ಹೊಸದಾಗಿ ವಿದ್ಯುದ್ದೀಕರಣಗೊಂಡ ವಿಭಾಗಗಳು ಮತ್ತು ಹೊಸದಾಗಿ ನಿರ್ಮಿಸಲಾದ ಡೆಮು / ಮೆಮು ಶೆಡ್ ಅನ್ನು ಸೇವೆಗೆ ಸಮರ್ಪಿಸಿದರು
"ಈಶಾನ್ಯದ ಚೊಚ್ಚಲ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತದೆ"
"ನವ ಭಾರತ ನಿರ್ಮಾಣದಲ್ಲಿ ಅಭೂತಪೂರ್ವ ಸಾಧನೆಗೆ ಕಳೆದ 9 ವರ್ಷಗಳು ಸಾಕ್ಷಿಯಾಗಿವೆ"
"ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕೆ ಆದ್ಯತೆ ನೀಡಿದೆ"
"ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಮೂಲಸೌಕರ್ಯವು ಕಲ್ಪಿಸಲಾಗಿದೆ, ಮೂಲಸೌಕರ್ಯ ಅಭಿವೃದ್ಧಿಯೇ ನಿಜವಾದ ಸಾಮಾಜಿಕ ನ್ಯಾಯ ಮತ್ತು ನಿಜವಾದ ಜಾತ್ಯತೀತತೆ"
" ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯಗಳು ಮೂಲಸೌಕರ್ಯ ಉತ್ತೇಜನದ ಅತಿದೊಡ್ಡ ಫಲಾನುಭವಿಗಳು "
"ಭಾರತೀಯ ರೈಲ್ವೆಯು ವೇಗದ ಜೊತೆಗೆ ಹೃದಯಗಳು, ಸಮಾಜಗಳು ಮತ್ತು ಅವಕಾಶಗಳನ್ನು ಜನರಿಗೆ ಸಂಪರ್ಕಿಸುವ ಮಾಧ್ಯಮವಾಗಿ ಮಾರ್ಪಟ್ಟಿದೆ"

ನಮಸ್ಕಾರ,

ಅಸ್ಸಾಂ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ ಜೀ, ಮುಖ್ಯಮಂತ್ರಿ ಭಾಯ್ ಹಿಮಂತ ಬಿಸ್ವಾ ಶರ್ಮಾ ಜೀ, ಕೇಂದ್ರ ಸಚಿವ ಸಂಪುಟದ ಸದಸ್ಯರಾದ ಅಶ್ವಿನಿ ವೈಷ್ಣವ್ ಜೀ, ಸರ್ಬಾನಂದ ಸೋನೊವಾಲ್ ಜಿ, ರಾಮೇಶ್ವರ್ ತೆಲಿ ಜಿ, ನಿಸಿತ್ ಪ್ರಮಾಣಿಕ್ ಜಿ, ಜಾನ್ ಬಾರ್ಲಾ ಜೀ, ಇತರ ಎಲ್ಲ ಸಚಿವರು, ಸಂಸದರು, ಶಾಸಕರು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ!

ಅಸ್ಸಾಂ ಸೇರಿದಂತೆ ಇಡೀ ಈಶಾನ್ಯದ ರೈಲು ಸಂಪರ್ಕಕ್ಕೆ ಇಂದು ಮಹತ್ವದ ದಿನ. ಇಂದು, ಈಶಾನ್ಯದ ಸಂಪರ್ಕಕ್ಕೆ ಸಂಬಂಧಿಸಿದ ಮೂರು ಯೋಜನೆಗಳು ಏಕಕಾಲದಲ್ಲಿ ಪ್ರಾರಂಭವಾಗಲಿವೆ. ಮೊದಲನೆಯದಾಗಿ, ಈಶಾನ್ಯ ರಾಜ್ಯಗಳು ಇಂದು ತನ್ನ ಮೊದಲ 'ಮೇಡ್ ಇನ್ ಇಂಡಿಯಾ' ವಂದೇ ಭಾರತ್ ಎಕ್ಸ್ ಪ್ರೆಸ್ ಅನ್ನು ಪಡೆಯುತ್ತಿವೆ. ಇದು ಪಶ್ಚಿಮ ಬಂಗಾಳವನ್ನು ಸಂಪರ್ಕಿಸುವ ಮೂರನೇ ವಂದೇ ಭಾರತ್ ಎಕ್ಸ್ ಪ್ರೆಸ್ ಆಗಿದೆ. ಎರಡನೆಯದಾಗಿ, ಅಸ್ಸಾಂ ಮತ್ತು ಮೇಘಾಲಯದ ಸುಮಾರು 150 ಕಿಲೋಮೀಟರ್ ಟ್ರ್ಯಾಕ್ ನಲ್ಲಿ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡಿದೆ. ಮೂರನೆಯದಾಗಿ, ಲುಮ್ಡಿಂಗ್ ನಲ್ಲಿ ಹೊಸದಾಗಿ ನಿರ್ಮಿಸಲಾದ ಡೆಮು-ಮೆಮು ಶೆಡ್ ಅನ್ನು ಸಹ ಇಂದು ಉದ್ಘಾಟಿಸಲಾಯಿತು. ಈ ಎಲ್ಲ ಯೋಜನೆಗಳಿಗಾಗಿ ಅಸ್ಸಾಂ ಮತ್ತು ಮೇಘಾಲಯ ಸೇರಿದಂತೆ ಇಡೀ ಈಶಾನ್ಯ ಮತ್ತು ಪಶ್ಚಿಮ ಬಂಗಾಳವನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಗುವಾಹಟಿ-ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ನಡುವಿನ ಹಳೆಯ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಇದರೊಂದಿಗೆ, ಪ್ರದೇಶದಾದ್ಯಂತ ಚಲನೆ ವೇಗಗೊಳ್ಳುತ್ತದೆ. ಇದರೊಂದಿಗೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ಯುವ ಸ್ನೇಹಿತರಿಗೆ ಪ್ರಯೋಜನವಾಗಲಿದೆ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಇದು ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
ಈ ವಂದೇ ಭಾರತ್ ಎಕ್ಸ್ ಪ್ರೆಸ್  ಮಾ ಕಾಮಾಕ್ಯ ದೇವಾಲಯ, ಕಾಜಿರಂಗ, ಮಾನಸ್ ರಾಷ್ಟ್ರೀಯ ಉದ್ಯಾನ ಮತ್ತು ಪೊಬಿಟೋರಾ ವನ್ಯಜೀವಿ ಅಭಯಾರಣ್ಯವನ್ನು ಸಂಪರ್ಕಿಸುತ್ತದೆ. ಇದಲ್ಲದೆ, ಮೇಘಾಲಯದ ಶಿಲ್ಲಾಂಗ್, ಚಿರಾಪುಂಜಿ ಮತ್ತು ಅರುಣಾಚಲ ಪ್ರದೇಶದ ತವಾಂಗ್ ಮತ್ತು ಪಾಸಿಘಾಟ್ ನಂತಹ ಸ್ಥಳಗಳಿಗೆ ಪ್ರವಾಸಿಗರಿಗೆ ಸೌಲಭ್ಯಗಳು ಹೆಚ್ಚಾಗಲಿವೆ.

ಸಹೋದರ ಸಹೋದರಿಯರೇ,

ಈ ವಾರ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ 9 ವರ್ಷಗಳನ್ನು ಪೂರೈಸಿದೆ. ಕಳೆದ 9 ವರ್ಷಗಳು ಭಾರತಕ್ಕೆ ಅಭೂತಪೂರ್ವ ಸಾಧನೆಗಳಾಗಿವೆ ಮತ್ತು ನವ ಭಾರತವನ್ನು ನಿರ್ಮಿಸಿವೆ. ನಿನ್ನೆ ದೇಶವು ಸ್ವತಂತ್ರ ಭಾರತದ ಭವ್ಯ ಮತ್ತು ಆಧುನಿಕ ಹೊಸ ಸಂಸತ್ತನ್ನು ಪಡೆಯಿತು. ಇದು ಭಾರತದ ಸಾವಿರಾರು ವರ್ಷಗಳ ಪ್ರಜಾಪ್ರಭುತ್ವ ಇತಿಹಾಸವನ್ನು ನಮ್ಮ ಸಮೃದ್ಧ ಪ್ರಜಾಪ್ರಭುತ್ವ ಭವಿಷ್ಯದೊಂದಿಗೆ ಸಂಪರ್ಕಿಸುವ ಸಂಸತ್ತು.

ಕಳೆದ 9 ವರ್ಷಗಳಲ್ಲಿ ಇಂತಹ ಹಲವಾರು ಸಾಧನೆಗಳಿವೆ, ಅವುಗಳನ್ನು ಮೊದಲು ಊಹಿಸಲು ಸಹ ತುಂಬಾ ಕಷ್ಟಕರವಾಗಿತ್ತು. 2014 ರ ಹಿಂದಿನ ದಶಕದಲ್ಲಿ, ದಾಖಲೆ ಸಂಖ್ಯೆಯ ಹಗರಣಗಳು ನಡೆದಿವೆ. ಈ ಹಗರಣಗಳು ದೇಶದ ಬಡವರಿಗೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿದಿರುವ ದೇಶದ ಪ್ರದೇಶಗಳಿಗೆ ತೀವ್ರ ನಷ್ಟವನ್ನುಂಟು ಮಾಡಿವೆ.

ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಬಡವರ ಮನೆಗಳಿಂದ ಹಿಡಿದು ಮಹಿಳೆಯರಿಗೆ ಶೌಚಾಲಯಗಳವರೆಗೆ, ನೀರಿನ ಕೊಳವೆ ಮಾರ್ಗದಿಂದ ವಿದ್ಯುತ್ ಸಂಪರ್ಕದವರೆಗೆ, ಅನಿಲ ಕೊಳವೆ ಮಾರ್ಗದಿಂದ ಏಮ್ಸ್-ವೈದ್ಯಕೀಯ ಕಾಲೇಜುಗಳವರೆಗೆ, ರಸ್ತೆಗಳು, ರೈಲು, ಜಲಮಾರ್ಗಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಮೊಬೈಲ್ ಸಂಪರ್ಕದವರೆಗೆ ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಪೂರ್ಣ ಶಕ್ತಿಯಿಂದ ಕೆಲಸ ಮಾಡಿದ್ದೇವೆ.

ಇಂದು, ಇಡೀ ಜಗತ್ತು ಭಾರತದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಕಾರ್ಯಗಳ ಬಗ್ಗೆ ಮಾತನಾಡುತ್ತಿದೆ. ಏಕೆಂದರೆ ಈ ಮೂಲಸೌಕರ್ಯವು ಜೀವನವನ್ನು ಸುಲಭಗೊಳಿಸುತ್ತದೆ. ಅದೇ ಮೂಲಸೌಕರ್ಯವು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಮೂಲಸೌಕರ್ಯವೇ ಕ್ಷಿಪ್ರ ಅಭಿವೃದ್ಧಿಗೆ ಆಧಾರವಾಗಿದೆ. ಈ ಮೂಲಸೌಕರ್ಯವು ಬಡವರು, ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು ಮತ್ತು ಸಮಾಜದ ಅಂತಹ ಪ್ರತಿಯೊಂದು ವಂಚಿತ ವರ್ಗವನ್ನು ಸಬಲೀಕರಣಗೊಳಿಸುತ್ತದೆ. ಮೂಲಸೌಕರ್ಯವು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಮೀಸಲಾಗಿದೆ. ಅದಕ್ಕಾಗಿಯೇ ಈ ಮೂಲಸೌಕರ್ಯ ಅಭಿವೃದ್ಧಿಯು ನಿಜವಾದ ಸಾಮಾಜಿಕ ನ್ಯಾಯ ಮತ್ತು ನಿಜವಾದ ಜಾತ್ಯತೀತತೆಯನ್ನು ಸಂಕೇತಿಸುತ್ತದೆ.

ಸಹೋದರ ಸಹೋದರಿಯರೇ,

ಭಾರತದ ಪೂರ್ವ ಮತ್ತು ಈಶಾನ್ಯ ಭಾಗಗಳು ಮೂಲಸೌಕರ್ಯ ಅಭಿವೃದ್ಧಿಯ ಈ ಕೆಲಸದಿಂದ ಹೆಚ್ಚು ಪ್ರಯೋಜನ ಪಡೆದಿವೆ. ತಮ್ಮ ಹಿಂದಿನ ವೈಫಲ್ಯಗಳನ್ನು ಮರೆಮಾಚಲು, ಕೆಲವರು ಈ ಹಿಂದೆಯೂ ಈಶಾನ್ಯದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ಹೇಳುತ್ತಾರೆ. ಈಶಾನ್ಯದ ಜನರಿಗೆ ಅಂತಹ ಜನರ ವಾಸ್ತವತೆಯ ಬಗ್ಗೆ ಚೆನ್ನಾಗಿ ತಿಳಿದಿದೆ. ಈ ಜನರು ಈಶಾನ್ಯದ ಜನರನ್ನು ಮೂಲಭೂತ ಸೌಕರ್ಯಗಳಿಗಾಗಿ ದಶಕಗಳ ಕಾಲ ಕಾಯುವಂತೆ ಮಾಡಿದರು. ಈ ಕ್ಷಮಿಸಲಾಗದ ಅಪರಾಧದ ಭಾರವನ್ನು ಈಶಾನ್ಯ ರಾಜ್ಯಗಳು ಹೊರಬೇಕಾಯಿತು. 9 ವರ್ಷಗಳ ಹಿಂದಿನವರೆಗೂ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದ ಸಾವಿರಾರು ಹಳ್ಳಿಗಳು ಮತ್ತು ಕೋಟ್ಯಂತರ ಕುಟುಂಬಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈಶಾನ್ಯಕ್ಕೆ ಸೇರಿದವರು. ಈಶಾನ್ಯ ರಾಜ್ಯಗಳು ದೂರವಾಣಿ-ಮೊಬೈಲ್ ಸಂಪರ್ಕದಿಂದ ವಂಚಿತವಾಗಿದ್ದವು ಮತ್ತು ಉತ್ತಮ ರೈಲು-ರಸ್ತೆ-ವಿಮಾನ ನಿಲ್ದಾಣ ಸಂಪರ್ಕದ ಕೊರತೆಯನ್ನು ಹೊಂದಿದ್ದವು.

ಸಹೋದರ ಸಹೋದರಿಯರೇ,

ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಬದಲಾವಣೆ ಹೇಗೆ ಸಂಭವಿಸುತ್ತದೆ ಎಂಬುದಕ್ಕೆ ಈಶಾನ್ಯದ ರೈಲು ಸಂಪರ್ಕ ಸಾಕ್ಷಿಯಾಗಿದೆ. ಇದು ನಾನು ಮಾತನಾಡುವ ವೇಗ, ಪ್ರಮಾಣ ಮತ್ತು ಉದ್ದೇಶದ ಪುರಾವೆಯಾಗಿದೆ. ಸ್ವಲ್ಪ ಊಹಿಸಿ, ದೇಶದ ಮೊದಲ ರೈಲು 150 ವರ್ಷಗಳ ಹಿಂದೆ ಮುಂಬೈ ಮಹಾನಗರದಿಂದ ಓಡಿತು. ಮೂರು ದಶಕಗಳ ನಂತರ, ಮೊದಲ ರೈಲು ಅಸ್ಸಾಂನಲ್ಲಿಯೂ ಓಡಲು ಪ್ರಾರಂಭಿಸಿತು.

ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿಯೂ, ಅದು ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳವಾಗಿರಲಿ, ಪ್ರತಿಯೊಂದು ಪ್ರದೇಶವೂ ರೈಲು ಮೂಲಕ ಸಂಪರ್ಕ ಹೊಂದಿತ್ತು. ಆದಾಗ್ಯೂ, ಆ ಸಮಯದಲ್ಲಿ ಉದ್ದೇಶವು ಸಾರ್ವಜನಿಕ ಕಲ್ಯಾಣ ಅಥವಾ ಆಸಕ್ತಿಯಾಗಿರಲಿಲ್ಲ. ಆ ಸಮಯದಲ್ಲಿ ಬ್ರಿಟಿಷರ ಉದ್ದೇಶ ಈ ಇಡೀ ಪ್ರದೇಶದ ಸಂಪನ್ಮೂಲಗಳನ್ನು ಲೂಟಿ ಮಾಡುವುದು ಮತ್ತು ಇಲ್ಲಿನ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವುದು. ಸ್ವಾತಂತ್ರ್ಯದ ನಂತರ, ಈಶಾನ್ಯದಲ್ಲಿ ಪರಿಸ್ಥಿತಿಗಳು ಬದಲಾಗಬೇಕಿತ್ತು ಮತ್ತು ರೈಲ್ವೆಯನ್ನು ವಿಸ್ತರಿಸಬೇಕಾಗಿತ್ತು. ಆದರೆ 2014 ರ ನಂತರ, ಈಶಾನ್ಯ ರಾಜ್ಯಗಳನ್ನು ರೈಲು ಮೂಲಕ ಸಂಪರ್ಕಿಸುವ ಕೆಲಸವನ್ನು ನಾವು ಮಾಡಬೇಕಾಗಿತ್ತು.

ಸಹೋದರ ಸಹೋದರಿಯರೇ,

ನಿಮ್ಮ ಈ ಸೇವಕನು ಈಶಾನ್ಯದ ಜನರ ಸೂಕ್ಷ್ಮತೆ ಮತ್ತು ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾನೆ. ದೇಶದಲ್ಲಿನ ಈ ಬದಲಾವಣೆಯು ಕಳೆದ 9 ವರ್ಷಗಳಲ್ಲಿ ಅತಿದೊಡ್ಡ ಮತ್ತು ಅತ್ಯಂತ ತೀವ್ರವಾಗಿದೆ, ಇದನ್ನು ವಿಶೇಷವಾಗಿ ಈಶಾನ್ಯವು ಅನುಭವಿಸಿದೆ. ಈಶಾನ್ಯದಲ್ಲಿ ರೈಲ್ವೆ ಅಭಿವೃದ್ಧಿಯ ಬಜೆಟ್ ಕೂಡ ಕಳೆದ 9 ವರ್ಷಗಳಲ್ಲಿ ಮೊದಲಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚಾಗಿದೆ. 2014ಕ್ಕೂ ಮೊದಲು ಈಶಾನ್ಯ ರಾಜ್ಯಗಳ ರೈಲ್ವೆಯ ಸರಾಸರಿ ಬಜೆಟ್ ಸುಮಾರು 2,500 ಕೋಟಿ ರೂ. ಈ ಬಾರಿ ಈಶಾನ್ಯದ ರೈಲ್ವೆ ಬಜೆಟ್ 10 ಸಾವಿರ ಕೋಟಿ ರೂ. ಅಂದರೆ, ಸುಮಾರು 4 ಪಟ್ಟು ಹೆಚ್ಚಳ ಕಂಡುಬಂದಿದೆ. ಪ್ರಸ್ತುತ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ ಮತ್ತು ಸಿಕ್ಕಿಂ ರಾಜಧಾನಿಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಕೆಲಸವೂ ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲೇ ಈಶಾನ್ಯದ ಎಲ್ಲಾ ರಾಜಧಾನಿಗಳನ್ನು ಬ್ರಾಡ್ ಗೇಜ್ ಜಾಲಕ್ಕೆ ಸಂಪರ್ಕಿಸಲಾಗುವುದು. ಈ ಯೋಜನೆಗಳಲ್ಲಿ 1 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಈಶಾನ್ಯದ ಉತ್ತಮ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸರ್ಕಾರ ಎಷ್ಟು ಬದ್ಧವಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಸಹೋದರ ಸಹೋದರಿಯರೇ,

ನಾವು ಇಂದು ಕೆಲಸ ಮಾಡುತ್ತಿರುವ ಪ್ರಮಾಣ, ನಾವು ಕೆಲಸ ಮಾಡುತ್ತಿರುವ ವೇಗವು ಅಭೂತಪೂರ್ವವಾಗಿದೆ. ಈಗ ಈಶಾನ್ಯದಲ್ಲಿ, ಹೊಸ ರೈಲು ಮಾರ್ಗಗಳನ್ನು ಮೊದಲಿಗಿಂತ ಮೂರು ಪಟ್ಟು ವೇಗವಾಗಿ ಹಾಕಲಾಗುತ್ತಿದೆ. ಈಗ ರೈಲು ಮಾರ್ಗಗಳ ದ್ವಿಗುಣಗೊಳಿಸುವಿಕೆಯು ಈಶಾನ್ಯದಲ್ಲಿ ಮೊದಲಿಗಿಂತ 9 ಪಟ್ಟು ವೇಗವಾಗಿ ನಡೆಯುತ್ತಿದೆ.
ಕಳೆದ 9 ವರ್ಷಗಳಲ್ಲಿ ಪ್ರಾರಂಭವಾದ ಈಶಾನ್ಯದ ರೈಲು ಜಾಲದ ವಿದ್ಯುದ್ದೀಕರಣವು ಈಗ ಶೇ. 100 ರಷ್ಟು ಗುರಿಯತ್ತ ವೇಗವಾಗಿ ಮುಂದುವರಿಯುತ್ತಿದೆ.

ಸ್ನೇಹಿತರೇ,

ಅಂತಹ ವೇಗ ಮತ್ತು ಪ್ರಮಾಣದಿಂದಾಗಿ, ಇಂದು ಈಶಾನ್ಯದ ಅನೇಕ ಭಾಗಗಳು ಮೊದಲ ಬಾರಿಗೆ ರೈಲು ಸೇವೆಯ ಮೂಲಕ ಸಂಪರ್ಕ ಹೊಂದುತ್ತಿವೆ. ನಾಗಾಲ್ಯಾಂಡ್ ಈಗ 100 ವರ್ಷಗಳ ನಂತರ ತನ್ನ ಎರಡನೇ ರೈಲ್ವೆ ನಿಲ್ದಾಣವನ್ನು ಪಡೆದುಕೊಂಡಿದೆ. ಒಂದು ಕಾಲದಲ್ಲಿ ನಿಧಾನಗತಿಯ ರೈಲುಗಳು ನ್ಯಾರೋ ಗೇಜ್ ನಲ್ಲಿ ಚಲಿಸುತ್ತಿದ್ದವು, ಆದರೆ ಈಗ ವಂದೇ-ಭಾರತ್ ಮತ್ತು ತೇಜಸ್ ಎಕ್ಸ್ ಪ್ರೆಸ್ ನಂತಹ ಸೆಮಿ ಹೈಸ್ಪೀಡ್ ರೈಲುಗಳು ಆ ಪ್ರದೇಶದಲ್ಲಿ ಚಲಿಸಲು ಪ್ರಾರಂಭಿಸಿವೆ. ಇಂದು, ಈಶಾನ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೈಲ್ವೆಯ ವಿಸ್ಟಾಡೋಮ್ ಬೋಗಿಗಳು ಹೊಸ ಆಕರ್ಷಣೆಯಾಗುತ್ತಿವೆ.

ಸಹೋದರ ಸಹೋದರಿಯರೇ,

ವೇಗದ ಜೊತೆಗೆ, ಇಂದು ಭಾರತೀಯ ರೈಲ್ವೆ ಹೃದಯಗಳನ್ನು ಸಂಪರ್ಕಿಸುವ, ಸಮಾಜವನ್ನು ಸಂಪರ್ಕಿಸುವ ಮತ್ತು ಜನರನ್ನು ಅವಕಾಶಗಳೊಂದಿಗೆ ಸಂಪರ್ಕಿಸುವ ಮಾಧ್ಯಮವಾಗುತ್ತಿದೆ. ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಭಾರತದ ಮೊದಲ ತೃತೀಯ ಲಿಂಗಿ ಟೀ ಸ್ಟಾಲ್ ತೆರೆಯಲಾಗಿದೆ. ಇದು ಸಮಾಜದಿಂದ ಉತ್ತಮ ನಡವಳಿಕೆಯನ್ನು ನಿರೀಕ್ಷಿಸುವ ಸ್ನೇಹಿತರಿಗೆ ಗೌರವಾನ್ವಿತ ಜೀವನವನ್ನು ನೀಡುವ ಪ್ರಯತ್ನವಾಗಿದೆ. ಅಂತೆಯೇ, ಈ 'ಒಂದು ನಿಲ್ದಾಣ, ಒಂದು ಉತ್ಪನ್ನ' ಯೋಜನೆಯಡಿ, ಈಶಾನ್ಯದ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇವು 'ವೋಕಲ್ ಫಾರ್ ಲೋಕಲ್'ಗೆ ಒತ್ತು ನೀಡುತ್ತಿವೆ. ಈ ಕಾರಣದಿಂದಾಗಿ, ನಮ್ಮ ಸ್ಥಳೀಯ ಕುಶಲಕರ್ಮಿಗಳು, ಕಲಾವಿದರು, ಕುಶಲಕರ್ಮಿಗಳು ಹೊಸ ಮಾರುಕಟ್ಟೆಯನ್ನು ಪಡೆದಿದ್ದಾರೆ. ಈಶಾನ್ಯದ ನೂರಾರು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ಒದಗಿಸಲಾಗಿದೆ. ಸೂಕ್ಷ್ಮತೆ ಮತ್ತು ವೇಗದ ಈ ಸಂಯೋಜನೆಯಿಂದ ಮಾತ್ರ ಈಶಾನ್ಯವು ಪ್ರಗತಿಯ ಹಾದಿಯಲ್ಲಿ ಮುಂದುವರಿಯುತ್ತದೆ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಹಾದಿಯನ್ನು ಬಲಪಡಿಸುತ್ತದೆ.
ಮತ್ತೊಮ್ಮೆ, ವಂದೇ ಭಾರತ್ ಮತ್ತು ಇತರ ಎಲ್ಲ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು! ನಾನು ನಿಮಗೆ ಶುಭ ಹಾರೈಸುತ್ತೇನೆ!

ತುಂಬ ಧನ್ಯವಾದಗಳು!

ಹಕ್ಕು ನಿರಾಕರಣೆ: ಇದು ಪ್ರಧಾನಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
OECD pegs India GDP growth at 7.6 per cent for 2025-26

Media Coverage

OECD pegs India GDP growth at 7.6 per cent for 2025-26
NM on the go

Nm on the go

Always be the first to hear from the PM. Get the App Now!
...
Prime Minister congratulates Mr. Balendra Shah on being sworn in as the Prime Minister of Nepal
March 27, 2026

The Prime Minister, Shri Narendra Modi congratulated Mr. Balendra Shah on being sworn in as the Prime Minister of Nepal. “Your appointment reflects the trust reposed in your leadership by the people of Nepal. I look forward to working closely with you to take India-Nepal friendship and cooperation to even greater heights for the mutual benefit of our two peoples”, Shri Modi said.

The Prime Minister posted on X:

“Warm congratulations to Mr. Balendra Shah on being sworn in as the Prime Minister of Nepal.

Your appointment reflects the trust reposed in your leadership by the people of Nepal. I look forward to working closely with you to take India-Nepal friendship and cooperation to even greater heights for the mutual benefit of our two peoples.”

@ShahBalen