ಭಾರತದ ಸಾಮಾಜಿಕ ಜೀವನದಲ್ಲಿ ಶಿಸ್ತಿನ ಭಾವನೆಯನ್ನು ಮೂಡಿಸುವಲ್ಲಿ ಎನ್ ಸಿಸಿಯಿಂದ ಪ್ರಮುಖ ಪಾತ್ರ: ಪ್ರಧಾನಮಂತ್ರಿ
ಭಾರತ ರಕ್ಷಣಾ ಉತ್ಪನ್ನಗಳ ಮಾರುಕಟ್ಟೆಯಷ್ಟೇ ಅಲ್ಲದೆ ಪ್ರಮುಖ ಉತ್ಪಾದನಾ ತಾಣವಾಗಿ ರೂಪುಗೊಳ್ಳುತ್ತಿದೆ: ಪ್ರಧಾನಮಂತ್ರಿ
ಗಡಿ ಮತ್ತು ಕರಾವಳಿ ಪ್ರದೇಶಗಳಲ್ಲಿ ನಿಗಾವಹಿಸಲು ಸೇನೆ, ವಾಯುಪಡೆ ಮತ್ತು ನೌಕಾಪಡೆಯಿಂದ ಒಂದು ಲಕ್ಷ ಕೆಡೆಟ್ ಗಳಿಗೆ ತರಬೇತಿ, ಆ ಪೈಕಿ ಮೂರನೇ ಒಂದರಷ್ಟು ಬಾಲಕಿಯರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಕಾರ್ಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್(ಎನ್ ಸಿಸಿ) ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ರಕ್ಷಣಾ ಸಚಿವರು, ರಕ್ಷಣಾ ಪಡೆಗಳ ಮುಖ್ಯಸ್ಥರು ಮತ್ತು ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಧಾನಮಂತ್ರಿ ಅವರು ಎನ್ ಸಿಸಿ ಕೆಡೆಟ್ ಗಳ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಸಾಮಾಜಿಕ ಜೀವನದಲ್ಲಿ ಕಠಿಣ ಶಿಸ್ತನ್ನು ರೂಢಿಸಿಕೊಂಡಿರುವ ರಾಷ್ಟ್ರಗಳು ಎಲ್ಲ ವಲಯಗಳಲ್ಲೂ ಯಶಸ್ವಿಯಾಗುತ್ತವೆ ಎಂದರು. ಅವರು ಭಾರತದ ಸಾಮಾಜಿಕ ಜೀವನದಲ್ಲಿ ಶಿಸ್ತಿನ ಪ್ರಜ್ಞೆಯನ್ನು ಮೂಡಿಸುವಲ್ಲಿ ಎನ್ ಸಿಸಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು. ಎನ್ ಸಿಸಿ ಅತಿ ದೊಡ್ಡ ಯುವ ಸಂಘಟನೆಯಾಗಿದ್ದು, ದಿನೇ ದಿನೇ ಅದರ ಜನಪ್ರಿಯತೆ ಹೆಚ್ಚಾಗುತ್ತಿದೆ ಎಂದರು. ಎನ್ ಸಿಸಿ ಕೆಡೆಟ್ ಗಳು ಎಲ್ಲೆಡೆ ಇದ್ದು, ಅವರು ಭಾರತೀಯ ಪರಂಪರೆಯ ಶೌರ್ಯ ಹಾಗೂ ಸೇವೆಗಳನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಎನ್ ಸಿಸಿ ಯಾವ ಉದ್ದೇಶದಿಂದ ಸ್ಥಾಪನೆಯಾಗಿದೆ ಎಂಬ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಹೇಳಿದರು. ಅಂತೆಯೇ ಪರಿಸರಕ್ಕೆ ಸಂಬಂಧಿಸಿದ ಅಥವಾ ಜಲಸಂರಕ್ಷಣೆಗೆ ಸಂಬಂಧಿಸಿದ ಯಾವುದೇ ಯೋಜನೆಯಾದರು ಅಲ್ಲಿ ಎನ್ ಸಿಸಿ ಭಾಗವಹಿಸಿರುತ್ತದೆ ಎಂದರು. ಕೊರೊನಾದಂತಹ ವಿಪತ್ತುಗಳ ಸಂದರ್ಭದಲ್ಲಿ ಕೊಡುಗೆ ನೀಡಿರುವುದಕ್ಕಾಗಿ ಎನ್ ಸಿಸಿ ಕೆಡೆಟ್ ಗಳನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು.

ನಮ್ಮ ಸಂವಿಧಾನದಲ್ಲಿ ಖಾತ್ರಿಪಡಿಸಲಾಗಿರುವ ಕರ್ತವ್ಯಗಳನ್ನು ಪ್ರತಿಯೊಬ್ಬ ಪ್ರಜೆಗಳು ಪಾಲಿಸಬೇಕಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯಾವ ಸಂದರ್ಭಗಳಲ್ಲಿ ಪ್ರಜೆಗಳು ಮತ್ತು ನಾಗರಿಕ ಸಮಾಜ ಇವುಗಳನ್ನು ಪಾಲನೆ ಮಾಡುತ್ತಾರೆಯೋ ಅಂತಹ ವೇಳೆ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬಹುದು. ಪ್ರಜೆಗಳಲ್ಲಿನ ಕರ್ತವ್ಯ ಪ್ರಜ್ಞೆ ಮತ್ತು ಭದ್ರತಾ ಪಡೆಗಳ ಶೌರ್ಯ ಜೊತೆಗೂಡಿರುವುದರಿಂದ ನಮ್ಮ ದೇಶವನ್ನು ಬಹುಮುಖ್ಯವಾಗಿ ಕಾಡುತ್ತಿದ್ದ ನಕ್ಸಲಿಸಂ ಮತ್ತು ಮಾವೋಯಿಸಂಅನ್ನು ಹತ್ತಿಕ್ಕಲಾಗಿದೆ ಎಂದರು. ಇದೀಗ ನಕ್ಸಲಿಸಂ ಪಿಡುಗು ದೇಶದ ಕೆಲವೇ ಭಾಗಕ್ಕೆ ಸೀಮಿತಗೊಂಡಿದೆ. ಅದರಿಂದ ಬಾಧಿತರಾದ ಯುವಕರು ಹಿಂಸಾ ಮಾರ್ಗ ತೊರೆದು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಕೊರೊನಾ ಸಮಯ ಸವಾಲಿನದಾಗಿತ್ತು. ಆದರೆ ಅದು ದೇಶಕ್ಕಾಗಿ ಅಸಮಾನ್ಯ ಕೆಲಸ ಮಾಡಲು ಅವಕಾಶವನ್ನು ಒದಗಿಸಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಸಾಮರ್ಥ್ಯಗಳನ್ನು ಸುಧಾರಿಸಲು ಆತ್ಮನಿರ್ಭರ ಭಾರತ ಸಾಧಿಸಲು ಮತ್ತು ಸಾಮಾನ್ಯದಿಂದ ಅತ್ಯುತ್ತಮವಾಗಲು ಅದು ಸಹಕಾರಿಯಾಯಿತು. ಇದರಲ್ಲಿ ಯುವಕರು ಅತ್ಯಂತ ಪ್ರಮುಖ ಪಾತ್ರವಹಿಸಬೇಕಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಆಗಸ್ಟ್ 15ರ ತಮ್ಮ ಭಾಷಣದಲ್ಲಿ 175 ಜಿಲ್ಲೆಗಳಲ್ಲಿ ಎನ್ ಸಿಸಿ ಹೊಸ ಪಾತ್ರವನ್ನು ವಹಿಸಲಿದೆ ಎಂದು ಹೇಳಿದ್ದನ್ನು ನೆನಪು ಮಾಡಿಕೊಂಡ ಪ್ರಧಾನಮಂತ್ರಿ ಅವರು, ಎನ್ ಸಿಸಿಅನ್ನು ಗಡಿ ಮತ್ತು ಕರಾವಳಿ ಪ್ರದೇಶಗಳಿಗೂ ವಿಸ್ತರಣೆ ಮಾಡುವ ಯೋಜನೆಯನ್ನು ಪ್ರಕಟಿಸಿದರು. ಅದಕ್ಕಾಗಿ ಸೇನೆ, ವಾಯುಪಡೆ ಮತ್ತು ನೌಕಾಪಡೆಯಲ್ಲಿ ಸುಮಾರು ಒಂದು ಲಕ್ಷ ಯೋಧರಿಗೆ ತರಬೇತಿ ನೀಡಲಾಗುವುದು. ಆ ಪೈಕಿ ಮೂರನೇ ಒಂದರಷ್ಟು ಯುವತಿಯರು ಇರಲಿದ್ದಾರೆ ಎಂದರು. ಎನ್ ಸಿಸಿಯ ತರಬೇತಿ ಮೂಲಸೌಕರ್ಯವನ್ನು ಬಲವರ್ಧನೆಗೊಳಿಸಲಾಗುವುದು. ಮೊದಲು ಒಂದೇ ಒಂದು ಫೈರಿಂಗ್ ಸಿಮ್ಯುಲೇಟರ್ ಇತ್ತು. ಇದೀಗ ಅಂತಹ 98 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ ಸಣ್ಣ, ಹಗುರ ಸಿಮ್ಯುಲೇಟರ್ ಗಳ ಸಂಖ್ಯೆಯನ್ನು 5 ರಿಂದ 44ಕ್ಕೆ ಮತ್ತು ರೋಯಿಂಗ್ ಸಿಮ್ಯುಲೇಟರ್ ಗಳ ಸಂಖ್ಯೆಯನ್ನು 11 ರಿಂದ 60ಕ್ಕೆ ಹೆಚ್ಚಿಸಲಾಗುವುದು ಎಂದರು.

ಪ್ರಧಾನಮಂತ್ರಿ ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜನ್ಮ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ಇಂದಿನ ಕಾರ್ಯಕ್ರಮದ ಸ್ಥಳಕ್ಕೆ ಅವರ ಹೆಸರಿಡಲಾಗಿದೆ ಎಂದು ಉಲ್ಲೇಖಿಸಿದರು. ಸಶಸ್ತ್ರ ಪಡೆಗಳಲ್ಲಿ ಮಹಿಳಾ ಯೋಧರಿಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಎನ್ ಸಿಸಿಯಲ್ಲಿ ಮಹಿಳಾ ಕೆಡೆಟ್ ಗಳ ಸಂಖ್ಯೆ ಶೇ.35ಕ್ಕೆ ಹೆಚ್ಚಳವಾಗಿರುವುದು ತಮಗೆ ತೃಪ್ತಿತಂದಿದೆ ಎಂದು ಅವರು ಹೇಳಿದರು. ಇದೇ ವೇಳೆ ಪ್ರಧಾನಮಂತ್ರಿ ಅವರು, 1971ರ ಬಾಂಗ್ಲಾ ವಿರುದ್ಧದ ಯುದ್ಧದಲ್ಲಿ ಸಶಸ್ತ್ರ ಪಡೆಗಳು ಗೆಲುವು ಸಾಧಿಸಿದ 50ನೇ ವರ್ಷಾಚರಣೆ ವೇಳೆ ಸೇನಾ ಪಡೆಗಳಿಗೆ ಗೌರವ ಸಲ್ಲಿಸಿದರು. ಅಲ್ಲದೆ ಪ್ರಧಾನಮಂತ್ರಿ ಅವರು ಕೆಡೆಟ್ ಗಳಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವಂತೆ ಮತ್ತು ನವೀಕರಿಸಿರುವ ಶೌರ್ಯ ಪ್ರಶಸ್ತಿ ಪೋರ್ಟಲ್ ಗೆ ಭೇಟಿ ನೀಡುವಂತೆ ಸೂಚಿಸಿದರು. ಅವರು ಎನ್ ಸಿಸಿ ಡಿಜಿಟಲ್ ವೇದಿಕೆ, ಚಿಂತನೆಗಳನ್ನು ಹಂಚಿಕೊಳ್ಳುವ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೇದಿಕೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ವಾರ್ಷಿಕೋತ್ಸವಗಳ ಆಚರಣೆ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ ಅವರು ಈ ವರ್ಷ, ಭಾರತ 75ನೇ ಸ್ವಾತಂತ್ರ್ಯ ದಿನ ಆಚರಿಸಲಿದೆ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವ ಆಚರಿಸಲಿದೆ ಎಂದರು. ನೇತಾಜಿ ಅವರ ಶೌರ್ಯದ ಉದಾಹರಣೆಯಿಂದ ಸ್ಫೂರ್ತಿ ಪಡೆಯುವಂತೆ ಅವರು ಕೆಡೆಟ್ ಗಳಿಗೆ ಸೂಚಿಸಿದರು. ಭಾರತ ಮುಂದಿನ 25-26 ವರ್ಷಗಳಲ್ಲಿ 100ನೇ ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಆ ದೃಷ್ಟಿಯನ್ನು ಮುಂದಿಟ್ಟುಕೊಂಡು ಸಾಗಬೇಕು ಎಂದು ಪ್ರಧಾನಮಂತ್ರಿ ಅವರು ಕೆಡೆಟ್ ಗಳಿಗೆ ತಿಳಿಸಿದರು.

ದೇಶದ ರಕ್ಷಣೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಲು ಭಾರತ ಹೊಂದಿರುವ ಸಾಮರ್ಥ್ಯಗಳ ಕುರಿತಂತೆ ಪ್ರಧಾನಮಂತ್ರಿ ವಿವರಿಸಿದರು. ಅವರು ದೇಶ, ವಿಶ್ವದಲ್ಲೇ ಅತ್ಯುತ್ತಮವಾದ ಸಮರ ಕಾರ್ಯತಂತ್ರವನ್ನು ಹೊಂದಿದೆ ಎಂದು ಸಮರ್ಥಿಸಿಕೊಂಡರು. ಯುಎಇ, ಸೌದಿ ಅರೆಬಿಯಾ ಮತ್ತು ಗ್ರೀಸ್ ಸಹಾಯದಿಂದ ಇತ್ತೀಚೆಗೆ ಹೊಸ ರಫೇಲ್ ಯುದ್ಧ ವಿಮಾನಗಳಿಗೆ ಆಗಸದಲ್ಲೇ ಇಂಧನ ಭರ್ತಿ ಮಾಡುವ ಕಾರ್ಯಾಚರಣೆ ನಡೆಸಿದ್ದನ್ನು ಉಲ್ಲೇಖಿಸಿದ ಅವರು, ಇದರಿಂದಾಗಿ ಗಲ್ಫ್ ರಾಷ್ಟ್ರಗಳ ನಡುವಿನ ಸಂಬಂಧ ಬಲವರ್ಧನೆಗೊಂಡಿದೆ ಎಂದರು. ಅಂತೆಯೇ ಭಾರತ 100ಕ್ಕೂ ಅಧಿಕ, ರಕ್ಷಣೆಗೆ ಸಂಬಂಧಿಸಿದ ಸಾಧನಗಳನ್ನು ತಾನೇ ಉತ್ಪಾದಿಸಲು ನಿರ್ಧರಿಸಿದೆ ಎಂದರು. ಇದು ಮತ್ತು ಭಾರತೀಯ ವಾಯುಪಡೆಗೆ 80 ತೇಜಸ್ ಯುದ್ಧ ವಿಮಾನಗಳನ್ನು ಹೊಂದುವುದು, ಯುದ್ಧ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಭಾರತ ಕೇವಲ ರಕ್ಷಣಾ ಉತ್ಪನ್ನಗಳ ಮಾರುಕಟ್ಟೆಯಾಗಿ ರೂಪುಗೊಳ್ಳುವುದಷ್ಟೇ ಅಲ್ಲದೆ ಭಾರತ ರಕ್ಷಣಾ ಉತ್ಪನ್ನಗಳ ಪ್ರಮುಖ ಉತ್ಪಾದನಾ ತಾಣವಾಗಿಯೂ ಸಹ ರೂಪುಗೊಳ್ಳುತ್ತಿದೆ ಎಂದರು.

ಕೆಡೆಟ್ ಗಳು ವೋಕಲ್ ಫಾರ್ ಲೋಕಲ್ ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಬೇಕು ಎಂದು ಪ್ರಧಾನಮಂತ್ರಿ ಅವರು ಕರೆ ನೀಡಿದರು. ಯುವಜನರು ಖಾದಿಯನ್ನು ಬ್ರ್ಯಾಂಡ್ ಅನ್ನಾಗಿ ಮಾಡಿಕೊಂಡು ಧರಿಸುತ್ತಿರುವ ಬಗ್ಗೆ ಮತ್ತು ಸ್ಥಳೀಯ ಫ್ಯಾಷನ್, ಮದುವೆ ಉತ್ಸವ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಆ ಉತ್ಪನ್ನಗಳಗಿಗೆ ಒತ್ತು ನೀಡಬೇಕು ಎಂದರು. ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಆತ್ಮವಿಶ್ವಾಸದ ಯುವಜನತೆ ಅತ್ಯಂತ ಪ್ರಮುಖ ಅಗತ್ಯವಾಗಿದೆ ಎಂದು ಅವರು ಹೇಳಿದರು. ಅದಕ್ಕಾಗಿ ಸರ್ಕಾರ ದೈಹಿಕ ಕ್ಷಮತೆ, ಶಿಕ್ಷಣ ಮತ್ತು ಕೌಶಲ್ಯ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಅಟಲ್ ಚಿಂತನಾ ಪ್ರಯೋಗಾಲಯಗಳಿಂದ ಹಿಡಿದು ಆಧುನಿಕ ಶಿಕ್ಷಣ ಕೇಂದ್ರಗಳವರೆಗೆ, ಕೌಶಲ್ಯ ಭಾರತದಿಂದ ಹಿಡಿದು ಮುದ್ರಾ ಯೋಜನೆವರೆಗೆ ಹಲವು ಯೋಜನೆಗಳು ತ್ವರಿತವಾಗಿ ಅನುಷ್ಠಾನಗೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಎನ್ ಸಿಸಿ ವಿಶೇಷ ಕಾರ್ಯಕ್ರಮಗಳನ್ನು ಒಳಗೊಂಡಂತೆ ಕ್ವಿಟ್ ಇಂಡಿಯಾ ಮತ್ತು ಖೇಲೋ ಇಂಡಿಯಾ ಅಭಿಯಾನಗಳ ಮೂಲಕ ದೈಹಿಕ ಕ್ಷಮತೆ ಮತ್ತು ಕ್ರೀಡೆಗಳಿಗೆ ಭಾರೀ ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಅಗತ್ಯತೆ ಮತ್ತು ಆಸಕ್ತಿಗಳಿಗೆ ತಕ್ಕಂತೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಸರಳ ವಿಧಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಸುಧಾರಣೆಗಳಿಂದಾಗಿ ಲಭ್ಯವಾಗುವ ಅವಕಾಶಗಳನ್ನು ಬಳಸಿಕೊಂಡು ನಮ್ಮ ಯುಜನತೆ ದೇಶದ ಪ್ರಗತಿಯನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Shortcuts will cut you short’: PM Modi’s message for youngsters at former President Kovind’s autobiography launch

Media Coverage

‘Shortcuts will cut you short’: PM Modi’s message for youngsters at former President Kovind’s autobiography launch
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಆಗಸ್ಟ್ 2026
August 13, 2026

Aatmanirbhar in Motion: Solar Homes, Made-in-India Containers, Record Exports & a Rising Global Footprint Under the Leadership of PM Modi