾರೆ. ಈ ವರ್ಷ, ಪ್ರಧಾನಮಂತ್ರಿಯವರು ಜಿಲ್ಲೆಗಳ ಒಟ್ಟಾರೆ ಅಭಿವೃದ್ಧಿ, ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮ ಮತ್ತು ನಾವೀನ್ಯತೆ ವಿಭಾಗಗಳಲ್ಲಿ ನಾಗರಿಕ ಸೇವಕರಿಗೆ 16 ಪ್ರಶಸ್ತಿಗಳನ್ನು ನೀಡಿದರು. ಈ ಮೂಲಕ ಸಾಮಾನ್ಯ ನಾಗರಿಕರ ಕಲ್ಯಾಣಕ್ಕಾಗಿ ಮಾಡಿದ ಕೆಲಸಕ್ಕಾಗಿ ಅವರನ್ನು ಗೌರವಿಸಲಾಯಿತು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
'Operation Sindoor on, if they fire, we fire': India's big message to Pakistan

Media Coverage

'Operation Sindoor on, if they fire, we fire': India's big message to Pakistan
NM on the go

Nm on the go

Always be the first to hear from the PM. Get the App Now!
...
PM Modi's address to the nation
May 12, 2025
Today, every terrorist knows the consequences of wiping Sindoor from the foreheads of our sisters and daughters: PM
Operation Sindoor is an unwavering pledge for justice: PM
Terrorists dared to wipe the Sindoor from the foreheads of our sisters; that's why India destroyed the very headquarters of terror: PM
Pakistan had prepared to strike at our borders,but India hit them right at their core: PM
Operation Sindoor has redefined the fight against terror, setting a new benchmark, a new normal: PM
This is not an era of war, but it is not an era of terrorism either: PM
Zero tolerance against terrorism is the guarantee of a better world: PM
Any talks with Pakistan will focus on terrorism and PoK: PM

ಪ್ರಿಯ ದೇಶವಾಸಿಗಳೇ,

ನಮಸ್ಕಾರ !...

ಕಳೆದ ಕೆಲ ದಿನಗಳಲ್ಲಿ ದೇಶದ ಶಕ್ತಿ ಮತ್ತು ಸಂಯಮ ಎರಡನ್ನೂ ನಾವೆಲ್ಲರೂ ನೋಡಿದ್ದೇವೆ. ಮೊದಲನೆಯದಾಗಿ, ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಭಾರತದ ಬಲಿಷ್ಠ ಪಡೆಗಳಿಗೆ, ನಮ್ಮ ಸಶಸ್ತ್ರ ಪಡೆಗಳಿಗೆ, ನಮ್ಮ ಗುಪ್ತಚರ ಸಂಸ್ಥೆಗಳಿಗೆ ಮತ್ತು ನಮ್ಮ ವಿಜ್ಞಾನಿಗಳಿಗೆ ನಮಸ್ಕರಿಸುತ್ತೇನೆ.

ಆಪರೇಷನ್ ಸಿಂಧೂರದ ಉದ್ದೇಶಗಳನ್ನು ಸಾಧಿಸಲು ನಮ್ಮ ವೀರ ಸೈನಿಕರು ಅಪಾರ ಧೈರ್ಯವನ್ನು ಪ್ರದರ್ಶಿಸಿದರು.

ಇಂದು ನಾನು ಅವರ ಧೈರ್ಯಕ್ಕೆ, ಅವರ ಪರಾಕ್ರಮಕ್ಕೆ, ಅವರ ಶೌರ್ಯಕ್ಕೆ... ನಮ್ಮ ದೇಶದ ಪ್ರತಿಯೊಬ್ಬ ತಾಯಿಗೆ, ದೇಶದ ಪ್ರತಿಯೊಬ್ಬ ಸಹೋದರಿಗೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಮತ್ತು ನಾನು ಈ ಶೌರ್ಯವನ್ನು ದೇಶದ ಪ್ರತಿಯೊಬ್ಬ ಮಗಳಿಗೂ ಅರ್ಪಿಸುತ್ತೇನೆ.

ಸ್ನೇಹಿತರೇ,

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ತೋರಿಸಿದ ಬರ್ಬರತೆ ದೇಶ ಮತ್ತು ಜಗತ್ತನ್ನು ಬೆಚ್ಚಿಬೀಳಿಸಿತ್ತು. ಮುಗ್ಧ ನಾಗರಿಕರು ರಜಾದಿನಗಳನ್ನು ಆಚರಿಸುತ್ತಾ ಅವರ ಕುಟುಂಬಗಳ ಮುಂದಿದ್ದರು. ಆದರೆ, ಮಕ್ಕಳ ಮುಂದೆ ಕ್ರೂರವಾಗಿ ಕೊಲ್ಲುವುದರೊಂದಿಗೆ ಧರ್ಮದ ಬಗ್ಗೆ ಕೇಳುವುದು ಭಯೋತ್ಪಾದನೆಯ ಅತ್ಯಂತ ಭೀಕರ ಮುಖವಾಗಿತ್ತು. ಅದು ಕ್ರೌರ್ಯ. ಇದು ದೇಶದ ಸಾಮರಸ್ಯವನ್ನು ಮುರಿಯುವ ಪ್ರಯತ್ನವೂ ಆಗಿತ್ತು.

ನನಗೆ ವೈಯಕ್ತಿಕವಾಗಿ, ಈ ನೋವು ಅಪಾರವಾಗಿತ್ತು. ಈ ಭಯೋತ್ಪಾದಕ ದಾಳಿಯ ನಂತರ, ಇಡೀ ರಾಷ್ಟ್ರ, ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಸಮಾಜ, ಪ್ರತಿಯೊಂದು ವರ್ಗ, ಪ್ರತಿಯೊಂದು ರಾಜಕೀಯ ಪಕ್ಷ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮಕ್ಕಾಗಿ ಒಂದೇ ಧ್ವನಿಯಲ್ಲಿ ನಿಂತವು. ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಾವು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ.

ಇಂದು ಪ್ರತಿಯೊಬ್ಬ ಭಯೋತ್ಪಾದಕನಿಗೂ, ಪ್ರತಿಯೊಂದು ಭಯೋತ್ಪಾದಕ ಸಂಘಟನೆಗೂ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹಣೆಯಿಂದ ಸಿಂಧೂರವನ್ನು ತೆಗೆದುಹಾಕುವುದರಿಂದ ಉಂಟಾಗುವ ಪರಿಣಾಮವೇನೆಂದು ತಿಳಿದಿದೆ.

ಸ್ನೇಹಿತರೇ,

ಆಪರೇಷನ್ ಸಿಂಧೂರ... ಇದು ಕೇವಲ ಹೆಸರಲ್ಲ, ಇದು ದೇಶದ ಕೋಟ್ಯಂತರ ಜನರ ಭಾವನೆಗಳ ಪ್ರತಿಬಿಂಬವಾಗಿದೆ.

'ಸಿಂಧೂರ' ಕಾರ್ಯಾಚರಣೆ... ನ್ಯಾಯದ ಅವಿಚ್ಛಿನ್ನ ಪ್ರತಿಜ್ಞೆಯಾಗಿದೆ. ಮೇ 6ರ ತಡರಾತ್ರಿ ಮತ್ತು ಮೇ 7ರ ಬೆಳಿಗ್ಗೆ ಈ ಪ್ರತಿಜ್ಞೆಯು ಫಲಿತಾಂಶವಾಗಿ ಬದಲಾಗುವುದನ್ನು ಇಡೀ ಜಗತ್ತು ನೋಡಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ಅಡಗುತಾಣಗಳು ಮತ್ತು ಅವರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಪಡೆಗಳು ನಿಖರವಾದ ದಾಳಿ ನಡೆಸಿವೆ.

ಭಾರತ ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದೆಂದು ಭಯೋತ್ಪಾದಕರು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ, ದೇಶವು ಒಗ್ಗಟ್ಟಾದಾಗ ದೇಶ ಮೊದಲು ಎಂಬ ಮನೋಭಾವದಿಂದ ತುಂಬಿದಾಗ ರಾಷ್ಟ್ರವು ಸರ್ವೋಚ್ಚವಾಗಿರುತ್ತದೆ, ನಂತರ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ, ಫಲಿತಾಂಶಗಳನ್ನು ಸಾಧಿಸಲಾಗುತ್ತದೆ.

ಭಾರತದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದಾಗ, ಭಯೋತ್ಪಾದಕ ಸಂಘಟನೆಗಳ ಕಟ್ಟಡಗಳು ನಾಶವಾದವು. ಅಷ್ಟೇ ಅಲ್ಲದೆ, ಅವುಗಳ ನೈತಿಕ ಸ್ಥೈರ್ಯವೂ ಕಂಪನವಾಯಿತು.

ಬಹಾವಲ್ಪುರ್ ಮತ್ತು ಮುರಿಡ್ಕೆಯಂತಹ ಭಯೋತ್ಪಾದಕ ಅಡಗುತಾಣಗಳು ಒಂದು ರೀತಿಯಲ್ಲಿ ಜಾಗತಿಕ ಭಯೋತ್ಪಾದನೆಯ ವಿಶ್ವವಿದ್ಯಾಲಯಗಳಾಗಿವೆ. ಜಗತ್ತಿನ ಎಲ್ಲೆಡೆ ನಡೆದ ಯಾವುದೇ ಪ್ರಮುಖ ಭಯೋತ್ಪಾದಕ ದಾಳಿ... ಅದು ಸೆಪ್ಟೆಂಬರ್ 11 ಆಗಿರಲಿ ಅಥವಾ ಲಂಡನ್ ಟ್ಯೂಬ್ ಬಾಂಬ್ ದಾಳಿಯಾಗಿರಲಿ ಅಥವಾ ದಶಕಗಳಲ್ಲಿ ಭಾರತದಲ್ಲಿ ನಡೆದಿರುವ ಪ್ರಮುಖ ಭಯೋತ್ಪಾದಕ ದಾಳಿಗಳಾಗಿರಲಿ ಅಥವಾ ಎಲ್ಲೋ, ಮತ್ತೊಂದರಲ್ಲೋ , ಈ ಭಯೋತ್ಪಾದಕ ಅಡಗುತಾಣಗಳೊಂದಿಗೆ ಸಂಬಂಧ ಹೊಂದಿವೆ. ಭಯೋತ್ಪಾದಕರು ನಮ್ಮ ಸಹೋದರಿಯರ ಸಿಂಧೂರವನ್ನು ನಾಶಪಡಿಸಿದ್ದರು. ಅದಕ್ಕಾಗಿಯೇ ಭಾರತವು ಈ ಭಯೋತ್ಪಾದನೆಯ ಪ್ರಧಾನ ಕಚೇರಿಗಳನ್ನು ನಾಶಪಡಿಸಿತು.

ಭಾರತ ನಡೆಸಿದ ಈ ದಾಳಿಗಳಲ್ಲಿ 100 ಕ್ಕೂ ಹೆಚ್ಚು ಭೀಕರ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ಕಳೆದ ಎರಡೂವರೆ ಮೂರು ದಶಕಗಳಿಂದ ಪಾಕಿಸ್ತಾನದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದ ಮತ್ತು ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದ ಅನೇಕ ಭಯೋತ್ಪಾದಕ ನಾಯಕರನ್ನು ಭಾರತ ಒಂದೇ ಏಟಿನಲ್ಲಿ ನಿರ್ಮೂಲನೆ ಮಾಡಿತು.

ಸ್ನೇಹಿತರೇ,

ಭಾರತದ ಈ ಕ್ರಮದಿಂದ ಪಾಕಿಸ್ತಾನ ತೀವ್ರ ನಿರಾಶೆಗೊಂಡಿದೆ.

ಅವರು ಹತಾಶೆಯಿಂದ ಸುತ್ತುವರೆದಿದ್ದಾರೆ ಮತ್ತು ಕೋಪಗೊಂಡಿದ್ದಾರೆ ಮತ್ತು ಈ ಹತಾಶೆಯಲ್ಲಿ ಅವರು ಮತ್ತೊಂದು ಧೈರ್ಯಶಾಲಿ ಕೃತ್ಯವನ್ನು ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತದ ಕ್ರಮವನ್ನು ಬೆಂಬಲಿಸುವ ಬದಲು, ಪಾಕಿಸ್ತಾನ ಭಾರತದ ಮೇಲೆಯೇ ದಾಳಿ ಮಾಡಲು ಪ್ರಾರಂಭಿಸಿತು.

ಪಾಕಿಸ್ತಾನ ನಮ್ಮ ಶಾಲೆಗಳು ಮತ್ತು ಕಾಲೇಜುಗಳನ್ನು ಗುರಿಯಾಗಿಸಿಕೊಂಡಿತು. ಗುರುದ್ವಾರಗಳು, ದೇವಾಲಯಗಳು, ಸಾಮಾನ್ಯ ನಾಗರಿಕರ ಮನೆಗಳು. ಪಾಕಿಸ್ತಾನ ನಮ್ಮ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿತು. ಆದರೆ ಇದರಲ್ಲಿ ಪಾಕಿಸ್ತಾನದ ಮನಸ್ಥಿತಿ ಬಹಿರಂಗವಾಯಿತು. ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಭಾರತದ ಮುಂದೆ ಹೇಗೆ ಒಣಹುಲ್ಲಿನಂತೆ ಬಿದ್ದವು ಎಂಬುದನ್ನು ಜಗತ್ತು ನೋಡಿತು.

ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ಆಕಾಶದಲ್ಲಿಯೇ ನಾಶಪಡಿಸಿತು. ಪಾಕಿಸ್ತಾನ ಗಡಿಯಲ್ಲಿ ದಾಳಿ ಮಾಡಲು ಸಿದ್ಧತೆ ನಡೆಸುತ್ತಿತ್ತು. ಆದರೆ ಭಾರತ ಪಾಕಿಸ್ತಾನದ ಎದೆಗೆ ಹೊಡೆದಿದೆ. ಭಾರತೀಯ ಡ್ರೋನ್‌ಗಳು... ಭಾರತೀಯ ಕ್ಷಿಪಣಿಗಳು ನಿಖರವಾಗಿ ದಾಳಿ ಮಾಡಿದವು. ಪಾಕಿಸ್ತಾನಿ ವಾಯುಪಡೆಯ ಆ ವಾಯುನೆಲೆಗಳು ಹಾನಿಗೊಳಗಾದವು.

ಅದರ ಬಗ್ಗೆ ಪಾಕಿಸ್ತಾನ ತುಂಬಾ ಹೆಮ್ಮೆಪಡುತ್ತಿತ್ತು. ಮೊದಲ ಮೂರು ದಿನಗಳಲ್ಲಿ ಭಾರತ ಪಾಕಿಸ್ತಾನವನ್ನು ಊಹಿಸಿಯೂ ಇಲ್ಲದಷ್ಟು ನಾಶಮಾಡಿತು.

ಭಾರತದ ಆಕ್ರಮಣಕಾರಿ ಕ್ರಮದ ನಂತರ ಪಾಕಿಸ್ತಾನ ತಪ್ಪಿಸಿಕೊಳ್ಳಲು ದಾರಿಗಳನ್ನು ಹುಡುಕಲು ಪ್ರಾರಂಭಿಸಿತು. ಪಾಕಿಸ್ತಾನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಜಗತ್ತನ್ನು ಬೇಡಿಕೊಳ್ಳುತ್ತಿತ್ತು ಮತ್ತು ಈ ಬಲವಂತದ ಮೇರೆಗೆ, ತೀವ್ರವಾಗಿ ಥಳಿಸಿದ ನಂತರ, ಮೇ 10 ರ ಮಧ್ಯಾಹ್ನ, ಪಾಕಿಸ್ತಾನಿ ಸೇನೆಯು ನಮ್ಮ ಡಿಜಿಎಂಒಗಳು ಅವರನ್ನು ಸಂಪರ್ಕಿಸಿತು.

ಆ ಹೊತ್ತಿಗೆ ನಾವು ಭಯೋತ್ಪಾದನೆಯ ಮೂಲಸೌಕರ್ಯವನ್ನು ದೊಡ್ಡ ಪ್ರಮಾಣದಲ್ಲಿ ನಾಶಪಡಿಸಿದ್ದೆವು. ಭಯೋತ್ಪಾದಕರು ಕೊಲ್ಲಲ್ಪಟ್ಟರು. ನಾವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳನ್ನು ನಾಶಮಾಡಿದ್ದೆವು. ಹಾಗಾಗಿ, ಪಾಕಿಸ್ತಾನದಿಂದ ಮನವಿ ಬಂದಾಗ, ಇದನ್ನು ಪಾಕಿಸ್ತಾನದಿಂದ ಹೇಳಿದಾಗ, ಅವರ ಕಡೆಯಿಂದ ಇನ್ನು ಮುಂದೆ ಯಾವುದೇ ಭಯೋತ್ಪಾದಕ ಚಟುವಟಿಕೆ ಮತ್ತು ಮಿಲಿಟರಿ ಸಾಹಸ ಇರುವುದಿಲ್ಲ ಎಂದು ಹೇಳಿದ್ದರಿಂದ ಭಾರತವೂ ಅದನ್ನು ಪರಿಗಣಿಸಿತು.

ಮತ್ತು ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು ಮತ್ತು ಸೇನಾ ನೆಲೆಗಳ ವಿರುದ್ಧದ ನಮ್ಮ ಪ್ರತೀಕಾರದ ಕ್ರಮವನ್ನು ನಾವು ಮುಂದೂಡಿದ್ದೇವೆ.

ಮುಂದಿನ ದಿನಗಳಲ್ಲಿ ಈ ಮಾನದಂಡದ ಆಧಾರದ ಮೇಲೆ ನಾವು ಪಾಕಿಸ್ತಾನದ ಪ್ರತಿಯೊಂದು ಹೆಜ್ಜೆಯನ್ನೂ ಅಳೆಯುತ್ತೇವೆ.

ದೇಶವಾಸಿಗಳೇ,

ಭಾರತದ ಮೂರೂ ಸೇನೆಗಳು, ನಮ್ಮ ವಾಯುಪಡೆ, ನಮ್ಮ ಸೇನೆ ಮತ್ತು ನಮ್ಮ ನೌಕಾಪಡೆ, ನಮ್ಮ ಗಡಿ ಭದ್ರತಾ ಪಡೆ-ಬಿಎಸ್‌ ಎಫ್‌, ಭಾರತದ ಅರೆ ಸೇನಾ ಪಡೆ ಸತತವಾಗಿ ನಿಗಾ ವಹಿಸಿವೆ. ಸರ್ಜಿಕಲ್‌ ಸ್ಟ್ರೈಕ್‌ ಮತ್ತು ವಾಯು ದಾಳಿಯ ಬಳಿಕ ಈಗ ಆಪರೇಷನ್‌ ಸಿಂಧೂರ್ ಭಯೋತ್ಪಾದನೆಯ ವಿರುದ್ಧ ಭಾರತದ ನೀತಿಯಾಗಿದೆ. ಆಪರೇಷನ್ ಸಿಂಧೂರವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೊಸ ಆರಂಭವನ್ನು ಮಾಡಿದೆ. ಹೊಸ ಮಾನದಂಡವನ್ನು ಹೊಸ ಅಧ್ಯಾಯವನ್ನು ಸ್ಥಾಪಿಸಿದೆ. ಮೊದಲನೆಯದು , ಭಾರತದ ಮೇಲೆ ಭಯೋತ್ಪಾದಕ ದಾಳಿಯಾದರೆ ದಿಟ್ಟ ಉತ್ತರವನ್ನು ನೀಡಲಾಗುವುದು. ನಾವು ನಮ್ಮ ರೀತಿಯಲ್ಲಿ ನಮ್ಮ ಷರತ್ತುಗಳ ಮೇಲೆ ಉತ್ತರಗಳನ್ನು ನೀಡುತ್ತೇವೆ. ಭಯೋತ್ಪಾದನೆಯ ಮೂಲವನ್ನು ಬುಡ ಸಮೇತವಾಗಿ ನಿಗ್ರಹಗೊಳಿಸಲು ಕಠಿಣ ಕಾರ್ಯಾಚರಣೆಯನ್ನು ಕೈಗೊಳ್ಳುತ್ತೇವೆ. ಎರಡನೇಯದು ಯಾವುದೇ ಪರಮಾಣು ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಪರಮಾಣು ಬೆದರಿಕೆಯ ಅಡಿಯಲ್ಲಿ ಬೆಳೆಯುತ್ತಿರುವ ಭಯೋತ್ಪಾದಕ ತಾಣಗಳ ಮೇಲೆ ಭಾರತವು, ನಿಖರವಾದ ಮತ್ತು ನಿರ್ಣಾಯಕವಾದ ದಾಳಿಗಳನ್ನು ಕೈಗೊಳ್ಳಲಿದೆ. ಮೂರನೇಯದು , ಭಯೋತ್ಪಾದನೆ ಹಾಗೂ ಭಯೋತ್ಪಾದನೆಗೆ ಸಹಕರಿಸುವ ಎಲ್ಲ ಶಕ್ತಿಗಳನ್ನು ಸಹ ಒಂದೇ ದೃಷ್ಟಿಯಲ್ಲಿ ನೋಡಲಾಗುವುದು. ಅವರು ಸಹ ದೇಶದ ಆತಂಕವಾದಿಗಳಾಗಿದ್ದಾರೆ .

ಇಡೀ ವಿಶ್ವ, ಪಾಕಿಸ್ತಾನದ ಹೇಯ ಕೃತ್ಯವನ್ನು ಮತ್ತೊಮ್ಮೆ ನೋಡಿದೆ. ಆಪರೇಷನ್‌ ಸಿಂಧೂರ್‌ ದಾಳಿಯಲ್ಲಿ ಸಾವಿಗೀಡಾದ ಭಯೋತ್ಪಾದಕರಿಗೆ ವಿದಾಯ ನೀಡುವಲ್ಲಿ ಪಾಕಿಸ್ತಾನ ಸೇನೆಯ ಉನ್ನತ ಅಧಿಕಾರಿಗಳು ನಿರತರಾಗಿದ್ದರು. ಪಾಕ್‌ ನ ಪ್ರಾಯೋಜಿತ ಭಯೋತ್ಪಾದನೆಗೆ ಇದೊಂದು ಬಹುದೊಡ್ಡ ಸಾಕ್ಷಿಯಾಗಿದೆ.

ನಾವು ಭಾರತ ಮತ್ತು ನಮ್ಮ ನಾಗರಿಕರನ್ನು ಯಾವುದೇ ರೀತಿಯ ಅಪಾಯದಿಂದ ರಕ್ಷಿಸುವುದಕ್ಕೋಸ್ಕರ ನಿರಂತರವಾಗಿ ನಿರ್ಣಾಯಕ ಹೆಜ್ಜೆಗಳನ್ನು ಇಡುತ್ತೇವೆ.

ಸ್ನೇಹಿತರೆ,

ಯುದ್ಧದ ಮೈದಾನದಲ್ಲಿ ನಾವು ಪ್ರತಿ ಬಾರಿ ಪಾಕಿಸ್ತಾನವನ್ನು ದೂಳೀಪಟ ಮಾಡಿದ್ದೇವೆ ಮತ್ತು ಈ ಬಾರಿ ಆಪರೇಷನ್‌ ಸಿಂಧೂರ್‌, ಹೊಸ ಆಯಾಮಕ್ಕೆ ಸೇರ್ಪಡೆಯಾಗಿದೆ.

ನಾವು ಮರುಭೂಮಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ನಮ್ಮ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ಜತೆಗೇ, ಹೊಸ ತಲೆಮಾರಿನ ಯುದ್ಧಕ್ರಮದಲ್ಲೂ ನಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದೇವೆ.

ಈ ಆಪರೇಷನ್‌ ಮೂಲಕ, ನಮ್ಮ ಮೇಡ್‌ ಇನ್‌ ಇಂಡಿಯಾ ಶಸ್ತ್ರಾಸ್ತ್ರಗಳ ದಕ್ಷತೆಯೂ ಸಾಬೀತಾಗಿದೆ.

21ನೇ ಶತಮಾನದ ಯುದ್ಧದಲ್ಲಿ ಮೇಡ್‌ ಇನ್‌ ಇಂಡಿಯಾ ರಕ್ಷಣಾ ಸಲಕರಣೆಗಳ ಸಮಯ ಈಗ ಬಂದಿದೆ ಎನ್ನುವುದನ್ನು ಇಂದು ವಿಶ್ವ ನೋಡುತ್ತಿದೆ.

ಸ್ನೇಹಿತರೇ,

ಎಲ್ಲ ರೀತಿಯ ಭಯೋತ್ಪಾದನೆಯ ವಿರುದ್ಧ ನಾವೆಲ್ಲರೂ ಒಗ್ಗೂಡಿರುವುದು ನಮ್ಮ ಅತ್ಯಂತ ದೊಡ್ಡ ಶಕ್ತಿಯಾಗಿದೆ.

ನಿಶ್ಚಿತವಾಗಿ ಈ ಸಮಯ ಯುದ್ಧದ ಕಾಲವಲ್ಲ,

ಆದರೆ ಈ ಕಾಲ ಭಯೋತ್ಪಾದನೆಯ ಸಮಯವೂ ಅಲ್ಲ.

ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವುದು ಉತ್ತಮ ಜಗತ್ತನ್ನು ಸುನಿಶ್ಚಿತಗೊಳಿಸುತ್ತದೆ.

ದೇಶವಾಸಿಗಳೇ,

ಪಾಕಿಸ್ತಾನಿ ಯೋಧರು, ಪಾಕಿಸ್ತಾನದ ಸರ್ಕಾರ ಯಾವ ರೀತಿಯಲ್ಲಿ ಭಯೋತ್ಪಾದನೆಗೆ ಪುಷ್ಟಿ ನೀಡುತ್ತಿವೆ ಎಂದರೆ, ಒಂದು ದಿನ ಅದು ಪಾಕಿಸ್ತಾನವನ್ನೇ ಅಂತ್ಯಗೊಳಿಸುತ್ತದೆ.

ಪಾಕಿಸ್ತಾನಕ್ಕೆ ಇದರಿಂದ ರಕ್ಷಿಸಿಕೊಳ್ಳಬೇಕು ಎಂದಾದರೆ ಅದು ತನ್ನ ಭಯೋತ್ಪಾದನೆಗೆ ಮೂಲಸೌಕರ್ಯ ಒದಗಿಸುವ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಬೇಕು. ಇದನ್ನು ಬಿಟ್ಟು ಶಾಂತಿಯ ಬೇರೆ ಯಾವುದೇ ಮಾರ್ಗವಿಲ್ಲ.

ಭಯೋತ್ಪಾದನೆ ಮತ್ತು ಮಾತುಕತೆ ಜತೆಯಾಗಿ ನಡೆಯಲು ಸಾಧ್ಯವಿಲ್ಲ ಎನ್ನುವುದು ಭಾರತದ ಅತ್ಯಂತ ಸ್ಪಷ್ಟ ನಿಲುವಾಗಿದೆ.

ಭಯೋತ್ಪಾದನೆ ಮತ್ತು ವ್ಯಾಪಾರ ಜತೆಯಾಗಿ ನಡೆಯಲು ಸಾಧ್ಯವಿಲ್ಲ ಮತ್ತು,

ನೀರು ಮತ್ತು ರಕ್ತ ಒಟ್ಟಿಗೇ ಹರಿಯಲು ಸಾಧ್ಯವಿಲ್ಲ.

ನಮ್ಮ ಪ್ರಕಟಿತ ನೀತಿಯೆಂದರೆ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುತ್ತದೆ ಎಂದಾದರೆ, ಅದು ಭಯೋತ್ಪಾದನೆಯ ಕುರಿತಾಗಿಯೇ ಆಗಿರುತ್ತದೆ. ಪಾಕಿಸ್ತಾನದೊಂದಿಗೆ ಮಾತುಕತೆಯಾಗುವುದಾದರೆ ಪಾಕ್‌ ಆಕ್ರಮಿತ ಕಾಶ್ಮೀರ-ಪಿಓಕೆಯ ಕುರಿತಾಗಿಯೇ ಇರುತ್ತದೆ ಎನ್ನುವುದನ್ನು ನಾನು ಇಂದು ಜಾಗತಿಕ ಸಮುದಾಯಕ್ಕೂ ತಿಳಿಸುತ್ತೇನೆ.

ಪ್ರೀತಿಯ ದೇಶವಾಸಿಗಳೇ,

ಇಂದು ಬುದ್ಧ ಪೂರ್ಣಿಮೆಯಾಗಿದೆ. ಭಗವಾನ್‌ ಬುದ್ಧ ನಮಗೆ ಶಾಂತಿಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾನೆ. ಶಾಂತಿಯ ಮಾರ್ಗ ಸಹ ಶಕ್ತಿಯಿಂದ ಕೂಡಿದ್ದು ಸಾಗುತ್ತದೆ. ಮಾನವೀಯತೆ, ಶಾಂತಿ ಮತ್ತು ಸಮೃದ್ಧಿಯೆಡೆಗೆ ಮುನ್ನಡೆಯುತ್ತದೆ.

ಪ್ರತಿ ಭಾರತೀಯನು ಶಾಂತಿಯಿಂದ ಬದುಕಬೇಕು, ವಿಕಸಿತ ಭಾರತದ ಕನಸುಗಳನ್ನು ಪೂರ್ಣಗೊಳಿಸಬೇಕು.

ಇದರಿಂದಾಗಿ, ಭಾರತ ಶಕ್ತಿಶಾಲಿಯಾಗುವುದು ಅಗತ್ಯವಾಗಿದೆ.

ಮತ್ತು ಅವಶ್ಯಕತೆಯಿರುವಾಗ ಈ ಶಕ್ತಿಯ ಬಳಕೆ ಮಾಡುವುದು ಕೂಡ ಅಗತ್ಯ.

ಕೆಲವು ದಿನಗಳಿಂದ ಭಾರತವು ಇದನ್ನೇ ಮಾಡಿದೆ.

ನಾನು ಮತ್ತೊಮ್ಮೆ ಭಾರತದ ಸೇನೆ ಮತ್ತು ಸಶಸ್ತ್ರ ಪಡೆಗಳಿಗೆ ನಮನ ಸಲ್ಲಿಸುತ್ತೇನೆ. ನಮ್ಮ ದೇಶವಾಸಿಗಳ ಧೈರ್ಯ ಮತ್ತು ಏಕತೆಗೆ ವಂದಿಸುತ್ತೇನೆ.

ಧನ್ಯವಾದ,

ಭಾರತ ಮಾತಾ ಕೀ ಜೈ!!!

ಭಾರತ ಮಾತಾ ಕೀ ಜೈ!!!

ಭಾರತ ಮಾತಾ ಕೀ ಜೈ!!!