ಅನಿಲ ಆಧಾರಿತ ಆರ್ಥಿಕತೆ ಹೊಂದುವುದು ಭಾರತಕ್ಕೆ ಅತ್ಯಗತ್ಯ
ಪಶ್ಚಿಮ ಬಂಗಾಳವನ್ನು ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಅಹರ್ನಿಶಿ ಪ್ರಯತ್ನ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಹಲ್ದಿಯಾಗೆ ಭೇಟಿ ನೀಡಿದ್ದರು ಮತ್ತು ಪ್ರಧಾನಮಂತ್ರಿ ಊರ್ಜ ಗಂಗಾ ಯೋಜನೆಯ ಭಾಗವಾಗಿ ಅಭಿವೃದ್ಧಿಪಡಿಸಿರುವ 348 ಕಿಲೋ ಮೀಟರ್ ಉದ್ದದ ದೋಭಿ-ದುರ್ಗಾಪುರ್ ನೈಸರ್ಗಿಕ ಅನಿಲ ಕೊಳವೆ ಮಾರ್ಗದ ಎಲ್ ಪಿಜಿ ಆಮದು ಟರ್ಮಿನಲ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅಲ್ಲದೆ ಅವರು ಹಲ್ದಿಯಾ ಸಂಸ್ಕರಣಾ ಘಟಕದಲ್ಲಿ 2ನೇ ಕ್ಯಾಟಲಿಟಿಕ್ – ಐಸೋಡೊವಾಕ್ಸಿಂಗ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಹಲ್ದಿಯಾದ ರಾಷ್ಟ್ರೀಯ ಹೆದ್ದಾರಿ 41ರ ರಾಣಿಚಾಕ್ ನಲ್ಲಿನ ನಾಲ್ಕು ಪಥದ ರೈಲು ಮೇಲ್ಸೇತುವೆ ಮತ್ತು ಪ್ಲೈಓವರ್ ಅನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರು, ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತಿತರರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು ಪಶ್ಚಿಮ ಬಂಗಾಳಕ್ಕೆ ಮಹತ್ವದ ಪ್ರಮುಖ ದಿನವಾಗಿದೆ ಮತ್ತು ಇಡೀ ಈಶಾನ್ಯ ಭಾರತಕ್ಕೆ ಆತ್ಮ ನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ಸಂಪರ್ಕಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಮತ್ತು ಶುದ್ಧ ಇಂಧನ ಲಭ್ಯವಾಗಲಿದೆ ಎಂದರು. ಈ ನಾಲ್ಕು ಯೋಜನೆಗಳಿಂದ ಈ ಭಾಗದ ಜನರ ಜೀವನ ಸುಗಮವಾಗುವುದಲ್ಲದೆ ವ್ಯಾಪಾರ ವಹಿವಾಟಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಈ ಯೋಜನೆಗಳಿಂದ ಹಲ್ದಿಯಾ ಪ್ರಮುಖ ಆಮದು-ರಫ್ತು ತಾಣವಾಗಿ ರೂಪುಗಳ್ಳಲು ಸಹಾಯಕವಾಗಲಿದೆ.

ಭಾರತ ಅನಿಲ ಆಧಾರಿತ ಆರ್ಥಿಕತೆ ಸಾಧಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಅದನ್ನು ಪೂರೈಸುವ ನಿಟ್ಟಿನಲ್ಲಿ ಒಂದು ರಾಷ್ಟ್ರ-ಒಂದು ಗ್ರಿಡ್ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಅದಕ್ಕಾಗಿ ನೈಸರ್ಗಿಕ ಅನಿಲ ದರವನ್ನು ತಗ್ಗಿಸುವುದಕ್ಕೆ ಮತ್ತು ಅನಿಲ ಕೊಳವೆ ಮಾರ್ಗದ ಜಾಲ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ನಮ್ಮ ಪ್ರಯತ್ನಗಳಿಂದಾಗಿ ಭಾರತ ಅತಿ ಹೆಚ್ಚು ಅನಿಲ ಬಳಕೆ ರಾಷ್ಟ್ರವಾಗಿ ರೂಪುಗೊಂಡ ವಾತಾವರಣ ಸೃಷ್ಟಿಯಾಗಿದೆ. ಕಡಿಮೆ ದರದ ಮತ್ತು ಶುದ್ಧ ಇಂಧನ ಉತ್ತೇಜಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಹೈಡ್ರೋಜನ್ ಮಿಷನ್ ಘೋಷಿಸಲಾಗಿದೆ.

ಈಶಾನ್ಯ ಭಾರತದಲ್ಲಿ ವಾಣಿಜ್ಯ ಮತ್ತು ಗುಣಮಟ್ಟದ ಜೀವನವನ್ನು ಸುಧಾರಿಸಲು ಸಾಧ್ಯವಾಗುವಂತೆ ರೈಲು, ರಸ್ತೆ, ವಿಮಾನ ನಿಲ್ದಾಣ, ಬಂದರು, ಜಲಮಾರ್ಗಗಳ ಸುಧಾರಣೆಗಳಿಗೆ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಅನಿಲದ ಕೊರತೆಯಿಂದಾಗಿ ಈ ಭಾಗದಲ್ಲಿ ಉದ್ಯಮಗಳನ್ನು ಮುಚ್ಚುವ ವಾತಾವರಣವಿತ್ತು. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಪೂರ್ವ ಭಾರತದ ಜೊತೆಗೆ ಪಶ್ಚಿಮ ಮತ್ತು ಪಶ್ಚಿಮದ ಬಂದರುಗಳನ್ನು ಬೆಸೆಯಲು ನಿರ್ಧರಿಸಲಾಯಿತು. ಪ್ರಧಾನಮಂತ್ರಿ ಊರ್ಜ ಗಂಗಾ ಕೊಳವೆ ಮಾರ್ಗದ ಅತಿ ದೊಡ್ಡ ಭಾಗವನ್ನು ಇಂದು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ, ಇದರಡಿ 350 ಕಿಲೋಮೀಟರ್ ಉದ್ದದ ದೋಭಿ-ದುರ್ಗಾಪುರ್ ಅನಿಲಕೊಳವೆ ಮಾರ್ಗದಿಂದ ಪಶ್ಚಿಮ ಬಂಗಾಳಕ್ಕೆ ಮಾತ್ರವಲ್ಲ ಬಿಹಾರ ಮತ್ತು ಜಾರ್ಖಂಡ್ ನ 10 ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ. ಇದರ ನಿರ್ಮಾಣದಲ್ಲಿ ಸ್ಥಳೀಯ ಜನರಿಗೆ 11 ಲಕ್ಷ ಮಾನವ ದಿನ ಉದ್ಯೋಗ ಲಭ್ಯವಾಗಿದೆ. ಅಲ್ಲದೆ, ಇದು ಅಡುಗೆ ಮನೆಗಳಿಗೆ ಶುದ್ಧ ಕೊಳವೆ ಮೂಲಕ ಅಡುಗೆ ಅನಿಲ ಮತ್ತು ಸಿಎನ್ ಜಿ ವಾಹನಗಳಿಗೆ ಶುದ್ಧ ಇಂಧನವನ್ನು ದೊರಕಲಿದೆ. ದುರ್ಗಾಪುರ್-ಹಲ್ದಿಯಾ ಮಾರ್ಗದ ಜಗದೀಶ್ ಪುರ್-ಹಲ್ದಿಯಾ ಮತ್ತು ಬೊಕರೋ-ಧಮ್ರಾ ಕೊಳವೆ ಯೋಜನೆಗಳನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಪ್ರಧಾನಮಂತ್ರಿ ಜಿಐಎಎಲ್ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದರು.

ಉಜ್ವಲಾ ಯೋಜನೆಯ ವ್ಯಾಪ್ತಿ ಭಾರಿ ಪ್ರಮಾಣದಲ್ಲಿ ಹೆಚ್ಚಿರುವ ಪರಿಣಾಮ, ಆ ಭಾಗದಲ್ಲಿ ಎಲ್ ಪಿಜಿಗೆ ಭಾರಿ ಬೇಡಿಕೆ ಇದೆ, ಹಾಗಾಗಿ ಎಲ್ ಪಿಜಿ ಮೂಲಸೌಕರ್ಯ ಸುಧಾರಣೆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ. ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಉಚಿತ ಎಲ್ ಪಿಜಿ ಸಂಪರ್ಕಗಳನ್ನು ಮಹಿಳೆಯರಿಗೆ ನೀಡಲಾಗಿದೆ ಮತ್ತು ಅವರಲ್ಲಿ 36ಲಕ್ಷ ಮಹಿಳೆಯರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು. ಕಳೆದ ಆರು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಎಲ್ ಪಿಜಿ ಸಂಪರ್ಕ ಶೇ.41ರಿಂದ ಶೇ.99ಕ್ಕೆ ಏರಿಕೆಯಾಗಿದೆ. ಈ ವರ್ಷದ ಬಜೆಟ್ ನಲ್ಲಿ ಉಜ್ವಲಾ ಯೋಜನೆಯಡಿ ಇನ್ನೂ 1 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ನೀಡುವ ಗುರಿ ಹೊಂದಲಾಗಿದೆ. ಹಲ್ದಿಯಾದಲ್ಲಿನ ಎಲ್ ಪಿಜಿ ಆಮದು ಟರ್ಮಿನಲ್ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಛತ್ತೀಸ್ ಗಢ, ಉತ್ತರ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಕೋಟ್ಯಂತರ ಕುಟುಂಬಗಳ ಇಂಧನ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ, ಇಲ್ಲಿಂದ ಎರಡು ಕೋಟಿ ಜನರಿಗೆ ಅನಿಲ ಪೂರೈಕೆಯಾಗಲಿದ್ದು, ಆ ಪೈಕಿ 1 ಕೋಟಿ ಫಲಾನುಭವಿಗಳು ಉಜ್ವಲಾ ಯೋಜನೆಯವರಾಗಿದ್ದಾರೆ.

ಶುದ್ಧ ಇಂಧನ ಪೂರೈಸುವ ನಮ್ಮ ಬದ್ಧತೆಯ ಭಾಗವಾಗಿ ಇಂದು ಬಿಎಸ್-6 ಇಂಧನ ಘಟಕದ ಸಾಮರ್ಥ್ಯ ವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. 2ನೇ ಕ್ಯಾಟಲಿಟಿಕ್ – ಐಸೋಡೊವಾಕ್ಸಿಂಗ್ ಘಟಕದಿಂದಾಗಿ ಲೂಬ್ ಆಧಾರಿತ ತೈಲಗಳಿಗೆ ಸಂಬಂಧಿಸಿದಂತೆ ನಮ್ಮ ಆಮದು ಅವಲಂಬನೆ ತಗ್ಗಿಸಲಿದೆ. “ನಾವು ರಫ್ತು ಸಾಮರ್ಥ್ಯ ಹೊಂದುವತ್ತ ಸಾಗುತ್ತಿದ್ದೇವೆ’’ಎಂದು ಪ್ರಧಾನಮಂತ್ರಿ ಹೇಳಿದರು.

ಪಶ್ಚಿಮ ಬಂಗಾಳವನ್ನು ಪ್ರಮುಖ ವಾಣಿಜ್ಯ ಮತ್ತುಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಹರ್ನಿಶಿ ದುಡಿಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅದಕ್ಕೆ ಬಂದರು ಆಧಾರಿತ ಅಭಿವೃದ್ಧಿ ಉತ್ತಮ ಮಾದರಿಯಾಗಿದೆ. ಕೊಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರು ಟ್ರಸ್ಟ್ ಅನ್ನು ಆಧುನೀಕರಣಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಪ್ರಧಾನಮಂತ್ರಿ ಅವರು ಹಲ್ದಿಯಾ ಡಾಕ್ ಸಂಕೀರ್ಣದ ಸಾಮರ್ಥ್ಯ ಬಲವರ್ಧನೆ ಮತ್ತು ನೆರೆಯ ದೇಶಗಳಿಗೆ ಸಂಪರ್ಕ ಅಭಿವೃದ್ಧಿಗೆ ಕರೆ ನೀಡಿದರು. ಹೊಸ ಮೇಲು ಸೇತುವೆ ಮತ್ತು ಒಳನಾಡು ಜಲಮಾರ್ಗಗಳ ಪ್ರಾಧಿಕಾರ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ಬಹು ಮಾದರಿ ಟರ್ಮಿನಲ್ ಗಳಿಂದ ಸಂಪರ್ಕ ಇನ್ನಷ್ಟು ಸುಧಾರಿಸಲಿದೆ. “ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಂದಾಗಿ ಹಲ್ದಿಯಾ ಆತ್ಮ ನಿರ್ಭರ್ ಭಾರತದ ಅತ್ಯಂತ ಪ್ರಮುಖ ತಾಣವಾಗಿ ರೂಪುಗೊಳ್ಳಲಿದೆ’’ಎಂದು ಹೇಳಿ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India launches ORV Sagar Manthan, boosting ocean research fleet

Media Coverage

India launches ORV Sagar Manthan, boosting ocean research fleet
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಸೆಪ್ಟೆಂಬರ್ 2026
September 10, 2026

Beyond Metros, Beyond Borders: How India Is Rewriting Its Growth Story Under PM Modi