ಶೇರ್
 
Comments
" ನಮ್ಮ ಯುವ ಶಕ್ತಿಯ ʼನಾನು ಸಾಧಿಸಬಲ್ಲೆʼ ಎಂಬ ಮನೋಭಾವವು ಎಲ್ಲರಿಗೂ ಸ್ಫೂರ್ತಿಯಾಗಿದೆ"
"ಅಮೃತ ಕಾಲದಲ್ಲಿ ದೇಶವನ್ನು ಮುನ್ನಡೆಸಲು ನಾವು ನಮ್ಮ ಕರ್ತವ್ಯಗಳಿಗೆ ಒತ್ತು ನೀಡಬೇಕು ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಬೇಕು"
“ಯುವ ಶಕ್ತಿಯು ಭಾರತ ಪ್ರಯಾಣದ ಪ್ರೇರಕ ಶಕ್ತಿಯಾಗಿದೆ. ರಾಷ್ಟ್ರ ನಿರ್ಮಾಣಕ್ಕೆ ಮುಂದಿನ 25 ವರ್ಷಗಳು ಮುಖ್ಯವಾಗಿವೆ”
“ಯುವಕರಾಗಿರುವುದೆಂದರೆ ನಮ್ಮ ಪ್ರಯತ್ನಗಳಲ್ಲಿ ಕ್ರಿಯಾಶೀಲವಾಗಿರುವುದು. ಯುವಕರಾಗಿರುವುದೆಂದರೆ ಸಮಗ್ರ ದೃಷ್ಟಿಕೋನ ಹೊಂದುವುದು. ಯುವಕರಾಗಿರುವುದೆಂದರೆ ಪ್ರಾಯೋಗಿಕವಾಗಿರುವುದು.”
“ಈ ಶತಮಾನ ಭಾರತದ ಶತಮಾನ ಎಂದು ಜಗತ್ತು ಹೇಳುತ್ತಿದೆ. ಇದು ನಿಮ್ಮ ಶತಮಾನ, ಭಾರತದ ಯುವಜನರ ಶತಮಾನ”
"ಯುವಜನರ ಆಕಾಂಕ್ಷೆಗಳನ್ನು ಈಡೇರಿಸಲು, ನಾವು ಮರುಶೋಧನೆಗಳನ್ನು ಮಾಡಬೇಕು ಮತ್ತು ಮುಂದುವರಿದ ರಾಷ್ಟ್ರಗಳಿಗಿಂತಲೂ ಮುಂದಕ್ಕೆ ಹೋಗುವುದು ಅತ್ಯಗತ್ಯ"
"ಸ್ವಾಮಿ ವಿವೇಕಾನಂದರ ಅವಳಿ ಸಂದೇಶಗಳಾದ - ಸಂಸ್ಥೆ ಮತ್ತು ಆವಿಷ್ಕಾರ ಪ್ರತಿಯೊಬ್ಬ ಯುವಜನರ ಜೀವನದ ಭಾಗವಾಗಿರಬೇಕು"
"ವಿಕಸಿತ ಭಾರತ, ಸಶಕ್ತ ಭಾರತ ಇಂದು ದೇಶದ ಗುರಿಯಾಗಿದೆ"

ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕರ್ನಾಟಕ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಜೀ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳೇ, ರಾಜ್ಯ ಸರ್ಕಾರದ ಸಚಿವರು, ಸಂಸದರು, ಶಾಸಕರು ಮತ್ತು ಕರ್ನಾಟಕದ ಮತ್ತು ದೇಶದ ನನ್ನ ಯುವ ಸ್ನೇಹಿತರೇ!

ಮೂರು ಸಾವಿರ ಮಠ, ಸಿದ್ಧಾರೂಢ ಮಠ, ಇಂತಹ ಅನೇಕ ಮಠಗಳಿಗೆ, ಕ್ಷೇತ್ರಗಳಿಗೆ ನನ್ನ ನಮಸ್ಕಾರಗಳು! ಇದು ರಾಣಿ ಚೆನ್ನಮ್ಮಳ ನಾಡು, ಸಂಗೊಳ್ಳಿ ರಾಯಣ್ಣನ ಬೀಡು, ಇಂತಹ ಈ ಪುಣ್ಯ ಭೂಮಿಗೆ ನನ್ನ ನಮನಗಳು.

ಕರ್ನಾಟಕದ ಈ ಪ್ರದೇಶವು ತನ್ನ ಸಂಪ್ರದಾಯ, ಸಂಸ್ಕೃತಿ ಮತ್ತು ಜ್ಞಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಅನೇಕ ವ್ಯಕ್ತಿಗಳಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರದೇಶವು ದೇಶಕ್ಕೆ ಹಲವಾರು ಶ್ರೇಷ್ಠ ಸಂಗೀತಗಾರರನ್ನು ನೀಡಿದೆ. ಪಂಡಿತ್ ಕುಮಾರ ಗಂಧರ್ವ, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿ ಮತ್ತು ಪಂಡಿತೆ ಶ್ರೀಮತಿ ಗಂಗೂಬಾಯಿ ಹಾನಗಲ್ ಜೀ ಅವರಿಗೆ ಇಂದು ಹುಬ್ಬಳ್ಳಿಯ ನಾಡಿನಿಂದ ನಾನು ನಮನ ಸಲ್ಲಿಸುತ್ತೇನೆ.

ಸ್ನೇಹಿತರೇ,

2023 ರಲ್ಲಿ ಆಚರಿಸುತ್ತಿರುವ ಈ 'ರಾಷ್ಟ್ರೀಯ ಯುವ ದಿನ' ಬಹಳ ವಿಶೇಷವಾಗಿದೆ. ಒಂದೆಡೆ ಈ ಸಂಭ್ರಮದ ರಾಷ್ಟ್ರೀಯ ಯುವಜನೋತ್ಸವ, ಇನ್ನೊಂದೆಡೆ ಸ್ವಾತಂತ್ರ್ಯದ ‘ಅಮೃತ ಮಹೋತ್ಸವ’! "ಎದ್ದೇಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲಬೇಡ...ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ಹೋರಾಡಿ..". ವಿವೇಕಾನಂದರ ಈ ಘೋಷವಾಕ್ಯವೇ ಭಾರತದ ಯುವಜನತೆಯ ಜೀವನಮಂತ್ರ.ಇಂದು ಇದಕ್ಕೆ ನಾವು ಒತ್ತುಕೊಟ್ಟು ದೇಶವನ್ನು ಮುನ್ನಡೆಸಬೇಕಾಗಿದೆ. ನಮ್ಮ ಕರ್ತವ್ಯಗಳ ಬಗ್ಗೆ ಮತ್ತು ಅವುಗಳನ್ನು ಅರ್ಥ ಮಾಡಿಕೊಳ್ಳುವುದು 'ಅಮೃತ ಕಾಲ'ದಲ್ಲಿ ಮತ್ತು ಭಾರತದ ಯುವಜನತೆಯ ಮುಂದೆ ಸ್ವಾಮಿ ವಿವೇಕಾನಂದ ಜೀಯವರ ದೊಡ್ಡ ಸ್ಫೂರ್ತಿ ಇದೆ. ನಾನು ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಪಾದಗಳಿಗೆ ನಮಸ್ಕರಿಸುತ್ತೇನೆ. ಕೆಲವೇ ದಿನಗಳ ಹಿಂದೆ, ಕರ್ನಾಟಕದ ನಾಡಿನ ಇನ್ನೊಬ್ಬ ಮಹಾನ್ ಸಂತರಾದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ನಿಧನರಾದರು, ಈ ಸಂದರ್ಭದಲ್ಲಿ ನಾನು ಶ್ರೀ ಸಿದ್ಧೇಶ್ವರ ಸ್ವಾಮಿಯವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಸ್ವಾಮಿ ವಿವೇಕಾನಂದರು ಕರ್ನಾಟಕದೊಂದಿಗೆ ಅದ್ಭುತವಾದ ಸಂಬಂಧವನ್ನು ಹೊಂದಿದ್ದರು. ಅವರು ತಮ್ಮ ಜೀವಿತಾವಧಿಯಲ್ಲಿ ಕರ್ನಾಟಕ ಮತ್ತು ಈ ಪ್ರದೇಶಕ್ಕೆ ಹಲವಾರು ಭೇಟಿಗಳನ್ನು ಮಾಡಿದ್ದರು. ಬೆಂಗಳೂರಿಗೆ ಹೋಗುವಾಗ ಹುಬ್ಬಳ್ಳಿ-ಧಾರವಾಡಕ್ಕೂ ಭೇಟಿ ನೀಡಿದ್ದರು. ಈ ಭೇಟಿಗಳು ಅವರ ಬದುಕಿಗೆ ಹೊಸ ದಿಕ್ಕನ್ನು ನೀಡಿದವು. ಸ್ವಾಮಿ ವಿವೇಕಾನಂದರಿಗೆ ಚಿಕಾಗೋಗೆ ಪ್ರಯಾಣಿಸಲು ಸಹಾಯ ಮಾಡಿದವರಲ್ಲಿ ಮೈಸೂರಿನ ಮಹಾರಾಜರೂ ಒಬ್ಬರು. ನಮ್ಮೆಲ್ಲರ ಮನೋಯಿಚ್ಛೆ , ಪ್ರಜ್ಞೆ ಒಂದೇ ಆಗಿತ್ತು, ಒಂದೇ ರಾಷ್ಟ್ರವಾಗಿ ನಮ್ಮ ಆತ್ಮವು ಹಲವು ಶತಮಾನಗಳಿಂದ ಒಂದೇ ಆಗಿತ್ತು ಎಂಬುದಕ್ಕೆ ಸ್ವಾಮೀಜಿಯವರ ಚಿಕಾಗೋದ ಭೇಟಿ ಸಾಕ್ಷಿಯಾಗಿದೆ. ಇದು ‘ಏಕ್ ಭಾರತ್, ಶ್ರೇಷ್ಠ ಭಾರತ’ ಎಂಬ ಮನೋಭಾವಕ್ಕೆ ಅಮರ ಉದಾಹರಣೆಯಾಗಿದೆ. ಈ ಚೈತನ್ಯವನ್ನು ‘ಅಮೃತ್ ಕಾಲ’ದಲ್ಲಿ ಹೊಸ ಸಂಕಲ್ಪಗಳೊಂದಿಗೆ ಈ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ.

ಸ್ನೇಹಿತರೇ,

ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು, ನಾವು ಯುವಶಕ್ತಿಯನ್ನು ಹೊಂದಿದಾಗ ಭವಿಷ್ಯದ ಮತ್ತು ರಾಷ್ಟ್ರದ ಅಭಿವೃದ್ಧಿ ಸುಲಭವಾಗುತ್ತದೆ. ಕರ್ನಾಟಕದ ಈ ನೆಲವು ಹಲವಾರು ಮಹಾನ್ ವ್ಯಕ್ತಿಗಳನ್ನು ಹುಟ್ಟುಹಾಕಿದೆ, ಅವರು ರಾಷ್ಟ್ರದ ಕಡೆಗೆ ತಮ್ಮ ಕರ್ತವ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರು ಮತ್ತು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅಸಾಮಾನ್ಯ ಸಾಧನೆಗಳನ್ನು ಮಾಡಿದರು. ಕಿತ್ತೂರಿನ ರಾಣಿ ಚೆನ್ನಮ್ಮ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಅತ್ಯಂತ ಕಷ್ಟದ ಸಮಯದಲ್ಲಿಯೂ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದಳು. ರಾಣಿ ಚೆನ್ನಮ್ಮನ ಸೈನ್ಯದಲ್ಲಿಯೂ ತನ್ನ ಒಡನಾಡಿ ಸಂಗೊಳ್ಳಿ ರಾಯಣ್ಣನಂತಹ ವೀರ ಯೋಧರನ್ನು ಹೊಂದಿದ್ದರು, ಅವರ ಶೌರ್ಯವು ಬ್ರಿಟಿಷ್ ಸೈನ್ಯದ ನೈತಿಕತೆಯನ್ನು ಛಿದ್ರಗೊಳಿಸಿತು. ಈ ನೆಲದ ನಾರಾಯಣ ಮಹಾದೇವ ಧೋನಿ ಕೇವಲ 14 ನೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದರು.

ಸಿಯಾಚಿನ್ ಪರ್ವತಗಳಲ್ಲಿ ಯುವಕರ ಚೈತನ್ಯ ಮತ್ತು ಧೈರ್ಯವು ಸಾವನ್ನು ಹೇಗೆ ಸೋಲಿಸುತ್ತದೆ ಎಂಬುದನ್ನು ಕರ್ನಾಟಕದ ಮಗ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ತೋರಿಸಿಕೊಟ್ಟರು. ಶೀತಲ (ಮೈನಸ್ 55 ಡಿಗ್ರಿ) ತಾಪಮಾನದಲ್ಲೂ ಆರು ದಿನಗಳ ಕಾಲ ಹೋರಾಟ ನಡೆಸಿ ಜೀವಂತವಾಗಿ ಹೊರಬಂದರು. ಈ ಸಾಮರ್ಥ್ಯವು ಶೌರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಯುವ ಪ್ರತಿಭೆಗಳು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಶ್ರೀ ವಿಶ್ವೇಶ್ವರಯ್ಯನವರು ಎಂಜಿನಿಯರಿಂಗ್‌ ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಮೂಲಕ ಖಚಿತಪಡಿಸಿದ್ದಾರೆ. ಅಂತೆಯೇ, ನಮ್ಮ ಯುವಕರ ಪ್ರತಿಭೆ ಮತ್ತು ಸಾಮರ್ಥ್ಯದ ನಂಬಲಾಗದ ಉದಾಹರಣೆಗಳು ದೇಶದ ವಿವಿಧ ಭಾಗಗಳಲ್ಲಿವೆ. ಇಂದಿಗೂ ವಿಶ್ವ ವೇದಿಕೆಗಳಲ್ಲಿ ಗಣಿತದಿಂದ ಹಿಡಿದು ವಿಜ್ಞಾನದವರೆಗಿನ ಸ್ಪರ್ಧೆಗಳು ನಡೆದಾಗ ಭಾರತೀಯ ಯುವಕರ ಪರಾಕ್ರಮ ಸಂಪೂರ್ಣ ಜಗತ್ತನ್ನೇ ಬೆರಗುಗೊಳಿಸುತ್ತದೆ.

ಸ್ನೇಹಿತರೇ,

ಯಾವುದೇ ರಾಷ್ಟ್ರದ ಆದ್ಯತೆಗಳು ಮತ್ತು ಗುರಿಗಳು ವಿವಿಧ ಅವಧಿಗಳಲ್ಲಿ ಬದಲಾಗುತ್ತವೆ. ಇಂದು, ನಾವು 21 ನೇ ಶತಮಾನದಲ್ಲಿ ತಲುಪಿದ ಹಂತದಲ್ಲಿ ಸ್ವಾತಂತ್ರ್ಯದ ಶತಮಾನದ ನಂತರ ಭಾರತೀಯರಿಗೆ ಸೂಕ್ತ ಸಮಯ ಬಂದಿದೆ. ಮತ್ತು ಇದಕ್ಕೆ ದೊಡ್ಡ ಕಾರಣವೆಂದರೆ ಭಾರತದ ಯುವ ಜನತೆಯ ಶಕ್ತಿ, ಯುವ ಶಕ್ತಿ. ಇಂದು ಭಾರತ ಯುವ ರಾಷ್ಟ್ರವಾಗಿದೆ. ವಿಶ್ವದ ಬೃಹತ್ ಯುವ ಸಮೂಹವು ನಮ್ಮ ದೇಶದಲ್ಲಿದೆ.

ಯುವ ಶಕ್ತಿ ಭಾರತದ ಪಯಣದ ಚಾಲನಾ ಶಕ್ತಿ! ಮುಂದಿನ 25 ವರ್ಷಗಳು ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ್ದಾಗಿದೆ. ಯುವಶಕ್ತಿಯ ಕನಸುಗಳು ಭಾರತದ ದಿಕ್ಕನ್ನು ನಿರ್ಧರಿಸುತ್ತವೆ. ಯುವ ಶಕ್ತಿಯ ಆಕಾಂಕ್ಷೆಗಳು ಭಾರತದ ಗಮ್ಯಸ್ಥಾನವನ್ನು ನಿರ್ಧರಿಸುತ್ತವೆ. ಯುವಶಕ್ತಿಯ ಉತ್ಸಾಹ ಭಾರತದ ಹಾದಿಯನ್ನು ನಿರ್ಧರಿಸುತ್ತದೆ. ಈ ಯುವ ಶಕ್ತಿಯನ್ನು ಬಳಸಿಕೊಳ್ಳಲು, ನಾವು ನಮ್ಮ ಆಲೋಚನೆಗಳೊಂದಿಗೆ, ನಮ್ಮ ಪ್ರಯತ್ನಗಳೊಂದಿಗೆ ಯುವಕರಾಗಿರಬೇಕು! ಯುವಕರಾಗಿರುವುದು ಎಂದರೆ ನಮ್ಮ ಪ್ರಯತ್ನಗಳಲ್ಲಿ ಕ್ರಿಯಾತ್ಮಕವಾಗಿರುವುದು. ಯುವಕರಾಗಿರುವುದು ಎಂದರೆ ನಮ್ಮ ದೃಷ್ಟಿಕೋನದಲ್ಲಿ ವಿಹಂಗಮವಾಗಿರುವುದು. ಸದಾ ಯೌವನವಾಗಿರುವುದು, ಸದಾ ಪ್ರಾಯೋಗಿಕವಾಗಿರುವುದು!

ಸ್ನೇಹಿತರೇ,

ಒಂದು ವೇಳೆ ಪರಿಹಾರಕ್ಕಾಗಿ ಇಡೀ ಜಗತ್ತು ನಮ್ಮತ್ತ ನೋಡುತ್ತಿದ್ದರೆ ಅದಕ್ಕೆ ಕಾರಣ ನಮ್ಮ ‘ಅಮೃತ’ ಪೀಳಿಗೆಯ ಸಮರ್ಪಣೆ. ಇಂದು, ಜಗತ್ತು ಭಾರತದತ್ತ ತುಂಬಾ ಭರವಸೆಯಿಂದ ನೋಡುತ್ತಿರುವಾಗ, ನನ್ನ ಯುವ ಸ್ನೇಹಿತರೇ, ನಿಮ್ಮೆಲ್ಲರಿಗೂ ಮನ್ನಣೆ(ಕ್ರೆಡಿಟ್) ಸಲ್ಲುತ್ತದೆ. ಇಂದು ನಾವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ಅದನ್ನು ಅಗ್ರ-3ಕ್ಕೆ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ. ದೇಶದ ಈ ಆರ್ಥಿಕ ಬೆಳವಣಿಗೆಯು ನಮ್ಮ ಯುವಕರಿಗೆ ಅಪಾರ ಅವಕಾಶಗಳನ್ನು ತರುತ್ತದೆ. ಇಂದು ನಾವು ಕೃಷಿ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ಶಕ್ತಿಯಾಗಿದ್ದೇವೆ. ತಂತ್ರಜ್ಞಾನ ಮತ್ತು ಆವಿಷ್ಕಾರದ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಬರಲಿದೆ. ಪರಿಣಾಮವಾಗಿ, ಯುವಜನರಿಗೆ ಹೊಸ ಅವಕಾಶಗಳು ಹೊರಹೊಮ್ಮುತ್ತವೆ ಮತ್ತು ಹೊಸ ಎತ್ತರಗಳನ್ನು ತಲುಪಲು ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಕ್ರೀಡಾ ಕ್ಷೇತ್ರದಲ್ಲೂ ಭಾರತ ವಿಶ್ವದ ಪ್ರಮುಖ ಶಕ್ತಿಯಾಗುವತ್ತ ಸಾಗುತ್ತಿದೆ. ಭಾರತದ ಯುವಕರ ಸಾಮರ್ಥ್ಯದಿಂದ ಮಾತ್ರ ಇದು ಸಾಧ್ಯವಾಗಿದೆ. ಹಳ್ಳಿಯಾಗಿರಲಿ, ನಗರವೇ ಇರಲಿ, ಪಟ್ಟಣವೇ ಇರಲಿ ಎಲ್ಲೆಂದರಲ್ಲಿ ಯುವಕರ ಉತ್ಸಾಹ ಹೆಚ್ಚುತ್ತಿದೆ. ಇಂದು ನೀವು ಈ ಬದಲಾವಣೆಗಳಿಗೆ ಸಾಕ್ಷಿಯಾಗಿದ್ದೀರಿ. ನಾಳೆ ನೀವು ಅದರ ಶಕ್ತಿಯೊಂದಿಗೆ ಭವಿಷ್ಯದ ನಾಯಕರಾಗುತ್ತೀರಿ.

ಸ್ನೇಹಿತರೇ,

ಇತಿಹಾಸದಲ್ಲಿ ಇದೊಂದು ವಿಶೇಷ ಸಮಯ. ನೀವು ವಿಶೇಷ ಪೀಳಿಗೆಯವರು. ನಿಮಗೆ ವಿಶೇಷ ಸಂಕಲ್ಪ(ಮಿಷನ್) ಇದೆ. ಜಾಗತಿಕ ರಂಗದಲ್ಲಿ ಭಾರತದ ಮೇಲೆ ಪ್ರಭಾವ ಬೀರುವ ಧ್ಯೇಯ ಇದಾಗಿದೆ. ಪ್ರತಿ ಕಾರ್ಯಾಚರಣೆಗೆ, ಅಡಿಪಾಯದ ಅಗತ್ಯವಿದೆ. ಆರ್ಥಿಕತೆ ಅಥವಾ ಶಿಕ್ಷಣ, ಕ್ರೀಡೆ ಅಥವಾ ಸ್ಟಾರ್ಟ್‌ಅಪ್‌ ಗಳು, ಕೌಶಲ್ಯ ಅಭಿವೃದ್ಧಿ ಅಥವಾ ಡಿಜಿಟಲೀಕರಣ, ಪ್ರತಿ ಕ್ಷೇತ್ರದಲ್ಲಿ(ಡೊಮೇನ್‌) ಕಳೆದ 8-9 ವರ್ಷಗಳಲ್ಲಿ ಬಲವಾದ ಅಡಿಪಾಯವನ್ನು ಹಾಕಲಾಗಿದೆ. ನಿಮ್ಮ ಓಟದ ಟೇಕ್‌ಆಫ್‌ಗಾಗಿ ರನ್‌ವೇ ಸಿದ್ಧವಾಗಿದೆ! ಇಂದು, ಭಾರತ ಮತ್ತು ಅದರ ಯುವಜನತೆಯ ಬಗ್ಗೆ ವಿಶ್ವದಲ್ಲಿ ಒಂದು ದೊಡ್ಡ ಆಶಾವಾದವಿದೆ. ಈ ಆಶಾವಾದವು ನಿಮ್ಮ ಬಗ್ಗೆ... ಈ ಆಶಾವಾದವು ನಿಮ್ಮಿಂದಾಗಿ... ಮತ್ತು ಈ ಆಶಾವಾದವು ನಿಮಗಾಗಿ.. ಕೇವಲ ನಿಮಗಾಗಿ ಮಾತ್ರ ಆಗಿದೆ!

ಇಂದು ಈ ಶತಮಾನ ಭಾರತದ ಶತಮಾನ ಎಂಬ ಜಾಗತಿಕ ಧ್ವನಿಗಳು ವಿಶ್ವದಾದ್ಯಂತ ಕೇಳಿ ಬರುತ್ತಿವೆ. ಇದು ನಿಮ್ಮ ಶತಮಾನ, ಭಾರತದ ಯುವಕರ ಶತಮಾನ! ಬಹುಪಾಲು ದೊಡ್ಡ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ ಎಂದು ಜಾಗತಿಕ ಸಮೀಕ್ಷೆಗಳಿವೆ. ಈ ಹೂಡಿಕೆದಾರರು ನಿಮ್ಮಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ, ಭಾರತದ ಯುವಕರು. ಭಾರತೀಯ ಸ್ಟಾರ್ಟ್‌ಅಪ್‌ ಗಳು ದಾಖಲೆಯ ಹೂಡಿಕೆಗಳನ್ನು ಪಡೆಯುತ್ತಿವೆ. ಹಲವು ಜಾಗತಿಕ ಕಂಪನಿಗಳು ಮೇಕ್ ಇನ್ ಇಂಡಿಯಾ ತಯಾರಿಕಾ ಘಟಕಗಳನ್ನು ಸ್ಥಾಪಿಸುತ್ತಿವೆ. ಆಟಿಕೆಗಳಿಂದ ಪ್ರವಾಸೋದ್ಯಮಕ್ಕೆ, ರಕ್ಷಣೆಯಿಂದ  ಡಿಜಿಟಲ್‌ ವರೆಗೆ, ಭಾರತವು ಪ್ರಪಂಚದಾದ್ಯಂತ ಸಕಾರಾತ್ಮಕ ಸುದ್ದಿಗಳನ್ನು ಮಾಡುತ್ತಿದೆ. ಆದ್ದರಿಂದ, ಇದು ಆಶಾವಾದ ಮತ್ತು ಅವಕಾಶಗಳು ಒಟ್ಟಿಗೆ ಬರುವ ಐತಿಹಾಸಿಕ ಸಮಯ.

ಸ್ನೇಹಿತರೇ,

ನಮ್ಮ ದೇಶದಲ್ಲಿ, ನಾರಿ ಶಕ್ತಿ (ಮಹಿಳಾ ಶಕ್ತಿ) ಯಾವಾಗಲೂ ರಾಷ್ಟ್ರದ ಶಕ್ತಿಯ ಸಾಮರ್ಥ್ಯವನ್ನು ಜಾಗೃತಗೊಳಿಸುವ ಮತ್ತು ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಈಗ ಮಹಿಳೆಯರು ಮತ್ತು ನಮ್ಮ ಹೆಣ್ಣುಮಕ್ಕಳು ಈ ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಶೌರ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಭಾರತೀಯ ಮಹಿಳೆಯರು ಇಂದು ಫೈಟರ್ ಜೆಟ್‌ ಗಳನ್ನು ಹಾರಿಸುತ್ತಿದ್ದಾರೆ ಮತ್ತು ಯುದ್ಧದ ಪಾತ್ರಗಳಲ್ಲಿ ಸೈನ್ಯಕ್ಕೆ ಸೇರುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳು ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಅಥವಾ ಕ್ರೀಡೆಯೇ ಇರಲಿ ಪ್ರತಿಯೊಂದು ಕ್ಷೇತ್ರದಲ್ಲೂ ಎತ್ತರಕ್ಕೆ ಏರುತ್ತಿದ್ದಾರೆ. ಭಾರತ ಈಗ ಸಂಪೂರ್ಣ ಬಲದೊಂದಿಗೆ ತನ್ನ ಗುರಿಯತ್ತ ಸಾಗುತ್ತಿದೆ ಎಂಬುದಕ್ಕೆ ಇವುಗಳೆಲ್ಲಾ ಸಾಕ್ಷಿಯಾಗಿದೆ.

ಸ್ನೇಹಿತರೇ,

ನಾವು 21ನೇ ಶತಮಾನವನ್ನು ಭಾರತದ ಶತಕವನ್ನಾಗಿಸಬೇಕು. ಆದ್ದರಿಂದ, ನಾವು ವರ್ತಮಾನಕ್ಕಿಂತ ಹತ್ತು ಹೆಜ್ಜೆ ಮುಂದೆ ಯೋಚಿಸುವುದು ಕಡ್ಡಾಯವಾಗಿದೆ. ನಮ್ಮ ಆಲೋಚನೆ ಮತ್ತು ವಿಧಾನವು ಭವಿಷ್ಯದಂತಿರಬೇಕು! ಯುವಕರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಪ್ರಪಂಚದ ಆಧುನಿಕ ದೇಶಗಳಿಗಿಂತಲೂ ಮುಂದೆ ಸಾಗಲು ನೀವು ಧನಾತ್ಮಕ ಹೆಜ್ಜೆಯ ದಾಪುಕಾಲು ಇಡುವುದು ಅವಶ್ಯಕ. ನಾವು ಸರಿಯಾಗಿ ನೆನಪಿಸಿಕೊಂಡರೆ, 10-20 ವರ್ಷಗಳ ಹಿಂದೆ ಅಸ್ತಿತ್ವದಲ್ಲಿಲ್ಲದ ಅನೇಕ ವಿಷಯಗಳಿವೆ, ಆದರೆ ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅಂತೆಯೇ, ನಮ್ಮ ಪ್ರಪಂಚವು ಮುಂದಿನ ಕೆಲವು ವರ್ಷಗಳಲ್ಲಿ ಅಥವಾ ಬಹುಶಃ ಈ ದಶಕದ ಅಂತ್ಯದ ಮೊದಲು ಇವುಗಳೆಲ್ಲವೂ ಸಂಪೂರ್ಣವಾಗಿ ಬದಲಾಗಲಿದೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಎಆರ್-ವಿಆರ್ ನಂತಹ ಉದಯೋನ್ಮುಖ ತಂತ್ರಜ್ಞಾನಗಳು ಹೊಸ ರೂಪದಲ್ಲಿ ವಿಕಸನಗೊಂಡಿವೆ. ಡೇಟಾ ಸೈನ್ಸ್ ಮತ್ತು ಸೈಬರ್ ಸೆಕ್ಯುರಿಟಿಯಂತಹ ಪದಗಳು ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಆಳವಾಗಿ ಸೇರಿ ನಮ್ಮನ್ನು ಸದಾ ಭದ್ರಪಡಿಸುತ್ತವೆ.

ಶಿಕ್ಷಣದಿಂದ ದೇಶದ ಭದ್ರತೆ ಮತ್ತು ಆರೋಗ್ಯ ರಕ್ಷಣೆಯಿಂದ ಸಂವಹನದವರೆಗೆ ಸುಧಾರಿತ ತಂತ್ರಜ್ಞಾನದ ಮೂಲಕ ಎಲ್ಲವನ್ನೂ ಹೊಸ ಅವತಾರದಲ್ಲಿ ನೋಡಲಾಗುವುದು. ಇಂದು ಅಸ್ತಿತ್ವದಲ್ಲಿಲ್ಲದ ಉದ್ಯೋಗಗಳು ಮುಂದಿನ ದಿನಗಳಲ್ಲಿ ಯುವಕರ ಮುಖ್ಯವಾಹಿನಿಯ ವೃತ್ತಿಗಳಾಗಲಿವೆ. ಆದ್ದರಿಂದ, ನಮ್ಮ ಯುವಕರು ಭವಿಷ್ಯದ ಕೌಶಲ್ಯಗಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುವುದು ಅವಶ್ಯಕ. ಪ್ರಪಂಚದಲ್ಲಿ ಏನೇ ಆಗಲಿ ಹೊಸದರೊಂದಿಗೆ ನಮ್ಮನ್ನು ನಾವು ಸಂಪರ್ಕಿಸಬೇಕು. ಯಾರೂ ಮಾಡದ ಕೆಲಸವನ್ನು ನಾವು ಮಾಡಬೇಕು. ಈ ಮನಸ್ಥಿತಿಯೊಂದಿಗೆ ಹೊಸ ಪೀಳಿಗೆಯನ್ನು ಸಿದ್ಧಪಡಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶವು ಪ್ರಾಯೋಗಿಕ ಮತ್ತು ಭವಿಷ್ಯದ ಶಿಕ್ಷಣ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿದೆ. ಇಂದು ಶಾಲೆಯಿಂದಲೇ ನವೀನ ಮತ್ತು ಕೌಶಲ್ಯ ಆಧಾರಿತ ಶಿಕ್ಷಣದತ್ತ ಗಮನ ಹರಿಸಲಾಗಿದೆ. ಇಂದು ಯುವಕರು ತಮ್ಮ ಆಯ್ಕೆಗೆ ಅನುಗುಣವಾಗಿ ಮುನ್ನಡೆಯುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಈ ಅಡಿಪಾಯವು ಭವಿಷ್ಯದ ಭಾರತವನ್ನು ನಿರ್ಮಿಸುವ ಭವಿಷ್ಯದ ಸಿದ್ಧ ಯುವಕರನ್ನು ಸಿದ್ಧಪಡಿಸುತ್ತದೆ.

ಸ್ನೇಹಿತರೇ,

ಇಂದು ಈ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸ್ವಾಮಿ ವಿವೇಕಾನಂದರ ಎರಡು ಸಂದೇಶಗಳು ಪ್ರತಿಯೊಬ್ಬ ಯುವಕನ ಜೀವನದ ಭಾಗವಾಗಿರಬೇಕು. ಈ ಎರಡು ಸಂದೇಶಗಳು -- ಸಂಸ್ಥೆಗಳು ಮತ್ತು ನಾವೀನ್ಯತೆ! ನಾವು ನಮ್ಮ ಆಲೋಚನೆಗಳನ್ನು ವಿಸ್ತರಿಸಿದಾಗ ಮತ್ತು ತಂಡದ ಮನೋಭಾವದಿಂದ ಕೆಲಸ ಮಾಡಿದಾಗ ಸಂಸ್ಥೆ ರೂಪುಗೊಳ್ಳುತ್ತದೆ. ಇಂದು ಪ್ರತಿಯೊಬ್ಬ ಯುವಕನು ತನ್ನ ವೈಯಕ್ತಿಕ ಯಶಸ್ಸನ್ನು ತಂಡದ ಯಶಸ್ಸಿನ ರೂಪದಲ್ಲಿ ವಿಸ್ತರಿಸಬೇಕು. ಈ ತಂಡದ ಹುರುಪು(ಟೀಮ್ ಸ್ಪಿರಿಟ್) ಅಭಿವೃದ್ಧಿ ಹೊಂದಿದ ಭಾರತವನ್ನು 'ಭಾರತದ ತಂಡ(ಟೀಮ್ ಇಂಡಿಯಾ)' ಆಗಿ ಮುನ್ನಡೆಸುತ್ತದೆ.

ನನ್ನ ಯುವ ಗೆಳೆಯರೇ,

ಸ್ವಾಮಿ ವಿವೇಕಾನಂದರ ಇನ್ನೊಂದು ಮಾತನ್ನು ನೀವು ನೆನಪಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು, ಪ್ರತಿಯೊಂದು ಕೆಲಸವೂ ಮೂದಲಿಕೆ, ವಿರೋಧ ಮತ್ತು ಸ್ವೀಕಾರ ಎಂಬ ಮೂರು ಹಂತಗಳನ್ನು ದಾಟಬೇಕು. ಮತ್ತು ಒಂದು ಸಾಲಿನಲ್ಲಿ ವ್ಯಾಖ್ಯಾನಿಸಬೇಕಾದರೆ , ನಾವೀನ್ಯತೆ ಎಂಬುದು ಇದಕ್ಕೆ ಸೂಕ್ತವಾದ ಶಬ್ದ ಹಾಗು ಸುಲಭ ವ್ಯಾಖ್ಯಾನವಾಗಿದೆ. ಉದಾಹರಣೆಗೆ, ಕೆಲವು ವರ್ಷಗಳ ಹಿಂದೆ ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ದೇಶದಲ್ಲಿ ಪರಿಚಯಿಸಿದಾಗ ಕೆಲವರು ಅದನ್ನು ತಮಾಷೆ-ಗೇಲಿ ಮಾಡಿದರು. ಸ್ವಚ್ಛ ಭಾರತ್ ಅಭಿಯಾನವನ್ನು ಆರಂಭಿಸಿದಾಗಲೂ ಈ ಜನರು ಭಾರತದಲ್ಲಿ ಇದು ಕೆಲಸ ಮಾಡುವುದಿಲ್ಲ ಎಂದು ಹೇಳಿದರು. ಬಡವರಿಗಾಗಿ ಬ್ಯಾಂಕ್‌ಗಳಲ್ಲಿ ಜನ್‌ಧನ್ ಖಾತೆಗಳನ್ನು ತೆರೆಯುವ ಯೋಜನೆಯನ್ನು ದೇಶವು ತಂದಾಗ ಅವರು ತಮಾಷೆ-ಹಾಸ್ಯ ಮಾಡಿದರು. ನಮ್ಮ ವಿಜ್ಞಾನಿಗಳು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸ್ಥಳೀಯ ಲಸಿಕೆಗಳನ್ನು ಸಂಶೋಧಿಸಿ ಹೊರತಂದಾಗ ಅದು ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂದು ಅಪಹಾಸ್ಯಕ್ಕೊಳಗಾಯಿತು.

ಇಂದು ಭಾರತವು ಡಿಜಿಟಲ್ ಪಾವತಿಯಲ್ಲಿ ವಿಶ್ವ ಮುಂಚೂಣಿಯಲ್ಲಿದೆ. ಇಂದು ಜನ್ ಧನ್ ಖಾತೆಗಳು ನಮ್ಮ ಆರ್ಥಿಕತೆಯ ಪ್ರಮುಖ ಶಕ್ತಿಯಾಗಿದೆ. ಲಸಿಕೆ ಕ್ಷೇತ್ರದಲ್ಲಿ ಭಾರತದ ಸಾಧನೆ ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದೆ. ಆದ್ದರಿಂದ, ಭಾರತದ ಯುವಕರು ಯಾವುದೇ ಹೊಸ ಆಲೋಚನೆಯನ್ನು ಹೊಂದಿದ್ದರೆ, ನೀವು ಅಪಹಾಸ್ಯಕ್ಕೊಳಗಾಗಬಹುದು ಮತ್ತು ವಿರೋಧಿಸಬಹುದು ಎಂಬುದನ್ನು ನೆನಪಿಡಿ. ಆದರೆ ನೀವು ನಿಮ್ಮ ಕಲ್ಪನೆಯನ್ನು ನಂಬಿದರೆ ಅದಕ್ಕೆ ಅಂಟಿಕೊಳ್ಳಿ ಮತ್ತು ಅದರಲ್ಲಿ ನಂಬಿಕೆ ಇಡಿ. ನಿಮ್ಮ ಯಶಸ್ಸು ತಮಾಷೆ ಮಾಡುವವರ ಕಲ್ಪನೆಗಿಂತ ದೊಡ್ಡದಾಗಿದೆ ಎಂದು ಸಾಬೀತುಪಡಿಸುತ್ತದೆ.

ಸ್ನೇಹಿತರೇ,

ಇಂದು ಯುವಕರನ್ನು ಜೊತೆಜೊತೆಯಲ್ಲಿ ಕರೆದುಕೊಂಡು ಸಾಗುತ್ತಾ ದೇಶದಲ್ಲಿ ಹೊಸ ಹೊಸ ಪ್ರಯತ್ನಗಳು ಮತ್ತು ಪ್ರಯೋಗಗಳು ನಿರಂತರವಾಗಿ ನಡೆಯುತ್ತಿವೆ. ಇದರ ಅಂಗವಾಗಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ದೇಶದ ವಿವಿಧ ರಾಜ್ಯಗಳ ಯುವಕರು ಇಲ್ಲಿ ನೆರೆದಿದ್ದಾರೆ. ಇದು ಸ್ವಲ್ಪಮಟ್ಟಿಗೆ ಸ್ಪರ್ಧಾತ್ಮಕ ಮತ್ತು ಸಹಕಾರಿ ಫೆಡರಲಿಸಂನಂತಿದೆ. ವಿವಿಧ ರಾಜ್ಯಗಳ ಯುವಕರು ಆರೋಗ್ಯಕರ ಸ್ಪರ್ಧೆಯ ಮನೋಭಾವದಿಂದ ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯವಲ್ಲ, ಏಕೆಂದರೆ ಯಾವುದೇ ಸಂದರ್ಭದಲ್ಲಿಯೂ, ಭಾರತವೇ ವಿಜಯಶಾಲಿಯಾಗಿ ಹೊರಹೊಮ್ಮುತ್ತದೆ. ಏಕೆಂದರೆ, ಯುವಜನೋತ್ಸವದಲ್ಲಿ ನಮ್ಮ ಯುವಕರ ಪ್ರತಿಭೆ ಮುನ್ನೆಲೆಗೆ ಬರಲಿದೆ, ಪ್ರದರ್ಶಿತವಾಗಲಿದೆ.

 ಒಬ್ಬರಿಗೊಬ್ಬರು ಸ್ಪರ್ಧಿಸುವುದರ ಜೊತೆಗೆ ನೀವು ಪರಸ್ಪರ ಸಹಕರಿಸುತ್ತೀರಿ. ನಿಯಮವನ್ನು ಅನುಸರಿಸುತ್ತಾ, ಭಾಗವಹಿಸುವವರು ಪರಸ್ಪರ ಸಹಕರಿಸಿದಾಗ ಮಾತ್ರ ಸ್ಪರ್ಧೆಯು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಈ ಸ್ಪರ್ಧೆ ಮತ್ತು ಸಹಕಾರದ ಮನೋಭಾವವನ್ನು ನಾವು ನಿರಂತರವಾಗಿ ಮುಂದಕ್ಕೆ ಕೊಂಡೊಯ್ಯಬೇಕು. ನಮ್ಮದೇ ಯಶಸ್ಸಿನಿಂದ ದೇಶ ಎಲ್ಲಿಗೆ ತಲುಪುತ್ತದೆ ಎಂದು ನಾವು ಯಾವಾಗಲೂ ಯೋಚಿಸಬೇಕು. ಇಂದು ದೇಶದ ಗುರಿ - ವಿಕಸಿತ್ ಭಾರತ್, ಸಶಕ್ತ್ ಭಾರತ್ (ಅಭಿವೃದ್ಧಿ ಹೊಂದಿದ ಭಾರತ, ಬಲಿಷ್ಠ ಭಾರತ)! ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡದೆ ನಾವು ನಮ್ಮ ಗತಿಪರಿಶ್ರಮಗಳಿಗೆ ವಿರಾಮ ನೀಡಬೇಕಾಗಿಲ್ಲ. ಪ್ರತಿಯೊಬ್ಬ ಯುವಕನು ಈ ಕನಸನ್ನು ತನ್ನ ಸ್ವಂತ ಕನಸಾಗಿಸುತ್ತಾನೆ ಮತ್ತು ದೇಶದ ಈ ಜವಾಬ್ದಾರಿಯನ್ನು ಹೊರುತ್ತಾನೆ ಎಂದು ನನಗೆ ಖಾತ್ರಿಯಿದೆ. ಈ ನಂಬಿಕೆಯೊಂದಿಗೆ, ನಿಮ್ಮೆಲ್ಲರಿಗೂ ಅನೇಕ ಧನ್ಯವಾದಗಳು ಮತ್ತು ಶುಭಾಶಯಗಳು!

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Bhupender Yadav writes: What the Sengol represents

Media Coverage

Bhupender Yadav writes: What the Sengol represents
...

Nm on the go

Always be the first to hear from the PM. Get the App Now!
...
PM condoles loss of lives due to train accident in Odisha
June 02, 2023
ಶೇರ್
 
Comments

The Prime Minister, Shri Narendra Modi has expressed deep grief over the loss of lives due to train accident in Odisha.

In a tweet, the Prime Minister said;

"Distressed by the train accident in Odisha. In this hour of grief, my thoughts are with the bereaved families. May the injured recover soon. Spoke to Railway Minister @AshwiniVaishnaw and took stock of the situation. Rescue ops are underway at the site of the mishap and all possible assistance is being given to those affected."