ಆಪರೇಷನ್ ಸಿಂಧೂರ್‌ನಲ್ಲಿ, ಭಾರತದ ಸ್ಥಳೀಯ ಶಸ್ತ್ರಾಸ್ತ್ರಗಳು ಮತ್ತು ಮೇಕ್ ಇನ್ ಇಂಡಿಯಾದ ಶಕ್ತಿ ಜಗತ್ತಿಗೆ ಪರಿಚಯವಾಯಿತು
ದೊಡ್ಡ ಮೆಟ್ರೋ ನಗರಗಳಲ್ಲಿ ಲಭ್ಯವಿರುವ ಮೂಲಸೌಕರ್ಯ, ಸೌಲಭ್ಯಗಳು, ಸಂಪನ್ಮೂಲಗಳು ಈಗ ಕಾನ್ಪುರದಲ್ಲಿಯೂ ಗೋಚರಿಸುತ್ತಿವೆ: ಪ್ರಧಾನಮಂತ್ರಿ
ನಾವು ಉತ್ತರ ಪ್ರದೇಶವನ್ನು ಕೈಗಾರಿಕಾ ಸಾಧ್ಯತೆಗಳ ರಾಜ್ಯವನ್ನಾಗಿ ಮಾಡುತ್ತಿದ್ದೇವೆ: ಪ್ರಧಾನಮಂತ್ರಿ

ಭಾರತ್ ಮಾತಾ ಕೀ - ಜೈ! 

ಭಾರತ್ ಮಾತಾ ಕೀ - ಜೈ! 

ಭಾರತ್ ಮಾತಾ ಕೀ - ಜೈ! 

ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ, ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ಶ್ರೀ ಬ್ರಜೇಶ್ ಪಾಠಕ್ ಜೀ, ಉತ್ತರ ಪ್ರದೇಶ ಸರ್ಕಾರದ ಸಚಿವರೇ, ಸಂಸದರೇ, ಶಾಸಕರೇ, ಮತ್ತು ಕಾನ್ಪುರದಿಂದ ಇಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೇ.

ಇಲ್ಲಿ ಒಬ್ಬ ಪುಟ್ಟ ಬಾಲಕಿ ಬಹುಶಃ ಚಿತ್ರವೊಂದನ್ನು ರಚಿಸಿದ್ದಾಳೆ - SPGಯ ಯಾರಾದರೂ ದಯವಿಟ್ಟು ಅದನ್ನು ಆಕೆಯಿಂದ ತೆಗೆದುಕೊಳ್ಳಿ. ಆ ಮೂಲೆಯಲ್ಲಿ ಇನ್ನೊಬ್ಬ ವ್ಯಕ್ತಿ ರೇಖಾಚಿತ್ರವನ್ನು ತಂದಿದ್ದಾರೆ - ದಯವಿಟ್ಟು ಅದರ ಮೇಲೆ ನಿಮ್ಮ ಹೆಸರು ಮತ್ತು ವಿಳಾಸವನ್ನು ಬರೆಯಿರಿ; ನಾನು ನಿಮಗೆ ಪತ್ರವನ್ನು ಕಳುಹಿಸುತ್ತೇನೆ. ಆ ಮೂಲೆಯಲ್ಲಿ ಒಬ್ಬ ಯುವಕ ಇದ್ದಾನೆ - ನಿಮ್ಮ ಹೆಸರು ಮತ್ತು ವಿಳಾಸವನ್ನು ಬರೆದಿಡಿ, ಆಗ ನಾನು ನಿಮಗೆ ಪತ್ರ ಬರೆಯಬಹುದು. ಇಲ್ಲಿ ಒಬ್ಬ ಹುಡುಗ ಬಹಳ ಹೊತ್ತಿನಿಂದ ಕೈ ಎತ್ತುತ್ತಿದ್ದಾನೆ - ಅವನ ಭುಜ ಈಗ ನೋಯುತ್ತಿರಬೇಕು, ಅವನು ದಣಿದಿರಬೇಕು. ಇಂದು ಕಾನ್ಪುರದಲ್ಲಿನ ಉತ್ಸಾಹ ನಿಜಕ್ಕೂ ಅಭೂತಪೂರ್ವವಾಗಿದೆ! ಛಾಯಾಗ್ರಾಹಕರಲ್ಲಿ ಯಾರಾದರೂ - ದಯವಿಟ್ಟು ಅಲ್ಲಿ ನೋಡಿ - SPG ಸಿಬ್ಬಂದಿಯವರು, ದಯವಿಟ್ಟು ಆ ಮಗುವಿಗೆ ಸಹಾಯ ಮಾಡಿ.

ಭಾರತ್ ಮಾತಾ ಕೀ - ಜೈ! 

ಭಾರತ್ ಮಾತಾ ಕೀ - ಜೈ! 

ಕಾನ್ಪುರದಲ್ಲಿ ಈ ಅಭಿವೃದ್ಧಿ ಕಾರ್ಯಕ್ರಮವನ್ನು ಮೂಲತಃ ಏಪ್ರಿಲ್ 24 ರಂದು ನಿಗದಿಪಡಿಸಲಾಗಿತ್ತು, ಆದರೆ ಪಹಲ್ಗಾಮ್ ದಾಳಿಯಿಂದಾಗಿ ನಾನು ಕಾನ್ಪುರಕ್ಕೆ ನನ್ನ ಭೇಟಿಯನ್ನು ರದ್ದುಗೊಳಿಸಬೇಕಾಯಿತು. ಪಹಲ್ಗಾಮ್ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ಕಾನ್ಪುರದ ನಮ್ಮ ಮಗ ಶುಭಂ ದ್ವಿವೇದಿ ಕೂಡ ಈ ಕ್ರೌರ್ಯಕ್ಕೆ ಬಲಿಯಾದರು. ಅವರ ಮಗಳು ಐಶನ್ಯಾಳ ನೋವು, ಸಂಕಟ ಮತ್ತು ಆಂತರಿಕ ಕೋಪವನ್ನು ನಾವೆಲ್ಲರೂ ಅನುಭವಿಸಬಹುದು. ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಅದೇ ಕೋಪವನ್ನು ಇಡೀ ಜಗತ್ತು ಆಪರೇಷನ್ ಸಿಂಧೂರ್ ರೂಪದಲ್ಲಿ ನೋಡಿದೆ. ನಾವು ಪಾಕಿಸ್ತಾನದ ಒಳಗೆ ನೂರಾರು ಮೈಲಿಗಳವರೆಗೆ ನುಗ್ಗಿ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸಿದ್ದೇವೆ. ಮತ್ತು ನಮ್ಮ ಸಶಸ್ತ್ರ ಪಡೆಗಳು ಅಂತಹ ಧೈರ್ಯ, ಅಂತಹ ಅಪ್ರತಿಮ ಸಾಹಸವನ್ನು ತೋರಿಸಿದವು, ಪಾಕಿಸ್ತಾನದ ಸೈನ್ಯವು ಕದನ ವಿರಾಮಕ್ಕಾಗಿ ಬೇಡಿಕೊಳ್ಳುವಂತೆ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟದ ಈ ನೆಲದಿಂದ, ನಮ್ಮ ಸೈನಿಕರ ಶೌರ್ಯವನ್ನು ನಾನು ಪದೇ ಪದೇ ವಂದಿಸುತ್ತೇನೆ. ನಾನು ಪುನರುಚ್ಚರಿಸಲು ಬಯಸುತ್ತೇನೆ: ಆಪರೇಷನ್ ಸಿಂಧೂರ್ ಸಮಯದಲ್ಲಿ ಬೇಡಿಕೊಳ್ಳುತ್ತಿದ್ದ ಶತ್ರು ಯಾವುದೇ ಭ್ರಮೆಯಲ್ಲಿ ಉಳಿಯಬಾರದು - ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತವು ಮೂರು ವಿಷಯಗಳನ್ನು ಸ್ಪಷ್ಟಪಡಿಸಿದೆ: ಮೊದಲನೆಯದಾಗಿ, ಭಾರತವು ಪ್ರತಿ ಭಯೋತ್ಪಾದಕ ದಾಳಿಗೂ ಬಲವಾದ ಪ್ರತಿಕ್ರಿಯೆ ನೀಡುತ್ತದೆ. ಆ ಪ್ರತಿಕ್ರಿಯೆಯ ಸಮಯ, ವಿಧಾನ ಮತ್ತು ನಿಯಮಗಳನ್ನು ನಮ್ಮ ಸಶಸ್ತ್ರ ಪಡೆಗಳು ನಿರ್ಧರಿಸುತ್ತವೆ. ಎರಡನೆಯದಾಗಿ, ಭಾರತವು ಇನ್ನು ಮುಂದೆ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ, ಅಥವಾ ಅಂತಹ ಬೆದರಿಕೆಗಳ ಆಧಾರದ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಮೂರನೆಯದಾಗಿ, ಭಯೋತ್ಪಾದನೆಯ ಸೂತ್ರಧಾರಿಗಳು ಮತ್ತು ಅವರಿಗೆ ಆಶ್ರಯ ನೀಡುವ ಸರ್ಕಾರಗಳನ್ನು ಭಾರತವು ಒಂದೇ ಎಂದು ಪರಿಗಣಿಸುತ್ತದೆ. ಪಾಕಿಸ್ತಾನದ "ರಾಜ್ಯ" ಮತ್ತು "ರಾಜ್ಯೇತರ" ವ್ಯಕ್ತಿಗಳು - ಈ ಆಟ ಈಗ ಮುಗಿದಿದೆ. ಮತ್ತು ನಾನು ಕಾನ್ಪುರದ ಶೈಲಿಯಲ್ಲಿ ಹೇಳುವುದಾದರೆ: ಶತ್ರು ಎಲ್ಲಿ ಅಡಗಿಕೊಂಡರೂ, ಅವರನ್ನು ಬೇಟೆಯಾಡಲಾಗುತ್ತದೆ.

 

ಸ್ನೇಹಿತರೇ,

ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಬಲ ಮತ್ತು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಸಾಮರ್ಥ್ಯವನ್ನು ಜಗತ್ತು ಕಂಡಿದೆ. ನಮ್ಮ ಭಾರತದಲ್ಲಿ ತಯಾರಾದ ಆಯುಧಗಳು, ಅದರಲ್ಲೂ ವಿಶೇಷವಾಗಿ ಬ್ರಹ್ಮೋಸ್ ಕ್ಷಿಪಣಿಯು ಶತ್ರುಗಳ ನೆಲದೊಳಗೆ ಭಾರಿ ವಿನಾಶವನ್ನು ಸೃಷ್ಟಿಸಿತು. ಎಲ್ಲಿ ಗುರಿಗಳನ್ನು ಗುರುತಿಸಲಾಯಿತೋ, ಅಲ್ಲೆಲ್ಲಾ ಸ್ಫೋಟಗಳು ಸಂಭವಿಸಿದವು. ಈ ಶಕ್ತಿಯು ನಮಗೆ ‘ಆತ್ಮನಿರ್ಭರ ಭಾರತ್’ (ಸ್ವಾವಲಂಬಿ ಭಾರತ) ದ ಕಡೆಗಿನ ನಮ್ಮ ಬದ್ಧತೆಯಿಂದ ಲಭಿಸಿದೆ. ಒಂದು ಕಾಲದಲ್ಲಿ ಭಾರತವು ತನ್ನ ಸೈನ್ಯ ಮತ್ತು ರಕ್ಷಣಾ ಅಗತ್ಯಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸಿತ್ತು. ನಾವು ಆ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಾರಂಭಿಸಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವುದು ಕೇವಲ ನಮ್ಮ ಆರ್ಥಿಕತೆಗೆ ಮುಖ್ಯವಲ್ಲ - ಅದು ನಮ್ಮ ರಾಷ್ಟ್ರೀಯ ಹೆಮ್ಮೆಗೂ ಅಷ್ಟೇ ನಿರ್ಣಾಯಕವಾಗಿದೆ. ಅದಕ್ಕಾಗಿಯೇ ನಾವು ‘ಆತ್ಮನಿರ್ಭರ ಭಾರತ್’ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ರಾಷ್ಟ್ರವನ್ನು ಈ ಅವಲಂಬನೆಯಿಂದ ಮುಕ್ತಗೊಳಿಸಲು. ಮತ್ತು ಉತ್ತರ ಪ್ರದೇಶವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಕಡೆಗಿನ ಈ ಪಯಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಕಾನ್ಪುರದಲ್ಲಿ ಹಳೆಯ ಶಸ್ತ್ರಾಸ್ತ್ರ ಕಾರ್ಖಾನೆ ಇರುವಂತೆಯೇ, ನಾವು ಅಂತಹ 7 ಆರ್ಡನೆನ್ಸ್ ಕಾರ್ಖಾನೆಗಳನ್ನು ದೊಡ್ಡ ಆಧುನಿಕ ಕಂಪನಿಗಳಾಗಿ ಪರಿವರ್ತಿಸಿದ್ದೇವೆ. ಇಂದು, ಉತ್ತರ ಪ್ರದೇಶದಲ್ಲಿ ಒಂದು ದೊಡ್ಡ ರಕ್ಷಣಾ ಕಾರಿಡಾರ್ ನಿರ್ಮಾಣವಾಗುತ್ತಿದೆ. ಈ ಕಾರಿಡಾರ್ನ ಕಾನ್ಪುರ ನೋಡ್ ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರ ಭಾರತ್’ಗೆ ಒಂದು ಪ್ರಮುಖ ಕೇಂದ್ರವಾಗುತ್ತಿದೆ.

ಸ್ನೇಹಿತರೇ,

ಒಂದು ಕಾಲದಲ್ಲಿ ಸಾಂಪ್ರದಾಯಿಕ ಕೈಗಾರಿಕೆಗಳು ಈ ಪ್ರದೇಶವನ್ನು ತೊರೆಯುತ್ತಿದ್ದವು, ಆದರೆ ಈಗ ರಕ್ಷಣಾ ವಲಯದ ಪ್ರಮುಖ ಕಂಪನಿಗಳು ಬರುತ್ತಿವೆ. ಹತ್ತಿರದ ಅಮೇಥಿಯಲ್ಲಿ, ಎಕೆ-203 ರೈಫಲ್ ಗಳ ಉತ್ಪಾದನೆ ಈಗಾಗಲೇ ಪ್ರಾರಂಭವಾಗಿದೆ. 'ಆಪರೇಷನ್ ಸಿಂಧೂರ್' ಸಮಯದಲ್ಲಿ ಶತ್ರುಗಳಿಗೆ ನಿದ್ದೆಗೆಡಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಈಗ ಹೊಸ ಮನೆ - ಉತ್ತರ ಪ್ರದೇಶ. ಭವಿಷ್ಯದಲ್ಲಿ, ರಕ್ಷಣಾ ವಲಯದಲ್ಲಿ ಭಾರತವನ್ನು ಪ್ರಮುಖ ರಫ್ತುದಾರನನ್ನಾಗಿ ಮಾಡುವಲ್ಲಿ ಕಾನ್ಪುರ ಮತ್ತು ಯುಪಿ ಮುಂಚೂಣಿಯಲ್ಲಿರುತ್ತವೆ. ಇಲ್ಲಿ ಹೊಸ ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು. ದೊಡ್ಡ ಪ್ರಮಾಣದ ಹೂಡಿಕೆಗಳು ಬರುತ್ತವೆ. ಈ ಪ್ರದೇಶದ ಸಾವಿರಾರು ಯುವಕರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳು ಸಿಗಲಿವೆ.

ಸ್ನೇಹಿತರೇ,

ಯುಪಿ ಮತ್ತು ಕಾನ್ಪುರವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವುದು ಡಬಲ್-ಇಂಜಿನ್ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇಲ್ಲಿನ ಕೈಗಾರಿಕೆಗಳನ್ನು ಉತ್ತೇಜಿಸಿದಾಗ, ಕಾನ್ಪುರದ ಹಳೆಯ ವೈಭವವನ್ನು ಮರುಸ್ಥಾಪಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಆದರೆ, ಸಹೋದರ ಸಹೋದರಿಯರೇ, ಹಿಂದಿನ ಸರ್ಕಾರಗಳು ಆಧುನಿಕ ಕೈಗಾರಿಕೆಗಳ ಅಗತ್ಯಗಳನ್ನು ನಿರ್ಲಕ್ಷಿಸಿದವು. ಕೈಗಾರಿಕೆಗಳು ಕಾನ್ಪುರದಿಂದ ವಲಸೆ ಹೋಗುತ್ತಲೇ ಇದ್ದವು. ಕುಟುಂಬ ಆಡಳಿತದ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿದ್ದವು. ಇದರ ಪರಿಣಾಮವಾಗಿ, ಕಾನ್ಪುರ ಮಾತ್ರವಲ್ಲದೆ ಇಡೀ ಯುಪಿ ಹಿಂದುಳಿಯಿತು.

 

ಸಹೋದರರೇ ಮತ್ತು ಸಹೋದರಿಯರೇ,

ಒಂದು ರಾಜ್ಯದ ಕೈಗಾರಿಕಾ ಪ್ರಗತಿಗೆ ಅತಿ ಮುಖ್ಯವಾದ ಎರಡು ವಿಷಯಗಳಿವೆ: ಮೊದಲನೆಯದು, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ – ಅಂದರೆ, ನಿರಂತರ ವಿದ್ಯುತ್ ಪೂರೈಕೆ; ಮತ್ತು ಎರಡನೆಯದು, ಮೂಲಭೂತ ಸೌಕರ್ಯ ಮತ್ತು ಸಂಪರ್ಕ. ಇಂದು ನಾವು ಅನೇಕ ವಿದ್ಯುತ್ ಸ್ಥಾವರಗಳನ್ನು ಉದ್ಘಾಟಿಸಿದ್ದೇವೆ: 660 ಮೆಗಾವ್ಯಾಟ್ ನ ಪಂಕಿ ವಿದ್ಯುತ್ ಸ್ಥಾವರ, 660 ಮೆಗಾವ್ಯಾಟ್ ನ ನೈವೇಲಿ ವಿದ್ಯುತ್ ಸ್ಥಾವರ, 1320 ಮೆಗಾವ್ಯಾಟ್ ನ ಜವಾಹರಪುರ ವಿದ್ಯುತ್ ಸ್ಥಾವರ, 660 ಮೆಗಾವ್ಯಾಟ್ನ ಓಬ್ರಾ ಸಿ ವಿದ್ಯುತ್ ಸ್ಥಾವರ ಮತ್ತು 660 ಮೆಗಾವ್ಯಾಟ್ ನ ಖುರ್ಜಾ ವಿದ್ಯುತ್ ಸ್ಥಾವರ. ಉತ್ತರ ಪ್ರದೇಶದ ವಿದ್ಯುತ್ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಇದು ಒಂದು ದೊಡ್ಡ ಹೆಜ್ಜೆ. ಈ ವಿದ್ಯುತ್ ಸ್ಥಾವರಗಳಿಂದ, ಯುಪಿಯಲ್ಲಿ ವಿದ್ಯುತ್ ಲಭ್ಯತೆ ಗಣನೀಯವಾಗಿ ಹೆಚ್ಚಾಗುತ್ತದೆ, ಇದು ಇಲ್ಲಿನ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ. ಇಂದು, 47,000 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನೆರವೇರಿದೆ. ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ ಆಯುಷ್ಮಾನ್ ವಯ ವಂದನಾ ಕಾರ್ಡ್ ಗಳನ್ನು ನೀಡಲಾಗಿದೆ. ಇತರ ಯೋಜನೆಗಳ ಫಲಾನುಭವಿಗಳಿಗೂ ನೆರವು ನೀಡಲಾಗಿದೆ. ಈ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳು ಕಾನ್ಪುರ ಮತ್ತು ಉತ್ತರ ಪ್ರದೇಶದ ಪ್ರಗತಿಗೆ ನಮ್ಮ ಬಲವಾದ ಬದ್ಧತೆಯನ್ನು ತೋರಿಸುತ್ತವೆ.

ಸ್ನೇಹಿತರೇ,

ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಆಧುನಿಕ ಮತ್ತು ‘ವಿಕಸಿತ್ ಯುಪಿ’ (ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶ) ನಿರ್ಮಾಣಕ್ಕೆ ಶ್ರಮಿಸುತ್ತಿವೆ. ಇದರ ಪರಿಣಾಮವಾಗಿ, ದೊಡ್ಡ ಮಹಾನಗರಗಳಲ್ಲಿ ಮಾತ್ರ ಕಾಣಸಿಗುವಂತಹ ಮೂಲಸೌಕರ್ಯ, ಸೌಲಭ್ಯಗಳು ಮತ್ತು ಸಂಪನ್ಮೂಲಗಳು ಈಗ ಕಾನ್ಪುರದಲ್ಲೂ ಗೋಚರಿಸುತ್ತಿವೆ. ಕೆಲವು ವರ್ಷಗಳ ಹಿಂದೆ, ನಮ್ಮ ಸರ್ಕಾರವು ಕಾನ್ಪುರಕ್ಕೆ ತನ್ನ ಮೊದಲ ಮೆಟ್ರೋವನ್ನು ಉಡುಗೊರೆಯಾಗಿ ನೀಡಿತು. ಇಂದು, ಕಾನ್ಪುರ ಮೆಟ್ರೋದ ಕಿತ್ತಳೆ ಮಾರ್ಗವು ಕಾನ್ಪುರ ಕೇಂದ್ರವನ್ನು ತಲುಪಿದೆ. ಎತ್ತರದ ಹಳಿಗಳಿಂದ ಹಿಡಿದು ಭೂಗತ ಸುರಂಗಗಳವರೆಗೆ, ಎಲ್ಲಾ ರೀತಿಯ ಮೆಟ್ರೋ ಸಂಪರ್ಕವು ಈಗ ಕಾನ್ಪುರದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತಿದೆ. ಕಾನ್ಪುರ ಮೆಟ್ರೋದ ಈ ವಿಸ್ತರಣೆ ಯಾವುದೇ ಸಾಮಾನ್ಯ ಯೋಜನೆಯಲ್ಲ. ಸರಿಯಾದ ಉದ್ದೇಶಗಳು, ಬಲವಾದ ಇಚ್ಛಾಶಕ್ತಿ ಮತ್ತು ಪ್ರಾಮಾಣಿಕ ಆಡಳಿತವಿದ್ದರೆ, ರಾಜ್ಯ ಮತ್ತು ದೇಶದ ಅಭಿವೃದ್ಧಿಗಾಗಿ ನಿಜವಾದ ಪ್ರಯತ್ನಗಳನ್ನು ಮಾಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಕಾನ್ಪುರದ ಬಗ್ಗೆ ಜನರು ಹಿಂದೆ ಏನು ಹೇಳುತ್ತಿದ್ದರು ನೆನಪಿದೆಯೇ? ಚುನ್ನಿಗಂಜ್, ಬಡಾ ಚೌರಾಹಾ, ನಾಯಗಂಜ್, ಕಾನ್ಪುರ ಸೆಂಟ್ರಲ್ನಂತಹ ಪ್ರದೇಶಗಳು - ಇವು ಅತ್ಯಂತ ಜನನಿಬಿಡವಾಗಿದ್ದವು, ಕಿರಿದಾದ ರಸ್ತೆಗಳು ಮತ್ತು ಆಧುನಿಕ ಮೂಲಸೌಕರ್ಯ ಮತ್ತು ಯೋಜನೆಯ ಕೊರತೆ ಇತ್ತು. "ಇಲ್ಲಿ ಮೆಟ್ರೋ ಹೇಗೆ ಸಾಧ್ಯ? ಇಲ್ಲಿ ದೊಡ್ಡ ಬದಲಾವಣೆ ಹೇಗೆ ಸಾಧ್ಯ?" ಎಂದು ಜನರು ಹೇಳುತ್ತಿದ್ದರು. ಒಂದು ರೀತಿಯಲ್ಲಿ, ಕಾನ್ಪುರ ಮತ್ತು ಉತ್ತರ ಪ್ರದೇಶದ ಇತರ ಪ್ರಮುಖ ನಗರಗಳನ್ನು ಅಭಿವೃದ್ಧಿಯ ಸ್ಪರ್ಧೆಯಿಂದ ಹೊರಗಿಡಲಾಗಿತ್ತು. ಇದು ಸಂಚಾರ ದಟ್ಟಣೆಯನ್ನು ಇನ್ನಷ್ಟು ಹದಗೆಡಿಸಿತು, ನಗರ ಪ್ರಗತಿಯನ್ನು ನಿಧಾನಗೊಳಿಸಿತು ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚು ಸಾಮರ್ಥ್ಯವಿರುವ ನಗರಗಳು ಹಿಂದುಳಿಯಲು ಪ್ರಾರಂಭಿಸಿದವು. ಆದರೆ ಇಂದು, ಅದೇ ಕಾನ್ಪುರ, ಅದೇ ಉತ್ತರ ಪ್ರದೇಶವು ಅಭಿವೃದ್ಧಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ. ಕಾನ್ಪುರದ ಜನರಿಗೆ ಮೆಟ್ರೋ ಸೇವೆಗಳು ಎಷ್ಟು ಪ್ರಯೋಜನವನ್ನು ನೀಡುತ್ತವೆ ಎಂಬುದನ್ನು ಒಮ್ಮೆ ನೋಡಿ. ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿರುವ ಕಾನ್ಪುರದ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಈಗ ನವೀನ್ ಮಾರ್ಕೆಟ್ ಮತ್ತು ಬಡಾ ಚೌರಾಹಾವನ್ನು ತಲುಪುವುದು ಸುಲಭವಾಗುತ್ತದೆ. ಕಾನ್ಪುರಕ್ಕೆ ಮತ್ತು ಅಲ್ಲಿಂದ ಪ್ರಯಾಣಿಸುವ ಜನರು - IIT ವಿದ್ಯಾರ್ಥಿಗಳು, ಸಾಮಾನ್ಯ ನಾಗರಿಕರು - ಸೆಂಟ್ರಲ್ ರೈಲ್ವೇ ನಿಲ್ದಾಣವನ್ನು ತಲುಪಲು ಗಣನೀಯ ಸಮಯವನ್ನು ಉಳಿಸುತ್ತಾರೆ. ನಗರದ ವೇಗವೇ ಅದರ ಪ್ರಗತಿಯನ್ನು ನಿರ್ಧರಿಸುತ್ತದೆ ಎಂದು ನಮಗೆ ತಿಳಿದಿದೆ. ಈ ಸೌಲಭ್ಯಗಳು, ಈ ಸಂಪರ್ಕ ಮತ್ತು ಆಧುನಿಕ ಸಾರಿಗೆ ಮೂಲಸೌಕರ್ಯ ಈಗ ಉತ್ತರ ಪ್ರದೇಶದ ಅಭಿವೃದ್ಧಿಯ ಹೊಸ ಮುಖವಾಗಿದೆ.

ಸ್ನೇಹಿತರೇ,

ಇಂದು ನಮ್ಮ ಉತ್ತರ ಪ್ರದೇಶವು ಆಧುನಿಕ ಮೂಲಸೌಕರ್ಯ ಮತ್ತು ಸಂಪರ್ಕದ ವಿಷಯದಲ್ಲಿ ಭಾರಿ ಪ್ರಗತಿ ಸಾಧಿಸುತ್ತಿದೆ. ಒಡೆದ ರಸ್ತೆಗಳು ಮತ್ತು ಗುಂಡಿಗಳಿಗೆ ಕುಖ್ಯಾತವಾಗಿದ್ದ ರಾಜ್ಯವು ಈಗ ಎಕ್ಸ್ಪ್ರೆಸ್ವೇಗಳ ಜಾಲದಿಂದ ಗುರುತಿಸಲ್ಪಡುತ್ತಿದೆ. ಹಿಂದೆ ಕತ್ತಲಾದ ನಂತರ ಹೊರಗೆ ಹೋಗಲು ಜನರು ಹಿಂಜರಿಯುತ್ತಿದ್ದ ಅದೇ ಉತ್ತರ ಪ್ರದೇಶದಲ್ಲಿ, ಇಂದು ಹೆದ್ದಾರಿಗಳು ದಿನದ 24 ಗಂಟೆಯೂ ವಾಹನ ಸಂಚಾರದಿಂದ ಗಿಜಿಗುಡುತ್ತಿವೆ. ಮತ್ತು ಉತ್ತರ ಪ್ರದೇಶ ಎಷ್ಟು ಬದಲಾಗಿದೆ ಎಂಬುದನ್ನು ಕಾನ್ಪುರದ ಜನರಿಗಿಂತ ಚೆನ್ನಾಗಿ ಯಾರು ಅರ್ಥಮಾಡಿಕೊಳ್ಳಬಲ್ಲರು? ಕೇವಲ ಕೆಲವೇ ದಿನಗಳಲ್ಲಿ, ಕಾನ್ಪುರ-ಲಕ್ನೋ ಎಕ್ಸ್ಪ್ರೆಸ್ವೇಯಿಂದ ಕಾನ್ಪುರದಿಂದ ಲಕ್ನೋಗೆ ಪ್ರಯಾಣಿಸಲು ಕೇವಲ 40 ರಿಂದ 45 ನಿಮಿಷಗಳು ಬೇಕಾಗುತ್ತವೆ. ಈ ಮಗಳು ಬಹಳ ಹೊತ್ತಿನಿಂದ ಚಿತ್ರ ಹಿಡಿದುಕೊಂಡು ನಿಂತಿದ್ದಾಳೆ - ಅವಳು ದಣಿದಿರಬೇಕು. SPG ಸಿಬ್ಬಂದಿಯವರು, ದಯವಿಟ್ಟು ಅವಳಿಂದ ಚಿತ್ರವನ್ನು ತೆಗೆದುಕೊಳ್ಳಿ. ಧನ್ಯವಾದಗಳು ಮಗುವೇ, ನೀನು ತಂದಿರುವ ಚಿತ್ರವು ತುಂಬಾ ಸುಂದರವಾಗಿದೆ ಮತ್ತು ಅದ್ಭುತವಾಗಿದೆ. ನೀನು ನಿನ್ನ ಹೆಸರು ಮತ್ತು ವಿಳಾಸವನ್ನು ಬರೆದಿದ್ದೀಯಾ, ಸರಿ ತಾನೇ? ನನ್ನ ಕಚೇರಿಯಿಂದ ಯಾರಾದರೂ ಅದನ್ನು ಪಡೆದುಕೊಂಡು ನನಗೆ ತಲುಪಿಸುತ್ತಾರೆ. ನಿಮಗೆ ತುಂಬಾ ಧನ್ಯವಾದಗಳು ಕಂದ.

 

ಸ್ನೇಹಿತರೇ,

ಲಕ್ನೋದಿಂದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ ವೇಗೆ ನೇರ ಸಂಪರ್ಕವು ದೊರೆಯಲಿದೆ. ಕಾನ್ಪುರ-ಲಕ್ನೋ ಎಕ್ಸ್‌ಪ್ರೆಸ್‌ ವೇ ವೇಯನ್ನು ಗಂಗಾ ಎಕ್ಸ್‌ಪ್ರೆಸ್‌ ವೇಗೂ ಜೋಡಿಸಲಾಗುವುದು. ಇದು ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕಡೆಗಿನ ಪ್ರಯಾಣದ ದೂರ ಮತ್ತು ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಸ್ನೇಹಿತರೇ,

ಕಾನ್ಪುರದ ಜನರು ಫರೂಖಾಬಾದ್-ಅನ್ವರ್ಗಂಜ್ ಮಾರ್ಗದಲ್ಲಿ ಏಕ ರೈಲ್ವೆ ಹಳಿ ಇದ್ದುದರಿಂದ ಬಹಳ ಕಾಲ ತೊಂದರೆ ಅನುಭವಿಸಿದ್ದಾರೆ. ಒಂದೆರಡಲ್ಲ, ಬರೋಬ್ಬರಿ 18 ರೈಲ್ವೆ ಕ್ರಾಸಿಂಗ್ಗಳನ್ನು ದಾಟಬೇಕಿತ್ತು. ಕೆಲವೊಮ್ಮೆ ಒಂದು ಗೇಟ್ ಮುಚ್ಚುತ್ತಿತ್ತು, ಕೆಲವೊಮ್ಮೆ ಇನ್ನೊಂದು - ಈ ಸಮಸ್ಯೆಯಿಂದ ನಿಮಗೆಲ್ಲಾ ಬಹಳ ದಿನಗಳಿಂದ ಮುಕ್ತಿ ಬೇಕಿತ್ತು. ಈಗ ಇಲ್ಲಿ 1,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎತ್ತರಿಸಿದ ರೈಲು ಮಾರ್ಗವನ್ನು ನಿರ್ಮಿಸಲಾಗುವುದು. ಇದು ಸಂಚಾರವನ್ನು ಸುಧಾರಿಸುತ್ತದೆ, ವೇಗವನ್ನು ಹೆಚ್ಚಿಸುತ್ತದೆ, ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಮುಖ್ಯವಾಗಿ ಕಾನ್ಪುರದ ಜನರ ಅಮೂಲ್ಯ ಸಮಯವನ್ನು ಉಳಿಸುತ್ತದೆ.

ಸ್ನೇಹಿತರೇ,

ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ಸಹ ಮೇಲ್ದರ್ಜೆಗೇರಿಸಲಾಗುತ್ತಿದೆ ಮತ್ತು ವಿಶ್ವದರ್ಜೆಯ ನೋಟವನ್ನು ನೀಡಲಾಗುತ್ತಿದೆ. ಬಹುಬೇಗನೆ, ಕಾನ್ಪುರ ಸೆಂಟ್ರಲ್ ವಿಮಾನ ನಿಲ್ದಾಣದಷ್ಟು ಆಧುನಿಕವಾಗಿ ಕಾಣಲಿದೆ. ನಮ್ಮ ಸರ್ಕಾರವು ಅಮೃತ್ ಭಾರತ್ ರೈಲ್ವೆ ನಿಲ್ದಾಣ ಯೋಜನೆಯ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ 150 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದೆ. ಉತ್ತರ ಪ್ರದೇಶವು ಈಗಾಗಲೇ ದೇಶದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿದೆ. ಇದರರ್ಥ - ಹೆದ್ದಾರಿಗಳು, ರೈಲ್ವೆಗಳು ಮತ್ತು ವಿಮಾನ ಮಾರ್ಗಗಳು - ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತರ ಪ್ರದೇಶವು ಈಗ ವೇಗವಾಗಿ ಪ್ರಗತಿ ಸಾಧಿಸುತ್ತಿದೆ.

ಸ್ನೇಹಿತರೇ,

ನಾವು ಉತ್ತರ ಪ್ರದೇಶವನ್ನು ಕೈಗಾರಿಕಾ ಅವಕಾಶಗಳ ತಾಣವಾಗಿ ಪರಿವರ್ತಿಸುತ್ತಿದ್ದೇವೆ. ಈ ವರ್ಷದ ಬಜೆಟ್ನಲ್ಲಿ, ನಾವು 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ 'ಮಿಷನ್ ಮ್ಯಾನುಫ್ಯಾಕ್ಚರಿಂಗ್' ಉಪಕ್ರಮವನ್ನು ಘೋಷಿಸಿದ್ದೇವೆ. ಇದರ ಮೂಲಕ ಸ್ಥಳೀಯ ಕೈಗಾರಿಕೆಗಳು ಮತ್ತು ಉತ್ಪಾದನೆಗೆ ಉತ್ತೇಜನ ನೀಡಲಾಗುವುದು. ಕಾನ್ಪುರದಂತಹ ನಗರಗಳು ಇದರಿಂದ ಬಹಳಷ್ಟು ಲಾಭ ಪಡೆಯುತ್ತವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ, ಕಾನ್ಪುರದ ಕೈಗಾರಿಕಾ ಸಾಮರ್ಥ್ಯಕ್ಕೆ ಅತಿ ದೊಡ್ಡ ಕೊಡುಗೆ ಅದರ MSME ಗಳಿಂದ ಬಂದಿದೆ - ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ಕೈಗಾರಿಕೆಗಳು. ಇಂದು, ನಾವು ಇಲ್ಲಿನ ಈ ಸಣ್ಣ ಕೈಗಾರಿಕೆಗಳ ಆಶಯಗಳನ್ನು ಈಡೇರಿಸಲು ಕಾರ್ಯನಿರ್ವಹಿಸುತ್ತಿದ್ದೇವೆ.

 

ಸ್ನೇಹಿತರೇ,

ಇತ್ತೀಚಿನವರೆಗೂ, ನಮ್ಮ MSME ಗಳನ್ನು ವ್ಯಾಖ್ಯಾನಿಸಿದ ರೀತಿ ಹೇಗಿತ್ತೆಂದರೆ ಅವು ವಿಸ್ತರಣೆಗೆ ಹೆದರುವಂತಿದ್ದವು. ನಾವು ಆ ಹಳೆಯ ವ್ಯಾಖ್ಯಾನಗಳನ್ನು ಬದಲಾಯಿಸಿದ್ದೇವೆ. ಸಣ್ಣ ಕೈಗಾರಿಕೆಗಳಿಗೆ ವಹಿವಾಟು ಮತ್ತು ಗಾತ್ರದ ಮಿತಿಗಳನ್ನು ಹೆಚ್ಚಿಸಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ, ಸರ್ಕಾರವು MSME ಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ ಮತ್ತು ಅವುಗಳಿಗೆ ಹೆಚ್ಚುವರಿ ವಿನಾಯಿತಿಗಳನ್ನು ನೀಡಿದೆ. ಹಿಂದೆ, MSME ಗಳು ಎದುರಿಸುತ್ತಿದ್ದ ದೊಡ್ಡ ಸವಾಲುಗಳಲ್ಲಿ ಒಂದು ಸಾಲ ಪಡೆಯುವುದು. ಕಳೆದ 10 ವರ್ಷಗಳಲ್ಲಿ, ನಾವು ಈ ಸಮಸ್ಯೆಯನ್ನು ಪರಿಹರಿಸಲು ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈಗ, ಯುವ ಉದ್ಯಮಿಗಳು ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸಲು ಬಯಸಿದರೆ, ಅವರು ಮುದ್ರಾ ಯೋಜನೆಯ ಮೂಲಕ ಸುಲಭವಾಗಿ ಬಂಡವಾಳವನ್ನು ಪಡೆಯಬಹುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಆರ್ಥಿಕವಾಗಿ ಬಲಪಡಿಸಲು, ನಾವು ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಪರಿಚಯಿಸಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ, MSME ಸಾಲಗಳ ಮೇಲಿನ ಗ್ಯಾರಂಟಿ ಮಿತಿಯನ್ನು 20 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. MSME ಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಮಿತಿಯನ್ನು ಹೊಂದಿರುವ ಕ್ರೆಡಿಟ್ ಕಾರ್ಡ್ಗಳನ್ನು ಸಹ ನೀಡಲಾಗುತ್ತಿದೆ. ಕಾರ್ಯವಿಧಾನಗಳನ್ನು ಸರಳಗೊಳಿಸುವ ಮೂಲಕ ನಾವು ಹೊಸ ಕೈಗಾರಿಕೆಗಳಿಗೆ - ವಿಶೇಷವಾಗಿ MSME ಗಳಿಗೆ - ಪೂರಕ ವಾತಾವರಣವನ್ನು ಸೃಷ್ಟಿಸುತ್ತಿದ್ದೇವೆ. 'ಒಂದು ಜಿಲ್ಲೆ, ಒಂದು ಉತ್ಪನ್ನ' ದಂತಹ ಯೋಜನೆಗಳ ಮೂಲಕ ಕಾನ್ಪುರದ ಸಾಂಪ್ರದಾಯಿಕ ಚರ್ಮ ಮತ್ತು ಹೆಣೆದ ಉಡುಪುಗಳ ಕೈಗಾರಿಕೆಗಳನ್ನು ಬಲಪಡಿಸಲಾಗುತ್ತಿದೆ. ಈ ಪ್ರಯತ್ನಗಳು ಕೇವಲ ಕಾನ್ಪುರಕ್ಕೆ ಮಾತ್ರವಲ್ಲ, ಉತ್ತರ ಪ್ರದೇಶದ ಪ್ರತಿಯೊಂದು ಜಿಲ್ಲೆಗೂ ಪ್ರಯೋಜನವನ್ನು ನೀಡುತ್ತವೆ.

 

ಸ್ನೇಹಿತರೇ,

ಇಂದು ಉತ್ತರ ಪ್ರದೇಶದಲ್ಲಿ ಹೂಡಿಕೆಗೆ ಅಭೂತಪೂರ್ವ ಮತ್ತು ಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ. ಬಡವರಿಗಾಗಿ ಕಲ್ಯಾಣ ಯೋಜನೆಗಳನ್ನು ಸಂಪೂರ್ಣ ಪಾರದರ್ಶಕತೆಯಿಂದ ಕಾರ್ಯಗತಗೊಳಿಸಲಾಗುತ್ತಿದೆ. ಮಧ್ಯಮ ವರ್ಗದವರ ಆಸೆಗಳನ್ನು ನನಸು ಮಾಡಲು ಸರ್ಕಾರವು ಅವರೊಂದಿಗೆ ದೃಢವಾಗಿ ನಿಂತಿದೆ. ಈ ವರ್ಷದ ಬಜೆಟ್ ನಲ್ಲಿ, ನಾವು 12 ಲಕ್ಷ ರೂಪಾಯಿಗಳವರೆಗಿನ ಆದಾಯವನ್ನು ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸಿದ್ದೇವೆ. ಇದು ಕೋಟ್ಯಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಹೊಸ ಆತ್ಮವಿಶ್ವಾಸವನ್ನು ನೀಡಿದೆ ಮತ್ತು ಅವರನ್ನು ಮತ್ತಷ್ಟು ಬಲಪಡಿಸಿದೆ. ‘ಸೇವೆ’ ಮತ್ತು ‘ವಿಕಾಸ’ (ಅಭಿವೃದ್ಧಿ) ಕ್ಕೆ ನಮ್ಮ ಬದ್ಧತೆಯೊಂದಿಗೆ, ನಾವು ವೇಗವಾಗಿ ಮುನ್ನಡೆಯುವುದನ್ನು ಮುಂದುವರಿಸುತ್ತೇವೆ. ದೇಶವನ್ನು - ಮತ್ತು ಉತ್ತರ ಪ್ರದೇಶವನ್ನು - ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಉಜ್ವಲ ಭವಿಷ್ಯಕ್ಕಾಗಿ ಕಾನ್ಪುರದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೂ ನನ್ನ ಶುಭ ಹಾರೈಕೆಗಳು.

ತುಂಬಾ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Rolls-Royce to expand footprint across India's air, land, sea domains

Media Coverage

Rolls-Royce to expand footprint across India's air, land, sea domains
NM on the go

Nm on the go

Always be the first to hear from the PM. Get the App Now!
...
Prime Minister congratulates Prime Minister Mia Amor Mottley on her historic third consecutive electoral victory in Barbados
February 13, 2026

The Prime Minister, Shri Narendra Modi congratulated Prime Minister Mia Amor Mottley, on her historic third consecutive electoral victory in Barbados. Shri Modi added that India deeply values its long-standing friendship with Barbados, which continues to expand across diverse areas of cooperation. "I warmly recall our meeting on the sidelines of the India-CARICOM Summit in 2024 and look forward to working closely with her to further strengthen our partnership for the benefit of our peoples", Shri Modi said.

Shri Modi posted on X:

"Warm congratulations to Prime Minister Mia Amor Mottley on her historic third consecutive electoral victory.

India deeply values its long-standing friendship with Barbados, which continues to expand across diverse areas of cooperation.

I warmly recall our meeting on the sidelines of the India-CARICOM Summit in 2024 and look forward to working closely with her to further strengthen our partnership for the benefit of our peoples."

@miaamormottley