ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಜೆಟ್ ವೆಬಿನಾರ್ ಸರಣಿಯ ಎರಡನೇ ಕಂತನ್ನು ಉದ್ದೇಶಿಸಿ ಮಾತನಾಡಿದರು, ಇದು "ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರಗೊಳಿಸುವುದು ಮತ್ತು ಬಲಪಡಿಸುವುದು" ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು. ಕಳೆದ ವಾರದ ವೇಗವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಮೊದಲ ವೆಬಿನಾರ್ ಅತ್ಯಂತ ಯಶಸ್ವಿಯಾಗಿದೆ ಮತ್ತು ಬಜೆಟ್ ನಿಬಂಧನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಸಲಹೆಗಳನ್ನು ನೀಡಿದೆ ಎಂದು ಹೇಳಿದರು.
ಪ್ರಸ್ತುತ ವೆಬಿನಾರ್ ದೇಶದ ಆರ್ಥಿಕ ಬೆಳವಣಿಗೆಗೆ ನಿರಂತರ ಬಲವನ್ನು ನೀಡುವಲ್ಲಿ ಆಂತರಿಕವಾಗಿ ಸಂಬಂಧ ಹೊಂದಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಜಾಗತಿಕ ಪೂರೈಕೆ ಸರಪಳಿಗಳು ಮರುರೂಪುಗೊಳ್ಳುತ್ತಿರುವಾಗ, ಭಾರತದ ಸದೃಢ ಆರ್ಥಿಕತೆಯು ಜಗತ್ತಿಗೆ ಭರವಸೆಯ ಕಿರಣವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಆರ್ಥಿಕತೆಯ ಕ್ಷಿಪ್ರ ಪ್ರಗತಿಯು 'ವಿಕಸಿತ ಭಾರತ'ಕ್ಕೆ ಬೃಹತ್ ಅಡಿಪಾಯವಾಗಿದೆ" ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟರು.
ಸರ್ಕಾರದ ಸ್ಪಷ್ಟ ದೃಷ್ಟಿಕೋನ ಮತ್ತು ಸ್ಪಷ್ಟ ಸಂಕಲ್ಪವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, "ಹೆಚ್ಚು ನಿರ್ಮಿಸಿ, ಹೆಚ್ಚು ಉತ್ಪಾದಿಸಿ, ಹೆಚ್ಚು ಸಂಪರ್ಕಿಸಿ ಮತ್ತು ಹೆಚ್ಚು ರಫ್ತು ಮಾಡಿ" ಎಂಬ ಪ್ರಮುಖ ಮಂತ್ರಗಳನ್ನು ಪುನರುಚ್ಚರಿಸಿದರು. "ಖಂಡಿತವಾಗಿಯೂ, ಇಂದು ನಿಮ್ಮ ನಡುವೆ ನಡೆಯುವ ಚರ್ಚೆಗಳು ಮತ್ತು ಈ ಚರ್ಚೆಗಳಿಂದ ಹೊರಹೊಮ್ಮುವ ಸಲಹೆಗಳು ಪ್ರಮುಖ ಪಾತ್ರವಹಿಸುತ್ತವೆ," ಎಂದು ಪ್ರಧಾನಮಂತ್ರಿ ಹೇಳಿದರು.
ವಿವಿಧ ವಲಯಗಳ ನಡುವಿನ ಸಮನ್ವಯದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಉತ್ಪಾದನೆ, ಲಾಜಿಸ್ಟಿಕ್ಸ್, ಎಂ.ಎಸ್.ಎಂ.ಇ.ಗಳು ಮತ್ತು ನಗರ ಕೇಂದ್ರಗಳು ಪ್ರತ್ಯೇಕ ಘಟಕಗಳಲ್ಲ, ಬದಲಿಗೆ ಒಂದೇ ಆರ್ಥಿಕ ರಚನೆಯ ಪರಸ್ಪರ ಸಂಬಂಧ ಹೊಂದಿರುವ ಸ್ತಂಭಗಳಾಗಿವೆ ಎಂದು ವಿವರಿಸಿದರು. ಉತ್ಪಾದನೆಯು ರಫ್ತುಗಳನ್ನು ಹೇಗೆ ಉತ್ತೇಜಿಸುತ್ತದೆ ಮತ್ತು ಸ್ಪರ್ಧಾತ್ಮಕ ಎಂ.ಎಸ್.ಎಂ.ಇ.ಗಳು ಹೇಗೆ ನಮ್ಯತೆ ಹಾಗೂ ನಾವೀನ್ಯತೆಯನ್ನು ಪೋಷಿಸುತ್ತವೆ ಎಂಬುದನ್ನು ಅವರು ವಿವರಿಸಿದರು. "ಈ ವರ್ಷದ ಬಜೆಟ್ ಈ ಎಲ್ಲಾ ಸ್ತಂಭಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಕೇವಲ ನೀತಿ ನಿರ್ದೇಶನಗಳು ಮಾತ್ರ ಫಲಿತಾಂಶ ನೀಡುವುದಿಲ್ಲ, ಬದಲಿಗೆ ಕೈಗಾರಿಕೆಗಳು, ಹಣಕಾಸು ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ಪ್ರಧಾನಮಂತ್ರಿ ಎಚ್ಚರಿಸಿದರು. ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಹಾಗೂ ವೆಚ್ಚದ ರಚನೆಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಬಗ್ಗೆ ಚರ್ಚೆಗಳಿಗೆ ಆದ್ಯತೆ ನೀಡುವಂತೆ ಅವರು ಸಂಬಂಧಪಟ್ಟ ಪಾಲುದಾರರನ್ನು ಒತ್ತಾಯಿಸಿದರು. "ಈ ದಿಕ್ಕುಗಳಲ್ಲಿ ನಿಮ್ಮ ಸಲಹೆಗಳು ದೇಶದ ಮೂಲೆ ಮೂಲೆಗೂ ಅಭಿವೃದ್ಧಿ ತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ" ಎಂದು ಶ್ರೀ ಮೋದಿ ತಿಳಿಸಿದರು.
ಮೂಲ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ಉತ್ಪಾದನಾ ವಲಯದಲ್ಲಿ ಅಸ್ತಿತ್ವದಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಹೈಲೈಟ್ ಮಾಡಿದರು. "ಡೆಡಿಕೇಟೆಡ್ ರೇರ್ ಅರ್ಥ್ ಕಾರಿಡಾರ್ ಗಳು (Dedicated Rare Earth Corridors) ಮತ್ತು ಕಂಟೈನರ್ ಉತ್ಪಾದನೆಯಂತಹ ವಲಯಗಳ ಮೇಲೆ ಕೇಂದ್ರೀಕರಿಸಿರುವುದು ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಪ್ರಧಾನಮಂತ್ರಿಯವರು ಬಜೆಟ್ ನಲ್ಲಿ ಘೋಷಿಸಲಾದ 'ಬಯೋಫಾರ್ಮಾ ಶಕ್ತಿ ಮಿಷನ್' ಕುರಿತು ಬೆಳಕು ಚೆಲ್ಲಿದರು, ಇದು ಭಾರತವನ್ನು ಬಯೋಲಾಜಿಕ್ಸ್ ಮತ್ತು ಮುಂದಿನ ಪೀಳಿಗೆಯ ಚಿಕಿತ್ಸೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. "ನಾವು ಸುಧಾರಿತ ಬಯೋಫಾರ್ಮಾ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ನಾಯಕತ್ವದತ್ತ ಸಾಗಲು ಬಯಸುತ್ತೇವೆ," ಎಂದು ಶ್ರೀ ಮೋದಿ ತಿಳಿಸಿದರು.
ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಜಗತ್ತು ಇಂದು ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕತ್ವ ಹೊಂದಿರುವ ಉತ್ಪಾದನಾ ಪಾಲುದಾರರನ್ನು ಸಕ್ರಿಯವಾಗಿ ಹುಡುಕುತ್ತಿದೆ ಎಂದು ಅಭಿಪ್ರಾಯಪಟ್ಟರು. ಸ್ಟೇಕ್ ಹೋಲ್ಡರ್ಗಳು (ಪಾಲುದಾರರು) ಆತ್ಮವಿಶ್ವಾಸದಿಂದ ಹೂಡಿಕೆ ಮಾಡಲು, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು, ಸಂಶೋಧನೆಯಲ್ಲಿ ಗಮನಾರ್ಹ ಹೂಡಿಕೆ ಮಾಡಲು ಮತ್ತು ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅವರು ಒತ್ತಾಯಿಸಿದರು. "ಈ ಪಾತ್ರವನ್ನು ಬಲವಾಗಿ ನಿರ್ವಹಿಸಲು ಭಾರತಕ್ಕೆ ಅವಕಾಶವಿದೆ," ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ಮುಕ್ತ ವ್ಯಾಪಾರ ಒಪ್ಪಂದಗಳ (FTAs) ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಈ ಒಪ್ಪಂದಗಳು ಅವಕಾಶಗಳ ಬೃಹತ್ ಬಾಗಿಲುಗಳನ್ನು ತೆರೆದಿವೆ, ಇದು ಗುಣಮಟ್ಟಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಭಾರತೀಯ ಉದ್ಯಮದ ಮೇಲೆ ಹೊಸ ಜವಾಬ್ದಾರಿಯನ್ನು ಹೊರಿಸಿದೆ ಎಂದು ತಿಳಿಸಿದರು. ಬಳಕೆದಾರ ಸ್ನೇಹಿ ಉತ್ಪನ್ನಗಳನ್ನು ತಯಾರಿಸಲು ಅಂತರರಾಷ್ಟ್ರೀಯ ಗ್ರಾಹಕರ ಆದ್ಯತೆಗಳು ಮತ್ತು ಅನುಕೂಲಗಳ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. "ಅಂದಾಗ ಮಾತ್ರ ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಸೃಷ್ಟಿಯಾಗುತ್ತಿರುವ ಅವಕಾಶಗಳ ಪ್ರಯೋಜನವನ್ನು ಪಡೆಯಲು ನಮಗೆ ಸಾಧ್ಯವಾಗುತ್ತದೆ," ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಪ್ರಧಾನಮಂತ್ರಿಯವರು MSME ವಲಯದ ಕುರಿತು ಮಾತನಾಡುತ್ತಾ, ಇತ್ತೀಚಿನ ವರ್ಗೀಕರಣ ಸುಧಾರಣೆಗಳು ಸಣ್ಣ ಉದ್ಯಮಗಳಲ್ಲಿದ್ದ ವಿಸ್ತರಣೆಯ ಭಯವನ್ನು ದೂರಮಾಡಿವೆ ಎಂದು ಹೇಳಿದರು. ಸರ್ಕಾರವು ಸಾಲದ ಸೌಲಭ್ಯ ಮತ್ತು ತಂತ್ರಜ್ಞಾನದ ಮೇಲ್ದರ್ಜೆಗೇರಿಸುವಿಕೆಯನ್ನು ಸುಗಮಗೊಳಿಸುವುದನ್ನು ಮುಂದುವರಿಸಿದ್ದರೂ ಸಹ, MSMEಗಳು ಜಾಗತಿಕ ಸ್ಪರ್ಧೆಗೆ ಇಳಿದಾಗ ಮಾತ್ರ ಇದರ ನಿಜವಾದ ಪ್ರಭಾವ ಬೀರಲು ಸಾಧ್ಯ ಎಂದು ಅವರು ಒತ್ತಿ ಹೇಳಿದರು. "ಈಗ ಎಂ.ಎಸ್.ಎಂ.ಇ.ಗಳು ತಮ್ಮ ಉತ್ಪಾದಕತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು, ತಮ್ಮ ಗುಣಮಟ್ಟದ ಮಾನದಂಡಗಳನ್ನು ಸುಧಾರಿಸಲು ಮತ್ತು ಡಿಜಿಟಲ್ ಪ್ರಕ್ರಿಯೆಗಳು ಹಾಗೂ ಬಲಿಷ್ಠ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕ ಹೊಂದಲು ಇದು ಸರಿಯಾದ ಸಮಯ," ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಈ ವರ್ಷದ ಬಜೆಟ್ ನಲ್ಲಿ ದಾಖಲೆ ಮಟ್ಟದ ಬಂಡವಾಳ ವೆಚ್ಚದ ಬೆಂಬಲದೊಂದಿಗೆ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಅನ್ನು ರಾಷ್ಟ್ರೀಯ ಬೆಳವಣಿಗೆಯ ಕಾರ್ಯತಂತ್ರದ ಪ್ರಮುಖ ಸ್ತಂಭಗಳೆಂದು ಪ್ರಧಾನಮಂತ್ರಿಯವರು ಹೇಳಿದರು. ಹೈಸ್ಪೀಡ್ ರೈಲು ವಿಸ್ತರಣೆ, ಮಲ್ಟಿ-ಮೋಡಲ್ ಸಂಪರ್ಕ ಮತ್ತು ಹಡಗು ದುರಸ್ತಿ ಸೌಲಭ್ಯಗಳನ್ನು ದಕ್ಷತೆಗಾಗಿ ಅಗತ್ಯವಾದ ಕ್ರಮಗಳೆಂದು ಅವರು ಹೈಲೈಟ್ ಮಾಡಿದರು. "ಕೈಗಾರಿಕೆಗಳು ಮತ್ತು ಹೂಡಿಕೆದಾರರು ತಮ್ಮ ಕಾರ್ಯತಂತ್ರಗಳನ್ನು ಅದಕ್ಕೆ ಅನುಗುಣವಾಗಿ ರೂಪಿಸಿಕೊಂಡಾಗ ಮಾತ್ರ ಈ ಮೂಲಸೌಕರ್ಯದ ನಿಜವಾದ ಪ್ರಯೋಜನ ಲಭ್ಯವಾಗುತ್ತದೆ," ಎಂದು ಅವರು ನೆರೆದಿದ್ದವರಿಗೆ ನೆನಪಿಸಿದರು.
ನಗರೀಕರಣದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಭವಿಷ್ಯದ ಬೆಳವಣಿಗೆಯು ಅದರ ನಗರಗಳ ಪರಿಣಾಮಕಾರಿ ಯೋಜನೆ ಮತ್ತು ನಿರ್ವಹಣೆಯೊಂದಿಗೆ ಬೆಸೆದುಕೊಂಡಿದೆ ಎಂದು ತಿಳಿಸಿದರು. ಎರಡನೇ ಮತ್ತು ಮೂರನೇ ಹಂತದ (Tier-II ಮತ್ತು Tier-III) ನಗರಗಳು ಹೇಗೆ ಹೊಸ ಬೆಳವಣಿಗೆಯ ಆಧಾರಸ್ತಂಭಗಳಾಗಿ ಕಾರ್ಯನಿರ್ವಹಿಸಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡುವಂತೆ ಅವರು ಕರೆ ನೀಡಿದರು. ಈ ನಿಟ್ಟಿನಲ್ಲಿ ಬರುವ ಸಲಹೆಗಳು ಪ್ರಮುಖವಾಗಲಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಸುಸ್ಥಿರತೆಯ ಕಡೆಗೆ ಜಾಗತಿಕ ಬದಲಾವಣೆಯ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಮಾರುಕಟ್ಟೆಗಳು ಈಗ ವೆಚ್ಚಕ್ಕಿಂತ ಹೆಚ್ಚಾಗಿ ಪರಿಸರದ ಮೇಲಾಗುವ ಪರಿಣಾಮದ ಕಡೆಗೆ ಗಮನ ಹರಿಸುತ್ತಿವೆ ಎಂದು ಹೇಳಿದರು. 'ಕಾರ್ಬನ್ ಕ್ಯಾಪ್ಚರ್, ಯುಟಿಲೈಸೇಶನ್ ಅಂಡ್ ಸ್ಟೋರೇಜ್ ಮಿಷನ್' ಅನ್ನು ಒಂದು ಮಹತ್ವದ ಹೆಜ್ಜೆಯೆಂದು ಅವರು ಉಲ್ಲೇಖಿಸಿದರು ಮತ್ತು ಉದ್ಯಮಗಳು ತಮ್ಮ ಪ್ರಮುಖ ವ್ಯವಹಾರ ಕಾರ್ಯತಂತ್ರಗಳಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದರು. "ಸಕಾಲದಲ್ಲಿ ಶುದ್ಧ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳು ಮುಂಬರುವ ವರ್ಷಗಳಲ್ಲಿ ಹೊಸ ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ಪಡೆಯುತ್ತವೆ" ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು.
'ವಿಕಸಿತ ಭಾರತ'ದ ಗುರಿಯನ್ನು ತಲುಪಲು ಪ್ರಧಾನಮಂತ್ರಿಯವರು "ಸಾಮೂಹಿಕ ಮಾಲೀಕತ್ವ"ಕ್ಕೆ ಕರೆ ನೀಡಿದರು. ಕೇವಲ ಚರ್ಚೆಗಳಿಗೆ ಸೀಮಿತವಾಗದೆ, ಸರ್ಕಾರದ ಚೌಕಟ್ಟಿನೊಂದಿಗೆ ಪಾಲುದಾರಿಕೆಯಲ್ಲಿ ವೇಗವನ್ನು ಪಡೆಯುವಂತೆ ಅವರು ಭಾಗವಹಿಸಿದವರಿಗೆ ಒತ್ತಾಯಿಸಿದರು. "ನಿಮ್ಮ ಪ್ರತಿಯೊಂದು ಸಲಹೆ ಮತ್ತು ಪ್ರತಿಯೊಂದು ಅನುಭವವು ತಳಮಟ್ಟದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ," ಎಂದು ಪ್ರಧಾನಮಂತ್ರಿಯವರು ಮಾತು ಮುಗಿಸಿದರು.
ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
हमारी दिशा स्पष्ट है... हमारा संकल्प स्पष्ट है...
— PMO India (@PMOIndia) March 3, 2026
Build more, produce more, connect more...Export more: PM @narendramodi
आज दुनिया विश्वसनीय और resilient manufacturing partners की तलाश में है।
— PMO India (@PMOIndia) March 3, 2026
भारत के पास यह अवसर है कि वह इस भूमिका को मजबूती से निभाए: PM @narendramodi
भारत ने बहुत सारे देशों के साथ Free Trade Agreement किए हैं।
— PMO India (@PMOIndia) March 3, 2026
हमारे लिए अवसरों का बहुत बड़ा द्वार खुला है।
ऐसे में हमारी ज़िम्मेदारी है कि हम quality पर कभी भी समझौता न करें: PM @narendramodi
इस दिशा में Carbon Capture, Utilisation and Storage Mission एक महत्वपूर्ण पहल है।
— PMO India (@PMOIndia) March 3, 2026
अब sustainability को आपको core business strategy का हिस्सा बनाना ही होगा।
जो उद्योग समय रहते clean technology में निवेश करेंगे, वे आने वाले वर्षों में नए बाजारों तक बेहतर पहुंच बना पाएंगे: PM
आज दुनिया की अर्थव्यवस्था में एक बड़ा परिवर्तन चल रहा है।
— PMO India (@PMOIndia) March 3, 2026
बाजार अब केवल लागत नहीं देखते, वे sustainability भी देखते हैं: PM @narendramodi


