ಮಲೇಷ್ಯಾ ಪ್ರಧಾನಮಂತ್ರಿ ಗೌರವಾನ್ವಿತ ಡಾಟೋ ಸೆರಿ ಅನ್ವರ್ ಇಬ್ರಾಹಿಂ ಅವರ ಆಹ್ವಾನದ ಮೇರೆಗೆ, ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 7 ರಿಂದ 8 ರವರೆಗೆ ಮಲೇಷ್ಯಾಕ್ಕೆ ಅಧಿಕೃತ ಭೇಟಿ ನೀಡಿದರು. ಈ ಭೇಟಿಯು ಉಭಯ ದೇಶಗಳ ನಡುವಿನ ನಾಗರಿಕ ಸಂಬಂಧಗಳ ಆಧಾರದ ಮೇಲೆ ಆಳವಾಗಿ ಬೇರೂರಿರುವ ಸ್ನೇಹ ಮತ್ತು ಜನರ ನಡುವಿನ ಸುದೀರ್ಘ ಬಾಂಧವ್ಯವನ್ನು ಪ್ರತಿಫಲಿಸುತ್ತದೆ. ಭಾರತ-ಮಲೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಉಭಯ ನಾಯಕರ ಹಂಚಿಕೆಯ ಬದ್ಧತೆಯನ್ನು ಇದು ಪುನರುಚ್ಚರಿಸಿದೆ.

1957ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದಾಗಿನಿಂದ, ಮಲೇಷ್ಯಾ ಮತ್ತು ಭಾರತವು ಪರಸ್ಪರ ಗೌರವ ಮತ್ತು ಹಂಚಿಕೆಯ ಮೌಲ್ಯಗಳ ಆಧಾರದ ಮೇಲೆ ಪಾಲುದಾರಿಕೆಯನ್ನು ನಿರ್ಮಿಸಿವೆ. ಈ ಬಾಂಧವ್ಯವನ್ನು ಆಗಸ್ಟ್ 2024ರಲ್ಲಿ ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ (CSP) ಮಟ್ಟಕ್ಕೆ ಏರಿಸಲಾಗಿತ್ತು.

ಭೇಟಿಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಮೋದಿಯವರಿಗೆ ಪುತ್ರಜಯದ ಪೆರ್ಡಾನಾ ಪುತ್ರ ಸಂಕೀರ್ಣದಲ್ಲಿ ಅಧಿಕೃತ ಸ್ವಾಗತ ಸಮಾರಂಭವನ್ನು ನೀಡಲಾಯಿತು. ನಂತರ ನಾಯಕರು 8 ಫೆಬ್ರವರಿ 2026 ರಂದು ಅಧಿಕೃತ ದ್ವಿಪಕ್ಷೀಯ ಸಭೆಗಳನ್ನು ನಡೆಸಿ, ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು (CSP) ಪುನರುಚ್ಚರಿಸಿದರು. ಪ್ರಧಾನ ಮಂತ್ರಿಗಳು ರಾಜಕೀಯ ತೊಡಗಿಸಿಕೊಳ್ಳುವಿಕೆ, ರಕ್ಷಣೆ ಮತ್ತು ಭದ್ರತಾ ಸಹಕಾರ, ಕಡಲ ಸಹಕಾರ, ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಇಂಧನ, ಕೃಷಿ, ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ, ಯುವ ವಿನಿಮಯ ಮತ್ತು ಜನರ ನಡುವಿನ ಸಂಪರ್ಕಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಒಳಗೊಂಡಂತೆ, ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ವ್ಯಾಪಕ ಮತ್ತು ಫಲಪ್ರದ ಚರ್ಚೆಗಳನ್ನು ನಡೆಸಿದರು. ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರು ಪ್ರಧಾನ ಮಂತ್ರಿ ಮೋದಿಯವರ ಗೌರವಾರ್ಥವಾಗಿ ಅಧಿಕೃತ ಮಧ್ಯಾಹ್ನದ ಭೋಜನವನ್ನು ಆಯೋಜಿಸಿದ್ದರು. ಸಾಂಸ್ಥಿಕ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಗುರಿಯನ್ನು ಹೊಂದಿರುವ ಹಲವಾರು ದ್ವಿಪಕ್ಷೀಯ ದಾಖಲೆಗಳ ವಿನಿಮಯಕ್ಕೂ ಅವರು ಸಾಕ್ಷಿಯಾದರು.

ಉಭಯ ದೇಶಗಳ ನಡುವಿನ ಆಳವಾದ ಐತಿಹಾಸಿಕ ಕೊಂಡಿಗಳು, ಸಹಸ್ರಮಾನಗಳ ಹಳೆಯ ಸಂಪರ್ಕಗಳು, ಹಂಚಿಕೆಯ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮಲೇಷ್ಯಾದಲ್ಲಿ ಕ್ರಿಯಾಶೀಲ ಭಾರತೀಯ ಸಮುದಾಯದ ಉಪಸ್ಥಿತಿಯು ದ್ವಿಪಕ್ಷೀಯ ಬಾಂಧವ್ಯಕ್ಕೆ ವಿಶಿಷ್ಟವಾದ, ಬಲಿಷ್ಠವಾದ ಮತ್ತು ಶಾಶ್ವತವಾದ ಅಡಿಪಾಯವನ್ನು ರೂಪಿಸುತ್ತವೆ ಮತ್ತು ಅದರ ಬಹು ಆಯಾಮದ ಸ್ವರೂಪವನ್ನು ಸಮೃದ್ಧಗೊಳಿಸುವುದನ್ನು ಮುಂದುವರಿಸುತ್ತವೆ ಎಂದು ಉಭಯ ನಾಯಕರು ಪುನರುಚ್ಚರಿಸಿದರು.

ರಾಜಕೀಯ ಸಹಕಾರ

ಉನ್ನತ ಮಟ್ಟದ ಭೇಟಿಗಳನ್ನು ಒಳಗೊಂಡಂತೆ ನಿಯಮಿತ ಸಂವಾದ ಮತ್ತು ವಿನಿಮಯಗಳು ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ತಿಳುವಳಿಕೆ ಮತ್ತು ಸಮನ್ವಯವನ್ನು ಬಲಪಡಿಸಿವೆ ಎಂದು ಉಭಯ ನಾಯಕರು ಒಪ್ಪಿಕೊಂಡರು. ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ನಿರಂತರ ತೊಡಗಿಸಿಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಅವರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ವಿದೇಶಾಂಗ ಕಚೇರಿ ಸಮಾಲೋಚನೆಗಳು (FOC) ಮತ್ತು ಜಂಟಿ ಆಯೋಗದ ಸಭೆಗಳು (JCM) ಮಲೇಷ್ಯಾ-ಭಾರತ ಸಂಬಂಧಗಳನ್ನು ಬೆಂಬಲಿಸುವ ಪ್ರಮುಖ ವೇದಿಕೆಗಳಾಗಿ ಮುಂದುವರಿಯುತ್ತವೆ.

ಸಂಸದೀಯ ಪ್ರಜಾಪ್ರಭುತ್ವದ ಕಡೆಗಿನ ತಮ್ಮ ಹಂಚಿಕೆಯ ಬದ್ಧತೆಯಿಂದ ಪ್ರೇರಿತರಾದ ನಾಯಕರು, ವರ್ಧಿತ ಸಂಸದೀಯ ಸಹಕಾರ ಮತ್ತು ವಿನಿಮಯಗಳನ್ನು ಪ್ರೋತ್ಸಾಹಿಸಿದರು. ಇಂತಹ ತೊಡಗಿಸಿಕೊಳ್ಳುವಿಕೆಗಳು ಸಾಂಸ್ಥಿಕ ಸಂಪರ್ಕಗಳನ್ನು ಬಲಪಡಿಸಿವೆ ಮತ್ತು ಪರಸ್ಪರ ತಿಳುವಳಿಕೆಯನ್ನು ಆಳಗೊಳಿಸಿವೆ ಎಂದು ಅವರು ಗಮನಿಸಿದರು. ಮಲೇಷ್ಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಭಾಪತಿ ಟಾನ್ ಶ್ರೀ ಡಾಟೊ ಡಾ. ಜೋಹರಿ ಅಬ್ದುಲ್ ಅವರು ಜನವರಿ 13-16, 2026 ರವರೆಗೆ 28ನೇ ಕಾಮನ್‌ ವೆಲ್ತ್ ಸಭಾಪತಿಗಳು ಮತ್ತು ಪೀಠಾಧಿಕಾರಿಗಳ ಸಮ್ಮೇಳನಕ್ಕಾಗಿ (CSPOC) ಭಾರತಕ್ಕೆ ನೀಡಿದ ಇತ್ತೀಚಿನ ಭೇಟಿಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಇದರೊಂದಿಗೆ ಸೆಪ್ಟೆಂಬರ್ 2025ರಲ್ಲಿ ನಡೆದ 46ನೇ ಆಸಿಯಾನ್ ಅಂತರ-ಸಂಸದೀಯ ಸಭೆಯ (AIPA) ಸಾಮಾನ್ಯ ಸಭೆಗಾಗಿ ಭಾರತೀಯ ಸಂಸದೀಯ ನಿಯೋಗ ಮಲೇಷ್ಯಾಕ್ಕೆ ನೀಡಿದ ಭೇಟಿ ಮತ್ತು 31 ಮೇ ನಿಂದ 03 ಜೂನ್ 2025 ರವರೆಗೆ ಮಲೇಷ್ಯಾಕ್ಕೆ ಭೇಟಿ ನೀಡಿದ ಸರ್ವಪಕ್ಷ ಸಂಸದೀಯ ನಿಯೋಗದ ಬಗ್ಗೆಯೂ ಅವರು ತೃಪ್ತಿ ವ್ಯಕ್ತಪಡಿಸಿದರು.

ವ್ಯಾಪಾರ ಮತ್ತು ಹೂಡಿಕೆ ಸಹಕಾರ

ಭಾರತವನ್ನು ಒಂದು ಪ್ರಮುಖ ಜಾಗತಿಕ ಆರ್ಥಿಕ ಪಾಲುದಾರ ಎಂದು ಗುರುತಿಸಿರುವ ಮಲೇಷ್ಯಾ, ದ್ವಿಪಕ್ಷೀಯ ವ್ಯಾಪಾರದಲ್ಲಿನ ಬೆಳವಣಿಗೆಯನ್ನು ಶ್ಲಾಘಿಸಿದೆ. ಈ ಪಾಲುದಾರಿಕೆಯು ಪರಸ್ಪರ ಮೌಲ್ಯ ಮತ್ತು ಕಾರ್ಯತಂತ್ರದ ಸಮನ್ವಯತೆಯನ್ನು  ಹೊಂದಿದೆ ಎಂದು ಉಭಯ ನಾಯಕರು ಒತ್ತಿಹೇಳಿದರು. ಸಮತೋಲಿತ ಸಹಕಾರದ ಮನೋಭಾವದೊಂದಿಗೆ, ಸೆಮಿಕಂಡಕ್ಟರ್‌ ಗಳು, ಡಿಜಿಟಲ್ ಆರ್ಥಿಕತೆ ಮತ್ತು ಕೈಗಾರಿಕಾ ಸಹಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರ ಸುಗಮಗೊಳಿಸುವಿಕೆಯನ್ನು ಹೆಚ್ಚಿಸಲು ಮತ್ತು ವಿಸ್ತರಿತ ಸಾಮರ್ಥ್ಯಗಳನ್ನು ಅನ್ವೇಷಿಸಲು ಉಭಯ ನಾಯಕರು ಒಪ್ಪಿಕೊಂಡರು.

ಮಲೇಷ್ಯಾ-ಭಾರತ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (MICECA) ಮತ್ತು ಆಸಿಯಾನ್-ಭಾರತ ಸರಕುಗಳ ವ್ಯಾಪಾರ ಒಪ್ಪಂದದ (AITIGA) ಪ್ರಾಮುಖ್ಯತೆಯನ್ನು ನಾಯಕರು ಒತ್ತಿಹೇಳಿದರು. AITIGA ಒಪ್ಪಂದವನ್ನು ಪರಸ್ಪರ ಪ್ರಯೋಜನಕಾರಿಯನ್ನಾಗಿ, ವ್ಯಾಪಾರ ಸುಗಮಗೊಳಿಸುವಂತೆ ಮತ್ತು ಪ್ರಸ್ತುತ ಜಾಗತಿಕ ವ್ಯಾಪಾರ ಪದ್ಧತಿಗಳಿಗೆ ಅನುಗುಣವಾಗುವಂತೆ ಮಾಡಲು ನಡೆಯುತ್ತಿರುವ ಮರುಪರಿಶೀಲನೆಯನ್ನು ಉಭಯ ನಾಯಕರು ಸ್ವಾಗತಿಸಿದರು. ಆರ್ಥಿಕ ಸಂಬಂಧಗಳನ್ನು ಆಳಗೊಳಿಸುವಲ್ಲಿ MICECA ಹೊಂದಿರುವ ಸಾಮರ್ಥ್ಯವನ್ನು ಉಭಯ ನಾಯಕರು ಶ್ಲಾಘಿಸಿದರು ಮತ್ತು ಅದರ ಗರಿಷ್ಠ ಬಳಕೆಗೆ ಪ್ರೋತ್ಸಾಹ ನೀಡಿದರು.

ಉಭಯ ಪ್ರಧಾನಮಂತ್ರಿಗಳು ಬೆಳೆಯುತ್ತಿರುವ ದ್ವಿಪಕ್ಷೀಯ ಹೂಡಿಕೆಗಳನ್ನು ಸ್ವಾಗತಿಸಿದರು ಮತ್ತು ಮೂಲಸೌಕರ್ಯ, ಇಂಧನ, ನವೀಕರಿಸಬಹುದಾದ ಇಂಧನ ಸೇರಿದಂತೆ, ಸುಧಾರಿತ ಉತ್ಪಾದನೆ, ಸೆಮಿಕಂಡಕ್ಟರ್‌ ಗಳು, ಆರೋಗ್ಯ ರಕ್ಷಣೆ, ಡಿಜಿಟಲ್ ಆರ್ಥಿಕತೆ, ಫಿನ್‌ ಟೆಕ್, ಸ್ಟಾರ್ಟ್‌-ಅಪ್‌ ಗಳು, ಕೃತಕ ಬುದ್ಧಿಮತ್ತೆ (AI), ಆತಿಥ್ಯ, ಹಸಿರು ತಂತ್ರಜ್ಞಾನಗಳು ಮತ್ತು ಇತರ ಹೆಚ್ಚಿನ ಮೌಲ್ಯದ ವಲಯಗಳು ಸೇರಿದಂತೆ ಆದ್ಯತೆಯ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರ ಮತ್ತು ಹೂಡಿಕೆಗಳನ್ನು ಉತ್ತೇಜಿಸಿದರು. ಮಲೇಷ್ಯಾದ ಕಂಪನಿಗಳಿಗೆ ಭಾರತವು ಪ್ರಮುಖ ಹೂಡಿಕೆಯ ತಾಣವಾಗಿರುವ ಬಗ್ಗೆ ಪ್ರಧಾನ ಮಂತ್ರಿ ಮೋದಿ ಎತ್ತಿ ತೋರಿಸಿದರೆ, ಮಲೇಷ್ಯಾದಲ್ಲಿ ಉನ್ನತ ಕೌಶಲ್ಯದ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತಿರುವ ಭಾರತೀಯ ಉತ್ಪಾದನಾ ಮತ್ತು ತಂತ್ರಜ್ಞಾನ ಸಂಸ್ಥೆಗಳ ಗಮನಾರ್ಹ ಉಪಸ್ಥಿತಿಯನ್ನು ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಸ್ವಾಗತಿಸಿದರು.

7 ಫೆಬ್ರವರಿ 2026 ರಂದು ಕೌಲಾಲಂಪುರದಲ್ಲಿ ನಡೆದ ಹತ್ತನೇ ಭಾರತ-ಮಲೇಷ್ಯಾ ಸಿಇಒ ಫೋರಂ (CEO Forum) ಸಭೆಯನ್ನು ಉಭಯ ಪ್ರಧಾನಮಂತ್ರಿಗಳು ಸ್ವಾಗತಿಸಿದರು. ನಾಯಕರು ಸಿಇಒ ಫೋರಂನ ಫಲಿತಾಂಶದ ದಾಖಲೆಯನ್ನು ಗಮನಿಸಿದರು ಮತ್ತು ಈ ಫೋರಂ ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಪ್ರಯತ್ನಗಳಿಗೆ ಪೂರಕವಾಗಿ ಮುಂದುವರಿಯುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಇಬ್ಬರೂ ಪ್ರಧಾನಮಂತ್ರಿಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಗಳಲ್ಲಿ ಸ್ಥಳೀಯ ಕರೆನ್ಸಿ ಬಳಕೆಯನ್ನು ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕ್ ನೆಗರಾ ಮಲೇಷ್ಯಾ ನಡುವಿನ ನಿರಂತರ ಸಹಯೋಗವನ್ನು ಶ್ಲಾಘಿಸಿದರು ಮತ್ತು ಸ್ಥಳೀಯ ಕರೆನ್ಸಿಗಳಲ್ಲಿ ಅಂದರೆ ಭಾರತೀಯ ರೂಪಾಯಿ ಮತ್ತು ಮಲೇಷ್ಯಾ ರಿಂಗಿಟ್‌ ನಲ್ಲಿ ವ್ಯಾಪಾರದ ಇನ್‌ ವಾಯ್ಸಿಂಗ್ ಮತ್ತು ಸೆಟಲ್‌ ಮೆಂಟ್‌ ಅನ್ನು ಇನ್ನಷ್ಟು ಸುಗಮಗೊಳಿಸಲು ಉಭಯ ಕಡೆಯ ಕೈಗಾರಿಕೆಗಳನ್ನು ಉತ್ತೇಜಿಸಿದರು.

ಹೆಚ್ಚಿದ ಆರ್ಥಿಕ ಸಹಕಾರಕ್ಕೆ ಸಂಪರ್ಕವು (Connectivity) ಅತ್ಯಂತ ನಿರ್ಣಾಯಕ ಮತ್ತು ಪೂರಕ ಅಂಶವಾಗಿದೆ ಎಂದು ಉಭಯ ನಾಯಕರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ವಾಯುಯಾನ ಮತ್ತು ಕಡಲ ಸಂಪರ್ಕವನ್ನು ಅವರು ಶ್ಲಾಘಿಸಿದರು ಮತ್ತು ಅದನ್ನು ಮತ್ತಷ್ಟು ಬಲಪಡಿಸಲು ಸಮ್ಮತಿಸಿದರು.

ಆಹಾರ ಭದ್ರತೆ ಮತ್ತು ಕೃಷಿ-ಸರಕು ಸಹಕಾರ

ಪ್ರತಿ ದೇಶದ ಆಂತರಿಕ ನೀತಿಗಳನ್ನು ಗೌರವಿಸುತ್ತಲೇ, ವಿಶೇಷವಾಗಿ ಪ್ರಮುಖ ಸರಕುಗಳ ವ್ಯಾಪಾರದಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಸಹಕಾರವನ್ನು ಗಾಢವಾಗಿಸಲು ಉಭಯ ನಾಯಕರು ಒಪ್ಪಿಕೊಂಡರು. ತಮ್ಮ ಜನರ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಅಗತ್ಯಗಳನ್ನು ರಕ್ಷಿಸಲು ಸ್ಥಿರವಾದ, ಬಲಿಷ್ಠವಾದ ಮತ್ತು ಸುಸ್ಥಿರ ಪೂರೈಕೆ ಸರಪಳಿಗಳನ್ನು ಖಚಿತಪಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು. ಕೃಷಿ ಉತ್ಪಾದನೆ ಮತ್ತು ವ್ಯಾಪಾರದಲ್ಲಿ ಉಂಟಾಗಬಹುದಾದ ಅಡೆತಡೆಗಳನ್ನು ಮೊದಲೇ ನಿರೀಕ್ಷಿಸಲು ಮತ್ತು ಅವುಗಳನ್ನು ತಗ್ಗಿಸಲು ನಿಯಮಿತ ಸಂವಾದ, ಮಾಹಿತಿ ವಿನಿಮಯ ಮತ್ತು ಸಹಯೋಗದ ಕ್ರಮಗಳನ್ನು ಕೈಗೊಳ್ಳಲು ನಾಯಕರು ಉತ್ತೇಜಿಸಿದರು.

ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರು ಸುಸ್ಥಿರ ಪಾಮ್ ಆಯಿಲ್‌ನ ವಿಶ್ವಾಸಾರ್ಹ ಪೂರೈಕೆದಾರರಾಗಿ ಮುಂದುವರಿಯುವ ಮಲೇಷ್ಯಾದ ಬದ್ಧತೆಯನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಪಾಮ್ ಆಯಿಲ್ ಕೃಷಿಯಲ್ಲಿ ಆಳವಾದ ಸಹಯೋಗವನ್ನು ನಾಯಕರು ಉತ್ತೇಜಿಸಿದರು. ಇದಲ್ಲದೆ, ಹೆಚ್ಚಿನ ಮೌಲ್ಯವರ್ಧಿತ ಪಾಮ್ ಆಧಾರಿತ ಉತ್ಪನ್ನಗಳು ಸೇರಿದಂತೆ ಪಾಮ್ ಆಯಿಲ್‌ನ ಮೌಲ್ಯ ಸರಪಳಿ ಅಭಿವೃದ್ಧಿಯಲ್ಲಿ ಸಹಕರಿಸಲು ಉಭಯ ಕಡೆಯವರು ಒಪ್ಪಿಕೊಂಡರು. ಮಾರುಕಟ್ಟೆ ಪ್ರವೇಶಕ್ಕೆ ಸಂಬಂಧಿಸಿದ ವಿಷಯಗಳ ಸಮಯೋಚಿತ ಪರಿಹಾರಕ್ಕಾಗಿ ವ್ಯವಸ್ಥಿತವಾಗಿ ತೊಡಗಿಸಿಕೊಳ್ಳಲು ಸಹ ಎರಡೂ ಕಡೆಯವರು ಸಮ್ಮತಿಸಿದರು.

ಡಿಜಿಟಲ್ ಮತ್ತು ಹಣಕಾಸು ಸಹಕಾರ

ಮಲೇಷ್ಯಾ-ಭಾರತ ಡಿಜಿಟಲ್ ಕೌನ್ಸಿಲ್ (MIDC) ಸ್ಥಾಪನೆಯನ್ನು ಉಭಯ ನಾಯಕರು ಶ್ಲಾಘಿಸಿದರು. ಇದು ಡಿಜಿಟಲ್ ಸಹಕಾರವನ್ನು ಮುಂದುವರಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಫಿನ್‌ ಟೆಕ್, ಇ-ಆಡಳಿತ, ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಹಾಗೂ ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಹಯೋಗದ ಯೋಜನೆಗಳನ್ನು ಅನ್ವೇಷಿಸಲು ಒಂದು ಪ್ರಮುಖ ವೇದಿಕೆಯಾಗಲಿದೆ ಎಂದು ಅವರು ಗುರುತಿಸಿದರು. MIDC ಯು ದ್ವಿಪಕ್ಷೀಯ ಡಿಜಿಟಲ್ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಮತ್ತು ಉಭಯ ದೇಶಗಳ ಡಿಜಿಟಲ್ ರೂಪಾಂತರದ ಕಾರ್ಯಸೂಚಿಗಳನ್ನು ಬೆಂಬಲಿಸಲು ಒಂದು ವ್ಯೂಹಾತ್ಮಕ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಎರಡೂ ದೇಶಗಳ ನಾಯಕರು ಒತ್ತಿಹೇಳಿದರು.

ದ್ವಿಪಕ್ಷೀಯ ಪಾವತಿ ಸಂಪರ್ಕಗಳನ್ನು ಸ್ಥಾಪಿಸಲು ಎನ್‌ ಪಿ ಸಿ ಐ ಇಂಟರ್ನ್ಯಾಷನಲ್ ಲಿಮಿಟೆಡ್ (NIPL) ಮತ್ತು ಪೇ-ನೆಟ್ ಮಲೇಷ್ಯಾ (PayNet Malaysia) ನಡುವಿನ ಸಹಯೋಗವನ್ನು ನಾಯಕರು ಸ್ವಾಗತಿಸಿದರು. ಈ ಏಕೀಕರಣವು ವ್ಯವಹಾರವನ್ನು ಸುಲಭಗೊಳಿಸಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ ಮತ್ತು ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಸಣ್ಣ ಉದ್ಯಮಿಗಳಿಗೆ ತಡೆರಹಿತ, ಕಡಿಮೆ ವೆಚ್ಚದ ಹಣ ರವಾನೆ ಮತ್ತು ಪಾವತಿ ಪರಿಹಾರಗಳನ್ನು ಒದಗಿಸುತ್ತದೆ. ಇದರಿಂದಾಗಿ ಮಲೇಷ್ಯಾ ಮತ್ತು ಭಾರತದ ನಡುವೆ ಆರ್ಥಿಕ ಮತ್ತು ಜನರ ನಡುವಿನ ಸಂಪರ್ಕವು ಮತ್ತಷ್ಟು ಸುಗಮವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಂಧನ ಮತ್ತು ಸೆಮಿಕಂಡಕ್ಟರ್ ಸಹಕಾರ

ಇಂಧನ ಕ್ಷೇತ್ರದಲ್ಲಿ, ಭಾರತದ ನವೀಕರಿಸಬಹುದಾದ ಇಂಧನ ಮತ್ತು ಹಸಿರು ಹೈಡ್ರೋಜನ್ ವಲಯದಲ್ಲಿ ಪೆಟ್ರೋನಾಸ್ (PETRONAS) ಮತ್ತು ಗೆಂಟಾರಿ (Gentari) ಸಂಸ್ಥೆಗಳು ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ನಾಯಕರು ಗುರುತಿಸಿದರು. ಈ ನಿಟ್ಟಿನಲ್ಲಿ, ಬೃಹತ್ ಪ್ರಮಾಣದ ಸೌರಶಕ್ತಿ ಉಪಕ್ರಮಗಳಲ್ಲಿ ಹೆಚ್ಚಿನ ಸಹಯೋಗಕ್ಕೆ ಇರುವ ವಿಶಾಲ ಅವಕಾಶಗಳನ್ನು ಉಭಯ ನಾಯಕರು ಒತ್ತಿಹೇಳಿದರು. ಇದು ಶುದ್ಧ ಇಂಧನ ಪರಿಹಾರಗಳನ್ನು ಉತ್ತೇಜಿಸಲು ಮತ್ತು ಉಭಯ ದೇಶಗಳ 'ನೆಟ್-ಝೀರೋ' (ನಿವ್ವಳ ಶೂನ್ಯ ಹೊರಸೂಸುವಿಕೆ) ಗುರಿಗಳನ್ನು ತಲುಪಲು ಮಲೇಷ್ಯಾದ ಪರಿಣತಿಯನ್ನು ಬಳಸಿಕೊಳ್ಳಲಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು (ISA) ಸ್ಥಾಪಿಸುವಲ್ಲಿ ಭಾರತದ ಉಪಕ್ರಮವನ್ನು ಮಲೇಷ್ಯಾ ಶ್ಲಾಘಿಸಿತು.

ಜಾಗತಿಕ ತಂತ್ರಜ್ಞಾನದ ಭೂದೃಶ್ಯದಲ್ಲಿ ಸೆಮಿಕಂಡಕ್ಟರ್ ಉದ್ಯಮದ ಕಾರ್ಯತಂತ್ರದ ಮಹತ್ವವನ್ನು ನಾಯಕರು ಒಪ್ಪಿಕೊಂಡರು ಮತ್ತು ಈ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಮನ್ವಯವನ್ನು ಬಲಪಡಿಸುವುದು ಉಭಯ ದೇಶಗಳಿಗೆ ಪ್ರಯೋಜನಕಾರಿ ಎಂದು ಪ್ರತಿಪಾದಿಸಿದರು. ತಾಂತ್ರಿಕ ನಾವೀನ್ಯತೆ, ಉದ್ಯೋಗಿ ಶಕ್ತಿಯ ಅಭಿವೃದ್ಧಿ ಮತ್ತು ಪೂರೈಕೆ ಸರಪಳಿಯ ಸ್ಥಿರತೆಯ ಮೇಲೆ ಗಮನಹರಿಸುವ ಮೂಲಕ, ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸೆಮಿಕಂಡಕ್ಟರ್ ಮೌಲ್ಯದ ಸರಪಳಿಯನ್ನು ಬಲಪಡಿಸುವ ಮಹತ್ವವನ್ನು ಅವರು ಒತ್ತಿಹೇಳಿದರು. IIT-ಮದ್ರಾಸ್ ಗ್ಲೋಬಲ್ ಮತ್ತು ಮಲೇಷ್ಯಾದ ಅಡ್ವಾನ್ಸ್ಡ್ ಸೆಮಿಕಂಡಕ್ಟರ್ ಅಕಾಡೆಮಿ ನಡುವಿನ ಸಹಕಾರ, ಹಾಗೂ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (IESA) ಮತ್ತು ಮಲೇಷ್ಯಾ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ (MSIA) ನಡುವಿನ ಸಹಯೋಗ ಸೇರಿದಂತೆ ಪ್ರಸ್ತುತ ನಡೆಯುತ್ತಿರುವ ಉಪಕ್ರಮಗಳನ್ನು ಪ್ರಧಾನ ಮಂತ್ರಿಗಳು ಶ್ಲಾಘಿಸಿದರು.

ರಕ್ಷಣೆ ಮತ್ತು ಭದ್ರತಾ ಸಹಕಾರ

ನಿಯಮಿತ ವಿನಿಮಯಗಳು, ಭೇಟಿಗಳು, ಸಿಬ್ಬಂದಿ ಮಟ್ಟದ ಮಾತುಕತೆಗಳು, ಜಂಟಿ ಸಮರಾಭ್ಯಾಸಗಳು, ತರಬೇತಿ ಕೋರ್ಸ್‌ಗಳು ಮತ್ತು ರಕ್ಷಣಾ ಉದ್ಯಮದ ಸಹಯೋಗದ ಮೂಲಕ ಮಲೇಷ್ಯಾ ಮತ್ತು ಭಾರತದ ನಡುವೆ ಬೆಳೆದಿರುವ ಸದೃಢ ರಕ್ಷಣಾ ಸಂಬಂಧದ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಮಲೇಷ್ಯಾ-ಭಾರತ ರಕ್ಷಣಾ ಸಹಕಾರ ಸಮಿತಿ (MIDCOM) ಮತ್ತು ಅದರ ಉಪಸಮಿತಿಗಳ ಯಶಸ್ವಿ ಫಲಿತಾಂಶಗಳನ್ನು ಅವರು ಸ್ವಾಗತಿಸಿದರು. ಇದರಲ್ಲಿ ಕಾರ್ಯತಂತ್ರದ ವ್ಯವಹಾರಗಳ ಕಾರ್ಯಕಾರಿ ಗುಂಪು (SAWG) ಮತ್ತು Su-30 ಫೋರಂ ಸ್ಥಾಪನೆಯ ಕುರಿತಾದ ನಿಯಮಾವಳಿಗಳೂ ಸೇರಿವೆ.

ಆಸಿಯಾನ್ ರಕ್ಷಣಾ ಸಚಿವರ ಸಭೆ ಪ್ಲಸ್ (ADMM-Plus) ಚೌಕಟ್ಟಿನಲ್ಲಿ ಭಾರತದ ಸತತ ತೊಡಗಿಸಿಕೊಳ್ಳುವಿಕೆಯನ್ನು ಉಭಯ ನಾಯಕರು ಶ್ಲಾಘಿಸಿದರು. ಅಲ್ಲದೆ, 2024-2027ರ ಅವಧಿಗೆ ಭಯೋತ್ಪಾದನಾ ನಿಗ್ರಹ ಕಾರ್ಯಕಾರಿ ಗುಂಪಿನ ಸಹ-ಅಧ್ಯಕ್ಷತೆಯನ್ನು ಮಲೇಷ್ಯಾದೊಂದಿಗೆ ವಹಿಸಿಕೊಂಡಿರುವುದನ್ನು ಅವರು ಸ್ವಾಗತಿಸಿದರು. 2026ರಲ್ಲಿ ಮಲೇಷ್ಯಾ ಆತಿಥ್ಯ ವಹಿಸಲಿರುವ ಮತ್ತು ಭಾರತ-ಮಲೇಷ್ಯಾ ಸಹ-ಅಧ್ಯಕ್ಷತೆಯಲ್ಲಿ ನಡೆಯಲಿರುವ 'ಭಯೋತ್ಪಾದನಾ ನಿಗ್ರಹ ತಜ್ಞರ ಕಾರ್ಯಕಾರಿ ಗುಂಪಿನ ಟೇಬಲ್-ಟಾಪ್ ವ್ಯಾಯಾಮ'ದಲ್ಲಿ (EWG CT TTX) ಭಾಗವಹಿಸುವಂತೆ ಎಲ್ಲಾ ADMM-Plus ಸದಸ್ಯ ರಾಷ್ಟ್ರಗಳಿಗೆ ನಾಯಕರು ಆಹ್ವಾನ ನೀಡಿದರು.

ಏರೋ ಇಂಡಿಯಾ 2025 ಮತ್ತು ಲಂಕಾವಿ ಅಂತಾರಾಷ್ಟ್ರೀಯ ಕಡಲ ಮತ್ತು ವೈಮಾನಿಕ ಪ್ರದರ್ಶನ (LIMA 2025) ಸೇರಿದಂತೆ ವಿವಿಧ ರಕ್ಷಣಾ ಪ್ರದರ್ಶನಗಳಲ್ಲಿ ಉಭಯ ದೇಶಗಳ ರಕ್ಷಣಾ ನಿಯೋಗಗಳು ಮತ್ತು ಕಂಪನಿಗಳು ನಿಯಮಿತವಾಗಿ ಭಾಗವಹಿಸುತ್ತಿರುವುದನ್ನು ನಾಯಕರು ಈ ಸಂದರ್ಭದಲ್ಲಿ ಗಮನಿಸಿದರು.

ರಕ್ಷಣೆ ಮತ್ತು ಕಡಲ ಸಹಕಾರ

ಭಾರತೀಯ ಸೇನೆ ಮತ್ತು ಮಲೇಷ್ಯಾದ ರಾಯಲ್ ಆರ್ಮಿ ನಡುವೆ 2025ರ ಡಿಸೆಂಬರ್ 05 ರಿಂದ 18 ರವರೆಗೆ ಭಾರತದ ರಾಜಸ್ಥಾನದಲ್ಲಿ ನಡೆದ 5ನೇ ಆವೃತ್ತಿಯ ಜಂಟಿ ಮಿಲಿಟರಿ ವ್ಯಾಯಾಮ 'ಹರಿಮೌ ಶಕ್ತಿ' (Harimau Shakti) ಯ ಯಶಸ್ವಿ ನಿರ್ವಹಣೆಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.

ನಿಯಮಿತ ಸೌಹಾರ್ದ ಭೇಟಿಗಳು ಮತ್ತು ಕಾರ್ಯಾಚರಣೆಯ ನಿಯೋಜನೆಗಳ ಮೂಲಕ ಭಾರತ ಮತ್ತು ಮಲೇಷ್ಯಾ ನಡುವೆ ಬೆಳೆಯುತ್ತಿರುವ ಕಡಲ ಸಹಕಾರವನ್ನು ಪ್ರಧಾನ ಮಂತ್ರಿಗಳು ಉತ್ತೇಜಿಸಿದರು. ಈ ನಿಟ್ಟಿನಲ್ಲಿ, 2025ರ ಅಕ್ಟೋಬರ್‌ ನಲ್ಲಿ ಮಲೇಷ್ಯಾದ ಕೆಮಾಮನ್‌ ಗೆ INS ಸಹ್ಯಾದ್ರಿ ನೀಡಿದ ಭೇಟಿ ಮತ್ತು 2025ರ ಜುಲೈನಲ್ಲಿ ಮಲೇಷ್ಯಾದ ಪೋರ್ಟ್ ಕ್ಲಾಂಗ್‌ ಗೆ ಹೈಡ್ರೋಗ್ರಾಫಿಕ್ ಹಡಗು INS ಸಂಧಾಯಕ್ ನೀಡಿದ ಭೇಟಿಯನ್ನು ಅವರು ಶ್ಲಾಘಿಸಿದರು. 'ಸಮುದ್ರ ಲಕ್ಷ್ಮಣ', ಮಿಲನ್ (MILAN) ಮತ್ತು ಆಸಿಯಾನ್-ಭಾರತ ಕಡಲ ವ್ಯಾಯಾಮ (AIME) ದಂತಹ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ನೌಕಾ ವ್ಯಾಯಾಮಗಳ ಅಡಿಯಲ್ಲಿ ನಡೆಯುತ್ತಿರುವ ನಿಯಮಿತ ನೌಕಾಪಡೆಯ ಸಂವಾದಗಳನ್ನು ನಾಯಕರು ಸ್ವಾಗತಿಸಿದರು.

ಭದ್ರತಾ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ನೆರವು ನೀಡುವ ಕುರಿತು ಚರ್ಚಿಸಲು ವೇದಿಕೆಯಾದ 'ಉದ್ಘಾಟನಾ ಮಲೇಷ್ಯಾ-ಭಾರತ ಭದ್ರತಾ ಸಂವಾದ'ದ ಅಡಿಯಲ್ಲಿ (Inaugural Malaysia-India Security Dialogue) ಉಭಯ ಸರ್ಕಾರಗಳ ನಡುವೆ ಸಹಕಾರ ಸ್ಥಾಪನೆಯಾಗಿರುವುದಕ್ಕೆ ನಾಯಕರು ಸಂತಸ ವ್ಯಕ್ತಪಡಿಸಿದರು.

ಉಭಯ ಪ್ರಧಾನ ಮಂತ್ರಿಗಳು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೂಪದ ಭಯೋತ್ಪಾದನೆಯನ್ನು ನಿಸ್ಸಂದೇಹವಾಗಿ ಮತ್ತು ಬಲವಾಗಿ ಖಂಡಿಸಿದರು. ಭಯೋತ್ಪಾದನೆಯ ವಿರುದ್ಧ 'ಶೂನ್ಯ ಸಹನೆ' (Zero Tolerance) ಇರಬೇಕೆಂದು ಮತ್ತು ಭಯೋತ್ಪಾದನೆಯನ್ನು ಸಮಗ್ರವಾಗಿ ಹಾಗೂ ಸುಸ್ಥಿರವಾಗಿ ಎದುರಿಸಲು ಸಂಘಟಿತ ಅಂತರಾಷ್ಟ್ರೀಯ ಪ್ರಯತ್ನಗಳು ನಡೆಯಬೇಕೆಂದು ಅವರು ಕರೆ ನೀಡಿದರು. ತೀವ್ರಗಾಮಿ ಸಿದ್ಧಾಂತ ಮತ್ತು ಹಿಂಸಾತ್ಮಕ ಉಗ್ರವಾದವನ್ನು ತಡೆಯಲು; ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನು ಮಟ್ಟಹಾಕಲು; ಮಾಹಿತಿ ಮತ್ತು ಜ್ಞಾನ ಹಂಚಿಕೆ, ಉತ್ತಮ ಅಭ್ಯಾಸಗಳ ವಿನಿಮಯ ಹಾಗೂ ಸಾಮರ್ಥ್ಯ ವೃದ್ಧಿಯ ಮೂಲಕ ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ತಡೆಯಲು ಉಭಯ ನಾಯಕರು ಒಪ್ಪಿಕೊಂಡರು. ಭಯೋತ್ಪಾದನೆ ಮತ್ತು ಅಂತಾರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಬಂಧವನ್ನು ಗುರುತಿಸಿದ ನಾಯಕರು, ಮಾಹಿತಿ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಸಂಘಟಿತ ಅಪರಾಧಗಳ ವಿರುದ್ಧ ಸಹಕರಿಸಲು ನಿರ್ಧರಿಸಿದರು. ವಿಶ್ವಸಂಸ್ಥೆ (UN) ಮತ್ತು ಎಫ್.ಎ.ಟಿ.ಎಫ್ (FATF) ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಭಯೋತ್ಪಾದನೆಯನ್ನು ಎದುರಿಸಲು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.

ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ

ಉಭಯ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದನ್ನು ಮತ್ತು ಮಲೇಷ್ಯಾ ತಾಂತ್ರಿಕ ಸಹಕಾರ ಕಾರ್ಯಕ್ರಮ (MTCP) ಹಾಗೂ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದ (ITEC) ಅಡಿಯಲ್ಲಿ ನಡೆಯುತ್ತಿರುವ ಯೋಜನೆಗಳನ್ನು ಉಭಯ ನಾಯಕರು ಗಮನಿಸಿದರು. ಶೈಕ್ಷಣಿಕ ಸಂಸ್ಥೆಗಳ ನಡುವೆ ಹೆಚ್ಚಿನ ವಿದ್ಯಾರ್ಥಿ ಮತ್ತು ಅಧ್ಯಾಪಕರ ವಿನಿಮಯ ಹಾಗೂ ಸಹಕಾರವನ್ನು ಸುಗಮಗೊಳಿಸಲು ಅವರು ಎರಡೂ ಕಡೆಯವರಿಗೆ ಪ್ರೋತ್ಸಾಹ ನೀಡಿದರು. ಭಾರತದ 'ಸ್ಟಡಿ ಇನ್ ಇಂಡಿಯಾ' (Study in India) ಕಾರ್ಯಕ್ರಮದ ಅಡಿಯಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಪ್ರಧಾನಮಂತ್ರಿ ಮೋದಿ ಅವರು ಮಲೇಷ್ಯಾದ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿದರು.

ಉಭಯ ದೇಶಗಳ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ನುರಿತ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸಲು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಹಾಗೂ ತರಬೇತಿ (TVET) ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ಮಹತ್ವವನ್ನು ನಾಯಕರು ಒತ್ತಿಹೇಳಿದರು. ವೃತ್ತಿಪರ ತರಬೇತಿಯನ್ನು ಬಲಪಡಿಸಲು, ಉದ್ಯೋಗಾವಕಾಶಗಳನ್ನು ಉತ್ತೇಜಿಸಲು ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಜಂಟಿ ಉಪಕ್ರಮಗಳು, ಜ್ಞಾನ ಹಂಚಿಕೆ ಮತ್ತು ವಿನಿಮಯ ಕಾರ್ಯಕ್ರಮಗಳಿಗೆ ಅವರು ಉತ್ತೇಜನ ನೀಡಿದರು.

ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಜನರ ನಡುವಿನ ಬಾಂಧವ್ಯ

ಬಲವಾದ ಜನರ ನಡುವಿನ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು, ಉಭಯ ದೇಶಗಳ ನಡುವೆ ಕಾರ್ಮಿಕರು ಮತ್ತು ವೃತ್ತಿಪರರ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸಲು ಉಭಯ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.

ಪ್ರವಾಸೋದ್ಯಮವು ದ್ವಿಪಕ್ಷೀಯ ಸಹಕಾರದ ಪ್ರಮುಖ ಸ್ತಂಭವಾಗಿದೆ ಮತ್ತು ಮಲೇಷ್ಯಾ ಹಾಗೂ ಭಾರತದ ನಡುವಿನ ಜನರ ಬಾಂಧವ್ಯಕ್ಕೆ ಪ್ರಮುಖ ಚಾಲಕಶಕ್ತಿಯಾಗಿದೆ ಎಂದು ನಾಯಕರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಭಾರತವು ಮಲೇಷ್ಯಾದ 'ವಿಸಿಟ್ ಮಲೇಷ್ಯಾ 2026' (Visit Malaysia 2026) ಅಭಿಯಾನವನ್ನು ಸ್ವಾಗತಿಸಿದರೆ, ಮಲೇಷ್ಯಾವು ಭಾರತದ 'ಇನ್‌ಕ್ರೆಡಿಬಲ್ ಇಂಡಿಯಾ' (Incredible India) ಪ್ರವಾಸೋದ್ಯಮ ಅಭಿಯಾನವನ್ನು ಶ್ಲಾಘಿಸಿತು. ಆರ್ಥಿಕ ಬೆಳವಣಿಗೆ ಮತ್ತು ಪರಸ್ಪರ ತಿಳುವಳಿಕೆಯನ್ನು ಬೆಂಬಲಿಸುವಲ್ಲಿ ಸುಸ್ಥಿರ ಮತ್ತು ಒಳಗೊಳ್ಳುವ ಪ್ರವಾಸೋದ್ಯಮದ ಮಹತ್ವವನ್ನು ಎರಡೂ ಕಡೆಯವರು ಒತ್ತಿಹೇಳಿದರು. ಪ್ರವಾಸೋದ್ಯಮ ಸಹಕಾರವನ್ನು ಮತ್ತಷ್ಟು ಗಾಢಗೊಳಿಸಲು ಮತ್ತು ಉಭಯ ದೇಶಗಳ ನಡುವೆ ಪ್ರವಾಸಿಗರ ಸಂಚಾರವನ್ನು ಹೆಚ್ಚಿಸಲು ನಾಯಕರು ತಮ್ಮ ಹಂಚಿಕೆಯ ಬದ್ಧತೆಯನ್ನು ವ್ಯಕ್ತಪಡಿಸಿದರು.

ಕ್ರಿಯಾಶೀಲವಾದ ಜನರ ನಡುವಿನ ಬಾಂಧವ್ಯವನ್ನು ಗುರುತಿಸಿದ ನಾಯಕರು, ಪ್ರವಾಸಿಗರ ಆಗಮನ ಮತ್ತು ವ್ಯಾಪಾರ ಪ್ರವಾಸಗಳನ್ನು ಉತ್ತೇಜಿಸಿರುವ ಪ್ರಸ್ತುತ ನಡೆಯುತ್ತಿರುವ ವೀಸಾ ಉದಾರೀಕರಣ ಪ್ರಕ್ರಿಯೆಯನ್ನು ಸ್ವಾಗತಿಸಿದರು.

ಉಭಯ ನಾಯಕರು ಪರಸ್ಪರ ನಂಬಿಕೆ, ಪರಸ್ಪರ ಪ್ರಯೋಜನ ಮತ್ತು ಪರಸ್ಪರ ಲಾಭದಾಯಕ ಸಹಕಾರದ ಮನೋಭಾವದೊಂದಿಗೆ ಮಲೇಷ್ಯಾ ಮತ್ತು ಭಾರತದ ನಡುವಿನ ವಾಯು ಸಂಪರ್ಕವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಯಾಣಿಕರ ಬೇಡಿಕೆಯಲ್ಲಿನ ನಿರಂತರ ಬೆಳವಣಿಗೆ ಮತ್ತು ಪ್ರವಾಸೋದ್ಯಮ, ವ್ಯಾಪಾರ ಹಾಗೂ ಜನರ ನಡುವಿನ ವಿನಿಮಯಕ್ಕಾಗಿ ವರ್ಧಿತ ಸಂಪರ್ಕದ ಪ್ರಾಮುಖ್ಯತೆಯನ್ನು ಗುರುತಿಸಿ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸಹಕಾರವನ್ನು ಇನ್ನಷ್ಟು ಆಳಗೊಳಿಸಲು ಉಭಯ ಸರ್ಕಾರಗಳು ಸಮ್ಮತಿಸಿದವು.

ಈ ಸಂದರ್ಭದಲ್ಲಿ, ಅಸ್ತಿತ್ವದಲ್ಲಿರುವ ವಾಯು ಸಂಚಾರ ಹಕ್ಕುಗಳನ್ನು (Air traffic rights) ಮತ್ತಷ್ಟು ಹೆಚ್ಚಿಸಲು ಮಲೇಷ್ಯಾ ಕಡೆಯಿಂದ ಪ್ರಸ್ತಾವನೆ ಸಲ್ಲಿಸಲಾಯಿತು. ಭಾರತವು ಈ ಮನವಿಯನ್ನು ಗಮನಿಸಿತು.

ಕೌಲಾಲಂಪುರದ ಪ್ರತಿಷ್ಠಿತ ಮಲಯಾ ವಿಶ್ವವಿದ್ಯಾಲಯದಲ್ಲಿ (UM) 'ಇಂಡಿಯನ್ ಸ್ಟಡೀಸ್' ವಿಭಾಗದ ಅಡಿಯಲ್ಲಿ 'ತಿರುವಳ್ಳುವರ್ ಪೀಠ' ಕಾರ್ಯಾರಂಭ ಮಾಡಿರುವುದನ್ನು ಉಭಯ ನಾಯಕರು ಶ್ಲಾಘಿಸಿದರು ಮತ್ತು ಮಲಯಾ ವಿಶ್ವವಿದ್ಯಾಲಯದಲ್ಲಿ 'ತಿರುವಳ್ಳುವರ್ ಕೇಂದ್ರ' ಸ್ಥಾಪನೆಯನ್ನು ಸ್ವಾಗತಿಸಿದರು. ಮಲೇಷ್ಯಾ ನಾಗರಿಕರಿಗಾಗಿ 'ತಿರುವಳ್ಳುವರ್ ವಿದ್ಯಾರ್ಥಿವೇತನ' ಘೋಷಣೆಯನ್ನು ಪ್ರಧಾನಮಂತ್ರಿ ಅನ್ವರ್ ಅವರು ಸ್ವಾಗತಿಸಿದರು.

ಆರೋಗ್ಯ ರಕ್ಷಣೆ ಸಹಕಾರ

ಆರೋಗ್ಯ ರಕ್ಷಣೆ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿನ ಪಾಲುದಾರಿಕೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಈ ವಲಯದಲ್ಲಿನ ನಿರ್ಣಾಯಕ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಆರೋಗ್ಯ ಉಪಕ್ರಮಗಳನ್ನು ಅನ್ವೇಷಿಸಲು ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದರು.

ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ITEC) ಕಾರ್ಯಕ್ರಮದ ಅಡಿಯಲ್ಲಿ ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ (TIM) ತಜ್ಞರನ್ನು ಮಲೇಷ್ಯಾಕ್ಕೆ ನಿಯೋಜಿಸಲು ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಲು ಮಲೇಷ್ಯಾ ಬದ್ಧವಾಗಿದ್ದು, ಈ ಬಗ್ಗೆ ಭಾರತದೊಂದಿಗೆ ಸಕ್ರಿಯ ಸಮಾಲೋಚನೆ ನಡೆಸುತ್ತಿದೆ. ಇದು ಆರೋಗ್ಯ ಸಚಿವಾಲಯದ ಆಯ್ದ ಆಸ್ಪತ್ರೆಗಳಲ್ಲಿ ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಸೇವೆಗಳನ್ನು ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ. ಸಮಗ್ರ ಮತ್ತು ಸಮತೋಲಿತ ಆರೋಗ್ಯ ಮಾದರಿಯತ್ತ ಸಾಗುತ್ತಿರುವ ನಮಗೆ, ಇದು ಅಲೋಪತಿ ವೈದ್ಯಕೀಯ ಪದ್ಧತಿಗೆ ಪೂರಕವಾಗಿರಲಿದೆ.

ಕೈಗೆಟುಕುವ ದರದ ಆರೋಗ್ಯ ಸೇವೆ ಮತ್ತು ಔಷಧಗಳ ಕ್ಷೇತ್ರದಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರವನ್ನು ನಾಯಕರು ಗಮನಿಸಿದರು. ಔಷಧ ನಿಯಂತ್ರಣ, ಫಾರ್ಮಾಕೋಪಿಯಾದ (Pharmacopoeia) ಮಾನ್ಯತೆ ಮತ್ತು ನರ್ಸಿಂಗ್ ಸೇವೆಗಳ ಮಾನ್ಯತೆ ಕ್ಷೇತ್ರದಲ್ಲಿನ ಸಹಕಾರದ ಕುರಿತು ಎರಡೂ ಕಡೆಯವರು ನಡೆಸುತ್ತಿರುವ ಚರ್ಚೆಗಳನ್ನು ಅವರು ಸ್ವಾಗತಿಸಿದರು.

ಹೋಮಿಯೋಪತಿ ಕ್ಷೇತ್ರದಲ್ಲಿ ಸಂಶೋಧನಾ ಸಹಯೋಗ, ತರಬೇತಿ ಮತ್ತು ಶೈಕ್ಷಣಿಕ ವಿನಿಮಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಅಕ್ಟೋಬರ್ 2025ರಲ್ಲಿ ಭಾರತದ ಹೋಮಿಯೋಪತಿ ಸಂಶೋಧನಾ ಕೇಂದ್ರ ಮಂಡಳಿ (CCRH) ಮತ್ತು ಮಲೇಷ್ಯಾದ ಸೈಬರ್ಜಯಾ ವಿಶ್ವವಿದ್ಯಾಲಯ (UoC) ನಡುವೆ ತಿಳುವಳಿಕೆ ಪತ್ರಕ್ಕೆ (MoU) ಸಹಿ ಹಾಕಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು.

ಸುಸ್ಥಿರ ಅಭಿವೃದ್ಧಿಯಲ್ಲಿ ಸಹಕಾರ

ಜೀವವೈವಿಧ್ಯದ ಸಂರಕ್ಷಣೆಗೆ ತಮ್ಮ ಹಂಚಿಕೆಯ ಸಮರ್ಪಣಾ ಮನೋಭಾವವನ್ನು ನಾಯಕರು ಒತ್ತಿಹೇಳಿದರು ಮತ್ತು ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ (IBCA) ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಮಲೇಷ್ಯಾದ ಪಾತ್ರವನ್ನು ಶ್ಲಾಘಿಸಿದರು. ಸಂಶೋಧನೆ ಮತ್ತು ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ತಂತ್ರಜ್ಞಾನ ವರ್ಗಾವಣೆ ಮತ್ತು ಉತ್ತಮ ಪದ್ಧತಿಗಳ ಹಂಚಿಕೆಯಂತಹ ಕ್ಷೇತ್ರಗಳಲ್ಲಿ ವರ್ಧಿತ ದ್ವಿಪಕ್ಷೀಯ ಸಹಕಾರದ ಮೂಲಕ ಮಲೇಷ್ಯಾ ಮತ್ತು ಭಾರತ ಸೇರಿದಂತೆ ವಿಶ್ವದ ಬಿಗ್ ಕ್ಯಾಟ್ ಪ್ರಭೇದಗಳನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.

ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳಿಗೆ ಎರಡೂ ದೇಶಗಳಿಗಿರುವ ಸಂವೇದನಾಶೀಲತೆಯನ್ನು ಗುರುತಿಸಿದ ನಾಯಕರು, ವಿಕೋಪ ನಿರ್ವಹಣಾ ಸಹಕಾರವನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು. ಇದು ಪರಿಣತಿಯ ಹಂಚಿಕೆ, ವಿಕೋಪ ನಿರ್ವಹಣೆ ಮತ್ತು ಹುಡುಕಾಟ ಹಾಗೂ ರಕ್ಷಣಾ ತಂತ್ರಗಳಲ್ಲಿ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಜಂಟಿ ವ್ಯಾಯಾಮಗಳನ್ನು ನಡೆಸುವುದನ್ನು ಒಳಗೊಂಡಿರುತ್ತದೆ. ಇಂತಹ ಪ್ರಯತ್ನಗಳನ್ನು ಉಭಯ ದೇಶಗಳ ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರಗಳ ನಡುವಿನ ವಿಕೋಪ ನಿರ್ವಹಣಾ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದದ (MoU) ಅಡಿಯಲ್ಲಿ ಮುಂದುವರಿಸಲಾಗುವುದು. ವಿಕೋಪ ಅಪಾಯ ತಗ್ಗಿಸುವಿಕೆ ಮತ್ತು ಚೇತೋಹಾರಿತ್ವದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವಲ್ಲಿ, ವಿಕೋಪ ಚೇತೋಹಾರಿ ಮೂಲಸೌಕರ್ಯ ಒಕ್ಕೂಟ (CDRI) ಸೇರಿದಂತೆ ಸಂಬಂಧಿತ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಉಪಕ್ರಮಗಳ ಪ್ರಾಮುಖ್ಯತೆಯನ್ನು ನಾಯಕರು ಒಪ್ಪಿಕೊಂಡರು.

ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರ

ಉಭಯ ನಾಯಕರು ಪ್ರಚಲಿತ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಸಂಘರ್ಷಗಳನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿಯುತವಾಗಿ ಪರಿಹರಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.

2026ರ ಬ್ರಿಕ್ಸ್ (BRICS) ಅಧ್ಯಕ್ಷತೆಯನ್ನು ಭಾರತ ವಹಿಸಿಕೊಳ್ಳುತ್ತಿರುವುದನ್ನು ಮಲೇಷ್ಯಾ ಸ್ವಾಗತಿಸಿತು. ಅದೇ ರೀತಿ, ಬ್ರಿಕ್ಸ್ ಪಾಲುದಾರ ರಾಷ್ಟ್ರವಾಗಿ ಮಲೇಷ್ಯಾದ ಪಾತ್ರವನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ಭಾರತ ಪುನರುಚ್ಚರಿಸಿತು ಮತ್ತು ಬ್ರಿಕ್ಸ್‌ ನ ಪೂರ್ಣ ಪ್ರಮಾಣದ ಸದಸ್ಯರಾಗಬೇಕೆಂಬ ಮಲೇಷ್ಯಾದ ಆಕಾಂಕ್ಷೆಯನ್ನು ಗಮನಿಸಿತು. ಈ ಸಹಕಾರವು ಹೆಚ್ಚು ಸಮತೋಲಿತ ಮತ್ತು ಪ್ರಾತಿನಿಧಿಕ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ವ್ಯೂಹಾತ್ಮಕ ಮೈಲಿಗಲ್ಲು ಎಂದು ಉಭಯ ನಾಯಕರು ಗುರುತಿಸಿದರು. ಇಂತಹ ತೊಡಗಿಸಿಕೊಳ್ಳುವಿಕೆಗಳು ಸಮಾನ ಜಾಗತಿಕ ಆಡಳಿತ ಮತ್ತು ಸುಸ್ಥಿರ ಅಭಿವೃದ್ಧಿಗೆ ರಚನಾತ್ಮಕವಾಗಿ ಕೊಡುಗೆ ನೀಡಲು ಆರ್ಥಿಕತೆಗಳಿಗೆ ಪ್ರಮುಖ ವೇದಿಕೆಗಳನ್ನು ಒದಗಿಸುತ್ತವೆ ಎಂಬ ಅಭಿಪ್ರಾಯವನ್ನು ಇಬ್ಬರೂ ಹಂಚಿಕೊಂಡರು.

ವಿಶ್ವಸಂಸ್ಥೆ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರವನ್ನು ಬಲಪಡಿಸಲು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಸುಧಾರಣೆಯನ್ನು ಬೆಂಬಲಿಸಲು ಉಭಯ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹೆಚ್ಚು ಪ್ರಾತಿನಿಧಿಕವಾಗಿ ಮಾಡುವ ಉದ್ದೇಶದೊಂದಿಗೆ, ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸುವ ಬಹುಪಕ್ಷೀಯತೆಯನ್ನು ಹೆಚ್ಚಿಸಲು ಜೊತೆಯಾಗಿ ಕೆಲಸ ಮಾಡುವುದಾಗಿ ಅವರು ಪ್ರತಿಜ್ಞೆ ಮಾಡಿದರು. ಬಹುಪಕ್ಷೀಯ ವೇದಿಕೆಗಳಲ್ಲಿ ಪರಸ್ಪರ ಬೆಂಬಲದ ಬಲವಾದ ಮನೋಭಾವವನ್ನು ಪ್ರತಿಬಿಂಬಿಸಿದ ನಾಯಕರು, ವಿವಿಧ ಅಂತಾರಾಷ್ಟ್ರೀಯ ಉಮೇದುವಾರಿಕೆಗಳಿಗೆ ಪರಸ್ಪರ ಬೆಂಬಲ ನೀಡುವ ಬಗ್ಗೆ ಚರ್ಚಿಸಿದರು. ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಮಲೇಷ್ಯಾ ನೀಡಿದ ಬೆಂಬಲವನ್ನು ಭಾರತವು ಆಳವಾಗಿ ಶ್ಲಾಘಿಸಿತು.

ಭ್ರಷ್ಟಾಚಾರ ನಿರ್ಮೂಲನೆ ಮತ್ತು ತಡೆಗಟ್ಟುವಿಕೆಯಲ್ಲಿ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದ (MoU); ವಿಕೋಪ ನಿರ್ವಹಣೆ ಕುರಿತಾದ ತಿಳುವಳಿಕಾ ಒಪ್ಪಂದ; ಮಲೇಷ್ಯಾದಲ್ಲಿ ವಿಮಾದಾರರಾಗಿರುವ ಭಾರತೀಯ ನಾಗರಿಕರಿಗಾಗಿ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಉತ್ತೇಜಿಸುವ ಸಹಕಾರದ ಕುರಿತಾದ ಎಂ.ಒ.ಸಿ (MoC); ಹಾಗೂ ಶ್ರವ್ಯ-ದೃಶ್ಯ ಸಹ-ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಸೆಮಿಕಂಡಕ್ಟರ್‌ ಗಳು; ಆರೋಗ್ಯ ರಕ್ಷಣೆ; ರಾಷ್ಟ್ರೀಯ ಭದ್ರತೆ; ಮತ್ತು ವೃತ್ತಿಪರ ಶಿಕ್ಷಣ ಹಾಗೂ ತರಬೇತಿ (TVET) ಕ್ಷೇತ್ರಗಳಲ್ಲಿ ಮಲೇಷ್ಯಾ ಮತ್ತು ಭಾರತದ ನಡುವಿನ ಪತ್ರಗಳ ವಿನಿಮಯಕ್ಕೂ ನಾಯಕರು ಸಾಕ್ಷಿಯಾದರು. ಇದರ ಜೊತೆಗೆ, ವಿಶ್ವಸಂಸ್ಥೆಯ ಶಾಂತಿಪಾಲನಾ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದದ ನವೀಕರಣದ ಕುರಿತಾದ ಪತ್ರಗಳ ವಿನಿಮಯ (EoL) ಮತ್ತು ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ (IBCA) ಚೌಕಟ್ಟಿನ ಒಪ್ಪಂದಕ್ಕೆ ಮಲೇಷ್ಯಾದ ಅನುಮೋದನೆಯನ್ನು ನಾಯಕರು ಗಮನಿಸಿದರು.

ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದ (UNCLOS) 1982 ರಲ್ಲಿ ಪ್ರತಿಬಿಂಬಿಸಿದಂತೆ, ಅಂತಾರಾಷ್ಟ್ರೀಯ ಕಾನೂನಿನ ತತ್ವಗಳ ಆಧಾರದ ಮೇಲೆ ನೌಕಾಯಾನ ಮತ್ತು ವಿಮಾನ ಹಾರಾಟದ ಸ್ವಾತಂತ್ರ್ಯ ಹಾಗೂ ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯವನ್ನು ಗೌರವಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. UNCLOS 1982 ಸೇರಿದಂತೆ ಅಂತಾರಾಷ್ಟ್ರೀಯ ಕಾನೂನಿನ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ತತ್ವಗಳಿಗೆ ಅನುಗುಣವಾಗಿ ಶಾಂತಿಯುತವಾಗಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ಉಭಯ ನಾಯಕರು ಎಲ್ಲಾ ಪಕ್ಷಗಳಿಗೂ ಆಗ್ರಹಿಸಿದರು.

ಆಸಿಯಾನ್ ಏಕತೆ ಮತ್ತು ಆಸಿಯಾನ್ ಕೇಂದ್ರಿತ ನೀತಿಗೆ ಭಾರತವು ನೀಡುತ್ತಿರುವ ಪೂರ್ಣ ಮತ್ತು ನಿರಂತರ ಬೆಂಬಲವನ್ನು ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಸ್ವಾಗತಿಸಿದರು. 2025 ರಲ್ಲಿ ಮಲೇಷ್ಯಾ ಯಶಸ್ವಿಯಾಗಿ ಆಸಿಯಾನ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಕ್ಕಾಗಿ ಪ್ರಧಾನ ಮಂತ್ರಿ ಮೋದಿಯವರು ಶ್ಲಾಘಿಸಿದರು ಮತ್ತು ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಜಂಟಿಯಾಗಿ ಬಲಪಡಿಸಲು ಬೆಂಬಲ ನೀಡಿದ ಮಲೇಷ್ಯಾ ಮತ್ತು ಇತರ ಆಸಿಯಾನ್ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿದರು.

ಇಬ್ಬರೂ ನಾಯಕರು ಮುಕ್ತ, ಅಡೆತಡೆಯಿಲ್ಲದ, ನಿಯಮ-ಆಧಾರಿತ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಅನ್ನು ಉತ್ತೇಜಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. 'ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಇಂಡೋ-ಪೆಸಿಫಿಕ್ ಕುರಿತಾದ ಆಸಿಯಾನ್ ದೃಷ್ಟಿಕೋನ (AOIP) ದಲ್ಲಿ ಸಹಕಾರದ ಕುರಿತಾದ ಆಸಿಯಾನ್-ಭಾರತ ಜಂಟಿ ಹೇಳಿಕೆ'ಯನ್ನು ಅನುಷ್ಠಾನಗೊಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸುವುದನ್ನು ಉಭಯ ಕಡೆಯವರು ಸ್ವಾಗತಿಸಿದರು. ಇದು AOIP ಮತ್ತು ಭಾರತದ ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ (IPOI) ನಡುವಿನ ವರ್ಧಿತ ಸಹಕಾರದ ಮೂಲಕ, AOIP ಯ ಸಹಕಾರದ ಕ್ಷೇತ್ರಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಉಪಕ್ರಮಗಳನ್ನು ಒಳಗೊಂಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭೇಟಿಯ ಸಮಯದಲ್ಲಿ ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಮತ್ತು ಉದಾರ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಮತ್ತು ಮಲೇಷ್ಯಾದ ಜನತೆಗೆ ಅಪಾರ ಕೃತಜ್ಞತೆಗಳನ್ನು ಅರ್ಪಿಸಿದರು. ಪ್ರಧಾನಮಂತ್ರಿ ಮೋದಿಯವರು ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವಂತೆ ಆತ್ಮೀಯ ಆಹ್ವಾನ ನೀಡಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Sanand 2.0's swift semicon wave accelerates India's chip ambitions

Media Coverage

Sanand 2.0's swift semicon wave accelerates India's chip ambitions
NM on the go

Nm on the go

Always be the first to hear from the PM. Get the App Now!
...
Prime Minister congratulates successful candidates of Civil Services Examination, 2025
March 06, 2026

The Prime Minister, Shri Narendra Modi has congratulated all those who have successfully cleared the Civil Services Examination, 2025. He said that their dedication, perseverance and hard work have enabled them to achieve this significant milestone.

The Prime Minister noted that clearing the Civil Services Examination marks the beginning of an important journey of public service. He wished the successful candidates the very best as they embark on the path of serving the nation and fulfilling the aspirations of the people.

The Prime Minister also conveyed his message to those who may not have secured the desired outcome in the examination. He acknowledged that such moments can be difficult, but emphasised that this is only one step in a larger journey.

Highlighting that many opportunities lie ahead, both in future examinations and in the many avenues through in which individuals can contribute to the nation, the Prime Minister extended his best wishes to them for the road ahead.

The Prime Minister wrote on X;

“Congratulations to all those who have successfully cleared the Civil Services Examination, 2025. Their dedication, perseverance and hard work have led to this significant milestone.

Wishing them the very best as they embark on a journey of serving the nation and fulfilling the aspirations of the people.”

“To those who may not have secured the desired outcome in the Civil Services Examination, I understand that such moments can be difficult. However, this is only one step in a larger journey. Many opportunities lie ahead, both in future examinations and in the many avenues through which you can contribute to our nation. My best wishes for the road ahead.”