ʻಹುಕುಮ್‌ಚಂದ್ ಮಿಲ್ʼನ ಕಾರ್ಮಿಕರ ಬಾಕಿ ಇರುವ ಚೆಕ್‌ಗಳ ಹಸ್ತಾಂತರ
ಖಾರ್ಗೋನ್ ಜಿಲ್ಲೆಯಲ್ಲಿ 60 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರಕ್ಕೆ ಶಂಕುಸ್ಥಾಪನೆ
"ಶ್ರಮಿಕರ ಆಶೀರ್ವಾದ ಮತ್ತು ಪ್ರೀತಿಯ ಪ್ರಭಾವ ನನಗೆ ತಿಳಿದಿದೆ"
"ಬಡವರು ಮತ್ತು ಅವಕಾಶ ವಂಚಿತರಿಗೆ ಘನತೆ ಮತ್ತು ಗೌರವ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ಸಮೃದ್ಧ ಭಾರತಕ್ಕೆ ಕೊಡುಗೆ ನೀಡುವ ಸಾಮರ್ಥ್ಯವಿರುವ ಸಶಕ್ತ ಶ್ರಮಿಕರ ಸೃಷ್ಟಿ ನಮ್ಮ ಗುರಿ"
" ಸ್ವಚ್ಛತೆ ಮತ್ತು ತಿನಿಸುಗಳ ಕ್ಷೇತ್ರಗಳಲ್ಲಿ ಇಂದೋರ್ ಅಗ್ರಗಣ್ಯ ನಗರ"
"ಇತ್ತೀಚಿನ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಕಾರ್ಯನಿರತವಾಗಿದೆ"
“ಮಧ್ಯಪ್ರದೇಶದ ಜನರು 'ಮೋದಿ ಅವರ ಗ್ಯಾರಂಟಿ' ವಾಹನದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ”

ನಮಸ್ಕಾರ,

ಮೋಹನ್ ಯಾದವ್, ಮಧ್ಯಪ್ರದೇಶದ ಉತ್ಸಾಹಿ ಮುಖ್ಯಮಂತ್ರಿ; ಇಂದೋರ್ ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ತಾಯ್; ನನ್ನ ಸಂಸದೀಯ ಸಹೋದ್ಯೋಗಿಗಳು; ಹೊಸ ವಿಧಾನಸಭೆಯಲ್ಲಿ ಆಯ್ಕೆಯಾದ ಶಾಸಕರು; ಇತರ ಗಣ್ಯರೇ, ಮತ್ತು ನನ್ನ ಪ್ರೀತಿಯ ಕಾರ್ಮಿಕ ಸಹೋದರ ಸಹೋದರಿಯರೇ!

ಇಂದಿನ ಕಾರ್ಯಕ್ರಮವು ನಮ್ಮ ಕಾರ್ಮಿಕ ಸಹೋದರ ಸಹೋದರಿಯರ ವರ್ಷಗಳ ಕಠಿಣ ಪರಿಶ್ರಮ, ಸಂಕಲ್ಪಗಳು ಮತ್ತು ಕನಸುಗಳ ಫಲಿತಾಂಶವಾಗಿದೆ. ಮತ್ತು ನನಗೆ ಸಂತೋಷವಾಗಿದೆ ಏಕೆಂದರೆ ಇಂದು ಅಟಲ್ ಜಿ ಅವರ ಜನ್ಮ ದಿನಾಚರಣೆ ಮತ್ತು ಭಾರತೀಯ ಜನತಾ ಪಕ್ಷದ ಈ ಹೊಸ ಸರ್ಕಾರ ಮತ್ತು ಹೊಸ ಮುಖ್ಯಮಂತ್ರಿಯ ಉಪಸ್ಥಿತಿಯಲ್ಲಿ ಮಧ್ಯಪ್ರದೇಶದಲ್ಲಿ ಇದು ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿದೆ. ಮತ್ತು ನನ್ನ ಬಡ, ದೀನದಲಿತ ಕಾರ್ಮಿಕ ಸಹೋದರ ಸಹೋದರಿಯರಿಗಾಗಿ ಇಲ್ಲಿರುವುದು ನನಗೆ ಅಪಾರ ಸಂತೋಷದ ವಿಷಯವಾಗಿದೆ. ಅಂತಹ ಕಾರ್ಯಕ್ರಮಕ್ಕೆ ಹಾಜರಾಗುವ ಅವಕಾಶವನ್ನು ಪಡೆಯುವುದು ನನಗೆ ಅತ್ಯಂತ ತೃಪ್ತಿ ತಂದಿದೆ.

ಡಬಲ್ ಇಂಜಿನ್ ಸರ್ಕಾರದ ಹೊಸ ತಂಡಕ್ಕೆ ನಮ್ಮ ಕಾರ್ಮಿಕ ಕುಟುಂಬಗಳ ಆಶೀರ್ವಾದ ಸಿಗುತ್ತದೆ ಎಂದು ನನಗೆ ವಿಶ್ವಾಸವಿದೆ. ಬಡವರ ಆಶೀರ್ವಾದ, ವಾತ್ಸಲ್ಯ ಮತ್ತು ಪ್ರೀತಿ ಏನು ಅದ್ಭುತಗಳನ್ನು ಮಾಡಬಹುದು ಎಂದು ನನಗೆ ಚೆನ್ನಾಗಿ ತಿಳಿದಿದೆ. ಮಧ್ಯಪ್ರದೇಶದ ಹೊಸ ತಂಡವು ಮುಂಬರುವ ದಿನಗಳಲ್ಲಿ ಹಲವಾರು ಪ್ರಶಂಸೆಗಳನ್ನು ಸಾಧಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಹುಕುಮ್ ಚಂದ್ ಮಿಲ್ ನ ಕಾರ್ಮಿಕರಿಗೆ ಪ್ಯಾಕೇಜ್ ಘೋಷಿಸಿದಾಗ, ಅದು ಇಂದೋರ್ ನಲ್ಲಿ ಹಬ್ಬದ ತಾವರಣವನ್ನು ಸೃಷ್ಟಿಸಿತು ಎಂದು ನನಗೆ ತಿಳಿಸಲಾಗಿದೆ. ಈ ನಿರ್ಧಾರವು ನಮ್ಮ ಕಾರ್ಮಿಕ ಸಹೋದರ ಸಹೋದರಿಯರನ್ನು ಇನ್ನಷ್ಟು ಸಂತೋಷಪಡಿಸಿದೆ.

ಇಂದಿನ ಕಾರ್ಯಕ್ರಮವು ಇನ್ನೂ ವಿಶೇಷವಾಗಿದೆ ಏಕೆಂದರೆ ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ; ಮತ್ತು ಇಂದು ಉತ್ತಮ ಆಡಳಿತ ದಿನ. ಮಧ್ಯಪ್ರದೇಶದೊಂದಿಗೆ ಅಟಲ್ ಜೀ ಅವರ ಸಂಬಂಧ ಮತ್ತು ರಾಜ್ಯದ ಬಗ್ಗೆ ಅವರ ಸಂಬಂಧದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಉತ್ತಮ ಆಡಳಿತ ದಿನದಂದು ಈ ಕಾರ್ಯಕ್ರಮಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಮತ್ತು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ನನ್ನ ಕುಟುಂಬ ಸದಸ್ಯರೇ,

ಇಂದು ಸಾಂಕೇತಿಕವಾಗಿ 224 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಲಾಗಿದೆ. ಈ ಮೊತ್ತವು ಮುಂಬರುವ ದಿನಗಳಲ್ಲಿ ಕಾರ್ಮಿಕ ಸಹೋದರ ಸಹೋದರಿಯರನ್ನು ತಲುಪಲಿದೆ. ನೀವು ಹಲವಾರು ಸವಾಲುಗಳನ್ನು ಎದುರಿಸಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ ಈಗ ಸುವರ್ಣ ಭವಿಷ್ಯದ ಉದಯ ನಿಮ್ಮ ಮುಂದೆ ಇದೆ. ಇಂದೋರ್ ನ  ಜನರು ಡಿಸೆಂಬರ್ 25 ಅನ್ನು ಕಾರ್ಮಿಕರಿಗೆ ನ್ಯಾಯ ನೀಡಿದ ದಿನವೆಂದು ನೆನಪಿಸಿಕೊಳ್ಳುತ್ತಾರೆ. ನಿಮ್ಮ ತಾಳ್ಮೆ ಮತ್ತು ಕಠಿಣ ಪರಿಶ್ರಮಕ್ಕೆ ನಾನು ನಮಸ್ಕರಿಸುತ್ತೇನೆ.

 

ಸ್ನೇಹಿತರೇ,

ದೇಶದ ನಾಲ್ಕು ವಿಭಾಗಗಳು ನನಗೆ ಅತ್ಯಂತ ಮುಖ್ಯ ಎಂದು ನಾನು ಯಾವಾಗಲೂ ಹೇಳಿದ್ದೇನೆ. ಇವರು - ಬಡವರು, ಯುವಕರು, ಮಹಿಳೆಯರು ಮತ್ತು ನನ್ನ ರೈತ ಸಹೋದರ ಸಹೋದರಿಯರು. ಮಧ್ಯಪ್ರದೇಶ ಸರ್ಕಾರವು ಬಡವರ ಜೀವನವನ್ನು ಪರಿವರ್ತಿಸಲು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಬಡವರ ಸೇವೆ, ಕಾರ್ಮಿಕರಿಗೆ ಗೌರವ ಮತ್ತು ಸಮಾಜದ ವಂಚಿತ ವರ್ಗಗಳಿಗೆ ಗೌರವ ನೀಡುವುದು ನಮ್ಮ ಆದ್ಯತೆಯಾಗಿದೆ. ದೇಶದ ಕಾರ್ಮಿಕರು ಸಶಕ್ತರಾಗುವುದನ್ನು ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವಲ್ಲಿ ಗಮನಾರ್ಹ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತೇವೆ.

ಕುಟುಂಬ ಸದಸ್ಯರೇ,

ಸ್ವಚ್ಛತೆ ಮತ್ತು ಆಹಾರಕ್ಕೆ ಹೆಸರುವಾಸಿಯಾದ ಇಂದೋರ್ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಜವಳಿ ಉದ್ಯಮವು ಇಂದೋರ್ ನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇಲ್ಲಿನ 100 ವರ್ಷಗಳಷ್ಟು ಹಳೆಯದಾದ ಮಹಾರಾಜ ತುಕೋಜಿರಾವ್ ಬಟ್ಟೆ ಮಾರುಕಟ್ಟೆಯ ಇತಿಹಾಸ ನಿಮಗೆಲ್ಲರಿಗೂ ತಿಳಿದಿದೆ. ನಗರದ ಮೊದಲ ಹತ್ತಿ ಗಿರಣಿಯನ್ನು ಹೋಳ್ಕರ್ ರಾಜಮನೆತನದವರು ಸ್ಥಾಪಿಸಿದರು. ಮಾಲ್ವಾದ ಹತ್ತಿ ಬ್ರಿಟನ್ ಮತ್ತು ಅನೇಕ ಯುರೋಪಿಯನ್ ದೇಶಗಳಿಗೆ ಹೋಗುತ್ತಿತ್ತು ಮತ್ತು ಅಲ್ಲಿನ ಗಿರಣಿಗಳಲ್ಲಿ ಬಟ್ಟೆಯನ್ನು ತಯಾರಿಸಲಾಗುತ್ತಿತ್ತು. ಇಂದೋರ್ ನ ಮಾರುಕಟ್ಟೆಗಳು ಹತ್ತಿಯ ಬೆಲೆಯನ್ನು ನಿರ್ಧರಿಸುತ್ತಿದ್ದ ಸಮಯವಿತ್ತು. ಇಂದೋರ್ ನಲ್ಲಿ ತಯಾರಿಸಿದ ಬಟ್ಟೆಗಳಿಗೆ ದೇಶ ಮತ್ತು ವಿದೇಶಗಳಲ್ಲಿ ಬೇಡಿಕೆ ಇತ್ತು. ಇಲ್ಲಿನ ಜವಳಿ ಗಿರಣಿಗಳು ಉದ್ಯೋಗದ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದ್ದವು. ಈ ಗಿರಣಿಗಳಲ್ಲಿ ಕೆಲಸ ಮಾಡುವ ಅನೇಕ ಕಾರ್ಮಿಕರು ಇತರ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿದರು. ಇಂದೋರ್ ಅನ್ನು ಮ್ಯಾಂಚೆಸ್ಟರ್ ಗೆ  ಹೋಲಿಸಿದ ಅವಧಿ ಇದು. ಆದರೆ ಕಾಲ ಬದಲಾಯಿತು ಮತ್ತು ಇಂದೋರ್ ಹಿಂದಿನ ಸರ್ಕಾರಗಳ ನೀತಿಗಳ ಭಾರವನ್ನು ಹೊರಬೇಕಾಯಿತು.

ಡಬಲ್ ಇಂಜಿನ್ ಸರ್ಕಾರವು ಇಂದೋರ್ ನ ಕಳೆದುಹೋದ ವೈಭವವನ್ನು ಮರಳಿ ತರಲು ಪ್ರಯತ್ನಿಸುತ್ತಿದೆ. ಭೋಪಾಲ್ ಮತ್ತು ಇಂದೋರ್ ನಡುವೆ ಹೂಡಿಕೆ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇಂದೋರ್-ಪಿತಾಂಪುರ್ ಆರ್ಥಿಕ ಕಾರಿಡಾರ್, ಬಹು ಮಾದರಿ ಲಾಜಿಸ್ಟಿಕ್ಸ್ ಪಾರ್ಕ್, ವಿಕ್ರಮ್ ಉದ್ಯೋಗಪುರಿಯಲ್ಲಿ ವೈದ್ಯಕೀಯ ಸಾಧನ ಪಾರ್ಕ್, ಧಾರ್ ಜಿಲ್ಲೆಯ ಭೆನ್ಸೋಲಾದಲ್ಲಿನ ಪಿಎಂ ಮಿತ್ರ ಪಾರ್ಕ್ ಮುಂತಾದ ವಿವಿಧ ಯೋಜನೆಗಳಲ್ಲಿ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಈ ಕಾರಣದಿಂದಾಗಿ, ಇಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಈ ಅಭಿವೃದ್ಧಿ ಯೋಜನೆಗಳ ಪರಿಣಾಮವಾಗಿ ಇಲ್ಲಿನ ಆರ್ಥಿಕತೆಯು ವೇಗವಾಗಿ ಬೆಳೆಯುತ್ತದೆ.

ಸ್ನೇಹಿತರೇ,

ಮಧ್ಯಪ್ರದೇಶದ ಹೆಚ್ಚಿನ ಭಾಗವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಇಂದೋರ್ ಸೇರಿದಂತೆ ಮಧ್ಯಪ್ರದೇಶದ ಅನೇಕ ನಗರಗಳು ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಮತೋಲನಕ್ಕೆ ಸ್ಪೂರ್ತಿದಾಯಕ ಉದಾಹರಣೆಗಳಾಗಿವೆ. ಏಷ್ಯಾದ ಅತಿದೊಡ್ಡ ಗೋಬರ್ಧನ್ ಸ್ಥಾವರವೂ ಇಂದೋರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಕಾರ್ಯಾಚರಣೆಯನ್ನು ಉತ್ತೇಜಿಸಲು ಇ-ಚಾರ್ಜಿಂಗ್ ಮೂಲಸೌಕರ್ಯವನ್ನು ಇಲ್ಲಿ ವೇಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಇಂದು ನನಗೆ ಜಾಲೂದ್ ಸೌರ ವಿದ್ಯುತ್ ಸ್ಥಾವರದ ವರ್ಚುವಲ್ ಭೂಮಿ ಪೂಜೆ ಮಾಡುವ ಅವಕಾಶ ಸಿಕ್ಕಿತು. ಈ ಸ್ಥಾವರವು ಪ್ರತಿ ತಿಂಗಳು 4 ಕೋಟಿ ರೂ.ಗಳ ವಿದ್ಯುತ್ ಬಿಲ್ ಗಳನ್ನು ಉಳಿಸಲಿದೆ. ಹಸಿರು ಬಾಂಡ್ ಗಳನ್ನು ನೀಡುವ ಮೂಲಕ ಈ ಸ್ಥಾವರಕ್ಕಾಗಿ ಜನರಿಂದ ಹಣವನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಗ್ರೀನ್ ಬಾಂಡ್ ನ ಈ ಪ್ರಯತ್ನವು ಪರಿಸರವನ್ನು ರಕ್ಷಿಸುವಲ್ಲಿ ದೇಶದ ನಾಗರಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತೊಂದು ಮಾಧ್ಯಮವಾಗಲಿದೆ.

 

ನನ್ನ ಕುಟುಂಬ ಸದಸ್ಯರೇ,

ನಾವು ತೆಗೆದುಕೊಂಡ ನಿರ್ಣಯಗಳು ಮತ್ತು ಚುನಾವಣೆಯ ಸಮಯದಲ್ಲಿ ನಾವು ನೀಡಿದ ಭರವಸೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಯನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು, ವಿಕಸಿತ ಭಾರತ ಸಂಕಲ್ಪ ಯಾತ್ರೆ ಮಧ್ಯಪ್ರದೇಶದ ಪ್ರತಿಯೊಂದು ಸ್ಥಳವನ್ನು ತಲುಪುತ್ತಿದೆ. ಚುನಾವಣೆಗಳಿಂದಾಗಿ, ಈ ಯೋಜನೆ ಮಧ್ಯಪ್ರದೇಶದಲ್ಲಿ ಸ್ವಲ್ಪ ತಡವಾಗಿ ಪ್ರಾರಂಭವಾಯಿತು. ಆದರೆ ಉಜ್ಜಯಿನಿಯಿಂದ ಪ್ರಾರಂಭವಾದ ಕೆಲವೇ ದಿನಗಳಲ್ಲಿ, ಅದಕ್ಕೆ ಸಂಬಂಧಿಸಿದ 600 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಯಿತು.

ಈ ಉಪಕ್ರಮದ ಮೂಲಕ ಲಕ್ಷಾಂತರ ಜನರು ನೇರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ನರೇಂದ್ರ ಮೋದಿಯವರ ಭರವಸೆಯ ವಾಹನವು ನಿಮ್ಮ ಸ್ಥಳವನ್ನು ತಲುಪಿದಾಗ, ನೀವು ಅದರ ಸಂಪೂರ್ಣ ಲಾಭವನ್ನು ಪಡೆಯಬೇಕು ಎಂದು ನಾನು ಮಧ್ಯಪ್ರದೇಶದ ಎಲ್ಲಾ ಜನರನ್ನು ಒತ್ತಾಯಿಸುತ್ತೇನೆ. ಎಲ್ಲರೂ ಅಲ್ಲಿ ಹಾಜರಿರಬೇಕು. ಸರ್ಕಾರದ ಯೋಜನೆಗಳ ಪ್ರಯೋಜನಗಳಿಂದ ಯಾರೂ ವಂಚಿತರಾಗದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ.

ನರೇಂದ್ರ ಮೋದಿ ಅವರ ಭರವಸೆಯನ್ನು ನಂಬಿದ್ದಕ್ಕಾಗಿ ಮತ್ತು ನಮಗೆ ಅಪಾರ ಬಹುಮತವನ್ನು ನೀಡಿದ್ದಕ್ಕಾಗಿ ನಾನು ಮತ್ತೊಮ್ಮೆ ಮಧ್ಯಪ್ರದೇಶದ ಜನರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಮತ್ತೊಮ್ಮೆ, ನಾನು ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ಮತ್ತು ಇಂದು ರಾಜ್ಯ ಸರ್ಕಾರವು ಬಡವರು ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಈ ಅವಕಾಶವನ್ನು ನೀಡಿತು. ಅಂತಹ ಕ್ಷಣಗಳು ಯಾವಾಗಲೂ ನನಗೆ ಉತ್ತೇಜನ ನೀಡುತ್ತವೆ. ಅದಕ್ಕಾಗಿಯೇ ನಮ್ಮೆಲ್ಲರನ್ನೂ ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದ ಇಂದೋರ್ ಜನರು, ಮಧ್ಯಪ್ರದೇಶ ಸರ್ಕಾರ ಮತ್ತು ನನ್ನ ಕಾರ್ಮಿಕ ಸಹೋದರ ಸಹೋದರಿಯರಿಗೆ ನಾನು ಆಭಾರಿಯಾಗಿದ್ದೇನೆ. ಅವರ ಕೊರಳಲ್ಲಿರುವ ಹಾರಗಳು ಇದು ಎಂತಹ ಶುಭ ಸಂದರ್ಭ ಎಂದು ನನಗೆ ಹೇಳುತ್ತಿವೆ ಮತ್ತು ಅದು ಇಷ್ಟು ದೀರ್ಘ ಕಾಯುವಿಕೆಯ ನಂತರ ಬಂದಿದೆ. ನಿಮ್ಮ ಮುಖದ ಮೇಲಿನ ಸಂತೋಷ ಮತ್ತು ಈ ಹಾರಗಳ ಪರಿಮಳವು ಖಂಡಿತವಾಗಿಯೂ ಸಮಾಜಕ್ಕೆ ನಿರ್ಣಾಯಕವಾದದ್ದನ್ನು ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ. ನಾನು ನಿಮಗೆ ಶುಭ ಹಾರೈಸುತ್ತೇನೆ.

ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Vikas Bhi, Virasat Bhi: How JATAN, AI and Digital Archives are revolutionising India’s cultural heritage preservation

Media Coverage

Vikas Bhi, Virasat Bhi: How JATAN, AI and Digital Archives are revolutionising India’s cultural heritage preservation
NM on the go

Nm on the go

Always be the first to hear from the PM. Get the App Now!
...
ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿದ ಶೂರರಿಗೆ ಪ್ರಧಾನಮಂತ್ರಿ ಗೌರವ ನಮನ
August 09, 2026

ಭಾರತ ಬಿಟ್ಟು ತೊಲಗಿ ಐತಿಹಾಸಿಕ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರನ್ನೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿದ್ದಾರೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಶೌರ್ಯ ಮತ್ತು ದೃಢಸಂಕಲ್ಪಕ್ಕೆ ಗೌರವ ಸಮರ್ಪಿಸಿದ್ದಾರೆ. ಮಹಾತ್ಮಾ ಗಾಂಧಿಯವರ ನಾಯಕತ್ವದಿಂದ ಪ್ರೇರಿತವಾದ ಭಾರತ ಬಿಟ್ಟು ತೊಲಗಿ ಚಳವಳಿಯ ಕರೆಯು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು ಮತ್ತು ವಸಾಹತುಶಾಹಿ ಆಳ್ವಿಕೆಯನ್ನು ತೊಡೆದು ಹಾಕಲು ಭಾರತದ ಜನರ ಅಚಲ ಸಂಕಲ್ಪವನ್ನು ಪ್ರತಿಬಿಂಬಿಸಿತ್ತು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಐತಿಹಾಸಿಕ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರನ್ನು ಸ್ಮರಿಸುತ್ತಿದ್ದೇನೆ. ಅವರ ಸ್ಥೈರ್ಯ ಪ್ರತಿಯೊಬ್ಬ ಭಾರತೀಯನಿಗೂ ಸದಾ ಸ್ಫೂರ್ತಿಯ ಸೆಲೆಯಾಗಿರಲಿದೆ. ಮಹಾತ್ಮಾ ಗಾಂಧಿಯವರ ನಾಯಕತ್ವದಿಂದ ಪ್ರೇರಿತವಾದ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯವನ್ನು ತುಂಬಿತು ಮತ್ತು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತರಾಗಲು ನಮ್ಮ ಜನರ ಅಚಲ ದೃಢಸಂಕಲ್ಪವನ್ನು ಪ್ರತಿಬಿಂಬಿಸಿತು.