ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಯಾಗ್ ರಾಜ್ ನಲ್ಲಿಂದು ಸ್ವಚ್ಛ ಕುಂಭ, ಸ್ವಚ್ಛ ಆಭಾರ್ ಉದ್ದೇಶಿಸಿ ಮಾತನಾಡಿದರು.
       ಅವರು ಪ್ರಯಾಗ್ ರಾಜ್ ನ ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ನಂತರ ಮತ್ತು ಸ್ವಚ್ಛ ಕುಂಭ ಮೇಳಕ್ಕೆ ತಮ್ಮ ಪ್ರಯತ್ನದ ಮೂಲಕ ಎಲ್ಲ ರೀತಿಯಲ್ಲೂ ಸಹಕರಿಸಿದ ಆಯ್ದ ಕೆಲವು ಸ್ವಚ್ಛತಾ ಕಾರ್ಯಕರ್ತರಿಗೆ ‘ಚರಣ ವಂದನಾ’ – ಪಾದ ತೊಳೆದು ನಮಿಸಿದ ನಂತರ ವೇದಿಕೆಗೆ ಆಗಮಿಸಿದರು.
       ಪ್ರಯಾಗ್ ರಾಜ್ ನಲ್ಲಿ ಕುಂಭಕ್ಕಾಗಿ ಭಕ್ತರಿಗೆ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಿದ ಎಲ್ಲರನ್ನು ಪ್ರಧಾನಮಂತ್ರಿ ಅವರು ‘ಕರ್ಮಯೋಗಿಗಳು’ ಎಂದು ಬಣ್ಣಿಸಿದರು. ಈ ನಿಟ್ಟಿನಲ್ಲಿ ದೋಣಿ ನಡೆಸುವವರು, ಎನ್ ಡಿ ಆರ್ ಎಫ್ ಸಿಬ್ಬಂದಿ ಮತ್ತು ಸ್ಥಳೀಯ ಜನರು ಹಾಗೂ ಎಲ್ಲ ಸ್ವಚ್ಛತಾ ಕಾರ್ಯಕರ್ತರ ಸೇವೆಯನ್ನು ಅವರು ಉಲ್ಲೇಖಿಸಿದರು. ಕಳೆದ ಕೆಲವು ವಾರಗಳಿಂದ ಸುಮಾರು 21 ಕೋಟಿ ಜನರು ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಉಲ್ಲೇಖಿಸಿದ ಅವರು, ಈ ವರ್ಷದ ಕುಂಭಮೇಳದ ಯಶಸ್ಸಿಗೆ ಇವರೆಲ್ಲಾ ಅತ್ಯಂತ ಕಾರಣೀಭೂತರು, ಯಶಸ್ಸಿನ ಎಲ್ಲ ಪಾಲು ಅವರಿಗೆ ಸಲ್ಲಬೇಕೆಂದರು. ತಾವು ಕೆಲವು ಸ್ವಚ್ಛತಾ ಕಾರ್ಯಕರ್ತರಿಗೆ ಮಾಡಿದ ಚರಣ ವಂದನಾ – ಪಾದ ತೊಳೆದು ನಮಸ್ಕರಿಸಿದ್ದು, ಸದಾ ತನ್ನ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

 

       ಇಂದು ಸ್ವಚ್ಛ ಸೇವಾ ಸಮ್ಮಾನ ಕೋಶ ಪ್ರಕಟಿಸಲಾಗಿದೆ, ಇದು ಅಗತ್ಯವಿರುವ ಸಂದರ್ಭಗಳಲ್ಲಿ ಸ್ವಚ್ಛತಾ ಕಾರ್ಯಕರ್ತರು ಮತ್ತು ಅವರ ಕುಟುಂಬದವರಿಗೆ ನೆರವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
 
       ಸ್ವಚ್ಛ ಭಾರತ ಅಭಿಯಾನ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ಈ ವರ್ಷದ ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಸಂದರ್ಭದ ವೇಳೆಗೆ ದೇಶ ಬಯಲು ಬಹಿರ್ದೆಸೆ ಮುಕ್ತವಾಗುವ ನಿಟ್ಟಿನಲ್ಲಿ ಸಾಗಿದೆ ಎಂದು ಹೇಳಿದರು.
ಗಂಗಾ ನದಿಯ ಸ್ವಚ್ಛತೆ ವಿಷಯ ಈ ವರ್ಷದ ಚರ್ಚೆಯ ವಿಷಯವಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ನಾನು ಸ್ವತಃ ಸ್ವಚ್ಛತೆಯನ್ನು ಸಾಕ್ಷೀಕರಿಸಿದ್ದೇನೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರ ಮತ್ತು ನಮಾಮಿ ಗಂಗಾ ಯೋಜನೆಯ ಪ್ರಯತ್ನಗಳಿಂದಾಗಿ ಇಂತಹ ಫಲಿತಾಂಶ ಸಾಧ್ಯವಾಗಿದೆ ಎಂದರು. ನದಿಗೆ ಹರಿದು ಬರುತ್ತಿದ್ದ ಕೊಳಚೆ ನೀರನ್ನು ತಡೆದು ನಿಲ್ಲಿಸಲಾಗಿದೆ ಮತ್ತು ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು. ಕೆಲವು ದಿನಗಳ ಹಿಂದೆ ಸ್ವೀಕರಿಸಿದ ಸಿಯೋಲ್ ಶಾಂತಿ ಪುರಸ್ಕಾರದ 1.30 ಕೋಟಿ ಮೊತ್ತವನ್ನು ನಮಾಮಿ ಗಂಗಾ ಯೋಜನೆಗೆ ದಾನ ನೀಡಿರುವುದಾಗಿ ಪ್ರಧಾನಮಂತ್ರಿ ಹೇಳಿದರು. ಪ್ರಧಾನಿಯಾಗಿ ತಾವು ಸ್ವೀಕರಿಸಿದ ಎಲ್ಲ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಹರಾಜು ಹಾಕಲಾಗುತ್ತಿದ್ದು, ಅದರಿಂದ ಬರುವ ಎಲ್ಲ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡಲಾಗುವುದು ಎಂದು ಅವರು ಹೇಳಿದರು.
ಕುಂಭಮೇಳದಲ್ಲಿ ಭಾಗಿಯಾದ ಎಲ್ಲ ದೋಣಿ ನಡೆಸುವವರು – ನಾವಿಕರ ಬಗ್ಗೆ ಪ್ರಧಾನಮಂತ್ರಿ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿ ಕುಂಭಕ್ಕೆ ಭೇಟಿ ನೀಡುತ್ತಿರುವ ಭಕ್ತರಿಗೆ ಅಕ್ಷಯ ವಟ್ ಗೆ ಭೇಟಿ ನೀಡುವ ಅವಕಾಶ ದೊರೆತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
 
ಆಧುನಿಕತೆ, ನಂಬಿಕೆ ಮತ್ತು ಧಾರ್ಮಿಕತೆಯ ಸಮ್ಮಿಶ್ರವಾಗಿರುವ ಕುಂಭಮೇಳಕ್ಕೆ ಭೇಟಿ ನೀಡಿ ತಮ್ಮ ಆಸೆಯನ್ನು ಪೂರೈಸಿಕೊಂಡ ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿ ಅವರು ಧನ್ಯವಾದ ಹೇಳಿದರು. ಮೇಳದ ಯಶಸ್ಸಿಗಾಗಿ ಶ್ರಮಿಸುತ್ತಿರುವ ಹಾಗೂ ಮಹತ್ವದ ಪಾತ್ರವಹಿಸಿರುವ ಉತ್ತರಪ್ರದೇಶದ ಪೊಲೀಸರನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು.
 
ಈ ವರ್ಷದ ಕುಂಭಮೇಳಕ್ಕೆ ವ್ಯವಸ್ಥೆಗಳನ್ನು ಕಲ್ಪಿಸುವಾಗ ಹಲವು ಮಹತ್ವದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು, ಆ ಮೂಲಸೌಕರ್ಯದ ಸೇವೆ ಕುಂಭಮೇಳದ ನಂತರವೂ ಪ್ರಯಾಗ್ ರಾಜ್ ನ ಜನತೆಗೆ ಸಿಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Centre launches Bhavya scheme to set up 100 industrial parks across country

Media Coverage

Centre launches Bhavya scheme to set up 100 industrial parks across country
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಮೇ 2026
May 24, 2026

Strength, Growth & Global Trust: How PM Modi is Transforming India Across Frontiers