ಈ ವರ್ಷದ ಕೇಂದ್ರ ಬಜೆಟ್ ಕೃಷಿ ಮತ್ತು ಗ್ರಾಮೀಣ ಪರಿವರ್ತನೆಗೆ ಬಲವಾದ ಉತ್ತೇಜನ ನೀಡಿದೆ: ಪ್ರಧಾನಮಂತ್ರಿ
ಸರ್ಕಾರವು ನಿರಂತರವಾಗಿ ಕೃಷಿ ವಲಯವನ್ನು ಬಲಪಡಿಸಿದೆ; ಪ್ರಮುಖ ಪ್ರಯತ್ನಗಳು ರೈತರ ಅಪಾಯಗಳನ್ನು ಕಡಿಮೆ ಮಾಡಿವೆ ಮತ್ತು ಅವರಿಗೆ ಮೂಲಭೂತ ಆರ್ಥಿಕ ಭದ್ರತೆಯನ್ನು ಒದಗಿಸಿವೆ: ಪ್ರಧಾನಮಂತ್ರಿ
ನಾವು ಒಟ್ಟಾಗಿ ಹೆಚ್ಚಿನ ಮೌಲ್ಯದ ಕೃಷಿಯನ್ನು ವಿಸ್ತರಿಸಿದರೆ, ಅದು ಕೃಷಿಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ವಲಯವನ್ನಾಗಿ ಪರಿವರ್ತಿಸುತ್ತದೆ: ಪ್ರಧಾನಮಂತ್ರಿ
ರಫ್ತು ಆಧಾರಿತ ಉತ್ಪಾದನೆ ಹೆಚ್ಚಾದಂತೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ: ಪ್ರಧಾನಮಂತ್ರಿ
ಮೀನುಗಾರಿಕೆಯು ರಫ್ತು ಬೆಳವಣಿಗೆಗೆ ಪ್ರಮುಖ ವೇದಿಕೆಯಾಗಬಹುದು, ಇದು ಗ್ರಾಮೀಣ ಸಮೃದ್ಧಿಯ ಹೆಚ್ಚಿನ ಮೌಲ್ಯದ ಮತ್ತು ಹೆಚ್ಚಿನ ಪರಿಣಾಮದ ವಲಯವಾಗಬಹುದು: ಪ್ರಧಾನಮಂತ್ರಿ
ಸರ್ಕಾರವು 'ಅಗ್ರಿಸ್ಟಾಕ್' ಮೂಲಕ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ: ಪ್ರಧಾನಮಂತ್ರಿ
ಸರ್ಕಾರವು 'ಅಗ್ರಿಸ್ಟಾಕ್' ಮೂಲಕ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು "ಕೃಷಿ ಮತ್ತು ಗ್ರಾಮೀಣ ಪರಿವರ್ತನೆ" ಕುರಿತಾದ ಬಜೆಟ್ ನಂತರದ ಮೂರನೇ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು. ತಂತ್ರಜ್ಞಾನ ಮತ್ತು ಆರ್ಥಿಕ ಬೆಳವಣಿಗೆಯ ಕುರಿತಾದ ಹಿಂದಿನ ಅಧಿವೇಶನಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಬಜೆಟ್ ರೂಪಿಸುವ ಸಮಯದಲ್ಲಿ ಪಾಲುದಾರರು ಮೌಲ್ಯಯುತವಾದ ಸಹಕಾರವನ್ನು ನೀಡಿದ್ದಾರೆ ಎಂದು ಹೇಳಿದರು. "ಈಗ, ಬಜೆಟ್ ನಂತರ, ದೇಶವು ತನ್ನ ಪೂರ್ಣ ಸಾಮರ್ಥ್ಯದ ಪ್ರಯೋಜನಗಳನ್ನು ಪಡೆಯುವುದು ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳು ಮತ್ತು ಈ ವೆಬಿನಾರ್ ಅತ್ಯಂತ ಮಹತ್ವದ್ದಾಗಿದೆ" ಎಂದು ಶ್ರೀ ಮೋದಿ ಒತ್ತಿಹೇಳಿದರು.

ಕೃಷಿಯು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿದೆ ಮತ್ತು ರಾಷ್ಟ್ರದ ದೀರ್ಘಕಾಲೀನ ಅಭಿವೃದ್ಧಿಯ ಪಯಣದಲ್ಲಿ ಒಂದು ಆಯಕಟ್ಟಿನ ಸ್ತಂಭವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. 'ಪಿಎಂ ಕಿಸಾನ್ ಸಮ್ಮಾನ್ ನಿಧಿ' ಮತ್ತು ರೈತರಿಗೆ 1.5 ಪಟ್ಟು ಲಾಭ ನೀಡುವ 'ಕನಿಷ್ಠ ಬೆಂಬಲ ಬೆಲೆ (ಎಂ ಎಸ್‌ ಪಿ)' ಸುಧಾರಣೆಗಳಂತಹ ಹಲವಾರು ಕಾರ್ಯಕ್ರಮಗಳ ಬಗ್ಗೆ ಶ್ರೀ ಮೋದಿ ಒತ್ತಿ ಹೇಳಿದರು. "ನಮ್ಮ ಸರ್ಕಾರವು ನಿರಂತರವಾಗಿ ಕೃಷಿ ವಲಯವನ್ನು ಬಲಪಡಿಸಿದೆ" ಎಂದು ಅವರು ಹೇಳಿದರು.

ಅಸ್ತಿತ್ವದಲ್ಲಿರುವ ಯೋಜನೆಗಳ ಯಶಸ್ಸಿನ ಕುರಿತು ದತ್ತಾಂಶವನ್ನು ನೀಡಿದ ಪ್ರಧಾನ ಮಂತ್ರಿಯವರು, 10 ಕೋಟಿ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೂಲಕ 4 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿದ್ದಾರೆ ಮತ್ತು 'ಪಿಎಂ ಫಸಲ್ ಬಿಮಾ ಯೋಜನೆ' ಅಡಿಯಲ್ಲಿ ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ವಿಮಾ ಕ್ಲೈಮುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು. ಸಾಂಸ್ಥಿಕ ಸಾಲದ ವ್ಯಾಪ್ತಿಯು ಶೇ. 75 ಕ್ಕಿಂತ ಹೆಚ್ಚಾಗಿದೆ ಎಂದು ಶ್ರೀ ಮೋದಿ ಹೇಳಿದರು. "ಇಂತಹ ಹಲವಾರು ಪ್ರಯತ್ನಗಳು ರೈತರ ಅಪಾಯಗಳನ್ನು ಕಡಿಮೆ ಮಾಡಿವೆ ಮತ್ತು ಅವರಿಗೆ ಮೂಲಭೂತ ಆರ್ಥಿಕ ಭದ್ರತೆಯನ್ನು ಒದಗಿಸಿವೆ" ಎಂದು ಅವರು ಹೇಳಿದರು.

 

ಆಹಾರ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ದಾಖಲೆ ಉತ್ಪಾದನೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, 21ನೇ ಶತಮಾನದ ಎರಡನೇ ಭಾಗವು ಪ್ರಾರಂಭವಾಗುತ್ತಿದ್ದಂತೆ ಈ ವಲಯಕ್ಕೆ ಹೊಸ ಶಕ್ತಿಯನ್ನು ತುಂಬಲು ಅವರು ಕರೆ ನೀಡಿದರು. ಈ ವರ್ಷದ ಕೇಂದ್ರ ಬಜೆಟ್‌ ನಲ್ಲಿ ಈ ನಿಟ್ಟಿನಲ್ಲಿ ಹೊಸ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೇಳಿದ ಶ್ರೀ ಮೋದಿ, ಈ ವೆಬಿನಾರ್‌ ನ ಚರ್ಚೆಗಳು ಬಜೆಟ್ ನಿಬಂಧನೆಗಳ ಅನುಷ್ಠಾನವನ್ನು ವೇಗಗೊಳಿಸುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. "ಈ ವೆಬಿನಾರ್‌ ನಲ್ಲಿ ನಿಮ್ಮ ನಡುವಿನ ಚರ್ಚೆ ಮತ್ತು ಹೊರಹೊಮ್ಮುವ ಸಲಹೆಗಳು ಬಜೆಟ್ ನಿಬಂಧನೆಗಳನ್ನು ಸಾಧ್ಯವಾದಷ್ಟು ಬೇಗ ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತವೆ ಎಂದು ನನಗೆ ನಂಬಿಕೆಯಿದೆ" ಎಂದು ಶ್ರೀ ಮೋದಿ ಹೇಳಿದರು.

ಜಾಗತಿಕ ಬೇಡಿಕೆಯಲ್ಲಿನ ಬದಲಾವಣೆ ಮತ್ತು ಭಾರತೀಯ ಕೃಷಿಯನ್ನು ರಫ್ತು ಆಧಾರಿತವನ್ನಾಗಿ ಮಾಡುವ ಅಗತ್ಯವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಉತ್ಪಾದಕತೆ ಮತ್ತು ರಫ್ತು ಬಲವನ್ನು ಹೆಚ್ಚಿಸಲು ಭಾರತದ ವೈವಿಧ್ಯಮಯ ಹವಾಮಾನವನ್ನು ಪೂರ್ಣವಾಗಿ ಬಳಸಿಕೊಳ್ಳುವಂತೆ ಅವರು ಒತ್ತಾಯಿಸಿದರು. "ಈ ವೆಬಿನಾರ್‌ ನಲ್ಲಿ, ನಮ್ಮ ಕೃಷಿಯನ್ನು ರಫ್ತು ಆಧಾರಿತವನ್ನಾಗಿ ಮಾಡುವ ಬಗ್ಗೆ ಗರಿಷ್ಠ ಚರ್ಚೆ ನಡೆಯುವುದು ಅತ್ಯಗತ್ಯ" ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಹೆಚ್ಚಿನ ಮೌಲ್ಯದ ಕೃಷಿಯ ಮೇಲೆ ಗಮನ ಹರಿಸಿದ ಪ್ರಧಾನಮಂತ್ರಿಯವರು, ಕೋಕೋ, ಗೋಡಂಬಿ ಮತ್ತು ಶ್ರೀಗಂಧದಂತಹ ಬೆಳೆಗಳ ಪ್ರಾದೇಶಿಕ ಉತ್ತೇಜನಕ್ಕಾಗಿ ಬಜೆಟ್ ಪ್ರಸ್ತಾಪಗಳನ್ನು ವಿವರಿಸಿದರು. ಈಶಾನ್ಯದಲ್ಲಿ ಅಗರವುಡ್ ಮತ್ತು ಹಿಮಾಲಯದ ರಾಜ್ಯಗಳಲ್ಲಿ ಸಮಶೀತೋಷ್ಣ ಅಡಿಕೆ ಬೆಳೆಗಳಿಗೆ ಪ್ರೋತ್ಸಾಹ ಒದಗಿಸುವ ಬಜೆಟ್ ಪ್ರಸ್ತಾಪವನ್ನು ಶ್ರೀ ಮೋದಿ ಒತ್ತಿ ಹೇಳಿದರು. ರಫ್ತು ಆಧಾರಿತ ಉತ್ಪಾದನೆಯು ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ಗ್ರಾಮೀಣ ಉದ್ಯೋಗಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. "ನಾವು ಒಟ್ಟಾಗಿ ಹೆಚ್ಚಿನ ಮೌಲ್ಯದ ಕೃಷಿಯನ್ನು ವಿಸ್ತರಿಸಿದರೆ, ಅದು ಕೃಷಿಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ವಲಯವನ್ನಾಗಿ ಪರಿವರ್ತಿಸುತ್ತದೆ" ಎಂದು ಅವರು ಹೇಳಿದರು.

 

ಜಾಗತಿಕ ಬ್ರ್ಯಾಂಡಿಂಗ್ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ತಜ್ಞರು, ಉದ್ಯಮ ಮತ್ತು ರೈತರನ್ನು ಒಳಗೊಂಡ ಏಕೀಕೃತ ವಿಧಾನಕ್ಕೆ ಪ್ರಧಾನಮಂತ್ರಿ ಕರೆ ನೀಡಿದರು. ಸ್ಥಳೀಯ ರೈತರನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ಸ್ಪಷ್ಟ ಗುರಿಗಳನ್ನು ನಿಗದಿಪಡಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು.

ಮೀನುಗಾರಿಕೆ ವಲಯದ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಯವರು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ ಎಂದು ತಿಳಿಸಿದರು. ಪ್ರಸ್ತುತ ನಮ್ಮ ವಿವಿಧ ಜಲಾಶಯಗಳು ಮತ್ತು ಕೆರೆಗಳಲ್ಲಿ ಸುಮಾರು 4.5 ಲಕ್ಷ ಟನ್ ಮೀನು ಉತ್ಪಾದನೆಯಾಗುತ್ತಿದ್ದು, ಇನ್ನೂ 20 ಲಕ್ಷ ಟನ್ ಉತ್ಪಾದನೆಯ ಸಾಮರ್ಥ್ಯವಿದೆ ಎಂದು ಶ್ರೀ ಮೋದಿ ತಿಳಿಸಿದರು. "ಮೀನುಗಾರಿಕೆಯು ರಫ್ತು ಬೆಳವಣಿಗೆಗೆ ಪ್ರಮುಖ ವೇದಿಕೆಯಾಗಬಹುದು" ಎಂದು ಅವರು ಹೇಳಿದರು.

ನೀಲಿ ಆರ್ಥಿಕತೆಯ ಸಾಮರ್ಥ್ಯವನ್ನು ಸಾಕಾರಗೊಳಿಸಲು ಮೊಟ್ಟೆ ಕೇಂದ್ರಗಳು, ಆಹಾರ ಮತ್ತು ಲಾಜಿಸ್ಟಿಕ್ಸ್‌ ನಲ್ಲಿ ಹೊಸ ವ್ಯಾಪಾರ ಮಾದರಿಗಳ ಅಗತ್ಯವನ್ನು ಪ್ರಧಾನಮಂತ್ರಿನ ಒತ್ತಿಹೇಳಿದರು. ಮೀನುಗಾರಿಕೆ ಇಲಾಖೆ ಮತ್ತು ಸ್ಥಳೀಯ ಸಮುದಾಯಗಳ ನಡುವೆ ಬಲವಾದ ಸಮನ್ವಯಕ್ಕೆ ಅವರು ಕರೆ ನೀಡಿದರು. "ಇದು ಗ್ರಾಮೀಣ ಸಮೃದ್ಧಿಗೆ ಹೆಚ್ಚಿನ ಮೌಲ್ಯದ, ಹೆಚ್ಚಿನ ಪರಿಣಾಮದ ವಲಯವಾಗಬಹುದು" ಎಂದು ಅವರು ತಿಳಿಸಿದರು.

ಭಾರತವು ಇಂದು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿದೆ ಮತ್ತು ಮೊಟ್ಟೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಇದನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು ತಳಿ ಗುಣಮಟ್ಟ, ರೋಗ ತಡೆಗಟ್ಟುವಿಕೆ ಮತ್ತು ವೈಜ್ಞಾನಿಕ ನಿರ್ವಹಣೆಯ ಮೇಲೆ ಗಮನ ಹರಿಸಬೇಕು ಎಂದು ಅವರು ಹೇಳಿದರು. ಜಾನುವಾರುಗಳ ಆರೋಗ್ಯವು ನಿರ್ಣಾಯಕ ವಿಷಯವಾಗಿದೆ ಎಂದು ಒತ್ತಿಹೇಳಿದ ಶ್ರೀ ಮೋದಿ, "ನಾನು 'ಒಂದು ಭೂಮಿ, ಒಂದು ಆರೋಗ್ಯ' ಎಂದು ಹೇಳಿದಾಗ, ಅದರಲ್ಲಿ ಜಾನುವಾರುಗಳ ಆರೋಗ್ಯವೂ ಸೇರಿದೆ" ಎಂದರು.

ಲಸಿಕೆ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆಯನ್ನು ಎತ್ತಿ ತೋರಿಸಿದ ಪ್ರಧಾನ ಮಂತ್ರಿಯವರು, ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ತಂತ್ರಜ್ಞಾನದ ವಿಸ್ತರಣೆ ಮತ್ತು ಪಶುಸಂಗೋಪನೆ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ ಗಳ ಲಭ್ಯತೆಯ ಬಗ್ಗೆ ಗಮನಸೆಳೆದರು. ಪ್ರಾಣಿಗಳನ್ನು ಕಾಲು ಮತ್ತು ಬಾಯಿ ರೋಗದಿಂದ ರಕ್ಷಿಸಲು ಈಗಾಗಲೇ 125 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. "ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ಸಹ ಪ್ರಾರಂಭಿಸಲಾಗಿದೆ" ಎಂದು ಅವರು ಹೇಳಿದರು.

 

ಅಪಾಯಗಳನ್ನು ತಗ್ಗಿಸಲು, ಏಕ-ಬೆಳೆ ಅವಲಂಬನೆಯ ಬದಲಿಗೆ ಬೆಳೆ ವೈವಿಧ್ಯೀಕರಣವನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಖಾದ್ಯ ತೈಲಗಳು, ದ್ವಿದಳ ಧಾನ್ಯಗಳು ಮತ್ತು ಸಹಜಕೃಷಿಯ ಮಿಷನ್‌ ಗಳನ್ನು ಈ ವಲಯದ ಬಲವನ್ನು ಹೆಚ್ಚಿಸುವ ಸಾಧನಗಳಾಗಿ ಉಲ್ಲೇಖಿಸಿದ ಅವರು, "ನಾವು ಬೆಳೆ ವೈವಿಧ್ಯೀಕರಣದ ಮೇಲೆ ಗಮನ ಹರಿಸುತ್ತಿದ್ದೇವೆ" ಎಂದು ಒತ್ತಿಹೇಳಿದರು.

ಕೃಷಿಯು ರಾಜ್ಯಗಳ ವಿಷಯವಾಗಿರುವುದರಿಂದ, ರಾಜ್ಯಗಳು ತಮ್ಮ ಬಜೆಟ್ ಜವಾಬ್ದಾರಿಗಳನ್ನು ಈಡೇರಿಸಲು ಪ್ರೇರಿತವಾಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಗರಿಷ್ಠ ಪ್ರಭಾವಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಬಜೆಟ್ ನಿಬಂಧನೆಗಳನ್ನು ಬಲಪಡಿಸಲು ಅವರು ಕರೆ ನೀಡಿದರು.

ಕೃಷಿಯಲ್ಲಿನ "ತಂತ್ರಜ್ಞಾನ ಸಂಸ್ಕೃತಿ"ಯ ಬಗ್ಗೆ ವಿಸ್ತಾರವಾಗಿ ಮಾತನಾಡಿದ ಪ್ರಧಾನಮಂತ್ರಿಯವರು, ಇ-ನ್ಯಾಮ್ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಉಲ್ಲೇಖಿಸಿದರು. ಕಿಸಾನ್ ಐಡಿಗಳ ರಚನೆ ಮತ್ತು ಡಿಜಿಟಲ್ ಭೂ ಸಮೀಕ್ಷೆಗಳು ಪರಿವರ್ತನಾ ಕ್ರಮಗಳಾಗಿವೆ ಎಂದು ಅವರು ಹೇಳಿದರು. "ಕೃಷಿಗೆ 'ತಂತ್ರಜ್ಞಾನ ಸಂಸ್ಕೃತಿ' ತರುವಲ್ಲಿ ಸರ್ಕಾರವು ಹೆಚ್ಚಿನ ಒತ್ತು ನೀಡುತ್ತಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಕೃತಕ ಬುದ್ಧಿಮತ್ತೆ-ಆಧಾರಿತ ವೇದಿಕೆಗಳು ಮತ್ತು ಡಿಜಿಟಲ್ ಸಮೀಕ್ಷೆಗಳ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ತಂತ್ರಜ್ಞಾನವು ಸಂಸ್ಥೆಗಳು ಮತ್ತು ಉದ್ಯಮಿಗಳಿಂದ ಸಂಯೋಜಿಸಲ್ಪಟ್ಟಾಗ ಮಾತ್ರ ಫಲಿತಾಂಶಗಳನ್ನು ನೀಡುತ್ತದೆ ಎಂದು ತಿಳಿಸಿದರು. ಸಾಂಪ್ರದಾಯಿಕ ವ್ಯವಸ್ಥೆಗಳೊಂದಿಗೆ ತಂತ್ರಜ್ಞಾನವನ್ನು ಹೇಗೆ ಪರಿಣಾಮಕಾರಿಯಾಗಿ ವಿಲೀನಗೊಳಿಸಬಹುದು ಎಂಬ ಬಗ್ಗೆ ಅವರು ಸಲಹೆಗಳನ್ನು ಕೇಳಿದರು.

ಪಿಎಂ ಆವಾಸ್ ಮತ್ತು ಪಿಎಂ ಗ್ರಾಮ ಸಡಕ್ ನಂತಹ ಯೋಜನೆಗಳ ಮೂಲಕ ಗ್ರಾಮೀಣ ಸಮೃದ್ಧಿಗೆ ಸರ್ಕಾರದ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಗ್ರಾಮೀಣ ಆರ್ಥಿಕತೆಯ ಮೇಲೆ ಸ್ವಸಹಾಯ ಸಂಘಗಳ ಪ್ರಭಾವವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. "ನಮ್ಮ ಸರ್ಕಾರವು ಗ್ರಾಮೀಣ ಸಮೃದ್ಧಿಯನ್ನು ನಿರ್ಮಿಸಲು ಬದ್ಧವಾಗಿದೆ" ಎಂದು ಶ್ರೀ ಮೋದಿ ಭರವಸೆ ನೀಡಿದರು.

'ಲಖ್ಪತಿ ದೀದಿ' ಅಭಿಯಾನದ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿಯವರು, 2029ರ ವೇಳೆಗೆ ಇನ್ನೂ 3 ಕೋಟಿ ಅಂತಹ ಯಶಸ್ವಿ ಮಹಿಳಾ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಈ ಗುರಿಯನ್ನು ಹೆಚ್ಚಿನ ವೇಗದಲ್ಲಿ ಸಾಧಿಸುವುದು ಹೇಗೆ ಎಂಬ ಬಗ್ಗೆ ಸಲಹೆಗಳನ್ನು ನೀಡುವಂತೆ ಕೋರಿದರು.

ಬೃಹತ್ ಶೇಖರಣಾ ಅಭಿಯಾನ ಮತ್ತು ಅಗ್ರಿ-ಫಿನ್ಟೆಕ್ ಮತ್ತು ಪೂರೈಕೆ ಸರಪಳಿಗಳಲ್ಲಿ ನಾವೀನ್ಯತೆಯ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಗ್ರಾಮೀಣ ಚಿತ್ರಣಕ್ಕೆ ಚೈತನ್ಯ ನೀಡಲು ಈ ನಿರ್ಣಾಯಕ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಅವರು ಉದ್ಯಮಿಗಳಿಗೆ ಕರೆ ನೀಡಿದರು. "ಇಂದಿನ ನಿಮ್ಮ ಚರ್ಚೆಗಳಿಂದ ಹೊರಹೊಮ್ಮುವ ಅಮೃತವು ಗ್ರಾಮೀಣ ಆರ್ಥಿಕತೆಗೆ ಹೊಸ ಶಕ್ತಿಯನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು ತಮ್ಮ ಮಾತು ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s power sector set for strong FY27 growth on rising demand, capacity additions: Report

Media Coverage

India’s power sector set for strong FY27 growth on rising demand, capacity additions: Report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಜುಲೈ 2026
July 20, 2026

Yuva to Global Stage: How PM Modi’s Policies Are Turning India’s Youth, Farms & Factories into Growth Engines