ವಂದೇ ಮಾತರಂ ನಮ್ಮ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿತು: ಪ್ರಧಾನಮಂತ್ರಿ
ವಂದೇ ಮಾತರಂನ 150 ವರ್ಷಗಳಿಗೆ ಸಾಕ್ಷಿಯಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ: ಪ್ರಧಾನಮಂತ್ರಿ
ವಂದೇ ಮಾತರಂ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳನ್ನು ನನಸಾಗಿಸಲು ನಮ್ಮನ್ನು ಪ್ರೇರೇಪಿಸುವ ಶಕ್ತಿಯಾಗಿದೆ: ಪ್ರಧಾನಮಂತ್ರಿ
ವಂದೇ ಮಾತರಂ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆಳವಾಗಿ ಬೇರೂರಿರುವ ಕಲ್ಪನೆಯನ್ನು ಪುನರುಜ್ಜೀವನಗೊಳಿಸಿತು: ಪ್ರಧಾನಮಂತ್ರಿ
ವಂದೇ ಮಾತರಂ ಸಾವಿರಾರು ವರ್ಷಗಳ ಸಾಂಸ್ಕೃತಿಕ ಶಕ್ತಿಯನ್ನು ಸಹ ಒಳಗೊಂಡಿತ್ತು, ಇದು ಸ್ವಾತಂತ್ರ್ಯದ ಉತ್ಸಾಹ ಮತ್ತು ಸ್ವತಂತ್ರ ಭಾರತದ ದೃಷ್ಟಿಕೋನವನ್ನು ಸಹ ಹೊಂದಿತ್ತು: ಪ್ರಧಾನಮಂತ್ರಿ
ಜನರೊಂದಿಗೆ ವಂದೇ ಮಾತರಂನ ಆಳವಾದ ಸಂಪರ್ಕವು ನಮ್ಮ ಸ್ವಾತಂತ್ರ್ಯ ಚಳವಳಿಯ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ
ವಂದೇ ಮಾತರಂ ನಮ್ಮ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ಮತ್ತು ನಿರ್ದೇಶನವನ್ನು ನೀಡಿತು: ಪ್ರಧಾನಮಂತ್ರಿ
ವಂದೇ ಮಾತರಂ ಸ್ವಾತಂತ್ರ್ಯ, ತ್ಯಾಗ, ಶಕ್ತಿ, ಶುದ್ಧತೆ, ಸಮರ್ಪಣೆ ಮತ್ತು ದೃಢತೆಯನ್ನು ಪ್ರೇರೇಪಿಸಿದ ಸರ್ವವ್ಯಾಪಿ ಮಂತ್ರವಾಗಿತ್ತು: ಪ್ರಧಾನಮಂತ್ರಿ

ಸನ್ಮಾನ್ಯ ಸ್ಪೀಕರ್ ಸರ್,

ಈ ಮಹತ್ವದ ಸಂದರ್ಭದಲ್ಲಿ ಸಾಮೂಹಿಕ ಚರ್ಚೆಯ ಮಾರ್ಗವನ್ನು ಆಯ್ಕೆ ಮಾಡಿದ್ದಕ್ಕಾಗಿ ನಿಮಗೆ ಮತ್ತು ಈ ಸದನದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಗೆ ಶಕ್ತಿ, ಸ್ಫೂರ್ತಿ, ತ್ಯಾಗ ಮತ್ತು ಕಾಠಿನ್ಯದ ಮನೋಭಾವ ತುಂಬಿದ ಆ ಮಂತ್ರ, ಆ ಸ್ಪಷ್ಟ ಕರೆಯನ್ನು ಗೌರವದಿಂದ ನೆನಪಿಸಿಕೊಳ್ಳುವುದು, ಈ ಸದನದೊಳಗೆ ವಂದೇ ಮಾತರಂ(ಇದನ್ನು ದೇಶಭಕ್ತಿ ಗೀತೆಯಾಗಿ ಅಳವಡಿಸಿಕೊಂಡು 150 ವರ್ಷಗಳು ಸಂದಿವೆ, ಕವಿ ರವೀಂದ್ರನಾಥ್ ಠ್ಯಾಗೋರ್ ಅವರ ಜನ ಗಣ ಮನ ಅಧಿನಾಯಕ ಜಯ ಹೇ – ಹಾಗೂ ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂಗೆ 1950 ಜನವರಿ 24ರಂದು ರಾಷ್ಟ್ರಗೀತೆಯ ಸ್ಥಾನಮಾನ ನೀಡಲಾಗಿದೆ) ಅನ್ನು ಸ್ಮರಿಸುವುದು ನಮಗೆಲ್ಲರಿಗೂ ಸೌಭಾಗ್ಯದ ವಿಷಯವಾಗಿದೆ. ವಂದೇ ಮಾತರಂ ಅನ್ನು ದೇಶಭಕ್ತಿ ಗೀತೆಯಾಗಿ ಅಳವಡಿಸಿಕೊಂಡು 150 ವರ್ಷಗಳನ್ನು ಗುರುತಿಸುವ ಐತಿಹಾಸಿಕ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂಬುದು ಬಹಳ ಹೆಮ್ಮೆಯ ವಿಷಯ. ಈ ಅವಧಿಯು ಇತಿಹಾಸ ಪುಟದ ಅಸಂಖ್ಯಾತ ಘಟನೆಗಳನ್ನು ನಮ್ಮ ಮುಂದೆ ತರುತ್ತದೆ. ಈ ಚರ್ಚೆಯು ಖಂಡಿತವಾಗಿಯೂ ಈ ಸದನದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಆದರೆ ನಾವು ಈ ಕ್ಷಣವನ್ನು ಸಾಮೂಹಿಕವಾಗಿ ಬಳಸಿಕೊಂಡರೆ, ಅದು ಮುಂದಿನ ಪೀಳಿಗೆಗೆ, ಪ್ರತಿ ಪೀಳಿಗೆಗೂ ಸತತ ಕಲಿಕೆಯ ಮೂಲವಾಗಿಯೂ ಕಾರ್ಯ ನಿರ್ವಹಿಸಬಹುದು.

ಸನ್ಮಾನ್ಯ ಸ್ಪೀಕರ್ ಸರ್,

ಇತಿಹಾಸದ ಹಲವು ಸ್ಫೂರ್ತಿದಾಯಕ ಅಧ್ಯಾಯಗಳು ಮತ್ತೊಮ್ಮೆ ನಮ್ಮ ಮುಂದೆ ಬಂದಿರುವ ಸಮಯ ಇದಾಗಿದೆ. ಇತ್ತೀಚೆಗೆ ನಾವು ನಮ್ಮ ಸಂವಿಧಾನದ 75 ವರ್ಷಗಳನ್ನು ಬಹಳ ಹೆಮ್ಮೆಯಿಂದ ಆಚರಿಸಿದ್ದೇವೆ. ಇಂದು ದೇಶವು ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನ ಆಚರಿಸುತ್ತಿದೆ ಮತ್ತು ಗುರು ತೇಜ್ ಬಹದ್ದೂರ್ ಜಿ ಅವರ 350ನೇ ಹುತಾತ್ಮ ವಾರ್ಷಿಕೋತ್ಸವ ಆಚರಿಸಿದ್ದೇವೆ. ಇಂದು ವಂದೇ ಮಾತರಂ ಅನ್ನು ದೇಶಭಕ್ತಿ ಗೀತೆಯಾಗಿ ಅಳವಡಿಸಿಕೊಂಡು 150 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಈ ಸದನದ ಸಾಮೂಹಿಕ ಶಕ್ತಿಯನ್ನು ಅನುಭವಿಸಲು ನಾವು ಇಲ್ಲಿ ನಿಂತಿದ್ದೇವೆ. ಈ 150 ವರ್ಷಗಳ ಸುದೀರ್ಘ ಪ್ರಯಾಣವು ಹಲವು ಮಜಲುಗಳನ್ನು ದಾಟಿದೆ.

ಸನ್ಮಾನ್ಯ ಸ್ಪೀಕರ್ ಸರ್,

ವಂದೇ ಮಾತರಂ 50 ವರ್ಷಗಳನ್ನು ಪೂರೈಸಿದಾಗ, ದೇಶವು ಗುಲಾಮಗಿರಿಯ ಸಂಕೋಲೆಯಲ್ಲೇ ಬದುಕುತ್ತಿತ್ತು. ಅದು 100 ವರ್ಷಗಳನ್ನು ಪೂರೈಸಿದಾಗ, ರಾಷ್ಟ್ರವು ತುರ್ತು ಪರಿಸ್ಥಿತಿಯ ಸಂಕೋಲೆಯಲ್ಲಿ ಸಿಲುಕಿತ್ತು. ವಂದೇ ಮಾತರಂನ ಶತಮಾನೋತ್ಸವವನ್ನು ಭವ್ಯವಾಗಿ ಆಚರಿಸಬೇಕಾದ ಸಮಯದಲ್ಲಿ, ಭಾರತದ ಸಂವಿಧಾನದ ಕತ್ತು ಹಿಸುಕಲಾಗುತ್ತಿತ್ತು. ವಂದೇ ಮಾತರಂ 100 ವರ್ಷ ತುಂಬಿದಾಗ, ದೇಶಭಕ್ತಿಗಾಗಿ ಬದುಕಿದ ಮಹಾನ್ ಹೋರಾಟಗಾರರನ್ನು ಜೈಲು ಕಂಬಿಗಳ ಹಿಂದೆ ಹಾಕಲಾಯಿತು. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅಪಾರ ಶಕ್ತಿ ತುಂಬಿದ ಆ ಹಾಡು - ಅದು ತನ್ನ ಶತಮಾನೋತ್ಸವ ತಲುಪಿದಾಗ, ನಮ್ಮ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ ತೆರೆದುಕೊಂಡಿತು. ನಾವು ಆಗ ಅಸ್ಪಷ್ಟತೆಯಲ್ಲಿ ಸಿಲುಕಿಕೊಂಡಿದ್ದೆವು.

ಸನ್ಮಾನ್ಯ ಸ್ಪೀಕರ್ ಸರ್,

150ನೇ ವರ್ಷವು ಆ ಅಧ್ಯಾಯದ ಶ್ರೇಷ್ಠತೆಯನ್ನು, ಆ ವೈಭವವನ್ನು ಮರುಸ್ಥಾಪಿಸಲು ನಮಗೆ ಅವಕಾಶ ನೀಡಿದೆ. ಹಾಗಾಗಿ, ಈ ಸದನ ಅಥವಾ ರಾಷ್ಟ್ರವು ಅಂತಹ ಉತ್ತಮ ಅವಕಾಶವನ್ನು ಕಳೆದುಕೊಳ್ಳಲು ಬಿಡಬಾರದು ಎಂದು ನಾನು ನಂಬುತ್ತೇನೆ. 1947ರಲ್ಲಿ ಅಂತಿಮವಾಗಿ ದೇಶವನ್ನು ಸ್ವಾತಂತ್ರ್ಯದತ್ತ ಕೊಂಡೊಯ್ದದ್ದು ವಂದೇ ಮಾತರಂ. ಸ್ವಾತಂತ್ರ್ಯ ಹೋರಾಟದ ಭಾವನಾತ್ಮಕ ನಾಯಕತ್ವವು 'ವಂದೇ ಮಾತರಂ'ನ ವಿಜಯೋತ್ಸವದ ಜಪದಲ್ಲಿ ಸಾಕಾರಗೊಂಡಿತು.

ಗೌರವಾನ್ವಿತ ಸ್ಪೀಕರ್ ಸರ್,

ವಂದೇ ಮಾತರಂ ಅನ್ನು ದೇಶಭಕ್ತಿ ಗೀತೆಯಾಗಿ ಅಳವಡಿಸಿಕೊಂಡು 150 ವರ್ಷ ತುಂಬಿದ ಕುರಿತು ಚರ್ಚೆ ಪ್ರಾರಂಭಿಸಲು ನಾನು ಇಂದು ನಿಮ್ಮ ಮುಂದೆ ನಿಂತಿದ್ದೇನೆ, ಇಲ್ಲಿ ಯಾವುದೇ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ ಎಂಬ ಅಂತರವಿಲ್ಲ, ಏಕೆಂದರೆ ಇಲ್ಲಿ ಕುಳಿತಿರುವ ನಾವೆಲ್ಲರೂ ನಿಜವಾಗಿಯೂ ನಮ್ಮ ಆಳವಾದ ಋಣವನ್ನು ಒಪ್ಪಿಕೊಳ್ಳುವ ಸಂದರ್ಭವಾಗಿದೆ. ವಂದೇ ಮಾತರಂನಲ್ಲಿ ದೃಢನಿಶ್ಚಯ ಹೊಂದಿದ್ದ ವ್ಯಕ್ತಿಗಳು ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿದ್ದು ಇದಕ್ಕೆ ಕಾರಣ. ಅದರ ಫಲಿತಾಂಶದ ಫಲವಾಗಿ ಇಂದು ನಾವೆಲ್ಲರೂ ಇಲ್ಲಿ ಕುಳಿತಿದ್ದೇವೆ. ಆದ್ದರಿಂದ, ಎಲ್ಲಾ ಸಂಸತ್ ಸದಸ್ಯರಿಗೆ ಮತ್ತು ಎಲ್ಲಾ ಜನಪ್ರತಿನಿಧಿಗಳಿಗೆ, ವಂದೇ ಮಾತರಂಗೆ ನಾವು ಸಲ್ಲಿಸಬೇಕಾದ ಋಣವನ್ನು ತೀರಿಸಲು ಇದು ಪವಿತ್ರ ಕ್ಷಣವಾಗಿದೆ. ಅದರಿಂದ ಸ್ಫೂರ್ತಿ ಪಡೆದು, ವಂದೇ ಮಾತರಂ ರಾಷ್ಟ್ರದ ಸ್ವಾತಂತ್ರ್ಯ ಹೋರಾಟವನ್ನು, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮವನ್ನು ಒಂದುಗೂಡಿಸಿದ ಮನೋಭಾವವನ್ನು ನಾವು ಮತ್ತೊಮ್ಮೆ ಪುನರುಜ್ಜೀವನಗೊಳಿಸಬೇಕು. ಇಡೀ ದೇಶವು ಒಂದೇ ಧ್ವನಿಯಲ್ಲಿ ಮುನ್ನಡೆದಿದೆ. ಮತ್ತೊಮ್ಮೆ, ಈ ಕ್ಷಣವು ನಮ್ಮನ್ನು ಒಟ್ಟಾಗಿ ನಡೆಯಲು, ರಾಷ್ಟ್ರವನ್ನು ನಮ್ಮೊಂದಿಗೆ ಕೊಂಡೊಯ್ಯಲು ಕರೆ ನೀಡುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಕಾರಣವಾದ 'ವಂದೇ ಮಾತರಂ 150' ನಮ್ಮ ಸ್ಫೂರ್ತಿ, ಶಕ್ತಿಯಾಗಿ ಮಾರ್ಪಟ್ಟು, ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸಲು ನಮ್ಮನ್ನು ಒತ್ತಾಯಿಸಬೇಕು. ಈ ವಂದೇ ಮಾತರಂ ಸಂದರ್ಭವು ಆ ಸಂಕಲ್ಪವನ್ನು ಪುನರುಚ್ಚರಿಸಲು ನಮಗೆ ಒಂದು ಉತ್ತಮ ಅವಕಾಶ ನೀಡುತ್ತದೆ.

ಸನ್ಮಾನ್ಯ ಸ್ಪೀಕರ್ ಸರ್,

1857ರ ದಂಗೆಯ ನಂತರ, ಬ್ರಿಟಿಷ್ ಸಾಮ್ರಾಜ್ಯ ತೀವ್ರ ಅಲುಗಾಡಿದಾಗ, ಬಂಕಿಮ್ ಚಂದ್ರ ಚಟರ್ಜಿ ಅವರು 1875ರಲ್ಲಿ ವಂದೇ ಮಾತರಂ ಗೀತೆ ರಚಿಸಿದಾಗ ಅದರ ಪ್ರಯಾಣ ಪ್ರಾರಂಭವಾಯಿತು. ಬ್ರಿಟಿಷರು ಭಾರತದ ಮೇಲೆ ವಿವಿಧ ರೀತಿಯ ಒತ್ತಡವನ್ನು ಹೇರುತ್ತಿದ್ದರು, ಲೆಕ್ಕವಿಲ್ಲದಷ್ಟು ದೌರ್ಜನ್ಯಗಳನ್ನು ನಡೆಸುತ್ತಿದ್ದರು, ಈ ನೆಲದ ಜನರನ್ನು ಬಲವಂತಕ್ಕೆ ಒಳಪಡಿಸುತ್ತಿದ್ದರು. ಆ ಸಮಯದಲ್ಲಿ, ಭಾರತದ ಪ್ರತಿಯೊಂದು ಮನೆಯಲ್ಲೂ ಬ್ರಿಟಿಷರ ರಾಷ್ಟ್ರಗೀತೆ 'ಗಾಡ್ ಸೇವ್ ದಿ ಕ್ವೀನ್' ಅನ್ನು ಪ್ರಸಾರ ಮಾಡಲು ಪಿತೂರಿ ನಡೆದಿತ್ತು. ಆಗ ಬಂಕಿಮ್ ಚಂದ್ರ ಚಟರ್ಜಿ ಅನೇಕ ಸವಾಲುಗಳನ್ನು ಎದುರಿಸಿದರು, ಅವರು ಎದುರಿಸಿದ್ದಕ್ಕಿಂತ ಹೆಚ್ಚಿನ ಶಕ್ತಿಯಿಂದ ಪ್ರತಿಕ್ರಿಯಿಸಿದರು, ಆಗಲೇ ವಂದೇ ಮಾತರಂ ಜನಿಸಿತು. ಕೆಲವು ವರ್ಷಗಳ ನಂತರ, 1882ರಲ್ಲಿ ಅವರು ಆನಂದ ಮಠ ಕೃತಿಯನ್ನು ಬರೆದಾಗ, ಅವರು ಈ ಹಾಡನ್ನು ಅದರಲ್ಲಿ ಸೇರಿಸಿದರು.

ಸನ್ಮಾನ್ಯ ಸ್ಪೀಕರ್ ಸರ್,

ವಂದೇ ಮಾತರಂ ಗೀತೆಯು ಸಾವಿರಾರು ವರ್ಷಗಳಿಂದ ಭಾರತದ ನರನಾಡಿಗಳಲ್ಲಿ ಹುದುಗಿದ್ದ ಆ ಕಲ್ಪನೆಯನ್ನು ಪುನರುಜ್ಜೀವನಗೊಳಿಸಿತು. ಅವರು ನಮಗೆ ಅದೇ ಭಾವನೆ, ಅದೇ ಮೌಲ್ಯಗಳ ಸಮೂಹ, ಅದೇ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಆಳವಾದ ಮತ್ತು ಉನ್ನತ ಪದಗಳ ಮೂಲಕ ಉಡುಗೊರೆಯಾಗಿ ನೀಡಿದರು. ವಂದೇ ಮಾತರಂ ಕೇವಲ ರಾಜಕೀಯ ಸ್ವಾತಂತ್ರ್ಯದ ಮಂತ್ರವಾಗಿರಲಿಲ್ಲ, ನಾವು ನಮ್ಮದೇ ಆದ ಹಾದಿಯಲ್ಲಿ ಸ್ವತಂತ್ರವಾಗಿ ನಿಲ್ಲಲು ಬ್ರಿಟಿಷರ ನಿರ್ಗಮನಕ್ಕೆ ನೀಡಿದ ಕೇವಲ ಕರೆಯಾಗಿರಲಿಲ್ಲ. ಅದು ಅದಕ್ಕಿಂತಲೂ ಹೆಚ್ಚಿನ ಪ್ರೇರಣೆ ನೀಡಿತು. ಸ್ವಾತಂತ್ರ್ಯ ಹೋರಾಟವು ಈ ಮಾತೃಭೂಮಿಯನ್ನು ಮುಕ್ತಗೊಳಿಸುವ ಒಂದು ಪವಿತ್ರ ಧ್ಯೇಯವಾಗಿತ್ತು. ಭಾರತ ಮಾತೆಯನ್ನು ಸಂಕೋಲೆಗಳಿಂದ ಮುಕ್ತಗೊಳಿಸಲು ಇದು ಪವಿತ್ರ ಯುದ್ಧವಾಗಿತ್ತು. ನಾವು ವಂದೇ ಮಾತರಂನ ಸಾಂಸ್ಕೃತಿಕ ಅಡಿಪಾಯವನ್ನು ಪರಿಶೀಲಿಸಿದಾಗ, ಅದರ ಮೌಲ್ಯಗಳ ಪರಂಪರೆಯು ವೈದಿಕ ಯುಗಕ್ಕೆ ಹಿಂದಿನದಾಗಿದೆ. ನಾವು ವಂದೇ ಮಾತರಂ ಅನ್ನು ಉಚ್ಚರಿಸಿದಾಗ, ವೇದಗಳ ಕಾಲದ ಚಿಂತನೆಯಂತೆಯೇ ಇದೆ: "ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ"- "ಭೂಮಿಯೇ ನನ್ನ ತಾಯಿ, ಮತ್ತು ನಾನು ಅವಳ ಮಗ."

ಸನ್ಮಾನ್ಯ ಸ್ಪೀಕರ್ ಸರ್,

ಶ್ರೀರಾಮನು ಲಂಕೆಯ ವೈಭವವನ್ನು ತಿರಸ್ಕರಿಸಿದಾಗ ವ್ಯಕ್ತಪಡಿಸಿದ ಭಾವನೆ ಇದೇ, "ಜನನ ಜನ್ಮಭೂಮಿ ಸ್ವರ್ಗ" - "ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ" ಎಂದು ಘೋಷಿಸಿದ. ವಂದೇ ಮಾತರಂ ಈ ಭವ್ಯ ಸಾಂಸ್ಕೃತಿಕ ಸಂಪ್ರದಾಯದ ಆಧುನಿಕ ಸಾಕಾರವಾಗಿದೆ.

ಸನ್ಮಾನ್ಯ ಸ್ಪೀಕರ್ ಸರ್,

ಬಂಕಿಂ ದಾ ವಂದೇ ಮಾತರಂ ಅನ್ನು ರಚಿಸಿದಾಗ, ಅದು ಸ್ವಾಭಾವಿಕವಾಗಿಯೇ ಸ್ವಾತಂತ್ರ್ಯ ಚಳವಳಿಯ ಧ್ವನಿಯಾಯಿತು. ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ, ವಂದೇ ಮಾತರಂ ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಯಿತು. ವಂದೇ ಮಾತರಂ ಅನ್ನು ಸ್ತುತಿಸಿ ಈ ಸಾಲುಗಳನ್ನು ಬರೆಯಲಾಗಿದೆ:

“ಮಾತೃಭೂಮಿ ಸ್ವತಂತ್ರವಾಗಿ ವೇದಿಕೆಯಲ್ಲಿ ಮೊದಲಾಗಿ, ಮಾತೃಭೂಮಿ ಸ್ವತಂತ್ರವಾಗಿ ವೇದಿಕೆಯಲ್ಲಿ, ಬಲಿದಾನ ಹೇ, ಯೇ ಶಬ್ದವು ವಂದೇಮಾತರಂ, ಹೈ ಸಜೀವನ ಮಂತ್ರ ಭೀ, ಯಃ ವಿಶ್ವ, ವಿಶ್ವ ಶಕ್ತಿ ಕಾಹ್ವಾನ್ ಹೇ, ಯಹ ಶಬ್ದ ವಂದೇ ಮಾತರಂ "(ತಾಯಿನಾಡಿನ ಸ್ವಾತಂತ್ರ್ಯದ ಬಲಿಪೀಠದ ಮೇಲೆ, ಸ್ವಾರ್ಥದ ಸಂತೋಷದ ತ್ಯಾಗವಿದೆ- ಇದೇ ವಂದೇ ಮಾತರಂ.

ಇದು ಜೀವ ನೀಡುವ ಮಂತ್ರ, ಜಗತ್ತನ್ನು ಗೆಲ್ಲುವ ಮಂತ್ರ; ಇದು ಶಕ್ತಿಯ ಆವಾಹನೆ - ಈ ಪದಗಳೇ ವಂದೇ ಮಾತರಂ.

ಎದೆಯನ್ನು ಸೀಳಿ ಬಿಸಿ ರಕ್ತದಿಂದ ಬರೆಯಿರಿ, - ಇದು ಧೈರ್ಯಶಾಲಿಗಳ ಹೆಮ್ಮೆ- ಈ ಪದಗಳೇ ವಂದೇ ಮಾತರಂ.)

ಗೌರವಾನ್ವಿತ ಸ್ಪೀಕರ್ ಸರ್,

ಕೆಲವು ದಿನಗಳ ಹಿಂದೆ, ವಂದೇ ಮಾತರಂ 150 ವರ್ಷಗಳ ಆಚರಣೆಗಳು ಪ್ರಾರಂಭವಾದಾಗ, ವಂದೇ ಮಾತರಂ ಸಾವಿರಾರು ವರ್ಷಗಳ ಸಾಂಸ್ಕೃತಿಕ ಶಕ್ತಿಯನ್ನು ಸಂಕೇತಿಸುತ್ತದೆ ಎಂದು ನಾನು ಆ ಕಾರ್ಯಕ್ರಮದಲ್ಲಿ ಹೇಳಿದ್ದೆ. ಇದು ಸ್ವಾತಂತ್ರ್ಯದ ಚೈತನ್ಯವನ್ನು ಹಾಗೂ ಮುಕ್ತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಿತು. ಬ್ರಿಟಿಷರ ಕಾಲದಲ್ಲಿ, ಭಾರತವನ್ನು ದುರ್ಬಲ, ನಿಷ್ಪ್ರಯೋಜಕ, ಸೋಮಾರಿ ಮತ್ತು ನಿರಾಸಕ್ತಿ ಎಂದು ಬಿಂಬಿಸುವುದು ಫ್ಯಾಶನ್ ಆಗಿತ್ತು - ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಭಾರತವನ್ನು ಕೀಳಾಗಿಸಿ, ಆ ಬ್ರಿಟಿಷರ ಪ್ರಭಾವದಿಂದ ರೂಪುಗೊಂಡವರೂ ಅದೇ ಭಾಷೆಯನ್ನು ಅಳವಡಿಸಿಕೊಂಡರು. ಆ ಕೀಳರಿಮೆಯಿಂದ ದೇಶವನ್ನು ಅಲುಗಾಡಿಸಲು ಮತ್ತು ಭಾರತದ ಶಕ್ತಿಯನ್ನು ಬಹಿರಂಗಪಡಿಸಲು, ಬಂಕಿಮ್ ದಾ ಅವರು ತಮ್ಮ ಶಕ್ತಿಯುತ ಸ್ತೋತ್ರದ ಮೂಲಕ ಬರೆದಿದ್ದಾರೆ:

“ತ್ವಂ ಹಿ ದುರ್ಗಾ ದಶಪ್ರಹರಣಧಾರಿಣಿ, ಕಮಲಾ ಕಮಲದಲವಿಹಾರಿಣಿ, ವಾಣೀ ವಿದ್ಯಾಮಾನ. ನಮಾಮಿ ಕಮಲಾಮ್, ಅಮಲಾಮ್ ಅತುಲಾಂ ಸುಜಲಾಂ ಸುಫಲಾಂ ಮಾತರಂ॥”

ಅಂದರೆ ಭಾರತ ಮಾತೆ ಜ್ಞಾನ ಮತ್ತು ಸಮೃದ್ಧಿಯ ದೇವತೆ, ತನ್ನ ಶತ್ರುಗಳ ಮುಂದೆ ಆಯುಧಗಳೊಂದಿಗೆ ನಿಲ್ಲುವ ಉಗ್ರ ದುರ್ಗಾ ಮಾತೆಯೂ ಆಗಿದ್ದಾಳೆ.

ಸನ್ಮಾನ್ಯ ಸ್ಪೀಕರ್ ಸರ್,

ಈ ಮಾತುಗಳು, ಈ ಭಾವನೆ, ಈ ಸ್ಫೂರ್ತಿ ವಸಾಹತುಶಾಹಿ ಆಳ್ವಿಕೆಯಲ್ಲಿ ಹತಾಶೆಯಲ್ಲಿ ಮುಳುಗಿದ್ದ ಭಾರತೀಯರನ್ನು ಮೇಲಕ್ಕೆತ್ತಿದವು. ಈ ಸಾಲುಗಳು ಕೋಟ್ಯಂತರ ದೇಶವಾಸಿಗಳಿಗೆ ಈ ಯುದ್ಧವು ಒಂದು ತುಂಡು ಭೂಮಿಗಾಗಿ ಅಲ್ಲ, ಕೇವಲ ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ರಾಷ್ಟ್ರವನ್ನು ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತಗೊಳಿಸಲು ಮತ್ತು ದೇಶದ ಪ್ರಾಚೀನ ಸಂಪ್ರದಾಯಗಳು, ಅದರ ಶ್ರೇಷ್ಠ ಸಂಸ್ಕೃತಿ ಮತ್ತು ಅದರ ಅದ್ಭುತ ಇತಿಹಾಸಕ್ಕೆ ಪುನರ್ಜನ್ಮ ನೀಡಲು ಎಂದು ಅರಿತುಕೊಂಡವು.

ಸನ್ಮಾನ್ಯ ಸ್ಪೀಕರ್ ಸರ್,

ವಂದೇ ಮಾತರಂ ಮತ್ತು ಜನಸಾಮಾನ್ಯರ ನಡುವಿನ ಆಳವಾದ ಸಂಪರ್ಕವು ನಮ್ಮ ಸ್ವಾತಂತ್ರ್ಯ ಹೋರಾಟದ ದೀರ್ಘ ಯಶೋಗಾಥೆಯ ಮೂಲಕ ವ್ಯಕ್ತವಾಗುತ್ತದೆ.

ಸನ್ಮಾನ್ಯ ಸ್ಪೀಕರ್ ಸರ್,

ಸಿಂಧು, ಸರಸ್ವತಿ, ಕಾವೇರಿ, ಗೋದಾವರಿ, ಗಂಗಾ ಅಥವಾ ಯಮುನಾ ನದಿಯ ಬಗ್ಗೆ ಮಾತನಾಡುವಾಗಲೆಲ್ಲಾ ಅದರ ಪಕ್ಕದಲ್ಲಿ ಸಾಂಸ್ಕೃತಿಕ ಪ್ರವಾಹ, ಅಭಿವೃದ್ಧಿ ಪ್ರಯಾಣ, ಮಾನವ ಜೀವನದ ವೃತ್ತಾಂತವೂ ಹರಿಯುತ್ತದೆ. ಆದರೆ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರತಿಯೊಂದು ಹಂತವು ವಂದೇ ಮಾತರಂನ ಭಾವನೆಗಳ ಮೂಲಕ ಹರಿಯಿತು ಎಂದು ಯಾರಾದರೂ ಯೋಚಿಸಿದ್ದಾರೆಯೇ? ಅದು ಆ ನದಿಗಳ ತಟದಲ್ಲೇ ಅರಳಿತು. ಅಂತಹ ಕಾವ್ಯಾತ್ಮಕ ಭಾವನೆಯು ಜಗತ್ತಿನಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ.

ಸನ್ಮಾನ್ಯ ಸ್ಪೀಕರ್ ಸರ್,

1857ರ ನಂತರ ಭಾರತದಲ್ಲಿ ಹೆಚ್ಚು ಕಾಲ ಉಳಿಯುವುದು ಕಷ್ಟ ಎಂದು ಬ್ರಿಟಿಷರು ಅರ್ಥ ಮಾಡಿಕೊಂಡರು. ಭಾರತವನ್ನು ವಿಭಜಿಸದ ಹೊರತು, ಅದರ ಜನರನ್ನು ವಿಭಜಿಸಿ ತಮ್ಮೊಳಗೆ ಕಿತ್ತಾಡುವಂತೆ ಮಾಡದ ಹೊರತು, ತಮ್ಮ ಆಡಳಿತ ಉಳಿಯಲು ಸಾಧ್ಯವಿಲ್ಲ ಎಂದು ಅವರು ಅರಿತುಕೊಂಡರು. ಅವರು "ಒಡೆದು ಆಳುವ" ನೀತಿ ಅಳವಡಿಸಿಕೊಂಡರು, ಅದಕ್ಕೆ ಬಂಗಾಳವನ್ನು ತಮ್ಮ ಪ್ರಯೋಗಾಲಯವನ್ನಾಗಿ ಮಾಡಿಕೊಂಡರು, ಏಕೆಂದರೆ ಬಂಗಾಳದ ಬೌದ್ಧಿಕ ಶಕ್ತಿಯು ಒಮ್ಮೆ ಇಡೀ ರಾಷ್ಟ್ರಕ್ಕೆ ನಿರ್ದೇಶನ, ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡುತ್ತದೆ ಎಂಬುದು ಅವರಿಗೂ ತಿಳಿದಿತ್ತು. ಆದ್ದರಿಂದ ಬ್ರಿಟಿಷರು ಆ ಶಕ್ತಿಯನ್ನು ದುರ್ಬಲಗೊಳಿಸಲು ಬಯಸಿದರು, ಬಂಗಾಳವನ್ನು ವಿಭಜಿಸಿದರೆ, ಇಡೀ ದೇಶವೇ ವಿಭಜನೆಯಾಗುತ್ತದೆ, ಆಗ ನಾವು ಬಯಸಿದಷ್ಟು ಕಾಲ ಆಳಬಹುದು ಎಂದು ಬ್ರಿಟಿಷರು ನಂಬಿದ್ದರು. 1905ರಲ್ಲಿ ಅವರು ಬಂಗಾಳವನ್ನು ವಿಭಜಿಸಿದರು. ಆದರೆ 1905ರಲ್ಲಿ ಅವರು ಆ ಪಾಪ ಮಾಡಿದಾಗ, ವಂದೇ ಮಾತರಂ ಬಂಡೆಯಂತೆ ಸದೃಢವಾಗಿ ನಿಂತಿತು. ಅದು ಬಂಗಾಳದ ಏಕತೆಗಾಗಿ ಪ್ರತಿಧ್ವನಿಸುವ ಪ್ರತಿಯೊಂದು ಬೀದಿಯ, ಪ್ರತಿಯೊಂದು ಮೂಲೆಯ ಧ್ವನಿಯಾಯಿತು. ಆ ಘೋಷಣೆ ಜನರ ಸ್ಫೂರ್ತಿಯಾಯಿತು. ಬಂಗಾಳದ ವಿಭಜನೆಯೊಂದಿಗೆ, ಬ್ರಿಟಿಷರು ಭಾರತವನ್ನು ಮತ್ತಷ್ಟು ದುರ್ಬಲಗೊಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದರು, ಆದರೆ ವಂದೇ ಮಾತರಂ, ಒಂದೇ ಧ್ವನಿ ಮತ್ತು ಒಂದೇ ದಾರವಾಗಿ, ಅವರಿಗೆ ನಿರಂತರವಾಗಿ ಬೆಳೆಯುತ್ತಿರುವ ಸವಾಲಾಗಿ ಮತ್ತು ರಾಷ್ಟ್ರಕ್ಕೆ ಶಕ್ತಿಯ ಬಂಡೆಯಾಗಿ ಮಾರ್ಪಟ್ಟಿತು.

ಸನ್ಮಾನ್ಯ ಸ್ಪೀಕರ್ ಸರ್,

ಬಂಗಾಳದ ವಿಭಜನೆ ನಿಜಕ್ಕೂ ನಡೆದೇ ಹೋಯಿತು, ಆದರೆ ಅದರ ಹಿಂದೆಯೇ  ಅಗಾಧವಾದ ಸ್ವದೇಶಿ ಚಳುವಳಿಯೂ ಆರಂಭವಾಯಿತು. ಆ ಸಮಯದಲ್ಲಿ ವಂದೇ ಮಾತರಂ ಎಲ್ಲೆಡೆ ಪ್ರತಿಧ್ವನಿಸಿತು. ಬಂಗಾಳದ ಮಣ್ಣಿನಿಂದ ಅಸಾಧಾರಣವಾದದ್ದು ಹೊರಹೊಮ್ಮಿದೆ ಎಂದು ಬ್ರಿಟಿಷರು ಅರಿತುಕೊಂಡಿದ್ದರು. ಬಂಕಿಮ್ ದಾ ಅವರ ಈ ಭಾವನಾತ್ಮಕ ಮಂತ್ರಕ್ಕೆ ಅಪಾರವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಬಂಕಿಮ್ ಬಾಬು... ಬಂಕಿಮ್ ಬಾಬು- ಧನ್ಯವಾದಗಳು, ದಾದಾ, ಧನ್ಯವಾದಗಳು. ನಾನು ನಿಮ್ಮನ್ನು ದಾದಾ ಎಂದು ಕರೆಯಬಹುದೇ? ಇಲ್ಲದಿದ್ದರೆ ನೀವು ಅದನ್ನೂ ಆಕ್ಷೇಪಿಸಬಹುದು. ಈ ರೋಮಾಂಚನಕಾರಿ ಸ್ತೋತ್ರದ ಮೂಲಕ ಬಂಕಿಮ್ ಬಾಬು ಸೃಷ್ಟಿಸಿದ ಭಾವನಾತ್ಮಕ ಜಗತ್ತು ಬ್ರಿಟಿಷರ ಹೃದಯವನ್ನೇ ಅಲುಗಾಡಿಸಿತು. ಅವರ ದೌರ್ಬಲ್ಯದ ವ್ಯಾಪ್ತಿ ಮತ್ತು ಈ ಹಾಡಿನ ಬಲವನ್ನು ನೋಡಿ ಬ್ರಿಟಿಷರು, ಅದರ ಮೇಲೆ ಕಾನೂನು ನಿಷೇಧ ಹೇರಲು ಮುಂದಾದರು. ಅದನ್ನು ಹಾಡಿದ್ದಕ್ಕಾಗಿ ಒಬ್ಬರನ್ನು ಶಿಕ್ಷಿಸಿದರು, ಅದನ್ನು ಮುದ್ರಿಸಿದ್ದಕ್ಕಾಗಿ ಶಿಕ್ಷಿಸಿದರು. ಅಷ್ಟೇ ಅಲ್ಲ, ವಂದೇ ಮಾತರಂ ಎಂಬ ಪದಗಳನ್ನು ಉಚ್ಚರಿಸಿದರೂ ಶಿಕ್ಷೆ ನೀಡುವ  ಕಠಿಣ ಕಾನೂನುಗಳನ್ನು ಜಾರಿಗೊಳಿಸಲಾಯಿತು. ನೂರಾರು ಮಹಿಳೆಯರು ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದರು, ಲೆಕ್ಕವಿಲ್ಲದಷ್ಟು ಮಹಿಳೆಯರು ಹೆಚ್ಚಿನ ದೃಢನಿಶ್ಚಯದಿಂದ ಕೊಡುಗೆ ನೀಡಿದರು. ನಾನು ಒಂದು ಘಟನೆಯನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಬಾರಿಸಾಲ್‌ನಲ್ಲಿ ವಂದೇ ಮಾತರಂ ಹಾಡಿದ್ದಕ್ಕಾಗಿ ಅತ್ಯಂತ ಭೀಕರ ದೌರ್ಜನ್ಯಗಳು ನಡೆದವು. ಬಾರಿಸಾಲ್ ಇಂದು ಭಾರತದ ಭಾಗವಾಗಿಲ್ಲ. ಆ ಸಮಯದಲ್ಲಿ, ನಮ್ಮ ತಾಯಂದಿರು, ಸಹೋದರಿಯರು ಮತ್ತು ಬಾರಿಸಾಲ್‌ನ ಮಕ್ಕಳು ಬೀದಿಗಿಳಿದರು; ಈ ನಿಷೇಧವನ್ನು ಧಿಕ್ಕರಿಸಿ ವಂದೇ ಮಾತರಂನ ಗೌರವಕ್ಕಾಗಿ ಅವರು ಯುದ್ಧಭೂಮಿಗೆ ಕಾಲಿಟ್ಟರು. ನಂತರ ಬಾರಿಸಾಲ್‌ನ ಧೀರ ಮಹಿಳೆಯಾಗಿ ಶ್ರೀಮತಿ ಸರೋಜಿನಿ ಘೋಷ್ ಹೊರಹೊಮ್ಮಿದರು. ಆ ಯುಗದ ಚೈತನ್ಯವನ್ನು ನೋಡಿ, ವಂದೇ ಮಾತರಂ ಮೇಲಿನ ನಿಷೇಧವನ್ನು ತೆಗೆದುಹಾಕುವವರೆಗೆ, ತಾನು ಧರಿಸಿದ್ದ ಬಳೆಗಳನ್ನು ತೆಗೆದುಹಾಕುವುದಾಗಿ ಅವರು ಪ್ರತಿಜ್ಞೆ ಮಾಡಿದರು. ಭಾರತದಲ್ಲಿ ಆ ದಿನಗಳಲ್ಲಿ, ಬಳೆಗಳನ್ನು ತೆಗೆಯುವುದು ಮಹಿಳೆಯ ಜೀವನದಲ್ಲಿ ಒಂದು ಮಹತ್ವದ ಕಾರ್ಯವೆಂದು ಪರಿಗಣಿಸಲ್ಪಟ್ಟಿತು. ಆದರೂ, ಅವಳಿಗೆ ವಂದೇ ಮಾತರಂ ಎಲ್ಲಕ್ಕಿಂತ ಹೆಚ್ಚಾಗಿ ಒಂದು ಭಾವನೆಯಾಗಿತ್ತು. ಅವಳು ತನ್ನ ಚಿನ್ನದ ಬಳೆಗಳನ್ನು ತೆಗೆದು ವಂದೇ ಮಾತರಂ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೆ, ಅವುಗಳನ್ನು ಮತ್ತೆ ಅಲಂಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದಳು. ಅದು ಅವಳು ಮಾಡಿದ ಮಹಾನ್ ಸಂಕಲ್ಪ. ನಮ್ಮ ದೇಶದ ಪುಟ್ಟ ಮಕ್ಕಳ ಮೇಲೂ ಹಲ್ಲೆ ದೌರ್ಜನ್ಯಗಳು ನಡೆದವು, ಅಷ್ಟು ಚಿಕ್ಕ ವಯಸ್ಸಿನಲ್ಲಿ ಅವರನ್ನು ಜೈಲಿಗೆ ಹಾಕಲಾಯಿತು. ಆ ದಿನಗಳಲ್ಲಿ, ವಿಶೇಷವಾಗಿ ಬಂಗಾಳದ ಓಣಿಗಳಲ್ಲಿ ವಂದೇ ಮಾತರಂ ಪಠಿಸುವ ಬೆಳಗಿನ ಮೆರವಣಿಗೆಗಳು ನಡೆದವು. ಅವರು ಬ್ರಿಟಿಷರ ಪಾಲಿಗೆ ನಿರಂತರ ಕಂಟಕವಾಗಿದ್ದರು. ಆ ಸಮಯದಲ್ಲೇ ಬಂಗಾಳದಲ್ಲಿ ಒಂದು ಹಾಡು ಪ್ರತಿಧ್ವನಿಸಿತು:

"ಜಾಯೆ ಜಾಬೇ ಜೀಬೋನೋ ಚೋಲೇ, ಜಾಯೆ ಜಾಬೇ ಜೀಬೋನೋ ಚೋಲೇ, ಜೋಗೋತೋ ಮಾಜೆ ತೋಮರ್ ಕಂಡೆ ವಂದೇ ಮಾತರಂ ಬೋಲೆ." (ಬಂಗಾಲಿಯಲ್ಲಿ)

ಇದರರ್ಥ: ಓ ತಾಯಿ, ನಿನ್ನ ಸೇವೆ ಮಾಡುತ್ತಾ ವಂದೇ ಮಾತರಂ ಪಠಿಸುತ್ತಾ ಜೀವನ ಕಳೆದರೆ, ಅಂತಹ ಜೀವನವೇ ಧನ್ಯ. ಬಂಗಾಳದ ಓಣಿಗಳಲ್ಲಿ ಮಕ್ಕಳು ಇದನ್ನೇ ಪಠಿಸುತ್ತಿದ್ದರು. ಆ ಹಾಡು ಆ ಮಕ್ಕಳ ಧೈರ್ಯದ ಧ್ವನಿಯಾಗಿತ್ತು, ಅವರ ಆ ಧೈರ್ಯವೇ ರಾಷ್ಟ್ರಕ್ಕೆ ಬಲ ನೀಡಿತು. ಬಂಗಾಳದ ಗಲ್ಲಿಗಳಿಂದ ಹೊರಹೊಮ್ಮಿದ ಧ್ವನಿ ಇಡೀ ದೇಶದ ಧ್ವನಿಯಾಯಿತು. 1905ರಲ್ಲಿ ಹರಿತ್‌ಪುರದ ಒಂದು ಹಳ್ಳಿಯಲ್ಲಿ ಬ್ರಿಟಿಷರು ನಿರ್ದಯವಾಗಿ ಅವರನ್ನು ಥಳಿಸಿದಾಗ ಚಿಕ್ಕ ಮಕ್ಕಳು ವಂದೇ ಮಾತರಂ ಘೋಷಣೆ ಕೂಗುತ್ತಿದ್ದರು. ಅವರು ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿತು. ಅವರ ಮೇಲೆ ಹೇರಿದ ಕ್ರೌರ್ಯ ಅಂತಹದ್ದೇ ಆಗಿತ್ತು. 1906ರಲ್ಲಿ ನಾಗ್ಪುರದ ನೀಲ್ ಸಿಟಿ ಹೈಸ್ಕೂಲ್‌ನ ಮಕ್ಕಳ ಮೇಲೆ ಬ್ರಿಟಿಷರು ಇದೇ ರೀತಿಯ ದೌರ್ಜನ್ಯಗಳನ್ನು ಎಸಗಿದರು. ಅವರ ಏಕೈಕ "ಅಪರಾಧ"ವೆಂದರೆ ಒಟ್ಟಿಗೆ ನಿಂತು ಒಗ್ಗಟ್ಟಿನಿಂದ ವಂದೇ ಮಾತರಂ ಘೋಷಣೆ ಕೂಗಿದರು. ತಮ್ಮ ಶಕ್ತಿಯ ಮೂಲಕ ಅವರು ಈ ಮಂತ್ರದ ಪವಿತ್ರ ಶಕ್ತಿಯನ್ನು ಪ್ರದರ್ಶಿಸಲು ಪ್ರಯತ್ನಿಸಿದರು. ನಮ್ಮ ಕೆಚ್ಚೆದೆಯ ಕ್ರಾಂತಿಕಾರಿಗಳು ನಿರ್ಭಯವಾಗಿ ಗಲ್ಲು ಶಿಕ್ಷೆಯನ್ನು ಅಪ್ಪಿಕೊಂಡರು, ಅವರ ಕೊನೆಯ ಉಸಿರಿನವರೆಗೂ, ಅವರ ಪ್ರತಿಧ್ವನಿಸುವ ಘೋಷಣೆ ಉಳಿಯಿತು: ಅದೇ ವಂದೇ ಮಾತರಂ, ವಂದೇ ಮಾತರಂ, ವಂದೇ ಮಾತರಂ. ಖುದಿರಾಮ್ ಬೋಸ್, ಮದನ್ ಲಾಲ್ ಧಿಂಗ್ರಾ, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ರೋಶನ್ ಸಿಂಗ್, ರಾಜೇಂದ್ರನಾಥ್ ಲಹಿರಿ, ರಾಮಕೃಷ್ಣ ಬಿಸ್ವಾಸ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರು ವಂದೇ ಮಾತರಂ ಪಠಿಸುತ್ತಾ ಸೆರೆವಾಸದ ಕುಣಿಕೆಯನ್ನು ಅಪ್ಪಿಕೊಂಡರು. ಇದು ವಿಭಿನ್ನ ಜೈಲುಗಳಲ್ಲಿ, ವಿಭಿನ್ನ ಪ್ರದೇಶಗಳಲ್ಲಿ ಸಂಭವಿಸಿತು. ಕಿರುಕುಳ ನೀಡುವವರ ಮುಖಗಳು ವಿಭಿನ್ನವಾಗಿದ್ದವು, ಚಿತ್ರಹಿಂಸೆಗೊಳಗಾದ ಜನರು ವಿಭಿನ್ನವಾಗಿದ್ದರು, ಅವರ ಭಾಷೆಗಳು ವಿಭಿನ್ನವಾಗಿದ್ದವು - ಆದರೆ 'ಏಕ್ ಭಾರತ್ ಶ್ರೇಷ್ಠ ಭಾರತ್' ಎಂಬ ಮಂತ್ರ ಎಲ್ಲರಿಗೂ ಒಂದೇ ಆಗಿತ್ತು: ವಂದೇ ಮಾತರಂ. ಸ್ವದೇಶಿ ಕ್ರಾಂತಿಯಲ್ಲಿ ಬ್ರಿಟಿಷರನ್ನು ಸವಾಲು ಮಾಡಿದ ಚಿತ್ತಗಾಂಗ್‌ನ ಯುವಕರು ನಮ್ಮ ಇತಿಹಾಸದಲ್ಲಿ ಬೆಳಗುವ ಹೆಸರುಗಳಾಗಿವೆ. ಹರಗೋಪಾಲ್ ಕೌಲ್, ಪುಲಿನ್ ಬಿಕಾಶ್ ಘೋಷ್ ಮತ್ತು ತ್ರಿಪುರ ಸೇನ್ ಇವರೆಲ್ಲರೂ ರಾಷ್ಟ್ರಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಿದರು. 1934ರಲ್ಲಿ ಮಾಸ್ಟರ್ ಸೂರ್ಯ ಸೇನ್ ಅವರನ್ನು ಗಲ್ಲಿಗೇರಿಸಿದಾಗ, ಅವರು ತಮ್ಮ ಒಡನಾಡಿಗಳಿಗೆ ಪತ್ರ ಬರೆದರು, ಆ ಪತ್ರವು ಕೇವಲ ಒಂದು ಪದದೊಂದಿಗೆ ಪ್ರತಿಧ್ವನಿಸಿತು, ಅದೇ ವಂದೇ ಮಾತರಂ.

ಸನ್ಮಾನ್ಯ ಸ್ಪೀಕರ್ ಸರ್,

ನಾವು ಭಾರತೀಯರು ಹೆಮ್ಮೆ ಪಡಬೇಕು. ಪ್ರಪಂಚದ ಇತಿಹಾಸ ನೋಡಿದರೆ, ಶತಮಾನಗಳಿಂದ ಲಕ್ಷಾಂತರ ಜನರನ್ನು ಒಂದೇ ಗುರಿಯತ್ತ ಪ್ರೇರೇಪಿಸುವ, ಅವರ ಜೀವನವನ್ನು ಮುಡಿಪಾಗಿಡುವಂತೆ ಪ್ರೇರೇಪಿಸುವ ಯಾವುದೇ ಕವಿತೆ, ಯಾವುದೇ ಸ್ಫೂರ್ತಿದಾಯಕ ಗೀತೆ ಇರಲು ಸಾಧ್ಯವಿಲ್ಲ. ವಂದೇ ಮಾತರಂ ಹೊರತುಪಡಿಸಿ ಜಗತ್ತಿನಲ್ಲಿ ಎಲ್ಲಿಯೂ ಅಂತಹ ಭಾವನಾತ್ಮಕ ಹಾಡು ಇರಲು ಸಾಧ್ಯವೇ ಇಲ್ಲ. ಗುಲಾಮಗಿರಿಯ ಯುಗದಲ್ಲು ಸಹ, ಈ ರೀತಿಯ ಹಾಡನ್ನು ರಚಿಸಬಲ್ಲ ಅಸಾಧಾರಣ ಜನರು ನಮ್ಮ ದೇಶದಲ್ಲಿ ಜನಿಸಿದರು ಎಂಬುದನ್ನು ಇಡೀ ಜಗತ್ತು ತಿಳಿದುಕೊಳ್ಳಬೇಕು. ಇದು ಇಡೀ ಜಗತ್ತಿನ ಪಾಲಿಗೆ ಒಂದು ಅದ್ಭುತವಾಗಿದೆ. ನಾವು ಇದನ್ನು ಹೆಮ್ಮೆಯಿಂದ ಹೇಳಬೇಕು, ಆಗ ಜಗತ್ತು ಸಹ ಅದನ್ನು ಗೌರವಿಸಲು ಪ್ರಾರಂಭಿಸುತ್ತದೆ. ಅದು ನಮ್ಮ ಸ್ವಾತಂತ್ರ್ಯದ ಮಂತ್ರ, ತ್ಯಾಗದ ಮಂತ್ರ, ಶಕ್ತಿಯ ಮಂತ್ರ, ಶುದ್ಧತೆಯ ಮಂತ್ರ, ಸಮರ್ಪಣೆಯ ಮಂತ್ರ, ತ್ಯಾಗ ಮತ್ತು ಪ್ರಾಯಶ್ಚಿತ್ತದ ಮಂತ್ರ, ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡುವ ಮಂತ್ರ ಮತ್ತು ಆ ಮಂತ್ರವೇ ವಂದೇ ಮಾತರಂ. ಅದಕ್ಕಾಗಿಯೇ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಬರೆದಿದ್ದಾರೆ: ಒಂದು ಕಾರ್ಯೆ ಸೊಂಪಿಯಾಚಿ ಸಹಸ್ರ ಜೀವನ—ವಂದೇ ಮಾತರಂ (ಬಂಗಾಳಿಯಲ್ಲಿ), ಅಂದರೆ "ಒಂದೇ ದಾರದಲ್ಲಿ ಬಂಧಿಸಲ್ಪಟ್ಟ ಸಾವಿರಾರು ಹೃದಯಗಳು, ಒಂದು ಧ್ಯೇಯಕ್ಕೆ ಮೀಸಲಾಗಿರುವ ಸಾವಿರಾರು ಜೀವಗಳು: ಅದೇ ವಂದೇ ಮಾತರಂ". ಇದನ್ನೇ ರವೀಂದ್ರನಾಥ ಟ್ಯಾಗೋರ್ ಬರೆದಿದ್ದಾರೆ.

ಸನ್ಮಾನ್ಯ ಸ್ಪೀಕರ್ ಸರ್,

ಅದೇ ಅವಧಿಯಲ್ಲಿ, ವಂದೇ ಮಾತರಂನ ಧ್ವನಿಮುದ್ರಣಗಳು ವಿಶ್ವದ ವಿವಿಧ ಭಾಗಗಳನ್ನು ತಲುಪಿದವು. ಕ್ರಾಂತಿಕಾರಿಗಳಿಗೆ ಲಂಡನ್ ಒಂದು ರೀತಿಯ ಪವಿತ್ರ ಭೂಮಿಯಾಗಿತ್ತು, ಆ ಲಂಡನ್ ನ ಇಂಡಿಯಾ ಹೌಸ್‌ನಲ್ಲಿ ವೀರ್ ಸಾವರ್ಕರ್ ವಂದೇ ಮಾತರಂ ಹಾಡಿದರು, ಆ ಹಾಡು ಅಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸಿತು. ರಾಷ್ಟ್ರಕ್ಕಾಗಿ ಬದುಕಲು ಮತ್ತು ಸಾಯಲು ಸಿದ್ಧರಿರುವವರಿಗೆ ಇದು ಸ್ಫೂರ್ತಿಯ ಸೆಲೆಯಾಯಿತು. ಆ ಸಮಯದಲ್ಲಿ, ಬಿಪಿನ್ ಚಂದ್ರ ಪಾಲ್ ಮತ್ತು ಮಹರ್ಷಿ ಅರಬಿಂದೋ ಘೋಷ್ ಒಂದು ಪತ್ರಿಕೆ ಪ್ರಾರಂಭಿಸಿದರು, ಅವರು ಅದಕ್ಕೆ ವಂದೇ ಮಾತರಂ ಎಂದು ಹೆಸರಿಸಿದರು. ವಾಸ್ತವವಾಗಿ, ವಂದೇ ಮಾತರಂ ಪ್ರತಿ ಹಂತದಲ್ಲೂ ಬ್ರಿಟಿಷರ ನಿದ್ರೆಯನ್ನು ಕೆಡಿಸುವಷ್ಟು ಪ್ರಭಾವ ಉಂಟು ಮಾಡಿತ್ತು. ಅದಕ್ಕಾಗಿಯೇ ಅವರು ಈ ಹೆಸರನ್ನು ಆರಿಸಿಕೊಂಡರು. ಬ್ರಿಟಿಷರು ಪತ್ರಿಕೆಗಳನ್ನು ನಿಷೇಧಿಸಿದಾಗ, ಮೇಡಂ ಭಿಕಾಜಿ ಕಾಮಾ ಪ್ಯಾರಿಸ್‌ನಲ್ಲಿ ಒಂದು ಪತ್ರಿಕೆಯನ್ನು ಪ್ರಾರಂಭಿಸಿ ಅದಕ್ಕೆ ವಂದೇ ಮಾತರಂ ಎಂದು ಹೆಸರಿಸಿದರು.

ಸನ್ಮಾನ್ಯ ಸ್ಪೀಕರ್ ಸರ್,

ವಂದೇ ಮಾತರಂ ಭಾರತಕ್ಕೆ ಸ್ವಾವಲಂಬನೆಯ ಹಾದಿಯನ್ನು ತೋರಿಸಿತು. ಆ ಸಮಯದಲ್ಲಿ, ಬೆಂಕಿಕಡ್ಡಿಗಳಿಂದ ಹಿಡಿದು ದೊಡ್ಡ ಹಡಗುಗಳ ತನಕ, ಅವುಗಳ ಮೇಲೆ ವಂದೇ ಮಾತರಂ ಬರೆಯುವ ಸಂಪ್ರದಾಯ ಪ್ರಾರಂಭವಾಯಿತು. ಇದು ವಿದೇಶಿ ಕಂಪನಿಗಳನ್ನು ಸವಾಲು ಮಾಡುವ ಸಾಧನವಾಯಿತು, ಸ್ವದೇಶಿಯ ಮಂತ್ರವಾಯಿತು. ಸ್ವಾತಂತ್ರ್ಯದ ಮಂತ್ರವು ಸ್ವದೇಶಿಯ ಮಂತ್ರದಂತೆ ವಿಸ್ತರಿಸಲು ಪ್ರಾರಂಭಿಸಿತು.

ಸನ್ಮಾನ್ಯ ಸ್ಪೀಕರ್ ಸರ್,

ನಾನು ಇನ್ನೊಂದು ಘಟನೆಯನ್ನು ಉಲ್ಲೇಖಿಸಲು ಬಯಸುತ್ತೇನೆ. 1907ರಲ್ಲಿ, ವಿ.ಒ. ಚಿದಂಬರಂ ಪಿಳ್ಳೈ ಸ್ವದೇಶಿ ಕಂಪನಿಯ ಹಡಗು ನಿರ್ಮಿಸಿದಾಗ, ಅದರ ಮೇಲೆ ವಂದೇ ಮಾತರಂ ಬರೆಯಲಾಯಿತು. ರಾಷ್ಟ್ರಕವಿ ಸುಬ್ರಮಣ್ಯ ಭಾರತಿ ವಂದೇ ಮಾತರಂ ಅನ್ನು ತಮಿಳಿಗೆ ಅನುವಾದಿಸಿದರು, ಅವರು ಶ್ಲಾಘನೆಯ ಸ್ತುತಿಗೀತೆಗಳನ್ನು ರಚಿಸಿದರು. ಅವರ ಅನೇಕ ತಮಿಳು ದೇಶಭಕ್ತಿ ಗೀತೆಗಳಲ್ಲಿ, ವಂದೇ ಮಾತರಂ ಬಗ್ಗೆ ಇರುವ ಭಕ್ತಿಯನ್ನು ಸ್ಪಷ್ಟವಾಗಿ ಕಾಣಬಹುದು. ಬಹುಶಃ ತಮಿಳುನಾಡಿನ ಜನರು ಇದನ್ನು ತಿಳಿದಿರಬಹುದು, ಆದರೆ ಇತರರು ತಿಳಿಯದಿರಬಹುದು. ಭಾರತದ ಧ್ವಜ ಗೀತೆಯನ್ನು ವಿ. ಸುಬ್ರಮಣ್ಯ ಭಾರತಿ ಸ್ವತಃ ಬರೆದಿದ್ದಾರೆ. ಆ ಧ್ವಜ ಗೀತೆಯ ವಿವರಣೆಯು ವಂದೇ ಮಾತರಂ ಬರೆದ ಧ್ವಜವನ್ನು ಆಧರಿಸಿದೆ. ಈ ಹಾಡಿನ ತಮಿಳಿನ ಶೀರ್ಷಿಕೆ: ಥಾಯಿನ್ ಮಣಿಕೋಡಿ ಪರೀರ್, ತಜ್ಂಡು ಪನಿಂತು ಪುಕಳ್ಂತಿದ ವರೀರ್! (ತಮಿಳಿನಲ್ಲಿ). ಇದರ ಅರ್ಥ "ಓ ಭೂಮಿತಾಯಿಯ ಮಕ್ಕಳೆ, ಬನ್ನಿ, ನೋಡಿ, ಭಕ್ತಿಯಿಂದ ತಲೆಬಾಗಿ ನಮಸ್ಕರಿಸಿ ಮತ್ತು ನನ್ನ ತಾಯಿಯ ದೈವಿಕ ಧ್ವಜವನ್ನು ಸ್ತುತಿಸಿ" ಎಂಬುದಾಗಿದೆ.

ಸನ್ಮಾನ್ಯ ಸ್ಪೀಕರ್ ಸರ್,

ಇಂದು ನಾನು ಈ ಸದನದಲ್ಲಿ ವಂದೇ ಮಾತರಂ ಬಗ್ಗೆ ಮಹಾತ್ಮ ಗಾಂಧಿ ಅವರ ಭಾವನೆಗಳನ್ನು ಪ್ರಸ್ತುತಪಡಿಸಲು ಬಯಸುತ್ತೇನೆ. ದಕ್ಷಿಣ ಆಫ್ರಿಕಾದಿಂದ ಪ್ರಕಟವಾಗುವ ವಾರಪತ್ರಿಕೆ ಇಂಡಿಯನ್ ಒಪೀನಿಯನ್, ಮಹಾತ್ಮ ಗಾಂಧಿ ಅವರು ಡಿಸೆಂಬರ್ 2, 1905ರಂದು ಬರೆದದ್ದನ್ನು ಪ್ರಕಟಿಸಿತು. ನಾನು ಅದನ್ನು ಉಲ್ಲೇಖಿಸುತ್ತಿದ್ದೇನೆ. ಗಾಂಧಿ ಅವರು ಹೀಗೆ ಬರೆದಿದ್ದಾರೆ: “ಬಂಕಿಮ್ ಚಂದ್ರ ರಚಿಸಿದ ವಂದೇ ಮಾತರಂ ಹಾಡು ಬಂಗಾಳದಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಸ್ವದೇಶಿ ಚಳವಳಿ ಸಮಯದಲ್ಲಿ, ಬಂಗಾಳದಲ್ಲಿ ಬೃಹತ್ ಸಭೆಗಳು ನಡೆದವು, ಅಲ್ಲಿ ಲಕ್ಷಾಂತರ ಜನರು ಒಟ್ಟುಗೂಡಿದರು ಮತ್ತು ಬಂಕಿಮರ ಈ ಹಾಡನ್ನು ಹಾಡಿದರು.” ಗಾಂಧೀಜಿ ಮತ್ತಷ್ಟು ಬರೆದಿದ್ದು, ಇದು ಬಹಳ ಮುಖ್ಯವಾಗಿದೆ. ಅವರು 1905ರಲ್ಲಿ ಹೀಗೆ ಬರೆದಿದ್ದಾರೆ: “ಈ ಹಾಡು ಎಷ್ಟು ಜನಪ್ರಿಯವಾಗಿದೆ ಎಂದರೆ ಅದು ನಮ್ಮ ರಾಷ್ಟ್ರಗೀತೆಯಂತಿದೆ. ಇದರ ಭಾವನೆಗಳು ಉದಾತ್ತವಾಗಿವೆ, ಇದು ಇತರೆ ರಾಷ್ಟ್ರಗಳ ಹಾಡುಗಳಿಗಿಂತ ಸಿಹಿಯಾಗಿದೆ. ಇದರ ಏಕೈಕ ಉದ್ದೇಶವೆಂದರೆ ನಮ್ಮೊಳಗಿನ ದೇಶಭಕ್ತಿಯ ಚೈತನ್ಯವನ್ನು ಜಾಗೃತಗೊಳಿಸುವುದಾಗಿದೆ. ಇದು ಭಾರತವನ್ನು ತಾಯಿ ಎಂದು ಪರಿಗಣಿಸುತ್ತದೆ ಮತ್ತು ಅವಳನ್ನು ಹೊಗಳುತ್ತದೆ.”

ಸನ್ಮಾನ್ಯ ಸ್ಪೀಕರ್ ಸರ್,

1905ರಲ್ಲಿ ಮಹಾತ್ಮ ಗಾಂಧಿ ಅವರು ರಾಷ್ಟ್ರಗೀತೆಯಾಗಿ ಭಾವಿಸಿದ ವಂದೇ ಮಾತರಂ ಮತ್ತು ದೇಶದ ಮೂಲೆ ಮೂಲೆಯಲ್ಲಿ, ರಾಷ್ಟ್ರಕ್ಕಾಗಿ ಬದುಕಿದ ಮತ್ತು ಉಸಿರಾಡಿದ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಹಾಡು ಭಾರತದ ಉದ್ದೇಶಕ್ಕಾಗಿ ಜಾಗೃತರಾದ ಎಲ್ಲರಿಗೂ ಅಗಾಧ ಶಕ್ತಿ ನೀಡಿತು. ವಂದೇ ಮಾತರಂ ತುಂಬಾ ಶ್ರೇಷ್ಠವಾಗಿತ್ತು, ಅದರ ಆತ್ಮವು ತುಂಬಾ ಉದಾತ್ತವಾಗಿತ್ತು, ಹಾಗಾದರೆ ಕಳೆದ ಶತಮಾನದಲ್ಲಿ ಅದಕ್ಕೆ ಏಕೆ ಅಂತಹ ಅನ್ಯಾಯ ಮಾಡಲಾಯಿತು? ವಂದೇ ಮಾತರಂ ವಿರುದ್ಧ ಏಕೆ ದ್ರೋಹ ಮಾಡಲಾಯಿತು? ಈ ಅನ್ಯಾಯ ಏಕೆ ಸಂಭವಿಸಿತು? ಪೂಜ್ಯ ಬಾಪು ಅವರ ಭಾವನೆಗಳಿಗಿಂತಲೂ ಹೆಚ್ಚು ಶಕ್ತಿಶಾಲಿಯಾದ ಆ ಶಕ್ತಿಯೇನು? ವಂದೇ ಮಾತರಂನಂತಹ ಪವಿತ್ರ ಭಾವನೆಯನ್ನು ವಿವಾದಕ್ಕೆ ಎಳೆದವರು ಯಾರು? ಇಂದು ನಾವು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿರುವಾಗ, ಈ ದ್ರೋಹಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ನಮ್ಮ ಹೊಸ ಪೀಳಿಗೆಗೆ ಹೇಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನಾನು ನಂಬುತ್ತೇನೆ. ವಂದೇ ಮಾತರಂಗೆ ಮುಸ್ಲಿಂ ಲೀಗ್‌ನ ವಿರೋಧದ ರಾಜಕೀಯ ತೀವ್ರಗೊಳ್ಳುತ್ತಿತ್ತು. ಅಕ್ಟೋಬರ್ 15, 1937ರಂದು, ಮುಹಮ್ಮದ್ ಅಲಿ ಜಿನ್ನಾ ಲಕ್ನೋದಿಂದ ವಂದೇ ಮಾತರಂ ವಿರುದ್ಧ ಬಲವಾದ ಘೋಷಣೆ ಎತ್ತಿದರು. ಆಗಿನ ಕಾಂಗ್ರೆಸ್ ಅಧ್ಯಕ್ಷ ಜವಾಹರಲಾಲ್ ನೆಹರು ಅವರ ರಾಜಕೀಯ ನೆಲೆ ಅಲುಗಾಡುತ್ತಿರುವುದನ್ನು ಕಂಡರು. ಮುಸ್ಲಿಂ ಲೀಗ್‌ನ ಆಧಾರರಹಿತ ಹೇಳಿಕೆಗಳನ್ನು ಬಲವಾಗಿ ವಿರೋಧಿಸುವ, ಅವುಗಳನ್ನು ಖಂಡಿಸುವ ಮತ್ತು ವಂದೇ ಮಾತರಂಗೆ ಅವರ ಮತ್ತು ಕಾಂಗ್ರೆಸ್ ಪಕ್ಷದ ನಿಷ್ಠೆಯನ್ನು ವ್ಯಕ್ತಪಡಿಸುವ ಬದಲು, ಇದಕ್ಕೆ ವಿರುದ್ಧವಾದದ್ದು ಸಂಭವಿಸಿತು. ಅವರು ಹಾಗೆ ಏಕೆ ವರ್ತಿಸಿದರು ಎಂಬುದು ತಿಳಿದಿಲ್ಲ, ಆದರೆ ಅವರು ವಂದೇ ಮಾತರಂ ಅನ್ನು ಪರಿಶೀಲಿಸಲು ಪ್ರಾರಂಭಿಸಿದರು. ಜಿನ್ನಾ ಅವರ ವಿರೋಧದ 5 ದಿನಗಳ ನಂತರ, ನೆಹರು ಅಕ್ಟೋಬರ್ 20ರಂದು ನೇತಾಜಿ ಸುಭಾಷ್ ಬೋಸ್‌ಗೆ ಪತ್ರ ಬರೆದರು. ಜಿನ್ನಾ ಅವರ ಭಾವನೆಯನ್ನು ಪ್ರತಿಧ್ವನಿಸುತ್ತಾ, ವಂದೇ ಮಾತರಂನ ಆನಂದಮಠದ ಹಿನ್ನೆಲೆ ಮುಸ್ಲಿಮರನ್ನು ಕೆರಳಿಸಬಹುದು ಎಂದು ಅವರು ಆ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ನಾನು ನೆಹರು ಜಿ ಅವರ ಉಲ್ಲೇಖವನ್ನು ಓದುತ್ತೇನೆ. ನೆಹರು ಜಿ ಹೇಳುತ್ತಾರೆ: "ನಾನು ವಂದೇ ಮಾತರಂ ಹಾಡಿನ ಹಿನ್ನೆಲೆಯನ್ನು ಅಧ್ಯಯನ ಮಾಡಿದ್ದೇನೆ." ನಂತರ ನೆಹರು ಜಿ ಬರೆಯುತ್ತಾರೆ: "ಈ ಹಿನ್ನೆಲೆಯಿಂದಾಗಿ ಮುಸ್ಲಿಮರು ಕೆರಳಬಹುದು ಎಂದು ನಾನು ಭಾವಿಸುತ್ತೇನೆ."

ಸನ್ಮಾನ್ಯ ಸ್ಪೀಕರ್ ಸರ್,

ಇದರ ನಂತರ, ವಂದೇ ಮಾತರಂ ಬಳಕೆಯನ್ನು ಪರಿಶೀಲಿಸಲು ಅಕ್ಟೋಬರ್ 26ರಿಂದ ಕೋಲ್ಕತ್ತಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಲಿದೆ ಎಂದು ಕಾಂಗ್ರೆಸ್‌ನಿಂದ ಹೇಳಿಕೆ ಬಂದಿತು. ಬಂಕಿಮ್ ಬಾಬು ಅವರ ಬಂಗಾಳ, ಬಂಕಿಮ್ ಬಾಬು ಅವರ ಕೋಲ್ಕತಾವನ್ನು ಈ ವಿಮರ್ಶೆಗೆ ಆಯ್ಕೆ ಮಾಡಲಾಯಿತು. ಇಡೀ ದೇಶ ಆಘಾತಕ್ಕೊಳಗಾಯಿತು, ಇಡೀ ರಾಷ್ಟ್ರ ಆಶ್ಚರ್ಯಚಕಿತವಾಯಿತು. ದೇಶಾದ್ಯಂತ, ದೇಶಭಕ್ತರು ಬೆಳಗ್ಗೆ ಮೆರವಣಿಗೆಗಳನ್ನು ಆಯೋಜಿಸಿ, ವಂದೇ ಮಾತರಂ ಹಾಡುತ್ತಾ ಪ್ರತಿಭಟನೆ ನಡೆಸಿದರು. ಆದರೆ ದುರದೃಷ್ಟವಶಾತ್ ಅಕ್ಟೋಬರ್ 26ರಂದು, ಕಾಂಗ್ರೆಸ್ ವಂದೇ ಮಾತರಂ ವಿಷಯದಲ್ಲಿ ರಾಜಿ ಮಾಡಿಕೊಂಡಿತು. ಅವರು ವಂದೇ ಮಾತರಂ ಅನ್ನು ಭಾಗಗಳಾಗಿ ಒಡೆಯಲು ನಿರ್ಧರಿಸಿದರು. ಈ ನಿರ್ಧಾರದ ಹಿಂದೆ ಅವರು "ಸಾಮಾಜಿಕ ಸಾಮರಸ್ಯ"ದ ಮುಖವಾಡ ಧರಿಸಿದ್ದರು, ಆದರೆ ಕಾಂಗ್ರೆಸ್ ಮುಸ್ಲಿಂ ಲೀಗ್ ಮುಂದೆ ಮಂಡಿಯೂರಿದ್ದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಮುಸ್ಲಿಂ ಲೀಗ್‌ನ ಒತ್ತಡದಲ್ಲಿ ಕಾಂಗ್ರೆಸ್ ಇದನ್ನು ಒಪ್ಪಿಕೊಂಡಿತು. ಇದು ಅವರ “ಓಲೈಕೆ ರಾಜಕಾರಣ” ಮುಂದುವರಿಸುವ ಒಂದು ಮಾರ್ಗವಾಗಿತ್ತು.

ಸನ್ಮಾನ್ಯ ಸ್ಪೀಕರ್ ಸರ್,

ತುಷ್ಟೀಕರಣ(ಓಲೈಕೆ) ರಾಜಕೀಯದ ಒತ್ತಡದಲ್ಲಿ ವಂದೇ ಮಾತರಂ ಅನ್ನು ವಿಭಜಿಸಿದ್ದಕ್ಕಾಗಿ ಕಾಂಗ್ರೆಸ್ ತಲೆಬಾಗಿತು. ಅದಕ್ಕಾಗಿಯೇ ಕಾಂಗ್ರೆಸ್ ಭಾರತದ ವಿಭಜನೆಗೂ ತಲೆಬಾಗಬೇಕಾಯಿತು. ಕಾಂಗ್ರೆಸ್ ನಿರ್ಧಾರ ತೆಗೆದುಕೊಳ್ಳುವುದನ್ನು ಹೊರಗುತ್ತಿಗೆ ನೀಡಿದೆ ಎಂದು ತೋರುತ್ತದೆ. ದುರದೃಷ್ಟವಶಾತ್, ಕಾಂಗ್ರೆಸ್ ನೀತಿಗಳು ಹಾಗೆಯೇ ಉಳಿದಿವೆ. ಇದು ಮಾತ್ರವಲ್ಲದೆ ಐಎನ್ ಸಿ ಕ್ರಮೇಣ ಎಂಎಂಸಿ ಆಗಿ ಮಾರ್ಪಟ್ಟಿದೆ. ಇಂದಿಗೂ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು, ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿರುವ ಎಲ್ಲರೂ, ವಂದೇ ಮಾತರಂ ಸುತ್ತಲೂ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ.

ಸನ್ಮಾನ್ಯ ಸ್ಪೀಕರ್ ಸರ್,

ಯಾವುದೇ ರಾಷ್ಟ್ರದ ಸ್ವರೂಪವು ಅದರ ಅತ್ಯುತ್ತಮ ಸಮಯದಲ್ಲಿ ಅಲ್ಲದಿದ್ದರೂ ಸವಾಲು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಬಹಿರಂಗಗೊಳ್ಳುತ್ತದೆ. ನಾವು ಎಷ್ಟು ದೃಢ, ಶಕ್ತಿಶಾಲಿ ಮತ್ತು ಸಮರ್ಥರು ಎಂಬ ಪರೀಕ್ಷೆ ಬಂದಾಗ ಮಾತ್ರ ನಿಜವಾದ ಶಕ್ತಿಯನ್ನು ಪರೀಕ್ಷಿಸಲಾಗುತ್ತದೆ. 1947ರಲ್ಲಿ ಸ್ವಾತಂತ್ರ್ಯದ ನಂತರ, ದೇಶದ ಸವಾಲುಗಳು ಬದಲಾದವು, ಆದ್ಯತೆಗಳು ಬದಲಾದವು, ಆದರೆ ರಾಷ್ಟ್ರದ ಪಾತ್ರ ಮತ್ತು ಹೊಂದಾಣಿಕೆ ಒಂದೇ ಆಗಿರುತ್ತದೆ, ಅದೇ ಮನೋಭಾವದಿಂದ ಸ್ಫೂರ್ತಿ ಪಡೆಯುತ್ತದೆ. ಭಾರತ ಬಿಕ್ಕಟ್ಟುಗಳನ್ನು ಎದುರಿಸಿದ ಸಂದರ್ಭಗಳಲ್ಲಿ ದೇಶವು ಯಾವಾಗಲೂ ವಂದೇ ಮಾತರಂನ ಮನೋಭಾವದೊಂದಿಗೆ ಮುಂದುವರಿಯಿತು. ಮಧ್ಯದ ವರ್ಷಗಳಲ್ಲಿ ಏನೇ ಸಂಭವಿಸಿದರೂ ಅದು ಇರಲಿ. ಆದರೆ ಇಂದಿಗೂ, ಆಗಸ್ಟ್ 15 ಮತ್ತು ಜನವರಿ 26ರಂದು ಅಥವಾ "ಹರ್ ಘರ್ ತಿರಂಗ"ದ ಸಮಯದಲ್ಲಿ ಅದೇ ಭಾವನೆ ಎಲ್ಲೆಡೆ ಗೋಚರಿಸುತ್ತದೆ. ತ್ರಿವರ್ಣ ಧ್ವಜಗಳು ಹೆಮ್ಮೆಯಿಂದ ಹಾರಾಡುತ್ತವೆ. ದೇಶವು ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಸಮಯವಿತ್ತು. ನಮ್ಮ ರೈತರ ಪ್ರಯತ್ನಗಳ ಮೂಲಕ ನಮ್ಮ ಆಹಾರ ಧಾನ್ಯಗಳನ್ನು ತುಂಬಿದ್ದು ವಂದೇ ಮಾತರಂನ ಚೈತನ್ಯ. ಭಾರತದ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸಿದಾಗ, ಸಂವಿಧಾನದ ಮೇಲೆಯೇ ದಾಳಿಯಾದಾಗ, ತುರ್ತು ಪರಿಸ್ಥಿತಿ ಹೇರಿದಾಗ, ವಂದೇ ಮಾತರಂನ ಬಲವೇ ರಾಷ್ಟ್ರವನ್ನು ಎದ್ದುನಿಂತು ಸೋಲಿಸುವಂತೆ ಮಾಡಿತು. ದೇಶದ ಮೇಲೆ ಯುದ್ಧಗಳನ್ನು ಹೇರಿದಾಗಲೆಲ್ಲಾ, ನಮ್ಮನ್ನು ಸಂಘರ್ಷಕ್ಕೆ ತಳ್ಳಿದಾಗಲೆಲ್ಲಾ, ವಂದೇ ಮಾತರಂನ ಚೈತನ್ಯವೇ ನಮ್ಮ ಸೈನಿಕರು ಗಡಿಗಳಲ್ಲಿ ಸದೃಢವಾಗಿ ನಿಲ್ಲುವಂತೆ ಮಾಡಿತು, ಭಾರತ ಮಾತೆಯ ಧ್ವಜವನ್ನು ವಿಜಯದಲ್ಲಿ ಹಾರಾಡುವಂತೆ ಮಾಡಿತು. ಕೊರೊನಾದಂತಹ ಜಾಗತಿಕ ಬಿಕ್ಕಟ್ಟು ಎದುರಾದಾಗ, ರಾಷ್ಟ್ರವು ಒಟ್ಟಾಗಿ ನಿಂತು, ಅದನ್ನು ನಿವಾರಿಸಿ, ಮುಂದೆ ಸಾಗಿತು.

ಸನ್ಮಾನ್ಯ ಸ್ಪೀಕರ್ ಸರ್,

ಇದು ರಾಷ್ಟ್ರದ ಶಕ್ತಿ, ರಾಷ್ಟ್ರವನ್ನು ಆಳವಾದ ಭಾವನೆಗಳೊಂದಿಗೆ ಸಂಪರ್ಕಿಸುವ ಶಕ್ತಿಶಾಲಿ ಪ್ರವಾಹ. ಇದು ಪ್ರಜ್ಞೆಯ ಪ್ರವಾಹ, ನಮ್ಮ ಮುರಿಯದ ಸಾಂಸ್ಕೃತಿಕ ಹರಿವಿನ ಪ್ರತಿಬಿಂಬ, ಅದರ ಅಭಿವ್ಯಕ್ತಿ. ವಂದೇ ಮಾತರಂ ಕೇವಲ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವಲ್ಲ; ಇದು ಹೊಸ ಶಕ್ತಿ, ಹೊಸ ಸ್ಫೂರ್ತಿ ತುಂಬುವ ಮತ್ತು ಅದಕ್ಕೆ ನಮ್ಮನ್ನು ಅರ್ಪಿಸಿಕೊಳ್ಳುವ ಸಮಯವಾಗಬೇಕು. ನಾನು ಮೊದಲೇ ಹೇಳಿದಂತೆ, ನಾವು ವಂದೇ ಮಾತರಂಗೆ ಚಿರಋಣಿಯಾಗಿದ್ದೇವೆ. ನಾವು ಇಂದು ನಿಂತಿರುವ ಹಂತವನ್ನು ತಲುಪಿರುವ ಮಾರ್ಗವನ್ನು ಸೃಷ್ಟಿಸಿದ್ದು ವಂದೇ ಮಾತರಂ. ಆದ್ದರಿಂದ, ನಾವು ಅದಕ್ಕೆ ಸದಾ ಋಣಿಯಾಗಿದ್ದೇವೆ. ಭಾರತವು ಪ್ರತಿಯೊಂದು ಸವಾಲನ್ನು ಜಯಿಸುವ ಶಕ್ತಿಯನ್ನು ಹೊಂದಿದೆ, ಈ ಶಕ್ತಿ ವಂದೇ ಮಾತರಂ ಮನೋಭಾವದಿಂದ ಬಂದಿದೆ. ವಂದೇ ಮಾತರಂ ಕೇವಲ ಹಾಡು ಅಥವಾ ಸ್ಫೂರ್ತಿದಾಯಕ ಸ್ತೋತ್ರವಲ್ಲ; ಇದು ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯಗಳಿಗೆ ನಮ್ಮನ್ನು ಜಾಗೃತಗೊಳಿಸುವ ರಾಷ್ಟ್ರಗೀತೆಯ ಶಕ್ತಿಯಾಗಿದೆ. ಅದಕ್ಕಾಗಿಯೇ ನಾವು ಅದನ್ನು ಅಳವಡಿಸಿಕೊಳ್ಳುವುದನ್ನು ಮುಂದುವರಿಸಬೇಕು. ನಾವು 'ಆತ್ಮನಿರ್ಭರ ಭಾರತ'(ಸ್ವಾವಲಂಬಿ ಭಾರತ)ದ ಕನಸಿನೊಂದಿಗೆ ಮುಂದುವರಿಯುತ್ತಿದ್ದೇವೆ, ನಾವು ಅದನ್ನು ಪೂರೈಸಬೇಕು. ವಂದೇ ಮಾತರಂ ನಮ್ಮ ನಿಜವಾದ ಸ್ಫೂರ್ತಿಯಾಗಿದೆ. ನಾವು ಸ್ವದೇಶಿ ಚಳುವಳಿಯನ್ನು ಬಲಪಡಿಸಲು ಬಯಸುತ್ತೇವೆ. ಕಾಲ ಬದಲಾಗಿರಬಹುದು, ರೂಪಗಳು ಬದಲಾಗಿರಬಹುದು, ಆದರೆ ಪೂಜ್ಯ ಗಾಂಧಿ ಅವರು ವ್ಯಕ್ತಪಡಿಸಿದ ಮನೋಭಾವ ಇಂದಿಗೂ ಅಸ್ತಿತ್ವದಲ್ಲಿದೆ ಮತ್ತು ವಂದೇ ಮಾತರಂ ನಮ್ಮನ್ನು ಒಗ್ಗೂಡಿಸುತ್ತಲೇ ಇದೆ. ನಮ್ಮ ಮಹಾನ್ ನಾಯಕರ ಕನಸು ಸ್ವತಂತ್ರ ಭಾರತವಾಗಿತ್ತು. ಇಂದಿನ ಪೀಳಿಗೆಯ ಕನಸು ಸಮೃದ್ಧ ಭಾರತವಾಗಿದೆ. ವಂದೇ ಮಾತರಂ ಚೈತನ್ಯವು ಸ್ವತಂತ್ರ ಭಾರತದ ಕನಸನ್ನು ಪೋಷಿಸಿತು, ವಂದೇ ಮಾತರಂನ ಚೈತನ್ಯವು ಸಮೃದ್ಧ ಭಾರತದ ಕನಸನ್ನು ಪೋಷಿಸುತ್ತದೆ. ಈ ಭಾವನೆಗಳೊಂದಿಗೆ ನಾವು ಮುಂದುವರಿಯಬೇಕು. ನಾವು 'ಆತ್ಮನಿರ್ಭರ ಭಾರತ'ವನ್ನು ನಿರ್ಮಿಸಬೇಕು. 2047ರ ಹೊತ್ತಿಗೆ ದೇಶವು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ) ಆಗಬೇಕು. ಸ್ವಾತಂತ್ರ್ಯಕ್ಕೆ 50 ವರ್ಷಗಳ ಮೊದಲು ಯಾರಾದರೂ ಮುಕ್ತ ಭಾರತದ ಕನಸು ಕಂಡಿದ್ದರೆ, 2047ಕ್ಕೆ 25 ವರ್ಷಗಳ ಮೊದಲು, ನಾವು ಕೂಡ ಸಮೃದ್ಧ, 'ವಿಕಸಿತ ಭಾರತ'ದ ಕನಸು ಕಾಣಬಹುದು, ಈ ಕನಸನ್ನು ನನಸಾಗಿಸಲು ನಾವು ನಮ್ಮನ್ನು ಅರ್ಪಿಸಿಕೊಳ್ಳಬಹುದು. ಈ ಮಂತ್ರ ಮತ್ತು ಸಂಕಲ್ಪದೊಂದಿಗೆ, ವಂದೇ ಮಾತರಂ ನಮಗೆ ಸ್ಫೂರ್ತಿ ನೀಡುತ್ತಲೇ ಇರಲಿ. ವಂದೇ ಮಾತರಂಗೆ ನಮ್ಮ ಋಣವನ್ನು ಒಪ್ಪಿಕೊಳ್ಳೋಣ. ಅದರ ಚೈತನ್ಯವನ್ನು ಮುಂದಕ್ಕೆ ಸಾಗಿಸೋಣ, ರಾಷ್ಟ್ರದ ಜನರನ್ನು ನಮ್ಮೊಂದಿಗೆ ಕರೆದೊಯ್ಯೋಣ, ಒಟ್ಟಾಗಿ ನಡೆಯೋಣ ಮತ್ತು ಈ ಕನಸನ್ನು ನನಸಾಗಿಸೋಣ. ಈ ಚಿಂತನೆಯೊಂದಿಗೆ, ಈ ಚರ್ಚೆ ಇಂದು ಪ್ರಾರಂಭವಾಗಿದೆ. ಇದು ದೇಶದೊಳಗೆ ಆ ಚೈತನ್ಯವನ್ನು ಬೆಳಗಿಸಲು, ರಾಷ್ಟ್ರವನ್ನು ಪ್ರೇರೇಪಿಸಲು, ಸಂಸತ್ತಿನ ಉಭಯ ಸದನಗಳಲ್ಲಿ ನಮ್ಮ ಹೊಸ ಪೀಳಿಗೆಯನ್ನು ಚೈತನ್ಯಗೊಳಿಸಲು ಒಂದು ಕಾರಣವಾಗಲಿದೆ ಎಂಬ ವಿಶ್ವಾಸ ನನಗಿದೆ. ಈ ಮಾತುಗಳೊಂದಿಗೆ, ನನಗೆ ಈ ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ನನ್ನ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ತುಂಬು ಧನ್ಯವಾದಗಳು!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Our democracy, for the people

Media Coverage

Our democracy, for the people
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of Republic Day
January 26, 2026

The Prime Minister, Shri Narendra Modi said that Republic Day is a powerful symbol of India’s freedom, Constitution and democratic values. He noted that the occasion inspires the nation with renewed energy and motivation to move forward together with a firm resolve towards nation-building.

The Prime Minister shared a Sanskrit Subhashitam on the occasion-
“पारतन्त्र्याभिभूतस्य देशस्याभ्युदयः कुतः। अतः स्वातन्त्र्यमाप्तव्यमैक्यं स्वातन्त्र्यसाधनम्॥”

The Subhashitam conveys that a nation that is dependent or under subjugation cannot progress. Therefore, only by adopting freedom and unity as our guiding principles can the progress of the nation be ensured.

The Prime Minister wrote on X;

“गणतंत्र दिवस हमारी स्वतंत्रता, संविधान और लोकतांत्रिक मूल्यों का सशक्त प्रतीक है। यह पर्व हमें एकजुट होकर राष्ट्र निर्माण के संकल्प के साथ आगे बढ़ने की नई ऊर्जा और प्रेरणा देता है।

पारतन्त्र्याभिभूतस्य देशस्याभ्युदयः कुतः।

अतः स्वातन्त्र्यमाप्तव्यमैक्यं स्वातन्त्र्यसाधनम्॥”