Ram belongs to everyone; Ram is within everyone: PM Modi in Ayodhya
There were efforts to eradicate Bhagwaan Ram’s existence, but He still lives in our hearts, he is the basis of our culture: PM
A grand Ram Temple will become a symbol of our heritage, our unwavering faith: PM Modi

ಸೀತಾ ರಾಮಚಂದ್ರ ಜಿ ಕಿ ಜೈ

ರಾಮಚಂದ್ರ ಕಿ ಜೈ

ಸೀತಾ ರಾಮಚಂದ್ರ ಕಿ ಜೈ

ಹರೇ ರಾಮ! ಹರೇ ರಾಮ! ಹರೇ ರಾಮ!

ಜೈ ಸೀತಾರಾಮ್! ಜೈ ಸೀತಾರಾಮ್! ಜೈ ಸೀತಾರಾಮ್!

ಇಂದು ಈ ಜಯಘೋಷ ರಾಮನ ನಗರಿ ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಈ ಐತಿಹಾಸಿಕ ಸ್ಮರಣೀಯ ಸಂದರ್ಭದಲ್ಲಿ ನಾನು ರಾಮನ ಎಲ್ಲ ಪರಮ ಭಕ್ತರಿಗೆ, ನನ್ನ ದೇಶವಾಸಿಗಳಿಗೆ ಮತ್ತು ವಿಶ್ವದಾದ್ಯಂತ ಇರುವ ಕೋಟಿ ಕೋಟಿ ಭಾರತದ ಪ್ರಜೆಗಳಿಗೆ ಹೃದಯಪೂರ್ವಕ ಶುಭಾಶಯಗಳನ್ನು ಹೇಳಬಯಸುತ್ತೇನೆ.

ವೇದಿಕೆಯ ಮೇಲಿರುವ ಎಲ್ಲ ಗಣ್ಯರಿಗೆ ನನ್ನ ಶುಭಾಶಯಗಳು, ಅತ್ಯುತ್ಸಾಹಿ, ಸಕ್ರಿಯ ಹಾಗೂ ಸಂಭ್ರಮದಿಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀಮಾನ್ ಯೋಗಿ ಆದಿತ್ಯನಾಥ್ ಜಿ, ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಜಿ, ಪರಮಪೂಜ್ಯ ಮಹಂತ ನೃತ್ಯ ಗೋಪಾಲದಾಸ್ ಜಿ ಮಹಾರಾಜ್, ನಮ್ಮ ನೆಚ್ಚಿನ ಶ್ರೀ ಮೋಹನ್ ಲಾಲ್ ಭಾಗವತ್ ಜಿ, ಶ್ರೇಷ್ಠ ಸಾದು ಸಂತರು ಮತ್ತು ಗುರುಗಳೆ, ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಆಗಮಿಸಿರುವ ಬಂಧುಗಳೇ ಮತ್ತು ನನ್ನ ಆತ್ಮೀಯ ಭಾರತ ವಾಸಿಗಳೇ,

ರಾಮ ಜನ್ಮಭೂಮಿ ಟ್ರಸ್ಟ್ ಈ ಪವಿತ್ರ ಮತ್ತು ಐತಿಹಾಸಿಕ ಸಂದರ್ಭಕ್ಕೆ ನನ್ನನ್ನು ಆಮಂತ್ರಿಸಿರುವುದು ನನ್ನ ಸೌಭಾಗ್ಯವಾಗಿದೆ. ಈ ಗೌರವಕ್ಕಾಗಿ ನಾನು ಟ್ರಸ್ಟ್ ಗೆ ಆಭಾರಿಯಾಗಿದ್ದೇನೆ. ನಾನು ಈ ಅವಕಾಶದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. “राम काजु कीन्हे बिनु मोहि कहाँ बिश्राम॥“(ರಾಮ್ ಕಾಜು ಕೀನ್ಹೆ ಬಿನು ಮೋಹಿ ಕಹಾ ಬಿಶ್ರಮ್) ಅದರ ಅರ್ಥ “ಶ್ರೀರಾಮದೇವ ಒಪ್ಪಿಸಿರುವ ಕೆಲಸವನ್ನು ಪೂರ್ಣಗೊಳಿಸದೆ ನಾನು ಹೇಗೆ ವಿರಮಿಸಲು ಸಾಧ್ಯ”.

ಭಾರತ ಇಂದು, ಭಗವಾನ್ ಭಾಸ್ಕರನ ಸಾನಿಧ್ಯದಲ್ಲಿ ಸರಯು ನದಿ ತೀರದಲ್ಲಿ ಸುವರ್ಣ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದೆ. ಭಾರತದ ಉದ್ದಗಲಕ್ಕೂ, ಕನ್ಯಾಕುಮಾರಿಯಿಂದ ಕ್ಷೀರ್ ಭವಾನಿವರೆಗೆ, ಕೋಟೇಶ್ವರದಿಂದ ಕಾಮಾಕ್ಯದವರೆಗೆ, ಜಗನ್ನಾಥದಿಂದ ಕೇದಾರನಾಥದವರೆಗೆ, ಸೋಮನಾಥದಿಂದ ಕಾಶಿ ವಿಶ್ವನಾಥದವರೆಗೆ, ಸಮೇದ ಶಿಖರದಿಂದ ಶ್ರವಣಬೆಳಗೊಳದವರೆಗೆ, ಬೋಧಗಯಾದಿಂದ ಸಾರಾನಾಥದವರೆಗೆ, ಅಮೃತಸರದಿಂದ ಪಾಟ್ನಾ ಸಾಹೀಬ್ ವರೆಗೆ, ಅಂಡಮಾನ್ ನಿಂದ ಅಜ್ಮೀರ್ ವರೆಗೆ, ಲಕ್ಷದ್ವೀಪದಿಂದ ಲೇಹ್ ವರೆಗೆ ಇಡೀ ದೇಶ ರಾಮಮಯವಾಗಿದೆ.

ಇಡೀ ದೇಶ ಇಂದು ಭಾವಪರವಶಕ್ಕೆ ಒಳಗಾಗಿದೆ ಮತ್ತು ಪ್ರತಿಯೊಂದು ಹೃದಯವೂ ಪ್ರಕಾಶಿಸುತ್ತಿದೆ. ಇಡೀ ದೇಶ ಭಾವನಾತ್ಮಕತೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಇದು ಇತಿಹಾಸದ ಭಾಗವಾಗಲಿದೆ ಮತ್ತು ಈ ಐತಿಹಾಸಿಕ ಕ್ಷಣಕ್ಕಾಗಿ ಸಾಕಷ್ಟು ದೀರ್ಘಕಾಲದಿಂದ ಕಾಯುತ್ತಿದ್ದೆವು.

ಶತಮಾನಗಳಿಂದ ಕಾಯುವಿಕೆ ದಿನ ಇಂದು ಮುಕ್ತಾಯವಾಗಿದೆ. ಕೋಟ್ಯಂತರ ಭಾರತೀಯರು ತಮ್ಮ ಜೀವಮಾನದ ಅವಧಿಯಲ್ಲಿ ಇಂತಹ ಚರಿತ್ರಾರ್ಹ ಸಂದರ್ಭದ ಭಾಗವಾಗುತ್ತೇವೆ ಎಂದು ನಂಬಿರಲಿಲ್ಲವೆಂದು ನಾನು ಭಾವಿಸುತ್ತೇನೆ.

ಮಹಿಳೆಯರೇ ಮತ್ತು ಮಹನಿಯರೇ, ಗಣ್ಯರೇ, ದಶಕಗಳ ಕಾಲದಿಂದಲೂ ತಾತ್ಕಾಲಿಕವಾಗಿ ಒಂದು ಸಣ್ಣ ಗುಡಿಸಲಿನಲ್ಲಿ ಇದ್ದ ಶ್ರೀರಾಮನ ಮೂರ್ತಿಗೆ ಸೂಕ್ತ ಮಂದಿರ ನಿರ್ಮಾಣಕ್ಕೆ ಈಗ ಕಾಲ ಕೂಡಿಬಂದಿದೆ. ಇದೀಗ ನಮ್ಮ ಶ್ರೀರಾಮನಿಗೆ ಭವ್ಯ ಮಂದಿರವನ್ನು ನಿರ್ಮಿಸುತ್ತಿದ್ದೇವೆ.

ದಶಕಗಳ ಹಿಂದಿನಿಂದ ದ್ವಂಸ ಹಾಗೂ ಪುನರುತ್ಥಾನಕ್ಕೆಗೆ ತುತ್ತಾಗಿದ್ದ ರಾಮಜನ್ಮಭೂಮಿಯ ನೆಲ ಇಂದು ಅದರಿಂದ ಮುಕ್ತವಾಗಿದೆ.

ಮತ್ತೊಮ್ಮೆ ರಾಮ ನಾಮ ಜಪ ಮಾಡೋಣ…..

ಹರೇ ರಾಮ, ಹರೇ ರಾಮ,

ಮಿತ್ರರೇ, ನಮ್ಮ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಹಲವು ತಲೆಮಾರುಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದವು. ಗುಲಾಮಗಿರಿ ಕಾಲಘಟ್ಟದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯದ ಒಂದೇ ಒಂದು ಕ್ಷಣವೂ ಇರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡದಂತಹ ಸ್ಥಳವೂ ನಮ್ಮ ದೇಶದಲ್ಲಿಲ್ಲ. ಆಗಸ್ಟ್ 15ರಂದು ಆಚರಿಸುವ ಸ್ವಾತಂತ್ರ್ಯೋತ್ಸವ ಲಕ್ಷಾಂತರ ಮಂದಿಯ ಬಲಿದಾನ ಮತ್ತು ಆತ್ಮಾಹುತಿ ತ್ಯಾಗ ಭಾವನೆಗಳ ಪ್ರತೀಕವಾಗಿದೆ.

ಅಂತೆಯೇ ರಾಮಮಂದಿರ ನಿರ್ಮಾಣಕ್ಕಾಗಿ ಹಲವು ಶತಮಾನಗಳ ಕಾಲ, ಹಲವು ತಲೆಮಾರುಗಳು, ಸ್ವಾರ್ಥರಹಿತ ತ್ಯಾಗಗಳನ್ನು ಮಾಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ಅವರ ತ್ಯಾಗ, ಬಲಿದಾನ ಮತ್ತು ದೃಢ ಸಂಕಲ್ಪ ಇಂದು ಪೂರ್ಣಗೊಳ್ಳುತ್ತಿದೆ. ರಾಮಮಂದಿರ ನಿರ್ಮಾಣದ ಚಳವಳಿಯಲ್ಲಿ ಅರ್ಪಣೆ, ಬದ್ಧತೆ ಮತ್ತು ಸಂಕಲ್ಪವೂ ಇತ್ತು. ಇಂದು ಅಂತಹವರ ತ್ಯಾಗ, ಬಲಿದಾನಗಳಿಂದ ಆ ಸ್ವಪ್ನ ಸಾಕಾರವಾಗುತ್ತಿದೆ. ಅದಕ್ಕಾಗಿ ನಾನು ದೇಶದ 130 ಕೋಟಿ ಜನರ ಪರವಾಗಿ ಅವರಿಗೆ ಶಿರಬಾಗಿ ನಮಿಸುತ್ತೇನೆ ಮತ್ತು ಅವರ ತ್ಯಾಗದ ಫಲದಿಂದಾಗಿ ಇಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುತ್ತಿದೆ. ಇಂದು ವಿಶ್ವದ ಎಲ್ಲ ಶಕ್ತಿಗಳು, ರಾಮ ಮಂದಿರ ನಿರ್ಮಾಣದ ಪವಿತ್ರ ಹೋರಾಟದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ. ಅವರೆಲ್ಲಾ ಸಂತೋಷದಿಂದ ಈ ಸಂದರ್ಭದಲ್ಲಿ ಆಶೀರ್ವದಿಸುತ್ತಿದ್ದಾರೆ.

ಮಿತ್ರರೇ, ರಾಮ ನಮ್ಮ ಮನದಲ್ಲಿದ್ದಾನೆ. ನಾವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ರಾಮನಿಂದ ಸ್ಫೂರ್ತಿ ಪಡೆಯುತ್ತೇವೆ. ರಾಮನ ಅದ್ಭುತ ಶಕ್ತಿಯನ್ನು ನೋಡಿ. ಕಟ್ಟಡವನ್ನು ಕೆಡವಲಾಯಿತು, ಅಸ್ಥಿತ್ವವನ್ನು ಅಳಿಸಿ ಹಾಕುವ ಎಲ್ಲ ಪ್ರಯತ್ನಗಳನ್ನೂ ಸಹ ಮಾಡಲಾಯಿತು. ಆದರೂ ರಾಮ ನಮ್ಮ ಹೃದಯಗಳಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ರಾಮ ನಮ್ಮ ಸಂಸ್ಕೃತಿಯ ಭದ್ರ ಬುನಾದಿಯಾಗಿದ್ದು, ಆತ ಭಾರತದ ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ಆತ ಗೌರವದ ಹೆಮ್ಮೆಯ ಸಂಕೇತ. ಆ ನೆಲೆಯಲ್ಲಿ ಇಂದು ಶ್ರೀ ರಾಮನ ಭವ್ಯ ದಿವ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ (ಶಂಕುಸ್ಥಾಪನೆ) ನಡೆಯುತ್ತಿದೆ.

ನಾನು ಇಲ್ಲಿಗೆ ಆಗಮಿಸುವ ಮುನ್ನ ಹನುಮನ ಗುಡಿಗೆ ಭೇಟಿ ನೀಡಿದ್ದೆ, ಹನುಮಾನ್ ಜಿ, ಶ್ರೀ ರಾಮನ ಎಲ್ಲ ಕೆಲಸವನ್ನು ಮಾಡುತ್ತಾನೆ.

ಹನುಮಾನ್ ಜಿ, ಈ ಕಲಿಯುಗದಲ್ಲಿ ರಾಮನ ಆದರ್ಶಗಳನ್ನು ರಕ್ಷಿಸುವ ಕೆಲಸವನ್ನೂ ಸಹ ಮಾಡುತ್ತಿದ್ದಾನೆ. ಶ್ರೀ ರಾಮ ಜನ್ಮಭೂಮಿಯ ಭೂಮಿ ಪೂಜೆ ಕಾರ್ಯಕ್ರಮ ಹನುಮಂತನ ಆಶೀರ್ವಾದದಿಂದ ಆರಂಭವಾಗಿದೆ.

ಶ್ರೀ ರಾಮಮಂದಿರ ನಮ್ಮ ಸಂಸ್ಕೃತಿಯ, ಆಧುನಿಕತೆಯ ಪ್ರತೀಕ. ನಾನು ಉದ್ದೇಶ ಪೂರ್ವಕವಾಗಿಯೇ “ಆಧುನಿಕತೆ” ಪದ ಬಳಸುತ್ತಿದ್ದೇನೆ. ಅದರ ಅರ್ಥ ನಮ್ಮ ಶಾಶ್ವತ ಶ್ರದ್ಧೆಯ ಸಂಕೇತ. ಇದು ನಮ್ಮ ರಾಷ್ಟ್ರೀಯ ಭಾವನೆಯ ಪ್ರತೀಕವಾಗಿದೆ. ಈ ಮಂದಿರ ಕೋಟ್ಯಾಂತರ ಜನರ ಸಾಮೂಹಿಕ ಸಂಕಲ್ಪ ಶಕ್ತಿಯ ಪ್ರತೀಕವಾಗಲಿದೆ. ಈ ಮಂದಿರ ಭವಿಷ್ಯದ ತಲೆಮಾರಿನ ಮನಸ್ಸಿನಲ್ಲಿ ಸ್ಫೂರ್ತಿಯ ಭರವಸೆ ಮತ್ತು ಸಂಕಲ್ಪವನ್ನು ನೀಡಲಿದೆ.

ಒಮ್ಮೆ ಮಂದಿರ ನಿರ್ಮಾಣ ಪೂರ್ಣಗೊಂಡರೆ ಅಯೋಧ್ಯೆಯ ಭವ್ಯತೆ ಹಲವು ಪಟ್ಟು ಹೆಚ್ಚಾಗುವುದೇ ಅಲ್ಲದೆ, ಇಡೀ ಪ್ರದೇಶದ ಆರ್ಥಿಕತೆ ವೃದ್ಧಿಯಾಗಲಿದ್ದು, ಬೃಹತ್ ಪರಿವರ್ತನೆಯಾಗಲಿದೆ. ಪ್ರತಿಯೊಂದು ವಲಯದಲ್ಲೂ ಹೊಸ ಅವಕಾಶಗಳು ಮತ್ತು ಹೊಸ ಮಾರ್ಗಗಳು ಹುಟ್ಟಿಕೊಳ್ಳುತ್ತವೆ. ಜಗತ್ತಿನ ಎಲ್ಲ ಜನರು ಇಲ್ಲಿಗೆ ಬರಲಿದ್ದಾರೆ ಎಂಬುದನ್ನು ಊಹಿಸಿಕೊಳ್ಳಿ. ಇಡೀ ವಿಶ್ವದ ಜನರು ಇಲ್ಲಿಗೆ ಬಂದು ಶ್ರೀ ರಾಮ ಮತ್ತು ಮಾತೆ ಸೀತೆಯ ದರ್ಶನ ಪಡೆಯಲಿದ್ದಾರೆ. ಹೇಗೆ ಕ್ಷಿಪ್ರ ಬದಲಾವಣೆಗಳಾಗಬಹುದು ಎಂಬುದನ್ನು ಗಮನಿಸಿ.

ರಾಮ ಮಂದಿರ ನಿರ್ಮಾಣ ಇಡೀ ವಿಶ್ವವನ್ನು ಒಂದುಗೂಡಿಸುವ ಕೆಲಸ ಮಾಡಲಿದೆ. ಈ ಆಚರಣೆಯು, ನಂಬಿಕೆಯನ್ನು ವಾಸ್ತವದೊಂದಿಗೆ ಪರಮೋಚ್ಛ ದೇವರೊಂದಿಗೆ ಮನುಷ್ಯ, ದೃಢ ನಿಶ್ಚಯದೊಂದಿಗೆ ಮನುಕುಲ, ಭೂತಕಾಲದೊಂದಿಗೆ ಪ್ರಸ್ತುತತೆ ಮತ್ತ ಸ್ವಯಂ ನಂಬಿಕೆಗಳೊಂದಿಗೆ ಪುರಾಣವನ್ನು ಒಂದುಗೂಡಿಸುತ್ತದೆ.

ಈ ಐತಿಹಾಸಿನ ಕ್ಷಣ ಶತಮಾನಗಳವರೆಗೆ ಜಗತ್ತಿನಲ್ಲಿ ಪ್ರತಿಧ್ವನಿಸಲಿದೆ ಮತ್ತು ಇದು ದೇಶಕ್ಕೆ ಗೆಲುವನ್ನು ತಂದು ಕೊಡಲಿದೆ. ಈ ದಿನ ಶ್ರೀ ರಾಮನ ಕೋಟಿಗಟ್ಟಲೆ ಪರಮ ಭಕ್ತರ ಪ್ರಾಮಾಣಿಕತೆಯ ಸಾಕ್ಷಿಯಾದ ದಿನ.

ಈ ದಿನ ಭಾರತದ ಕಾನೂನು ಗೌರವಿಸುವ, ಸತ್ಯ ಅಹಿಂಸೆ, ತ್ಯಾಗ ಮತ್ತು ಬಲಿದಾನವನ್ನು ಗೌರವಿಸುವವರಿಗೆ ನೀಡುತ್ತಿರುವ ಒಂದು ವಿಶಿಷ್ಟ ಉಡುಗೊರೆಯಾಗಿದೆ.

ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಭೂಮಿ ಪೂಜೆ ಕಾರ್ಯಕ್ರಮವನ್ನು ಬಿಗಿಯಾಗಿ ಅಚ್ಚುಕಟ್ಟು ಅಲಂಕಾರದೊಂದಿಗೆ ಸಂಘಟಿಸಲಾಗಿದೆ. ಇಡೀ ರಾಷ್ಟ್ರ ರಾಮನಿಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲಿ ಶ್ರದ್ಧತೆಯನ್ನು ಪ್ರದರ್ಶಿಸುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದಾಗಲೂ ನಾವು ಇಂತಹ ಶಿಸ್ತನ್ನು ಪ್ರದರ್ಶಿಸಿದ್ದೆವು. ಆಗ ಇಡೀ ದೇಶ ಪ್ರತಿಯೊಬ್ಬರ ಸೂಕ್ಷ್ಮತೆಯನ್ನು ಗಮನದಲ್ಲಿರಿಸಿಕೊಂಡು ತೀರ್ಪನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಒಪ್ಪಿಕೊಂಡಿದ್ದಕ್ಕೆ ಸಾಕ್ಷಿಯಾಗಿದ್ದೇವೆ. ಇಂದಿಗೂ ಅದೇ ಬಗೆಯ ಶಾಂತಿಯುತ ನಡವಳಿಕೆಯ ಅನುಭವ ನಮಗಾಗುತ್ತಿದೆ.

ಈ ಭವ್ಯ ಮಂದಿರ ನಿರ್ಮಾಣದಿಂದ ಕೇವಲ ಹೊಸ ಇತಿಹಾಸ ಬರೆಯುವುದಲ್ಲ, ಇತಿಹಾಸ ಮತ್ತೆ ಪುನರಾವರ್ತನೆಯಾಗಲಿದೆ.

ಶ್ರೀರಾಮನ ವಿಜಯದಲ್ಲಿ ಹೇಗೆ ಅರಣ್ಯದಲ್ಲಿನ ಅಳಿಲು ಮತ್ತು ವಾನರರು ಹಾಗೂ ನಾವಿಕರು ಪ್ರಮುಖ ಪಾತ್ರವಹಿಸಿದ್ದರೋ..

ಅದೇ ರೀತಿ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಲು ಹೇಗೆ ಪ್ರಾಣಿಗಳು ಸಹಾಯ ಮಾಡಿದ್ದವೋ

ಅಂತೆಯೇ ಸ್ವರಾಜ್ಯ ಸ್ಥಾಪನೆಗೆ ಛತ್ರಪತಿ ಶಿವಾಜಿಗೆ ಹೇಗೆ ಮಾವಲೆ ಸಹಾಯ ಮಾಡಿದರೋ..

ಹಾಗೆಯೇ ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಲು ಮಹಾರಾಜ ಸುಹೇಲ್ ದೇವ್ ಗೆ ಬಡವರು ಮತ್ತು ದಲಿತರು ಮಹತ್ವದ ಪಾತ್ರವಹಿಸಿದ್ದರೋ,

ಅಂತೆಯೇ ಗಾಂಧೀಜಿಯ ಸ್ವಾತಂತ್ರ್ಯ ಹೋರಾಟಕ್ಕೆ ಹೇಗೆ ದಲಿತರು, ಹಿಂದುಳಿದವರು, ಆದಿವಾಸಿಗಳು ಹಾಗೂ ಸಮಾಜದ ಎಲ್ಲ ವರ್ಗದವರು ನೆರವು ನೀಡಿದರೋ,

ಅದೇ ರೀತಿ ರಾಮ ಮಂದಿರ ನಿರ್ಮಾಣದ ಈ ಮಹತ್ವದ ಕಾರ್ಯ ಇಂದು ಭಾರತದ ಎಲ್ಲ ಜನರ ಬೆಂಬಲದೊಂದಿಗೆ ಆರಂಭವಾಗಿದೆ.

ರಾಮ ಸೇತುವನ್ನು ಶ್ರೀ ರಾಮನ ಹೆಸರಿನ ಕಲ್ಲುಗಳಿಂದ ಹೇಗೆ ನಿರ್ಮಿಸಲಾಯಿತೋ ಅಂತೆಯೇ ಪ್ರತಿಯೊಂದು ಗ್ರಾಮಗಳು ಮತ್ತು ಮನೆಗಳಿಂದ ತಂದ ಕಲ್ಲುಗಳು ಭಕ್ತಿಯಿಂದ ಇಲ್ಲಿ ಶಕ್ತಿಯ ಮೂಲವಾಗಿವೆ.

ಎಲ್ಲ ಪ್ರಮುಖ ಧಾರ್ಮಿಕ ಸ್ಥಳಗಳು ಮತ್ತು ದೇಶದ ಎಲ್ಲ ಪವಿತ್ರ ನದಿಗಳಿಂದ ಪವಿತ್ರ ಮಣ್ಣು ಮತ್ತು ನೀರನ್ನು ಇಲ್ಲಿಗೆ ತರಲಾಗಿದೆ. ಆ ಸ್ಥಳಗಳ ಸಂಸ್ಕೃತಿ ಮತ್ತು ಸ್ಫೂರ್ತಿ ಈ ಜಾಗಕ್ಕೆ ವಿಶಿಷ್ಟ ಶಕ್ತಿಯನ್ನು ತಂದುಕೊಟ್ಟಿವೆ.

ನಾ ಭೂತೋ ನಾ ಭವಿಷ್ಯತಿ(न भूतो न भविष्यति।)

ವಾಸ್ತವಿಕವಾಗಿ ಅದನ್ನು ಈ ಅರ್ಥದಲ್ಲಿ ಹೇಳುತ್ತಿದ್ದೇನೆ –

ಭಾರತದ ಈ ಭಕ್ತಿ ಮತ್ತು ಭಾರತದ ಜನರ ಐಕ್ಯತೆ ಮತ್ತು ಭಾರತದ ಏಕತೆಯ ಈ ದೊಡ್ಡ ಶಕ್ತಿ ಪ್ರಪಂಚದ ಅಧ್ಯಯನ ಮತ್ತು ವಿಶ್ಲೇಷಿಸುವ ಅಗತ್ಯವಿದೆ.

ಮಿತ್ರರೇ,

ಶ್ರೀ ರಾಮಚಂದ್ರನ ಚುರುಕುತನವನ್ನು ಸೂರ್ಯನಿಗೆ ಹೋಲಿಸಲಾಗುವುದು, ಆತನ ಕ್ಷಮೆಯ ಸ್ವಭಾವವನ್ನು ಭೂಮಿಗೆ ಹೋಲಿಸಲಾಗುವುದು. ಆತನ ವಿವೇಕವನ್ನು ಬೃಹಸ್ಪತಿಗೆ ಸಮ ಎಂದು ಹೇಳಲಾಗುವುದು ಮತ್ತು ಖ್ಯಾತಿಯಲ್ಲಿ ಆತ ಇಂದ್ರನಿಗೆ ಸಮನಾಗಿರುವನು.

ಶ್ರೀ ರಾಮನ ಸ್ವಭಾವ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಅನುರಣಿಸುತ್ತದೆ ಮತ್ತು ಆದ್ದರಿಂದಲೇ ರಾಮನನ್ನು ಪರಮೋಚ್ಛ ಎಂದು ಪರಿಗಣಿಸಲಾಗಿದೆ.

ಹಾಗಾಗಿಯೇ ಶ್ರೀ ರಾಮ ಸಾವಿರಾರು ವರ್ಷಗಳಿಂದಲೂ ಭಾರತೀಯರ ಸ್ಫೂರ್ತಿಯ ಸೆಲೆಯಾಗಿ ಉಳಿದಿದ್ದಾರೆ. ಶ್ರೀ ರಾಮ ಸಾಮಾಜಿಕ ಸೌಹಾರ್ದತೆಯನ್ನು ತನ್ನ ಆಡಳಿತದ ಪ್ರಮುಖ ಗುರಿಯಾಗಿ ಮಾಡಿಕೊಂಡಿದ್ದರು.

ಅವರು ಗುರು ವಶಿಷ್ಠರಿಂದ ಜ್ಞಾನ, ಕೇವತನಿಂದ ಪ್ರೀತಿ, ಶಬರಿಯಿಂದ ತಾಯಿಯ ಪ್ರೀತಿ, ಹನುಮಾನ್ ಜಿಯಿಂದ ಸಹಕಾರ ಮತ್ತು ಬೆಂಬಲ ಮತ್ತು ಅರಣ್ಯವಾಸಿಗಳು ಹಾಗೂ ಜನರಿಂದ ವಿಶ್ವಾಸವನ್ನು ಗಳಿಸಿದ್ದರು.

ಶ್ರೀ ರಾಮ, ಅಳಿಲಿನ ಮಹತ್ವವನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸಿದ್ದರು. ಆತನ ವರ್ಣರಂಜಿತ ವ್ಯಕ್ತಿತ್ವ, ನಾಯಕತ್ವ, ಉದಾರ ಮನೋಭಾವ, ಪ್ರಾಮಾಣಿಕತೆ, ಸಂಯಮ ಮತ್ತು ತಾತ್ವಿಕ ದೂರದೃಷ್ಟಿ ಮುಂದಿನ ಹಲವು ತಲೆಮಾರುಗಳಿಗೆ ಸ್ಫೂರ್ತಿಯಾಗಿರಲಿದೆ.

ಶ್ರೀ ರಾಮ ತನ್ನ ಜನರನ್ನು ಸಮಾನವಾಗಿ ಪ್ರೀತಿಸುತ್ತಿದ್ದನು ಮತ್ತು ಬಡವರು ಹಾಗೂ ಶೋಷಿತರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಆದ್ದರಿಂದ ತಾಯಿ ಸೀತೆ ರಾಮನಿಗೆ ಹೀಗೆ ಹೇಳುತ್ತಿದ್ದರು.

ದೀನ್ ದಯಾಳ್ ಬಿರಿದು ಸಂಬಾರಿ(दीन दयाल बिरिदु संभारी’।)

ಅಂದರೆ ಶ್ರೀ ರಾಮ ಸದಾ ಬಡವರು ಮತ್ತು ಶೋಷಿತರ ಪರ ಎಂದು.

ಯಾವುದೇ ವ್ಯಕ್ತಿಯ ಜೀವನದಲ್ಲಿ ಶ್ರೀ ರಾಮನಿಂದ ಸ್ಫೂರ್ತಿ ಪಡೆಯದಂತಹ ಸಮಯವಿರಲು ಸಾಧ್ಯವೇ ಇಲ್ಲ. ಶ್ರೀ ರಾಮನನ್ನು ಪ್ರತಿಬಿಂಬಿಸದೇ ಇರುವಂತಹ ಭಾರತದ ಯಾವುದೇ ಮೂಲೆ ಇಲ್ಲ.

ಶ್ರೀ ರಾಮ ಭಾರತದ ನಂಬಿಕೆ. ಶ್ರೀ ರಾಮ ಭಾರತದ ಆದರ್ಶ. ಶ್ರೀ ರಾಮ ಭಾರತದ ದೈವ. ಶ್ರೀ ರಾಮ ಭಾರತದ ಪುರಾಣದಲ್ಲಿ ನೆಲೆಸಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ಶ್ರೀ ರಾಮ, ವಾಲ್ಮೀಕಿಯ ರಾಮಾಯಣದಲ್ಲಿ ಚಿತ್ರಿಸಿರುವಂತೆ ಶ್ರೀ ರಾಮ ಆಧುನಿಕ ಭಾರತಕ್ಕೆ ಸ್ಫೂರ್ತಿಯಾಗಿದ್ದಾರೆ. ಶ್ರೀ ರಾಮ ತುಲಸೀ, ಕಬೀರ್ ಮತ್ತು ನಾನಕ್ ಅವರುಗಳ ಮೂಲಕ ಮಧ್ಯಯುಗದಲ್ಲಿ ಸ್ಫೂರ್ತಿ ನೀಡಿದ್ದಾರೆ. ಅದೇ ಶ್ರೀ ರಾಮ ಬಾಪೂವಿನ ಭಜನೆಗಳಲ್ಲಿ ಸೇರಿ ಅಹಿಂಸಾ ಮತ್ತು ಸತ್ಯಾಗ್ರಹ ಚಳವಳಿಗಳಲ್ಲಿ ಹೋರಾಟಕ್ಕೆ ನೆರವಾಗಿದ್ದರು.

ತುಲಸಿಯ ರಾಮ ಸಗುಣ ರೂಪದಲ್ಲಿ ಮತ್ತು ನಾನಕ್ ಮತ್ತು ಕಬೀರರ ರಾಮ ನಿರ್ಗುಣ ರೂಪದಲ್ಲಿ ಇದ್ದರು.

ಬುದ್ಧ ಕೂಡ ಶ್ರೀ ರಾಮನೊಂದಿಗೆ ಸಂಪರ್ಕದಲ್ಲಿದ್ದರು. ಅದೇ ಸಮಯದಲ್ಲಿ ಅಯೋಧ್ಯೆ ನಗರಿ ಶತಮಾನಗಳವರೆಗೆ ಜೈನ ಧಾರ್ಮಿಕ ಕೇಂದ್ರವಾಗಿತ್ತು. ರಾಮ ಸರ್ವತ್ರನಾಗಿದ್ದು, ಆತ ಭಾರತದಲ್ಲಿ ಅನೇಕತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತಾನೆ.

ತಮಿಳಿನಲ್ಲಿ ನಾವು ಕಂಬ ರಾಮಾಯಣ ಹಾಗೂ ತೆಲುಗಿನಲ್ಲಿ ನಾವು ರಘುನಾಥ ಮತ್ತು ರಂಗನಾಥ ರಾಮಾಯಣವನ್ನು ನೋಡುತ್ತೇವೆ.

ನಾವು ಒಡಿಶಾದಲ್ಲಿ ರುಪದ್ ನಲ್ಲಿ ಕಟೀರ್ ಪಾಡಿ ರಾಮಾಯಣವನ್ನು ನೋಡಬಹುದು. ಕನ್ನಡದಲ್ಲಿ ಕುಮುದೇಂದು ರಾಮಾಯಣವನ್ನು ಕಾಣಬಹುದು, ಕಾಶ್ಮೀರದಲ್ಲಿ ರಾಮಾವತಾರ ಚರಿತ ಮತ್ತು ಮಲೆಯಾಳಂನಲ್ಲಿ ರಾಮಚರಿತಂ ಕಾಣಬಹುದು.

ಬಾಂಗ್ಲಾದಲ್ಲಿ ನಾವು ಕೃತ್ತಿಬಾಸ್ ರಾಮಾಯಣ ನೋಡಬಹುದು. ಗುರು ಗೋವಿಂದ ಸಿಂಗ್ ಅವರೇ ಸ್ವತಃ ಗೋವಿಂದ ರಾಮಾಯಣವನ್ನು ರಚಿಸಿದ್ದರು.

ನಾವು ಶ್ರೀ ರಾಮನನ್ನು ನಾನಾ ರೂಪದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಕಾಣಬಹುದಾಗಿದೆ. ಆದರೆ ಶ್ರೀ ರಾಮ ಎಲ್ಲೆಲ್ಲೂ ಇದ್ದಾನೆ ಮತ್ತು ಎಲ್ಲರಲ್ಲೂ ಇದ್ದಾನೆ. ಆದ್ದರಿಂದಲೇ ರಾಮ, ಭಾರತದ ‘ವಿವಿಧತೆಯಲ್ಲಿ ಏಕತೆ’ಯೊಂದಿಗೆ ಬೆಸೆದಿದ್ದಾನೆ ಎಂದು ಹೇಳುವುದು.

ಮಿತ್ರರೇ, ವಿಶ್ವದ ಹಲವು ರಾಷ್ಟ್ರಗಳು ಶ್ರೀ ರಾಮನಿಗೆ ನಮಿಸುತ್ತವೆ. ಅಲ್ಲಿನ ಜನರು ತಾವು ಶ್ರೀ ರಾಮನೊಂದಿಗೆ ಬೆಸೆದಿದ್ದೇವೆ ಎಂದು ನಂಬಿದ್ದಾರೆ.

ಇಂಡೋನೇಷ್ಯಾ ರಾಷ್ಟ್ರದಲ್ಲಿ ವಿಶ್ವದ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಧರ್ಮದವರಿದ್ದಾರೆ. ಅಲ್ಲಿ ನಾನಾ ರೂಪದ ರಾಮಾಯಣಗಳನ್ನು ಕಾಣಬಹುದು. ಅಂದರೆ ‘ಕಾಕವಿನ್ ರಾಮಾಯಣ’, ‘ಸ್ವರ್ಣದೀಪ್ ರಾಮಾಯಣ’, ನಮ್ಮ ದೇಶದಲ್ಲಿರುವಂತೆ ‘ಯೋಗೇಶ್ವರ ರಾಮಾಯಣ’ವೂ ಇದೆ. ಶ್ರೀ ರಾಮ ಇಂದಿಗೂ ಸಹ ಅಲ್ಲಿ ಪೂಜ್ಯನೀಯ.

ಕಾಂಬೋಡಿಯಾದಲ್ಲಿ ‘ರಾಮಕೇರ್ ರಾಮಾಯಣ’ ಇದ್ದರೆ, ಲಾವೋದಲ್ಲಿ ‘ಫ್ರಾ ಲಕ್ ಫ್ರಾ ಲಾಮ್ ರಾಮಾಯಣ’ ಮಲೇಷಿಯಾದಲ್ಲಿ ‘ಹಿಕಾಯತ್ ಸೆರಿ ರಾಮ್’ ಥೈಲ್ಯಾಂಡ್ ನಲ್ಲಿ ‘ರಾಮಕೇನ್’ ಇವೆ.

ನಾವು ಇರಾನ್ ಮತ್ತು ಚೀನಾಗಳಲ್ಲೂ ಸಹ ಶ್ರೀ ರಾಮ ಮತ್ತು ರಾಮಕಥೆಯ ವಿವರಣೆಗಳನ್ನು ನೋಡಬಹುದಾಗಿದೆ.

ಶ್ರೀಲಂಕಾದಲ್ಲಿ ರಾಮಾಯಣ ಕಥೆಯನ್ನು ಬೋಧಿಸಲಾಯಿತು ಮತ್ತು ‘ಜಾನಕಿ ಹರಣ’ ಅಂದರೆ ಸೀತೆಯ ಅಪಹರಣ ಹಾಡನ್ನು ಹಾಡಲಾಯಿತು. ನೇಪಾಳ ನೇರವಾಗಿ ಮಾತೆ ಜಾನಕಿಯೊಂದಿಗೆ ಶ್ರೀ ರಾಮನ ಜೊತೆ ಸಂಬಂಧವನ್ನು ಜೋಡಿಸಿಕೊಂಡಿದ್ದಾರೆ.

ಅಲ್ಲದೆ ಜಗತ್ತಿನ ಇನ್ನೂ ಹಲವು ಭಾಗಗಳು ಮತ್ತು ರಾಷ್ಟ್ರಗಳಲ್ಲಿ ಅವರ ನಂಬಿಕೆಗೆ ಅನುಗುಣವಾಗಿ ಶ್ರೀ ರಾಮನನ್ನು ಪೂಜಿಸಲಾಗುತ್ತಿದೆ.

ಇಂದಿಗೂ ಸಹ ಭಾರತದ ಹೊರಗೆ ಹಲವು ರಾಷ್ಟ್ರಗಳಲ್ಲಿ ಅವರ ಸಂಪ್ರದಾಯಗಳಲ್ಲಿ ರಾಮ ಕಥಾ(ಶ್ರೀ ರಾಮನ ಪುರಾಣ) ಅತ್ಯಂತ ಜನಪ್ರಿಯವಾಗಿದೆ.

ಶ್ರೀ ರಾಮನಿಗಾಗಿ ಇದೀಗ ಮಂದಿರ ನಿರ್ಮಾಣವನ್ನು ಆರಂಭಿಸುತ್ತಿರುವ ಈ ಸಂದರ್ಭದಲ್ಲಿ ಆ ಎಲ್ಲ ರಾಷ್ಟ್ರಗಳ ಜನರು ಸಂತೋಷಪಡುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಶ್ರೀ ರಾಮ ಎಲ್ಲರಿಗೂ ಸೇರಿದವನು ಮತ್ತು ಎಲ್ಲರಲ್ಲೂ ಇದ್ದಾನೆ.

ಮಿತ್ರರೇ, ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣ ಶ್ರೀ ರಾಮನ ವ್ಯಕ್ತಿತ್ವದಷ್ಟೇ ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಯ ಸೂಚಕವಾಗಿದೆ ಎಂದು ನಾನು ಭಾವಿಸಿದ್ದೇನೆ.

ಇಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರ ಇಡೀ ಮನುಕುಲಕ್ಕೆ ಮುಂದಿನ ಹಲವು ವರ್ಷಗಳ ಕಾಲ ಸದಾ ಸ್ಫೂರ್ತಿಯಾಗಿ ಇರಲಿದೆ ಎಂಬ ಭರವಸೆ ನನಗಿದೆ. ಆದ್ದರಿಂದ ಶ್ರೀ ರಾಮನ ಸಂದೇಶ, ರಾಮ ಮಂದಿರ ಮತ್ತು ಸಾವಿರಾರು ವರ್ಷಗಳ ನಮ್ಮ ಪರಂಪರೆ ಮುಂದಿನ ಹಲವು ಶತಮಾನ ಇಡೀ ವಿಶ್ವವನ್ನು ತಲುಪುವಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ.

ನಮ್ಮ ಜ್ಞಾನ ಮತ್ತು ನಮ್ಮ ಜೀವನ ಪದ್ಧತಿ ಬಗ್ಗೆ ಇಡೀ ವಿಶ್ವಕ್ಕೆ ತಿಳಿಸಿಕೊಡಬೇಕಾದದ್ದು ಇಂದಿನ ಮತ್ತು ಭವಿಷ್ಯದ ತಲೆಮಾರಿನ ಆದ್ಯ ಕರ್ತವ್ಯವಾಗಿದೆ.

‘ರಾಮ ಸರ್ಕೀಟ್’ ಗಮನದಲ್ಲಿರಿಸಿಕೊಂಡು ದೇಶದಲ್ಲಿ ರಾಮನ ಪವಿತ್ರ ಜಾಲವನ್ನು ನಿರ್ಮಿಸಬೇಕಿದೆ.

ಅಯೋಧ್ಯೆ ಶ್ರೀ ರಾಮನ ಜನ್ಮ ಸ್ಥಳ. ಶ್ರೀ ರಾಮನೇ ಸ್ವತಃ ಅಯೋಧ್ಯೆಯ ವೈಭವವನ್ನು ವರ್ಣಿಸಿದ್ದಾನೆ. “ಜನ್ಮಭೂಮಿ ಮಮ ಪೂರಿ ಸುಹಾವನಿ” (“जन्मभूमि मम पूरी सुहावनि।।“) ಅಂದರೆ “ನನ್ನ ಜನ್ಮಸ್ಥಳ ಅಯೋಧ್ಯೆ, ಅಪ್ರತಿಮ ಸೌಂದರ್ಯ ನಗರಿ” ಎಂದಿದ್ದರು.

ಶ್ರೀ ರಾಮನ ಜನ್ಮಸ್ಥಳದ ದೈವತ್ವ ಹಾಗೂ ವೈಭವವನ್ನು ಮರು ಸ್ಥಾಪಿಸಲು ಹಲವು ಐತಿಹಾಸಿಕ ಕಾರ್ಯಗಳನ್ನು ಕೈಗೆತ್ತಿಕೊಂಡಿರುವುದು ನನಗೆ ಸಂತಸ ತಂದಿದೆ.

ಮಿತ್ರರೇ, ನಮ್ಮ ಪುರಾಣಗಳಲ್ಲಿ ಮತ್ತು ಪವಿತ್ರ ಗ್ರಂಥಗಳಲ್ಲಿ ಹೀಗೆ ಉಲ್ಲೇಖಿಸಲಾಗಿದೆ.

ನಾ ರಾಮ ಸದೃಶ್ಯೋ ರಾಜಾ ಪ್ರತಿಭ್ಯಾಮ್ ನೀತಿವಾನ್ ಅಭೂತ್ “न राम सदृश्यो राजा, प्रतिभ्याम नीतिवान अभूत। ಅಂದರೆ “ಶ್ರೀರಾಮನಂತಹ ನೀತಿವಂತ ಆಡಳಿತಗಾರ ಇಡೀ ವಿಶ್ವದಲ್ಲಿ ಇನ್ನೊಬ್ಬನಿಲ್ಲ” ಎಂಬ ಮಾತಿದೆ.

ಶ್ರೀರಾಮ ನಮಗೆ, “ಯಾರೊಬ್ಬರೂ ದುಖಿಃಗಳು ಇರಬಾರದು, ಯಾರೊಬ್ಬರೂ ಬಡವರಾಗಿ ಇರಬಾರದು” ಎಂಬುದನ್ನು ಕಲಿಸಿದರು.

ಶ್ರೀರಾಮ, ಜನರು ಅಂದರೆ ಪುರುಷರು ಮತ್ತು ಮಹಿಳೆಯರು ಸರಿ ಸಮಾನರು, ಬೇಧ-ಭಾವ ಇಲ್ಲ ಎಂಬ ಸಾಮಾಜಿಕ ಸಂದೇಶ ನೀಡಿದ್ದರು.

ಶ್ರೀರಾಮ “ರೈತರು, ಪಶುಪಾಲಕರು ಸದಾ ಸುಖಿಗಳಾಗಿರಬೇಕು” ಎಂದು ಸಂದೇಶ ನೀಡಿದ್ದರು.

ಶ್ರೀರಾಮ, “ವೃದ್ಧರು, ಮಕ್ಕಳು ಮತ್ತು ವೈದ್ಯರನ್ನು ಸದಾ ರಕ್ಷಿಸಬೇಕು’’ ಎಂದು ಹೇಳಿದ್ದರು.

ಶ್ರೀರಾಮ, ಆಶ್ರಯ ಬಯಸಿ ಬರುವಂತಹ ಎಲ್ಲರನ್ನು ರಕ್ಷಿಸುವುದು ಎಲ್ಲರ ಆದ್ಯ ಜವಾಬ್ದಾರಿ ಎಂದು ಕರೆ ನೀಡಿದ್ದರು.

ಶ್ರೀರಾಮನ ಘೋಷವಾಕ್ಯ “ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲು” ಎಂಬುದಾಗಿತ್ತು.

ಸಹೋದರ ಸಹೋದರಿಯರಲ್ಲಿ ಶ್ರೀ ರಾಮ, ಭಯಬಿನು ಹೋಯಿ ನಾಪ್ರೀತಿ(भयबिनु होइ नप्रीति ) ಭಯವಿಲ್ಲದೆ ಯಾವುದೇ ಪ್ರೀತಿ ಇರಬಾರದು ಎಂದು ಹೇಳಿದ್ದರು.

ಆದ್ದರಿಂದ ಭಾರತ ಎಲ್ಲಿಯವರೆಗೆ ಅದು ಬಲಿಷ್ಠವಾಗಿ ಮುಂದುವರಿಯುತ್ತದೋ ಅಲ್ಲಿಯವರೆಗೂ ಶಾಂತಿ ಮತ್ತು ಸಂತೋಷ ಇರುತ್ತದೆ. ಶ್ರೀ ರಾಮನ ಅದೇ ನೀತಿ ಮತ್ತು ಆದರ್ಶ ಪಾಲನೆ ಹಲವು ವರ್ಷಗಳಿಂದ ಭಾರತಕ್ಕೆ ದಾರಿ ದೀಪವಾಗಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಅದೇ ನೀತಿ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ರಾಮರಾಜ್ಯದ ಕನಸು ಕಂಡಿದ್ದರು. ಶ್ರೀ ರಾಮನ ಜೀವನ ಮತ್ತು ನಡವಳಿಕೆ ಗಾಂಧೀಜಿಯ ‘ರಾಮರಾಜ್ಯ’ ಕಲ್ಪನೆಗೆ ಸ್ಫೂರ್ತಿಯಾಗಿತ್ತು.

ಮಿತ್ರರೇ, ಶ್ರೀ ರಾಮನ ಸ್ವತಃ ಹೀಗೆ ಹೇಳಿದ್ದರು. ದೇಶ ಕಾಲ್ ಅವಸರ್ ಅನುಹಾರಿ ಬೋಲೆ ಬಚನ್ ಬಿನಿತ್ ಬಿಚಾರಿ(देश काल अवसर अनुहारी।बोले बचन बिनित बिचारी) ಅಂದರೆ “ರಾಮ ಮಾತನಾಡುತ್ತಾನೆ, ಯೋಚಿಸುತ್ತಾನೆ ಮತ್ತು ಕಾಲ, ಸ್ಥಳ ಮತ್ತು ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾನೆ ಎಂದು’’.

ಶ್ರೀರಾಮ ನಮಗೆ ಹೇಗೆ ಬೆಳೆಯಬೇಕು ಮತ್ತು ಕಾಲಕ್ಕೆ ಅನುಗುಣವಾಗಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಸಿಕೊಟ್ಟಿದ್ದಾನೆ.

ಶ್ರೀರಾಮ ಬದಲಾವಣೆ ಮತ್ತು ಆಧುನಿಕತೆಯ ಪ್ರತಿಪಾದಕರಾಗಿದ್ದರು.

ಭಾರತ ಇಂದು ಶ್ರೀರಾಮನ ಆದರ್ಶಗಳನ್ನು ಮುಂದಿಟ್ಟುಕೊಂಡು ಅವುಗಳಿಂದ ಸ್ಫೂರ್ತಿ ಪಡೆದು ಮುಂದೆ ಸಾಗುತ್ತಿವೆ.

ಮಿತ್ರರೇ, ಶ್ರೀರಾಮ, ನಾವು ನಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಲಿಸಿಕೊಟ್ಟಿದ್ದಾರೆ.

ಅವರು ಹೇಗೆ ಸವಾಲುಗಳನ್ನು ಎದುರಿಸಬೇಕು ಮತ್ತು ಹೇಗೆ ಜ್ಞಾನವನ್ನು ಗಳಿಸಬೇಕು ಮತ್ತು ಪಡೆಯಬೇಕು ಎಂಬುದನ್ನು ಕಲಿಸಿಕೊಟ್ಟಿದ್ದಾರೆ.

ರಾಮ ಮಂದಿರವನ್ನು ಪ್ರೀತಿ, ಗೌರವ ಮತ್ತು ಭ್ರಾತೃತ್ವದ ಇಟ್ಟಿಗೆಗಳಿಂದ ನಿರ್ಮಾಣ ಮಾಡಲಾಗುತ್ತಿದೆ.

ಶ್ರೀರಾಮನಲ್ಲಿ ನಾವು ಯಾವಾಗ ನಂಬಿಕೆ ಇರಿಸುತ್ತೇವೆಯೋ ಆವಾಗ ಮಾನವೀಯತೆಯಲ್ಲಿ ನಾವು ಪ್ರಗತಿ ಕಾಣಲು ಸಾಧ್ಯ ಎಂಬುದನ್ನು ಗಮನದಲ್ಲಿಟ್ಟು ಕೊಂಡಿರಬೇಕು. ನಾವು ಯಾವಾಗ ಶ್ರೀ ರಾಮನಿಂದ ದೂರ ಸರಿಯುತ್ತೇವೆಯೋ ಆಗ ನಾವು ವಿನಾಶದ ಕಡೆಗೆ ಸಾಗುತ್ತೇವೆ.

ನಾವು ಎಲ್ಲರ ಭಾವನೆಗಳನ್ನೂ ಗೌರವಿಸುವುದು ಅಗತ್ಯವಿದೆ. ನಾವು ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಪ್ರಗತಿ ಸಾಧಿಸಬೇಕು ಮತ್ತು ಪರಸ್ಪರ ವಿಶ್ವಾಸವಿಡುವ ಅಗತ್ಯವಿದೆ.

ನಾವು ನಮ್ಮ ಪ್ರಯತ್ನಗಳು ಮತ್ತು ಸಂಕಲ್ಪದಿಂದ ಸ್ವಾವಲಂಬಿ ಮತ್ತು ಸದೃಢ ಭಾರತವನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ.

ಮಿತ್ರರೇ, ಶ್ರೀರಾಮ ತಮಿಳು ರಾಮಾಯಣದಲ್ಲಿ ಹೀಗೆ ಹೇಳುತ್ತಾನೆ “ನಾವು ವಿಳಂಬ ಮಾಡಬಾರದು, ನಾವು ಸದಾ ಮುನ್ನಡೆಯಬೇಕು” ಎಂದು.

ಶ್ರೀರಾಮ, ಅದೇ ಸಂದೇಶವನ್ನು ಇಂದು ಭಾರತ ಮತ್ತು ನಮ್ಮೆಲ್ಲರಿಗೂ ನೀಡುತ್ತಿದ್ದಾನೆ.

ನನಗೆ ವಿಶ್ವಾಸವಿದೆ ನಾವು ಮುನ್ನಡೆಯಲಿದ್ದೇವೆ ಮತ್ತು ನಮ್ಮ ದೇಶ ಅಭಿವೃದ್ಧಿ ಸಾಧಿಸಲಿದೆ ಎಂದು. ಈ ಶ್ರೀರಾಮ ಮಂದಿರ ಮುಂದಿನ ವರ್ಷ ಮನುಕಲ/ಮಾನವೀಯತೆಗೆ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುವುದನ್ನು ಮುಂದುವರಿಸಲಿದೆ.

ಕೊರೊನಾ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಇಂದು ಶ್ರೀರಾಮನ ಸ್ವಾವಲಂಬಿ ಮಾರ್ಗ ಅತ್ಯಂತ ಅಗತ್ಯವಾಗಿದೆ. ಇಂದು ನಾವು ಎರಡು ಗಜ ದೂರ ಕಾಯ್ದುಕೊಳ್ಳುವುದು ಮತ್ತು ಸದಾ ಮಾಸ್ಕ್ ಧರಿಸುವುದನ್ನು ಪಾಲಿಸಬೇಕಿದೆ.

ನಾನು ಶ್ರೀರಾಮನಲ್ಲಿ ದೇಶವನ್ನು ಆರೋಗ್ಯ ಮತ್ತು ಸಂತೋಷದಿಂದ ಇಡು ಎಂದು ಪ್ರಾರ್ಥಿಸುತ್ತೇನೆ.

ತಾಯಿ ಸೀತಾಮಾತೆ ಮತ್ತು ಶ್ರೀರಾಮ ನಮ್ಮೆಲ್ಲರನ್ನು ಆಶೀರ್ವದಿಸುವುದನ್ನು ಸದಾ ಮುಂದುವರಿಸಲಿ.

ಇದರೊಂದಿಗೆ ನಾನು ಈ ಸಂದರ್ಭದಲ್ಲಿ ಮತ್ತೊಮ್ಮೆ ಎಲ್ಲ ದೇಶವಾಸಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಹರೇ ರಾಮ

ಸೀತಾಪತಿ ಶ್ರೀ ರಾಮಚಂದ್ರ ಕಿ ಜೈ !!!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
On Puri’s Grand Road, a devotee’s submission

Media Coverage

On Puri’s Grand Road, a devotee’s submission
NM on the go

Nm on the go

Always be the first to hear from the PM. Get the App Now!
...
Prime Minister speaks with the Amir of Qatar
July 16, 2026
PM conveys heartfelt condolences on the passing of the Father Amir of Qatar
PM recalls the Father Amir’s visionary leadership and his contribution to strengthening India-Qatar relations
The two leaders reaffirm their resolve to carry forward the Father Amir’s legacy

Prime Minister Shri Narendra Modi had a telephone conversation today with the Amir of the State of Qatar, H.H. Sheikh Tamim bin Hamad Al Thani.

Prime Minister conveyed his heartfelt condolences on the passing of H.H. Sheikh Hamad bin Khalifa Al Thani, the Father Amir of Qatar.

Recalling the Father Amir’s significant contributions as the chief architect of modern Qatar, Prime Minister paid tribute to his visionary leadership, and recalled his pivotal role in strengthening India-Qatar relations over the years as well as his deep affection for India and the Indian community in Qatar.

The Amir of Qatar thanked Prime Minister for his call and conveyed his appreciation for the words of support in this difficult hour.

The two leaders reaffirmed their resolve to carry forward the Father Amir’s legacy and further strengthen the India-Qatar Strategic Partnership and people-to-people ties.

They agreed to remain in close touch.