ಭಾರತದಲ್ಲಿ ಕೈಗೊಂಡಿರುವ 5 ಪ್ರಮುಖ ಪರಿವರ್ತೆನಗಳ ಉಲ್ಲೇಖ
“ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿ ಎಂದರೆ ಮುಕ್ತ ವಾತಾವರಣ, ಇದೇ ವೇಳೆ ಕೆಲವು ಸ್ವಹಿತಾಸಕ್ತಿಗಳು ಈ ಮುಕ್ತತೆ ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಬಾರದು”
“ಭಾರತದ ಡಿಜಿಟಲ್ ಕ್ರಾಂತಿ ನಮ್ಮ ಪ್ರಜಾಪ್ರಭುತ್ವ, ನಮ್ಮ ಜನಸಂಖ್ಯೆ ಮತ್ತು ನಮ್ಮ ಆರ್ಥಿಕತೆಯ ಪ್ರಮಾಣದಲ್ಲಿ ಬೇರೂರಿದೆ”
“ನಾವು ದತ್ತಾಂಶವನ್ನು ಜನರ ಸಬಲೀಕರಣಕ್ಕೆ ಮೂಲವನ್ನಾಗಿ ಬಳಸುತ್ತೇವೆ, ವೈಯಕ್ತಿಕ ಹಕ್ಕುಗಳ ಬಲವಾದ ಖಾತ್ರಿಯೊಂದಿಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಅದನ್ನು ಮಾಡಲು ಅಸಮಾನ್ಯ ಅನುಭವ ಹೊಂದಿದೆ”
“ಭಾರತದ ಪ್ರಜಾಸತ್ತಾತ್ಮಕ ಪರಂಪರೆ ಹಳೆಯದು; ಅದರ ಆಧುನಿಕ ಸಂಸ್ಥೆಗಳು ಬಲಿಷ್ಠವಾಗಿವೆ ಮತ್ತು ನಾವು ಸದಾ ವಿಶ್ವವನ್ನೇ ಒಂದು ಕುಟುಂಬವೆಂದು ಭಾವಿಸಿದ್ದೇವೆ”
“ರಾಷ್ಟ್ರೀಯ ಹಕ್ಕುಗಳನ್ನು ಗುರುತಿಸುವ ಮತ್ತು ಅದೇ ಸಮಯದಲ್ಲಿ ವ್ಯಾಪಾರ, ಹೂಡಿಕೆ ಮತ್ತು ದೊಡ್ಡ ಸಾರ್ವಜನಿಕ ಒಳಿತನ್ನು ಉತ್ತೇಜಿಸುವ ಪ್ರಜಾಪ್ರಭುತ್ವಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಮಾರ್ಗಸೂಚಿ”
“ಕ್ರಿಪ್ಟೋ ಕರೆನ್ಸಿ ಕುರಿತು ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡುವುದು ಅತಿ ಮುಖ್ಯ ಮತ್ತು ಅದು ನಮ್ಮ ಯುವಜನತೆಯನ್ನು ಹಾಳುಮಾಡುವಂತಹ ದುಷ್ಟಶಕ್ತಿಗಳ ಕೈಸೇರದಂತೆ ನೋಡಿಕೊಳ್ಳುವುದನ್ನು ಖಾತ್ರಿಪಡಿಸಬೇಕಿದೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಡ್ನಿ ಸಂವಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ಶ್ರೀ ನರೇಂದ್ರ ಮೋದಿ ಅವರು ಭಾರತದ ತಂತ್ರಜ್ಞಾನದ ಬೆಳವಣಿಗೆ ಮತ್ತು ಕ್ರಾಂತಿಯ ವಿಷಯದ ಕುರಿತು ಮಾತನಾಡಿದರು. ಪ್ರಧಾನಿ ಭಾಷಣಕ್ಕೂ ಮುನ್ನ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಸ್ಕಾಟ್ ಮಾರಿಸನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಮತ್ತು ಬೆಳವಣಿಗೆ ಹೊಂದುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಭಾರತದ ಪ್ರಮುಖ ಪಾತ್ರವನ್ನು ಗುರುತಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಡಿಜಿಟಲ್ ಯುಗದ ಪ್ರಯೋಜನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಸಮುದ್ರ ತೀರದಿಂದ ಸೈಬರ್ ವರೆಗೆ ಮತ್ತು ಬಾಹ್ಯಾಕಾಶದ ವರೆಗೆ ನಾನಾ ರೀತಿಯ ಅಪಾಯಗಳು ಹೊಸ ಹೊಸ ಆಯಾಮದ ತೊಂದರೆ ಮತ್ತು ಬಿಕ್ಕಟ್ಟುಗಳನ್ನು ಜಗತ್ತು ಎದುರಿಸುತ್ತಿದೆ ಎಂದು ಹೇಳಿದರು. “ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿ ಎಂದರೆ ಮುಕ್ತ ವಾತಾವರಣ, ಇದೇ ವೇಳೆ ಈ ಮುಕ್ತತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಕೆಲವೇ ಕೆಲವು ಸ್ವಹಿತಾಸಕ್ತಿಗಳಿಗೆ ಅವಕಾಶ ನೀಡಬಾರದು” ಎಂದು ಪ್ರಧಾನಮಂತ್ರಿ ಹೇಳಿದರು.

ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮತ್ತು ಡಿಜಿಟಲ್ ನಾಯಕನಾಗಿ ಭಾರತ ಹಂಚಿಕೆಯ ಸಮೃದ್ಧಿ ಮತ್ತು ಭದ್ರತೆಗಾಗಿ ಪಾಲುದಾರರ ಜತೆ ಕಾರ್ಯನಿರ್ವಹಿಸಲು ಭಾರತ ಸಿದ್ಧವಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಭಾರತದ ಡಿಜಿಟಲ್ ಕ್ರಾಂತಿ, ನಮ್ಮ ಪ್ರಜಾಪ್ರಭುತ್ವ, ನಮ್ಮ ಜನಸಂಖ್ಯೆ ಮತ್ತು ಆರ್ಥಿಕತೆಯ ಪ್ರಮಾಣದಲ್ಲಿ ಆಳವಾಗಿ ಬೇರೂರಿದೆ. ನಮ್ಮ ಯುವಜನರ ಆವಿಷ್ಕಾರ ಮತ್ತು ಉದ್ಯಮಶೀಲದ ಶಕ್ತಿಯಿಂದ ಚಾಲಿತವಾಗಿದೆ. ನಾವು ಭೂತಕಾಲದ  ಸವಾಲುಗಳನ್ನು ಭವಿಷ್ಯದತ್ತ ಚಿಮ್ಮುವ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ. 

ಭಾರತದಲ್ಲಿ ಕೈಗೊಂಡಿರುವ ಐದು ಪ್ರಮುಖ ಪರಿವರ್ತನೆಗಳನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಒಂದು- ಭಾರತದಲ್ಲಿ ನಿರ್ಮಿಸಿರುವ ವಿಶ್ವದ ಅತ್ಯಂತ ವ್ಯಾಪಕ ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ವ್ಯವಸ್ಥೆ. ಸುಮಾರು 1.3 ಬಿಲಿಯನ್ ಭಾರತೀಯರು ವಿಶಿಷ್ಟ ಗುರುತಿನ ಡಿಜಿಟಲ್ ಚೀಟಿ ಹೊಂದಿದ್ದಾರೆ. 60 ಸಾವಿರ ಗ್ರಾಮಗಳಿಗೆ ಸದ್ಯದಲ್ಲೇ ಬ್ರಾಡ್ ಬ್ಯಾಂಡ್ ಗೆ ಸಂಪರ್ಕ ಕಲ್ಪಿಸಲಾಗುವುದು ಮತ್ತು ವಿಶ್ವದ ಅತ್ಯಂತ ಪರಿಣಾಮಕಾರಿ ಪಾವತಿ ಮೂಲಸೌಕರ್ಯ ಯುಪಿಐ ಜತೆ ಸಂಪರ್ಕಿಸಲಾಗುವುದು. ಎರಡು- ಆಡಳಿತ, ಎಲ್ಲರನ್ನೊಳಗೊಳ್ಳುವಿಕೆ, ಸಬಲೀಕರಣ, ಸಂಪರ್ಕ, ಪ್ರಯೋಜನಗಳ ವಿತರಣೆ ಮತ್ತು ಕಲ್ಯಾಣಕ್ಕೆ ಡಿಜಿಟಲ್ ತಂತ್ರಜ್ಞಾನಗಳ ಬಳಕೆ. ಮೂರು- ಭಾರತ ವಿಶ್ವದ ಮೂರನೇ ಅತಿದೊಡ್ಡ ಮತ್ತು ವೇಗದ ನವೋದ್ಯಮ ಪೂರಕ ವ್ಯವಸ್ಥೆಯನ್ನು ಹೊಂದಿದೆ. ನಾಲ್ಕು- ಭಾರತದ ಉದ್ಯಮ ಮತ್ತು ಕೈಗಾರಿಕಾ ವಲಯಗಳು ಹಾಗೂ ಕೃಷಿ ವಲಯವೂ ಕೂಡ ಬೃಹತ್ ಡಿಜಿಟಲ್ ಪರಿವರ್ತನೆ ಕಾಣುತ್ತಿವೆ.

ಐದು- ಭಾರತವನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ಬಹುದೊಡ್ಡ ಪ್ರಯತ್ನಗಳು ನಡೆದಿವೆ. “5ಜಿ ಮತ್ತು 6ಜಿ ಅಂತಹ ದೂರಸಂಪರ್ಕ ತಂತ್ರಜ್ಞಾನದ ದೇಶೀಯ ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ನಾವು ಹೂಡಿಕೆ ಮಾಡುತ್ತಿದ್ದೇವೆ. ಕೃತಕ ಬುದ್ಧಿಮತ್ತೆ ಮತ್ತು ಮಿಷನ್ ಲರ್ನಿಂಗ್ ವಿಶೇಷವಾಗಿ ಮಾನವ ಕೇಂದ್ರಿತ ಮತ್ತು ನೈತಿಕ ಉದ್ದೇಶಕ್ಕಾಗಿ ಕೃತಕ ಬುದ್ಧಿಮತ್ತೆ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿರುವ ರಾಷ್ಟ್ರವಾಗಿದೆ. ನಾವು ಕ್ಲೌಡ್ ಫ್ಲಾಟ್ ಫಾರಂ ಮತ್ತು ಕ್ಲೌಡ್ ಕಂಪ್ಯೂಟಿಂಗ್ ನ ಬಲಿಷ್ಠ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಭಾರತದಲ್ಲಿನ ಡಿಜಿಟಲ್ ಸಾರ್ವಭೌಮತೆ ಮತ್ತು ಸ್ಥಿತಿ ಸ್ಥಾಪಕತ್ವದ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ ಅವರು “ನಾವು ಹಾರ್ಡ್ ವೇರ್ ಗೆ ಹೆಚ್ಚಿನ ಗಮನಹರಿಸುತ್ತಿದ್ದೇವೆ. ನಾವು ಸೆಮಿಕಂಡಕ್ಟರ್ ಗಳ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಲು ಪ್ರೋತ್ಸಾಹ ಕ್ರಮಗಳ ಪ್ಯಾಕೇಜ್ ಅನ್ನು ಸಿದ್ಧಪಡಿಸುತ್ತಿದ್ದೇವೆ. ನಾವು ವಿದ್ಯುನ್ಮಾನ ಮತ್ತು ದೂರಸಂಪರ್ಕ ವಲಯಗಳಲ್ಲಿ ಕೈಗೊಂಡಿರುವ ಉತ್ಪಾದನೆ ಆಧರಿತ ಪ್ರೋತ್ಸಾಹಕ ಯೋಜನೆಗಳಿಂದಾಗಿ ಈಗಾಗಲೇ ಸ್ಥಳೀಯ ಮತ್ತು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಿ ಅವರು ಭಾರತದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸುವಂತೆ ಮಾಡಿದ್ದೇವೆ” ಎಂದು ಹೇಳಿದರು. ದತ್ತಾಂಶ ರಕ್ಷಣೆ, ಗೌಪ್ಯತೆ ಮತ್ತು ಭದ್ರತೆಗೆ ಭಾರತ ಬದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದರು. “ಇದೇ ವೇಳೆ ನಾವು ದತ್ತಾಂಶವನ್ನು ಜನರ ಸಬಲೀಕರಣಕ್ಕೆ ಮೂಲ ಅಂಶವನ್ನಾಗಿ ಬಳಕೆ ಮಾಡುತ್ತಿದ್ದೇವೆ. ವೈಯಕ್ತಿಕ ಹಕ್ಕು ಬಲವಾದ  ಖಾತ್ರಿಯೊಂದಿಗೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಇದನ್ನು ಮಾಡುವಲ್ಲಿ ಭಾರತವು ಅಸಮಾನ್ಯ ಅನುಭವ ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು.

Y2K ಸಮಸ್ಯೆ ಎದುರಿಸುವಲ್ಲಿ ಭಾರತದ ಕೊಡುಗೆ ಮತ್ತು ಕೋವಿನ್ ಫ್ಲಾಟ್ ಫಾರಂಅನ್ನು ವಿಶ್ವಕ್ಕೆ ಮುಕ್ತ ಸಾಫ್ಟ್ ವೇರ್ ಅನ್ನಾಗಿ ಒದಗಿಸುವ ಮೂಲಕ ಭಾರತದ ಮೌಲ್ಯಗಳು ಮತ್ತು ದೂರದೃಷ್ಟಿಯ ಉದಾಹರಣೆಯನ್ನು ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಭಾರತದ ಪ್ರಜಾಪ್ರಭುತ್ವದ ಪರಂಪರೆ ಅತ್ಯಂತ ಹಳೆಯದು; ಆದರೆ ಇದರ ಆಧುನಿಕ ಸಂಸ್ಥೆಗಳು ಬಲಿಷ್ಠವಾಗಿವೆ. ನಾವು ಸದಾ ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಿದ್ದೇವೆ ಎಂದು ಹೇಳಿದರು. 

ಸಾರ್ವಜನಿಕ ಒಳಿತಿಗಾಗಿ ತಂತ್ರಜ್ಞಾನ ಮತ್ತು ನೀತಿಯ ಬಳಕೆಯೊಂದಿಗೆ ಭಾರತದ ವಿಸ್ತೃತ ಅನುಭವ ಸಮಗ್ರ ಅಭಿವೃದ್ಧಿಗೆ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಹಕಾರಿಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. “ರಾಷ್ಟ್ರಗಳು ಮತ್ತು ಅವುಗಳ ಜನರ ಸಬಲೀಕರಣಕ್ಕೆ ನಾವೆಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸೋಣ. ಈ ಶತಮಾನದ ಅವಕಾಶಗಳಿಗಾಗಿ ಅವರನ್ನು ಸಜ್ಜುಗೊಳಿಸೋಣ” ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡಿ ಕಾರ್ಯನಿರ್ವಹಿಸುವ ನೀಲ ನಕ್ಷೆಯನ್ನು ನೀಡಿದ ಶ್ರೀ ನರೇಂದ್ರ ಮೋದಿ ಅವರು, ಭವಿಷ್ಯದ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಒಟ್ಟಾಗಿ ಹೂಡಿಕೆ ಮಾಡಬೇಕೆಂಬ ಸಹಭಾಗಿತ್ವದ ನೀತಿ ಚೌಕಟ್ಟಿನ ಅಗತ್ಯವಿದೆ ಎಂದರು. “ವಿಶ್ವಾಸಾರ್ಹ ಉತ್ಪಾದನಾ ಮತ್ತು ಪೂರೈಕೆ ಸರಣಿಯನ್ನು ಅಭಿವೃದ್ಧಿಪಡಿಸಬೇಕು; ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಗುಪ್ತಚರ ಮತ್ತು ಕಾರ್ಯಾಚರಣೆ ಸಹಕಾರವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ನಿರ್ಣಾಯಕ ಮಾಹಿತಿ ಮೂಲಸೌಕರ್ಯ ರಕ್ಷಿಸಬೇಕಾಗಿದೆ;  ಸಾರ್ವಜನಿಕ ಅಭಿಪ್ರಾಯಗಳು ದುರ್ಬಳಕೆಯಾಗುವುದನ್ನು ತಡೆಯಬೇಕು; ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ತಾಂತ್ರಿಕ ಮತ್ತು ಆಡಳಿತ ಮಾನದಂಡ ನಿಯಮಾವಳಿಗಳನ್ನು ಅಭಿವೃದ್ಧಿಪಡಿಸಬೇಕು. ದತ್ತಾಂಶ ಭದ್ರತೆ ಮತ್ತು ರಕ್ಷಣೆ ಗಡಿಯಾಚೆಗೆ ಹರಿಯದಂತೆ ದತ್ತಾಂಶ ಆಡಳಿತ ನಿರ್ವಹಣೆ ಮತ್ತು ಮಾನದಂಡಗಳನ್ನು ಸೃಷ್ಟಿಸಬೇಕು” ಎಂದು ಅವರು ಹೇಳಿದರು. ಬೆಳವಣಿಗೆಯಾಗುತ್ತಿರುವ ನೀತಿಗಳಲ್ಲಿ ರಾಷ್ಟ್ರೀಯ ಹಕ್ಕುಗಳನ್ನು ಗುರುತಿಸುವಂತಾಗಬೇಕು ಮತ್ತು ಇದೇ ವೇಳೆ ವ್ಯಾಪಾರ, ಹೂಡಿಕೆ ಮತ್ತು ಸಾರ್ವಜನಿಕ ಒಳಿತನ್ನು ಉತ್ತೇಜಿಸುವಂತಾಗಬೇಕು” ಎಂದು ಹೇಳಿದರು.

ಈ ನಿಟ್ಟಿನಲ್ಲಿ ಅವರು ಕ್ರಿಪ್ಟೋ ಕರೆನ್ಸಿಯ ಉದಾಹರಣೆಯನ್ನು ನೀಡಿದರು ಮತ್ತು “ಈ ಕುರಿತಂತೆ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡುವುದು ಮುಖ್ಯವಾಗಿದೆ ಮತ್ತು ಯುವಜನತೆಯನ್ನು ಹಾಳು ಮಾಡುವಂತಹ ದುಷ್ಟ ಶಕ್ತಿಗಳ ಕೈಗೆ ಅದು ಸೇರದಿರುವುದನ್ನು ಖಾತ್ರಿಪಡಿಸಬೇಕಿದೆ” ಎಂದು ಹೇಳಿದ್ದಾರೆ.

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India launches ORV Sagar Manthan, boosting ocean research fleet

Media Coverage

India launches ORV Sagar Manthan, boosting ocean research fleet
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಸೆಪ್ಟೆಂಬರ್ 2026
September 10, 2026

Beyond Metros, Beyond Borders: How India Is Rewriting Its Growth Story Under PM Modi