ಅದು ವ್ಯಾಪಾರವಾಗಿರಲಿ ಅಥವಾ ರಾಜತಾಂತ್ರಿಕತೆಯಾಗಿರಲಿ, ಪರಸ್ಪರ ನಂಬಿಕೆಯು ಯಾವುದೇ ಪಾಲುದಾರಿಕೆಯ ಅಡಿಪಾಯವಾಗಿದೆ; ಭಾರತ-ರಷ್ಯಾ ಸಂಬಂಧಗಳ ದೊಡ್ಡ ಶಕ್ತಿ ಈ ನಂಬಿಕೆಯಲ್ಲಿ ಅಡಗಿದೆ; ಈ ನಂಬಿಕೆಯು ಜಂಟಿ ಪ್ರಯತ್ನಗಳಿಗೆ ದಿಕ್ಕು ಮತ್ತು ವೇಗವನ್ನು ಒದಗಿಸುತ್ತದೆ, ಜೊತೆಗೆ ಹೊಸ ಕನಸುಗಳು ಮತ್ತು ಆಕಾಂಕ್ಷೆಗಳಿಗೆ ಸ್ಫೂರ್ತಿಯ ಚಿಲುಮೆಯಾಗಿ ಅದು ಕಾರ್ಯನಿರ್ವಹಿಸುತ್ತದೆ: ಪ್ರಧಾನಮಂತ್ರಿ
2030ಕ್ಕೆ ಮುನ್ನ 100 ಶತಕೋಟಿ ಡಾಲರ್ ಮೌಲ್ಯದ ಭಾರತ-ರಷ್ಯಾ ವ್ಯಾಪಾರ ಗುರಿಯನ್ನು ಸಾಧಿಸಲಾಗುವುದು: ಪ್ರಧಾನಮಂತ್ರಿ
ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ತತ್ವದ ಮಾರ್ಗದರ್ಶನದಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ

ಘನವೆತ್ತ ನನ್ನ ಸ್ನೇಹಿತರಾದ ಅಧ್ಯಕ್ಷರಾದ ಪುಟಿನ್ ಅವರೇ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಎಲ್ಲಾ ನಾಯಕರೆ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ಕಾರ.

ಇಂದು ಇಷ್ಟು ದೊಡ್ಡ ನಿಯೋಗದೊಂದಿಗೆ ಈ ಕಾರ್ಯಕ್ರಮದ ಭಾಗವಾಗಿರುವುದು ಅಧ್ಯಕ್ಷರಾದ ಪುಟಿನ್ ಅವರ ಅತ್ಯಂತ ಪ್ರಮುಖ ನಿರ್ಧಾರ ಹಾಗೂ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. 'ಇಂಡಿಯಾ ರಷ್ಯಾ ಬಿಸಿನೆಸ್ ಫೋರಂ'ನಲ್ಲಿ ಭಾಗವಹಿಸಿರುವ ನಿಮ್ಮೆಲ್ಲರನ್ನೂ ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ನಿಮ್ಮೆಲ್ಲರ ನಡುವೆ ಇರುವುದು ನನಗೆ ಅತ್ಯಂತ ಸಂತಸದ ವಿಷಯವಾಗಿದೆ. ಈ ವೇದಿಕೆಗೆ ಆಗಮಿಸಿ ತಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕಾಗಿ ನನ್ನ ಸ್ನೇಹಿತರಾದ ಅಧ್ಯಕ್ಷ ಪುಟಿನ್ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ವ್ಯಾಪಾರ-ವಹಿವಾಟಿಗೆ ಸರಳ ಮತ್ತು ಸುಗಮವಾದ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ. ಭಾರತ ಮತ್ತು ಯುರೇಷಿಯನ್ ಎಕನಾಮಿಕ್ ಯೂನಿಯನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (FTA) ಕುರಿತು ಚರ್ಚೆಗಳು ಪ್ರಾರಂಭವಾಗಿವೆ.

ಮತ್ತು ಸ್ನೇಹಿತರೇ, 

ಪಿಯೂಷ್ ಅವರು ಈಗಷ್ಟೇ ಪ್ರಸ್ತಾಪಿಸಿದ ಈ ವೈವಿಧ್ಯಮಯ ವಿಷಯಗಳ ಹೊರತಾಗಿಯೂ ಮತ್ತು ಅಧ್ಯಕ್ಷರು ವಿವರಿಸಿದ ಸಾಧ್ಯತೆಗಳನ್ನು ಗಮನಿಸಿದರೆ, ನಾವು ಅತ್ಯಂತ ಕಡಿಮೆ ಸಮಯದಲ್ಲಿ ಮಹತ್ವದ ಗುರಿಗಳನ್ನು ಸಾಧಿಸಬಹುದು ಎಂದು ಅನ್ನಿಸುತ್ತಿದೆ. ವ್ಯಾಪಾರವೇ ಆಗಿರಲಿ ಅಥವಾ ರಾಜತಾಂತ್ರಿಕತೆಯೇ ಆಗಿರಲಿ, ಯಾವುದೇ ಪಾಲುದಾರಿಕೆಯ ಅಡಿಪಾಯವೇ 'ಪರಸ್ಪರ ನಂಬಿಕೆ'. ಈ ನಂಬಿಕೆಯೇ ಭಾರತ-ರಷ್ಯಾ ಸಂಬಂಧಗಳ ಅತಿದೊಡ್ಡ ಶಕ್ತಿಯಾಗಿದೆ. ಇದು ನಮ್ಮ ಜಂಟಿ ಪ್ರಯತ್ನಗಳಿಗೆ ದಿಕ್ಕು ಮತ್ತು ವೇಗವನ್ನು ನೀಡುತ್ತದೆ. ಹೊಸ ಕನಸುಗಳು ಮತ್ತು ಹೊಸ ಆಕಾಂಕ್ಷೆಗಳೊಂದಿಗೆ ಹಾರಲು ನಮಗೆ ಸ್ಫೂರ್ತಿ ನೀಡುವ 'ಲಾಂಚ್ ಪ್ಯಾಡ್' ಇದೇ ಆಗಿದೆ. ಕಳೆದ ವರ್ಷ, ಅಧ್ಯಕ್ಷ ಪುಟಿನ್ ಮತ್ತು ನಾನು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ ಗಿಂತ ಹೆಚ್ಚು ಮಾಡುವ ಗುರಿಯನ್ನು ಹಾಕಿಕೊಂಡಿದ್ದೆವು. ಆದರೆ ನಿನ್ನೆಯಿಂದ ಅಧ್ಯಕ್ಷ ಪುಟಿನ್ ಅವರೊಂದಿಗೆ ನಡೆಸಿದ ಮಾತುಕತೆ ಮತ್ತು ಇಲ್ಲಿರುವ ಸಾಧ್ಯತೆಗಳನ್ನು ನೋಡಿದಾಗ, ನಾವು 2030ರವರೆಗೆ ಕಾಯಬೇಕಾಗಿಲ್ಲ ಎಂದು ನನಗೆ ಅನ್ನಿಸುತ್ತಿದೆ. ನನಗಿದು ಸ್ಪಷ್ಟವಾಗಿ ಕಾಣುತ್ತಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಆ ಗುರಿಯನ್ನು ಸಾಧಿಸುವ ದೃಢಸಂಕಲ್ಪದೊಂದಿಗೆ ನಾವು ಮುಂದುವರಿಯುತ್ತಿದ್ದೇವೆ ಮತ್ತು ನನ್ನ ಆತ್ಮವಿಶ್ವಾಸ ಹೆಚ್ಚುತ್ತಿದೆ. ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಕಡಿಮೆ ಮಾಡಲಾಗುತ್ತಿದೆ.

 

ಆದರೆ ಸ್ನೇಹಿತರೇ, 

ಈ ಪ್ರಯತ್ನಗಳ ಹಿಂದಿನ ನಿಜವಾದ ಶಕ್ತಿ ಇರುವುದು ನಿಮ್ಮಂತಹ ಬಿಸಿನೆಸ್ ಲೀಡರ್ ಗಳಲ್ಲಿ. ನಿಮ್ಮ ಶಕ್ತಿ, ನಿಮ್ಮ ಆವಿಷ್ಕಾರ ಮತ್ತು ನಿಮ್ಮ ಮಹತ್ವಾಕಾಂಕ್ಷೆಯೇ ನಮ್ಮ ಹಂಚಿಕೆಯ ಭವಿಷ್ಯವನ್ನು ರೂಪಿಸುತ್ತದೆ.

ಸ್ನೇಹಿತರೇ,

ಕಳೆದ 11 ವರ್ಷಗಳಲ್ಲಿ ಭಾರತದಲ್ಲಿ ನಾವು ತಂದಿರುವ ಬದಲಾವಣೆಯ ವೇಗ ಮತ್ತು ವ್ಯಾಪ್ತಿ ಅಭೂತಪೂರ್ವವಾಗಿದೆ. 'ರಿಫಾರ್ಮ್ (ಸುಧಾರಣೆ), ಪರ್ಫಾರ್ಮ್ (ಸಾಧನೆ) ಮತ್ತು ಟ್ರಾನ್ಸ್‌ಫಾರ್ಮ್ (ಪರಿವರ್ತನೆ)' ಎಂಬ ತತ್ವವನ್ನು ಅನುಸರಿಸುವ ಮೂಲಕ, ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ದಾಪುಗಾಲು ಹಾಕುತ್ತಿದೆ. ಮತ್ತು ಈ 11 ವರ್ಷಗಳ ಸುಧಾರಣಾ ಪಯಣದಲ್ಲಿ, ನಾವು ದಣಿದಿಲ್ಲ ಹಾಗೂ ಎಲ್ಲಿಯೂ ನಿಂತಿಲ್ಲ. ನಮ್ಮ ಸಂಕಲ್ಪ ಹಿಂದೆಂದಿಗಿಂತಲೂ ಪ್ರಬಲವಾಗಿದೆ ಮತ್ತು ನಾವು ನಮ್ಮ ಗುರಿಯತ್ತ ಅತ್ಯಂತ ವೇಗವಾಗಿ ಹಾಗೂ ಅಷ್ಟೇ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದೇವೆ. ಜಿ ಎಸ್‌ ಟಿ ಯಲ್ಲಿನ ಮುಂದಿನ ಹಂತದ ಸುಧಾರಣೆಗಳು ಮತ್ತು ನಿಯಮಗಳ ಅನುಸರಣೆಯ ಹೊರೆ ತಗ್ಗಿಸಿರುವುದು, ಸುಲಲಿತ ವಾಣಿಜ್ಯಕ್ಕೆ ಉತ್ತೇಜನ ನೀಡಲು ಕೈಗೊಂಡ ಮಹತ್ವದ ಕ್ರಮಗಳಾಗಿವೆ. ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಗಿದ್ದು, ಇದು ಈ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಈಗ, ನಾವು ನಾಗರಿಕ ಪರಮಾಣು ವಲಯದಲ್ಲೂ ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆಯುತ್ತಿದ್ದೇವೆ. ಇವು ಕೇವಲ ಆಡಳಿತಾತ್ಮಕ ಸುಧಾರಣೆಗಳಲ್ಲ, ಬದಲಿಗೆ ಮನಸ್ಥಿತಿಯ ಸುಧಾರಣೆಗಳಾಗಿವೆ. ಈ ಎಲ್ಲಾ ಸುಧಾರಣೆಗಳ ಹಿಂದಿರುವುದು ಒಂದೇ ಸಂಕಲ್ಪ, ಅದೇ 'ವಿಕಸಿತ ಭಾರತ'.

 

ಸ್ನೇಹಿತರೇ,

ನಿನ್ನೆ ಮತ್ತು ಇಂದು ನೀವು ಬಹಳ ಉಪಯುಕ್ತ ಮತ್ತು ಅರ್ಥಪೂರ್ಣ ಚರ್ಚೆಗಳನ್ನು ನಡೆಸಿದ್ದೀರಿ. ಈ ಸಭೆಯಲ್ಲಿ ಭಾರತ ಮತ್ತು ರಷ್ಯಾ ನಡುವಿನ ಸಹಕಾರದ ಎಲ್ಲಾ ಕ್ಷೇತ್ರಗಳಿಗೂ ಪ್ರಾತಿನಿಧ್ಯ ದೊರೆತಿರುವುದು ನನಗೆ ಸಂತೋಷ ತಂದಿದೆ. ನಿಮ್ಮ ಸಲಹೆಗಳು ಮತ್ತು ಪ್ರಯತ್ನಗಳಿಗಾಗಿ ನಾನು ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನನ್ನ ಕಡೆಯಿಂದ, ನಮ್ಮ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಕೆಲವು ವಿಚಾರಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಮೊದಲನೆಯದಾಗಿ, ಲಾಜಿಸ್ಟಿಕ್ಸ್ ಮತ್ತು ಸಂಪರ್ಕ ಕ್ಷೇತ್ರದಲ್ಲಿ, ಇಂದಿನ ಸಭೆಯಲ್ಲಿ ಅಧ್ಯಕ್ಷ ಪುಟಿನ್ ಮತ್ತು ನಾನು ನಮ್ಮ ಸಂಪರ್ಕದ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅವಶ್ಯಕತೆಯ ಬಗ್ಗೆ ಒತ್ತು ನೀಡಿದ್ದೇವೆ. ಐ ಎನ್‌ ಎಸ್‌ ಟಿ ಸಿ (INSTC) ಆಗಿರಲಿ ಅಥವಾ ಉತ್ತರ ಸಮುದ್ರ ಮಾರ್ಗ ಅಂದರೆ ಚೆನ್ನೈ-ವ್ಲಾಡಿವೋಸ್ಟಾಕ್ ಕಾರಿಡಾರ್ ಆಗಿರಲಿ, ಇವುಗಳಲ್ಲಿ ಮುಂದುವರಿಯಲು ನಾವು ಬದ್ಧರಾಗಿದ್ದೇವೆ. ಈ ದಿಕ್ಕಿನಲ್ಲಿ ಶೀಘ್ರದಲ್ಲೇ ಪ್ರಗತಿ ಕಂಡುಬರಲಿದೆ. ಇದರಿಂದ ಸಾಗಾಟದ ಸಮಯ ಮತ್ತು ವೆಚ್ಚ ಕಡಿಮೆಯಾಗಲಿದ್ದು, ವ್ಯಾಪಾರಕ್ಕೆ ಹೊಸ ಮಾರುಕಟ್ಟೆಗಳು ತೆರೆದುಕೊಳ್ಳಲಿವೆ. ಡಿಜಿಟಲ್ ತಂತ್ರಜ್ಞಾನದ ಶಕ್ತಿಯೊಂದಿಗೆ, ನಾವು 'ವರ್ಚುವಲ್ ಟ್ರೇಡ್ ಕಾರಿಡಾರ್' ಗಳ ಮೂಲಕ ಕಸ್ಟಮ್ಸ್, ಲಾಜಿಸ್ಟಿಕ್ಸ್ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಜೋಡಿಸಬಹುದು. ಇದು ಕಸ್ಟಮ್ಸ್ ಕ್ಲಿಯರೆನ್ಸ್ ಅನ್ನು ವೇಗಗೊಳಿಸುತ್ತದೆ, ಕಾಗದಪತ್ರಗಳ ಕೆಲಸವನ್ನು ಕಡಿಮೆ ಮಾಡುತ್ತದೆ ಮತ್ತು ಸರಕು ಸಾಗಣೆಯನ್ನು ಹೆಚ್ಚು ಸುಗಮಗೊಳಿಸುತ್ತದೆ. ಎರಡನೆಯದಾಗಿ, ಸಮುದ್ರ ಉತ್ಪನ್ನಗಳ ವಿಷಯಕ್ಕೆ ಬರುವುದಾದರೆ, ರಷ್ಯಾ ಇತ್ತೀಚೆಗೆ ಭಾರತದಿಂದ ಡೈರಿ ಮತ್ತು ಸಮುದ್ರ ಉತ್ಪನ್ನಗಳನ್ನು ರಫ್ತು ಮಾಡಲು ಅರ್ಹವಿರುವ ಭಾರತೀಯ ಕಂಪನಿಗಳ ಪಟ್ಟಿಯನ್ನು ವಿಸ್ತರಿಸಿದೆ. ಇದು ಭಾರತೀಯ ರಫ್ತುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಜಾಗತಿಕವಾಗಿ ಭಾರತದ ಉತ್ತಮ ಗುಣಮಟ್ಟದ ಸಮುದ್ರ ಉತ್ಪನ್ನಗಳು, ಮೌಲ್ಯವರ್ಧಿತ ಸೀ-ಫುಡ್ ಮತ್ತು ಸಂಸ್ಕರಿಸಿದ ಆಹಾರಗಳಿಗೆ ಭಾರೀ ಬೇಡಿಕೆ ಇದೆ. ಕೋಲ್ಡ್ ಚೈನ್ ಲಾಜಿಸ್ಟಿಕ್ಸ್, ಆಳ ಸಮುದ್ರ ಮೀನುಗಾರಿಕೆ ಮತ್ತು ಮೀನುಗಾರಿಕಾ ಬಂದರುಗಳ ಆಧುನೀಕರಣದಲ್ಲಿ ನಾವು ಜಂಟಿ ಉದ್ಯಮಗಳು ಮತ್ತು ತಾಂತ್ರಿಕ ಪಾಲುದಾರಿಕೆಗಳನ್ನು ಮಾಡಿಕೊಳ್ಳಬಹುದು. ಇದು ರಷ್ಯಾದ ದೇಶೀಯ ಬೇಡಿಕೆಯನ್ನು ಪೂರೈಸುವುದಲ್ಲದೆ, ಭಾರತೀಯ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನೂ ಒದಗಿಸುತ್ತದೆ. ಮೂರನೆಯದಾಗಿ, ಆಟೋಮೊಬೈಲ್ ಕ್ಷೇತ್ರ. ಮಿತವ್ಯಯದ ಮತ್ತು ದಕ್ಷ ಎಲೆಕ್ಟ್ರಿಕ್ ವಾಹನಗಳು (EV), ದ್ವಿಚಕ್ರ ವಾಹನಗಳು ಮತ್ತು ಸಿಎನ್‌ಜಿ ಮೊಬಿಲಿಟಿ ಪರಿಹಾರಗಳಲ್ಲಿ ಭಾರತ ಇಂದು ಜಾಗತಿಕ ನಾಯಕನಾಗಿದೆ. ರಷ್ಯಾ ಸುಧಾರಿತ ಮೆಟೀರಿಯಲ್‌ ಗಳ ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. ನಾವಿಬ್ಬರೂ ಸೇರಿ ಇವಿ (EV) ತಯಾರಿಕೆ, ವಾಹನ ಬಿಡಿಭಾಗಗಳು ಮತ್ತು ಶೇರ್ಡ್ ಮೊಬಿಲಿಟಿ ಟ್ಯಾಗ್ಸ್ ಕ್ಷೇತ್ರದಲ್ಲಿ ಪಾಲುದಾರರಾಗಬಹುದು. ಇದು ನಮ್ಮ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವುದಲ್ಲದೆ, ಗ್ಲೋಬಲ್ ಸೌತ್, ವಿಶೇಷವಾಗಿ ಆಫ್ರಿಕಾದ ಅಭಿವೃದ್ಧಿಗೂ ಕೊಡುಗೆ ನೀಡುತ್ತದೆ. ನಾಲ್ಕನೆಯದಾಗಿ, ಫಾರ್ಮಾ ಕ್ಷೇತ್ರ. ಭಾರತ ಇಂದು ಜಗತ್ತಿನಾದ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಪೂರೈಸುತ್ತಿದೆ. ಅದಕ್ಕಾಗಿಯೇ ಭಾರತವನ್ನು 'ವಿಶ್ವದ ಫಾರ್ಮಸಿ' (Pharmacy of the World) ಎಂದು ಕರೆಯಲಾಗುತ್ತದೆ. ನಾವಿಬ್ಬರೂ ಸೇರಿ ಜಂಟಿ ಲಸಿಕೆ ಅಭಿವೃದ್ಧಿ, ಕ್ಯಾನ್ಸರ್ ಚಿಕಿತ್ಸೆಗಳು, ರೇಡಿಯೋ ಫಾರ್ಮಾಸ್ಯುಟಿಕಲ್ಸ್ ಮತ್ತು ಎಪಿಐ (API) ಪೂರೈಕೆ ಸರಪಳಿಯಲ್ಲಿ ಸಹಕರಿಸಬಹುದು. ಇದು ಆರೋಗ್ಯ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಹೊಸ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುತ್ತದೆ. ಐದನೆಯದಾಗಿ, ಜವಳಿ (Textiles) ಕ್ಷೇತ್ರ. ನೈಸರ್ಗಿಕ ನೂಲಿನಿಂದ ಹಿಡಿದು ತಾಂತ್ರಿಕ ಜವಳಿಯವರೆಗೆ ಭಾರತವು ಅಪಾರ ಸಾಮರ್ಥ್ಯವನ್ನು ಹೊಂದಿದೆ. ವಿನ್ಯಾಸ, ಕರಕುಶಲ ವಸ್ತುಗಳು ಮತ್ತು ಕಾರ್ಪೆಟ್‌ಗಳಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದೇವೆ. ರಷ್ಯಾ ಪಾಲಿಮರ್‌ಗಳು ಮತ್ತು ಸಿಂಥೆಟಿಕ್ ಕಚ್ಚಾ ವಸ್ತುಗಳ ಪ್ರಮುಖ ಉತ್ಪಾದಕವಾಗಿದೆ. ನಾವಿಬ್ಬರೂ ಸೇರಿ ದೃಢವಾದ ಜವಳಿ ಮೌಲ್ಯ ಸರಪಳಿಯನ್ನು ನಿರ್ಮಿಸಬಹುದು. ಅದೇ ರೀತಿ ರಸಗೊಬ್ಬರ, ಸೆರಾಮಿಕ್ಸ್, ಸಿಮೆಂಟ್ ತಯಾರಿಕೆ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲೂ ಸಹಕಾರಕ್ಕೆ ಅನೇಕ ಸಾಧ್ಯತೆಗಳಿವೆ.

 

ಸ್ನೇಹಿತರೇ,

ಎಲ್ಲಾ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸುವಲ್ಲಿ 'ಮಾನವ ಸಂಪನ್ಮೂಲದ ಚಲನಶೀಲತೆ' ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಭಾರತವು ವಿಶ್ವದ 'ಕೌಶಲ್ಯ ರಾಜಧಾನಿ'ಯಾಗಿ ಹೊರಹೊಮ್ಮುತ್ತಿದೆ. ತಂತ್ರಜ್ಞಾನ, ಇಂಜಿನಿಯರಿಂಗ್, ಆರೋಗ್ಯ, ನಿರ್ಮಾಣ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಜಾಗತಿಕ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ನಮ್ಮ ಯುವ ಪ್ರತಿಭೆಗಳಿಗಿದೆ. ರಷ್ಯಾದ ಜನಸಂಖ್ಯಾ ಮತ್ತು ಆರ್ಥಿಕ ಆದ್ಯತೆಗಳನ್ನು ಗಮನಿಸಿದರೆ, ಈ ಪಾಲುದಾರಿಕೆಯು ಎರಡೂ ದೇಶಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಭಾರತೀಯ ಪ್ರತಿಭೆಗಳಿಗೆ ರಷ್ಯನ್ ಭಾಷೆ ಮತ್ತು ಸಾಫ್ಟ್ ಸ್ಕಿಲ್ಸ್‌ ಗಳಲ್ಲಿ ತರಬೇತಿ ನೀಡುವ ಮೂಲಕ, ನಾವು ಜಂಟಿಯಾಗಿ 'ರಷ್ಯಾ-ರೆಡಿ' ಮಾನವ ಶಕ್ತಿಯನ್ನು ಸೃಷ್ಟಿಸಬಹುದು. ಇದು ಎರಡೂ ದೇಶಗಳ ಹಂಚಿಕೆಯ ಸಮೃದ್ಧಿಯನ್ನು ವೇಗಗೊಳಿಸುತ್ತದೆ.

 

ಸ್ನೇಹಿತರೇ,

ಇಂದು ನಾವು ನಮ್ಮ ಎರಡೂ ದೇಶಗಳ ನಾಗರಿಕರಿಗೆ ಪ್ರವಾಸಿ ವೀಸಾಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಇದು ನಮ್ಮ ಎರಡು ದೇಶಗಳ ನಡುವಿನ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ನೀಡಲಿದೆ. ಇದು ಟೂರ್ ಆಪರೇಟರ್‌ಗಳಿಗೆ ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ತೆರೆಯುತ್ತದೆ. ಸ್ನೇಹಿತರೇ, ಇಂದು ಭಾರತ ಮತ್ತು ರಷ್ಯಾ ಸಹ-ಆವಿಷ್ಕಾರ, ಸಹ-ಉತ್ಪಾದನೆ ಮತ್ತು ಸಹ-ಸೃಷ್ಟಿಯ ಹೊಸ ಪ್ರಯಾಣವನ್ನು ಆರಂಭಿಸುತ್ತಿವೆ. ನಮ್ಮ ಗುರಿ ಕೇವಲ ಪರಸ್ಪರ ವ್ಯಾಪಾರವನ್ನು ಹೆಚ್ಚಿಸುವುದಕ್ಕೆ ಸೀಮಿತವಾಗಿಲ್ಲ. ನಾವು ಇಡೀ ಮಾನವಕುಲದ ಒಳಿತನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಇದಕ್ಕಾಗಿ, ನಾವು ಜಾಗತಿಕ ಸವಾಲುಗಳಿಗೆ ಶಾಶ್ವತ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕು. ಈ ಪಯಣದಲ್ಲಿ ರಷ್ಯಾದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ. ನಾನು ನಿಮ್ಮೆಲ್ಲರಿಗೂ ಹೇಳಲು ಬಯಸುವುದಿಷ್ಟೇ - "ಬನ್ನಿ, 'ಮೇಕ್ ಇನ್ ಇಂಡಿಯಾ'ದ ಭಾಗವಾಗಿ, ಭಾರತದೊಂದಿಗೆ ಪಾಲುದಾರರಾಗಿ ಮತ್ತು ನಾವಿಬ್ಬರೂ ಸೇರಿ ಜಗತ್ತಿಗಾಗಿ ತಯಾರಿಸೋಣ." ಈ ಮಾತುಗಳೊಂದಿಗೆ, ನಾನು ಅಧ್ಯಕ್ಷ ಪುಟಿನ್ ಮತ್ತು ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Rooftop solar cuts household electricity bills by average of 71%: CEEW

Media Coverage

Rooftop solar cuts household electricity bills by average of 71%: CEEW
NM on the go

Nm on the go

Always be the first to hear from the PM. Get the App Now!
...
Share your ideas and suggestions for 'Mann Ki Baat' now!
June 05, 2026

Prime Minister Narendra Modi will share 'Mann Ki Baat' on Sunday, June 28th. If you have innovative ideas and suggestions, here is an opportunity to directly share it with the PM. Some of the suggestions would be referred by the Prime Minister during his address.

Share your inputs in the comments section below.