Today, India is the fastest growing major economy:PM
Government is following the mantra of Reform, Perform and Transform:PM
Government is committed to carrying out structural reforms to make India developed:PM
Inclusion taking place along with growth in India:PM
India has made ‘process reforms’ a part of the government's continuous activities:PM
Today, India's focus is on critical technologies like AI and semiconductors:PM
Special package for skilling and internship of youth:PM

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಜಿ, ಆರ್ಥಿಕ ಬೆಳವಣಿಗೆ ಸಂಸ್ಥೆಯ ಅಧ್ಯಕ್ಷ ಎನ್.ಕೆ. ಸಿಂಗ್ ಜಿ, ಸಮ್ಮೇಳನದಲ್ಲಿ ಭಾಗವಹಿಸಿರುವ ಭಾರತ ಮತ್ತು ವಿದೇಶಗಳ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೇ! ಇದು ಕೌಟಿಲ್ಯ ಸಮ್ಮೇಳನದ 3ನೇ ಆವೃತ್ತಿಯಾಗಿದೆ. ನಿಮ್ಮೆಲ್ಲರನ್ನು ಇಲ್ಲಿ ಭೇಟಿಯಾಗುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಇಲ್ಲಿ ಹಲವಾರು ಅಧಿವೇಶನಗಳು ನಡೆಯಲಿದ್ದು, ಮುಂದಿನ 3 ದಿನಗಳಲ್ಲಿ ವಿವಿಧ ಆರ್ಥಿಕ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಈ ಚರ್ಚೆಗಳು ಭಾರತದ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತವೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಜಗತ್ತಿನ 2 ಪ್ರಮುಖ ಪ್ರದೇಶಗಳು ಯುದ್ಧದ ಸ್ಥಿತಿಯಲ್ಲಿ ಇರುವ ಸಮಯದಲ್ಲೇ ಈ ಸಮ್ಮೇಳನ ಆಯೋಜಿಸಲಾಗಿದೆ. ಈ ಪ್ರದೇಶಗಳು ಜಾಗತಿಕ ಆರ್ಥಿಕತೆಗೆ ನಿರ್ಣಾಯಕವಾಗಿವೆ, ವಿಶೇಷವಾಗಿ ಇಂಧನ ಭದ್ರತೆಯ ವಿಷಯದಲ್ಲಿ. ಇಂತಹ ಮಹತ್ವದ ಜಾಗತಿಕ ಅನಿಶ್ಚಿಯದ ನಡುವೆ, ನಾವು ‘ಭಾರತದ ಯುಗ’ವನ್ನು ಚರ್ಚಿಸಲು ಇಲ್ಲಿ ಸೇರಿದ್ದೇವೆ. ಇಂದು ಭಾರತದಲ್ಲಿರುವ ನಂಬಿಕೆ ಅನನ್ಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತದ ಆತ್ಮವಿಶ್ವಾಸವು ಅಸಾಧಾರಣವಾಗಿದೆ ಎಂಬುದನ್ನು ಸಹ ಇದು ತೋರಿಸುತ್ತದೆ.

ಸ್ನೇಹಿತರೆ,

ಭಾರತವು ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಭಾರತವು ಪ್ರಸ್ತುತ ಜಿಡಿಪಿಯಲ್ಲಿ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಜಾಗತಿಕ ಹಣಕಾಸು ತಂತ್ರಜ್ಞಾನ ಅಳವಡಿಕೆ ದರಗಳಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಇಂದು ನಾವು ಸ್ಮಾರ್ಟ್‌ಫೋನ್ ಡೇಟಾ ಬಳಕೆಯಲ್ಲಿ ನಂಬರ್ 1 ಆಗಿದ್ದೇವೆ. ನಾವು ಜಾಗತಿಕವಾಗಿ 2ನೇ ಅತಿದೊಡ್ಡ ಇಂಟರ್ನೆಟ್ ಬಳಕೆದಾರರ ನೆಲೆ ಹೊಂದಿದ್ದೇವೆ. ವಿಶ್ವದ ಅರ್ಧದಷ್ಟು ನೈಜ-ಸಮಯದ ಡಿಜಿಟಲ್ ವಹಿವಾಟುಗಳು ಇಂದು ಭಾರತದಲ್ಲಿ ನಡೆಯುತ್ತಿವೆ. ಭಾರತ ಈಗ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿಷಯದಲ್ಲಿ, ಭಾರತವು 4ನೇ ಸ್ಥಾನದಲ್ಲಿದೆ. ಉತ್ಪಾದನೆಯ ವಿಷಯಕ್ಕೆ ಬಂದಾಗ, ಭಾರತ 2ನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ದೇಶವಾಗಿದೆ. ಭಾರತವು ದ್ವಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವೂ ಆಗಿದೆ. ಅಷ್ಟೇ ಅಲ್ಲ, ಭಾರತವು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಯುವ ಸಮುದಾಯ ಹೊಂದಿರುವ ದೇಶವಾಗಿದೆ. ಭಾರತವು ಜಾಗತಿಕವಾಗಿ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಮೂಹವನ್ನು ಹೊಂದಿರುವ 3ನೇ ಅತಿದೊಡ್ಡ ದೇಶವಾಗಿದೆ. ಅದು ವಿಜ್ಞಾನವೇ ಆಗಲಿ, ತಂತ್ರಜ್ಞಾನವೇ ಆಗಲಿ ಅಥವಾ ನಾವೀನ್ಯತೆಯೇ ಆಗಿರಲಿ, ಭಾರತವು ಸ್ಪಷ್ಟವಾಗಿ ಅಗ್ರ ಸ್ಥಾನದಲ್ಲಿದೆ.

 

ಸ್ನೇಹಿತರೆ,

'ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ' ಎಂಬ ಮಂತ್ರವನ್ನು ಅನುಸರಿಸುವ ಮೂಲಕ, ನಾವು ರಾಷ್ಟ್ರವನ್ನು ತ್ವರಿತ ಗತಿಯಲ್ಲಿ ಮುನ್ನಡೆಸಲು ನಿರಂತರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. 60 ವರ್ಷಗಳ ನಂತರ ಭಾರತದ ಜನರು ಸತತ 3ನೇ ಬಾರಿಗೆ ಅದೇ ಸರ್ಕಾರವನ್ನು ಆಯ್ಕೆ ಮಾಡಿದ ಪರಿಣಾಮ ಇದು. ಜನರ ಬದುಕು ಬದಲಾದಾಗ ದೇಶ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂಬ ವಿಶ್ವಾಸ ಮೂಡುತ್ತದೆ. ಈ ಭಾವನೆಯು ಭಾರತದ ಸಾರ್ವಜನಿಕರ ಆದೇಶದಲ್ಲಿ ಪ್ರತಿಫಲಿಸುತ್ತದೆ. 140 ಕೋಟಿ ನಾಗರಿಕರ ನಂಬಿಕೆ ಈ ಸರ್ಕಾರದ ದೊಡ್ಡ ಆಸ್ತಿಯಾಗಿದೆ.

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ರಚನಾತ್ಮಕ ಸುಧಾರಣೆಗಳನ್ನು ಮಾಡುವುದನ್ನು ಮುಂದುವರಿಸುವುದು ನಮ್ಮ ಬದ್ಧತೆಯಾಗಿದೆ. ನಮ್ಮ 3ನೇ ಅವಧಿಯ ಮೊದಲ 3 ತಿಂಗಳಲ್ಲಿ ನಾವು ಮಾಡಿದ ಕೆಲಸದಲ್ಲಿ ಈ ಬದ್ಧತೆಯನ್ನು ನೀವು ನೋಡಬಹುದು. ದಿಟ್ಟ ನೀತಿ ಬದಲಾವಣೆಗಳು, ಉದ್ಯೋಗಗಳು ಮತ್ತು ಕೌಶಲ್ಯಗಳಿಗೆ ಬಲವಾದ ಬದ್ಧತೆ, ಸುಸ್ಥಿರ ಬೆಳವಣಿಗೆ ಮತ್ತು ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಿಸುವುದು, ಆಧುನಿಕ ಮೂಲಸೌಕರ್ಯ, ಜೀವನ ಗುಣಮಟ್ಟ ಮತ್ತು ತ್ವರಿತ ಬೆಳವಣಿಗೆಯ ನಿರಂತರತೆಯು ನಮ್ಮ ಮೊದಲ 3 ತಿಂಗಳ ನೀತಿಗಳಲ್ಲಿ ಪ್ರತಿಫಲಿಸುತ್ತಿದೆ. ಈ ಅವಧಿಯಲ್ಲಿ ಅಂದರೆ 15 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ 3 ತಿಂಗಳಲ್ಲೇ ಭಾರತದಲ್ಲಿ ಹಲವಾರು ಬೃಹತ್ ಮೂಲಸೌಕರ್ಯ ಯೋಜನೆಗಳ ಕೆಲಸ ಆರಂಭವಾಗಿದೆ. ನಾವು ದೇಶಾದ್ಯಂತ 12 ಕೈಗಾರಿಕಾ ಪ್ರದೇಶ(ನೋಡ್‌)ಗಳನ್ನು ನಿರ್ಮಿಸಲು ನಿರ್ಧರಿಸಿದ್ದೇವೆ. ಹೆಚ್ಚುವರಿಯಾಗಿ, ನಾವು 3 ಕೋಟಿ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದೇವೆ.

ಸ್ನೇಹಿತರೆ,

ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮನೋಭಾವ. ಬೆಳವಣಿಗೆ ಆದರೆ ಅಸಮಾನತೆ ಬರುತ್ತದೆ ಎಂದು ಒಮ್ಮೆ ನಂಬಲಾಗುತ್ತಿತ್ತು. ಆದರೆ ಭಾರತ ದೇಶದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ನಡೆಯುತ್ತಿದೆ. ಭಾರತದಲ್ಲಿ ಬೆಳವಣಿಗೆಯ ಜೊತೆಗೆ ಹಣಕಾಸು ಸೇರ್ಪಡೆಯೂ ಆಗುತ್ತಿದೆ. ಇದರ ಪರಿಣಾಮವಾಗಿ ಕಳೆದ 10 ವರ್ಷಗಳಲ್ಲಿ 250 ದಶಲಕ್ಷ ಅಂದರೆ 25 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ. ಭಾರತದ ಕ್ಷಿಪ್ರ ಪ್ರಗತಿಯ ಜತೆಗೆ, ಅಸಮಾನತೆ ಕಡಿಮೆಯಾಗಿದೆ, ಅಭಿವೃದ್ಧಿಯ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ.

ಸ್ನೇಹಿತರೆ,

ಭಾರತದ ಬೆಳವಣಿಗೆಯ ಮುನ್ನೋಟಗಳ ವಿಶ್ವಾಸವು ನಾವು ಸಾಗುತ್ತಿರುವ ದಿಕ್ಕನ್ನು ಸಹ ತೋರಿಸುತ್ತಿದೆ. ಇತ್ತೀಚಿನ ವಾರಗಳು ಮತ್ತು ತಿಂಗಳ ದತ್ತಾಂಶದಲ್ಲಿ ನೀವು ಇದನ್ನು ನೋಡಬಹುದು. ಕಳೆದ ವರ್ಷ, ನಮ್ಮ ಆರ್ಥಿಕತೆಯು ಯಾವುದೇ ಭವಿಷ್ಯಕ್ಕಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಿತು. ಅದು ವಿಶ್ವ ಬ್ಯಾಂಕ್ ಆಗಿರಲಿ, ಐಎಂಎಫ್ ಆಗಿರಲಿ ಅಥವಾ ಮೂಡೀಸ್ ವರದಿಯೇ ಆಗಿರಲಿ, ಎಲ್ಲರೂ ಭಾರತಕ್ಕಾಗಿ ತಮ್ಮ ಮುನ್ಸೂಚನೆಗಳನ್ನು ಪರಿಷ್ಕರಿಸಿದ್ದಾರೆ. ಈ ಎಲ್ಲಾ ಸಂಸ್ಥೆಗಳು ಜಾಗತಿಕ ಅನಿಶ್ಚಯದ ಹೊರತಾಗಿಯೂ ಭಾರತದ ಜಿಡಿಪಿ 7+% ದರದಲ್ಲಿ ಬೆಳವಣಿಗೆ ಮುಂದುವರಿಸುತ್ತದೆ ಎಂದು ಹೇಳುತ್ತಿವೆ. ನಾವು ಭಾರತೀಯರು ಅದಕ್ಕಿಂತಲೂ ಉತ್ತಮ ಪ್ರದರ್ಶನ ನೀಡುತ್ತೇವೆ ಎಂಬ ವಿಶ್ವಾಸವಿದೆ.

ಸ್ನೇಹಿತರೆ,

ಭಾರತದ ಮೇಲಿನ ಈ ವಿಶ್ವಾಸದ ಹಿಂದೆ ಸದೃಢವಾದ ಕಾರಣಗಳಿವೆ. ಉತ್ಪಾದನೆಯೇ ಆಗಿರಲಿ ಅಥವಾ ಸೇವಾ ವಲಯವೇ ಆಗಿರಲಿ, ಇಂದು ಜಗತ್ತು ಭಾರತವನ್ನು ಹೂಡಿಕೆಗೆ ಆದ್ಯತೆಯ ತಾಣವಾಗಿ ನೋಡುತ್ತಿದೆ. ಇದು ಕಾಕತಾಳೀಯವಲ್ಲ, ಆದರೆ ಕಳೆದ 10 ವರ್ಷಗಳಲ್ಲಿ ಆಗಿರುವ ಪ್ರಮುಖ ಸುಧಾರಣೆಗಳ ಫಲಿತಾಂಶ ಇದಾಗಿದೆ. ಈ ಸುಧಾರಣೆಗಳು ಭಾರತದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳನ್ನು ಪರಿವರ್ತಿಸಿವೆ. ಒಂದು ಉದಾಹರಣೆಯೆಂದರೆ, ಭಾರತದ ಬ್ಯಾಂಕಿಂಗ್ ಸುಧಾರಣೆಗಳು ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿಗಳನ್ನು ಬಲಪಡಿಸುವುದು ಮಾತ್ರವಲ್ಲದೆ, ಅವುಗಳ ಸಾಲ ನೀಡುವ ಸಾಮರ್ಥ್ಯವನ್ನು ಹೆಚ್ಚಿಸಿವೆ. ಅಂತೆಯೇ, ಜಿಎಸ್‌ಟಿಯು ವಿವಿಧ ಕೇಂದ್ರ ಮತ್ತು ರಾಜ್ಯಗಳ ಪರೋಕ್ಷ ತೆರಿಗೆಗಳನ್ನು ಸಂಯೋಜಿಸಿದೆ. ದಿವಾಳಿತನ ಮತ್ತು ಋಣಭಾರ ಸಂಕೇತ(ಐಬಿಸಿ)ದ ಜವಾಬ್ದಾರಿ, ಚೇತರಿಕೆ ಮತ್ತು ನಿರ್ಣಯದ ಹೊಸ ಸಾಲಸಂಸ್ಕೃತಿಯನ್ನು ಅಭಿವೃದ್ಧಿಪಡಿಸಿದೆ. ಭಾರತದ ಗಣಿಗಾರಿಕೆ, ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳು  ಖಾಸಗಿ ಪಾಲುದಾರರಿಗೆ ಮತ್ತು ನಮ್ಮ ಯುವ ಉದ್ಯಮಿಗಳಿಗೆ ತೆರೆದಿವೆ. ವಿಶ್ವಾದ್ಯಂತ ಹೂಡಿಕೆದಾರರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸಲು ನಾವು ಎಫ್‌ಡಿಐ ನೀತಿಯನ್ನು ಉದಾರಗೊಳಿಸಿದ್ದೇವೆ. ಸರಕು ಸಾಗಣೆ ವೆಚ್ಚ ಮತ್ತು ಸಮಯ ಕಡಿಮೆ ಮಾಡಲು ನಾವು ಆಧುನಿಕ ಮೂಲಸೌಕರ್ಯಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಕಳೆದ ದಶಕದಲ್ಲಿ ನಾವು ಮೂಲಸೌಕರ್ಯ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿದ್ದೇವೆ.

 

ಸ್ನೇಹಿತರೆ,

ಭಾರತವು ಸರ್ಕಾರವು ಸುಧಾರಣೆ ಪ್ರಕ್ರಿಯೆಗಳನ್ನು ತನ್ನ ಉಪಕ್ರಮಗಳಲ್ಲಿ ಸಂಯೋಜಿಸಿದೆ. ನಾವು 40,000ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಿದ್ದೇವೆ ಮತ್ತು ಕಂಪನಿಗಳ ಕಾಯಿದೆಯನ್ನು ಅಪರಾಧ ಮುಕ್ತಗೊಳಿಸಿದ್ದೇವೆ. ಹಿಂದಿನ ಕಷ್ಟಕರ ವ್ಯಾಪಾರ ಕಾರ್ಯಾಚರಣೆಗಳ ಹಲವಾರು ನಿಬಂಧನೆಗಳಿಗೆ ತಿದ್ದುಪಡಿ ತಂದಿದ್ದೇವೆ. ಕಂಪನಿಗಳ ಪ್ರಾರಂಭ, ಮುಚ್ಚುವಿಕೆ ಮತ್ತು ಅನುಮತಿಗಳನ್ನು ಪಡೆಯುವ ಪ್ರಕ್ರಿಯೆಗಳನ್ನು ಸರಳಗೊಳಿಸಲು ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆ ಪರಿಚಯಿಸಲಾಗಿದೆ. ಈಗ, ರಾಜ್ಯ ಮಟ್ಟದಲ್ಲಿ ಸುಧಾರಣೆಪ್ರಕ್ರಿಯೆ ಗಳನ್ನು ವೇಗಗೊಳಿಸಲು ನಾವು ರಾಜ್ಯ ಸರ್ಕಾರಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ.

ಸ್ನೇಹಿತರೆ,

ಭಾರತದಲ್ಲಿ ಉತ್ಪಾದನೆ ಅಥವಾ ತಯಾರಿಕೆ ಉತ್ತೇಜಿಸಲು, ನಾವು ಉತ್ಪಾದನೆ ಸಂಪರ್ತಿಕ ಉತ್ತೇಜನಾ ಯೋಜನೆ(ಪಿಎಲ್‌ಐ)ಯನ್ನು ಪರಿಚಯಿಸಿದ್ದೇವೆ. ಇದರ ಪರಿಣಾಮವು ಈಗ ಹಲವು ವಲಯಗಳಲ್ಲಿ ಗೋಚರಿಸುತ್ತಿದೆ. ಕಳೆದ 3 ವರ್ಷಗಳಲ್ಲಿ ಪಿಎಲ್ಐ ಸುಮಾರು 1.25 ಲಕ್ಷ ಕೋಟಿ ರೂ.  ಹೂಡಿಕೆ ಆಕರ್ಷಿಸಿದೆ. ಇದರಿಂದ ಸುಮಾರು 11 ಲಕ್ಷ ಕೋಟಿ ರೂ. ಮೊತ್ತದ ಉತ್ಪಾದನೆ ಮತ್ತು ಮಾರಾಟವಾಗಿದೆ. ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯು ಗಮನಾರ್ಹವಾಗಿದೆ. ಈ ವಲಯಗಳನ್ನು ಇತ್ತೀಚೆಗೆ ತೆರೆಯಲಾಗಿದೆ, ಇನ್ನೂ 200ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊರಹೊಮ್ಮಿವೆ. ಇಂದು, ನಮ್ಮ ಖಾಸಗಿ ರಕ್ಷಣಾ ಕಂಪನಿಗಳು ದೇಶದ ಒಟ್ಟು ರಕ್ಷಣಾ ಉತ್ಪಾದನೆಯಲ್ಲಿ 20 ಪ್ರತಿಶತ ಪಾಲು ಹೊಂದಿವೆ.

ಸ್ನೇಹಿತರೆ,

ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬೆಳವಣಿಗೆ ಇನ್ನೂ ಗಮನಾರ್ಹವಾಗಿದೆ. ಕೇವಲ 10 ವರ್ಷಗಳ ಹಿಂದೆ, ಭಾರತವು ಹೆಚ್ಚಿನ ಮೊಬೈಲ್ ಫೋನ್‌ಗಳ ಪ್ರಮುಖ ಆಮದುದಾರ ರಾಷ್ಟ್ರವಾಗಿತ್ತು. ಆದರೆ ಇಂದು, ಭಾರತದಲ್ಲಿ 330 ದಶಲಕ್ಷ  ಅಥವಾ 33 ಕೋಟಿಗೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ತಯಾರಿಸಲಾಗುತ್ತಿದೆ. ವಾಸ್ತವವಾಗಿ, ನೀವು ಯಾವುದೇ ವಲಯವನ್ನು ನೋಡಿದರೂ, ಭಾರತದಲ್ಲಿ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಮತ್ತು ಹೆಚ್ಚಿನ ಆದಾಯ ಗಳಿಸಲು ಅಸಾಧಾರಣ ಅವಕಾಶಗಳಿವೆ.

ಸ್ನೇಹಿತರೆ,

ಭಾರತ ಈಗ ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್‌ಗಳಂತಹ ನಿರ್ಣಾಯಕ ತಂತ್ರಜ್ಞಾನಗಳ ಮೇಲೆ ಗಮನಕೇಂದ್ರೀಕರಿಸುತ್ತಿದೆ, ನಾವು ಈ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಎಐ ಮಿಷನ್ ಎಐ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿ ಎರಡನ್ನೂ ಹೆಚ್ಚಿಸುತ್ತಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿ, ಒಟ್ಟು 1.5 ಟ್ರಿಲಿಯನ್ ರೂ.( 1.5 ಲಕ್ಷ ಕೋಟಿ ರೂ.) ಹೂಡಿಕೆ ಮಾಡಲಾಗುತ್ತಿದೆ. ಶೀಘ್ರದಲ್ಲೇ, ಭಾರತದಲ್ಲಿರುವ 5 ಸೆಮಿಕಂಡಕ್ಟರ್ ಘಟಕಗಳು 'ಮೇಡ್ ಇನ್ ಇಂಡಿಯಾ' ಚಿಪ್‌ಗಳನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸಲು ಪ್ರಾರಂಭಿಸುತ್ತವೆ.

ಸ್ನೇಹಿತರೆ,

ಭಾರತವು ಕೈಗೆಟುಕುವ ಬೌದ್ಧಿಕ ಶಕ್ತಿಯ ಪ್ರಮುಖ ಮೂಲವಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಇಂದು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವದಾದ್ಯಂತದ ಕಂಪನಿಗಳ 1,700ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಉಪಸ್ಥಿತಿಯೇ ಇದಕ್ಕೆ ಸಾಕ್ಷಿಯಾಗಿದೆ. ಈ ಕೇಂದ್ರಗಳು 2 ದಶಲಕ್ಷಕ್ಕೂ ಹೆಚ್ಚು ಅಂದರೆ 20 ಲಕ್ಷಕ್ಕಿಂತ ಹೆಚ್ಚಿನ ಭಾರತೀಯ ಯುವಕರನ್ನು ನೇಮಿಸಿಕೊಂಡಿವೆ, ಅವರು ಜಗತ್ತಿಗೆ ಹೆಚ್ಚು ಕೌಶಲ್ಯಪೂರ್ಣ ಸೇವೆಗಳನ್ನು ಒದಗಿಸುತ್ತಿದ್ದಾರೆ. ಇಂದು, ಭಾರತವು ಈ ಜನಸಂಖ್ಯಾ ಲಾಭಾಂಶವನ್ನು ಗರಿಷ್ಠಗೊಳಿಸಲು ಅಭೂತಪೂರ್ವ ಗಮನ ಹರಿಸುತ್ತಿದೆ. ಇದನ್ನು ಸಾಧಿಸಲು ಶಿಕ್ಷಣ, ನಾವೀನ್ಯತೆ, ಕೌಶಲ್ಯ ಮತ್ತು ಸಂಶೋಧನೆಗೆ ವಿಶೇಷ ಗಮನ ನೀಡಲಾಗುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದೊಂದಿಗೆ ನಾವು ಈ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಪರಿಚಯಿಸಿದ್ದೇವೆ. ಕಳೆದ 10 ವರ್ಷಗಳಲ್ಲಿ, ಪ್ರತಿ ವಾರ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ, ಪ್ರತಿದಿನ 2 ಹೊಸ ಕಾಲೇಜುಗಳನ್ನು ತೆರೆಯಲಾಗಿದೆ. ಈ ಅವಧಿಯಲ್ಲಿ ನಮ್ಮ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ.

 

ಸ್ನೇಹಿತರೆ,

ನಾವು ಶಿಕ್ಷಣದ ಪ್ರವೇಶ ವಿಸ್ತರಿಸುವ ಜತೆಗೆ ಅದರ ಗುಣಮಟ್ಟ ಸುಧಾರಿಸುವತ್ತ ಗಮನ ಹರಿಸುತ್ತಿದ್ದೇವೆ. ಇದರ ಪರಿಣಾಮವಾಗಿ, ಕ್ಯುಎಸ್ ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ ಭಾರತೀಯ ಸಂಸ್ಥೆಗಳ ಸಂಖ್ಯೆ ಕಳೆದ ದಶಕದಲ್ಲಿ 3 ಪಟ್ಟು ಹೆಚ್ಚಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ ಮತ್ತು ತರಬೇತಿ ನೀಡಲು ವಿಶೇಷ ಪ್ಯಾಕೇಜ್ ಘೋಷಿಸಿದ್ದೇವೆ. ಪಿಎಂ ಇಂಟರ್ನ್‌ಶಿಪ್ ಯೋಜನೆಯಡಿ, 111 ಕಂಪನಿಗಳು ಮೊದಲ ದಿನವೇ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿವೆ. ಈ ಯೋಜನೆಯ ಮೂಲಕ ನಾವು ಪ್ರಮುಖ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ನೊಂದಿಗೆ 1 ಕೋಟಿ ಯುವಕರನ್ನು ಬೆಂಬಲಿಸುತ್ತಿದ್ದೇವೆ.

ಸ್ನೇಹಿತರೆ,

ಭಾರತದ ಸಂಶೋಧನಾ ಉತ್ಪಾದನೆ ಮತ್ತು ಪೇಟೆಂಟ್ ಸಲ್ಲಿಕೆಗಳು ಕಳೆದ 10 ವರ್ಷಗಳಲ್ಲಿ ತ್ವರಿತ ಬೆಳವಣಿಗೆ ಕಂಡಿವೆ. ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ, ಜಾಗತಿಕ ಆವಿಷ್ಕಾರ ಸೂಚ್ಯಂಕ ಶ್ರೇಯಾಂಕದಲ್ಲಿ ಭಾರತವು 81ನೇ ಸ್ಥಾನದಿಂದ 39ನೇ ಸ್ಥಾನಕ್ಕೆ ಜಿಗಿದಿದೆ, ನಾವು ಮತ್ತಷ್ಟು ಮುನ್ನಡೆಯುವ ಗುರಿ ಹೊಂದಿದ್ದೇವೆ. ತನ್ನ ಸಂಶೋಧನಾ ಪರಿಸರ ವ್ಯವಸ್ಥೆ ಬಲಪಡಿಸಲು ಭಾರತವು 1 ಟ್ರಿಲಿಯನ್(1 ಲಕ್ಷ ಕೋಟಿ ರೂ.) ರೂ. ಮೌಲ್ಯದ ಸಂಶೋಧನಾ ನಿಧಿ ಸ್ಥಾಪಿಸಿದ್ದೇವೆ.

ಸ್ನೇಹಿತರೆ,

ಇಂದು ಇಡೀ ವಿಶ್ವವೇ ಭಾರತದ ಹಸಿರು ಭವಿಷ್ಯ ಮತ್ತು ಹಸಿರು ಉದ್ಯೋಗಗಳ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಈ ವಲಯದಲ್ಲಿ ನಿಮಗೆ ಸಮಾನವಾದ ಮಹತ್ವದ ಅವಕಾಶಗಳಿವೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಶೃಂಗಸಭೆಯನ್ನು ನೀವೆಲ್ಲರೂ ನೋಡಿದ್ದೀರಿ. ಈ ಶೃಂಗಸಭೆಯ ಯಶಸ್ಸು ಏನೆಂದರೆ, ಹಸಿರು ಪರಿವರ್ತನೆಯ ನವೀಕೃತ ಉತ್ಸಾಹ. ಜಿ-20 ಶೃಂಗಸಭೆ ಸಮಯದಲ್ಲಿ ಭಾರತದ ಉಪಕ್ರಮದಲ್ಲಿ ಜಾಗತಿಕ ಜೈವಿಕ ಇಂಧನ ಒಕ್ಕೂಟ ಪ್ರಾರಂಭಿಸಲಾಯಿತು. ಜಿ-20 ಸದಸ್ಯ ರಾಷ್ಟ್ರಗಳು ಭಾರತದ ಹಸಿರು ಹೈಡ್ರೋಜನ್ ಇಂಧನ ಅಭಿವೃದ್ಧಿಯನ್ನು ಬಲವಾಗಿ ಬೆಂಬಲಿಸಿದವು. ಭಾರತದಲ್ಲಿ, ಈ ದಶಕದ ಅಂತ್ಯದ ವೇಳೆಗೆ 5 ದಶಲಕ್ಷ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಾವು ಸೂಕ್ಷ್ಮ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದನೆಯನ್ನು ಸಹ ಮುಂದುವರಿಸುತ್ತಿದ್ದೇವೆ.

ಭಾರತ ಸರ್ಕಾರವು ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ, ದೊಡ್ಡ ಪ್ರಮಾಣದ ಛಾವಣಿ ಸೌರ ಯೋಜನೆ. ಚಾವಣಿಯ ಸೌರಶಕ್ತಿ ವ್ಯವಸ್ಥೆಗಳನ್ನು ಸ್ಥಾಪಿಸಲು ಮತ್ತು ಸೌರಶಕ್ತಿ ಮೂಲಸೌಕರ್ಯ ಸ್ಥಾಪನೆಗೆ ಸಹಾಯ ಮಾಡಲು ನಾವು ಪ್ರತಿ ಮನೆಗೆ ಹಣ ಒದಗಿಸುತ್ತಿದ್ದೇವೆ. ಇಲ್ಲಿಯವರೆಗೆ 13 ದಶಲಕ್ಷಕ್ಕಿಂತಲೂ ಹೆಚ್ಚು ಅಂದರೆ 1 ಕೋಟಿ 30 ಲಕ್ಷ ಕುಟುಂಬಗಳು ಈ ಯೋಜನೆಗೆ ನೋಂದಾಯಿಸಿಕೊಂಡಿವೆ, ಅಂದರೆ ಈ ಕುಟುಂಬಗಳು ಸೌರ ವಿದ್ಯುತ್ ಉತ್ಪಾದಕರಾಗಿದ್ದಾರೆ. ಈ ಉಪಕ್ರಮವು ಪ್ರತಿ ಕುಟುಂಬಕ್ಕೆ ಸರಾಸರಿ 25,000 ರೂ. ಉಳಿಸುತ್ತದೆ. ಪ್ರತಿ 3 ಕಿಲೋವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯು 50-60 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಡೆಯುತ್ತದೆ. ಈ ಯೋಜನೆಯು ಸರಿಸುಮಾರು 1.7 ದಶಲಕ್ಷ(17 ಲಕ್ಷ) ಉದ್ಯೋಗಗಳನ್ನು ಸೃಷ್ಟಿಸುತ್ತದೆ, ನುರಿತ ಅಪಾರ ಯುವಉದ್ಯೋಗಿಗಳನ್ನು ಸೃಜಿಸುತ್ತದೆ. ಆದ್ದರಿಂದ, ಈ ವಲಯದಲ್ಲೂ ನಿಮಗೆ ಹಲವಾರು ಹೊಸ ಹೂಡಿಕೆ ಅವಕಾಶಗಳು ಹೊರಹೊಮ್ಮುತ್ತಿವೆ.

 

ಸ್ನೇಹಿತರೆ,

ಭಾರತದ ಆರ್ಥಿಕತೆಯು ಪ್ರಸ್ತುತ ಗಮನಾರ್ಹ ಬದಲಾವಣೆಗೆ ಒಳಗಾಗುತ್ತಿದೆ. ಬಲವಾದ ಆರ್ಥಿಕ ಮೂಲಸೌಕರ್ಯಗಳೊಂದಿಗೆ, ಭಾರತವು ನಿರಂತರವಾದ ಉನ್ನತ ಬೆಳವಣಿಗೆಯ ಹಾದಿಯಲ್ಲಿದೆ. ಇಂದು ಭಾರತವು ಉನ್ನತ ಸ್ಥಾನ ತಲುಪಲು ಶ್ರಮಿಸುತ್ತಿದೆ. ಮಾತ್ರವಲ್ಲದೆ, ಅಗ್ರಸ್ಥಾನದಲ್ಲಿ ಉಳಿಯಲು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ. ಜಗತ್ತು ಇಂದು ಪ್ರತಿಯೊಂದು ವಲಯದಲ್ಲೂ ಅಪಾರ ಅವಕಾಶಗಳನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮ ಚರ್ಚೆಗಳಿಂದ ಅನೇಕ ಮೌಲ್ಯಯುತ ಒಳನೋಟಗಳು ಹೊರಹೊಮ್ಮುತ್ತವೆ ಎಂಬ ವಿಶ್ವಾಸ ನನಗಿದೆ. ಈ ಪ್ರಯತ್ನಕ್ಕೆ ನಾನು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಇದು ನಮಗೆ ಕೇವಲ ಚರ್ಚೆಯ ವೇದಿಕೆಯಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇಲ್ಲಿ ನಡೆಯುವ ಚರ್ಚೆಗಳು, ಪ್ರಸ್ತಾಪಿಸಿದ ವಿಚಾರಗಳು, ಮಾಡಬೇಕಾದವುಗಳು ಮತ್ತು ಮಾಡಬಾರದವುಗಳು, ಪ್ರಯೋಜಕವೆಂದು ಸಾಬೀತಾದವುಗಳು ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಶ್ರದ್ಧೆಯಿಂದ ಸಂಯೋಜಿಸಲ್ಪಟ್ಟಿವೆ. ನಾವು ಅವುಗಳನ್ನು ನಮ್ಮ ನೀತಿಗಳು ಮತ್ತು ಆಡಳಿತದಲ್ಲಿ ಅಳವಡಿಸಿಕೊಳ್ಳುತ್ತೇವೆ. ಈ ವಿಚಾರಮಂಥನ ಪ್ರಕ್ರಿಯೆಯಲ್ಲಿ ನೀವು ನೀಡುವ ಬುದ್ಧಿವಂತ ಸಲಹೆ ಸೂಚನೆಗಳನ್ನು ನಾವು ನಮ್ಮ ದೇಶಕ್ಕೆ ಉಜ್ವಲ ಭವಿಷ್ಯ ರೂಪಿಸಲು ಬಳಸುತ್ತೇವೆ. ಆದ್ದರಿಂದ, ನಿಮ್ಮ ಭಾಗವಹಿಸುವಿಕೆ ನಮಗೆ ಅತ್ಯಂತ ಮಹತ್ವದ್ದಾಗಿದೆ. ನೀವು ನೀಡುವ ಪ್ರತಿಯೊಂದು ಪದವೂ ನಮಗೆ ಮೌಲ್ಯ ನೀಡುತ್ತವೆ. ನಿಮ್ಮ ಆಲೋಚನೆಗಳು, ನಿಮ್ಮ ಅನುಭವ - ಅವೇ ನಮ್ಮ ಆಸ್ತಿ. ಮತ್ತೊಮ್ಮೆ, ನಿಮ್ಮೆಲ್ಲರ ಕೊಡುಗೆಗಳಿಗಾಗಿ ನಾನು ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಅವರ ಶ್ಲಾಘನೀಯ ಪ್ರಯತ್ನಗಳಿಗಾಗಿ ನಾನು ಎನ್.ಕೆ.  ಸಿಂಗ್ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ.

ಆತ್ಮೀಯ ಅಭಿನಂದನೆಗಳು ಮತ್ತು ಶುಭಾಶಯಗಳೊಂದಿಗೆ,

ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Government e-Marketplace Generates Rs 1.76 Lakh Crore In Net Social Savings Over Three Years: IIT Delhi Study

Media Coverage

Government e-Marketplace Generates Rs 1.76 Lakh Crore In Net Social Savings Over Three Years: IIT Delhi Study
NM on the go

Nm on the go

Always be the first to hear from the PM. Get the App Now!
...
Prime Minister pays homage to brave participants of the Quit India Movement
August 09, 2026

Prime Minister Shri Narendra Modi has remembered all those who participated in the historic Quit India Movement and paid tribute to their courage and determination in India’s freedom struggle. Shri Modi said that inspired by the leadership of Mahatma Gandhi, the clarion call of the Quit India Movement infused new energy into the freedom struggle and reflected the unwavering resolve of the people of India to break free from colonial rule.

The Prime Minister posted on X:

Remembering all those who participated in the historic Quit India Movement. Their courage will always remain an inspiration for every Indian. Inspired by the leadership of Mahatma Gandhi Ji, the clarion call of Quit India infused new energy into our freedom struggle and reflected the unwavering determination of our people to break free from colonial rule.