ಶ್ರೀ ನಾರಾಯಣ ಗುರುಗಳ ಆದರ್ಶಗಳು ಇಡೀ ಮನುಕುಲಕ್ಕೆ ಒಂದು ದೊಡ್ಡ ನಿಧಿ: ಪ್ರಧಾನಮಂತ್ರಿ
ಭಾರತಕ್ಕೆ ಸಮಾಜದಲ್ಲಿ ಪರಿವರ್ತನಾತ್ಮಕ ಬದಲಾವಣೆಗಳನ್ನು ತಂದ ಹೆಸರಾಂತ ಸಂತರು, ಋಷಿಗಳು ಮತ್ತು ಸಮಾಜ ಸುಧಾರಕರ ಆಶೀರ್ವಾದವಿದೆ: ಪ್ರಧಾನಮಂತ್ರಿ
ಶ್ರೀ ನಾರಾಯಣ ಗುರುಗಳು ಎಲ್ಲಾ ರೀತಿಯ ತಾರತಮ್ಯರಹಿತ ಸಮಾಜದ ಕನಸು ಕಂಡವರು, ಇಂದು ಪರಿಪೂರ್ಣತೆ (ಸ್ಯಾಚುರೇಶನ್) ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ, ದೇಶವು ತಾರತಮ್ಯದ ಪ್ರತಿಯೊಂದು ಸಾಧ್ಯತೆ ತೊಡೆದುಹಾಕುವ ಕಾರ್ಯ ಮಾಡುತ್ತಿದೆ: ಪ್ರಧಾನಮಂತ್ರಿ
ಸ್ಕಿಲ್ ಇಂಡಿಯಾದಂತಹ ಮಿಷನ್‌ಗಳು ಯುವಕರನ್ನು ಸಬಲೀಕರಣಗೊಳಿಸುತ್ತಿವೆ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿವೆ: ಪ್ರಧಾನಮಂತ್ರಿ
ಭಾರತವನ್ನು ಸಬಲೀಕರಣಗೊಳಿಸಲು, ನಾವು ಆರ್ಥಿಕ, ಸಾಮಾಜಿಕ ಮತ್ತು ಮಿಲಿಟರಿ ಸೇರಿ ಪ್ರತಿಯೊಂದು ವಲಯದಲ್ಲೂ ಮುನ್ನಡೆಯಬೇಕು , ಇಂದು, ರಾಷ್ಟ್ರವು ಈ ಹಾದಿಯಲ್ಲಿ ಮುಂದುವರಿಯುತ್ತಿದೆ: ಪ್ರಧಾನಮಂತ್ರಿ

ಬ್ರಹ್ಮಋಷಿ ಸ್ವಾಮಿ ಸಚ್ಚಿದಾನಂದ ಜೀ, ಶ್ರೀಮಠ ಸ್ವಾಮಿ ಶುಭಾಂಗ-ನಂದಾ ಜೀ, ಸ್ವಾಮಿ ಶಾರದಾನಂದ ಜೀ, ಎಲ್ಲಾ ಪೂಜ್ಯ ಸಾಧು ಸಂತರೆ, ಸರ್ಕಾರದ ನನ್ನ ಸಹೋದ್ಯೋಗಿ ಶ್ರೀ ಜಾರ್ಜ್ ಕುರಿಯನ್ ಜೀ, ಸಂಸತ್ತಿನ ನನ್ನ ಸಹೋದ್ಯೋಗಿ ಶ್ರೀ ಅಡೂರ್ ಪ್ರಕಾಶ್ ಜೀ, ಇಲ್ಲಿರುವ ಇತರೆ ಎಲ್ಲ ಹಿರಿಯ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ.

पिन्ने एनडे ऐल्ला, प्रियपेट्ट मलयाली सहोदिरि सहोदरन मार्कु, एनडे विनीतमाय नमस्कारम्।

ಇಂದು ಈ ಸಮುಚ್ಛಯವು ದೇಶದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಅಭೂತಪೂರ್ವ ಘಟನೆಗೆ ಸಾಕ್ಷಿಯಾಗುತ್ತಿದೆ. ನಮ್ಮ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕು ನೀಡುವುದಲ್ಲದೆ, ಸ್ವಾತಂತ್ರ್ಯದ ಗುರಿ ಮತ್ತು ಸ್ವತಂತ್ರ ಭಾರತದ ಕನಸಿಗೆ ಸಂಕೀರ್ಣವನ್ನು ನೀಡಿದ ಐತಿಹಾಸಿಕ ಘಟನೆಯಾಗಿದೆ. 100 ವರ್ಷಗಳ ಹಿಂದೆ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಅವರ ಆ ಭೇಟಿಯು ಇಂದಿಗೂ ಅಷ್ಟೇ ಸ್ಫೂರ್ತಿದಾಯಕ ಮತ್ತು ಪ್ರಸ್ತುತವಾಗಿದೆ. 100 ವರ್ಷಗಳ ಹಿಂದೆ ನಡೆದ ಆ ಸಭೆಯು ಇಂದಿಗೂ ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಾಮೂಹಿಕ ಗುರಿಗಳಿಗೆ ಬಹುದೊಡ್ಡ ಶಕ್ತಿಯ ಮೂಲವಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ನಾನು ಶ್ರೀ ನಾರಾಯಣ ಗುರುಗಳ ಪಾದಗಳಿಗೆ ನಮಸ್ಕರಿಸುತ್ತೇನೆ. ನಾನು ಗಾಂಧೀಜಿ ಅವರಿಗೂ ನನ್ನ ಗೌರವ ನಮನ ಸಲ್ಲಿಸುತ್ತೇನೆ.

 

ಸಹೋದರ ಸಹೋದರಿಯರೆ,

ಶ್ರೀ ನಾರಾಯಣ ಗುರುಗಳ ಆದರ್ಶಗಳು ಇಡೀ ಮನುಕುಲಕ್ಕೆ ಒಂದು ದೊಡ್ಡ ಆಸ್ತಿ. ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುವವರಿಗೆ ಶ್ರೀ ನಾರಾಯಣ ಗುರುಗಳು ದೀಪಸ್ತಂಭದಂತಿದ್ದಾರೆ. ಸಮಾಜದ ಶೋಷಿತ, ತುಳಿತಕ್ಕೊಳಗಾದ ಮತ್ತು ವಂಚಿತ ವರ್ಗಗಳೊಂದಿಗೆ ನನಗೆ ಯಾವ ರೀತಿಯ ಸಂಬಂಧವಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಇಂದಿಗೂ, ನಾನು ಸಮಾಜದ ತುಳಿತಕ್ಕೊಳಗಾದ ಮತ್ತು ವಂಚಿತ ವರ್ಗಕ್ಕಾಗಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೆಲ್ಲಾ, ನಾನು ಗುರುದೇವ್ ಅವರನ್ನು ಖಂಡಿತವಾಗಿ ನೆನಪಿಸಿಕೊಳ್ಳುತ್ತೇನೆ. 100 ವರ್ಷಗಳ ಹಿಂದಿನ ಸಾಮಾಜಿಕ ಪರಿಸ್ಥಿತಿಗಳು, ಶತಮಾನಗಳ ಗುಲಾಮಗಿರಿಯಿಂದ ಉಂಟಾದ ವಿರೂಪಗಳು, ಆ ಕಾಲದಲ್ಲಿ ಜನರು ಆ ದುಷ್ಟತನಗಳ ವಿರುದ್ಧ ಮಾತನಾಡಲು ಹೆದರುತ್ತಿದ್ದರು. ಆದರೆ ಶ್ರೀ ನಾರಾಯಣ ಗುರುಗಳು ವಿರೋಧದ ಬಗ್ಗೆ ಹೆದರಲಿಲ್ಲ, ಅವರು ಕಷ್ಟಗಳಿಗೆ ಹೆದರುತ್ತಿರಲಿಲ್ಲ, ಏಕೆಂದರೆ ಅವರು ಸಾಮರಸ್ಯ ಮತ್ತು ಸಮಾನತೆಯನ್ನು ನಂಬಿದ್ದರು. ಅವರು ಸತ್ಯ, ಸೇವೆ ಮತ್ತು ಸಾಮರಸ್ಯವನ್ನು ನಂಬಿದ್ದರು. ಈ ಸ್ಫೂರ್ತಿ ನಮಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಮಾರ್ಗವನ್ನು ತೋರಿಸುತ್ತದೆ. ಕಟ್ಟ ಕಡೆಯಲ್ಲಿ ನಿಂತಿರುವ ವ್ಯಕ್ತಿ ನಮ್ಮ ಮೊದಲ ಆದ್ಯತೆಯಾಗಿರುವ ಭಾರತವನ್ನು ನಿರ್ಮಿಸಲು ಈ ನಂಬಿಕೆ ನಮಗೆ ಶಕ್ತಿಯನ್ನು ನೀಡುತ್ತದೆ.

ಸ್ನೇಹಿತರೆ,

ಶಿವಗಿರಿ ಮಠದೊಂದಿಗೆ ಸಂಬಂಧ ಹೊಂದಿರುವ ಜನರು ಮತ್ತು ಸಂತರು ನನಗೆ ಶ್ರೀ ನಾರಾಯಣ ಗುರು ಮತ್ತು ಶಿವಗಿರಿ ಮಠದಲ್ಲಿ ಎಷ್ಟು ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ನನಗೆ ಭಾಷೆ ಅರ್ಥವಾಗಲಿಲ್ಲ, ಆದರೆ ಪೂಜ್ಯ ಸಚ್ಚಿದಾನಂದ ಜಿ ಹೇಳುತ್ತಿದ್ದ ವಿಷಯಗಳನ್ನು ಅವರು ನೆನಪಿಸಿಕೊಳ್ಳುತ್ತಿದ್ದರು, ಅವರು ಹಳೆಯ ವಿಷಯಗಳನ್ನು ನೆನಪಿಸಿಕೊಳ್ಳುತ್ತಿದ್ದರು. ನೀವು ತುಂಬಾ ಭಾವುಕರಾಗುತ್ತಿದ್ದೀರಿ, ಆ ಎಲ್ಲಾ ವಿಷಯಗಳ ಬಗ್ಗೆ ಅವರೊಂದಿಗೆ ಸಂಪರ್ಕ ಸಾಧಿಸುತ್ತಿದ್ದೀರಿ ಎಂದು ನಾನು ನೋಡುತ್ತಿದ್ದೆ. ಮಠದ ಪೂಜ್ಯ ಸಂತರು ಯಾವಾಗಲೂ ನನಗೆ ತಮ್ಮ ಪ್ರೀತಿಯನ್ನು ನೀಡುತ್ತಿರುವುದು ನನ್ನ ಅದೃಷ್ಟ. ನನಗೆ ನೆನಪಿದೆ, 2013ರಲ್ಲಿ, ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಕೇದಾರನಾಥದಲ್ಲಿ ನೈಸರ್ಗಿಕ ವಿಕೋಪ ಕಾಣಿಸಿಕೊಂಡಾಗ ಶಿವಗಿರಿ ಮಠದ ಅನೇಕ ಪೂಜ್ಯ ಸಾಧು ಸಂತರು ಅಲ್ಲಿ ಸಿಲುಕಿಕೊಂಡರು, ಕೆಲವು ಭಕ್ತರು ಸಹ ಸಿಕ್ಕಿಹಾಕಿಕೊಂಡರು. ಶಿವಗಿರಿ ಮಠವು ಅಲ್ಲಿ ಸಿಕ್ಕಿಬಿದ್ದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತ ಸರ್ಕಾರವನ್ನು ಸಂಪರ್ಕಿಸಲಿಲ್ಲ. ಪ್ರಕಾಶ್ ಜಿ, ಪರವಾಗಿಲ್ಲ. ನಾನು ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ, ಶಿವಗಿರಿ ಮಠವು ನನಗೆ ಆದೇಶಿಸಿತು, ಈ ಕೆಲಸವನ್ನು ಮಾಡಲು ಈ ಸೇವಕನನ್ನು ನಂಬಿತು. ದೇವರ ಅನುಗ್ರಹದಿಂದ, ನಾನು ಎಲ್ಲಾ ಸಂತರು ಮತ್ತು ಭಕ್ತರನ್ನು ಸುರಕ್ಷಿತವಾಗಿ ಕರೆತರಲು ಸಾಧ್ಯವಾಯಿತು.

ಸ್ನೇಹಿತರೆ,

ಹೇಗಿದ್ದರೂ, ಕಷ್ಟದ ಸಮಯದಲ್ಲಿ, ನಮ್ಮ ಮೊದಲ ಗಮನವು ನಾವು ನಮ್ಮದೇ ಎಂದು ಪರಿಗಣಿಸುವ, ನಮಗೆ ಹಕ್ಕಿದೆ ಎಂದು ನಾವು ಭಾವಿಸುವ ಕಡೆಗೆ ಹೋಗುತ್ತದೆ. ನೀವು ನನ್ನನ್ನು ನಿಮ್ಮ ಸ್ವಂತ ಎಂದು ಪರಿಗಣಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಶಿವಗಿರಿ ಮಠದ ಸಂತರೊಂದಿಗಿನ ಈ ನಿಕಟತೆಗಿಂತ ನನಗೆ ಆಧ್ಯಾತ್ಮಿಕವಾಗಿ ಹೆಚ್ಚು ಸಂತೋಷಕರವಾದದ್ದು ಇನ್ನೊಂದಿದೆ?

 

ಸ್ನೇಹಿತರೆ,

ಕಾಶಿಯ ಮೂಲಕ ನಿಮ್ಮೆಲ್ಲರೊಂದಿಗೆ ನನಗೆ ಸಂಬಂಧವಿದೆ. ವರ್ಕಳವನ್ನು ಶತಮಾನಗಳಿಂದ ದಕ್ಷಿಣದ ಕಾಶಿ ಎಂದೂ ಕರೆಯಲಾಗುತ್ತದೆ. ಕಾಶಿ ಉತ್ತರದ್ದಾಗಿರಲಿ ಅಥವಾ ದಕ್ಷಿಣದ್ದಾಗಿರಲಿ, ನನಗೆ ಪ್ರತಿ ಕಾಶಿಯೂ ನನ್ನ ಕಾಶಿಯಾಗಿದೆ.

ಸ್ನೇಹಿತರೆ,

ಭಾರತದ ಆಧ್ಯಾತ್ಮಿಕ ಸಂಪ್ರದಾಯವನ್ನು, ಋಷಿಮುನಿಗಳು ಮತ್ತು ಸಾಧು ಸಂತರ ಪರಂಪರೆಯನ್ನು ತಿಳಿದುಕೊಳ್ಳುವ ಮತ್ತು ಹತ್ತಿರದಿಂದ ಬದುಕುವ ಅದೃಷ್ಟ ನನಗೆ ಸಿಕ್ಕಿದೆ. ನಮ್ಮ ದೇಶವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದಾಗಲೆಲ್ಲಾ, ದೇಶದ ಯಾವುದೋ ಮೂಲೆಯಲ್ಲಿ ಕೆಲವು ಮಹಾನ್ ವ್ಯಕ್ತಿಗಳು ಹುಟ್ಟಿ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಾರೆ ಎಂಬುದೇ ಭಾರತದ ವಿಶೇಷತೆ. ಕೆಲವರು ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಕೆಲಸ ಮಾಡುತ್ತಾರೆ. ಕೆಲವರು ಸಾಮಾಜಿಕ ವಲಯದಲ್ಲಿ ಸಾಮಾಜಿಕ ಸುಧಾರಣೆಗಳಿಗೆ ಉತ್ತೇಜನ ನೀಡುತ್ತಾರೆ. ಶ್ರೀ ನಾರಾಯಣ ಗುರುಗಳು ಅಂತಹ ಒಬ್ಬ ಮಹಾನ್ ಸಂತರು. 'ನಿವೃತ್ತಿ ಪಂಚಕಮ್' ಮತ್ತು 'ಆತ್ಮೋಪದೇಶ ಶತಕಮ್'ನಂತಹ ಅವರ ಕೃತಿಗಳು ಅದ್ವೈತ ಮತ್ತು ಆಧ್ಯಾತ್ಮಿಕತೆಯ ಯಾವುದೇ ವಿದ್ಯಾರ್ಥಿಗೆ ಮಾರ್ಗದರ್ಶಿಯಾಗಿವೆ.

ಸ್ನೇಹಿತರೆ,

ಯೋಗ ಮತ್ತು ವೇದಾಂತ, ಸಾಧನ ಮತ್ತು ಮುಕ್ತಿ ಶ್ರೀ ನಾರಾಯಣ ಗುರುಗಳ ಮುಖ್ಯ ವಿಷಯಗಳಾಗಿವೆ. ಆದರೆ ದುಷ್ಟ ಆಚರಣೆಗಳಲ್ಲಿ ಸಿಲುಕಿರುವ ಸಮಾಜದ ಆಧ್ಯಾತ್ಮಿಕ ಉನ್ನತಿ ಅದರ ಸಾಮಾಜಿಕ ಉನ್ನತಿಯ ಮೂಲಕ ಮಾತ್ರ ಸಾಧ್ಯ ಎಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ, ಅವರು ಆಧ್ಯಾತ್ಮಿಕತೆಯನ್ನು ಸಾಮಾಜಿಕ ಸುಧಾರಣೆ ಮತ್ತು ಸಾಮಾಜಿಕ ಕಲ್ಯಾಣದ ಮಾಧ್ಯಮವನ್ನಾಗಿ ಮಾಡಿದರು. ಗಾಂಧೀಜಿ ಕೂಡ ಶ್ರೀ ನಾರಾಯಣ ಗುರುಗಳ ಇಂತಹ ಪ್ರಯತ್ನಗಳಿಂದ ಸ್ಫೂರ್ತಿ ಪಡೆದು ಅವರಿಂದ ಮಾರ್ಗದರ್ಶನ ಪಡೆದರು. ಗುರುದೇವ್ ರವೀಂದ್ರನಾಥ ಟ್ಯಾಗೋರ್‌ರಂತಹ ವಿದ್ವಾಂಸರು ಸಹ ಶ್ರೀ ನಾರಾಯಣ ಗುರುಗಳೊಂದಿಗಿನ ಚರ್ಚೆಗಳಿಂದ ಪ್ರಯೋಜನ ಪಡೆದರು.

 

ಸ್ನೇಹಿತರೆ,

ಒಮ್ಮೆ ಯಾರೋ ಶ್ರೀ ನಾರಾಯಣ ಗುರುಗಳ ಆತ್ಮೋಪದೇಶ ಶತಕಂ ಅನ್ನು ರಮಣ ಮಹರ್ಷಿಗಳಿಗೆ ಪಠಿಸಿದರು. ಅದನ್ನು ಕೇಳಿದ ನಂತರ, ರಮಣ ಮಹರ್ಷಿಗಳು ಹೇಳಿದರು - "ಅವರ ಎಲ್ಲಮ್ ತೇರಿಂಜವರ". ಅಂದರೆ- ಅವರಿಗೆ ಎಲ್ಲವೂ ತಿಳಿದಿದೆ! ಮತ್ತು ವಿದೇಶಿ ವಿಚಾರಗಳ ಪ್ರಭಾವದಿಂದ ಭಾರತೀಯ ನಾಗರಿಕತೆ, ಸಂಸ್ಕೃತಿ ಮತ್ತು ತತ್ವಶಾಸ್ತ್ರವನ್ನು ಕೆಡಿಸಲು ಪಿತೂರಿಗಳು ರೂಪಿಸಲಾಗುತ್ತಿದ್ದ ಸಮಯದಲ್ಲಿ, ಶ್ರೀ ನಾರಾಯಣ ಗುರುಗಳು ದೋಷವು ನಮ್ಮ ಮೂಲ ಸಂಪ್ರದಾಯದಲ್ಲಿಲ್ಲ ಎಂದು ನಮಗೆ ತಿಳಿ ಹೇಳಿದರು. ನಾವು ನಮ್ಮ ಆಧ್ಯಾತ್ಮಿಕತೆಯನ್ನು ನಿಜವಾದ ಅರ್ಥದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಮಾನವರಲ್ಲಿ ಶ್ರೀನಾರಾಯಣನನ್ನು, ಜೀವಿಗಳಲ್ಲಿ ಶಿವನನ್ನು ನೋಡುವ ಜನರಾಗಿದ್ದೇವೆ. ನಾವು ದ್ವಂದ್ವತೆಯಲ್ಲಿ ಅದ್ವಂದ್ವತೆಯನ್ನು ನೋಡುತ್ತೇವೆ. ನಾವು ವ್ಯತ್ಯಾಸದಲ್ಲಿಯೂ ವ್ಯತ್ಯಾಸ ನೋಡುತ್ತೇವೆ. ವೈವಿಧ್ಯತೆಯಲ್ಲಿ ಏಕತೆ ನೋಡುತ್ತೇವೆ.

ಸ್ನೇಹಿತರೆ,

ನಿಮಗೆಲ್ಲರಿಗೂ ತಿಳಿದಿರುವಂತೆ ಶ್ರೀ ನಾರಾಯಣ ಗುರುಗಳ ಮಂತ್ರವೆಂದರೆ- “ಒಂದು ಜಾತಿ, ಒಂದು ಮತ, ಒಂದು ದೈವ, ಮನುಷ್ಯ।” ಅಂದರೆ, ಇಡೀ ಮಾನವತೆಯ ಏಕತೆ, ಎಲ್ಲಾ ಜೀವಿಗಳ ಏಕತೆ! ಈ ಕಲ್ಪನೆಯೇ ಭಾರತದ ಜೀವನ ಸಂಸ್ಕೃತಿಯ ಮೂಲ, ಅದರ ಅಡಿಪಾಯ. ಇಂದು ಭಾರತವು ಜಾಗತಿಕ ಕಲ್ಯಾಣದ ಮನೋಭಾವದೊಂದಿಗೆ ಆ ಕಲ್ಪನೆಯನ್ನು ವಿಸ್ತರಿಸುತ್ತಿದೆ. ನೀವು ನೋಡಿ, ಇತ್ತೀಚೆಗೆ ನಾವು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ್ದೇವೆ. ಈ ಬಾರಿ ಯೋಗ ದಿನದ ವಿಷಯ - ಒಂದು ಭೂಮಿಗೆ, ಒಂದು ಆರೋಗ್ಯಕ್ಕಾಗಿ ಯೋಗ. ಅಂದರೆ, ಒಂದು ಭೂಮಿ, ಒಂದು ಆರೋಗ್ಯ! ಇದಕ್ಕೂ ಮುಂಚೆಯೇ, ಭಾರತವು ಒಂದು ಜಗತ್ತು, ಜಾಗತಿಕ ಕಲ್ಯಾಣಕ್ಕಾಗಿ ಒಂದು ಆರೋಗ್ಯದಂತಹ ಉಪಕ್ರಮಗಳನ್ನು ಪ್ರಾರಂಭಿಸಿದೆ. ಇಂದು ಭಾರತವು ಸುಸ್ಥಿರ ಅಭಿವೃದ್ಧಿಯ ದಿಕ್ಕಿನಲ್ಲಿ ಒಂದು ಸೂರ್ಯ, ಒಂದು ಭೂಮಿ, ಒಂದು ಗ್ರಿಡ್‌ನಂತಹ ಜಾಗತಿಕ ಚಳುವಳಿಗಳನ್ನು ಸಹ ಮುನ್ನಡೆಸುತ್ತಿದೆ. 2023ರಲ್ಲಿ ಭಾರತವು ಜಿ-20 ಶೃಂಗಸಭೆ ಆಯೋಜಿಸಿದಾಗ, ನಾವು ಅದರ ವಸ್ತು ವಿಷಯ(ಥೀಮ್) "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂದು ಇಟ್ಟುಕೊಂಡಿದ್ದೆವು ಎಂಬುದು ನಿಮಗೆ ನೆನಪಿರಬಹುದು. 'ವಸುಧೈವ ಕುಟುಂಬಕಂ' ಎಂಬ ಮನೋಭಾವವು ನಮ್ಮ ಈ ಪ್ರಯತ್ನಗಳೊಂದಿಗೆ ಸಂಬಂಧ ಹೊಂದಿದೆ. ಶ್ರೀ ನಾರಾಯಣ ಗುರುಗಳಂತಹ ಸಂತರ ಪ್ರೇರಣೆಯೂ ಇದರೊಂದಿಗೆ ಸಂಬಂಧ ಹೊಂದಿದೆ.

ಸ್ನೇಹಿತರೆ,

ಶ್ರೀ ನಾರಾಯಣ ಗುರುಗಳು ತಾರತಮ್ಯ ಮುಕ್ತ ಸಮಾಜವನ್ನು ಕಲ್ಪಿಸಿಕೊಂಡಿದ್ದರು! ಇಂದು ದೇಶವು ಪರಿಪೂರ್ಣತೆ ವಿಧಾನವನ್ನು ಅನುಸರಿಸುತ್ತಿದ್ದು, ತಾರತಮ್ಯದ ಎಲ್ಲಾ ಅವಕಾಶಗಳನ್ನು ತೆಗೆದುಹಾಕುತ್ತಿದೆ ಎಂಬ ತೃಪ್ತಿ ನನಗಿದೆ. ಆದರೆ 10-11 ವರ್ಷಗಳ ಹಿಂದಿನ ಪರಿಸ್ಥಿತಿ ನೆನಪಿಡಿ, ಸ್ವಾತಂತ್ರ್ಯದ ಹಲವು ದಶಕಗಳ ನಂತರವೂ ಕೋಟ್ಯಂತರ ದೇಶವಾಸಿಗಳು ಎಂತಹ ಜೀವನ ನಡೆಸಬೇಕಾಯಿತು? ಕೋಟ್ಯಂತರ ಕುಟುಂಬಗಳಿಗೆ ತಲೆಯ ಮೇಲೆ ಸೂರು ಕೂಡ ಇರಲಿಲ್ಲ! ಲಕ್ಷಾಂತರ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಇರಲಿಲ್ಲ, ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವ ಆಯ್ಕೆಯೂ ಇರಲಿಲ್ಲ, ಗಂಭೀರ ಕಾಯಿಲೆ ಬಂದರೆ, ಜೀವ ಉಳಿಸಲು ಯಾವುದೇ ಮಾರ್ಗವಿರಲಿಲ್ಲ, ಕೋಟ್ಯಂತರ ಬಡವರು, ದಲಿತರು, ಬುಡಕಟ್ಟು ಜನರು, ಮಹಿಳೆಯರು ಮಾನವ ಘನತೆಯಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರು! ಈ ಕೋಟ್ಯಂತರ ಜನರು ಹಲವು ತಲೆಮಾರುಗಳಿಂದ ಇಂತಹ ಕಷ್ಟಗಳಲ್ಲಿ ಬದುಕುತ್ತಿದ್ದರು, ಉತ್ತಮ ಜೀವನದ ಭರವಸೆಯೂ ಅವರ ಮನಸ್ಸಿನಲ್ಲಿ ಸತ್ತುಹೋಗಿತ್ತು. ದೇಶದ ಇಷ್ಟು ದೊಡ್ಡ ಜನಸಂಖ್ಯೆಯು ನೋವು ಮತ್ತು ಹತಾಶೆಯಲ್ಲಿದ್ದಾಗ ದೇಶ ಹೇಗೆ ಪ್ರಗತಿ ಹೊಂದಬಹುದು? ಆದ್ದರಿಂದ, ನಾವು ಮೊದಲು ಸರ್ಕಾರದ ಚಿಂತನೆಯಲ್ಲಿ ಸೂಕ್ಷ್ಮತೆಯನ್ನು ತುಂಬಿದೆವು! ನಾವು ಸೇವೆಯನ್ನು ನಮ್ಮ ಸಂಕಲ್ಪವನ್ನಾಗಿ ಮಾಡಿಕೊಂಡೆವು! ಇದರ ಪರಿಣಾಮವಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡ-ದಲಿತ-ದುಃಖಿತ-ಶೋಷಿತ-ವಂಚಿತ ಕೋಟ್ಯಂತರ ಕುಟುಂಬಗಳಿಗೆ ಕಾಂಕ್ರೀಟ್ ಮನೆಗಳನ್ನು ಒದಗಿಸಲು ನಮಗೆ ಸಾಧ್ಯವಾಗಿದೆ. ಪ್ರತಿಯೊಬ್ಬ ಬಡವರಿಗೂ ಕಾಯಂ ಮನೆ ನೀಡುವುದು ನಮ್ಮ ಗುರಿಯಾಗಿದೆ. ಈ ಮನೆ ಕೇವಲ ಇಟ್ಟಿಗೆ ಮತ್ತು ಸಿಮೆಂಟ್‌ನಿಂದ ಮಾಡಿದ ರಚನೆಯಲ್ಲ, ಇದು ಮನೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತದೆ, ಎಲ್ಲಾ ಅಗತ್ಯ ಸೌಲಭ್ಯಗಳನ್ನು ಹೊಂದಿದೆ. ನಾವು 4  ಗೋಡೆಗಳನ್ನು ಹೊಂದಿರುವ ಕಟ್ಟಡವನ್ನು ಮಾತ್ರ ಒದಗಿಸದೆ, ಕನಸುಗಳನ್ನು ನಿರ್ಣಯಗಳಾಗಿ ಪರಿವರ್ತಿಸುವ ಮನೆಯನ್ನು ನಾವು ಒದಗಿಸುತ್ತೇವೆ. ಅದಕ್ಕಾಗಿಯೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳಲ್ಲಿ ಅನಿಲ, ವಿದ್ಯುತ್, ಶೌಚಾಲಯದಂತಹ ಪ್ರತಿಯೊಂದು ಸೌಲಭ್ಯವನ್ನು ಖಚಿತಪಡಿಸಲಾಗುತ್ತಿದೆ. ಜಲ ಜೀವನ್ ಮಿಷನ್ ಅಡಿ, ಪ್ರತಿ ಮನೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಸರ್ಕಾರ ಎಂದಿಗೂ ತಲುಪದ ಬುಡಕಟ್ಟು ಪ್ರದೇಶಗಳಲ್ಲಿ, ಇಂದು ಅಭಿವೃದ್ಧಿಯ ಖಾತರಿ ಅಲ್ಲಿಗೆ ತಲುಪುತ್ತಿದೆ. ಬುಡಕಟ್ಟು ಜನಾಂಗದವರಲ್ಲಿ, ವಿಶೇಷವಾಗಿ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗದವರಿಗಾಗಿ ನಾವು ಪ್ರಧಾನ ಮಂತ್ರಿ ಜನ್ಮನ್ ಯೋಜನೆ ಪ್ರಾರಂಭಿಸಿದ್ದೇವೆ. ಇದರಿಂದಾಗಿ, ಇಂದು ಅನೇಕ ಪ್ರದೇಶಗಳ ಚಿತ್ರಣ ಬದಲಾಗುತ್ತಿದೆ. ಇದರ ಪರಿಣಾಮವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯಲ್ಲೂ ಹೊಸ ಭರವಸೆ ಹುಟ್ಟಿಕೊಂಡಿದೆ. ಅವರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವುದಲ್ಲದೆ, ರಾಷ್ಟ್ರ ನಿರ್ಮಾಣದಲ್ಲಿ ಅವರ ಬಲವಾದ ಪಾತ್ರವನ್ನು ಸಹ ನೋಡುತ್ತಿದ್ದಾರೆ.

 

ಸ್ನೇಹಿತರೆ,

ಶ್ರೀ ನಾರಾಯಣ ಗುರುಗಳು ಯಾವಾಗಲೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿದ್ದರು. ನಮ್ಮ ಸರ್ಕಾರವು ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಮಂತ್ರದೊಂದಿಗೆ ಮುಂದುವರಿಯುತ್ತಿದೆ. ಸ್ವಾತಂತ್ರ್ಯದ ಹಲವು ವರ್ಷಗಳ ನಂತರವೂ, ನಮ್ಮ ದೇಶದಲ್ಲಿ ಮಹಿಳೆಯರ ಪ್ರವೇಶ ನಿಷೇಧಿಸಿದ್ದ ಅನೇಕ ಕ್ಷೇತ್ರಗಳಿದ್ದವು. ನಾವು ಈ ನಿರ್ಬಂಧಗಳನ್ನು ತೆಗೆದುಹಾಕಿದ್ದೇವೆ, ಮಹಿಳೆಯರಿಗೆ ಹೊಸ ಕ್ಷೇತ್ರಗಳಲ್ಲಿ ಹಕ್ಕುಗಳನ್ನು ನೀಡಲಾಗಿದೆ, ಇಂದು ಹೆಣ್ಣು ಮಕ್ಕಳು ಕ್ರೀಡೆಯಿಂದ ಬಾಹ್ಯಾಕಾಶದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ದೇಶಕ್ಕೆ ಕೀರ್ತಿ ತರುತ್ತಿದ್ದಾರೆ. ಇಂದು ಸಮಾಜದ ಪ್ರತಿಯೊಂದು ವರ್ಗ, ಪ್ರತಿಯೊಂದು ಸಮುದಾಯವು ಅಭಿವೃದ್ಧಿ ಹೊಂದಿದ ಭಾರತದ ಕನಸಿಗೆ ಆತ್ಮವಿಶ್ವಾಸದಿಂದ ಕೊಡುಗೆ ನೀಡುತ್ತಿದೆ. ಸ್ವಚ್ಛ ಭಾರತ ಮಿಷನ್, ಪರಿಸರ ಸಂಬಂಧಿತ ಅಭಿಯಾನಗಳು, ಅಮೃತ ಸರೋವರ ನಿರ್ಮಾಣ, ಸಿರಿಧಾನ್ಯಗಳ ಬಗ್ಗೆ ಜಾಗೃತಿ ಅಭಿಯಾನಗಳು, ಸಾರ್ವಜನಿಕ ಭಾಗವಹಿಸುವಿಕೆಯ ಮನೋಭಾವದೊಂದಿಗೆ ನಾವು ಮುಂದುವರಿಯುತ್ತಿದ್ದೇವೆ, 140 ಕೋಟಿ ದೇಶವಾಸಿಗಳ ಬಲದೊಂದಿಗೆ ನಾವು ಮುಂದುವರಿಯುತ್ತಿದ್ದೇವೆ.

ಸ್ನೇಹಿತರೆ,

ಶ್ರೀ ನಾರಾಯಣ ಗುರುಗಳು ಹೀಗೆ ಹೇಳುತ್ತಿದ್ದರು - ವಿದ್ಯಾ ಕೊಂಡ್ ಪ್ರಬ್ಬುದ್ಧರ್ ಅವುಕ ಸಂಘಟನೆ ಕೊಂಡ್ ಶಕ್ತಿ ಅವುಕ, ಪ್ರಯತ್ನ ಕೊಂಡ್ ಸಂಪನ್ನರ್ ಅವುಕ" ಅಂದರೆ, "ಶಿಕ್ಷಣದ ಮೂಲಕ ಜ್ಞಾನೋದಯ, ಸಂಘಟನೆಯ ಮೂಲಕ ಶಕ್ತಿ, ಉದ್ಯಮದ ಮೂಲಕ ಸಮೃದ್ಧಿ". ಈ ದೃಷ್ಟಿಕೋನವನ್ನು ಸಾಕಾರಗೊಳಿಸಲು ಅವರೇ ಪ್ರಮುಖ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಗುರೂಜಿ ಶಿವಗಿರಿಯಲ್ಲೇ ಶಾರದಾ ಮಠ ಸ್ಥಾಪಿಸಿದರು. ಮಾತೆ ಸರಸ್ವತಿಗೆ ಸಮರ್ಪಿತವಾದ ಈ ಮಠವು ಶಿಕ್ಷಣ ವಂಚಿತರಿಗೆ ಉನ್ನತಿ ಮತ್ತು ವಿಮೋಚನೆಯ ಮಾಧ್ಯಮವಾಗಿದೆ ಎಂಬ ಸಂದೇಶ ನೀಡುತ್ತದೆ. ಗುರುದೇವರ ಆ ಪ್ರಯತ್ನಗಳು ಇಂದಿಗೂ ನಿರಂತರವಾಗಿ ವಿಸ್ತರಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಗುರುದೇವ ಕೇಂದ್ರಗಳು ಮತ್ತು ಶ್ರೀ ನಾರಾಯಣ್ ಸಾಂಸ್ಕೃತಿಕ ಮಿಷನ್ ದೇಶದ ಅನೇಕ ನಗರಗಳಲ್ಲಿ ಮಾನವತೆಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿವೆ.

ಸ್ನೇಹಿತರೆ,

ಇಂದು ನಾವು ದೇಶದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಶಿಕ್ಷಣ, ಸಂಘಟನೆ ಮತ್ತು ಕೈಗಾರಿಕಾ ಪ್ರಗತಿಯ ಮೂಲಕ ಸಾಮಾಜಿಕ ಕಲ್ಯಾಣದ ಈ ದೃಷ್ಟಿಕೋನದ ಸ್ಪಷ್ಟ ಮುದ್ರೆ ಹಾಕಿರುವುದನ್ನು ನೋಡಬಹುದು. ಹಲವು ದಶಕಗಳ ನಂತರ, ನಾವು ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದೇವೆ. ಹೊಸ ಶಿಕ್ಷಣ ನೀತಿಯು ಶಿಕ್ಷಣವನ್ನು ಆಧುನಿಕ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವುದಲ್ಲದೆ, ಮಾತೃಭಾಷೆಯಲ್ಲಿ ಅಧ್ಯಯನ ಮಾಡುವುದನ್ನು ಉತ್ತೇಜಿಸುತ್ತದೆ. ಹಿಂದುಳಿದ ಮತ್ತು ವಂಚಿತ ವರ್ಗಗಳು ಇದರಿಂದ ಹೆಚ್ಚಿನ ಲಾಭ ಪಡೆಯುತ್ತಿವೆ.

 

ಸ್ನೇಹಿತರೆ,

ಸ್ವಾತಂತ್ರ್ಯದ ನಂತರ ಕಳೆದ 60 ವರ್ಷಗಳಲ್ಲಿ ಅನೇಕ ಸಂಸ್ಥೆಗಳನ್ನು ತೆರೆದಿರಲಿಲ್ಲ. ಆದರೆ ಕಳೆದ ದಶಕದಲ್ಲಿ ನಾವು ದೇಶದಲ್ಲಿ ಹಲವು ಹೊಸ ಐಐಟಿಗಳು, ಐಐಎಂಗಳು, ಏಮ್ಸ್‌ಗಳನ್ನು ತೆರೆದಿದ್ದೇವೆ. ಇದರಿಂದಾಗಿ, ಬಡ ಮತ್ತು ವಂಚಿತ ಯುವಕರಿಗೆ ಉನ್ನತ ಶಿಕ್ಷಣದಲ್ಲಿ ಹೊಸ ಅವಕಾಶಗಳು ತೆರೆದಿವೆ. ಕಳೆದ 10 ವರ್ಷಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ 400ಕ್ಕೂ ಹೆಚ್ಚು ಏಕಲವ್ಯ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಅನೇಕ ತಲೆಮಾರುಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಬುಡಕಟ್ಟು ಸಮುದಾಯಗಳ ಮಕ್ಕಳು ಈಗ ಮುಂದೆ ಸಾಗುತ್ತಿದ್ದಾರೆ.

ಸಹೋದರ ಸಹೋದರಿಯರೆ,

ನಾವು ಶಿಕ್ಷಣವನ್ನು ಕೌಶಲ್ಯ ಮತ್ತು ಅವಕಾಶಗಳಿಗೆ ನೇರವಾಗಿ ಜೋಡಿಸಿದ್ದೇವೆ. ಕೌಶಲ್ಯ ಭಾರತದಂತಹ ಕಾರ್ಯಕ್ರಮಗಳು ದೇಶದ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿವೆ. ದೇಶದ ಕೈಗಾರಿಕಾ ಪ್ರಗತಿ, ಖಾಸಗಿ ವಲಯದ ಪ್ರಮುಖ ಸುಧಾರಣೆಗಳು, ಮುದ್ರಾ ಯೋಜನೆ, ಸ್ಟ್ಯಾಂಡ್ ಅಪ್ ಯೋಜನೆ... ಇವೆಲ್ಲವೂ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳಿಗೆ ಹೆಚ್ಚಿ ಪ್ರಯೋಜನ ನೀಡುತ್ತಿವೆ.

ಸ್ನೇಹಿತರೆ,

ಶ್ರೀ ನಾರಾಯಣ ಗುರುಗಳು ಬಲಿಷ್ಠ ಭಾರತ ನಿರ್ಮಾಣವನ್ನು ಬಯಸಿದ್ದರು. ಭಾರತದ ಸಬಲೀಕರಣಕ್ಕಾಗಿ, ನಾವು ಆರ್ಥಿಕ, ಸಾಮಾಜಿಕ ಮತ್ತು ರಕ್ಷಣೆಯ ಪ್ರತಿಯೊಂದು ಅಂಶದಲ್ಲೂ ಮುಂದಿರಬೇಕು, ಇಂದು ದೇಶ ಈ ಹಾದಿಯಲ್ಲಿ ಸಾಗುತ್ತಿದೆ. ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ. ಇತ್ತೀಚೆಗೆ ಭಾರತವು ಹೇಗೆ ಸಮರ್ಥವಾಗಿದೆ ಎಂಬುದನ್ನು ಜಗತ್ತು ಸಹ ನೋಡಿದೆ. ಆಪರೇಷನ್ ಸಿಂದೂರ್ ಭಯೋತ್ಪಾದನೆಯ ವಿರುದ್ಧ ಭಾರತದ ಕಠಿಣ ನೀತಿಯನ್ನು ಜಗತ್ತಿಗೆ ಸಂಪೂರ್ಣವಾಗಿ ಸ್ಪಷ್ಟಪಡಿಸಿದೆ. ಭಾರತೀಯರ ರಕ್ತ ಚೆಲ್ಲುವ ಭಯೋತ್ಪಾದಕರಿಗೆ ಯಾವುದೇ ಸ್ಥಳವೂ ಸುರಕ್ಷಿತವಲ್ಲ ಎಂಬುದನ್ನು ನಾವು ತೋರಿಸಿದ್ದೇವೆ.

 

ಸ್ನೇಹಿತರೆ,

ಇಂದಿನ ಭಾರತವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸಾಧ್ಯವಾದ ಮತ್ತು ಸರಿಯಾದ ಕ್ರಮಗಳ ಪ್ರಕಾರವೇ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಇಂದು ಭಾರತದ ಮಿಲಿಟರಿ ಅಗತ್ಯಗಳಿಗಾಗಿ ವಿದೇಶಗಳ ಮೇಲಿನ ಅವಲಂಬನೆ ನಿರಂತರವಾಗಿ ಕಡಿಮೆಯಾಗುತ್ತಿದೆ. ರಕ್ಷಣಾ ವಲಯದಲ್ಲಿ ನಾವು ಸ್ವಾವಲಂಬಿಗಳಾಗುತ್ತಿದ್ದೇವೆ. ಆಪರೇಷನ್ ಸಿಂದೂರ್ ಸಮಯದಲ್ಲೂ ನಾವು ಅದರ ಪರಿಣಾಮವನ್ನು ನೋಡಿದ್ದೇವೆ. ನಮ್ಮ ಪಡೆಗಳು ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳೊಂದಿಗೆ ಶತ್ರುಗಳನ್ನು 22 ನಿಮಿಷಗಳಲ್ಲಿ ಶರಣಾಗುವಂತೆ ಮಾಡಿದವು. ಮುಂಬರುವ ದಿನಗಳಲ್ಲಿ, ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ಪ್ರಪಂಚದಾದ್ಯಂತ ಪ್ರಸಿದ್ಧಿಯಾಗುತ್ತವೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ದೇಶದ ನಿರ್ಣಯಗಳನ್ನು ಪೂರೈಸಲು, ನಾವು ಶ್ರೀ ನಾರಾಯಣ ಗುರುಗಳ ಬೋಧನೆಗಳನ್ನು ಜನಸಾಮಾನ್ಯರಿಗೆ ಹರಡಬೇಕು. ನಮ್ಮ ಸರ್ಕಾರವು ಈ ದಿಕ್ಕಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಶಿವಗಿರಿ ಸರ್ಕ್ಯೂಟ್ ರಚಿಸುವ ಮೂಲಕ ನಾವು ಶ್ರೀ ನಾರಾಯಣ ಗುರುಗಳ ಜೀವನಕ್ಕೆ ಸಂಬಂಧಿಸಿದ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುತ್ತಿದ್ದೇವೆ. ಅಮೃತ ಕಾಲದತ್ತ ಸಾಗುವ ನಮ್ಮ ಪ್ರಯಾಣದಲ್ಲಿ ಅವರ ಆಶೀರ್ವಾದ ಮತ್ತು ಬೋಧನೆಗಳು ರಾಷ್ಟ್ರವನ್ನು ಮುನ್ನಡೆಸುತ್ತಲೇ ಇರುತ್ತವೆ ಎಂಬ ವಿಶ್ವಾಸ ನನಗಿದೆ. ಒಟ್ಟಾಗಿ, ನಾವು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುತ್ತೇವೆ. ಶ್ರೀ ನಾರಾಯಣ ಗುರುಗಳ ಆಶೀರ್ವಾದ ನಮ್ಮೆಲ್ಲರ ಮೇಲೂ ಇರಲಿ ಎಂಬ ಆಶಯದೊಂದಿಗೆ, ನಾನು ಮತ್ತೊಮ್ಮೆ ಶಿವಗಿರಿ ಮಠದ ಎಲ್ಲಾ ಸಂತರಿಗೆ ನಮಸ್ಕರಿಸುತ್ತೇನೆ. ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು! ನಮಸ್ಕಾರಂ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s GDP To Grow 7% In FY26: Crisil Revises Growth Forecast Upward

Media Coverage

India’s GDP To Grow 7% In FY26: Crisil Revises Growth Forecast Upward
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the power of collective effort
December 17, 2025

The Prime Minister, Shri Narendra Modi, shared a Sanskrit Subhashitam-

“अल्पानामपि वस्तूनां संहतिः कार्यसाधिका।

तृणैर्गुणत्वमापन्नैर्बध्यन्ते मत्तदन्तिनः॥”

The Sanskrit Subhashitam conveys that even small things, when brought together in a well-planned manner, can accomplish great tasks, and that a rope made of hay sticks can even entangle powerful elephants.

The Prime Minister wrote on X;

“अल्पानामपि वस्तूनां संहतिः कार्यसाधिका।

तृणैर्गुणत्वमापन्नैर्बध्यन्ते मत्तदन्तिनः॥”