ಸಾರ್ವಭೌಮ ಕಾನೂನು ನಮ್ಮ ನಾಗರಿಕತೆ ಮತ್ತು ಸಾಮಾಜಿಕತೆಯ ಮೂಲ
ನ್ಯಾಯಾಂಗ ಆಧುನೀಕರಣದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ದೊಡ್ಡ ಪಾತ್ರ ವಹಿಸುತ್ತದೆ
ವಿದೇಶಿ ಹೂಡಿಕೆದಾರರು ತಮ್ಮ ನ್ಯಾಯಾಂಗ ಹಕ್ಕುಗಳ ಸುರಕ್ಷತೆಯ ಬಗ್ಗೆ ಹೆಚ್ಚು ವಿಶ್ವಾಸ ಹೊಂದುತ್ತಿರುವುದರಿಂದ ಸುಗಮ ನ್ಯಾಯವು ಸುಲಲಿತ ವ್ಯಾಪಾರವನ್ನು ಹೆಚ್ಚಿಸುತ್ತದೆ: ಪ್ರಧಾನ ಮಂತ್ರಿ

ಗುಜರಾತ್ ಹೈಕೋರ್ಟ್‌ನ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಹೈಕೋರ್ಟ್ ಸ್ಥಾಪನೆಯ ಅರವತ್ತು ವರ್ಷಗಳು ಪೂರ್ಣಗೊಂಡಿರುವ ಸಲುವಾಗಿ ಅಂಚೆ ಚೀಟಿಯನ್ನು ಸಹ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರು, ಸುಪ್ರೀಂ ಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ನ್ಯಾಯಾಧೀಶರು ಮತ್ತು ಗುಜರಾತ್ ಮುಖ್ಯಮಂತ್ರಿ ಮತ್ತು ಕಾನೂನು ಕ್ಷೇತ್ರದ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿಯವರು, 60 ವರ್ಷಗಳ ಕಾಲ ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಶ್ರೇಷ್ಠ ಕೊಡುಗೆ ನೀಡಿದ್ದಕ್ಕಾಗಿ ಹೈಕೋರ್ಟ್‌ನ ನ್ಯಾಯಪೀಠ ಮತ್ತು ನ್ಯಾಯವಾದಿಗಳನ್ನು ಶ್ಲಾಘಿಸಿದರು. ನ್ಯಾಯಾಂಗವು ಸಂವಿಧಾನದ ಜೀವಸೆಲೆಯಾಗಿ ತನ್ನ ಜವಾಬ್ದಾರಿಯನ್ನು ಪೂರೈಸಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ನ್ಯಾಯಾಂಗವು ಯಾವಾಗಲೂ ಸಂವಿಧಾನವನ್ನು ಸೃಜನಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ಅರ್ಥೈಸುವ ಮೂಲಕ ಅದನ್ನು ಬಲಪಡಿಸಿದೆ. ನಾಗರಿಕರ ಹಕ್ಕುಗಳು ಮತ್ತು ಸ್ವಾತಂತ್ರ್ಯದ ವಿಷಯಗಳಲ್ಲಿ ತನ್ನ ಪಾತ್ರವನ್ನು ಪೂರೈಸುವ ಮೂಲಕ ಕಾನೂನನ್ನು ಎತ್ತಿಹಿಡಿದಿದೆ ಎಂದು ಅವರು ಹೇಳಿದರು

ಕಾನೂನು ಸಾರ್ವಭೌಮವಾದುದು ಎಂಬ ಕಲ್ಪನೆಯು ನಮ್ಮ ನಾಗರಿಕತೆ ಮತ್ತು ಸಾಮಾಜಿಕತೆಯ ಮೂಲವಾವಾಗಿದೆ ಎಂದು ಪ್ರಧಾನಿ ಹೇಳಿದರು. ಇದು ಉತ್ತಮ ಆಡಳಿತಕ್ಕೆ ಆಧಾರವಾಗಿದೆ. ಇದು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ನೈತಿಕ ಧೈರ್ಯವನ್ನು ತುಂಬಿತು. ಭಾರತೀಯ ಸಂವಿಧಾನವನ್ನು ರೂಪಿಸಿದವರು ಇದನ್ನು ಸರ್ವೋಚ್ಚವಾಗಿರಿಸಿದ್ದಾರೆ ಮತ್ತು ಸಂವಿಧಾನದ ಪ್ರಸ್ತಾವನೆ ಈ ಪ್ರತಿಜ್ಞೆಯ ಅಭಿವ್ಯಕ್ತಿಯಾಗಿದೆ. ನ್ಯಾಯಾಂಗವು ಈ ಪ್ರಮುಖ ತತ್ವಕ್ಕೆ ಯಾವಾಗಲೂ ಶಕ್ತಿ ಮತ್ತು ನಿರ್ದೇಶನವನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು. ನ್ಯಾಯದ ಮೂಲಭೂತ ಗುರಿಗಳನ್ನು ಪೂರೈಸುವಲ್ಲಿ ನ್ಯಾಯವಾದಿಗಳ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. ಸಮಾಜದ ಅತ್ಯಂತ ಕೆಳಮಟ್ಟದಲ್ಲಿರುವ ವ್ಯಕ್ತಿಗೆ ಸಮಯೋಚಿತ ನ್ಯಾಯದ ಖಾತರಿಯನ್ನು ಒದಗಿಸುವ ವಿಶ್ವ ದರ್ಜೆಯ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸುವುದು ಕಾರ್ಯಾಂಗ ಮತ್ತು ನ್ಯಾಯಾಂಗದ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.

 

ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ನ್ಯಾಯಾಂಗದ ಸಮರ್ಪಣೆಯನ್ನು ಪ್ರಧಾನಿಯವರು ಶ್ಲಾಘಿಸಿದರು. ವಿಡಿಯೋ ಕಾನ್ಫರೆನ್ಸಿಂಗ್, ಎಸ್‌ಎಂಎಸ್ ಕಾಲ್-ಔಟ್, ಪ್ರಕರಣಗಳ ಇ-ಫೈಲಿಂಗ್ ಮತ್ತು ‘ನನ್ನ ಪ್ರಕರಣದ ಸ್ಥಿತಿಗತಿ ಇಮೇಲ್ ಮಾಡಿ’ಮೂಲಕ ಗುಜರಾತ್ ಹೈಕೋರ್ಟ್ ತನ್ನ ಹೊಂದಾಣಿಕೆಯ ಸಾಮರ್ಥ್ಯವನ್ನು ತೋರಿಸಿದೆ. ಕೋರ್ಟ್ ತನ್ನ ಪ್ರದರ್ಶನ ಫಲಕವನ್ನು ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್ ಮಾಡಲು ಪ್ರಾರಂಭಿಸಿತು ಮತ್ತು ಅದರ ತೀರ್ಪುಗಳು ಮತ್ತು ಆದೇಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿತು. ಗುಜರಾತ್ ಹೈಕೋರ್ಟ್ ನ್ಯಾಯಾಲಯ ಪ್ರಕ್ರಿಯೆಯನ್ನು ನೇರಪ್ರಸಾರ ಮಾಡಿದ ಮೊದಲ ನ್ಯಾಯಾಲಯವಾಯಿತು. ಕಾನೂನು ಸಚಿವಾಲಯದ ಇ-ಕೋರ್ಟ್‌ಗಳ ಇಂಟಿಗ್ರೇಟೆಡ್ ಮಿಷನ್ ಮೋಡ್ ಪ್ರಾಜೆಕ್ಟ್‌ನಿಂದ ಡಿಜಿಟಲ್ ಮೂಲಸೌಕರ್ಯವನ್ನು ನ್ಯಾಯಾಲಯಗಳು ಶೀಘ್ರವಾಗಿ ಅಳವಡಿಸಿಕೊಂಡಿದೆ ಎಂದು ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು. ಟೆಲಿ ಕಾನ್ಫರೆನ್ಸಿಂಗ್ ಮತ್ತು ವಿಡಿಯೋ ಕಾನ್ಫರೆನ್ಸಿಂಗ್‌ಗೆ ಸುಪ್ರೀಂ ಕೋರ್ಟ್ ಕಾನೂನಿನ ಪಾವಿತ್ರ್ಯತೆ ನೀಡಿದ ನಂತರ ಇಂದು 18 ಸಾವಿರಕ್ಕೂ ಹೆಚ್ಚು ನ್ಯಾಯಾಲಯಗಳನ್ನು ಗಣಕೀಕರಿಸಲಾಗಿದೆ ಮತ್ತು ನ್ಯಾಯಾಲಯದಲ್ಲಿ ಇ-ವಿಚಾರಣೆಯಲ್ಲಿ ಹೊಸ ಆವೇಗ ಕಂಡುಬಂದಿದೆ ಎಂದು ಶ್ರೀ ಮೋದಿ ಹೇಳಿದರು. "ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಮ್ಮ ಸುಪ್ರೀಂ ಕೋರ್ಟ್ ವಿಶ್ವದ ಎಲ್ಲಾ ಸುಪ್ರೀಂ ಕೋರ್ಟ್‌ಗಳಿಗಿಂತ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಆಲಿಸಿದೆ ಎಂಬುದು ಬಹಳ ಹೆಮ್ಮೆಯ ವಿಷಯ" ಎಂದು ಪ್ರಧಾನಿ ಹೇಳಿದರು.

 

ಪ್ರಕರಣಗಳ ಇ-ಫೈಲಿಂಗ್, ವಿಶಿಷ್ಟ ಗುರುತಿನ ಕೋಡ್ ಮತ್ತು ಪ್ರಕರಣಗಳಿಗೆ ಕ್ಯೂಆರ್ ಕೋಡ್ ಮೂಲಕ ಸುಲಭ ನ್ಯಾಯವು ಹೊಸ ಆಯಾಮವನ್ನು ಪಡೆದುಕೊಂಡಿತು, ಇದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಸ್ಥಾಪನೆಗೆ ಕಾರಣವಾಯಿತು. ವಕೀಲರು ಮತ್ತು ದಾವೆ ಹೂಡುವವರು ತಮ್ಮ ಪ್ರಕರಣಗಳ ಬಗ್ಗೆ ತಿಳಿಯಲು ಗ್ರಿಡ್ ಸಹಾಯ ಮಾಡುತ್ತದೆ. ವಿದೇಶಿ ಹೂಡಿಕೆದಾರರು ತಮ್ಮ ನ್ಯಾಯಾಂಗ ಹಕ್ಕುಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ಹೊಂದಿರುವುದರಿಂದ ಈ ಸುಲಭ ನ್ಯಾಯವು ಜೀವನ ಸುಲಭತೆಯನ್ನು ಮಾತ್ರವಲ್ಲದೆ ಸುಲಲಿತ ವ್ಯಾಪಾರವನ್ನೂ ಹೆಚ್ಚಿಸುತ್ತದೆ. ವಿಶ್ವ ಬ್ಯಾಂಕ್ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಅನ್ನು ಪ್ರಶಂಸಿಸಿದೆ. ಸುಪ್ರೀಂ ಕೋರ್ಟ್‌ನ ಇ-ಸಮಿತಿ ಮತ್ತು ಎನ್‌ಐಸಿ ಸುರಕ್ಷತೆಯ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿವೆ ಎಂದರು. ನಮ್ಮ ವ್ಯವಸ್ಥೆಯನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು ಕೃತಕ ಬುದ್ಧಿಮತ್ತೆಯ ಬಳಕೆಯ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ ಇದು ನ್ಯಾಯಾಂಗದ ದಕ್ಷತೆ ಮತ್ತು ವೇಗವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಹೇಳಿದರು.

ನ್ಯಾಯಾಂಗ ಆಧುನೀಕರಣದಲ್ಲಿ ಆತ್ಮನಿರ್ಭರ ಅಭಿಯಾನವು ದೊಡ್ಡ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಹೇಳಿದರು. ಅಭಿಯಾನದಡಿಯಲ್ಲಿ, ಭಾರತವು ತನ್ನದೇ ಆದ ವಿಡಿಯೋ ಕಾನ್ಫರೆನ್ಸ್ ವೇದಿಕೆಯನ್ನು ಪ್ರೋತ್ಸಾಹಿಸುತ್ತಿದೆ. ಹೈಕೋರ್ಟ್‌ಗಳು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿನ ಇ-ಸೇವಾ ಕೇಂದ್ರಗಳು ಡಿಜಿಟಲ್ ವಿಭಜನೆಯನ್ನು ನಿವಾರಿಸಲು ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು.

ಇ-ಲೋಕ ಅದಾಲತ್‌ಗಳ ಬಗ್ಗೆ ಮಾತನಾಡಿದ ಪ್ರಧಾನಿಯವರು, 30-40 ವರ್ಷಗಳ ಹಿಂದೆ ಜುನಾಗಢದಲ್ಲಿ ಮೊದಲ ಇ ಲೋಕ ಅದಾಲತ್‌ ಆರಂಭವಾಗಿದ್ದನ್ನು ಪ್ರಸ್ತಾಪಿಸಿದರು. ಇಂದು, 24 ರಾಜ್ಯಗಳಲ್ಲಿ ಲಕ್ಷಾಂತರ ಪ್ರಕರಣಗಳನ್ನು ಇ-ಲೋಕ್ ಅದಾಲತ್‌ಗಳು ವಿಚಾರಣೆ ನಡೆಸುವ ಮೂಲಕ ಸಮಯೋಚಿತ ಮತ್ತು ಅನುಕೂಲಕರ ನ್ಯಾಯದ ಮೂಲಗಳಾಗಿವೆ. ಇಂತಹ ವೇಗ, ವಿಶ್ವಾಸ ಮತ್ತು ಅನುಕೂಲವು ಇಂದಿನ ನ್ಯಾಯಾಂಗ ವ್ಯವಸ್ಥೆಯ ಬೇಡಿಕೆಯಾಗಿದೆ ಎಂದು ಪ್ರಧಾನಿ ಹೇಳಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
National Technology Day Special: India’s patent boom is rewiring the auto industry

Media Coverage

National Technology Day Special: India’s patent boom is rewiring the auto industry
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಮೇ 2026
May 12, 2026

Building a Trusted India: Modi's Leadership in Finance, Manufacturing, and Global Partnerships