ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2025-26 ರಿಂದ 2028-29 ರವರೆಗೆ ನಾಲ್ಕು ವರ್ಷಗಳ ಅವಧಿಗೆ (2025-26 ರ ಹಣಕಾಸು ವರ್ಷದಿಂದ ಪ್ರತಿ ವರ್ಷ 500 ಕೋಟಿ ರೂ.) 2000 ಕೋಟಿ ರೂ. ವೆಚ್ಚದ "ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್ ಸಿ ಡಿ ಸಿ) ಕ್ಕೆ ಅನುದಾನ" ಎಂಬ ಕೇಂದ್ರ ವಲಯ ಯೋಜನೆಗೆ  ಅನುಮೋದನೆ ನೀಡಿದೆ.

2025-26ನೇ ಹಣಕಾಸು ವರ್ಷದಿಂದ 2028-29ನೇ ಹಣಕಾಸು ವರ್ಷದವರೆಗೆ ಎನ್ ಸಿ ಡಿ ಸಿ ಗೆ 2000 ಕೋಟಿ ರೂ.ಗಳ ಅನುದಾನ ನೆರವಿನ ಆಧಾರದ ಮೇಲೆ, ಎನ್ ಸಿ ಡಿ ಸಿ ನಾಲ್ಕು ವರ್ಷಗಳ ಅವಧಿಯಲ್ಲಿ ಮುಕ್ತ ಮಾರುಕಟ್ಟೆಯಿಂದ 20,000 ಕೋಟಿ ರೂ.ಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಈ ಮೊತ್ತವನ್ನು ಎನ್ ಸಿ ಡಿ ಸಿ ಹೊಸ ಯೋಜನೆಗಳು/ಘಟಕಗಳ ವಿಸ್ತರಣೆ ಮತ್ತು ಕಾರ್ಯನಿರತ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಸಹಕಾರಿ ಸಂಸ್ಥೆಗಳಿಗೆ ಸಾಲಗಳನ್ನು ಒದಗಿಸಲು ಬಳಸುತ್ತದೆ.

ಹಣಕಾಸಿನ ಪರಿಣಾಮ:

ಎನ್ ಸಿ ಡಿ ಸಿ ಗೆ 2000 ಕೋಟಿ ರೂ.ಗಳ (2025-26ನೇ ಹಣಕಾಸು ವರ್ಷದಿಂದ 2028-29ನೇ ಹಣಕಾಸು ವರ್ಷದವರೆಗೆ ಪ್ರತಿ ವರ್ಷ 500 ಕೋಟಿ ರೂ.) ಅನುದಾನವು ಭಾರತ ಸರ್ಕಾರದಿಂದ ಬಜೆಟ್ ಬೆಂಬಲವಾಗಿರುತ್ತದೆ. 2025-26ನೇ ಹಣಕಾಸು ವರ್ಷದಿಂದ 2028-29ನೇ ಹಣಕಾಸು ವರ್ಷದವರೆಗೆ ಎನ್ ಸಿ ಡಿ ಸಿ ಗೆ 2000 ಕೋಟಿ ರೂ.ಗಳ ಅನುದಾನದ ಆಧಾರದ ಮೇಲೆ, ಎನ್ ಸಿ ಡಿ ಸಿ ನಾಲ್ಕು ವರ್ಷಗಳ ಅವಧಿಯಲ್ಲಿ ಮುಕ್ತ ಮಾರುಕಟ್ಟೆಯಿಂದ 20,000 ಕೋಟಿ ರೂ.ಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.

ಪ್ರಯೋಜನಗಳು:

ದೇಶಾದ್ಯಂತ ಡೈರಿ, ಜಾನುವಾರು, ಮೀನುಗಾರಿಕೆ, ಸಕ್ಕರೆ, ಜವಳಿ, ಆಹಾರ ಸಂಸ್ಕರಣೆ, ಸಂಗ್ರಹಣೆ ಮತ್ತು ಶೈತ್ಯಾಗಾರಗಳಂತಹ ವಿವಿಧ ವಲಯಗಳ 13,288 ಸಹಕಾರಿ ಸಂಘಗಳ ಸುಮಾರು 2.9 ಕೋಟಿ ಸದಸ್ಯರು; ಕಾರ್ಮಿಕರು ಮತ್ತು ಮಹಿಳಾ ನೇತೃತ್ವದ ಸಹಕಾರಿ ಸಂಸ್ಥೆಗಳು ಇದರ ಪ್ರಯೋಜನ ಪಡೆಯುವ ಸಾಧ್ಯತೆಯಿದೆ.

ಅನುಷ್ಠಾನ ತಂತ್ರ ಮತ್ತು ಗುರಿಗಳು:

(i) ಈ ಯೋಜನೆಯ ಅನುಷ್ಠಾನಕ್ಕಾಗಿ ಎನ್ ಸಿ ಡಿ ಸಿ ಕಾರ್ಯನಿರ್ವಾಹಕ ಸಂಸ್ಥೆಯಾಗಿದ್ದು, ವಿತರಣೆ, ಅನುಸರಣೆ, ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ಮತ್ತು ನಿಧಿಯಿಂದ ವಿತರಿಸಲಾದ ಸಾಲದ ವಸೂಲಿ ಉದ್ದೇಶವನ್ನು ಹೊಂದಿದೆ.

(ii) ಎನ್ ಸಿ ಡಿ ಸಿ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸರ್ಕಾರದ ಮೂಲಕ ಅಥವಾ ನೇರವಾಗಿ ಸಹಕಾರಿ ಸಂಸ್ಥೆಗಳಿಗೆ ಸಾಲಗಳನ್ನು ಎನ್ ಸಿ ಡಿ ಸಿ ಒದಗಿಸುತ್ತದೆ. ಎನ್ ಸಿ ಡಿ ಸಿ ಯ ನೇರ ಹಣಕಾಸು ಮಾರ್ಗಸೂಚಿಗಳ ಮಾನದಂಡಗಳನ್ನು ಪೂರೈಸುವ ಸಹಕಾರಿ ಸಂಸ್ಥೆಗಳನ್ನು ಸ್ವೀಕಾರಾರ್ಹ ಭದ್ರತೆ ಅಥವಾ ರಾಜ್ಯ ಸರ್ಕಾರದ ಖಾತರಿಯ ಮೇಲೆ ನೇರವಾಗಿ ಹಣಕಾಸಿನ ಸಹಾಯಕ್ಕಾಗಿ ಪರಿಗಣಿಸಲಾಗುತ್ತದೆ.

(iii) ಎನ್ ಸಿ ಡಿ ಸಿ ಸಹಕಾರಿ ಸಂಸ್ಥೆಗಳಿಗೆ ಸಾಲಗಳನ್ನು ಒದಗಿಸುತ್ತದೆ, ವಿವಿಧ ವಲಯಗಳಿಗೆ ಯೋಜನಾ ಸೌಲಭ್ಯಗಳ ಸ್ಥಾಪನೆ/ಆಧುನೀಕರಣ/ತಂತ್ರಜ್ಞಾನ ನವೀಕರಣ/ವಿಸ್ತರಣೆಗಾಗಿ ದೀರ್ಘಾವಧಿಯ ಸಾಲ ಮತ್ತು ತಮ್ಮ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ಮತ್ತು ಲಾಭದಾಯಕವಾಗಿ ನಡೆಸಲು ಕಾರ್ಯಾಚರಣೆಯ ಬಂಡವಾಳವನ್ನು ಒದಗಿಸುತ್ತದೆ.

ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪರಿಣಾಮ:

i. ಈ ಸಹಕಾರಿ ಸಂಸ್ಥೆಗಳಿಗೆ ಒದಗಿಸಲಾದ ನಿಧಿಗಳು ಆದಾಯ ಉತ್ಪಾದಿಸುವ ಬಂಡವಾಳ ಸ್ವತ್ತುಗಳ ಸೃಷ್ಟಿಗೆ ಕಾರಣವಾಗುತ್ತವೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಕಾರ್ಯಾಚರಣೆ ಬಂಡವಾಳದ ರೂಪದಲ್ಲಿ ಅಗತ್ಯವಾದ ಹಣಕಾಸು ಒದಗಿಸುತ್ತವೆ.

ii. ಆರ್ಥಿಕ ಪ್ರಯೋಜನಗಳ ಜೊತೆಗೆ, ಪ್ರಜಾಪ್ರಭುತ್ವ, ಸಮಾನತೆ ಮತ್ತು ಸಮುದಾಯ ಕಾಳಜಿ ತತ್ವಗಳ ಮೂಲಕ ಸಹಕಾರಿ ಸಂಸ್ಥೆಗಳು ಸಾಮಾಜಿಕ-ಆರ್ಥಿಕ ಅಂತರವನ್ನು ಕಡಿಮೆ ಮಾಡಲು ಮತ್ತು ಕಾರ್ಮಿಕಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅತ್ಯಗತ್ಯ ಸಾಧನವಾಗಿದೆ.

iii. ಸಾಲಗಳ ಲಭ್ಯತೆಯು ಸಹಕಾರಿ ಸಂಸ್ಥೆಗಳಿಗೆ ಅವುಗಳ ಸಾಮರ್ಥ್ಯ ವರ್ಧನೆ, ಆಧುನೀಕರಣ, ಚಟುವಟಿಕೆಗಳ ವೈವಿಧ್ಯೀಕರಣ, ಲಾಭದಾಯಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ, ರೈತ ಸದಸ್ಯರ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ.

iv. ಹೆಚ್ಚುವರಿಯಾಗಿ, ಮೂಲಸೌಕರ್ಯ ಅಭಿವೃದ್ಧಿಗಾಗಿ ಅವಧಿ ಸಾಲಗಳು ವಿವಿಧ ಕೌಶಲ್ಯ ಮಟ್ಟಗಳಲ್ಲಿ ವ್ಯಾಪಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.

ಹಿನ್ನೆಲೆ:

ಸಹಕಾರಿ ವಲಯವು ಭಾರತದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಸಹಕಾರಿ ಸಂಸ್ಥೆಗಳು ಗ್ರಾಮೀಣ ವಲಯದಲ್ಲಿ ಸಾಮಾಜಿಕ-ಆರ್ಥಿಕ ಉನ್ನತಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಹಕಾರಿ ವಲಯವು ದೇಶದ ಎಲ್ಲಾ ಉತ್ಪಾದನಾ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡುತ್ತದೆ. ಭಾರತದಲ್ಲಿ ಸಹಕಾರಿ ಸಂಸ್ಥೆಗಳು ಸಾಲ ಮತ್ತು ಬ್ಯಾಂಕಿಂಗ್, ರಸಗೊಬ್ಬರಗಳು, ಸಕ್ಕರೆ, ಡೈರಿ, ಮಾರುಕಟ್ಟೆ, ಗ್ರಾಹಕ ಸರಕುಗಳು, ಕೈಮಗ್ಗ, ಕರಕುಶಲ ವಸ್ತುಗಳು, ಮೀನುಗಾರಿಕೆ, ವಸತಿ ಇತ್ಯಾದಿಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಚಟುವಟಿಕೆಗಳನ್ನು ಒಳಗೊಂಡಿವೆ. ಭಾರತದಲ್ಲಿ 29 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ 8.25 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳಿವೆ ಮತ್ತು ಶೇ. 94 ರಷ್ಟು ರೈತರು ಒಂದಲ್ಲ ಒಂದು ರೂಪದಲ್ಲಿ ಸಹಕಾರಿ ಸಂಘಗಳೊಂದಿಗೆ ಸಂಬಂಧ ಹೊಂದಿದ್ದಾರೆ.

ಗ್ರಾಮೀಣ ಆರ್ಥಿಕತೆಗೆ ಅವುಗಳ ಗಮನಾರ್ಹ ಸಾಮಾಜಿಕ-ಆರ್ಥಿಕ ಕೊಡುಗೆಯಿಂದಾಗಿ, ಡೈರಿ, ಕೋಳಿ ಮತ್ತು ಜಾನುವಾರು ಸಾಕಣೆ, ಮೀನುಗಾರಿಕೆ, ಸಕ್ಕರೆ, ಜವಳಿ, ಸಂಸ್ಕರಣೆ, ಗೋದಾಮು ಮತ್ತು ಶೀತಲೀಕರಣ, ಕಾರ್ಮಿಕ ಸಹಕಾರ ಸಂಘಗಳು ಮತ್ತು ಮಹಿಳಾ ಸಹಕಾರ ಸಂಘಗಳು ಮುಂತಾದ ದುರ್ಬಲ ವಲಯಗಳನ್ನು ಬೆಂಬಲಿಸುವುದು ಅವಶ್ಯಕ. ಇವುಗಳಿಗೆ ದೀರ್ಘಾವಧಿ ಮತ್ತು ಕಾರ್ಯಾಚರಣೆಯ ಬಂಡವಾಳ ಸಾಲಗಳನ್ನು ಒದಗಿಸುವುದು ಅಗತ್ಯವಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions