ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಸೂರತ್ ಮತ್ತು ದಂಡಿಗೆ 2019ರ ಜನವರಿ 30ರಂದು ಭೇಟಿ ನೀಡಲಿದ್ದಾರೆ.
ಈ ಭೇಟಿಯ ವೇಳೆ, ಪ್ರಧಾನಮಂತ್ರಿಯವರು, ಸೂರತ್ ವಿಮಾನ ನಿಲ್ದಾಣದ ವಿಸ್ತರಿತ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಟರ್ಮಿನಲ್ ಕಟ್ಟಡವನ್ನು 25,500 ಚದರ ಮೀಟರ್ ಪ್ರದೇಶದಲ್ಲಿ 354 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ಪರಿಸರ ಸ್ನೇಹಿಯಾದ ಸುಸ್ಥಿರ ಕಟ್ಟಡವಾಗಿದ್ದು, ಇಲ್ಲಿ ಸೌರ ವಿದ್ಯುತ್ ಮತ್ತು ಎಲ್.ಇ.ಡಿ. ದೀಪಗಳನ್ನು ಬಳಸಲಾಗುತ್ತದೆ. ಇದು ಪೂರ್ಣಗೊಂಡ ತರುವಾಯ ಇದು 1800ಕ್ಕಿಂತಲೂ ಹೆಚ್ಚಿನ ಪ್ರಯಾಣಿಕರ ಗರಿಷ್ಠ ನಿರ್ವಹಣೆ ಸಾಮರ್ಥ್ಯವನ್ನು ಹೊಂದಲಿದೆ. ಸೂರತ್ ವಿಮಾನ ನಿಲ್ದಾಣ ಗುಜರಾತ್ ನಲ್ಲಿ ಅಹಮದಾಬಾದ್ ಮತ್ತು ವಡೋದರಾ ನಂತರ ಮೂರನೇ ಅತಿ ಹೆಚ್ಚು ಪ್ರಯಾಣಿಕರು ಮತ್ತು ವಿಮಾನ ಹಾರಾಟ ನಡೆಸುವ ವಿಮಾನ ನಿಲ್ದಾಣವಾಗಿದೆ.
ಅಭಿವೃದ್ಧಿಗಾಗಿ ಮೂಲಸೌಕರ್ಯ ವಿಸ್ತರಣೆ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ. ವಿವಿಧ ವಲಯಗಳಲ್ಲಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಾಯುಯಾನ ವಲಯ ಅದರಲ್ಲಿ ಒಂದಾಗಿದೆ. ಗುಜರಾತ್ ನಲ್ಲಿ ನಾಗರಿಕ ವಿಮಾನ ಯಾನ ಮೂಲ ಸೌಕರ್ಯವನ್ನು ಬಲಪಡಿಸಿರುವುದಷ್ಟೇ ಅಲ್ಲ, ವಾಯು ಯಾನ ಸಂಪರ್ಕವನ್ನೂ ಹೆಚ್ಚಿಸಲಾಗಿದೆ. ಇದರಲ್ಲಿ ಉಡಾಣ್ ಮೂಲಕ ಕಾಂಡ್ಲಾದಿಂದ ಮುಂಬೈ ಮತ್ತು ಪೋರಬಂದರ್ ನಿಂದ ಅಹಮದಾಬಾದ್ ಮತ್ತು ಮುಂಬೈ ಸಂಪರ್ಕಿಸುವುದೂ ಸೇರಿದೆ. ಹಿರಾಸರ್, ರಾಜ್ ಕೋಟ್ ನಲ್ಲಿ ಹಸಿರು ವಲಯ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವುದು, ಅಹಮದಾಬಾದ್ ಮತ್ತು ವಡೋದರ ಇತ್ಯಾದಿಗಳಲ್ಲಿ ಹೊಸ ಎ.ಟಿ.ಸಿ. ಟವರ್/ತಾಂತ್ರಿಕ ವಿಭಾಗ ತೆರೆಯುವುದೂ ಇದರಲ್ಲಿ ಸೇರಿದೆ.
ಸೂರತ್ ನಲ್ಲಿ ಪ್ರಧಾನಮಂತ್ರಿಯವರು, ನ್ಯೂ ಇಂಡಿಯಾ ಯುವ ಸಮಾವೇಶದಲ್ಲಿ ಯುವಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು ಶ್ರೀಮತಿ. ರಸಿಲಾಬೆನ್ ಸೆವಂತಿಲಾಲ್ ಷಾ ವೀನಸ್ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದು, ಅಲ್ಲಿರುವ ಸೌಲಭ್ಯ ವೀಕ್ಷಿಸಲಿದ್ದಾರೆ.
ಪ್ರಧಾನಮಂತ್ರಿಯವರ ಮುಂದಿನ ತಾಣ ಗುಜರಾತ್ ನ ನವಸಾರಿ ಜಿಲ್ಲೆಯ ದಾಂಡಿಯಾಗಿದ್ದು, ಅಲ್ಲಿ ಅವರು, ಬಾಪು ಅವರ ಪುಣ್ಯತಿಥಿಯಂದು ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಸ್ಮಾರಕವು ಮಹಾತ್ಮಾ ಗಾಂಧಿ ಅವರ ಮತ್ತು ಐತಿಹಾಸಿಕ ದಂಡಿ ಸತ್ಯಾಗ್ರಹದಲ್ಲಿ ಗಾಂಧೀ ಅವರೊಂದಿಗೆ ಹೆಜ್ಜೆ ಹಾಕಿದ 80 ಸತ್ಯಾಗ್ರಹಿಗಳ ಪ್ರತಿಮೆಗಳನ್ನು ಒಳಗೊಂಡಿದೆ. ಈ ಸ್ಮಾರಕವು ಐತಿಹಾಸಿಕ 1930 ರ ದಂಡಿ ಸತ್ಯಾಗ್ರಹದ ವಿವಿಧ ಘಟನೆಗಳು ಮತ್ತು ಕಥಾನಕಗಳನ್ನು ವರ್ಣಿಸುವ 24-ನಿರೂಪಣಾ ಭಿತ್ತಿಚಿತ್ರಗಳನ್ನು ಒಳಗೊಂಡಿದೆ. ಪ್ರಧಾನಮಂತ್ರಿಯವರು ಸ್ಮಾರಕದಲ್ಲಿ ಸಂಚರಿಸಿ, ನಂತರ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
ಉಪ್ಪನ ಸತ್ಯಾಗ್ರಹದ ನಡಿಗೆ,1930ರ ದಂಡಿ ಸತ್ಯಾಗ್ರಹ ಎಂದೇ ಖ್ಯಾತವಾಗಿದ್ದು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ. ಈ ದಿನದಂದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಾಗರಿಕ ಅಸಹಕಾರ ಚಳವಳಿಯ ಭಾಗವಾಗಿ, ಮಹಾತ್ಮಾ ಗಾಂಧಿ ನೇತೃತ್ವದಲ್ಲಿ 80 ಸತ್ಯಾಗ್ರಹಗಳು ಅಹಮದಾಬಾದ್ ನ ಸಬರಮತಿ ಆಶ್ರಮದಿಂದ 241 ಮೈಲುಗಳಷ್ಟು ದೂರದ ಕರಾವಳಿ ಗ್ರಾಮ ದಂಡಿಗೆ ಪಾದಯಾತ್ರೆ ಕೈಗೊಂಡು ಸಮುದ್ರದ ನೀರಿನಿಂದ ಉಪ್ಪು ತಯಾರಿಸಿ, ಬ್ರಿಟಿಷ್ ಸರ್ಕಾರ ಹೇರಿದ್ದ ಉಪ್ಪು ಕಾನೂನನ್ನು ಮುರಿದಿದ್ದರು.
ಇದು ಗುಜರಾತ್ ಗೆ ಪ್ರಧಾನಮಂತ್ರಿಯವರು ಈ ತಿಂಗಳಲ್ಲಿ ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಈ ಮುನ್ನ 2019ರ ಜನವರಿ 19ರಂದು ಪ್ರಧಾನಮಂತ್ರಿಯವರು ಹಜೀರಾದಲ್ಲಿ ಕವಚ ವ್ಯವಸ್ಥೆಯ ಸಮುಚ್ಛಯವನ್ನು ದೇಶಕ್ಕೆ ಸಮರ್ಪಿಸಲು ಸೂರತ್ ಗೆ ಭೇಟಿ ನೀಡಿದ್ದರು. ಗಾಂಧಿನಗರದಲ್ಲಿ ಅವರು 2019ರ ಜನವರಿ 17 ಮತ್ತು 18ರಂದು ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.


