"ಇಂದಿನ ಕಾರ್ಯಕ್ರಮವು ಕಾರ್ಮಿಕರ (ಮಜ್ದೂರ್ ಏಕ್ತಾ) ಏಕತೆಯನ್ನು ಹೇಳುತ್ತದೆ ಮತ್ತು ನೀವು ಹಾಗು ನಾನು ಇಬ್ಬರೂ ಮಜ್ದೂರ್"
"ಕ್ಷೇತ್ರದಲ್ಲಿ ಸಾಮೂಹಿಕವಾಗಿ ಕೆಲಸ ಮಾಡುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಅದು ತಂಡವನ್ನು ನಿರ್ಮಾಣ ಮಾಡುತ್ತದೆ"
"ಸಾಮೂಹಿಕ ಮನೋಭಾವದಲ್ಲಿ ಶಕ್ತಿ ಅಡಗಿದೆ"
"ಉತ್ತಮವಾಗಿ ಆಯೋಜಿಸಲಾದ ಕಾರ್ಯಕ್ರಮವು ದೂರಗಾಮಿ ಪ್ರಯೋಜನಗಳನ್ನು ಹೊಂದಿರುತ್ತದೆ. ಸಿಡಬ್ಲ್ಯೂಜಿಯು ವ್ಯವಸ್ಥೆಯಲ್ಲಿ ಹತಾಶೆಯ ಭಾವನೆಯನ್ನು ಮೂಡಿಸಿದರೆ, ಜಿ 20 ದೇಶಕ್ಕೆ ದೊಡ್ಡ ವಿಷಯಗಳ ಬಗ್ಗೆ ವಿಶ್ವಾಸ ಮೂಡಿಸಿತು"
"ಮಾನವತೆಯ ಕಲ್ಯಾಣಕ್ಕಾಗಿ, ಭಾರತವು ದೃಢವಾಗಿ ನಿಂತಿದೆ ಮತ್ತು ಅಗತ್ಯವಿರುವ ಸಮಯದಲ್ಲಿ ಎಲ್ಲೆಡೆ ತಲುಪುತ್ತದೆ"

ನಿಮಗೆಲ್ಲಾ ತುಂಬಾ ಆಯಾಸವಾಗಿದೆ, ಆದರೂ ಅದನ್ನು ಒಪ್ಪಿಕೊಳ್ಳಲು ನಿಮ್ಮಲ್ಲಿ ಕೆಲವರು ಸಿದ್ಧರಿಲ್ಲದಿರಬಹುದು. ಆದರೂ ಸರಿ, ನಿಮ್ಮ ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಉದ್ದೇಶ ನನಗಿಲ್ಲ. ಆದರೆ ಒಂದು ವಿಷಯವಂತೂ ನಿಜ, ನಾವು ಸಾಧಿಸಿದ ಅದ್ಭುತ ಯಶಸ್ಸು ಹೇಗಿದೆಯೆಂದರೆ ದೇಶದ ಹೆಸರು ಪ್ರಕಾಶಮಾನವಾಗಿದೆ, ಎಲ್ಲಾ ಕಡೆಯಿಂದ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ನೀವೆಲ್ಲರೂ ಇದರ ಹಿಂದೆ ಇದ್ದವರು, ಹಗಲು ರಾತ್ರಿ ಶ್ರಮಿಸಿದವರು ಮತ್ತು ಇದರ ಪರಿಣಾಮವಾಗಿಯೇ, ಈ ಯಶಸ್ಸನ್ನು ಸಾಧಿಸಲು ಸಾಧ್ಯವಾಗಿದೆ. ಒಬ್ಬ ಆಟಗಾರನು ಒಲಿಂಪಿಕ್ ವೇದಿಕೆಗೆ ಹೋಗಿ ಪದಕ ಗೆದ್ದಾಗ, ಮತ್ತು ದೇಶದ ಹೆಸರನ್ನು ಹಾಗೂ ಕೀರ್ತಿಯನ್ನು ಬೆಳಗಿಸಿದಾಗ, ಅದಕ್ಕೆ ಸಲ್ಲುವ ಚಪ್ಪಾಳೆಯ ಸದ್ದು  ದೀರ್ಘಕಾಲದವರೆಗೆ ಮಾರ್ದನಿಸುತ್ತದೆ. ಅಂತೆಯೇ, ನೀವೆಲ್ಲರೂ ಒಟ್ಟಾಗಿ ದೇಶದ ಹೆಸರು ಮತ್ತು ಕೀರ್ತಿಯನ್ನು ಬೆಳಗಿಸಿದ್ದೀರಿ.

ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಎಷ್ಟು ಜನರು ಭಾಗಿಯಾಗಿದ್ದಾರೆ ಮತ್ತು ಯಾವ ಸಂದರ್ಭಗಳಲ್ಲಿ, ಎಷ್ಟು ಕೆಲಸ ಆಗಿದೆ ಎಂದು ಬಹುಶಃ ಜನರಿಗೆ ತಿಳಿದಿಲ್ಲದಿರಬಹುದು. ಜೊತೆಗೆ, ನಿಮ್ಮಲ್ಲಿ ಹೆಚ್ಚಿನವರು ಈ ಹಿಂದೆ ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದಿರಲಿಲ್ಲ. ಒಂದು ರೀತಿಯಲ್ಲಿ, ಇದು ಹೇಗಿತ್ತೆಂದರೆ, ನೀವು ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳಬೇಕಾಗಿತ್ತು, ಸಂಭವನೀಯ ಸಮಸ್ಯೆಗಳ ಬಗ್ಗೆ ಯೋಚಿಸಿ, ಅವುಗಳನ್ನು ಪರಿಹರಿಸಲು ಏನು ಮಾಡಬಹುದು ಎಂಬುದನ್ನು ಆಲೋಚಿಸಬೇಕಾಗಿತ್ತು. ವಿಭಿನ್ನ ಸಂದರ್ಭಗಳಲ್ಲಿ ಪ್ರತಿಕ್ರಿಯೆ ಹೇಗಿರಬೇಕೆಂದು ಯೋಚಿಸಬೇಕಾಗಿತ್ತು, ನೀವು ನಿಮ್ಮದೇ ಆದ ರೀತಿಯಲ್ಲಿ ಅನೇಕ ವಿಷಯಗಳನ್ನು ಪರಿಗಣಿಸಬೇಕಾಗಿತ್ತು. ಹಾಗಾಗಿ, ನಿಮ್ಮೆಲ್ಲರಿಗೂ ನನ್ನದೊಂದು ವಿಶೇಷ ಮನವಿ ಇದೆ: ಅದೇನೆಂದರೆ, ನೀವು ಇಷ್ಟೆಲ್ಲಾ ಸಾಧಿಸಿದ್ದನ್ನು ಅಲ್ಲಿಗೇ ಬಿಡುತ್ತೀರಾ?

ನಿಮ್ಮಲ್ಲಿ ಕೆಲವರು ಈ ಯೋಜನೆಯಲ್ಲಿ ಮೂರರಿಂದ ನಾಲ್ಕು ವರ್ಷಗಳವರೆಗೆ ತೊಡಗಿಸಿಕೊಂಡಿರಬಹುದು ಅಥವಾ ಅಥವಾ ಕೆಲವರು ನಾಲ್ಕು ತಿಂಗಳು ಮಾತ್ರ ತೊಡಗಿಸಿಕೊಂಡಿರಬಹುದು. ನಿಮಗೆ ವಿವರಿಸಿದ ದಿನದಿಂದ ಮತ್ತು ಈ ಯೋಜನೆಯನ್ನು ಕೈಗೊಳ್ಳಲು ನೀವು ತೆಗೆದುಕೊಂಡ ಸಮಯದಿಂದ ನೀವು ಎಲ್ಲವನ್ನೂ ದಾಖಲಿಸಬೇಕು. ನೀವು ಎಲ್ಲವನ್ನೂ ಬರೆಯಬೇಕು. ವೆಬ್‌ಸೈಟ್ ರಚಿಸಬೇಕು. ಪ್ರತಿಯೊಬ್ಬರೂ ತಮ್ಮದೇ ಆದ, ತಮಗೆ ಸುಲಭವಾಗಿ ಬರುವಂತಹ ಭಾಷೆಯಲ್ಲಿ ಬರೆಯಬೇಕು, ಈ ಕೆಲಸವನ್ನು ಹೇಗೆ ಮಾಡಲಾಯಿತು? ಆ ಅನುಭವ ಮತ್ತು ಗ್ರಹಿಕೆ ಹೇಗಿತ್ತು? ಯಾವ ನ್ಯೂನತೆಗಳನ್ನು ಗಮನಿಸಲಾಯಿತು? ಮತ್ತು ಯಾವುದಾದರೂ ಸಮಸ್ಯೆಗಳು ಎದುರಾದರೆ, ಅದಕ್ಕೆ ಹೇಗೆ ಪರಿಹಾರಗಳನ್ನು ಕಂಡುಕೊಳ್ಳಲಾಯಿತು ಎಂಬುದನ್ನು ವಿವರಿಸಬೇಕು. ನಿಮ್ಮ ಅನುಭವಗಳನ್ನು ದಾಖಲಿಸಿದರೆ, ಅದು ಭವಿಷ್ಯದ ಯೋಜನೆಗಳು ಮತ್ತು ಸಂಸ್ಥೆಗಳಿಗೆ ಮೌಲ್ಯಯುತ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ. ಭವಿಷ್ಯದಲ್ಲಿ, ಈ ಪ್ರಮಾಣದಲ್ಲಿ ಯಾವುದೇ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಇದೆಲ್ಲವನ್ನೂ ಒಂದು ಪ್ರಮುಖ ಮಾಹತಿ ಸಂಪನ್ಮೂಲವಾಗಿ ಬಳಸಬಹುದು.

ಆದ್ದರಿಂದ, 100 ಪುಟಗಳನ್ನು ತೆಗೆದುಕೊಂಡರೂ ಪರವಾಗಿಲ್ಲ, ಎಲ್ಲವನ್ನೂ ವಿವರವಾಗಿ ಮತ್ತು ನಿಖರವಾಗಿ ಬರೆಯಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನೀವು ಅದನ್ನು ʻಕ್ಲೌಡ್‌ʼನಲ್ಲಿ ಸಂಗ್ರಹಿಸಬಹುದು, ಅಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ನಿಮ್ಮ ಅನುಭವಗಳು ಬಹಳ ಉಪಯುಕ್ತವೆಂದು ಸಾಬೀತಾಗಲಿದೆ. ಅಂತಹ ವ್ಯವಸ್ಥೆಯನ್ನು ರಚಿಸಲಾಗುವುದು ಮತ್ತು ಪ್ರತಿಯೊಬ್ಬರೂ ಅದರಿಂದ ಪ್ರಯೋಜನ ಪಡೆಯಬೇಕು ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ, ನಾನು ನಿಮ್ಮಿಂದ ಕೇಳಲು ಬಯಸುವುದೇನೆಂದರೆ, ನಿಮ್ಮಲ್ಲಿ ಯಾರಾದರೂ ಮಾತನಾಡಲು ಬಯಸಿದರೆ ನಿಮ್ಮ ಅನುಭವಗಳನ್ನು ತಿಳಿಯಲು ನಾನು ಉತ್ಸುಕನಾಗಿದ್ದೇನೆ.

ಉದಾಹರಣೆಗೆ, ಹೂಕುಂಡಗಳನ್ನು ನೋಡಿಕೊಳ್ಳಲು ನಿಮ್ಮನ್ನು ನಿಯೋಜಿಸಲಾಗಿದೆ ಎಂದಿಟ್ಟುಕೊಳ್ಳಿ. ಈ ಭಾವನೆ ನಿಮ್ಮಲ್ಲಿ ಹೊರಹೊಮ್ಮಿದರೆ ಮತ್ತು ಈ ಸ್ಫೂರ್ತಿಭಾವ ಹುಟ್ಟಿದರೆ, ಹೂವಿನ ಕುಂಡಗಳ ಸಮರ್ಥ ನಿರ್ವಹಣೆಯು ಜಿ-20 ಶೃಂಗಸಭೆಯ ಯಶಸ್ಸನ್ನು ಖಚಿತಪಡಿಸುತ್ತದೆ. ಹೂಕುಂಡಗಳ ವ್ಯವಸ್ಥೆಯಲ್ಲಿನ ಯಾವುದೇ ಗೊಂದಲವು ಜಿ-20 ಮೇಲೆ ಕರಿಛಾಯೆ ಬೀರಬಹುದು. ಆದ್ದರಿಂದ, ಇದೊಂದು ನಿರ್ಣಾಯಕ ಜವಾಬ್ದಾರಿ. ಯಾವುದೇ ಕೆಲಸವನ್ನು ಸಣ್ಣದಲ್ಲ ಎಂದು ನೀವು ಪರಿಗಣಿಸಿದರೆ, ಯಶಸ್ಸು ನಿಮ್ಮ ಪಾದಗಳನ್ನು ಚುಂಬಿಸಲು ಪ್ರಾರಂಭಿಸುತ್ತದೆ.

ಸ್ನೇಹಿತರೇ,

ಅಂತೆಯೇ, ನೀವು ಪ್ರತಿ ವಿಭಾಗದ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಮತ್ತು ಚರ್ಚಿಸಬೇಕು. ಜೊತೆಗೆ ಇತರರ ಅನುಭವಗಳನ್ನು ಸಹ ಆಲಿಸಬೇಕು. ಇದು ತುಂಬಾ ಪ್ರಯೋಜನಕಾರಿ. ಕೆಲವೊಮ್ಮೆ ನೀವು ಒಬ್ಬಂಟಿಯಾಗಿರುವಾಗ, "ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ಇಲ್ಲದಿದ್ದರೆ, ಜಿ-20ಗೆ ಏನಾಗುತ್ತಿತ್ತು? ಎಂದು ಎನಿಸಬಹುದು. ಆದರೆ ಪ್ರತಿಯೊಬ್ಬರೂ ಪರಸ್ಪರರ ಕಥೆಗಳನ್ನು ಕೇಳಿದಾಗ, ನೀವು ಮಾಡಿದ್ದಕ್ಕಿಂತ ಹೆಚ್ಚಿನದನ್ನು ಇತರರು ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಕಠಿಣ ಸಮಯದಲ್ಲಿ ಅವರು ನಿಮಗಿಂತಲೂ ಹೆಚ್ಚು ಶ್ರಮಿಸಿರುವುದನ್ನು ನೀವು ಕಾಣಬಹುದು. ನೀವು ಮಾಡಿದ್ದು ಒಳ್ಳೆಯದು, ಆದರೆ ಇತರರು ಸಹ ಅದ್ಭುತ ಕೆಲಸ ಮಾಡಿದ್ದಾರೆ ಎಂದು ನೀವು ತಿಳಿದಿಕೊಳ್ಳುತ್ತೀರಿ. ಈ ಯಶಸ್ಸನ್ನು ಸಾಧಿಸಲು ಹೇಗೆ ಸಾಧ್ಯವಾಯಿತು ಎಂದು ನೀವು ಅರಿತುಕೊಳ್ಳುತ್ತೀರಿ.

ನಾವು ಇನ್ನೊಬ್ಬರ ಸಾಮರ್ಥ್ಯಗಳನ್ನು ಗುರುತಿಸಿದ ಕ್ಷಣ, ಅವರ ಪ್ರಯತ್ನಗಳನ್ನು ಅರ್ಥಮಾಡಿಕೊಂಡ ಕ್ಷಣ, ಅಸೂಯೆ ಮಾಯವಾಗುತ್ತದೆ. ನಾವು ನಮ್ಮೊಳಗೆ ನೋಡಿಕೊಳ್ಳುವ ಅವಕಾಶವನ್ನು ಪಡೆಯುತ್ತೇವೆ. "ನಿನ್ನೆಯವರೆಗೆ, ನಾನು ಎಲ್ಲವನ್ನೂ ನಾನೇ ಮಾಡಿದ್ದೇನೆ ಎಂದು ಭಾವಿಸುತ್ತಿದ್ದೆ, ಆದರೆ ಇಂದು ಇತರ ಅನೇಕ ಜನರು ಸಹ ಇದಕ್ಕೆ ಕೊಡುಗೆ ನೀಡಿದ್ದಾರೆ ಎಂದು ನಾನು ಕಂಡುಕೊಂಡೆ," ಎಂಬ ಗ್ರಹಿಕೆ ಮೂಡುತ್ತದೆ. ನೀವು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ, ನಿಮ್ಮ ಫೋಟೋಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿರಲಿಲ್ಲ ಮತ್ತು ನಿಮ್ಮ ಸಾಧನೆಗಳನ್ನು ಚರ್ಚಿಸುತ್ತಿರಲಿಲ್ಲ ಎಂಬುದು ನಿಜ. ಒಂದು ಹನಿ ಬೆವರನ್ನೂ ಹರಿಸದ ಜನರು ಮತ್ತು ಅದರಲ್ಲಿ ಪರಿಣತಿ ಪಡೆದವರು ಮಾತ್ರ ಮಿಂಚಿದ್ದಾರೆ. ಆದರೆ ಎಲ್ಲಾ ಕೆಲಸಗಳನ್ನು ನಾವು ಕಾರ್ಮಿಕರು ಮಾಡಿದ್ದೇವೆ ಎಂದು ನಿಮಗೆ ಅನಿಸಬಹುದು. ಇಂದಿನ ಕಾರ್ಯಕ್ರಮವು "ಮಜ್ದೂರ್ ಏಕ್ತಾ" (ಕಾರ್ಮಿಕರ ಏಕತೆ) ಆಚರಣೆಯಾಗಿದೆ. ನಾನು ಸ್ವಲ್ಪ ದೊಡ್ಡ ಕಾರ್ಮಿಕನಾಗಿರಬಹುದು, ಮತ್ತು ನೀವು ಸಣ್ಣ ಕಾರ್ಮಿಕರಾಗಿರಬಹುದು, ಆದರೆ ಅಂತಿಮವಾಗಿ, ನಾವೆಲ್ಲರೂ ಕಾರ್ಮಿಕರೇ.

ಈ ಕಠಿಣ ಪರಿಶ್ರಮದ ಸಂತೋಷವನ್ನು ನೀವು ಸಹ ಅನುಭವಿಸಿರಬೇಕು. ಅಂದರೆ, 10 ಅಥವಾ 11ನೇ ತಾರೀಖಿನ ರಾತ್ರಿಯೂ ಯಾರಾದರೂ ನಿಮಗೆ ಕರೆ ಮಾಡಿ, ಏನಾದರೂ ಹೇಳಿದ್ದರೆ, "ಅವರು ನನ್ನನ್ನು ಏಕೆ ತೊಂದರೆ ಕೊಡುತ್ತಿದ್ದಾರೆ? ಈಗಾಗಲೇ ಕೆಲಸ ಮುಗಿದಿದೆ,ʼʼ ಎಂದು ನೀವು ಯೋಚಿಸುತ್ತಿರಲಿಲ್ಲ. ಬದಲಾಗಿ, "ಇಲ್ಲ, ಇಲ್ಲ, ಏನೋ ಬಾಕಿ ಇರಬೇಕು, ನಾನು ಅದನ್ನು ಮಾಡುವೆ" ಎಂದು ನೀವು ಯೋಚಿಸುತ್ತಿದ್ದಿರಿ. ಈ ಮನೋಭಾವವೇ ನಮ್ಮ ದೊಡ್ಡ ಶಕ್ತಿ.

ಸ್ನೇಹಿತರೇ,

ನಿಮ್ಮಲ್ಲಿ ಅನೇಕರು ಈ ಹಿಂದೆಯೂ ಕೆಲಸ ಮಾಡಿದ್ದೀರಿ. ನಿಮ್ಮಲ್ಲಿ ಅನೇಕರು 15-20-25 ವರ್ಷಗಳಿಂದ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದೀರಿ. ನಿಮ್ಮಲ್ಲಿ ಹೆಚ್ಚಿನವರು ನಿಮ್ಮ ಮೇಜಿಗೆ ನಿಮ್ಮನ್ನು ಕಟ್ಟಿಹಾಕಿಕೊಂಡು, ಕಡತಗಳ ವಿಲೇವಾರಿಯಲ್ಲಿ ಮುಳುಗಿರಬಹುದು. ಕಡತಗಳನ್ನು ಹಸ್ತಾಂತರಿಸುವಾಗ ಹತ್ತಿರದ ನಿಮ್ಮ ಸಹೋದ್ಯೋಗಿಗಳೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಬಹುಶಃ ನೀವು ಊಟದ ಸಮಯದಲ್ಲಿ ಅಥವಾ ಚಹಾ ವಿರಾಮದ ಸಮಯದಲ್ಲಿ ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಚರ್ಚಿಸಿರಬಹುದು. ಆದರೆ, ನಾವು ದೈನಂದಿನ ಕಚೇರಿ ಕೆಲಸದಲ್ಲಿ ತೊಡಗಿದಾಗ ನಮ್ಮ ಸಹೋದ್ಯೋಗಿಗಳ ಸಾಮರ್ಥ್ಯಗಳನ್ನು ಪತ್ತೆ ಮಾಡಲು ನಮಗೆ ಸಾಧ್ಯವಾಗುವುದಿಲ್ಲ. 20 ವರ್ಷಗಳನ್ನು ಒಟ್ಟಿಗೆ ಕಳೆದರೂ, ನಾವು ಮೂಲಮಾದರಿ ಕೆಲಸಕ್ಕೆ ಸೀಮಿತವಾಗಿರುವುದರಿಂದ ಇತರರಲ್ಲಿ ಅಡಗಿರುವ ಹೆಚ್ಚುವರಿ ಕೌಶಲ್ಯಗಳು ಮತ್ತು ಸಾಮರ್ಥ್ಯಗಳ ಬಗ್ಗೆ ನಮಗೆ ತಿಳಿಯದೆ ಇರಬಹುದು.

ನಮಗೆ ಇಂತಹ ಕೆಲಸ ಮಾಡುವ ಅವಕಾಶ ದೊರೆತಾಗ, ನಾವು ಪ್ರತಿ ಕ್ಷಣವೂ ಹೊಸದಾಗಿ ಆಲೋಚಿಸಬೇಕು. ಹೊಸ ಜವಾಬ್ದಾರಿಗಳು ಹೊರಹೊಮ್ಮುತ್ತವೆ, ಹೊಸ ಸವಾಲುಗಳು ಉದ್ಭವಿಸುತ್ತವೆ ಮತ್ತು ಅವುಗಳನ್ನು ಪರಿಹರಿಸುವುದು ದಿನಚರಿಯ ಒಂದು ಭಾಗವಾಗುತ್ತದೆ. ನಾವು ಒಬ್ಬ ಸಹೋದ್ಯೋಗಿ ಕೆಲಸ ಮಾಡುವುದನ್ನು ನೋಡಿದಾಗ, ಅವರಲ್ಲಿ ಅತ್ಯುತ್ತಮ ಗುಣಮಟ್ಟವಿದೆ ಎಂದು ಅನಿಸುತ್ತದೆ. ಯಾವುದೇ ಕ್ಷೇತ್ರದಲ್ಲಿ ಈ ರೀತಿಯ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದಾಗ, ಅದು ಆಡಳಿತದ ಯಶಸ್ಸಿಗೆ ದಾರಿ ಮಾಡುತ್ತದೆ. ಇದು ಎಲ್ಲಾ ಬಗೆಯ ಅಡೆತಡೆಗಳನ್ನು ತೊಡೆದುಹಾಕುತ್ತದೆ ಮತ್ತು ಸ್ವಾಭಾವಿಕವಾಗಿ ಒಂದು ತಂಡವನ್ನು ಕಟ್ಟಲು ಸಾಧ್ಯವಾಗುತ್ತದೆ.

ನೀವು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರಬಹುದು, ಆದರೆ ಈ ಬಾರಿ ನೀವು ತಡರಾತ್ರಿಯವರೆಗೂ ಎದ್ದಿರಬಹುದು, ಅಲ್ಲೇ ಕುಳಿತಿರಬಹುದು ಮತ್ತು ಜಿ-20 ಯೋಜನೆಯ ಸಮಯದಲ್ಲಿ ಪಾದಾಚಾರಿ ಮಾರ್ಗದ ಬಳಿ ಒಂದು ಗುಟುಕು ಚಹಾಕ್ಕಾಗಿ ಹುಡುಕಾಡಿರಬಹುದು. ನೀವು ಭೇಟಿಯಾದ ಹೊಸ ಸಹೋದ್ಯೋಗಿಗಳನ್ನು, ನಿಮ್ಮ 15 ಅಥವಾ 20 ವರ್ಷಗಳ ಕೆಲಸದ ಅನುಭವದಲ್ಲಿ ನೀವು ನೋಡಿರಲಿಕ್ಕಿಲ್ಲ. ಈ ಯೋಜನೆಯಲ್ಲಿ ಹೊಸ ಸಾಮರ್ಥ್ಯಗಳನ್ನು ಹೊಂದಿರುವ ಅನೇಕ ಸಹೋದ್ಯೋಗಿಗಳನ್ನು ನೀವು ಭೇಟಿಯಾಗಿರಬಹುದು. ಆದ್ದರಿಂದ, ನಾವು ಯಾವಾಗಲೂ ಒಟ್ಟಿಗೆ ಕೆಲಸ ಮಾಡುವಂತಹ ಅವಕಾಶಗಳಿಗಾಗಿ ಹುಡುಕಬೇಕು.

ಉದಾಹರಣೆಗೆ, ನಾವು ಗಮನಿಸಿದಂತೆ, ಎಲ್ಲಾ ಇಲಾಖೆಗಳಲ್ಲಿ ಸ್ವಚ್ಚತಾ ಅಭಿಯಾನ ನಡೆಯುತ್ತಿದೆ. ಕಾರ್ಯದರ್ಶಿ ಸೇರಿದಂತೆ ಇಲಾಖೆಯ ಪ್ರತಿಯೊಬ್ಬರೂ ತಮ್ಮ ಕೊಠಡಿಗಳಿಂದ ಹೊರಬಂದು ಈ ಅಭಿಯಾನದಲ್ಲಿ ಭಾಗವಹಿಸಿದರೆ, ವಾತಾವರಣವು ಸಂಪೂರ್ಣವಾಗಿ ಬದಲಾಗುತ್ತದೆ ಎಂಬುದನ್ನು ನೀವು ನೋಡಿರಬಹುದು. ನಿಮಗೆ ಇದು ಕೆಲಸ ಅನಿಸುವುದಿಲ್ಲ; ಇದು ಹಬ್ಬದಂತೆ ಭಾಸವಾಗುತ್ತದೆ. ನಮ್ಮ ಮನೆಗಳನ್ನು ಸ್ವಚ್ಛಗೊಳಿಸೋಣ, ನಮ್ಮ ಕಚೇರಿಗಳನ್ನು ಅಚ್ಚುಕಟ್ಟಾಗಿಡೋಣ, ನಮ್ಮ ಮೇಜುಗಳಿಂದ  ಕಡತಗಳನ್ನು ಹೊರತೆಗೆಯೋಣ - ಇದು ಸಂತೋಷದ ಕೆಲಸ. ಮತ್ತು ನಾನು ಆಗಾಗ್ಗೆ ಎಲ್ಲರಿಗೂ ಹೇಳುವುದೇನೆಂದರೆ, ವರ್ಷಕ್ಕೊಮ್ಮೆ ಇಲಾಖೆಯ ಪಿಕ್‌ನಿಕ್ ಮಾಡೋಣ. ಹತ್ತಿರದ ಸ್ಥಳಕ್ಕೆ ಒಂದು ದಿನದ ಪ್ರವಾಸವನ್ನು ಕೈಗೊಳ್ಳಿ, 24 ಗಂಟೆಗಳ ಕಾಲ ಎಲ್ಲರೂ ಒಟ್ಟಿಗೆ ಕಳೆಯಿರಿ.

ಏಕತೆಯಲ್ಲಿ ಅದ್ಭುತ ಶಕ್ತಿ ಇದೆ. ನೀವು ಒಬ್ಬಂಟಿಯಾಗಿರುವಾಗ, ಕೆಲವೊಮ್ಮೆ ನೀವು ಎಷ್ಟೇ ತಡೆಯಲು ಪ್ರಯತ್ನಿಸಿದರೂ, "ನಾನು ಇದೆಲ್ಲವನ್ನೂ ಏಕಾಂಗಿಯಾಗಿ ಮಾಡಬೇಕೇ? ಎಲ್ಲದಕ್ಕೂ ನಾನೇ ಜವಾಬ್ದಾರನೇ? ಉಳಿದವರು ಕೂಡಾ ಸಂಬಳವನ್ನು ಪಡೆಯುತ್ತಾರೆ ತಾನೆ, ಮತ್ತು ನಾನು ಮಾತ್ರ ಎಲ್ಲಾ ಕೆಲಸಗಳನ್ನು ಏಕೆ ಮಾಡಬೇಕೇ?" ಎಂಬ ಯೋಚನೆ ಬರಬಹುದು. ನೀವು ಒಬ್ಬಂಟಿಯಾಗಿರುವಾಗ ಇಂತಹ ಆಲೋಚನೆಗಳು ಮನಸ್ಸಿಗೆ ಬರುತ್ತವೆ. ಆದರೆ ನೀವು ಎಲ್ಲರೊಂದಿಗೂ ಇದ್ದಾಗ, ಯಶಸ್ಸಿಗೆ ಕೊಡುಗೆ ನೀಡುವ ನಿಮ್ಮಂತಹ ಅನೇಕ ಜನರಿದ್ದಾರೆ, ಅವರ ಪ್ರಯತ್ನಗಳು ಸಹ ಸಂಸ್ಥೆಗಳನ್ನು ಸುಗಮವಾಗಿ ನಡೆಸಲು ಕಾರಣವಾಗಿವೆ ಎಂದು ನೀವು ಅರಿತುಕೊಳ್ಳುತ್ತೀರಿ.

ಸ್ನೇಹಿತರೇ,

ಮತ್ತೊಂದು ಪ್ರಮುಖ ವಿಷಯವೆಂದರೆ ಹಿರಿಯರಾದ ನಾವು ಹಾಲಿ ಶ್ರೇಣಿ ಮತ್ತು ಶಿಷ್ಟಾಚಾರಗಳ ಪ್ರಪಂಚದಿಂದ ಹೊರಬರಬೇಕು, ನಾವು ನಮ್ಮ ಜೊತೆಯಲ್ಲಿ ಕೆಲಸ ಮಾಡುವ ಜನರ ಬಗ್ಗೆ ಯೋಚಿಸಬೇಕು. ಆ ಜನರು ಯಾವ ಸಾಮರ್ಥ್ಯಗಳನ್ನು ಹೊಂದಿದ್ದಾರೆಂದು ನಾವು ಸಾಮಾನ್ಯವಾಗಿ ಊಹಿಸಲು ಸಾಧ್ಯವಿಲ್ಲ. ನಿಮ್ಮ ಸಹೋದ್ಯೋಗಿಗಳ ಶಕ್ತಿಯನ್ನು ನೀವು ಗುರುತಿಸಿದಾಗ, ನೀವು ಗಮನಾರ್ಹ ಫಲಿತಾಂಶಗಳನ್ನು ಸಾಧಿಸುತ್ತೀರಿ. ನಿಮ್ಮ ಕಚೇರಿಯಲ್ಲಿ ಈ ಅಭ್ಯಾಸವನ್ನು ಪ್ರಯತ್ನಿಸಿ. ನಾನು ನಿಮಗೆ ಆಟವೊಂದನ್ನು ಹೇಳುತ್ತೇನೆ, ನೀವು ಅದನ್ನು ಆಡಿ. ಉದಾಹರಣೆಗೆ, ನಿಮ್ಮ ಇಲಾಖೆಯಲ್ಲಿ ನೀವು 20 ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಒಂದು ದಿನ ಡೈರಿಯನ್ನು ನಿರ್ವಹಿಸುತ್ತೀರಿ. ನಂತರ, ಒಬ್ಬೊಬ್ಬರಾಗಿ, 20 ಸಹೋದ್ಯೋಗಿಗಳಲ್ಲಿ ಪ್ರತಿಯೊಬ್ಬರಿಗೂ ಅವರ ಪೂರ್ಣ ಹೆಸರುಗಳು, ಅವರು ಮೂಲತಃ ಎಲ್ಲಿಂದ ಬಂದವರು, ಅವರು ಇಲ್ಲಿ ಯಾವ ಕೆಲಸವನ್ನು ನಿರ್ವಹಿಸುತ್ತಾರೆ ಮತ್ತು ಅವರು ಯಾವ ಅಸಾಧಾರಣ ಗುಣಗಳು ಅಥವಾ ಕೌಶಲ್ಯಗಳನ್ನು ಹೊಂದಿದ್ದಾರೆ ಎಂಬುದನ್ನು ಡೈರಿಯಲ್ಲಿ ಬರೆಯಲು ಹೇಳಿ. ಅವರನ್ನು ನೇರವಾಗಿ ಕೇಳಬೇಡಿ; ಬದಲಾಗಿ, ಅವರ ಬಗ್ಗೆ ನಿಮಗೆ ತಿಳಿದಿರುವುದನ್ನು ಗಮನಿಸಿ ಮತ್ತು ಅದನ್ನು ಡೈರಿಯಲ್ಲಿ ಉಲ್ಲೇಖಿಸಿ. ನಂತರ, ಆ 20 ಸಹೋದ್ಯೋಗಿಗಳು ತಮ್ಮ ಬಗ್ಗೆ ಏನು ಬರೆದಿದ್ದಾರೆಂದು ಓದಿ. ಅವರ ಕೆಲವೊಂದು ಗುಣಗಳ ಬಗ್ಗೆ ನಿಮಗೆ ತಿಳಿದಿರಲಿಲ್ಲ ಎಂದು ಗೊತ್ತಾದಾಗ ನೀವು ಆಶ್ಚರ್ಯಚಕಿತರಾಗುವಿರಿ. ಅವರ ಕೈಬರಹ ಚೆನ್ನಾಗಿದೆ, ಅವರು ಸಮಯಪ್ರಜ್ಞೆಯುಳ್ಳವರು, ಅಥವಾ ಅವರು ಸಭ್ಯರು ಎಂಬಂತಹ ವಿಷಯಗಳನ್ನು ನೀವು ಹೇಳಬಹುದು, ಆದರೆ ಅವರು ಹೊಂದಿರುವ ಆಳವಾದ ಗುಣಗಳನ್ನು ಇದುವರೆಗೂ ನೀವು ಗಮನಿಸದೇ ಇದ್ದಿರಬಹುದು. ಒಮ್ಮೆ ಪ್ರಯತ್ನಿಸಿ, ಮತ್ತು ನೀವು ನಂಬಲಾಗದ ಅನುಭವವನ್ನು ಪಡೆಯುತ್ತೀರಿ. ನಿಮ್ಮ ಸಹೋದ್ಯೋಗಿಗಳಲ್ಲಿ ಇರುವ ಅಸಾಧಾರಣ ಗುಣಗಳನ್ನು ನೀವು ಕಾಣುವಿರಿ. ಇದು ಒಂದು ರೀತಿಯಲ್ಲಿ, ನಿಮ್ಮ ಕಲ್ಪನೆಯ ಮೇಲೆ ಬಾಹ್ಯ ದೃಷ್ಟಿಕೋನವನ್ನು ಹೊಂದುವಂತೆ.

ಸ್ನೇಹಿತರೇ,

ನಾನು ವರ್ಷಗಳಿಂದ ಮಾನವ ಸಂಪನ್ಮೂಲದ ಜೊತೆ ಕೆಲಸ ಮಾಡುತ್ತಿದ್ದೇನೆ, ಮತ್ತು ಯಂತ್ರಗಳೊಂದಿಗೆ ಕೆಲಸ ಮಾಡಲು ನನಗೆ ಎಂದಿಗೂ ಅವಕಾಶ ಸಿಕ್ಕಿಲ್ಲ. ನನ್ನ ಕೆಲಸವು ಸದಾ ಜನರೊಂದಿಗೆ ಕೆಲಸ ಮಾಡುವುದಕ್ಕೆ ಸಂಬಂಧಿಸಿರುವಂಥದ್ದು. ಆದ್ದರಿಂದ ನಾನು ಈ ಪರಿಕಲ್ಪನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದಾಗ್ಯೂ, ಸಾಮರ್ಥ್ಯ ವರ್ಧನೆಯ ದೃಷ್ಟಿಕೋನದಿಂದ ಈ ಅವಕಾಶಗಳು ಬಹಳ ಮುಖ್ಯ. ಒಂದು ಕಾರ್ಯಕ್ರಮವನ್ನು ಸರಿಯಾಗಿ ನಡೆಸಿದರೆ, ಅದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇಲ್ಲದಿದ್ದರೆ, ಎಂದಿನಂತೆಯೇ ಮೂರರಲ್ಲಿ ಮತ್ತೊಂದು ಎಂಬಂತೆ ಈ ಬಾರಿಯೂ ಆ ಕೆಲಸ ಮಾಡಲಾಗುತ್ತದೆ ಎಂಬ ಸಾಮಾಣ್ಯ ಅಭಿಪ್ರಾಯ ಮೂಡುತ್ತದೆ. ಆ ರೀತಿ ಕೆಲಸ ಮಾಡುವುದರಿಂದ ಏನಾಗುತ್ತದೆ? ಇದಕ್ಕೆ ಸಂಬಂಧಿಸಿದಂತೆ ನಮ್ಮ ದೇಶದ ಮುಂದೆ ಎರಡು ಅನುಭವಗಳಿವೆ. ಒಂದು, ಕೆಲವು ವರ್ಷಗಳ ಹಿಂದೆ, ನಾವು ಆಯೋಗಿಸಿದ್ದ ಕಾಮನ್ವೆಲ್ತ್ ಕ್ರೀಡಾಕೂಟ. ಕಾಮನ್ವೆಲ್ತ್ ಕ್ರೀಡಾಕೂಟದ ಬಗ್ಗೆ ನೀವು ಯಾರನ್ನಾದರೂ ಕೇಳಿದರೆ, ದೆಹಲಿಯ ಜನರು ಅಥವಾ ದೆಹಲಿಯ ಹೊರಗಿನವರು ಈ ಆಟಗಳ ಬಗ್ಗೆ ಏನು ಗ್ರಹಿಸಿದ್ದಾರೆ ಎಂಬುದರ ಕಲ್ಪನೆ ನಿಮಗೆ ಸಿಗುತ್ತದೆ. ನಿಮ್ಮಲ್ಲಿ ಹಿರಿಯರಾದವರು ಆ ಕಾರ್ಯಕ್ರಮವನ್ನು ನೆನಪಿಸಿಕೊಳ್ಳಬಹುದು. ನಮ್ಮ ದೇಶವನ್ನು ಬ್ರಾಂಡ್ ಮಾಡಲು, ಗುರುತನ್ನು ರಚಿಸಲು, ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ನಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಇದು ನಿಜವಾಗಿಯೂ ಒಂದು ಅವಕಾಶವಾಗಿತ್ತು. ಆದರೆ, ದುರದೃಷ್ಟವಶಾತ್, ಈ ಕಾರ್ಯಕ್ರಮವು ವಿವಾದಗಳು ಮತ್ತು ದುರಾಡಳಿತದಲ್ಲಿ ಸಿಲುಕಿಕೊಂಡಿತು, ಇದು ನಮ್ಮ ದೇಶದ ಬಗ್ಗೆ ಕಳಂಕಿತ ಚಿತ್ರಣ ಮೂಡಿತು. ಇದು ಜನರಲ್ಲಿ ಮತ್ತು ಸರ್ಕಾರದಲ್ಲಿರುವವರಲ್ಲಿ ಭ್ರಮನಿರಸನದ ಭಾವನೆಯನ್ನು ಮೂಡಿಸಿತು ಮತ್ತು ಅಂತಹ ಪ್ರಯತ್ನಗಳು ನಮ್ಮಿಂದ ಸಾಧ್ಯವಿಲ್ಲ, ಅವು ನಮ್ಮ ಸಾಮರ್ಥ್ಯಕ್ಕೆ ಮೀರಿದಂಥವು ಎಂಬ ನಂಬಿಕೆಯನ್ನು ಮೂಡಿಸಿತು.

ಮತ್ತೊಂದೆಡೆ, ಜಿ-20 ಯಶಸ್ಸನ್ನು ಮತ್ತೊಂದು ಅನುಭವವಾಗಿ ನಾವು ಪರಿಗಣಿಸಬಹುದು. ಇಲ್ಲಿ ಯಾವುದೇ ನ್ಯೂನತೆಗಳು ಕಂಡು ಬರಲಿಲ್ಲ. ಎಲ್ಲವೂ ಯೋಜಿಸಿದಂತೆ ನಡೆಯಿತು. ಪ್ರತಿಯೊಂದು ಗುರಿಯನ್ನು 99 ಅಥವಾ 100 ಅಂಕಗಳೊಂದಿಗೆ ಸಾಧಿಸಲಾಯಿತು. ಕೆಲವು ಸಂದರ್ಭಗಳಲ್ಲಿ, ನಾವು 94, 99, ಮತ್ತು ಕೆಲವು ಸಂದರ್ಭಗಳಲ್ಲಿ 102 ಅಂಕಗಳನ್ನು ಗಳಿಸಿರಬಹುದು. ಆದರೆ ಈ ಪ್ರಯತ್ನಗಳ ಸಂಚಿತ ಪರಿಣಾಮವು ಗಮನಾರ್ಹವಾಗಿತ್ತು. ಒಟ್ಟಾರೆ ಪರಿಣಾಮವೆಂದರೆ ಅದು ನಮ್ಮ ದೇಶದ ಸಾಮರ್ಥ್ಯಗಳನ್ನು ಪ್ರದರ್ಶಿಸಿತು ಮತ್ತು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತು. ಅಂತಹ ಕಾರ್ಯಕ್ರಮಗಳ ಯಶಸ್ಸು ಕೇವಲ 10 ಸಂಪಾದಕೀಯಗಳನ್ನು ಪ್ರಕಟಿಸುವುದರಲ್ಲಿಲ್ಲ. ಬದಲಿಗೆ  ಅವುಗಳು ಹೊಂದಿರುವ ಒಟ್ಟಾರೆ ಪರಿಣಾಮದಲ್ಲಿದೆ. ಮೋದಿ ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ನನಗೆ ಸಂತೋಷವನ್ನು ತರುವ ಸಂಗತಿಯೆಂದರೆ, ನಾವು ಯಾವುದೇ ಕಾರ್ಯವನ್ನು ಪರಿಣಾಮಕಾರಿಯಾಗಿ ಸಾಧಿಸಬಹುದು ಎಂಬ ನಂಬಿಕೆ ಈಗ ನನ್ನ ದೇಶದಲ್ಲಿದೆ.

ಹಿಂದೆ, ಎಲ್ಲಿಯಾದರೂ ವಿಪತ್ತು ಸಂಭವಿಸಿದಾಗ ಅಥವಾ ಮಾನವೀಯ ನೆರವು ಅಗತ್ಯವಿದ್ದಾಗ, ಪಾಶ್ಚಿಮಾತ್ಯ ದೇಶಗಳು ಹೆಚ್ಚು ಮಿಂಚುತ್ತಿದ್ದನ್ನು ನಾವು ಕಾಣುತ್ತಿದ್ದೆವು. ಪ್ರಪಂಚದ ಯಾವುದಾದರೂ ಭಾಗದಲ್ಲಿ ಏನಾದರೂ ವಿಪತ್ತು ಸಂಭವಿಸಿದರೆ, ಆ ಪಾಶ್ಚಿಮಾತ್ಯ ದೇಶ ಅಥವಾ ಈ ಪಾಶ್ಚಿಮಾತ್ಯ ದೇಶವು ತನ್ನ ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳೊಂದಿಗೆ ಮಧ್ಯಪ್ರವೇಶಿಸಿ ಸಹಾಯ ಮಾಡಿದೆ ಎಂದು ಜನರು ಹೇಳುತ್ತಿದ್ದರು. ನಮ್ಮ ದೇಶವನ್ನು ಉಲ್ಲೇಖಿಸುತ್ತಿದ್ದದ್ದು ವಿರಳ. ಪ್ರಮುಖ ಪಾಶ್ಚಿಮಾತ್ಯ ದೇಶಗಳು ಗಮನ ಸೆಳೆಯುತ್ತಿದ್ದವು. ಆದರೆ, ನಾವೀಗ ಬದಲಾವಣೆಯನ್ನು ನೋಡುತ್ತಿದ್ದೇವೆ. ನೇಪಾಳದಲ್ಲಿ ಭೂಕಂಪ  ಸಂಭವಿಸಿದಾಗ ನಮ್ಮ ಜನರು ಸಹಾಯ ಮಾಡಲು ಅಲ್ಲಿಗೆ ಧಾವಿಸಿದ್ದಾರೆ.  ಫಿಜಿಗೆ ಚಂಡಮಾರುತಗಳು ಅಪ್ಪಳಿಸಿದಾಗ ಅದಕ್ಕೆ ನಮ್ಮ ತಂಡಗಳು ಸ್ಪಂದಿಸಿವೆ. ಶ್ರೀಲಂಕಾ ಬಿಕ್ಕಟ್ಟನ್ನು ಎದುರಿಸಿದಾಗ ನಾವು ನೆರವು ನೀಡಿದ್ದೇವೆ. ಮಾಲ್ಡೀವ್ಸ್ ವಿದ್ಯುತ್ ಬಿಕ್ಕಟ್ಟನ್ನು ಎದುರಿಸಿದಾಗ ನಮ್ಮ ತಂಡಗಳು ತ್ವರಿತ ಸಹಾಯವನ್ನು ಒದಗಿಸಿವೆ, ಯೆಮೆನ್ ತೀವ್ರ ಸಂಕಷ್ಟದಲ್ಲಿದ್ದಾಗ ಮತ್ತು ಟರ್ಕಿ ಭೂಕಂಪಕ್ಕೆ ತುತ್ತಾದಾಗ  ನಾವು ಸಹಾಯವನ್ನು ಕಳುಹಿಸಿದ್ದೇವೆ. ನಮ್ಮ ಜನರಿಂದ ತ್ವರಿತ ಸ್ಪಂದನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಈ ಎಲ್ಲಾ ಘಟನೆಗಳು ಭಾರತವು ಮಾನವೀಯ ಪ್ರಯತ್ನಗಳಲ್ಲಿ ಬದಲಾವಣೆಯನ್ನು ತರಲು ಸಮರ್ಥವಾಗಿದೆ ಎಂಬ ನಂಬಿಕೆಯನ್ನು ಜಗತ್ತಿನಲ್ಲಿ ಹುಟ್ಟುಹಾಕಿವೆ. ಬಿಕ್ಕಟ್ಟಿನ ಸಮಯದಲ್ಲಿ, ಭಾರತವು ಜಗತ್ತಿನತ್ತ ಸಹಾಯಹಸ್ತ ಚಾಚುತ್ತದೆ. ಇದು ವಿಶ್ವಾದ್ಯಂತ ನಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಮೂಡಿಸಿದೆ.

ಇತ್ತೀಚೆಗೆ ಜೋರ್ಡಾನ್‌ನಲ್ಲಿ ಭೂಕಂಪ ಸಂಭವಿಸಿದಾಗ, ನಾನು ಶೃಂಗಸಭೆಯ ಕೆಲಸಗಳಲ್ಲಿ ಅವಿರತವಾಗಿ ನಿರತನಾಗಿದ್ದೆ. ಆದಾಗ್ಯೂ, ನನ್ನ ಬಿಡುವಿಲ್ಲದ ಕೆಲಸದ ಹೊರತಾಗಿಯೂ, ನಾನು ಮುಂಜಾನೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದೆ ಮತ್ತು ನಾವು ಜೋರ್ಡಾನ್‌ಗೆ ಹೇಗೆ ಸಹಾಯ ಮಾಡಬಹುದು ಎಂದು ವಿಚಾರಿಸಿದೆ. ನಮ್ಮ ವಿಮಾನ ಮತ್ತು ಸಲಕರಣೆಗಳನ್ನು ಸಿದ್ಧಪಡಿಸಲು ಸೂಚಿಸಿದೆ. ನಾವು ಏನೆಲ್ಲಾ ಕೊಂಡೊಯ್ಯಬೇಕು ಮತ್ತು ಯಾವ ತಂಡವನ್ನು ಕಳುಹಿಸಬೇಕೆಂದು ಗುರುತಿಸುವಂತೆ ನಾನು ಅವರಿಗೆ ಹೇಳಿದೆ. ನಮ್ಮ ಕಡೆಯಿಂದ ಎಲ್ಲವೂ ಸಿದ್ಧವಾಗಿತ್ತು. ಒಂದೆಡೆ, ಜಿ-20 ಶೃಂಗಸಭೆ ನಡೆಯುತ್ತಿದ್ದರೆ, ಮತ್ತೊಂದೆಡೆ, ಜೋರ್ಡಾನ್‌ಗೆ ನೆರವು ನೀಡಲು ಸಿದ್ಧತೆಗಳು ನಡೆಯುತ್ತಿದ್ದವು. ಇದು ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಜೋರ್ಡಾನ್, ತನ್ನ ಸ್ಥಳಾಕೃತಿಯನ್ನು ಗುರುತಿಸಿ, ನಾವು ನೀಡಲು ತಯಾರಿ ನಡೆಸುತ್ತಿರುವ ಮಾದರಿಯ ಸಹಾಯದ ಅಗತ್ಯವಿಲ್ಲ ಎಂದು ನಮಗೆ ತಿಳಿಸಿತು. ಅಂತಿಮವಾಗಿ, ನಾವು ಅಲ್ಲಿಗೆ ಹೋಗುವ ಅಗತ್ಯ ಬರಲಿಲ್ಲ. ನಮ್ಮ ಹಸ್ತಕ್ಷೇಪವಿಲ್ಲದೆ ಅವರು ತಮ್ಮ ಪರಿಸ್ಥಿತಿಯನ್ನು ತಾವೇ ನಿರ್ವಹಿಸಿದರು.

ನನ್ನ ಅಭಿಪ್ರಾಯವೇನೆಂದರೆ, ನಾವು ಒಂದು ಕಾಲದಲ್ಲಿ ಅಗೋಚರರಾಗಿದ್ದೆವು, ನಮ್ಮ ಹೆಸರು ಕೂಡ ಎಲ್ಲೂ ಪ್ರಸ್ತಾಪವಾಗುತ್ತಿರಲಿಲ್ಲ. ನಾವು ಇಷ್ಟು ಕಡಿಮೆ ಸಮಯದಲ್ಲಿ ಈ ಸ್ಥಾನಮಾನವನ್ನು ಸಾಧಿಸಿದ್ದೇವೆ. ನಮಗೆ ಜಾಗತಿಕ ಮಾನ್ಯತೆ ಬೇಕು. ಈಗ, ಇಲ್ಲಿ ನಾವೆಲ್ಲರೂ ಕುಳಿತಿದ್ದೇವೆ - ಇಡೀ ಮಂತ್ರಿಮಂಡಲ, ಎಲ್ಲಾ ಕಾರ್ಯದರ್ಶಿಗಳು ಇಲ್ಲಿದ್ದಾರೆ - ಮತ್ತು ನೀವು ಮುಂಭಾಗದಲ್ಲಿ ಕುಳಿತಿರುವ ರೀತಿಯಲ್ಲಿ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಅಂದರೆ, ಇತರೆ ಎಲ್ಲರೂ ನಿಮ್ಮ ಹಿಂದೆ ಕುಳಿತಿದ್ದಾರೆ. ಇದು ಸಾಮಾನ್ಯವಾಗಿ ಯೋಜಿಸಲಾಗುವ ವ್ಯವಸ್ಥೆಗಿಂತಲೂ ವಿರುದ್ಧವಾಗಿದೆ. ಆದರೆ, ಇದು ನನಗೆ ಸಂತೋಷ ಮೂಡಿಸುತ್ತದೆ. ಏಕೆಂದರೆ ನಾನು ಇಲ್ಲಿಂದ ನಿಮ್ಮನ್ನು ನೋಡಿದಾಗ ನಮ್ಮ ಅಡಿಪಾಯವು ಬಲವಾಗಿದೆ ಎಂದರ್ಥ. ಮೇಲ್ಭಾಗದಲ್ಲಿ ಸ್ವಲ್ಪ ತೊಂದರೆ ಇದ್ದರೂ, ಅದು ಹೆಚ್ಚು ಮುಖ್ಯವಲ್ಲ, ಅಡಿಪಾಯ ಗಟ್ಟಿಯಾಗಿರಬೇಕು.

ಆದ್ದರಿಂದ, ಸಹೋದ್ಯೋಗಿಳೇ, ಈಗ ನಾವು ಸಂಪೂರ್ಣ ಸಾಮರ್ಥ್ಯದಿಂದ ಕೆಲಸ ಮಾಡುತ್ತೇವೆ ಮತ್ತು ನಮ್ಮ ಪ್ರತಿಯೊಂದು ಪ್ರಯತ್ನವು ಜಾಗತಿಕ ಸನ್ನಿವೇಶಕ್ಕೆ ತಕ್ಕಂತಿರುತ್ತದೆ. ಈಗ, ಜಿ-20 ಶೃಂಗಸಭೆಯನ್ನು ನೋಡಿ - ಪ್ರಪಂಚದಾದ್ಯಂತದ ಒಂದು ಲಕ್ಷ ಜನರು ಇಲ್ಲಿಗೆ ಬಂದರು, ಮತ್ತು ಆಯಾ ದೇಶಗಳ ನಿರ್ಣಾಯಕ ತಂಡಗಳು ಇದ್ದವು. ಅವರು ನಿರ್ಧಾರ ತೆಗೆದುಕೊಳ್ಳುವ ತಂಡಗಳ ಭಾಗವಾಗಿದ್ದರು. ಮತ್ತು ಅವರು ಇಲ್ಲಿಗೆ ಬಂದರು, ಭಾರತವನ್ನು ನೋಡಿದರು ಮತ್ತು ದೇಶದ ವೈವಿಧ್ಯತೆಯನ್ನು ಆಚರಿಸಿದರು. ಅವರು ತಮ್ಮ ದೇಶಗಳಿಗೆ ಹಿಂತಿರುಗಿದ ಬಳಿಕ ಈ ಅನುಭವಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವುದಿಲ್ಲ; ಅವರು ಹಿಂತಿರುಗಿದ ಬಳಿಕ ಆ ದೇಶಗಳಲ್ಲಿ ಭಾರತದ ಪ್ರವಾಸೋದ್ಯಮ ರಾಯಭಾರಿಗಳಾಗುತ್ತಾರೆ.

ಅವರು ಇಲ್ಲಿಗೆ ಬಂದಾಗ ನೀವು ಅವರನ್ನು ಸ್ವಾಗತಿಸಿದ್ದೀರಿ ಮತ್ತು ಏನು ಸಹಾಯ ಬೇಕೆಂದು ಅವರನ್ನು ಕೇಳಿ ವಿಚಾರಿಸಿದ್ದೀರಿ ಅಷ್ಟೇ ಎಂದು ನೀವು ಭಾವಿಸಬಹುದು. ಅವರು ಸ್ವಲ್ಪ ಚಹಾ ಅಥವಾ ಬೇರಾವುದೇ ತಿನಿಸನ್ನು ಸವಿಯುವ ಇಚ್ಛೆ ವ್ಯಕ್ತಪಡಿಸಿರಬಹುದು. ಇದು ಸರಳ ಸನ್ನೆಯಂತೆ ತೋರಬಹುದು, ಆದರೆ ಅವರನ್ನು ಸ್ವಾಗತಿಸುವ ಮೂಲಕ, ಅವರಿಗೆ ಚಹಾ ಬೇಕೇ ಎಂದು ಕೇಳುವ ಮೂಲಕ ಮತ್ತು ಅವರ ಯಾವುದೇ ಅಗತ್ಯಗಳನ್ನು ಪೂರೈಸುವ ಮೂಲಕ, ನೀವು ಅವರು ಭಾರತದ ರಾಯಭಾರಿಯಾಗಲು ಬೀಜವನ್ನು ಬಿತ್ತಿದ್ದೀರಿ. ನೀವು ಅಂತಹ ಮಹತ್ವದ ಸೇವೆಯನ್ನು ಮಾಡಿದ್ದೀರಿ. ಅವರು ಭಾರತದ ರಾಯಭಾರಿಯಾಗುತ್ತಾರೆ ಮತ್ತು ಅವರು ಎಲ್ಲಿಗೇ ಹೋದರೂ "ಭಾರತವು ಹೀಗಿದೆ, ಭಾರತದಲ್ಲಿ ವ್ಯವಸ್ಥೆಗಳು ಹೀಗಿವೆ. ತಂತ್ರಜ್ಞಾನದಲ್ಲಿ ಭಾರತ ಬಹಳ ಮುಂದಿದೆ” ಎಂದು ಹೇಳುತ್ತಾರೆ. ಅವರು ಖಂಡಿತವಾಗಿಯೂ ಅದನ್ನು ಉಲ್ಲೇಖಿಸುತ್ತಾರೆ. ನಮ್ಮ ದೇಶದ ಪ್ರವಾಸೋದ್ಯಮವನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುವ ಅವಕಾಶ ನಮ್ಮೆಲ್ಲರಿಗೂ ಇದೆ ಎಂಬುದು ನನ್ನ ಅಭಿಪ್ರಾಯ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s Press Note 3 revision opens up economic opportunities without giving security short shrift

Media Coverage

India’s Press Note 3 revision opens up economic opportunities without giving security short shrift
NM on the go

Nm on the go

Always be the first to hear from the PM. Get the App Now!
...
Prime Minister greets devotees and participants of Matua Dharma Mela
March 16, 2026

The Prime Minister, Shri Narendra Modi has greeted all the devotees and participants of the Matua Dharma Mela. This special occasion is associated with the Jayanti of Purna Brahma Shree Shree Harichand Thakur Ji. “I offer my humble Pranams to him. His thoughts and teachings continue to give strength and hope to several people. They awakened a powerful movement for dignity, equality and devotion. He inspired generations to walk the path of righteousness, harmony and collective upliftment”, Shri Modi stated.

The Prime Minister remarked that the rich and vibrant traditions of Matua culture reflect a deep spiritual strength and an unbreakable commitment to equality. It significantly enriches the social fabric of our nation. “Over the past decade, our Government has been deeply committed to the welfare, empowerment and dignity of the Matua community”, Shri Modi said.

The Prime Minister posted on X:

“My heartfelt greetings and best wishes to all devotees and participants of the Matua Dharma Mela.

This special occasion is associated with the Jayanti of Purna Brahma Shree Shree Harichand Thakur Ji. I offer my humble Pranams to him. His thoughts and teachings continue to give strength and hope to several people. They awakened a powerful movement for dignity, equality and devotion. He inspired generations to walk the path of righteousness, harmony and collective upliftment.

The rich and vibrant traditions of the Matua culture reflect a deep spiritual strength and an unbreakable commitment to equality. It significantly enriches the social fabric of our nation. Over the past decade, our Government has been deeply committed to the welfare, empowerment and dignity of the Matua community.” 

 

“মতুয়া ধর্মমেলায় আগত সমস্ত ভক্ত এবং অংশগ্রহণকারীদের জানাই আমার আন্তরিক শুভেচ্ছা ও অভিনন্দন।

এই বিশেষ তিথিটি পূর্ণ ব্রহ্ম শ্রী শ্রী হরিচাঁদ ঠাকুরজির জয়ন্তীর সঙ্গে যুক্ত। আমি তাঁকে আমার সশ্রদ্ধ প্রণাম নিবেদন করছি। তাঁর আদর্শ এবং শিক্ষা আজও অগণিত মানুষকে শক্তি ও আশার আলো দিয়ে চলেছে এবং সম্মান, সাম্য ও ভক্তির এক শক্তিশালী আন্দোলনের জন্ম ঘটিয়েছে। তিনি প্রজন্ম থেকে প্রজন্মান্তরকে ন্যায়ের পথ, সম্প্রীতি এবং সমষ্টিগত উন্নয়নের পথে চলার অনুপ্রেরণা জুগিয়েছেন।

মতুয়া সংস্কৃতির এই সমৃদ্ধ এবং প্রাণবন্ত ঐতিহ্য এক গভীর আধ্যাত্মিক শক্তি এবং সাম্যের প্রতি অটুট অঙ্গীকারকে প্রতিফলিত করে। এটি আমাদের দেশের সামাজিক কাঠামোকে উল্লেখযোগ্যভাবে সমৃদ্ধ করেছে। গত এক দশকে, আমাদের সরকার মতুয়া সম্প্রদায়ের কল্যাণ, ক্ষমতায়ন এবং মর্যাদার প্রতি সম্পূর্ণ দায়বদ্ধ থেকে কাজ করে চলেছে।”