ಗೌರವಾನ್ವಿತ ಚಾನ್ಸಲರ್ ಶೋಲ್ಜ್,

ಎರಡೂ ದೇಶಗಳ ಪ್ರತಿನಿಧಿಗಳೇ,

ಮಾಧ್ಯಮದ ಸ್ನೇಹಿತರೇ,

ನಮಸ್ಕಾರ!

ಗುಟೆನ್ ಟ್ಯಾಗ್! (ಜರ್ಮನ್ ಭಾಷೆಯಲ್ಲಿ- ಶುಭ ದಿನ)

ಮೊದಲನೆಯದಾಗಿ, ನಾನು ಚಾನ್ಸಲರ್ ಶೋಲ್ಜ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹಾರ್ದಿಕವಾಗಿ  ಸ್ವಾಗತ ಕೋರಲು ಬಯಸುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ಮೂರನೇ ಬಾರಿಗೆ ನಿಮ್ಮನ್ನು ಭಾರತಕ್ಕೆ ಸ್ವಾಗತಿಸುವ ಅವಕಾಶ ನಮಗೆ ದೊರೆತಿರುವುದಕ್ಕೆ ಸಂತೋಷವಾಗಿದೆ.

ಕಳೆದ ಎರಡು-ಮೂರು ದಿನಗಳ ಚಟುವಟಿಕೆಗಳಿಂದ ಭಾರತ ಮತ್ತು ಜರ್ಮನಿ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ವ್ಯಾಪ್ತಿಯನ್ನು ನೀವು ಅಳೆಯಬಹುದು. ಇಂದು ಬೆಳಿಗ್ಗೆ, ಜರ್ಮನ್ ವ್ಯವಹಾರಕ್ಕಾಗಿ ಏಷ್ಯಾ ಪೆಸಿಫಿಕ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡುವ ಅವಕಾಶ ನಮಗೆ ಸಿಕ್ಕಿತು.

ನನ್ನ ಮೂರನೇ ಅವಧಿಯ ಮೊದಲ ಐಜಿಸಿ ಸ್ವಲ್ಪ ಸಮಯದ ಹಿಂದೆ ಸಮಾರೋಪಗೊಂಡಿತು. ಇದೀಗ, ನಾವು ಸಿಇಒ ಫೋರಂ ಸಭೆಯಿಂದ ಬಂದಿದ್ದೇವೆ. ಅದೇ ಸಮಯದಲ್ಲಿ, ಜರ್ಮನ್ ನೌಕಾ ಹಡಗುಗಳು ಗೋವಾದಲ್ಲಿ ಬಂದರು ಭೇಟಿಗಳನ್ನು  ಮಾಡುತ್ತಿವೆ. ಮತ್ತು ಕ್ರೀಡಾ ಜಗತ್ತು ಕೂಡಾ ಹಿಂದೆ ಬಿದ್ದಿಲ್ಲ - ನಮ್ಮ ಹಾಕಿ ತಂಡಗಳ ನಡುವೆ ಸ್ನೇಹಪರ ಪಂದ್ಯಗಳನ್ನು ಸಹ ಆಡಲಾಗುತ್ತಿದೆ.

ಸ್ನೇಹಿತರೇ,

ಚಾನ್ಸಲರ್ ಶೋಲ್ಜ್ ಅವರ ನಾಯಕತ್ವದಲ್ಲಿ ನಮ್ಮ ಪಾಲುದಾರಿಕೆ ಹೊಸ ವೇಗ ಮತ್ತು ದಿಕ್ಕನ್ನು ಪಡೆದುಕೊಂಡಿದೆ. ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಪಾಲುದಾರಿಕೆಯನ್ನು ಸಮಗ್ರ ರೀತಿಯಲ್ಲಿ ಆಧುನೀಕರಿಸಲು ಮತ್ತು ಉನ್ನತೀಕರಿಸಲು ನೀಲನಕ್ಷೆಯನ್ನು ಒದಗಿಸುವ ಜರ್ಮನಿಯ "ಭಾರತದ ಮೇಲೆ ಗಮನ" ಕಾರ್ಯತಂತ್ರಕ್ಕಾಗಿ ನಾನು ಚಾನ್ಸಲರ್ ಶೋಲ್ಜ್ ಅವರನ್ನು ಅಭಿನಂದಿಸುತ್ತೇನೆ.

ಇಂದು, ನಮ್ಮ ನಾವೀನ್ಯತೆ ಮತ್ತು ತಂತ್ರಜ್ಞಾನ ಮಾರ್ಗಸೂಚಿಯನ್ನು ಪ್ರಾರಂಭಿಸಲಾಗಿದೆ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಕೌಶಲ್ಯ ಅಭಿವೃದ್ಧಿ ಮತ್ತು ನಾವೀನ್ಯತೆಗಳಿಗೆ ಸಂಪೂರ್ಣ ಸರ್ಕಾರದ ವಿಧಾನವನ್ನು ಸಹ ಒಪ್ಪಲಾಗಿದೆ. ಇದು ಕೃತಕ ಬುದ್ಧಿಮತ್ತೆ, ಅರೆವಾಹಕಗಳು ಮತ್ತು ಶುದ್ಧ ಇಂಧನದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುತ್ತದೆ. ಇದು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಜಾಗತಿಕ ಪೂರೈಕೆ ಮೌಲ್ಯ ಸರಪಳಿಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ರಕ್ಷಣಾ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಸಹಕಾರವು ನಮ್ಮ ಆಳವಾದ ಪರಸ್ಪರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ವರ್ಗೀಕೃತ ಮಾಹಿತಿಯ ವಿನಿಮಯದ ಒಪ್ಪಂದವು ಈ ದಿಕ್ಕಿನಲ್ಲಿ ಹೊಸ ಹೆಜ್ಜೆಯಾಗಿದೆ. ಇಂದು ಅಂಕಿತ ಹಾಕಲಾಗಿರುವ ಪರಸ್ಪರ ಕಾನೂನು ನೆರವು ಒಪ್ಪಂದವು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಶಕ್ತಿಗಳನ್ನು ಎದುರಿಸಲು ನಮ್ಮ ಜಂಟಿ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡಲಿದೆ.

ಎರಡೂ ದೇಶಗಳು ಹಸಿರು ಮತ್ತು ಸುಸ್ಥಿರ ಬೆಳವಣಿಗೆಗೆ ತಮ್ಮ ಹಂಚಿಕೆಯ ಬದ್ಧತೆಯ ಮೇಲೆ ನಿರಂತರವಾಗಿ ಕೆಲಸ ಮಾಡುತ್ತಿವೆ. ಇಂದು, ನಮ್ಮ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆಯನ್ನು ಮುಂಚೂಣಿಗೆ ಕೊಂಡೊಯ್ದು  ಹಸಿರು ನಗರ ಚಲನಶೀಲತೆ ಪಾಲುದಾರಿಕೆಯ ಎರಡನೇ ಹಂತಕ್ಕೆ ನಾವು ಒಪ್ಪಿದ್ದೇವೆ. ಹೆಚ್ಚುವರಿಯಾಗಿ, ಹಸಿರು ಹೈಡ್ರೋಜನ್ ಮಾರ್ಗಸೂಚಿಯನ್ನು ಸಹ ಪ್ರಾರಂಭಿಸಲಾಗಿದೆ.

 

ಸ್ನೇಹಿತರೇ,

ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳು ಎರಡೂ ದೇಶಗಳಿಗೆ ಕಳವಳಕಾರಿ ವಿಷಯವಾಗಿವೆ. ಯುದ್ಧವು ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಭಾರತ ಸದಾ ಸಮರ್ಥಿಸಿಕೊಂಡಿದೆ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಿರುವ ಎಲ್ಲ ಕೊಡುಗೆಗಳನ್ನು ನೀಡಲು ಸಿದ್ಧವಾಗಿದೆ.

ಇಂಡೋ-ಪೆಸಿಫಿಕ್ ಪ್ರದೇಶದ ಅಂತರರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ನೌಕಾಯಾನ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವುದಕ್ಕೆ ಮತ್ತು ಕಾನೂನಿನ ನಿಯಮಕ್ಕೆ ಬದ್ಧವಾಗಿರಲು ನಾವಿಬ್ಬರೂ ಒಪ್ಪುತ್ತೇವೆ.

ಇಪ್ಪತ್ತನೇ ಶತಮಾನದಲ್ಲಿ ರಚಿಸಲಾದ ಜಾಗತಿಕ ವೇದಿಕೆಗಳು ಇಪ್ಪತ್ತೊಂದನೇ ಶತಮಾನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂಬುದನ್ನು ನಾವು ಒಪ್ಪುತ್ತೇವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ವಿವಿಧ ಬಹುಪಕ್ಷೀಯ ಸಂಸ್ಥೆಗಳಲ್ಲಿ ಸುಧಾರಣೆಗಳ ಅಗತ್ಯವಿದೆ.

ಭಾರತ ಮತ್ತು ಜರ್ಮನಿ ಈ ದಿಕ್ಕಿನಲ್ಲಿ ಸಕ್ರಿಯವಾಗಿ ಸಹಕರಿಸುವುದನ್ನು ಮುಂದುವರಿಸುತ್ತವೆ.

ಸ್ನೇಹಿತರೇ,

ಜನರೊಂದಿಗಿನ ಸಂಪರ್ಕವು ನಮ್ಮ ಸಂಬಂಧದ ಪ್ರಮುಖ ಆಧಾರಸ್ತಂಭವಾಗಿದೆ. ಇಂದು, ನಾವು ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಐಐಟಿ ಚೆನ್ನೈ ಮತ್ತು ಡ್ರೆಸ್ಡೆನ್ ವಿಶ್ವವಿದ್ಯಾಲಯದ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಇದು ನಮ್ಮ ವಿದ್ಯಾರ್ಥಿಗಳಿಗೆ ಡ್ಯುಯಲ್ ಡಿಗ್ರಿ ಕಾರ್ಯಕ್ರಮದ ಲಾಭವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಭಾರತದ ಯುವ ಪ್ರತಿಭೆಗಳು ಜರ್ಮನಿಯ ಪ್ರಗತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತಿವೆ. ಭಾರತಕ್ಕಾಗಿ ಜರ್ಮನಿ ಬಿಡುಗಡೆ ಮಾಡಿದ "ನುರಿತ ಕಾರ್ಮಿಕ ಕಾರ್ಯತಂತ್ರ"ವನ್ನು ನಾವು ಸ್ವಾಗತಿಸುತ್ತೇವೆ. ಜರ್ಮನಿಯ ಅಭಿವೃದ್ಧಿಗೆ ಕೊಡುಗೆ ನೀಡಲು ನಮ್ಮ ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ನನಗೆ ವಿಶ್ವಾಸವಿದೆ. ಭಾರತೀಯ ಪ್ರತಿಭೆಗಳ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಚಾನ್ಸಲರ್ ಶೋಲ್ಜ್ ಅವರನ್ನು ಅಭಿನಂದಿಸುತ್ತೇನೆ.

 

ಗೌರವಾನ್ವಿತರೇ,

ನಿಮ್ಮ ಭಾರತ ಭೇಟಿ ನಮ್ಮ ಪಾಲುದಾರಿಕೆಗೆ ಹೊಸ ವೇಗ, ಶಕ್ತಿ ಮತ್ತು ಉತ್ಸಾಹವನ್ನು ನೀಡಿದೆ. ನಮ್ಮ ಪಾಲುದಾರಿಕೆಯಲ್ಲಿ ಸ್ಪಷ್ಟತೆ ಇದೆ ಮತ್ತು ಭವಿಷ್ಯವು ಉಜ್ವಲವಾಗಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ.

ಜರ್ಮನ್ ಭಾಷೆಯಲ್ಲಿ, ಅಲೆಸ್ ಕ್ಲಾರ್, ಅಲೆಸ್ ಗಟ್! (ಎಲ್ಲರಿಗೂ  ಒಳಿತಾಗಲಿ)

ತುಂಬ ಧನ್ಯವಾದಗಳು.

ಬಹಳ ಧನ್ಯವಾದಗಳು

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Government's foodgrain stocks hit 604 lakh tonnes, nearly three times buffer requirement

Media Coverage

Government's foodgrain stocks hit 604 lakh tonnes, nearly three times buffer requirement
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಮೇ 2026
May 07, 2026

Justice Delivered Under PM Modi: How Operation Sindoor Redefined India’s Response to Terror

Aatmanirbhar Bharat in Action: Record Exports, Defence Exports, Food Security & Green Mobility Under the Leadership of PM Modi