'ಅಮೃತ ಕಾಲದ ಮುನ್ನೋಟ 2047' ಅನಾವರಣ – ಇದು ಭಾರತೀಯ ಸಾಗರ ನೀಲಿ ಆರ್ಥಿಕತೆಯ ನೀಲನಕ್ಷೆ
23,000 ಕೋಟಿಗೂ ಹೆಚ್ಚು ಮೌಲ್ಯದ ರಾಷ್ಟ್ರ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ
ಗುಜರಾತ್‌ನ ದೀನದಯಾಳ್ ಬಂದರು ಪ್ರಾಧಿಕಾರದಲ್ಲಿ ಟ್ಯೂನ ಟೆಕ್ರಾ ಡೀಪ್ ಡ್ರಾಫ್ಟ್ ಟರ್ಮಿನಲ್‌ಗೆ ಶಂಕುಸ್ಥಾಪನೆ
ಸಾಗರ ವಲಯದಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಪಾಲುದಾರಿಕೆಗಾಗಿ 300ಕ್ಕೂ ಹೆಚ್ಚು ತಿಳಿವಳಿಕೆ ಪತ್ರಗಳ ಸಮರ್ಪಣೆ
"ಬದಲಾಗುತ್ತಿರುವ ವಿಶ್ವ ಕ್ರಮದಲ್ಲಿ, ಜಗತ್ತು ಹೊಸ ಆಕಾಂಕ್ಷೆಗಳೊಂದಿಗೆ ಭಾರತದತ್ತ ನೋಡುತ್ತಿದೆ"
"ಸಮೃದ್ಧಿಗಾಗಿ ಬಂದರುಗಳು ಮತ್ತು ಪ್ರಗತಿಗಾಗಿ ಬಂದರುಗಳು" ಎಂಬ ಸರ್ಕಾರದ ದೃಷ್ಟಿಕೋನವು ನೆಲ ಮಟ್ಟದಲ್ಲಿ ಪರಿವರ್ತನೀಯ ಬದಲಾವಣೆಗಳನ್ನು ತರುತ್ತಿದೆ"
"ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್" ನಮ್ಮ ಮಂತ್ರವಾಗಿದೆ
"ನಾವು ಭವಿಷ್ಯದತ್ತ ಸಾಗುತ್ತಿದ್ದೇವೆ, ಅಲ್ಲಿ ನೀಲಿ ಆರ್ಥಿಕತೆಯು ಹಸಿರು ಗ್ರಹವನ್ನು ರಚಿಸುವ ಮಾಧ್ಯಮವಾಗಿದೆ"
"ಭಾರತವು ತನ್ನ ಅತ್ಯಾಧುನಿಕ ಮೂಲಸೌಕರ್ಯಗಳ ಮೂಲಕ ಜಾಗತಿಕ ಮಟ್ಟದ ನೆಚ್ಚಿನ ತಾಣ ಆಗುವತ್ತ ಸಾಗುತ್ತಿದೆ"
"ಅಭಿವೃದ್ಧಿ, ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯ ಸಂಯೋಜನೆಯು ಹೂಡಿಕೆದಾರರಿಗೆ ಒಂದು ಅವಕಾಶವಾಗಿದೆ"

ನಮಸ್ಕಾರ, ವಿಶ್ವದ ಎಲ್ಲೆಡೆಯಿಂದ ಆಗಮಿಸಿರುವ ಗಣ್ಯ ಅತಿಥಿಗಳೆ, ನನ್ನ ಸಂಪುಟದ ಸಹೋದ್ಯೋಗಿಗಳೆ, ಗೋವಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೆ, ಇತರ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ!

3ನೇ ಆವೃತ್ತಿಯ ಜಾಗತಿಕ ಸಾಗರ ಇಂಡಿಯಾ ಶೃಂಗಸಭೆಗೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಈ ಹಿಂದೆ ನಾವು 2021ರಲ್ಲಿ ಭೇಟಿಯಾದಾಗ, ಇಡೀ ಜಗತ್ತು ಕೊರೊನಾ ಸೃಷ್ಟಿಸಿದ ಅನಿಶ್ಚಿಯದ ಬಂಧಿಯಾಗಿದ್ದೆವು. ಕೊರೊನಾ ನಂತರದ ಜಗತ್ತು ಹೇಗಿರುತ್ತದೆ ಎಂದು ಯಾರೂ ತಿಳಿದಿರಲಿಲ್ಲ. ಆದರೆ ಇಂದು ಹೊಸ ವಿಶ್ವ ಕ್ರಮವು ರೂಪುಗೊಳ್ಳುತ್ತಿದೆ. ಬದಲಾಗುತ್ತಿರುವ ಈ ವಿಶ್ವ ಕ್ರಮದಲ್ಲಿ ಇಡೀ ಜಗತ್ತು ಹೊಸ ಆಶಯಗಳೊಂದಿಗೆ ಭಾರತದತ್ತ ನೋಡುತ್ತಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ವಿಶ್ವದಲ್ಲಿ ಭಾರತದ ಆರ್ಥಿಕತೆಯು ನಿರಂತರವಾಗಿ ಬಲಗೊಳ್ಳುತ್ತಿದೆ. ಭಾರತವು ವಿಶ್ವದ ಅಗ್ರ 3 ಆರ್ಥಿಕ ಶಕ್ತಿಗಳಲ್ಲಿ ಒಂದಾಗುವ ದಿನ ದೂರವಿಲ್ಲ. ಜಗತ್ತಿನ ಗರಿಷ್ಠ ವ್ಯಾಪಾರವು ಸಮುದ್ರ ಮಾರ್ಗಗಳ ಮೂಲಕ ನಡೆಯುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಕೊರೊನಾ ನಂತರದ ಜಗತ್ತಿನಲ್ಲಿ, ಇಂದು ಜಗತ್ತಿಗೆ ವಿಶ್ವಾಸಾರ್ಹ ಮತ್ತು ಸ್ಥಿಹೊಂದಾಣಿಕೆಯ ಪೂರೈಕೆ ಸರಪಳಿಗಳ ಅಗತ್ಯವಿದೆ. ಆದ್ದರಿಂದಲೇ ಜಾಗತಿಕ ಸಾಗರ ಇಂಡಿಯಾ ಶೃಂಗಸಭೆಯ ಈ ಆವೃತ್ತಿಯು ಹೆಚ್ಚು ಪ್ರಸ್ತುತವಾಗಿದೆ ಮತ್ತು ಮಹತ್ವಪೂರ್ಣದ್ದಾಗಿದೆ.

 

ಸ್ನೇಹಿತರೆ,

ಭಾರತದ ಕಡಲ ಸಾಮರ್ಥ್ಯ ಬಲವಾಗಿದ್ದಾಗಲೆಲ್ಲ ದೇಶ ಮತ್ತು ಜಗತ್ತು ಅದರಿಂದ ಹೆಚ್ಚಿನ ಪ್ರಯೋಜನ ಪಡೆದಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಈ ಚಿಂತನೆಯೊಂದಿಗೆ ಕಳೆದ 9-10 ವರ್ಷಗಳಿಂದ ಈ ಕ್ಷೇತ್ರವನ್ನು ಬಲಪಡಿಸಲು ನಾವು ಯೋಜನಾಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ, ಭಾರತದ ಉಪಕ್ರಮದಲ್ಲಿ, 21ನೇ ಶತಮಾನದಲ್ಲಿ ವಿಶ್ವಾದ್ಯಂತ ಸಾಗರ ಉದ್ಯಮವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಒಂದು ಹೊಸ ಹೆಜ್ಜೆ ಇಡಲಾಗಿದೆ. ಜಿ-20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಕುರಿತು ಐತಿಹಾಸಿಕ ಒಮ್ಮತಕ್ಕೆ ಬರಲಾಗಿದೆ. ನೂರಾರು ವರ್ಷಗಳ ಹಿಂದೆ, ರೇಷ್ಮೆ ಮಾರ್ಗ(ಸಿಲ್ಕ್ ರೂಟ್-ಕ್ರಿಸ್ತಪೂರ್ವ 2ನೇ ಶತಮಾನದಿಂದ ಕ್ರಿಸ್ತಶಕ 14ನೇ ಶತಮಾನದವರೆಗೆ ಇದ್ದ ವ್ಯಾಪಾರ ಜಲಮಾರ್ಗ)ವು ಜಾಗತಿಕ ವ್ಯಾಪಾರಕ್ಕೆ ಉತ್ತೇಜನ ನೀಡಿತು. ಈ ಮಾರ್ಗವು ವಿಶ್ವದ ಅನೇಕ ದೇಶಗಳ ಅಭಿವೃದ್ಧಿಗೆ ಆಧಾರವಾಯಿತು. ಈಗ ಈ ಐತಿಹಾಸಿಕ ಕಾರಿಡಾರ್ ಪ್ರಾದೇಶಿಕ ಮತ್ತು ಜಾಗತಿಕ ವ್ಯಾಪಾರದ ಸಂಪೂರ್ಣ ಚಿತ್ರಣವನ್ನೇ ಮಾರ್ಪಡಿಸುತ್ತದೆ. ಹೊಸ ಪೀಳಿಗೆಯ ಬೃಹತ್ ಬಂದರುಗಳ ನಿರ್ಮಾಣ ಮತ್ತು ಅಂತಾರಾಷ್ಟ್ರೀಯ ಕಂಟೈನರ್ ಟ್ರಾನ್ಸ್‌ಶಿಪ್‌ಮೆಂಟ್ ಬಂದರು, ದ್ವೀಪ ಅಭಿವೃದ್ಧಿ, ಒಳನಾಡಿನ ಜಲಮಾರ್ಗಗಳು, ಬಹು-ಮಾದರಿ ಹಬ್‌ಗಳ ವಿಸ್ತರಣೆ, ಇಂತಹ ಹಲವು ಪ್ರಮುಖ ಯೋಜನೆಗಳನ್ನು ಈ ಯೋಜನೆಯಡಿ ಕೈಗೊಳ್ಳಲಾಗುವುದು. ಈ ಕಾರಿಡಾರ್ ವ್ಯಾಪಾರ ವೆಚ್ಚವನ್ನು ಕಡಿಮೆ ಮಾಡುತ್ತದೆ, ಸರಕು ಸಾಗಣೆ ದಕ್ಷತೆಯನ್ನು ಹೆಚ್ಚಿಸುತ್ತದೆ, ಪರಿಸರ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಭಾರತದೊಂದಿಗೆ ಒಡನಾಟ ಹೊಂದುವ ಮೂಲಕ ಹೂಡಿಕೆದಾರರಿಗೆ ಈ ಅಭಿಯಾನದ ಭಾಗವಾಗಲು ಇದು ಒಂದು ದೊಡ್ಡ ಅವಕಾಶವಾಗಿದೆ.

ಸ್ನೇಹಿತರೆ,

ಇಂದಿನ ಭಾರತವು ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ನಿರಂತರ ಕೆಲಸ ಮಾಡುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದೇವೆ. ಕಡಲ ಮೂಲಸೌಕರ್ಯವುಳ್ಳ ಸಂಪೂರ್ಣ ಪರಿಸರ ವ್ಯವಸ್ಥೆ ಬಲಪಡಿಸಲು ನಾವು ಪಟ್ಟುಬಿಡದೆ ಕೆಲಸ ಮಾಡಿದ್ದೇವೆ. ಕಳೆದ ದಶಕದಲ್ಲಿ ಭಾರತದ ಪ್ರಮುಖ ಬಂದರುಗಳ ಸಾಮರ್ಥ್ಯ ದ್ವಿಗುಣಗೊಂಡಿದೆ. 2014ರಲ್ಲಿ 9-10 ವರ್ಷಗಳ ಹಿಂದೆ 42 ಗಂಟೆ ಇದ್ದ ಕಂಟೈನರ್ ಹಡಗುಗಳ ಪ್ರಯಾಣ ಸಮಯ 2023ರಲ್ಲಿ 24 ಗಂಟೆಗಳಿಗಿಂತ ಕಡಿಮೆಯಾಗಿದೆ. ಬಂದರು ಸಂಪರ್ಕ ಬಲಪಡಿಸಲು, ನಾವು ಸಾವಿರಾರು ಕಿಲೋಮೀಟರ್‌ಗಳಷ್ಟು ಹೊಸ ರಸ್ತೆಗಳನ್ನು ನಿರ್ಮಿಸಿದ್ದೇವೆ. ಸಾಗರಮಾಲಾ ಯೋಜನೆಯಡಿ ನಮ್ಮ ಕರಾವಳಿ ಪ್ರದೇಶದ ಮೂಲಸೌಕರ್ಯಗಳನ್ನು ಸಹ ಬಲಪಡಿಸಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿವೆ, ಜೀವನೋಪಾಯವನ್ನು ಬಹುಪಾಲು ಸುಗಮಗೊಳಿಸುತ್ತಿವೆ.

 

ಸ್ನೇಹಿತರೆ,

‘ಸಮೃದ್ಧಿಗಾಗಿ ಬಂದರುಗಳು’ ಮತ್ತು ‘ಪ್ರಗತಿಗಾಗಿ ಬಂದರುಗಳು’ ಎಂಬ ನಮ್ಮ ದೂರದೃಷ್ಟಿ ನಿರಂತರವಾಗಿ ನೆಲಗಟ್ಟಿನಲ್ಲಿ ಬದಲಾವಣೆ ತರುತ್ತಿದೆ. ಆದರೆ ನಮ್ಮ ಕೆಲಸವು ‘ಉತ್ಪಾದಕತೆಗೆ ಬಂದರುಗಳು’ ಎಂಬ ಮಂತ್ರವನ್ನು ಮುಂದಕ್ಕೆ ಕೊಂಡೊಯ್ದಿದೆ. ಆರ್ಥಿಕತೆಯ ಉತ್ಪಾದಕತೆ ಹೆಚ್ಚಿಸಲು, ನಮ್ಮ ಸರ್ಕಾರವು ಸರಕು ಸಾಗಣೆ ಕ್ಷೇತ್ರವನ್ನು ಪರಿಣಾಮಕಾರಿಯಾಗಿಸುತ್ತಿದೆ ಮತ್ತು ದಕ್ಷವಾಗಿಸುತ್ತಿದೆ. ಭಾರತವು ತನ್ನ ಕರಾವಳಿ ಹಡಗು ಮಾದರಿಗಳನ್ನು ಸಹ ಆಧುನೀಕರಿಸುತ್ತಿದೆ. ಕಳೆದ ದಶಕದಲ್ಲಿ ಕರಾವಳಿಯ ಸರಕು ಸಾಗಣೆ ದ್ವಿಗುಣಗೊಂಡಿದೆ. ಇದು ಜನರಿಗೆ ವೆಚ್ಚ-ಪರಿಣಾಮಕಾರಿ ಸರಕು ಸಾಗಣೆ ಆಯ್ಕೆಯನ್ನು ಒದಗಿಸುತ್ತಿದೆ. ಒಳನಾಡಿನ ಜಲಮಾರ್ಗಗಳ ಅಭಿವೃದ್ಧಿಯಿಂದಾಗಿ ಪ್ರಮುಖ ಬದಲಾವಣೆಯು ಭಾರತವನ್ನು ಆವರಿಸುತ್ತಿದೆ. ಕಳೆದ ದಶಕದಲ್ಲಿ, ರಾಷ್ಟ್ರೀಯ ಜಲಮಾರ್ಗಗಳಲ್ಲಿ ಸರಕು ನಿರ್ವಹಣೆಯು ಸುಮಾರು 4 ಪಟ್ಟು ಬೆಳವಣಿಗೆ ಕಂಡಿದೆ. ನಮ್ಮ ಪ್ರಯತ್ನಗಳಿಂದಾಗಿ, ಸರಕು ಸಾಗಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತದ ರೇಟಿಂಗ್‌ ಕಳೆದ 9 ವರ್ಷಗಳಲ್ಲಿ ಸುಧಾರಿಸಿದೆ.

ಸ್ನೇಹಿತರೆ,

ನಾವು ಹಡಗು ನಿರ್ಮಾಣ ಮತ್ತು ದುರಸ್ತಿ ವಲಯದ ಮೇಲೆ ಪ್ರಮುಖ ಗಮನ  ಹೊಂದಿದ್ದೇವೆ. ನಮ್ಮ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಭಾರತದ ನೈಜ ಸಾಮರ್ಥ್ಯ ಮತ್ತು ದಕ್ಷತೆಯ ಪುರಾವೆಯಾಗಿದೆ. ಮುಂದಿನ ದಶಕಗಳಲ್ಲಿ ಭಾರತವು ವಿಶ್ವದ ಅಗ್ರ 5 ಹಡಗು ನಿರ್ಮಾಣ ರಾಷ್ಟ್ರಗಳಲ್ಲಿ ಒಂದಾಗಲಿದೆ. ನಮ್ಮ ಮಂತ್ರ: 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್'. ನಾವು ಸಾಗರ ಭಾಗಗಳ ಕ್ಲಸ್ಟರ್‌ಗಳ ಅಭಿವೃದ್ಧಿಯ ಮೂಲಕ ಹಡಗು ನಿರ್ಮಾಣದ ಪಾಲುದಾರರನ್ನು ಒಟ್ಟುಗೂಡಿಸುವ ಸಮಗ್ರ ವಿಧಾನದಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವು ದೇಶದ ಹಲವಾರು ಸ್ಥಳಗಳಲ್ಲಿ ಹಡಗು ನಿರ್ಮಾಣ ಮತ್ತು ದುರಸ್ತಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಿದ್ದೇವೆ. ಭಾರತ ಈಗಾಗಲೇ ಹಡಗು ಮರುಬಳಕೆ ಕ್ಷೇತ್ರದಲ್ಲಿ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ತನ್ನ ಪ್ರಮುಖ ಬಂದರುಗಳನ್ನು ಇಂಗಾಲ ಹೊರಸೂಸುವಿಕೆಯಿಂದ ತಟಸ್ಥಗೊಳಿಸಲು, ಭಾರತವು ಕಡಲ ವಲಯದಲ್ಲಿ ಇಂಗಾಲ ನಿವ್ವಳ ಶೂನ್ಯ ಕಾರ್ಯತಂತ್ರದ ಮೇಲೆ ಕೆಲಸ ಮಾಡುತ್ತಿದೆ. ನಾವು ಭವಿಷ್ಯದತ್ತ ಸಾಗುತ್ತಿದ್ದೇವೆ, ಅಲ್ಲಿ ನೀಲಿ ಆರ್ಥಿಕತೆಯು ಹಸಿರು ಗ್ರಹವಾಗಲು ಸಾಧನವಾಗಿದೆ.

 

ಸ್ನೇಹಿತರೆ,

ವಿಶ್ವದ ಅತಿ ದೊಡ್ಡ ಕಡಲ ನಿರ್ವಾಹಕರು ಭಾರತಕ್ಕೆ ಬಂದು ಭಾರತದಿಂದ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತದಲ್ಲಿ ತ್ವರಿತ ಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಗುಜರಾತ್‌ನ ಆಧುನಿಕ ಗಿಫ್ಟ್ ಸಿಟಿ ಪ್ರಮುಖ ಹಣಕಾಸು ಸೇವೆಯಾಗಿ ಹಡಗು ಗುತ್ತಿಗೆ ಪ್ರಾರಂಭಿಸಿದೆ. ಗಿಫ್ಟ್ ಐಎಫ್‌ಎಸ್‌ಸಿ ಮೂಲಕ ಹಡಗು ಗುತ್ತಿಗೆ ಕಂಪನಿಗಳಿಗೆ ಹಲವು ರೀತಿಯ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಪ್ರಪಂಚದ 4 ಜಾಗತಿಕ ಹಡಗು ಗುತ್ತಿಗೆ ಕಂಪನಿಗಳು ಸಹ ಗಿಫ್ಟ್ ಐಎಫ್‌ಎಸ್‌ಸಿ ಯೊಂದಿಗೆ ನೋಂದಾಯಿಸಿಕೊಂಡಿರುವುದು ನನಗೆ ಖುಷಿ ತಂದಿದೆ. ಗಿಫ್ಟ್ ಐಎಫ್‌ಎಸ್‌ಸಿಗೆ ಸೇರುವಂತೆ ಈ ಶೃಂಗಸಭೆಯಲ್ಲಿ ಭಾಗವಹಿಸಿರುವ ಹಡಗು ಗುತ್ತಿಗೆ ಕಂಪನಿಗಳಿಗೂ ನಾನು ಕರೆ ನೀಡುತ್ತೇನೆ.

ಸ್ನೇಹಿತರೆ,

ಭಾರತವು ವಿಶಾಲವಾದ ಕರಾವಳಿ, ಬಲವಾದ ನದಿ ಪರಿಸರ ವ್ಯವಸ್ಥೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಇವುಗಳೆಲ್ಲವೂ ಸೇರಿ ಕಡಲ ಪ್ರವಾಸೋದ್ಯಮಕ್ಕೆ ಹೊಸ ಸಾಧ್ಯತೆಯನ್ನು ಸೃಷ್ಟಿಸುತ್ತವೆ. ಭಾರತದಲ್ಲಿರುವ ಸುಮಾರು 5,000 ವರ್ಷಗಳಷ್ಟು ಹಳೆಯದಾದ ಲೋಥಲ್ ಡಾಕ್‌ಯಾರ್ಡ್ ವಿಶ್ವ ಪರಂಪರೆಯಾಗಿದೆ. ಒಂದು ರೀತಿಯಲ್ಲಿ ಲೋಥಾಲ್ ಶಿಪ್ಪಿಂಗ್‌ನ ತೊಟ್ಟಿಲಾಗಿದೆ. ಈ ವಿಶ್ವ ಪರಂಪರೆಯನ್ನು ಸಂರಕ್ಷಿಸಲು, ಲೋಥಾಲ್‌ನಲ್ಲಿ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣವನ್ನು ಸಹ ನಿರ್ಮಿಸಲಾಗುತ್ತಿದೆ. ಲೋಥಾಲ್ ಮುಂಬೈನಿಂದ ಹೆಚ್ಚು ದೂರವಿಲ್ಲ. ಹಾಗಾಗಿ, ಇಲ್ಲಿರುವ ಅತಿಥಿಗಳು ಲೋಥಾಲ್‌ಗೆ ಒಮ್ಮೆ ಭೇಟಿ ನೀಡಬೇಕೆಂದು ವಿನಂತಿ ಮಾಡುತ್ತೇನೆ.

ಸ್ನೇಹಿತರೆ,

ಕಡಲ ಪ್ರವಾಸೋದ್ಯಮ ಹೆಚ್ಚಿಸಲು, ನಾವು ವಿಶ್ವದ ಅತಿದೊಡ್ಡ ನದಿ ವಿಹಾರ ಸೇವೆಯನ್ನು ಸಹ ಪ್ರಾರಂಭಿಸಿದ್ದೇವೆ. ಭಾರತ ತನ್ನ ವಿವಿಧ ಬಂದರುಗಳಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ. ಮುಂಬೈನಲ್ಲಿ ಹೊಸ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಈ ವರ್ಷ ನಾವು ವಿಶಾಖಪಟ್ಟಣಂ ಮತ್ತು ಚೆನ್ನೈನಲ್ಲಿ ಅಂತಹ ಆಧುನಿಕ ಕ್ರೂಸ್ ಟರ್ಮಿನಲ್‌ಗಳನ್ನು ನಿರ್ಮಿಸಿದ್ದೇವೆ. ಭಾರತವು ತನ್ನ ಅತ್ಯಾಧುನಿಕ ಮೂಲಸೌಕರ್ಯಗಳ ಮೂಲಕ ಜಾಗತಿಕ ಕ್ರೂಸ್ ತಾಣವಾಗುವತ್ತ ಸಾಗುತ್ತಿದೆ.

ಸ್ನೇಹಿತರೆ,

ಅಭಿವೃದ್ಧಿ, ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯ ಸಂಯೋಜನೆಯನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವಾಗುವ ಗುರಿಯತ್ತ ಸಾಗುತ್ತಿರುವ ಈ ಸಮಯದಲ್ಲಿ, ಇದು ನಿಮಗೆ ಸುವರ್ಣಾವಕಾಶವಾಗಿದೆ. ಭಾರತಕ್ಕೆ ಬನ್ನಿ ಮತ್ತು ಅಭಿವೃದ್ಧಿಯ ಪಥದಲ್ಲಿ ನಮ್ಮೊಂದಿಗೆ ಸೇರಲು ವಿಶ್ವಾದ್ಯಂತ ಇರುವ ನಿಮ್ಮಂತಹ ಎಲ್ಲಾ ಹೂಡಿಕೆದಾರರನ್ನು ನಾನು ಮತ್ತೊಮ್ಮೆ ಮುಕ್ತವಾಗಿ ಆಹ್ವಾನಿಸುತ್ತೇನೆ. ನಾವೆಲ್ಲಾ ಒಟ್ಟಿಗೆ ನಡೆಯುತ್ತೇವೆ, ನಾವೆಲ್ಲಾ ಒಟ್ಟಿಗೆ ಸೇರಿ ಹೊಸ ಭವಿಷ್ಯ ರೂಪಿಸುತ್ತೇವೆ. ತುಂಬು ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Railways' financial health improves in last 10 yrs, surplus revenue after meeting cost: Ashwini Vaishnaw

Media Coverage

Railways' financial health improves in last 10 yrs, surplus revenue after meeting cost: Ashwini Vaishnaw
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಫೆಬ್ರವರಿ 2026
February 07, 2026

Empowering the Nation: Trade Deals, Tech Innovations, and Rural Revival Under PM Modi